Homeಅಂಕಣಗಳುಗಿರವಿ ಇರಿಸಿದ ಮೆದುಳುಗಳು ಮತ್ತು ಕಾಣೆಯಾದ ಹಸುಗೂಸು!: ಡಿ.ಉಮಾಪತಿ

ಗಿರವಿ ಇರಿಸಿದ ಮೆದುಳುಗಳು ಮತ್ತು ಕಾಣೆಯಾದ ಹಸುಗೂಸು!: ಡಿ.ಉಮಾಪತಿ

ಬಂಗಾಳಿ ಕವಿ ನಿರೇಂದ್ರನಾಥ ಚಕ್ರವರ್ತಿಯವರ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ’ಉಲೋಂಗೋ ರಾಜಾ (ಬೆತ್ತಲೆ ರಾಜ)’ ಕವಿತೆಯೊಂದು ಇಂದಿಗೂ ಪ್ರಸ್ತುತವಾಗಿರುವುದರ ಕುರಿತು ಡಿ.ಉಮಾಪತಿಯವರ ಬರಹ...

- Advertisement -
- Advertisement -

ಪ್ರಾಣವಾಯುವಿಗಾಗಿ ಚಡಪಡಿಸಿ ಮನೆ ಮನೆಗಳಲ್ಲಿ ಚಿತೆಗಳು ಉರಿಯತೊಡಗಿ ಪ್ರಜೆಗಳ ಅಸಹಾಯಕ ಆಕ್ರಂದನ ಮುಗಿಲು ಮುಟ್ಟಿದೆ. ದೇಶದ ಉದ್ದಗಲಗಳನ್ನು ಮರಣ ಮೌನ ಆವರಿಸಿ ಹೊದ್ದಿದೆ. ನಗರಗಳಲ್ಲಿ ಆಂಬ್ಯುಲೆನ್ಸ್‌ಗಳು ಹಗಲುರಾತ್ರಿ ಊಳಿಡತೊಡಗಿವೆ. ರುಗ್ಣಾಲಯಗಳು- ರುದ್ರಭೂಮಿಗಳು ತುಂಬಿತುಳುಕಿವೆ. ಗಂಗೆಯ ದಡದಲ್ಲಿ ಉರಿವ ಹೆಣಗಳ ಲೆಕ್ಕ ಕಳೆದುಹೋಗಿದೆ. ಯಮುನೆಗೆ ತೇಲಿಬಿಟ್ಟ ಕೋವಿಡ್ ಪೀಡಿತರ ಶವಗಳು ಭಯಭೀತಿಯ ಅಲೆಗಳನ್ನು ಎಬ್ಬಿಸಿವೆ. ಕೋವಿಡ್‌ನ ಮೂರನೆಯ ಅಲೆ ಹೆಡೆಯೆತ್ತಿದೆ ಎನ್ನಲಾಗುತ್ತಿದೆ. ಆಹುತಿಯ ಸರದಿ ಹಸುಮಕ್ಕಳದಂತೆ. ಮೂರನೆಯ ಅಲೆ ಹೆಡೆ ಮುದುರದಿದ್ದರೆ ಎರಗಲಿರುವ ವಿಪತ್ತು, ಮೊರೆಯಲಿರುವ ಶೋಕಸಾಗರ ಊಹೆಗೂ ನಿಲುಕದ್ದು.

ಬಂಗಾಳವನ್ನು ಗೆಲ್ಲಲು ಸಿಡಿಲಾಗಿ ಘರ್ಜಿಸಿದ್ದ ಚಕ್ರವರ್ತಿಗಳು ಘೋರ ಸೋಲಿನ ನಂತರ ಗಾಢ ಮೌನಕ್ಕೆ ಶರಣುಹೋಗಿದ್ದಾರೆ. ದೇಶವನ್ನು ಕವಿದಿರುವ ದುರಂತಕ್ಕೆ ಅವರು ಕಿವುಡರು ಮತ್ತು ಕುರುಡರು. ನಿರುಪಾಯರು, ನಿಷ್ಕ್ರಿಯರು, ನಿಶ್ಯಕ್ತರು. ಸರ್ವಶಕ್ತರೆಂಬಂತೆ ಗುಡುಗುತ್ತಿದ್ದ ನಾಯಕರ ನಿಜಟೊಳ್ಳು, ಮಹಾಸಂಕಟ ಒಡ್ಡಿರುವ ಅಗ್ನಿಪರೀಕ್ಷೆಯಲ್ಲಿ ನಗ್ನವಾಗಿ ನಿಂತಿದೆ.

