ದೇಶದ ಅತಿದೊಡ್ಡ ರಾಜ್ಯವಾದ ಉತ್ತರಪ್ರದೇಶದ ಅಧಿಕಾರ ಸೂತ್ರವನ್ನು ಇತ್ತೀಚೆಗೆ ಎರಡನೆಯ ಬಾರಿಗೆ ಹಿಡಿದರು ಯೋಗಿ ಆದಿತ್ಯನಾಥ. ತುಸು ಮುನ್ನ ನಡೆದ ಚುನಾವಣಾ ಪ್ರಚಾರದಲ್ಲಿ ಆದಿತ್ಯನಾಥರನ್ನು ಬುಲ್ಡೋಜರ್ ಬಾಬಾ ಎಂದು ಮೂದಲಿಸಿತ್ತು ಸಮಾಜವಾದಿ ಪಾರ್ಟಿ. ಈ ಮೂದಲಿಕೆಯನ್ನೇ ತನ್ನ ಅನುಕೂಲಕ್ಕೆ ತಿರುಗಿಸಿಕೊಂಡಿತು ಬಿಜೆಪಿ. ಪಾತಕಿಗಳ ಅಕ್ರಮ ಆಸ್ತಿಪಾಸ್ತಿಗಳ ಮೇಲೆ ಬುಲ್ಡೋಜರ್ ಚಲಾಯಿಸುವವರು ಎಂದು ಯೋಗಿಯನ್ನು ಬಣ್ಣಿಸಿ ಪ್ರಚಾರ ಮಾಡಿತು.
ಅವರ ಕೋಮುವಾದಿ ಮುಸ್ಲಿಮ್ ದ್ವೇಷೀ ಧ್ರುವೀಕರಣ ಆಡಳಿತ ವೈಖರಿಯ ಅನುಕರಣೆಗೆ ಇಳಿದಿದ್ದಾರೆ ಅವರದೇ ಪಕ್ಷದ ಹಲವು ಮುಖ್ಯಮಂತ್ರಿಗಳು. ಈ ಪೈಕಿ ಮಧ್ಯಪ್ರದೇಶದ ಶಿವರಾಜಸಿಂಗ್ ಚೌಹಾಣ್ ಪ್ರಮುಖರು.
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆಂದು ದೇಣಿಗೆ ಸಂಗ್ರಹಿಸಲು ಉಜ್ಜಯಿನಿ ಮತ್ತು ಇಂದೋರಿನ ರ್ಯಾಲಿಗಳ ಮೇಲೆ ಮುಸಲ್ಮಾನ ಬಹುಳ ಪ್ರದೇಶಗಳಲ್ಲಿ ಕಲ್ಲು ತೂರಾಟ ನಡೆದಿತ್ತು. ಆನಂತರ, ಕಲ್ಲು ತೂರುವವರನ್ನು ಶಿಕ್ಷಿಸುವುದೇ ಅಲ್ಲದೆ ಅವರಿಂದ ನಷ್ಟ ಪರಿಹಾರವನ್ನೂ ವಸೂಲು ಮಾಡುವ ಉತ್ತರಪ್ರದೇಶ ಮಾದರಿಯ ಕಾಯಿದೆಯನ್ನು ಕಳೆದ ವರ್ಷ ಜಾರಿಗೆ ತರಲಾಯಿತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕಳೆದ ದೀಪಾವಳಿಯಂದು ಉತ್ತರಪ್ರದೇಶದ ಯೋಗಿ ಸರ್ಕಾರ ಆಯೋಧ್ಯೆಯ ಸರಯೂ ನದೀ ತೀರದಲ್ಲಿ ಲಕ್ಷ ಲಕ್ಷ ದೀಪ ಬೆಳಗಿಸಿ ವಿಶ್ವದಾಖಲೆ ಸ್ಥಾಪಿಸಿತು. ಶಿವರಾಜಸಿಂಗ್ ಅವರು ತಮ್ಮ ರಾಜ್ಯದ ಉಜ್ಜಯಿನಿಯ ಶಿಪ್ರಾ ನದೀ ತೀರದಲ್ಲಿ ಇಂತಹುದೇ ಭವ್ಯ ದೀಪೋತ್ಸವವನ್ನು ನಡೆಸಿದರು. ತಾವು ಖುದ್ದು ಹಾಜರಿದ್ದರು.
