Homeಅಂಕಣಗಳುಬಹುಜನ ಭಾರತ: ಬಹುತ್ವ ಭಿನ್ನಮತ ಸಹನೆ ಸಹಬಾಳುವೆಯ ಆಮ್ಲಜನಕವೂ ಬಲು ವೇಗದಲ್ಲಿ ಬರಿದಾಗುತ್ತಿದೆ

ಬಹುಜನ ಭಾರತ: ಬಹುತ್ವ ಭಿನ್ನಮತ ಸಹನೆ ಸಹಬಾಳುವೆಯ ಆಮ್ಲಜನಕವೂ ಬಲು ವೇಗದಲ್ಲಿ ಬರಿದಾಗುತ್ತಿದೆ

- Advertisement -
- Advertisement -

ಕೊರೊನಾ ವೈರಾಣು ವಿರುದ್ಧದ ಸಮರದಲ್ಲಿ ಆಮ್ಲಜನಕವೆಂಬ ಪ್ರಾಣವಾಯು ಬೆಲೆಕಟ್ಟಲಾಗದ ಹತಾರುಗಳಲ್ಲಿ ಒಂದು. ಈ ಅಂಶ ವರ್ಷದ ಹಿಂದೆ ಎರಗಿದ ಮೊದಲ ಕೋವಿಡ್ ದಾಳಿಯಲ್ಲಿ ಬೆಳಕಿನಷ್ಟೇ ನಿಚ್ಚಳವಾಗಿ ಗೊತ್ತಾಗಿತ್ತು. ಕೋವಿಡ್ ಮಹಾಸಾಂಕ್ರಾಮಿಕವನ್ನು ವಿನಾಶಕಾರಿ ವಿಪತ್ತು ಎಂದು ಭಾರತ ಸರ್ಕಾರ 2020ರ ಮಾರ್ಚ್ 14ರಂದೇ ಘೋಷಿಸಿತ್ತು. ಆನಂತರ ಘೋಷಿಸಲಾದ ಲಾಕ್‌ಡೌನ್ ಜಗತ್ತಿನ ಅತಿಕ್ರೂರ ಲಾಕ್‌ಡೌನ್ ಎಂದು ಇತಿಹಾಸಕ್ಕೆ ಸಂದು ಹೋಗಿದೆ.

ಆನಂತರ ನಿದ್ದೆಗೆ ಜಾರುವ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳುವುದು ಏಳು ತಿಂಗಳ ನಂತರ. ದೇಶದ 150 ಜಿಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನೆ ಘಟಕಗಳ ಸ್ಥಾಪನೆಯ ಟೆಂಡರ್ ಹೊರಟದ್ದು 2020ರ ಅಕ್ಟೋಬರ್ ತಿಂಗಳಿನಲ್ಲಿ. ಈ ಸಂಖ್ಯೆಗೆ ಇನ್ನೂ ಹನ್ನೆರಡು ಘಟಕಗಳನ್ನು ಸೇರಿಸಲಾಗಿತ್ತು. ಏಳು ತಿಂಗಳ ಮಹಾವಿಳಂಬದ ಹಿಂದಿನ ಕಾರಣ ಏನಿದ್ದೀತು ಊಹಿಸಬಲ್ಲಿರಾ? ಅದು ಹಣಕಾಸಿನ ಕೊರತೆಯಂತೆ!

150 ಉತ್ಪಾದನಾ ಘಟಕಗಳ ಸ್ಥಾಪನೆಗೆ ಬೇಕಿದ್ದ ಹಣವಾದರೂ ಎಷ್ಟು? ಕೇವಲ 201.58 ಕೋಟಿ ರುಪಾಯಿಗಳು. ಕಡೆಗೂ ಈ ಹಣವನ್ನು ಹಂಚಿಕೆ ಮಾಡಿದ್ದು PM- CARES ನಿಧಿಯಿಂದ. ಭಾರತ ಸರ್ಕಾರದ ಬೊಕ್ಕಸ ಅದೆಷ್ಟು ಬಡವಾಗಿತ್ತು!