ಪ್ರಜೆಗಳ ಕಷ್ಟ ಸಂಕಟಗಳು ಕತ್ತಲೆ ಕಣ್ಣೀರುಗಳು ’ಉಕ್ಕಿನ ಮನುಷ್ಯ’ನನ್ನು ಬಾಧಿಸಿರುವ ಸುಳಿವುಗಳಿಲ್ಲ. ಐವತ್ತಾರು ಅಂಗುಲ ಹರವಿನ ಎದೆಯಲ್ಲಿ ಅನುಕಂಪದ ಜಲವಿರಲಿ, ಅದರ ಪಸೆಯೂ ಕಾಣದಲ್ಲ ಎಂಬ ಕಠೋರ ಸತ್ಯ ಬೆಚ್ಚಿಬೀಳಿಸುತ್ತದೆ.

ಎಲ್ಲ ಸುಂದರ ಸಾಂಗತ್ಯಗಳನ್ನು ತಿರಸ್ಕರಿಸಿ ನೀರಿನಲ್ಲಿ ಕಾಣುವ ತನ್ನ ಪ್ರತಿಬಿಂಬದೊಂದಿಗೆ ಅನುರಕ್ತನಾಗಿ ಬದುಕೆಲ್ಲ ಸ್ವಮೋಹಿಯಾಗೇ ಕಳೆದ ಗ್ರೀಕ್ ಪುರಾಣದ ಸುಂದರಾಂಗ ನಾರ್ಸಿಸ್‌ನಂತೆಯೂ, ರೋಮ್ ಹೊತ್ತಿ ಉರಿದಾಗ ಪಿಟೀಲು ಬಾರಿಸಿ ಮೈ ಮರೆತಿದ್ದ ನೀರೋ ದೊರೆಯಂತೆಯೂ ಏಕಕಾಲಕ್ಕೆ ಎದ್ದು ಕಾಣುತ್ತಾರೆ ಈ ಪ್ರಚಂಡ ನಾಯಕ.

ನಗರಗಳು, ಊರುಗಳು ಕೇರಿಗಳು ಹಳ್ಳಿಗಳು ಹಟ್ಟಿಗಳು ಸಾವಿನ ಕಿಚ್ಚಿನಲ್ಲಿ ಬೆಂದಿರುವ ಹೊತ್ತಿನಲ್ಲಿ ಹೊಸ ಸಂಸದ್ ಭವನ, ಹೊಸ ಪ್ರಧಾನಿ ನಿವಾಸವನ್ನು ಒಳಗೊಂಡ 20 ಸಾವಿರ ಕೋಟಿ ರುಪಾಯಿ ವೆಚ್ಚದ ಸೆಂಟ್ರಲ್ ವಿಸ್ಟಾ ನಿರ್ಮಾಣ ಭರದಿಂದ ಸಾಗಿದೆ. ನಿರ್ಮಾಣ ಕಾರ್ಯವನ್ನು ಅಗತ್ಯ ಸೇವೆ ಎಂದು ಘೋಷಿಸಿರುವ ನಡೆ ಆಘಾತಕಾರಿ. ಆಕ್ಸಿಜನ್ ಕೊರತೆಯಿದೆ ಎಂದವರನ್ನು ಉತ್ತರಪ್ರದೇಶ ಸರ್ಕಾರ ಭಯೋತ್ಪಾದನೆ ನಿಗ್ರಹ ಕಾಯಿದೆಯಡಿ ಜೈಲಿಗೆ ತಳ್ಳುತ್ತಿದೆ. ಸಂವೇದನಾರಹಿತ ನಡೆಯ ಪರಾಕಾಷ್ಠೆ. ವಿಷಪೂರಿತ ವ್ಯಕ್ತಿಪೂಜೆ ಚರಮಸೀಮೆ ತಲುಪಿದೆ.

