Homeಅಂಕಣಗಳುಗಿರವಿ ಇರಿಸಿದ ಮೆದುಳುಗಳು ಮತ್ತು ಕಾಣೆಯಾದ ಹಸುಗೂಸು!: ಡಿ.ಉಮಾಪತಿ

ಗಿರವಿ ಇರಿಸಿದ ಮೆದುಳುಗಳು ಮತ್ತು ಕಾಣೆಯಾದ ಹಸುಗೂಸು!: ಡಿ.ಉಮಾಪತಿ

ಬಂಗಾಳಿ ಕವಿ ನಿರೇಂದ್ರನಾಥ ಚಕ್ರವರ್ತಿಯವರ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದ ’ಉಲೋಂಗೋ ರಾಜಾ (ಬೆತ್ತಲೆ ರಾಜ)’ ಕವಿತೆಯೊಂದು ಇಂದಿಗೂ ಪ್ರಸ್ತುತವಾಗಿರುವುದರ ಕುರಿತು ಡಿ.ಉಮಾಪತಿಯವರ ಬರಹ...

- Advertisement -
- Advertisement -

ಪ್ರಾಣವಾಯುವಿಗಾಗಿ ಚಡಪಡಿಸಿ ಮನೆ ಮನೆಗಳಲ್ಲಿ ಚಿತೆಗಳು ಉರಿಯತೊಡಗಿ ಪ್ರಜೆಗಳ ಅಸಹಾಯಕ ಆಕ್ರಂದನ ಮುಗಿಲು ಮುಟ್ಟಿದೆ. ದೇಶದ ಉದ್ದಗಲಗಳನ್ನು ಮರಣ ಮೌನ ಆವರಿಸಿ ಹೊದ್ದಿದೆ. ನಗರಗಳಲ್ಲಿ ಆಂಬ್ಯುಲೆನ್ಸ್‌ಗಳು ಹಗಲುರಾತ್ರಿ ಊಳಿಡತೊಡಗಿವೆ. ರುಗ್ಣಾಲಯಗಳು- ರುದ್ರಭೂಮಿಗಳು ತುಂಬಿತುಳುಕಿವೆ. ಗಂಗೆಯ ದಡದಲ್ಲಿ ಉರಿವ ಹೆಣಗಳ ಲೆಕ್ಕ ಕಳೆದುಹೋಗಿದೆ. ಯಮುನೆಗೆ ತೇಲಿಬಿಟ್ಟ ಕೋವಿಡ್ ಪೀಡಿತರ ಶವಗಳು ಭಯಭೀತಿಯ ಅಲೆಗಳನ್ನು ಎಬ್ಬಿಸಿವೆ. ಕೋವಿಡ್‌ನ ಮೂರನೆಯ ಅಲೆ ಹೆಡೆಯೆತ್ತಿದೆ ಎನ್ನಲಾಗುತ್ತಿದೆ. ಆಹುತಿಯ ಸರದಿ ಹಸುಮಕ್ಕಳದಂತೆ. ಮೂರನೆಯ ಅಲೆ ಹೆಡೆ ಮುದುರದಿದ್ದರೆ ಎರಗಲಿರುವ ವಿಪತ್ತು, ಮೊರೆಯಲಿರುವ ಶೋಕಸಾಗರ ಊಹೆಗೂ ನಿಲುಕದ್ದು.

ಬಂಗಾಳವನ್ನು ಗೆಲ್ಲಲು ಸಿಡಿಲಾಗಿ ಘರ್ಜಿಸಿದ್ದ ಚಕ್ರವರ್ತಿಗಳು ಘೋರ ಸೋಲಿನ ನಂತರ ಗಾಢ ಮೌನಕ್ಕೆ ಶರಣುಹೋಗಿದ್ದಾರೆ. ದೇಶವನ್ನು ಕವಿದಿರುವ ದುರಂತಕ್ಕೆ ಅವರು ಕಿವುಡರು ಮತ್ತು ಕುರುಡರು. ನಿರುಪಾಯರು, ನಿಷ್ಕ್ರಿಯರು, ನಿಶ್ಯಕ್ತರು. ಸರ್ವಶಕ್ತರೆಂಬಂತೆ ಗುಡುಗುತ್ತಿದ್ದ ನಾಯಕರ ನಿಜಟೊಳ್ಳು, ಮಹಾಸಂಕಟ ಒಡ್ಡಿರುವ ಅಗ್ನಿಪರೀಕ್ಷೆಯಲ್ಲಿ ನಗ್ನವಾಗಿ ನಿಂತಿದೆ.