ಟೆಂಡರ್ ಕರೆದು ಒಂದು ವರ್ಷವೇ ಉರುಳಿದೆ. 162ರಲ್ಲಿ ಸ್ಥಾಪಿಸಲಾಗಿರುವ ಘಟಕಗಳು ಕೇವಲ 33. ಇದೇ ಏಪ್ರಿಲ್ ಕಡೆಯ ವೇಳೆಗೆ ಇನ್ನೂ 59ನ್ನು ಸ್ಥಾಪಿಸಲಾಗುವುದಂತೆ. ಮೇ ಅಂತ್ಯದ ವೇಳೆಗೆ ಒಟ್ಟು 80 ಘಟಕಗಳು ಆಮ್ಲಜನಕವನ್ನು ಉತ್ಪಾದಿಸಲಿವೆಯಂತೆ. ಅರ್ಥಾತ್ ವರ್ಷದ ಹಿಂದೆ ಟೆಂಡರ್ ಕರೆಯಲಾಗಿದ್ದ ಕೇವಲ ಅರ್ಧದಷ್ಟು ಘಟಕಗಳು! ಜಿಲ್ಲಾ ಆಸ್ಪತ್ರೆಗಳದ್ದೇ ಈ ಕತೆಯಾದರೆ ತಾಲ್ಲೂಕುಗಳು, ಸಣ್ಣಪುಟ್ಟ ಊರು ಕೇರಿಗಳ ಜನರ ಪಾಡೇನು?

ಆಮ್ಲಜನಕದ ಕೊರತೆಯಿಂದ ಆಸ್ಪತ್ರೆಗಳ ಹೊರಗಷ್ಟೇ ಅಲ್ಲ, ಒಳಗೂ ರೋಗಿಗಳು ಸಾಯುತ್ತಿರುವುದು ಹೃದಯವಿದ್ರಾವಕ. ಈ ಸಾವುಗಳು ಅಪ್ಪಟ ಮಾನವನಿರ್ಮಿತ. ಆಳುವವರ ಅದಕ್ಷತೆ, ಬೇಜವಾಬ್ದಾರಿ, ನಿರ್ಲಕ್ಷ್ಯವೇ ಈ ಮರಣಗಳ ಹಿಂದಿನ ಕಾರಣ.

ಕೋವಿಡ್ ಮಹಾಸಾಂಕ್ರಾಮಿಕ ಇಲ್ಲದೆ ಹೋಗಿದ್ದರೂ ಜಿಲ್ಲಾ ಆಸ್ಪತ್ರೆಗಳು ತಮ್ಮವೇ ಆದ ಆಮ್ಲಜನಕ ಘಟಕಗಳನ್ನು ಹೊಂದಿರುವುದು ಅತ್ಯಗತ್ಯ. ಹಾವು ಕಡಿತ, ಮೆದುಳುಜ್ವರ, ರಸ್ತೆ ಅಪಘಾತ ಮುಂತಾದ ಕಾರಣಗಳಿಂದಾಗಿ ಆಸ್ಪತ್ರೆ ಸೇರುವ ಸಾವಿರಾರು ರೋಗಿಗಳ ಪ್ರಾಣ ಉಳಿಸಲು ಆಮ್ಲಜನಕ ಬೇಕೇ ಬೇಕು. ಮಹಾಸಾಂಕ್ರಾಮಿಕದ ನೆಪದಲ್ಲಿ ನಮ್ಮ ಆರೋಗ್ಯವ್ಯವಸ್ಥೆಯಲ್ಲಿ ಉಳಿದುಹೋಗಿರುವ ಭಾರೀ ಕಂದಕಗಳನ್ನು ಮುಚ್ಚಬೇಕಿದೆ. ಅವುಗಳಲ್ಲಿ ಆಮ್ಲಜನಕ ಘಟಕಗಳ ಸ್ಥಾಪನೆಯೂ ಸೇರಿದೆ ಎನ್ನುತ್ತಾರೆ ಆರೋಗ್ಯ ವ್ಯವಸ್ಥೆಗಳ ತಜ್ಞ ಟಿ.ಸುಂದರರಾಮನ್.

ಜಾಗಟೆ, ತಟ್ಟೆ ಬಾರಿಸಿ ಮೇಣದಬತ್ತಿಗಳನ್ನು ಹೊತ್ತಿಸುವ, ಶಂಖ ಊದಿಸುವ ನಾಟಕಗಳನ್ನು ಮಾಡಿಸದೆ ದೇಶದ ಸಾಂಕ್ರಾಮಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಅವರ ಸಲಹೆಗಳ ಪ್ರಕಾರ ನಡೆದುಕೊಂಡಿದ್ದರೆ ಇಂದಿನ ವಿಪತ್ತನ್ನು ಸಮರ್ಥವಾಗಿ ಎದುರಿಸಬಹುದಿತ್ತು.