ಬಂಗಾಳಿ ಕವಿ ನಿರೇಂದ್ರನಾಥ ಚಕ್ರವರ್ತಿಯವರ ಕವಿತೆಯೊಂದು ನೆನಪಾಗುತ್ತಿದೆ. ಅಭಿಮಾನಿಗಳು ಕ್ಷಮಿಸಬೇಕು. ಇದು ಇಂದಿನ ಭಾರತದಲ್ಲಿ ಬರೆದ ಕವಿತೆಯಲ್ಲ. ರಚಿಸಿ ಕನಿಷ್ಠ ಐವತ್ತು ವರ್ಷಗಳಾದರೂ ಉರುಳಿವೆ. ಕವಿತೆಯ ಶೀರ್ಷಿಕೆ ’ಉಲೋಂಗೋ ರಾಜಾ’ (ಬೆತ್ತಲೆ ರಾಜ). 1971ರಲ್ಲಿ ಪ್ರಕಟವಾದ ’ಉಲೋಂಗೋ ರಾಜಾ’ ಕವಿತಾ ಸಂಗ್ರಹಕ್ಕೆ 1974ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆಯುತ್ತದೆ.

ಬರಿ ಬೆತ್ತಲಾಗಿ ನಿಂತಿರುವನು ಚಕ್ರವರ್ತಿ ನೋಡ್ರಪ್ಪೋ ನೋಡ್ರಿ
ಆದರೇನಿದು! ಎಲ್ಲ ಮೆಚ್ಚಿ ಚಪ್ಪಾಳೆ ತಟ್ಟುತ್ತಿದ್ದಾರಲ್ಲ
ಹುರುಪಿನಿಂದ ಕೂಗುತ್ತಿದ್ದಾರೆ- ಶಹಭಾಷ್ ಶಹಭಾಷ್.
ಕೆಲವರು ಮುಳುಗಿರುವರು ಮಿಥ್ಯಾಭಿಪ್ರಾಯಗಳಲಿ, ಮತ್ತೆ ಕೆಲವರು ಭಯದಲ್ಲಿ.
ಇತರರು ಗಿರವಿ ಇರಿಸಿರುವರು ತಮ್ಮ ಮೆದುಳುಗಳನು.

ಕೆಲವರು ಕಪಟಿಗಳು, ಇನ್ನು ಕೆಲವರು ಪರೋಪಜೀವಿಗಳು
ಸ್ವಜನಪಕ್ಷಪಾತದ ಲಾಭದಾಸೆ ಇತರೆ ಹಲವರಿಗೆ

ಆಹಾ! ಅದೆಷ್ಟು ದಿವ್ಯ ಅರಸನ ನಿಲುವಂಗಿ !
ಹೊರಗಣ್ಣಿಗೆ ಅದು ಗೋಚರಿಸುವುದೇ ಇಲ್ಲವಲ್ಲ
ಆದರೂ ಅದು ಅರಸನ ಮೈಮೇಲಿರುವುದು ಹೌದೇ ಹೌದು ಅಂತಾರಪ್ಪ

ಕತೆ ಅಗಣಿತ ಜನಜನಿತ
ಕೇವಲ ಭಟ್ಟಂಗಿಗಳು, ಬೂಟುನೆಕ್ಕುವವರು
ತಿಳಿಗೇಡಿಗಳು ಮತ್ತು ಹೇಡಿಗಳು
ಸುಲಿಗೆಕೋರರು ಮತ್ತು ಟೋಪಿ ಹಾಕೋರು ಮಾತ್ರವೇ
ಕತೆಯಲ್ಲಿರಲಿಲ್ಲ.

ಅಲ್ಲೊಂದು ಮಗು ಕೂಡ ಇತ್ತು
ಹೌದು ಮಗು-ಅಧಿಕೃತ, ನಿಷ್ಕಪಟ, ಪ್ರಾಮಾಣಿಕ ಹಾಗೂ ದಿಟ್ಟ ಮಗು

ಮತ್ತೆ ಇಳಿದಿರುವನು ಚಕ್ರವರ್ತಿ ಬೀದಿಗಳಿಗೆ
ಸುರಿದು ನೆರೆದ ಜನ ಸಿಡಿಸಿರುವರು ಚಪ್ಪಾಳೆಗಳ

ಬಾಲಂಗೋಚಿಗಳು ಭಟ್ಟಂಗಿಗಳೇ ಚಕ್ರವರ್ತಿಯ ಸುತ್ತಮುತ್ತೆಲ್ಲ
ಭೋಪರಾಕು ನುಡಿವ ವಿನಾ ಬೇರೇನಿಲ್ಲ

ಕಾಲಿಗೆ ಅಡ್ಡ ಬೀಳುವ ಅಡಿಯಾಳುಗಳ ಈ ಸಂದಣಿಯಲಿ
ಕಾಣದಾಗಿದೆ ಅಬೋಧ ಕಂದ ಎಲ್ಲೆಲ್ಲೂ.

