ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕುರಿತಂತೆ ಪಾಕಿಸ್ತಾನದ ಟೀಕೆಗಳನ್ನು ತಿರಸ್ಕರಿಸಿರುವ ಭಾರತ “ಕೋಮು ಪ್ರಚೋದನೆಯಿಂದ” ದೂರವಿರಲು ಪಾಕಿಸ್ಥಾನಕ್ಕೆ ತಾಕೀತು ಮಾಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಭಾರತದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಂತೆ ಪಾಕಿಸ್ತಾನವನ್ನು ಕೇಳಿಕೊಂಡಿದ್ದಾರೆ.
ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನವು ಭಾರತದ ಆಂತರಿಕ ವಿಷಯದ ಬಗ್ಗೆ ನೀಡಿರುವ ಪತ್ರಿಕಾ ಹೇಳಿಕೆಯನ್ನು ನೋಡಿದ್ದೇವೆ. ಹಾಗಾಗಿ ಅದು ಭಾರತದ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ಬಿಟ್ಟು, ಕೋಮು ಪ್ರಚೋದನೆಯಿಂದ ದೂರವಿರಬೇಕು ಎಂದು ಶ್ರೀವಾಸ್ತವ ಹೇಳಿದ್ದಾರೆ.
ಗಡಿಯಾಚೆಗಿನ ಭಯೋತ್ಪಾದನೆಯನ್ನು ಮಾಡುತ್ತಿರುವ ಮತ್ತು ತನ್ನದೇ ಆದ ಅಲ್ಪಸಂಖ್ಯಾತರ ಧಾರ್ಮಿಕ ಹಕ್ಕುಗಳನ್ನು ನಿರಾಕರಿಸುವ ರಾಷ್ಟ್ರದ ನಿಲುವು ಆಶ್ಚರ್ಯಕರವಲ್ಲವಾದರೂ, ಅಂತಹ ಕಾಮೆಂಟ್ಗಳು ವಿಷಾದನೀಯ ಎಂದು ಅವರು ಹೇಳಿದ್ದಾರೆ.
ಅಯೋಧ್ಯೆಯ ರಾಮ ದೇವಾಲಯಕ್ಕೆ ಅಡಿಪಾಯ ಹಾಕಿದ್ದನ್ನು ಪಾಕಿಸ್ತಾನ ಬುಧವಾರ ಟೀಕಿಸಿತ್ತು.
ಇದನ್ನೂ ಓದಿ: ಓದುಗರ ಪತ್ರ: ಅಯೋಧ್ಯೆಯಲ್ಲಿ ಶ್ರೀರಾಮನಿದ್ದ ಎಂಬುದಕ್ಕೆ ಕೆಲವು ಪ್ರಶ್ನೆಗಳು