ಆದಿತ್ಯನಾಥ್ ಸರ್ಕಾರ ಲವ್ ಜಿಹಾದ್ ಕಾಯಿದೆ ಎಂದೇ ಕರೆಯಲಾದ ಮತಾಂತರ ನಿಷೇಧ ಕಾಯಿದೆ ಜಾರಿಗೆ ತಂದಿತು. ಮಧ್ಯಪ್ರದೇಶ ಅದೇ ಹಾದಿಯಲ್ಲಿ ನಡೆಯಿತು. ಕರ್ನಾಟಕದ ಬಿಜೆಪಿ ಸರ್ಕಾರದ ದಿಕ್ಕು ದೆಸೆಗಳಲ್ಲೂ ಹೆಚ್ಚು ವ್ಯತ್ಯಾಸ ಇಲ್ಲ.
ಆದಿತ್ಯನಾಥ್ ’ಬುಲ್ಡೋಜರ್ ಬಾಬಾ’ ಎಂದು ಕರೆಯಿಸಿಕೊಂಡರೆ, ಶಿವರಾಜ್ ಬುಲ್ಡೋಜರ್ ಮಾಮಾ ಎಂಬ ಅಭಿದಾನ ತಮಗೆ ಗಟ್ಟಿಯಾಗಿ ಅಂಟಲೆಂದು ಬಯಸಿದ್ದಾರೆ. ಮುಸಲ್ಮಾನರ ’ಅಕ್ರಮ’ ಮನೆಗಳು ಮತ್ತು ಅಂಗಡಿಗಳ ಮೇಲೆ ಅವರ ಆಡಳಿತ ನಿರ್ದಯೆಯಿಂದ ಬುಲ್ಡೋಜರ್ ಹರಿಸುತ್ತಿದೆ. ಈ ಮಾತಿಗೆ ಖರ್ಗೋನ್ ಪ್ರಕರಣ ಇತ್ತೀಚಿನ ನಿದರ್ಶನ.
ಈ ಹಿಂದಿನ ತಮ್ಮ ಆಡಳಿತಾವಧಿಗಳಲ್ಲಿ ಅವರ ಆಡಳಿತ ವೈಖರಿ ಕೋಮು ಸಾಮರಸ್ಯವನ್ನು ಕದಡಿರಲಿಲ್ಲ. ಬದಲಾಗಿ ಮುಸಲ್ಮಾನರೂ ಈ ಬಿಜೆಪಿ ಮುಖ್ಯಮಂತ್ರಿಯನ್ನು ಇಷ್ಟಪಡುತ್ತಿದ್ದರು ಮತ್ತು ಅವರ ಪರವಾಗಿ ಮತ ಚಲಾಯಿಸುತ್ತಿದ್ದುದೂ ಉಂಟು. ಅದೊಂದು ಕಾಲವಿತ್ತು. ಮುಖ್ಯಮಂತ್ರಿ ಶಿವರಾಜ್ ಸರ್ಕಾರಿ ನಿವಾಸದಲ್ಲಿ ಕ್ರಿಸ್ಮಸ್ ಆಚರಿಸಲಾಗುತ್ತಿತ್ತು. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಏಕೈಕ ಮಹಿಳಾ ಮುಸಲ್ಮಾನ ಅಭ್ಯರ್ಥಿ ಫಾತಿಮಾ ಸಿದ್ದೀಖಿ ನಾಮಪತ್ರ ಸಲ್ಲಿಸಲು ತೆರಳಿದಾಗ ಖುದ್ದು ಮುಖ್ಯಮಂತ್ರಿಯೇ ಆಕೆಯ ಜೊತೆಗೆ ತೆರಳಿದ್ದರು.
ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ಕೇವಲ ಒಂದೂವರೆ ವರ್ಷ ದೂರದಲ್ಲಿದೆ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಮೂಲಕ ತಮ್ಮ ಕುರ್ಚಿಯನ್ನೂ ಭದ್ರಪಡಿಸಿಕೊಳ್ಳಬೇಕಿದೆ ಶಿವರಾಜಸಿಂಗ್. ಉತ್ತರಪ್ರದೇಶದಲ್ಲಿ ಯೋಗಿಯವರ ಕಟ್ಟರ್ ಹಿಂದುತ್ವ ಫಲ ನೀಡಿದೆ ಎಂಬುದು ಅವರ ಗಟ್ಟಿ ನಂಬಿಕೆ. ಅದೇ ವರ್ಚಸ್ಸನ್ನು ಆಲಿಂಗಿಸಿ ಧರಿಸಿದ್ದಾರೆ. ಬುಲ್ಡೋಜರ್ ರೂಪಕವನ್ನು ಯೋಗಿಯವರಿಂದ ಎರವಲು ಪಡೆದಿದ್ದಾರೆ.