ಎಲ್ಲಿ ಹೋಯಿತು ಕೂಸು?
ಹಿಡಿದಿಡಲಾಗಿದೆಯೇ ಅದನ್ನು ಒತ್ತೆಯಾಳಾಗಿ
ಗುಪ್ತ ಪರ್ವತದ ಗವಿಯಲ್ಲಿ?
ಅಥವಾ ಮಣ್ಣು, ಹುಲ್ಲು, ಕಲ್ಲುಗಳೊಡನೆ ಆಟವಾಡುತ್ತ
ಆಡುತ್ತ ನಿದ್ದೆ ಹೋಯಿತೇ ಅದು ಮಲಗಿ
ದೂರದೂರದ ನೀರವ ನದೀ ತೀರದಲ್ಲಿ
ಇಲ್ಲವೇ ಮರವೊಂದರ ತಂಪು ನೆರಳಲ್ಲಿ?

ಹೊರಡಿ ಯಾವ ದಾರಿ ಹಿಡಿದಾದರೇನು
ಅರಸಿ ಹುಡುಕಿರಿ ಹಸುಕಂದನ
ಚಕ್ರವರ್ತಿಯ ಮುಖಾಮುಖಿ ಆಗಬೇಕಿದೆ ಅದು
ನಿರ್ಭೀತಿಯಿಂದ ನಿಲ್ಲಬೇಕಿದೆ ಅವನೆದುರು
ಮುಳುಗಿಸಿಬಿಡಲಿ ಅದರ ದನಿಯು, ಜನಜಂಗುಳಿಯ ಮೊರೆತವನು

ಮತ್ತು ಮೊಳಗಿ ಬೆಳಗಿ ಕೇಳಲಿ ಮಗು,
ಹೇ ಅರಸ, ಎಲ್ಲಿ ಹೋದವಯ್ಯಾ ನಿನ್ನ ಉಡುಗೆ ವಸ್ತ್ರಗಳು?
ಬೆತ್ತಲೆ ಇದ್ದೀ ಯಾಕೆ?

Emperor’s New Clothes ಕತೆ ನೂರಾರು ಭಾಷೆಗಳಿಗೆ ಅನುವಾದಗೊಂಡಿದೆ. ಚೆಂದದ ದಿರಿಸು ಧರಿಸುವ ಶೋಕೀಲಾಲ ಸ್ಪಪ್ರತಿಷ್ಠೆಯ ಚಕ್ರವರ್ತಿಯೊಬ್ಬನ ಕತೆಯಿದು. ಜಗತ್ತಿನಲ್ಲೇ ಅತ್ಯಂತ ಸುಂದರ ಪೋಷಾಕುಗಳನ್ನು ಚಕ್ರವರ್ತಿಗಾಗಿ ತಯಾರು ಮಾಡಿಕೊಡುವುದಾಗಿ ಹೇಳುತ್ತಾರೆ ಇಬ್ಬರು ನೇಕಾರರು. ಅವರನ್ನು ನೇಮಕ ಮಾಡಿಕೊಳ್ಳುತ್ತಾನೆ ಚಕ್ರವರ್ತಿ. ಯಾರ ಕಣ್ಣಿಗೂ ಕಾಣದಷ್ಟು ಸೂಕ್ಷ್ಮವಾದ ಅದೃಶ್ಯ ವಸ್ತ್ರವನ್ನು ತಾವು ಉಡುಪು ತಯಾರಿಸಲು ಬಳಸುವುದಾಗಿ ಅವರು ಹೇಳಿರುತ್ತಾರೆ. ತನ್ನ ಸ್ಥಾನಮಾನಕ್ಕೆ ಅರ್ಹನಲ್ಲದವನು ಅಥವಾ ತೀರಾ ಬೆಪ್ಪುತಕ್ಕಡಿಯಾದವನು ಈ ಉಡುಪು ತೊಟ್ಟರೆ ಅದು ಜನರ ಕಣ್ಣಿಗೆ ಕಾಣುತ್ತದೆ. ಶ್ರೇಷ್ಠನು ತೊಟ್ಟರೆ ಕಾಣುವುದಿಲ್ಲ ಎಂದು ನೇಕಾರರು ವಾಸ್ತವವಾಗಿ ಚಕ್ರವರ್ತಿಗೆ ಟೋಪಿ ಹಾಕಿರುತ್ತಾರೆ.