ಮಹಾಸಾಂಕ್ರಾಮಿಕದ ನಟ್ಟ ನಡುವೆಯೂ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವ ಕಾರ್ಯ ಬಿಡುವಿಲ್ಲದೆ ನಡೆಯಿತು. ರಾಜಸ್ತಾನವೂ ಈ ಮಾತಿಗೆ ಹೊರತಾಗಲಿಲ್ಲ. ಮಹಾರಾಷ್ಟ್ರದಲ್ಲಿ ಈ ಪ್ರಯತ್ನ ನಿಲ್ಲದೆ ನಡೆದಿದೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಮಿನಲ್ಲಿ ಅಧಿಕಾರ ಹಿಡಿಯುವುದೇ ಪರಮಗುರಿ. ಹರಿದ್ವಾರದ ಕುಂಭಮೇಳದಲ್ಲಿ ಯಾವುದೇ ಕೋವಿಡ್ ನಿಯಮ ಪಾಲಿಸದೆ ಮೂವತ್ತು ಲಕ್ಷಕ್ಕೂ ಹೆಚ್ಚು ಮಂದಿ ದಿನಗಟ್ಟಲೆ ನೆರೆದು ಭಾಗವಹಿಸಲು ಅವಕಾಶ ಮಾಡಿಕೊಡಲಾಯಿತು. ಇವರು ದೇಶದ ನಾನಾ ಭಾಗಗಳಿಂದ ಬಂದವರು. ಹಿಂತಿರುಗುವಾಗ ಬಹುತೇಕರು ಕೋವಿಡ್ ಪ್ರಸಾದ ಹೊತ್ತು ತೆರಳುವವರೇ. ಕಳೆದ ವರ್ಷ ಹಠಾತ್ತನೆ ಹೇರಿದ ಅಮಾನುಷ ಲಾಕ್‌ಡೌನ್ ಮಾನವ ಇತಿಹಾಸದ ಮಹಾವಲಸೆಯ ದುರಂತವನ್ನು ಸೃಷ್ಟಿಸಿತ್ತು. ಲಕ್ಷಾಂತರ ಶ್ರಮಜೀವಿಗಳು ನೂರಾರು ಕಿ.ಮೀ. ದೂರವನ್ನು ಬಿರುಬಿಸಿಲಿನ ದಳ್ಳುರಿಯಲ್ಲಿ ಕಾಲ್ನಡಿಗೆಯಲ್ಲಿ ಕ್ರಮಿಸಬೇಕಾಯಿತು. ಎಷ್ಟೋ ಮಂದಿ ರಸ್ತೆಯಲ್ಲೇ ಪ್ರಾಣಬಿಟ್ಟ ದುರಂತಗಳು ಜರುಗಿದವು. ಅಂತಹ ಜನರ ಮೇಲೆ ಸರ್ಕಾರಗಳು-ಪೊಲೀಸರು ಅಮಾನುಷವಾಗಿ ನಡೆದುಕೊಂಡರು. ಲವಲೇಶ ಕರುಣೆಯೂ ಅಲ್ಲಿ ಕಾಣದೆಹೋಯಿತು. ಕಾರ್ಮಿಕ ವಲಸೆಗಾರರು ತಮ್ಮ ಗೂಡು ಸೇರಿಕೊಳ್ಳಲು ರೈಲುಗಾಡಿಗಳನ್ನು ಓಡಿಸದ ಕೇಂದ್ರ ಸರ್ಕಾರ, ಮೊನ್ನೆ ಸಾಂಕ್ರಾಮಿಕದ ನಟ್ಟನಡುವೆಯೂ ಕುಂಭಮೇಳಕ್ಕೆ ವಿಶೇಷ ರೈಲುಗಾಡಿಗಳನ್ನು ಏರ್ಪಾಡು ಮಾಡಿ ಧನ್ಯವಾಯಿತು. ಖುದ್ದು ಪ್ರಧಾನಮಂತ್ರಿಯವರೇ ಮುಂದಾಗಿ ಕುಂಭಮೇಳಕ್ಕೆ ಬರುವಂತೆ ಜನರನ್ನು ಆಹ್ವಾನಿಸಿದರು. ಪತ್ರಿಕೆಗಳಲ್ಲಿ ಅಚ್ಚಾದ ಪುಟಗಟ್ಟಲೆ ಜಾಹೀರಾತುಗಳೇ ಈ ಮಾತಿಗೆ ಪುರಾವೆ. ದೇಶವನ್ನು ಕೋವಿಡ್ ವಿಪತ್ತಿನಿಂದ ಪಾರು ಮಾಡುವುದು ನಿನ್ನೆ ಮೊನ್ನೆ ಕೂಡ ಸರ್ಕಾರದ ಆದ್ಯತೆ ಆಗಿರಲಿಲ್ಲ.

