ಏಪ್ರಿಲ್ 23ರ ಶನಿವಾರದಂದು ಬೆಂಗಳೂರಿನ ಯಲಚೇನಹಳ್ಳಿಯ ಅಣ್ಣಮ್ಮದೇವಿ ಮೆರವಣಿಗೆಯನ್ನು ಮುಸ್ಲಿಂ ಸಮುದಾಯ ಹೆಚ್ಚಿರುವ ಪ್ರದೇಶದಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಶಾಂತಿ ಮತ್ತು ಸುವ್ಯವಸ್ಥೆಯ ದೃಷ್ಟಿಯಿಂದ ಮಾರ್ಗ ಹಾಗೂ ಸಮಯವನ್ನು ಬದಲಿಸಬೇಕೆಂಬ ಆಗ್ರಹ ಕೇಳಿಬಂದಿದೆ. ಈ ಆಗ್ರಹಕ್ಕೆ ಡಿಸಿಪಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಮೂಲಗಳು ನಾನುಗೌರಿ.ಕಾಂಗೆ ತಿಳಿಸಿವೆ.
ಸ್ವರಾಜ್ ಇಂಡಿಯಾ ಪಕ್ಷದ ಬೆಂಗಳೂರು ಜಿಲ್ಲಾ ಮುಖಂಡ ಗುಲಾಬ್ ಪಾಷಾ ಅವರು ಬೆಂಗಳೂರು ದಕ್ಷಿಣ ಡಿಸಿಪಿಗೆ ಪತ್ರ ಬರೆದಿದ್ದು, “ಏಪ್ರಿಲ್ 23ರಂದು ರಾತ್ರಿ 8 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಅಣ್ಣಮ್ಮದೇವಿ ಮೆರವಣಿಗೆಯನ್ನು ಬಿಬಿಎಂಪಿ ವಾರ್ಡ್ ಯಲಚೇನಹಳ್ಳಿಯಲ್ಲಿ ಹಿಂದೂ ಸಂಘಟನೆ ಹಮ್ಮಿಕೊಂಡಿರುವುದು ತಿಳಿದಿದೆ. ಕುಮಾರಸ್ವಾಮಿ ಲೇಔಟ್ ಪೊಲೀಸ್ ಸ್ಟೇಷನ್ನವರು ಮೆರವಣಿಗೆಗೆ ಅನುಮತಿ ನೀಡಿದ್ದಾರೆಂದು ನಂಬಿದ್ದೇವೆ. ಪ್ರಸ್ತಾಪಿತ ಮಾರ್ಗವನ್ನು ಹಂಚಿಕೊಳ್ಳಲಾಗಿದೆ. ಈ ಮೆರವಣಿಗೆಯ ಸಂಘಟಕರಲ್ಲಿ ಬಿಜೆಪಿ ಮುಖಂಡ, ಯಲಚೇಹಳ್ಳಿ ವಾರ್ಡ್ ಮಾಜಿ ಸದಸ್ಯ ಬಾಲಕೃಷ್ಣ ಪ್ರಮುಖ ಪಾತ್ರ ವಹಿಸಿದ್ದಾರೆಂದು ತಿಳಿದುಬಂದಿದೆ” ಎಂದು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮುಂದುವರಿದು, “ಫಯಾದ್ಬಾದ್ ಮತ್ತು ಕನಕನಗರ ಪ್ರದೇಶದಲ್ಲಿ ಮೆರವಣಿಗೆ ನಡೆಸುವ ಪ್ರಸ್ತಾವನೆಯನ್ನು ಮಾಡಲಾಗಿದೆ ಎಂದು ತಿಳಿಯಿತು. ಮಂಜು ಲೇಔಟ್ನಿಂದ ಶನಿಮಹಾತ್ಮಾ ದೇವಸ್ಥಾನದ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಮರು ವಾಸವಿದ್ದಾರೆ. ಅಣ್ಣಮ್ಮದೇವಿಯ ಮೆರವಣಿಗೆಯನ್ನು ಈ ಹಿಂದೆ ಯಾವತ್ತೂ ಹಮ್ಮಿಕೊಂಡಿರಲಿಲ್ಲ. ಕರ್ನಾಟಕ ಹಾಗೂ ದೇಶದ ವಿವಿಧೆಡೆ ನಡೆದಿರುವ ಹಲವು ಘಟನೆಗಳ ಹಿನ್ನೆಲೆಯಲ್ಲಿ, ಈ ಮೆರವಣಿಗೆಯ ಕುರಿತು ನಾವು ಅತ್ಯಂತ ಆತಂಕಿತರಾಗಿದ್ದೇವೆ. ಶಾಂತಿ ಮತ್ತು ಕೋಮು ಸೌದಾರ್ಹತೆಯನ್ನು ಈ ಘಟನೆಗಳು ಹಾಳು ಮಾಡಿವೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
“ಹೀಗಾಗಿ ತಕ್ಷಣವೇ ಮೆರವಣಿಗೆಯ ಮಾರ್ಗವನ್ನು ಬದಲಿಸಬೇಕು. ಫಯಾಜ್ಬಾದ್ ಮತ್ತು ಕನಕನಗರ ಪ್ರದೇಶದಲ್ಲಿ ಮೆರವಣಿಗೆ ನಡೆಸುವುದು ಸೂಕ್ತವಲ್ಲ. ಈ ಪ್ರದೇಶಗಳಲ್ಲಿ ಮಸೀದಿಗಳಿವೆ. ಮೆರವಣಿಗೆ ಮಾರ್ಗದಲ್ಲೂ ಒಂದು ಮಸೀದಿ ಇದೆ. ರಂಜಾನ್ ಮಾಸವಾಗಿರುವ ಕಾರಣ ದೊಡ್ಡ ಸಂಖ್ಯೆಯಲ್ಲಿ ಜನರು ಪ್ರಾರ್ಥನೆ ಸಲ್ಲಿಸಲು ಸಂಜೆ ವೇಳೆ ಮಸೀದಿಗೆ ಬರುತ್ತಾರೆ. ಯಾವುದೇ ಕೋಮು ಗಲಭೆಗಳನ್ನು ನಡೆಯದಂತೆ ಮುಂಜಾಗ್ರತೆ ವಹಿಸಿ ಶಾಂತಿ ಮತ್ತು ಕೋಮು ಸೌಹಾರ್ದತೆಯನ್ನು ಕಾಪಾಡಲು ಕ್ರಮ ಜರುಗಿಸಬೇಕು ಎಂದು ಮತ್ತೊಮ್ಮೆ ನಿಮ್ಮಲ್ಲಿ ಕೋರುತ್ತೇವೆ” ಎಂದಿದ್ದಾರೆ.
ಇದನ್ನೂ ಓದಿರಿ: ಬಹುತ್ವದ ಮೇಲೆ ಬುಲ್ಡೋಜರ್ ಹರಿಸಿರುವ ಬಾಬಾ-ಮಾಮಾಗಳು
‘ನಾನುಗೌರಿ.ಕಾಂ’ ಜೊತೆ ಮಾತನಾಡಿದ ಗುಲಾಭ್ ಪಾಷಾ ಅವರು, “ಮೆರವಣಿಗೆಗೆ ನಮ್ಮ ವಿರೋಧವಿಲ್ಲ. ಆದರೆ ರಂಜಾನ್ ಮಾಸದಲ್ಲಿ ಮುಸ್ಲಿಂ ಸಮುದಾಯದ ಜನ ಉಪವಾಸವಿದ್ದು, ಸಂಜೆ ಪ್ರಾರ್ಥನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ದೇಶದಲ್ಲಿ ನಡೆದಿರುವ ಘಟನೆಗಳು ಆತಂಕ ತಂದಿವೆ. ಹೀಗಾಗಿ ಸಮುದಾಯಗಳ ನಡುವೆ ಶಾಂತಿ ಕಾಪಾಡಬೇಕು” ಎಂದು ತಿಳಿಸಿದರು.