ಅಂತಹ ಅತಿಸೂಕ್ಷ್ಮ ಮತ್ತು ಅತಿಸುಂದರ ಬಟ್ಟೆಯನ್ನು ನೇಯುತ್ತಿರುವುದಾಗಿ ಅವರು ನಟಿಸುತ್ತಾರೆ. ನೇಯುವ ಹಂತದಲ್ಲಿ ಕೂಡ ಈ ಬಟ್ಟೆ ಚಕ್ರವರ್ತಿಗಾಗಲಿ, ಅವನ ಮಂತ್ರಿಗಳಿಗಾಗಲಿ ಕಾಣುವುದಿಲ್ಲ. ಆದರೆ ತಮಗೆ ಕಂಡಿತು ಎಂದು ಅವರು ಸುಮ್ಮಸುಮ್ಮನೇ ಒಪ್ಪಿಕೊಂಡುಬಿಡುತ್ತಾರೆ. ಬಟ್ಟೆ ಕಂಡಿತು ಎಂದರೆ ತಮ್ಮ ಸ್ಥಾನಮಾನಗಳಿಗೆ ಅನರ್ಹರು ಎನಿಸಿಕೊಳ್ಳಬೇಕಾದೀತು ಎಂಬ ಭಯ. ಪೋಷಾಕು ಸಿದ್ಧವಾಯಿತೆಂದು ನೇಕಾರರು ಘೋಷಿಸುತ್ತಾರೆ. ಚಕ್ರವರ್ತಿಗೆ ಅದನ್ನು ತೊಡಿಸುವ ಹಾವಭಾವವನ್ನೂ ಮಾಡುತ್ತಾರೆ. ತೊಟ್ಟೆನೆಂದು ತಿಳಿದ ಚಕ್ರವರ್ತಿ ’ಹೊಸ ಪೋಷಾಕನ್ನು’ ಪ್ರದರ್ಶಿಸಲು ತನ್ನ ಪ್ರಜೆಗಳ ಮುಂದೆ ಮೆರವಣಿಗೆಯಲ್ಲಿ ತೆರಳುತ್ತಾನೆ. ಬೆತ್ತಲೆ ಚಕ್ರವರ್ತಿಯನ್ನು ಕಂಡು ಪ್ರಜೆಗಳಿಗೆ ಕಸಿವಿಸಿ ಎನಿಸುತ್ತದೆ. ಆದರೆ ಪೋಷಾಕು ಕಾಣುತ್ತಿಲ್ಲವೆಂದು ಹೇಳಿದರೆ ತಮ್ಮ ಸ್ಥಾನಮಾನಗಳಿಗೆ ಚ್ಯುತಿ ಬಂದೀತೆಂದು ಹೆದರಿ ’ಹೊಸ ಪೋಷಾಕನ್ನು’ ಮೆಚ್ಚಿ ಹೊಗಳುತ್ತಾರೆ. ಆದರೆ ಚಕ್ರವರ್ತಿ ಬೆತ್ತಲಾಗಿದ್ದಾನೆ ಎಂದು ಜನರ ನಡುವಿನಿಂದ ಮಗುವೊಂದು ಕೂಗಿ ಹೇಳುತ್ತದೆ. ಆನಂತರ ಎಲ್ಲರೂ ಮಗುವಿನ ದನಿಗೆ ತಮ್ಮ ದನಿಯನ್ನೂ ಸೇರಿಸುತ್ತಾರೆ. ಚಕ್ರವರ್ತಿಗೆ ನಿಜ ತಿಳಿಯುತ್ತದೆ. ಆದರೂ ಮೆರವಣಿಗೆಯಲ್ಲಿ ಮುಂದುವರೆಯುತ್ತಾನೆ.

