ದೇಶದಾದ್ಯಂತ ರಾಜಕೀಯ ಹಾಗೂ ಧಾರ್ಮಿಕ ವಲಯದಲ್ಲಿ ಸಾಕಷ್ಟು ಕುತೂಹಲ ಸೃಷ್ಟಿಸಿರುವ ರಾಮಜನ್ಮಭೂಮಿ ವಿವಾದ ಪ್ರಕರಣ ವಿಚಾರಣೆ ಇಂದು ಅಂತ್ಯಗೊಳ್ಳಲಿದೆ. ಸಂಜೆ ಐದು ಗಂಟೆಗೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಮುಕ್ತಾಯಗೊಳ್ಳಲಿದೆ. ಸುಮಾರು 39 ದಿನಗಳ ಕಾಲ ಸುದೀರ್ಘವಾಗಿ ರಾಮಜನ್ಮಭೂಮಿ ವಿವಾದ ವಿಚಾರಣೆ ಸುಪ್ರೀಓಕೋರ್ಟ್ ನಲ್ಲಿ ನಡೆದಿದೆ. 40ನೇ ದಿನವಾದ ಇಂದು ವಿಚಾರಣೆ ಅಂತ್ಯಗೊಳ್ಳಲಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್, ವಿಚಾರಣೆಯ ಮುಖ್ಯ ಹಂತದಲ್ಲಿ ಹಸ್ತಕ್ಷೇಪ ಅರ್ಜಿ ಸ್ವೀಕರಿಸಲು ನಿರಾಕರಿಸಿದ್ದಾರೆ. ಸಂಜೆ 5 ಗಂಟೆಗೆ ವಿಚಾರಣೆ ಅಂತ್ಯಗೊಳ್ಳಲಿದೆ. ಇನ್ನು ಸಾಕು ಮಾಡಿ ಎಂದು ಸಾಂವಿಧಾನಿಕ ಪೀಠ ತಿಳಿಸಿದೆ. ಸಾಂವಿಧಾನಿಕ ಪೀಠವು 39 ದಿನಗಳವರೆಗೆ ವಾದ-ವಿವಾದವನ್ನು ಆಲಿಸಿದೆ. ಇಂದು ವಿಚಾರಣೆಯ 40 ನೇ ದಿನ. ಇದು ನ್ಯಾಯಾಲಯದ ಇತಿಹಾಸದಲ್ಲಿ ಎರಡನೇ ಅತಿ ಉದ್ದದ ಸುದೀರ್ಘ ಮೌಖಿಕವಾಗಿ ವಿಚಾರಣೆ ನಡೆಸಲಾದ ಪ್ರಕರಣ. 1972 ರ ಕೇಶವಾನಂದ ಭಾರತಿ ಪ್ರಕರಣದ ನಂತರ ಇದು ಎರಡನೇ ಪ್ರಕರಣವಾಗಿದೆ. ಕೇಶವಾನಂದ ಪ್ರಕರಣದಲ್ಲಿ 13 ನ್ಯಾಯಾಧೀಶರ ಪೀಠ ವಿಚಾರಣೆ ನಡೆಸಿತ್ತು. ಸುಮಾರು 68 ದಿನಗಳ ಕಾಲ ವಿಚಾರಣೆ ನಡೆದಿತ್ತು ಎಂಬುದಾಗಿ ತಿಳಿಸಿದೆ.
ಅಯೋಧ್ಯೆ ವಿವಾದ ಪ್ರಕರಣದಲ್ಲಿ 2010ರಲ್ಲಿ ಅಲಹಾಬಾದ್ ಹೈಕೋರ್ಟ್ ನೀಡಿದ್ದ ತೀರ್ಪು ವಿರೋಧಿಸಿ, 14 ಅರ್ಜಿಗಳು ಸುಪ್ರೀಂಕೋರ್ಟ್ ಗೆ ಸಲ್ಲಿಕೆಯಾಗಿದ್ದವು. ಅಯೋಧ್ಯೆಯ 2.77 ಎಕರೆ ಜಾಗವನ್ನು ಮೂರು ಭಾಗಗಳನ್ನಾಗಿ ಹಂಚಿಕೆ ಮಾಡಿ, ಅದನ್ನು ಸುನ್ನಿ ವಕ್ಫ್ ಬೋರ್ಡ್, ನಿರ್ಮೋಹಿ ಅಖಾಡ, ರಾಮಲಲ್ಲಾ ಸ್ಥಳಕ್ಕೆ ನೀಡಿ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು.
ಐತಿಹಾಸಿಕ ಬಾಬ್ರಿ ಮಸೀದಿಯ ಸ್ಥಳದಲ್ಲಿ ಈ ಹಿಂದೆ ರಾಮನ ದೇಗುಲವಿತ್ತು ಎಂಬ ಕೆಲವರ ವಾದ ರಾಜಕೀಯ ಕಾರಣಗಳಿಂದ ವಿವಾದವಾಗಿ ಉಂಟಾಗಿತ್ತು. 1992ರಲ್ಲಿ ಬಿಜೆಪಿಯ ಲಾಲ್ ಕೃಷ್ಣ ಅಡ್ವಾಣಿಯವರ ನೇತೃತದಲ್ಲಿ ಸಾವಿರಾರು ಕರಸೇವಕರು ಬಾಬರಿ ಮಸೀದಿಯನ್ನು ಅತಿಕ್ರಮಿಸಿ ಧ್ವಂಸ ಮಾಡಿದ್ದು ಕೋಮುಸಾಮರಸ್ಯರ ಭಾರತೀಯ ಪರಂಪರೆಯಲ್ಲಿ ಕಪ್ಪುಚುಕ್ಕೆಯಾಗಿ ಉಳಿದಿದೆ.