ಬಾಗಲಕೋಟೆ: ಇಲ್ಲಿನ ಕಾಲೇಜೊಂದರ ಆವರಣದಲ್ಲಿ ಸ್ಕಲ್ ಕ್ಯಾಪ್ ಧರಿಸಿದ್ದಕ್ಕೆ ವಿದ್ಯಾರ್ಥಿಯೊಬ್ಬನಿಗೆ ಥಳಿಸಿದ ಆರೋಪದ ಮೇಲೆ ಪ್ರಾಂಶುಪಾಲರು, ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಐವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಸ್ಥಳೀಯ ಬನಹಟ್ಟಿ ಜೆಎಂಎಫ್ಸಿ ನ್ಯಾಯಾಲಯದ ನಿರ್ದೇಶನದಂತೆ ರಾಜ್ಯದ ಬಾಗಲಕೋಟ ಜಿಲ್ಲೆಯ ತೇರದಾಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಕಾಲೇಜು ವಿದ್ಯಾರ್ಥಿ ನವೀದ್ ಹಸನ್ ಸಾಬ್ ಥರತಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಫೆಬ್ರುವರಿ 18ರಂದು ತೇರದಾಳದ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸ್ಕಲ್ ಕ್ಯಾಪ್ ಧರಿಸಿ ಬಂದಿದ್ದಾಗ ತನ್ನನ್ನು ಅವಮಾನಿಸಿ ಸಂಸ್ಥೆಯೊಳಗೆ ಪ್ರವೇಶಿಸದಂತೆ ತಡೆದು ಧಾರ್ಮಿಕ ಭಾವನೆಗಳಿಗೆ ಚ್ಯುತಿ ತಂದಿದ್ದಾರೆ ಎಂದು ನವೀದ್ ಅರ್ಜಿಯಲ್ಲಿ ತಿಳಿಸಿದ್ದರು.
ತನ್ನ ಧರ್ಮವನ್ನು ಅವಮಾನಿಸಿ ಕಾಲೇಜಿನಿಂದ ಬಹಿಷ್ಕಾರ ಹಾಕಿದ ಪ್ರಾಂಶುಪಾಲರು ಮತ್ತು ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿರುದ್ಧ ದೂರು ದಾಖಲಿಸುವಂತೆ ಅವರು ನ್ಯಾಯಾಲಯದ ಮುಂದೆ ಕೋರಿದ್ದರು. ಅರ್ಜಿಯನ್ನು ಪರಿಗಣಿಸಿದ ನ್ಯಾಯಾಲಯ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿತ್ತು.
ನ್ಯಾಯಾಲಯವು ಜೂನ್ 30ರಂದು ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಿದ್ದು, ಜಮಖಂಡಿ ಉಪ ಎಸ್ಪಿ ಅವರನ್ನು ಪ್ರಕರಣದ ತನಿಖಾಧಿಕಾರಿಯನ್ನಾಗಿ ಮಾಡಲಾಗಿದೆ.
ಇದಕ್ಕೂ ಮುನ್ನ ನವೀದ್ ಮತ್ತು ಆತನ ತಂದೆ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಪ್ರಾಂಶುಪಾಲ ಎ.ಎಸ್.ಪೂಜಾರ ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.