ಚಕ್ರವರ್ತಿಯ ಬೆತ್ತಲನ್ನು ಬಯಲು ಮಾಡುವ ಕಪಟವಿಲ್ಲದ ದಿಟ್ಟ ಮಗುವಿಗಾಗಿ ಹುಡುಕುವುದು ನಿರೇಂದ್ರನಾಥರ ಕವಿತೆಯಲ್ಲಿನ ಹೊಸ ರಾಜಕೀಯ ಆಯಾಮ. ಜನ ಮರುಳು ಜಾತ್ರೆ ಮರುಳು ಎಂಬಂತೆ ಜನಸಮುದಾಯಗಳು ಸುಳ್ಳು ಮತ್ತು ಭ್ರಮೆಗೆ ಮರುಳಾಗಿ ಚಪ್ಪಾಳೆ ತಟ್ಟುತ್ತ ಅವುಗಳನ್ನು ಹಿಂಬಾಲಿಸಿವೆ. ಕವಿತೆಯಲ್ಲಿನ ಮಗುವಿನ ಹುಡುಕಾಟವು ಅನುಕೂಲಸಿಂಧು ರಾಜಕಾರಣದ ಗೊಂಡಾರಣ್ಯದಲ್ಲಿ ಕಳೆದುಹೋಗಿರುವ ಆತ್ಮಸಾಕ್ಷಿಯ ಹುಡುಕಾಟ.

ಇಂದಿನ ಧ್ರುವೀಕೃತ ಭಾರತ ತನ್ನೊಳಗಿನ ಅಮಾಯಕ ಮಗುವನ್ನು ಕಳೆದುಕೊಂಡಿದೆ. ಗುಪ್ತಪರ್ವತದ ಗುಹೆಯಲ್ಲಿ ಒತ್ತೆಯಾಳಾಗಿ ಅದನ್ನು ಇಡಲಾಗಿದೆ. ಅದನ್ನು ಬಿಡಿಸಿ ತರಬೇಕಿದೆ. ಸ್ವಮೋಹಿ ಚಕ್ರವರ್ತಿಯ ಕಂಡು ’ಅಯ್ಯೋ ನೀನು ಬಟ್ಟೆಯನ್ನೇ ತೊಟ್ಟಿಲ್ಲವಲ್ಲ’ ಎಂದು ಅದು ಅಮಾಯಕತೆಯಿಂದ ಕೇಕೆ ಹಾಕಬೇಕಿದೆ.


ಇದನ್ನೂ ಓದಿ: ಬಹುಜನ ಭಾರತ: ಬಹುತ್ವ ಭಿನ್ನಮತ ಸಹನೆ ಸಹಬಾಳುವೆಯ ಆಮ್ಲಜನಕವೂ ಬಲು ವೇಗದಲ್ಲಿ ಬರಿದಾಗುತ್ತಿದೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಒಟ್ಟಾರೆ ಲೇಖನದ ಉದ್ದೇಶ ಶೂನ್ಯ. ಬರೀ ಅರ್ಧಸತ್ಯವನ್ನು ತಿರುಚಿ ಹೇಳುವುದು ಮಾಧ್ಯಮದ ಬೇಜಾವ್ದಾರಿತನ ಎತ್ತಿ ತೋರಿಸಿದೆ. ಪ್ರಜೆಗಳ ದಾರಿ ತಪ್ಪಿಸಲು ಲೇಖಕರ ವ್ಯರ್ಥ ಪ್ರಯತ್ನದಂತಿದೆ. ವಾಸ್ತವ ಸ್ಥಿತಿಗತಿಗಳ ಅರಿವಿಲ್ಲದೆ ಕಾವ್ಯ ಪ್ರಪಂಚದಲ್ಲಿ ಜೀವಿಸಿ ಬರೆದ ಲೇಖನದಂತಿದೆ. ಕಾವ್ಯ ಪ್ರಪಂಚದಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ ಎಂಬುದು ಲೇಖಕರು ಮನವರಿಕೆ ಮಾಡಿಕೊಳ್ಳಬೇಕು. ಲೇಖಕರಿಗಿಂತ ಪ್ರಜೆಗಳಿಗೆ ಎಷ್ಟೋ ವಿಷಯಗಳ ಅರಿವಿರುವುದರಿಂದ ಇಂತಹ ಲೇಖನಗಳು ವ್ಯರ್ಥ.

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....