ಪ್ರಜೆಗಳ ಕಷ್ಟ ಸಂಕಟಗಳು ಕತ್ತಲೆ ಕಣ್ಣೀರುಗಳು ’ಉಕ್ಕಿನ ಮನುಷ್ಯ’ನನ್ನು ಬಾಧಿಸಿರುವ ಸುಳಿವುಗಳಿಲ್ಲ. ಐವತ್ತಾರು ಅಂಗುಲ ಹರವಿನ ಎದೆಯಲ್ಲಿ ಅನುಕಂಪದ ಜಲವಿರಲಿ, ಅದರ ಪಸೆಯೂ ಕಾಣದಲ್ಲ ಎಂಬ ಕಠೋರ ಸತ್ಯ ಬೆಚ್ಚಿಬೀಳಿಸುತ್ತದೆ.

ಎಲ್ಲ ಸುಂದರ ಸಾಂಗತ್ಯಗಳನ್ನು ತಿರಸ್ಕರಿಸಿ ನೀರಿನಲ್ಲಿ ಕಾಣುವ ತನ್ನ ಪ್ರತಿಬಿಂಬದೊಂದಿಗೆ ಅನುರಕ್ತನಾಗಿ ಬದುಕೆಲ್ಲ ಸ್ವಮೋಹಿಯಾಗೇ ಕಳೆದ ಗ್ರೀಕ್ ಪುರಾಣದ ಸುಂದರಾಂಗ ನಾರ್ಸಿಸ್‌ನಂತೆಯೂ, ರೋಮ್ ಹೊತ್ತಿ ಉರಿದಾಗ ಪಿಟೀಲು ಬಾರಿಸಿ ಮೈ ಮರೆತಿದ್ದ ನೀರೋ ದೊರೆಯಂತೆಯೂ ಏಕಕಾಲಕ್ಕೆ ಎದ್ದು ಕಾಣುತ್ತಾರೆ ಈ ಪ್ರಚಂಡ ನಾಯಕ.

ನಗರಗಳು, ಊರುಗಳು ಕೇರಿಗಳು ಹಳ್ಳಿಗಳು ಹಟ್ಟಿಗಳು ಸಾವಿನ ಕಿಚ್ಚಿನಲ್ಲಿ ಬೆಂದಿರುವ ಹೊತ್ತಿನಲ್ಲಿ ಹೊಸ ಸಂಸದ್ ಭವನ, ಹೊಸ ಪ್ರಧಾನಿ ನಿವಾಸವನ್ನು ಒಳಗೊಂಡ 20 ಸಾವಿರ ಕೋಟಿ ರುಪಾಯಿ ವೆಚ್ಚದ ಸೆಂಟ್ರಲ್ ವಿಸ್ಟಾ ನಿರ್ಮಾಣ ಭರದಿಂದ ಸಾಗಿದೆ. ನಿರ್ಮಾಣ ಕಾರ್ಯವನ್ನು ಅಗತ್ಯ ಸೇವೆ ಎಂದು ಘೋಷಿಸಿರುವ ನಡೆ ಆಘಾತಕಾರಿ. ಆಕ್ಸಿಜನ್ ಕೊರತೆಯಿದೆ ಎಂದವರನ್ನು ಉತ್ತರಪ್ರದೇಶ ಸರ್ಕಾರ ಭಯೋತ್ಪಾದನೆ ನಿಗ್ರಹ ಕಾಯಿದೆಯಡಿ ಜೈಲಿಗೆ ತಳ್ಳುತ್ತಿದೆ. ಸಂವೇದನಾರಹಿತ ನಡೆಯ ಪರಾಕಾಷ್ಠೆ. ವಿಷಪೂರಿತ ವ್ಯಕ್ತಿಪೂಜೆ ಚರಮಸೀಮೆ ತಲುಪಿದೆ.

