ಅಮೆರಿಕ-ಇಸ್ರೇಲ್ ನಡೆಸಿದ ಜಂಟಿ ವೈಮಾನಿಕ ದಾಳಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ಹಿನ್ನೆಲೆ, ಹಿರಿಯ ಧರ್ಮಗುರು ಅಯತೊಲ್ಲಾ ಅಲಿರೆಝಾ ಅರಾಫಿ ಅವರು ಇರಾನ್ನ ಹಂಗಾಮಿ ಸರ್ವೋಚ್ಚ ನಾಯಕರಾಗಿ ಆಯ್ಕೆ ಮಾಡಲಾಗಿದೆ ಎಂದು ಸರ್ಕಾರಿ-ಸಂಯೋಜಿತ ISNA ಸುದ್ದಿ ಸಂಸ್ಥೆ ವರದಿ ಮಾಡಿದೆ.
ಖಮೇನಿಯವರ ಹತ್ಯೆಯ ನಂತರ ಇರಾನ್ ತನ್ನ ಸಂವಿಧಾನದ 111ನೇ ವಿಧಿಯನ್ನು ಸಕ್ರಿಯಗೊಳಿಸಿತ್ತು, ಇದು ತುರ್ತು ನಾಯಕತ್ವ ಪ್ರಕ್ರಿಯೆಯನ್ನು ಪ್ರಾರಂಭಿಸಿತ್ತು. ಈ ವಿಧಿಯ ಅಡಿ ಶಾಶ್ವತ ಉತ್ತರಾಧಿಕಾರಿಯನ್ನು ಆಯ್ಕೆ ಮಾಡುವವರೆಗೆ ಮೂವರು ಸದಸ್ಯರ ಮಂಡಳಿಯು ಸುಪ್ರೀಂ ನಾಯಕನ ಅಧಿಕಾರವನ್ನು ವಹಿಸಿಕೊಳ್ಳುತ್ತದೆ.
ಸಂವಿಧಾನದ ನಿಯಮಾವಳಿಗಳ ಅನ್ವಯ, ಗಾರ್ಡಿಯನ್ ಕೌನ್ಸಿಲ್ನಿಂದ ಆಯ್ಕೆಯಾದ ನ್ಯಾಯಶಾಸ್ತ್ರಜ್ಞ ಸದಸ್ಯರಾಗಿ ಅಯತೊಲ್ಲಾ ಅಲಿರೆಝಾ ಅರಾಫಿ ಅವರು ಈ ಮಧ್ಯಂತರ ನಾಯಕತ್ವ ಮಂಡಳಿಗೆ ನೇಮಕಗೊಂಡಿದ್ದಾರೆ. ಅವರ ಈ ನೇಮಕಾತಿಯೊಂದಿಗೆ, ಅಧಿಕಾರ ಹಸ್ತಾಂತರದ ಸಮಯದಲ್ಲಿ ಸರ್ವೋಚ್ಚ ನಾಯಕರ ಅಧಿಕಾರವನ್ನು ಚಲಾಯಿಸುವ ಜವಾಬ್ದಾರಿಯನ್ನು ಹೊಂದಿರುವ ಮೂವರು ಸದಸ್ಯರ ಈ ಸಮಿತಿಯು ಈಗ ಪೂರ್ಣಗೊಂಡಂತಾಗಿದೆ.
ಹತ್ಯೆಯಾದ ಖಮೇನಿ ಜಾಗಕ್ಕೆ ಸರ್ವೋಚ್ಚ ನಾಯಕರಾಗಿ ನೇಮಕಗೊಂಡ ಅರಾಫಿ, ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಮತ್ತು ಮುಖ್ಯ ನ್ಯಾಯಮೂರ್ತಿ ಘೋಲಂ-ಹೊಸೇನ್ ಮೊಹ್ಸೇನಿ-ಎಜೆಈ ಅವರೊಂದಿಗೆ ಜಂಟಿಯಾಗಿ ದೇಶವನ್ನು ಮುನ್ನಡೆಸಲಿದ್ದಾರೆ.
