ಹರಿಯಾಣದಲ್ಲಿ ಬಿಜೆಪಿ ಶಾಸಕರೊಬ್ಬರ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಹೇಳಿಕೆಯೊಂದಿಗೆ ಸರ್ಕಾರಿ ಕಚೇರಿಯಂತೆ ಕಾಣುವ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳನ್ನು ಥಳಿಸಲಾಗಿರುವ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆ ವಿಡಿಯೋದಲ್ಲಿ ಹಲವಾರು ಜನ ಚರ್ಚೆ ನಡೆಸುತ್ತಿರುವಾಗ ಮಧ್ಯ ಪ್ರವೇಶಿಸುವ ಗುಂಪೊಂದು ಇಬ್ಬರನ್ನು ಕಚೇರಿಯೊಳಗೆ ಥಳಿಸುವುದನ್ನು ಕಾಣಬಹುದಾಗಿದೆ. ಕುರ್ಚಿಗಳನ್ನು ಬಳಸಿ ಹಲ್ಲೆ ನಡೆಸಿರುವುದು ಕಾಣುತ್ತದೆ.
ಇದನ್ನು ಹರಿಯಾಣದಲ್ಲಿ ಬಿಜೆಪಿ ಶಾಸಕನನ್ನು ಹೊಡೆದರು ಎಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ. ಇದನ್ನು ಹಲವಾರು ಜನರು ಹಂಚಿಕೊಂಡಿದ್ದಾರೆ.
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬರುವ ಇಬ್ಬರು ವ್ಯಕ್ತಿಗಳ ಮೇಲಿನ ಹಲ್ಲೆಯು, ವೈಯಕ್ತಿಕ ದ್ವೇಷದಿಂದಾಗಿದ್ದು ರಾಜಕೀಯ ಪ್ರೇರಿತವಲ್ಲ ಎಂದು ವರದಿಯಾಗಿದೆ. ಇನ್ನು ಹಲ್ಲೆಗೊಳಗಾದವರು ಬಿಜೆಪಿಯವರಲ್ಲ ಮತ್ತು ಶಾಸಕ ಅಲ್ಲ ಎಂದು ತಿಳಿದುಬಂದಿದೆ.
ಸುದ್ದಿ ಸಂಸ್ಥೆ ಎಎನ್ಐನ ಜುಲೈ 23 ರಂದು “ಹರಿಯಾಣ: ಮುನಾಕ್ನ ಎಸ್ಡಿಒ ಕಚೇರಿಯಲ್ಲಿ ಗಲಭೆ ಮಾಡಿದ್ದ 3 ಮಂದಿಯನ್ನು ಬಂಧಿಸಲಾಗಿದೆ” ಎಂದು ವರದಿ ಮಾಡಿದೆ.
ಕರ್ನಾಲ್ ಜಿಲ್ಲೆಯ ಗಗ್ಸಿನಾ ಗ್ರಾಮದಲ್ಲಿರುವ ಮುನಕ್ ವಿದ್ಯುತ್ ಇಲಾಖೆಯ ಉಪ ವಿಭಾಗೀಯ ಅಧಿಕಾರಿ (ಎಸ್ಡಿಒ) ಅವರ ಕೋಣೆಗಳಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿ ದೃಶ್ಯಾವಳಿಗಳಲ್ಲಿ ಮೂವರನ್ನು ಗುರುತಿಸಿದ ಪೊಲೀಸರು ಅವರನ್ನು ಬಂಧಿಸಲಾಗಿದೆ ಹಾಗೂ ಅವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಈ ವಿವರಗಳನ್ನು ದಿ ಕ್ವಿಂಟ್ ದೃಡೀಕರಿಸಿದೆ. ಜೋಗಿಂದರ್ ಸಿಂಗ್ ಮತ್ತು ಧನ್ ಸಿಂಗ್ ಎಂಬವರು ತಮ್ಮ ಕೃಷಿಭೂಮಿಯಲ್ಲಿ ವಿದ್ಯುತ್ ಕಂಬಗಳ ಸ್ಥಾಪನೆ ಕುರಿತು ಚರ್ಚಿಸಲು ಮುನಕ್ನ ಎಸ್ಡಿಒ ಧರಂಪಾಲ್ಗೆ ಭೇಟಿಯಾಗಲು ಹೋಗಿದ್ದರು. ಆಗ ಕಚೇರಿಗೆ ಪ್ರವೇಶಿಸಿದ ಆರೋಪಿಗಳು ವಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಇಬ್ಬರನ್ನು ಹೊಡೆಯಲು ಪ್ರಾರಂಭಿಸಿದರು. ಹಲ್ಲೆಕೋರರು ಜೋಗಿಂದರ್ ಮತ್ತು ಧನ್ ಸಿಂಗ್ ಇಬ್ಬರ ಜೀವಕ್ಕೂ ಬೆದರಿಕೆ ಹಾಕಿದ್ದಾರೆ ಎಂದು ಎಫ್ಐಆರ್ ಹೇಳುತ್ತದೆ.
ಈ ಘಟನೆ ಜುಲೈ 10 ರಂದು ಸಂಭವಿಸಿದ್ದು, ಆದರೆ ಜುಲೈ 23 ರಂದು ವೀಡಿಯೊ ವೈರಲ್ ಆಗಿದೆ. ಅಂದಿನಿಂದ ಇದು ಸುಳ್ಳು ನಿರೂಪಣೆಯೊಂದಿಗೆ ವ್ಯಾಪಕವಾಗಿ ಹಂಚಿಕೊಳ್ಳಲ್ಪಡುತ್ತಿದೆ.
ಓದಿ:
ಫ್ಯಾಕ್ಟ್ಚೆಕ್: ಯುಪಿಯ ಅರ್ಚಕನನ್ನು ಮುಸ್ಲಿಮರು ಕೊಂದಿದ್ದಾರೆ ಎಂಬುವುದು ಸುಳ್ಳು ಸುದ್ದಿ