ಜ್ಯೋತಿರಾದಿತ್ಯ ಸಿಂಧ್ಯ ಅವರಂತಹ ಕಾಂಗ್ರೆಸ್ಸಿಗರ ನೆರವಿನಿಂದಲೇ ಕಾಂಗ್ರೆಸ್ ಸರ್ಕಾರವನ್ನು ಕೆಡವಿ ಪುನಃ ಬಿಜೆಪಿಯನ್ನು ಅಧಿಕಾರಕ್ಕೆ ತಂದರು ಅಮಿತ್ ಶಾ. 2018ರಲ್ಲಿ ಸೋತ ಶಿವರಾಜ್ ಅವರಿಗೆ
ಮುಖ್ಯಮಂತ್ರಿಯಾಗಿ ಮತ್ತೊಂದು ಅವಕಾಶ ಸಿಕ್ಕಿತ್ತು. ಒಂದು ಕಾಲಕ್ಕೆ ನರೇಂದ್ರ ಮೋದಿ ಅವರಿಗೆ ಪೈಪೋಟಿ ಒಡ್ಡಿದ್ದ ಕಾರಣಕ್ಕೆ ಶಾ-ಮೋದಿ ಅವರ ಸರ್ವಶಕ್ತ ಜೋಡಿ ಶಿವರಾಜರನ್ನು ದೂರವೇ ಇರಿಸಿದೆ. 2023ರ ಡಿಸೆಂಬರ್ ಚುನಾವಣೆಯಲ್ಲಿ ತಮ್ಮ ಅಧಿಕಾರವನ್ನು ಕಳೆದುಕೊಳ್ಳಲು ಒಲ್ಲರು ಶಿವರಾಜ್. ಕಳೆದ ಮಾರ್ಚ್ 23ರಂದು ಎರಡು ವರ್ಷಗಳ ಆಡಳಿತಾವಧಿ ಪೂರೈಸಿದರು. ಬೆಂಬಲಿಗರು ಅವರನ್ನು ಬುಲ್ಡೋಜರ್ ಮಾಮಾ ಎಂದು ಕರೆದು ಸನ್ಮಾನಿಸಿದರು. ಈ ಬಿರುದಿನ ಭಿತ್ತಿಪತ್ರಗಳು ರಾಜ್ಯದ ತುಂಬೆಲ್ಲ ರಾರಾಜಿಸಿದವು.
ರಾಮೇಶ್ವರ ಶರ್ಮಾ ಎಂಬ ಬಿಜೆಪಿ ಶಾಸಕರೊಬ್ಬರು ತಮ್ಮ ಸರ್ಕಾರಿ ಬಂಗಲೆಯ ಮುಂದೆ ಸಾಲುಸಾಲಾಗಿ ಬುಲ್ಡೋಜರುಗಳನ್ನು ನಿಲ್ಲಿಸಿದರು. ನಮ್ಮ ಹೆಣ್ಣುಮಕ್ಕಳ ಮೇಲೆ ಕಣ್ಣು ಹಾಕುವವರನ್ನು ಹೊಸಕಿ ಹಾಕುವುದು ಮಾಮಾನ ಬುಲ್ಡೋಜರ್ ಎಂಬ ಅರ್ಥದ ದೊಡ್ಡ ಬಿತ್ತಿಪತ್ರವನ್ನು ಬರೆಯಿಸಿ ನಿಲ್ಲಿಸಿದರು.
ಈ ವಿದ್ಯಮಾನಕ್ಕೆ ತುಸು ಮುನ್ನ ಶಿವಪುರ, ಸಿಯೋನಿ ಹಾಗೂ ಶಾದೋಲ್ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಗಳ ಮೂವರು ಅತ್ಯಾಚಾರ ಆರೋಪಿಗಳ ಮನೆಗಳ ಮೇಲೆ ಬುಲ್ಡೋಜರ್ ಹರಿಸಿ ಕೆಡವಿದ್ದರು.
ತಮ್ಮನ್ನು ಬುಲ್ಡೋಜರ್ ಮಾಮಾ ಎಂದು ಕರೆದ ಶರ್ಮಾ ಅವರಿಗೆ ಧನ್ಯವಾದ ಹೇಳಿದರು ಶಿವರಾಜ್. ’ಎಲ್ಲ ಪಾತಕಿಗಳು ಕೊಚ್ಚಿ ಹೋಗುವತನಕ ನಿಲ್ಲದು ಮಾಮಾನ ಬುಲ್ಡೋಜರ್. ಸಮಾಜವಿರೋಧಿ ಶಕ್ತಿಗಳನ್ನು ಸುಮ್ಮನೆ ಬಿಡುವುದಿಲ್ಲ ನಾವು’ ಎಂಬುದಾಗಿ ಟ್ವೀಟ್ ಮಾಡಿದರು.