1959ರಲ್ಲಿ ಜನಿಸಿದ 67 ವರ್ಷದ ಅಯತೊಲ್ಲಾ ಅಲಿರೆಝಾ ಅರಾಫಿ ಅವರು, ಇರಾನ್ನ ಧಾರ್ಮಿಕ ಶ್ರೇಣೀಕೃತ ವ್ಯವಸ್ಥೆಯಲ್ಲಿ ಅತ್ಯಂತ ಹಿರಿಯ ವ್ಯಕ್ತಿಯಾಗಿದ್ದಾರೆ. ಈ ಮಧ್ಯಂತರ ನಾಯಕತ್ವದ ಪಾತ್ರವನ್ನು ವಹಿಸಿಕೊಳ್ಳುವ ಮೊದಲು, ಅವರು ಏಕಕಾಲದಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ಹೊಂದಿದ್ದರು. ಅವರು ಇರಾನ್ನ ಇಸ್ಲಾಮಿಕ್ ಸೆಮಿನರಿಗಳ (ಧಾರ್ಮಿಕ ಶಿಕ್ಷಣ ಸಂಸ್ಥೆಗಳು) ರಾಷ್ಟ್ರೀಯ ಜಾಲದ ಮುಖ್ಯಸ್ಥರಾಗಿದ್ದಾರೆ, ಗಾರ್ಡಿಯನ್ ಕೌನ್ಸಿಲ್ನ ಧಾರ್ಮಿಕ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಅಸೆಂಬ್ಲಿ ಆಫ್ ಎಕ್ಸ್ಪರ್ಟ್ಸ್ನ (ತಜ್ಞರ ಮಂಡಳಿ) ಸದಸ್ಯರೂ ಆಗಿದ್ದಾರೆ.
ಶನಿವಾರ ನಡೆದ ದಾಳಿಯಲ್ಲಿ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ಮುಖ್ಯಸ್ಥರಾದ ಜನರಲ್ ಮೊಹಮ್ಮದ್ ಪಾಕ್ಪೋರ್ ಅವರು ಹತರಾದ ಹಿನ್ನೆಲೆ, ಆ ಸಂಸ್ಥೆಯ ನಾಯಕತ್ವದಲ್ಲಿ ಬದಲಾವಣೆಯನ್ನು ಘೋಷಿಸಲಾಗಿದೆ. ಇರಾನ್ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳ ಪ್ರಕಾರ, ಅಹ್ಮದ್ ವಾಹಿದಿ ಅವರನ್ನು ಐಆರ್ಜಿಸಿಯ ಹೊಸ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.
ಐಆರ್ಜಿಸಿ ಇರಾನ್ನ ಅತ್ಯಂತ ಶಕ್ತಿಶಾಲಿ ಸಂಸ್ಥೆಗಳಲ್ಲಿ ಒಂದಾಗಿದೆ. ಇದು ದೇಶದ ಮಿಲಿಟರಿ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಭಾವವನ್ನು ಹೊಂದಿದೆ. ವಿಶೇಷವೆಂದರೆ, ಇದು ದೇಶದ ಸಾಮಾನ್ಯ ಸಶಸ್ತ್ರ ಪಡೆಗಳಿಂದ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತದೆ.
1989ರಿಂದ ಇರಾನ್ ಅನ್ನು ಆಳುತ್ತಿದ್ದ 86 ವರ್ಷದ ಅಯತೊಲ್ಲಾ ಅಲಿ ಖಮೇನಿ ಅವರು ಶನಿವಾರ ನಡೆದ ಅಮೆರಿಕ-ಇಸ್ರೇಲ್ನ ಬೃಹತ್ ಮಿಲಿಟರಿ ದಾಳಿಯಲ್ಲಿ ಹತರಾಗಿದ್ದಾರೆ. ಈ ಕಾರ್ಯಾಚರಣೆಯು ಮಿಲಿಟರಿ ನೆಲೆಗಳು, ಸರ್ಕಾರಿ ಕೇಂದ್ರಗಳು ಮತ್ತು ರಕ್ಷಣಾ ಸಚಿವ ಅಮೀರ್ ನಾಸರ್ಜಾದೆ ಹಾಗೂ ಕಮಾಂಡರ್-ಇನ್-ಚೀಫ್ ಮೊಹಮ್ಮದ್ ಪಾಕ್ಪೋರ್ ಅವರಿಗೆ ಸಂಬಂಧಿಸಿದ ಸ್ಥಳಗಳು ಸೇರಿದಂತೆ ಹಿರಿಯ ನಾಯಕತ್ವದ ತಾಣಗಳನ್ನು ಗುರಿಯಾಗಿಸಿಕೊಂಡಿತ್ತು.