ಬಂಗಾಳಿ ಕವಿ ನಿರೇಂದ್ರನಾಥ ಚಕ್ರವರ್ತಿಯವರ ಕವಿತೆಯೊಂದು ನೆನಪಾಗುತ್ತಿದೆ. ಅಭಿಮಾನಿಗಳು ಕ್ಷಮಿಸಬೇಕು. ಇದು ಇಂದಿನ ಭಾರತದಲ್ಲಿ ಬರೆದ ಕವಿತೆಯಲ್ಲ. ರಚಿಸಿ ಕನಿಷ್ಠ ಐವತ್ತು ವರ್ಷಗಳಾದರೂ ಉರುಳಿವೆ. ಕವಿತೆಯ ಶೀರ್ಷಿಕೆ ’ಉಲೋಂಗೋ ರಾಜಾ’ (ಬೆತ್ತಲೆ ರಾಜ). 1971ರಲ್ಲಿ ಪ್ರಕಟವಾದ ’ಉಲೋಂಗೋ ರಾಜಾ’ ಕವಿತಾ ಸಂಗ್ರಹಕ್ಕೆ 1974ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆಯುತ್ತದೆ.

ಬರಿ ಬೆತ್ತಲಾಗಿ ನಿಂತಿರುವನು ಚಕ್ರವರ್ತಿ ನೋಡ್ರಪ್ಪೋ ನೋಡ್ರಿ
ಆದರೇನಿದು! ಎಲ್ಲ ಮೆಚ್ಚಿ ಚಪ್ಪಾಳೆ ತಟ್ಟುತ್ತಿದ್ದಾರಲ್ಲ
ಹುರುಪಿನಿಂದ ಕೂಗುತ್ತಿದ್ದಾರೆ- ಶಹಭಾಷ್ ಶಹಭಾಷ್.
ಕೆಲವರು ಮುಳುಗಿರುವರು ಮಿಥ್ಯಾಭಿಪ್ರಾಯಗಳಲಿ, ಮತ್ತೆ ಕೆಲವರು ಭಯದಲ್ಲಿ.
ಇತರರು ಗಿರವಿ ಇರಿಸಿರುವರು ತಮ್ಮ ಮೆದುಳುಗಳನು.

ಕೆಲವರು ಕಪಟಿಗಳು, ಇನ್ನು ಕೆಲವರು ಪರೋಪಜೀವಿಗಳು
ಸ್ವಜನಪಕ್ಷಪಾತದ ಲಾಭದಾಸೆ ಇತರೆ ಹಲವರಿಗೆ

ಆಹಾ! ಅದೆಷ್ಟು ದಿವ್ಯ ಅರಸನ ನಿಲುವಂಗಿ !
ಹೊರಗಣ್ಣಿಗೆ ಅದು ಗೋಚರಿಸುವುದೇ ಇಲ್ಲವಲ್ಲ
ಆದರೂ ಅದು ಅರಸನ ಮೈಮೇಲಿರುವುದು ಹೌದೇ ಹೌದು ಅಂತಾರಪ್ಪ

ಕತೆ ಅಗಣಿತ ಜನಜನಿತ
ಕೇವಲ ಭಟ್ಟಂಗಿಗಳು, ಬೂಟುನೆಕ್ಕುವವರು
ತಿಳಿಗೇಡಿಗಳು ಮತ್ತು ಹೇಡಿಗಳು
ಸುಲಿಗೆಕೋರರು ಮತ್ತು ಟೋಪಿ ಹಾಕೋರು ಮಾತ್ರವೇ
ಕತೆಯಲ್ಲಿರಲಿಲ್ಲ.

ಅಲ್ಲೊಂದು ಮಗು ಕೂಡ ಇತ್ತು
ಹೌದು ಮಗು-ಅಧಿಕೃತ, ನಿಷ್ಕಪಟ, ಪ್ರಾಮಾಣಿಕ ಹಾಗೂ ದಿಟ್ಟ ಮಗು

ಮತ್ತೆ ಇಳಿದಿರುವನು ಚಕ್ರವರ್ತಿ ಬೀದಿಗಳಿಗೆ
ಸುರಿದು ನೆರೆದ ಜನ ಸಿಡಿಸಿರುವರು ಚಪ್ಪಾಳೆಗಳ

ಬಾಲಂಗೋಚಿಗಳು ಭಟ್ಟಂಗಿಗಳೇ ಚಕ್ರವರ್ತಿಯ ಸುತ್ತಮುತ್ತೆಲ್ಲ
ಭೋಪರಾಕು ನುಡಿವ ವಿನಾ ಬೇರೇನಿಲ್ಲ

ಕಾಲಿಗೆ ಅಡ್ಡ ಬೀಳುವ ಅಡಿಯಾಳುಗಳ ಈ ಸಂದಣಿಯಲಿ
ಕಾಣದಾಗಿದೆ ಅಬೋಧ ಕಂದ ಎಲ್ಲೆಲ್ಲೂ.