ಇತ್ತೀಚೆಗೆ ರಾಮನವಮಿ ಮೆರವಣಿಗೆಯ ಮೇಲೆ ಕಲ್ಲು ತೂರಿದ ಅಲ್ಪಸಂಖ್ಯಾತ ಆಪಾದಿತರ ಅಂಗಡಿಗಳು- ಮನೆಗಳ ಮೇಲೆ ಬುಲ್ಡೋಜರುಗಳನ್ನು ಹರಿಸಿ ಕೆಡವಿಸಿದ್ದಾರೆ. ಈ ಮನೆಗಳಲ್ಲಿ ವಾಸವಿದ್ದವರೇ ಕಲ್ಲು ತೂರಿದ ನಿಜ ಅಪರಾಧಿಗಳೆಂಬುದು ಇನ್ನು ಸಾಬೀತಾಗಿಲ್ಲ. ಕಾಯಿದೆ ಕಾನೂನುಗಳನ್ನು ಎತ್ತಿ ಹಿಡಿದು ಆಡಳಿತ ಮಾಡಬೇಕಿರುವ ಸರ್ಕಾರವೇ ಕಾನೂನು ಪ್ರಕ್ರಿಯೆಯನ್ನು ಗಾಳಿಗೆ ತೂರಿ ನ್ಯಾಯಾಂಗದ ಪಾತ್ರವನ್ನೂ ತಾನೇ ವಹಿಸಿರುವುದು ಸಂವಿಧಾನಬಾಹಿರ ನಡೆ. ಕಾನೂನಿನ ಆಡಳಿತಕ್ಕೆ ಮಾರಕವೇ ವಿನಾ ತಾರಕ ಅಲ್ಲ.
ಮೂರನೆಯ ದರ್ಜೆಯ ಪ್ರಜೆಗಳಂತೆ ಬಹುಸಂಖ್ಯಾತರಿಗೆ ಅಡಿಯಾಳುಗಳಾಗಿ ಬಾಳದೆ ಸಮಾನರೆಂದು ತಲೆಯೆತ್ತಿದರೆ ನಿಮ್ಮ ನೆರಳು, ಬದುಕು-ಬಾಳುವೆ, ಅನ್ನದ ದಾರಿಗಳನ್ನು ಹಾಳುಗೆಡವುತ್ತೇವೆ ಎಂಬ ನಿಚ್ಚಳ ಸಂದೇಶವನ್ನು ಅಲ್ಪಸಂಖ್ಯಾತರಿಗೆ ದಿನನಿತ್ಯ ಹತ್ತು ಹಲವು ಬಗೆಗಳಲ್ಲಿ ರವಾನಿಸಲಾಗುತ್ತಿದೆ.
ಅಲ್ಪಸಂಖ್ಯಾತರ ನಡೆ ನುಡಿ ಉಡುಪು, ಉಣಿಸು ತಿನಿಸು, ಆರಾಧನೆ ಎಲ್ಲವನ್ನೂ ಖಳ-ಖೂಳಗೊಳಿಸಿ ಮುಸಲ್ಮಾನರ ಜನಾಂಗೀಯ ಹತ್ಯೆಯತ್ತ ಹೆಜ್ಜೆಯಿಟ್ಟಿದೆ ಭಾರತದ ರಾಜ್ಯಾಡಳಿತ ಕ್ರಮ. ನರೇಂದ್ರ ಮೋದಿ-ಅಮಿತ್ ಶಾ- ಸಂಘಪರಿವಾರ ಈ ಕ್ರಮದ ರೂವಾರಿಗಳು.
ವಾಸ್ತವವಾಗಿ ಬುಲ್ಡೋಜರುಗಳು ಹರಿದು ಕದಲಿರುವುದು ಭಾರತದ ಬಹುತ್ವದ ಅಡಿಪಾಯವೇ ವಿನಾ ಅಲ್ಪಸಂಖ್ಯಾತರ ಮನೆ ಮನಗಳು ಮಾತ್ರವೇ ಅಲ್ಲ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಬಹುಜನ ಭಾರತ; ಪ್ರಾಚೀನ ಕಲಾಕೃತಿಗಳು-ಕೊಳ್ಳೆಯೇಕೆ ನಿಂತಿಲ್ಲ?