“ಬೆಂಗಳೂರು ದಕ್ಷಿಣದಲ್ಲಿ ಎರಡು ಕೋಮಿನ ಜನರು ಸೌಹಾರ್ದತೆಯಿಂದ ಇದ್ದಾರೆ. ಮುಂದೆಯೂ ಇರುತ್ತಾರೆ. ಆದರೆ ದೇಶದಲ್ಲಿ ನಡೆಯುತ್ತಿರುವ ಘಟನೆಗಳ ಹಿನ್ನೆಲೆಯಲ್ಲಿ ಮುಂಜಾಗ್ರತೆ ಅಗತ್ಯ” ಎಂದು ಹೇಳಿದರು.
ಸ್ವರಾಜ್ ಪಕ್ಷದ ಮನವಿಗೆ ಬೆಂಗಳೂರು ದಕ್ಷಿಣ ಡಿಸಿಪಿ ಹರೀಶ್ ಪಾಂಡೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾಗಿ ತಿಳಿದು ಬಂದಿದೆ. ಅಣ್ಣಮ್ಮ ಮೆರವಣಿಗೆಯು ಈ ಹಿಂದೆ ಚಲಿಸುತ್ತಿದ್ದ ದಾರಿಯಲ್ಲೇ ತೆರಳುವಂತೆ ಆದೇಶ ನೀಡುವುದಾಗಿ ಅವರು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದುಷ್ಕರ್ಮಿಗಳು ಬೇಕಂತಲೇ ಗಲಭೆಗಳನ್ನು ಸೃಷ್ಟಿಸುತ್ತಿರುವುದಕ್ಕೆ ದೇಶ ಸಾಕ್ಷಿಯಾಗಿದೆ. ಮಸೀದಿ ಮುಂದೆ ಜೈ ಶ್ರೀರಾಮ್ ಕೂಗುವ, ಆಯುಧಗಳನ್ನು ಜಳಪಿಸುವ ದೃಶ್ಯಗಳು ವೈರಲ್ ಆಗುತ್ತಿವೆ. ಪೊಲೀಸರೇ ಮೂಕ ಪ್ರೇಕ್ಷಕರಾಗುತ್ತಿದ್ದಾರೆ. ದೆಹಲಿಯ ಜಹಾಂಗಿರ್ಪುರಿಯಲ್ಲಿ ಮಸೀದಿಗೆ ಕಲ್ಲು ತೂರಾಟ ನಡೆಸಲಾಗಿತ್ತು. ದೇವರ ಹೆಸರಲ್ಲಿ ಗಲಭೆಗಳನ್ನು ಸೃಷ್ಟಿಸುವ, ಇನ್ನೊಂದು ಕೋಮಿನ ಜನರನ್ನು ಬೇಕಂತಲೇ ಪ್ರಚೋದಿಸುವ ಪ್ರವೃತ್ತಿಗಳು ಎಗ್ಗಿಲ್ಲದೆ ಸಾಗುತ್ತಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕಾರ್ಯಕ್ರಮದ ಕುರಿತು ಆತಂಕ ಎದುರಾಗಿದೆ.
ಫಯಾಝಬಾದ್ ಮತ್ತು ಕನಕ ನಗರಗಳು ಭಾರತದಲ್ಲಿಯೇ ಇರುವಂತಹದು ನೆನಪಿರಲಿ ,ಯಾವ ಸಮುದಾಯ ಹೇಗೆ ವರ್ತನೆ ಮಾಡಿದೆ ಎಂಬುವುದು ಎಲ್ಲರಿಗೂ ಇತ್ತೀಚೆಗೆ ತಿಳಿದಿದೆ ಹಿಂದೂಸ್ಥಾನದಲ್ಲಿ ಇದ್ದು ಹಿಂದೂಗಳ ಮೇಲೆ ಗದಪ್ರಹಾರ ಸಹಿಸಲಾಗದು ,ಎಂದಿನಂತೆ ಅಣ್ಣಮ್ಮ ಉತ್ಸವ ನಡೆಯಲಿದೆ
ಹಿಂದೂ ಬಹುಸಂಖ್ಯಾತ ಪ್ರದೇಶದಲ್ಲಿ ಮುಸಲ್ಮಾನರು ಮೆರವಣಿಗೆ ಮಾಡಬಹುದಾ