ಎಲ್ಲಿ ಹೋಯಿತು ಕೂಸು?
ಹಿಡಿದಿಡಲಾಗಿದೆಯೇ ಅದನ್ನು ಒತ್ತೆಯಾಳಾಗಿ
ಗುಪ್ತ ಪರ್ವತದ ಗವಿಯಲ್ಲಿ?
ಅಥವಾ ಮಣ್ಣು, ಹುಲ್ಲು, ಕಲ್ಲುಗಳೊಡನೆ ಆಟವಾಡುತ್ತ
ಆಡುತ್ತ ನಿದ್ದೆ ಹೋಯಿತೇ ಅದು ಮಲಗಿ
ದೂರದೂರದ ನೀರವ ನದೀ ತೀರದಲ್ಲಿ
ಇಲ್ಲವೇ ಮರವೊಂದರ ತಂಪು ನೆರಳಲ್ಲಿ?

ಹೊರಡಿ ಯಾವ ದಾರಿ ಹಿಡಿದಾದರೇನು
ಅರಸಿ ಹುಡುಕಿರಿ ಹಸುಕಂದನ
ಚಕ್ರವರ್ತಿಯ ಮುಖಾಮುಖಿ ಆಗಬೇಕಿದೆ ಅದು
ನಿರ್ಭೀತಿಯಿಂದ ನಿಲ್ಲಬೇಕಿದೆ ಅವನೆದುರು
ಮುಳುಗಿಸಿಬಿಡಲಿ ಅದರ ದನಿಯು, ಜನಜಂಗುಳಿಯ ಮೊರೆತವನು

ಮತ್ತು ಮೊಳಗಿ ಬೆಳಗಿ ಕೇಳಲಿ ಮಗು,
ಹೇ ಅರಸ, ಎಲ್ಲಿ ಹೋದವಯ್ಯಾ ನಿನ್ನ ಉಡುಗೆ ವಸ್ತ್ರಗಳು?
ಬೆತ್ತಲೆ ಇದ್ದೀ ಯಾಕೆ?

Emperor’s New Clothes ಕತೆ ನೂರಾರು ಭಾಷೆಗಳಿಗೆ ಅನುವಾದಗೊಂಡಿದೆ. ಚೆಂದದ ದಿರಿಸು ಧರಿಸುವ ಶೋಕೀಲಾಲ ಸ್ಪಪ್ರತಿಷ್ಠೆಯ ಚಕ್ರವರ್ತಿಯೊಬ್ಬನ ಕತೆಯಿದು. ಜಗತ್ತಿನಲ್ಲೇ ಅತ್ಯಂತ ಸುಂದರ ಪೋಷಾಕುಗಳನ್ನು ಚಕ್ರವರ್ತಿಗಾಗಿ ತಯಾರು ಮಾಡಿಕೊಡುವುದಾಗಿ ಹೇಳುತ್ತಾರೆ ಇಬ್ಬರು ನೇಕಾರರು. ಅವರನ್ನು ನೇಮಕ ಮಾಡಿಕೊಳ್ಳುತ್ತಾನೆ ಚಕ್ರವರ್ತಿ. ಯಾರ ಕಣ್ಣಿಗೂ ಕಾಣದಷ್ಟು ಸೂಕ್ಷ್ಮವಾದ ಅದೃಶ್ಯ ವಸ್ತ್ರವನ್ನು ತಾವು ಉಡುಪು ತಯಾರಿಸಲು ಬಳಸುವುದಾಗಿ ಅವರು ಹೇಳಿರುತ್ತಾರೆ. ತನ್ನ ಸ್ಥಾನಮಾನಕ್ಕೆ ಅರ್ಹನಲ್ಲದವನು ಅಥವಾ ತೀರಾ ಬೆಪ್ಪುತಕ್ಕಡಿಯಾದವನು ಈ ಉಡುಪು ತೊಟ್ಟರೆ ಅದು ಜನರ ಕಣ್ಣಿಗೆ ಕಾಣುತ್ತದೆ. ಶ್ರೇಷ್ಠನು ತೊಟ್ಟರೆ ಕಾಣುವುದಿಲ್ಲ ಎಂದು ನೇಕಾರರು ವಾಸ್ತವವಾಗಿ ಚಕ್ರವರ್ತಿಗೆ ಟೋಪಿ ಹಾಕಿರುತ್ತಾರೆ.

ಅಂತಹ ಅತಿಸೂಕ್ಷ್ಮ ಮತ್ತು ಅತಿಸುಂದರ ಬಟ್ಟೆಯನ್ನು ನೇಯುತ್ತಿರುವುದಾಗಿ ಅವರು ನಟಿಸುತ್ತಾರೆ. ನೇಯುವ ಹಂತದಲ್ಲಿ ಕೂಡ ಈ ಬಟ್ಟೆ ಚಕ್ರವರ್ತಿಗಾಗಲಿ, ಅವನ ಮಂತ್ರಿಗಳಿಗಾಗಲಿ ಕಾಣುವುದಿಲ್ಲ. ಆದರೆ ತಮಗೆ ಕಂಡಿತು ಎಂದು ಅವರು ಸುಮ್ಮಸುಮ್ಮನೇ ಒಪ್ಪಿಕೊಂಡುಬಿಡುತ್ತಾರೆ. ಬಟ್ಟೆ ಕಂಡಿತು ಎಂದರೆ ತಮ್ಮ ಸ್ಥಾನಮಾನಗಳಿಗೆ ಅನರ್ಹರು ಎನಿಸಿಕೊಳ್ಳಬೇಕಾದೀತು ಎಂಬ ಭಯ. ಪೋಷಾಕು ಸಿದ್ಧವಾಯಿತೆಂದು ನೇಕಾರರು ಘೋಷಿಸುತ್ತಾರೆ. ಚಕ್ರವರ್ತಿಗೆ ಅದನ್ನು ತೊಡಿಸುವ ಹಾವಭಾವವನ್ನೂ ಮಾಡುತ್ತಾರೆ. ತೊಟ್ಟೆನೆಂದು ತಿಳಿದ ಚಕ್ರವರ್ತಿ ’ಹೊಸ ಪೋಷಾಕನ್ನು’ ಪ್ರದರ್ಶಿಸಲು ತನ್ನ ಪ್ರಜೆಗಳ ಮುಂದೆ ಮೆರವಣಿಗೆಯಲ್ಲಿ ತೆರಳುತ್ತಾನೆ. ಬೆತ್ತಲೆ ಚಕ್ರವರ್ತಿಯನ್ನು ಕಂಡು ಪ್ರಜೆಗಳಿಗೆ ಕಸಿವಿಸಿ ಎನಿಸುತ್ತದೆ. ಆದರೆ ಪೋಷಾಕು ಕಾಣುತ್ತಿಲ್ಲವೆಂದು ಹೇಳಿದರೆ ತಮ್ಮ ಸ್ಥಾನಮಾನಗಳಿಗೆ ಚ್ಯುತಿ ಬಂದೀತೆಂದು ಹೆದರಿ ’ಹೊಸ ಪೋಷಾಕನ್ನು’ ಮೆಚ್ಚಿ ಹೊಗಳುತ್ತಾರೆ. ಆದರೆ ಚಕ್ರವರ್ತಿ ಬೆತ್ತಲಾಗಿದ್ದಾನೆ ಎಂದು ಜನರ ನಡುವಿನಿಂದ ಮಗುವೊಂದು ಕೂಗಿ ಹೇಳುತ್ತದೆ. ಆನಂತರ ಎಲ್ಲರೂ ಮಗುವಿನ ದನಿಗೆ ತಮ್ಮ ದನಿಯನ್ನೂ ಸೇರಿಸುತ್ತಾರೆ. ಚಕ್ರವರ್ತಿಗೆ ನಿಜ ತಿಳಿಯುತ್ತದೆ. ಆದರೂ ಮೆರವಣಿಗೆಯಲ್ಲಿ ಮುಂದುವರೆಯುತ್ತಾನೆ.

ಚಕ್ರವರ್ತಿಯ ಬೆತ್ತಲನ್ನು ಬಯಲು ಮಾಡುವ ಕಪಟವಿಲ್ಲದ ದಿಟ್ಟ ಮಗುವಿಗಾಗಿ ಹುಡುಕುವುದು ನಿರೇಂದ್ರನಾಥರ ಕವಿತೆಯಲ್ಲಿನ ಹೊಸ ರಾಜಕೀಯ ಆಯಾಮ. ಜನ ಮರುಳು ಜಾತ್ರೆ ಮರುಳು ಎಂಬಂತೆ ಜನಸಮುದಾಯಗಳು ಸುಳ್ಳು ಮತ್ತು ಭ್ರಮೆಗೆ ಮರುಳಾಗಿ ಚಪ್ಪಾಳೆ ತಟ್ಟುತ್ತ ಅವುಗಳನ್ನು ಹಿಂಬಾಲಿಸಿವೆ. ಕವಿತೆಯಲ್ಲಿನ ಮಗುವಿನ ಹುಡುಕಾಟವು ಅನುಕೂಲಸಿಂಧು ರಾಜಕಾರಣದ ಗೊಂಡಾರಣ್ಯದಲ್ಲಿ ಕಳೆದುಹೋಗಿರುವ ಆತ್ಮಸಾಕ್ಷಿಯ ಹುಡುಕಾಟ.

ಇಂದಿನ ಧ್ರುವೀಕೃತ ಭಾರತ ತನ್ನೊಳಗಿನ ಅಮಾಯಕ ಮಗುವನ್ನು ಕಳೆದುಕೊಂಡಿದೆ. ಗುಪ್ತಪರ್ವತದ ಗುಹೆಯಲ್ಲಿ ಒತ್ತೆಯಾಳಾಗಿ ಅದನ್ನು ಇಡಲಾಗಿದೆ. ಅದನ್ನು ಬಿಡಿಸಿ ತರಬೇಕಿದೆ. ಸ್ವಮೋಹಿ ಚಕ್ರವರ್ತಿಯ ಕಂಡು ’ಅಯ್ಯೋ ನೀನು ಬಟ್ಟೆಯನ್ನೇ ತೊಟ್ಟಿಲ್ಲವಲ್ಲ’ ಎಂದು ಅದು ಅಮಾಯಕತೆಯಿಂದ ಕೇಕೆ ಹಾಕಬೇಕಿದೆ.


ಇದನ್ನೂ ಓದಿ: ಬಹುಜನ ಭಾರತ: ಬಹುತ್ವ ಭಿನ್ನಮತ ಸಹನೆ ಸಹಬಾಳುವೆಯ ಆಮ್ಲಜನಕವೂ ಬಲು ವೇಗದಲ್ಲಿ ಬರಿದಾಗುತ್ತಿದೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಒಟ್ಟಾರೆ ಲೇಖನದ ಉದ್ದೇಶ ಶೂನ್ಯ. ಬರೀ ಅರ್ಧಸತ್ಯವನ್ನು ತಿರುಚಿ ಹೇಳುವುದು ಮಾಧ್ಯಮದ ಬೇಜಾವ್ದಾರಿತನ ಎತ್ತಿ ತೋರಿಸಿದೆ. ಪ್ರಜೆಗಳ ದಾರಿ ತಪ್ಪಿಸಲು ಲೇಖಕರ ವ್ಯರ್ಥ ಪ್ರಯತ್ನದಂತಿದೆ. ವಾಸ್ತವ ಸ್ಥಿತಿಗತಿಗಳ ಅರಿವಿಲ್ಲದೆ ಕಾವ್ಯ ಪ್ರಪಂಚದಲ್ಲಿ ಜೀವಿಸಿ ಬರೆದ ಲೇಖನದಂತಿದೆ. ಕಾವ್ಯ ಪ್ರಪಂಚದಲ್ಲಿ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ ಎಂಬುದು ಲೇಖಕರು ಮನವರಿಕೆ ಮಾಡಿಕೊಳ್ಳಬೇಕು. ಲೇಖಕರಿಗಿಂತ ಪ್ರಜೆಗಳಿಗೆ ಎಷ್ಟೋ ವಿಷಯಗಳ ಅರಿವಿರುವುದರಿಂದ ಇಂತಹ ಲೇಖನಗಳು ವ್ಯರ್ಥ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...