ವಲಸಿಗ

ಆಸ್ಪತ್ರೆಗಳ ಹಾಸಿಗೆಗಳನ್ನು ಹಂಗಾಮಿಯಾಗಿ ಹೆಚ್ಚಿಸಲು ಬಂದೀತು. ಆದರೆ ವೈದ್ಯರು-ಶುಶ್ರೂಷಕರು ಮುಂತಾದ ಆರೋಗ್ಯ ಸಿಬ್ಬಂದಿಯನ್ನು ದಿನ ಬೆಳಗಾಗುವುದರಲ್ಲಿ ಸೃಷ್ಟಿಸಲು ಆದೀತೇ? ಈ ಸಿಬ್ಬಂದಿ ಈಗಾಗಲೆ ತನ್ನ ಸಾಮರ್ಥ್ಯ ಮೀರಿ ಶ್ರಮಿಸತೊಡಗಿದೆ. ಒಂದು ಮಿತಿಯ ಆಚೆಗೆ ತಳ್ಳಿದರೆ ಅದು ಕೂಡ ಕುಸಿದುಹೋದೀತು.

ದೇಶದ ಆರೋಗ್ಯವ್ಯವಸ್ಥೆ ಮತ್ತು ಶಿಕ್ಷಣ ವ್ಯವಸ್ಥೆಯನ್ನು ಖಾಸಗಿ ಬಂಡವಾಳಿಗರ ಕೈಗಿಟ್ಟರೆ ಎದುರಿಸಬೇಕಿರುವ ಅಪಾಯಗಳ ಮಾದರಿಯೊಂದು ನಮ್ಮ ಕಣ್ಣಮುಂದೆ ಅನಾವರಣಗೊಳ್ಳುತ್ತಿದೆ. ಖಾಸಗೀಕರಣದ ಮಹಾಪೂಜಾರಿಗಳು ಈ ಸುನಾಮಿ ಸಾಂಕ್ರಾಮಿಕದಿಂದ ಪಾಠ ಕಲಿಯಬೇಕಿದೆ.

ಬಹುತ್ವದ ಭಿನ್ನಮತದ ಸಹನೆ ಸಹಬಾಳುವೆಯ ಆಮ್ಲಜನಕ ಕೂಡ ಭಾರತ ದೇಶದಲ್ಲಿ ಭಾರೀ ವೇಗದಲ್ಲಿ ಬರಿದಾಗುತ್ತಿದೆ. ದೇಶ ಉಸಿರುಗಟ್ಟುವ ಈ ಅಪಾಯವನ್ನೂ ಮುಂದಾಗಿಯೇ ಮನಗಾಣುವುದು ಒಳಿತು.

ಇತಿಹಾಸ ಕಂಡಿರುವ ಮಹಾನ್ ಆತ್ಮಪ್ರಶಂಸಕರ ಸಾಲಿಗೆ ಈಗಾಗಲೆ ಸೇರಿಹೋಗಿದ್ದಾರೆ ನಮ್ಮ ದೇಶದ ಹಾಲಿ ಪ್ರಚಂಡ ನಾಯಕಮಣಿ. ರೋಮ್ ನಗರ ಹೊತ್ತಿ ಉರಿಯುತ್ತಿದ್ದಾಗ ಪಿಟೀಲು ಬಾರಿಸುತ್ತಿದ್ದ ನೀರೋ ಕಾಲಕಾಲಕ್ಕೆ ಇತಿಹಾಸದ ಪುಟಗಳಿಂದ ಎದ್ದು ಬರುತ್ತಲೇ ಇರುತ್ತಾನೆ. ಇದೀಗ ಭಾರತದಲ್ಲಿ ಕಾಣತೊಡಗಿದ್ದಾನೆ.


ಇದನ್ನೂ ಓದಿ: ಬಹುಜನ ಭಾರತ: ಕಲ್ಲನಾಗರಕೆ ಹಾಲೆರೆವವರ ಡಾಂಭಿಕತನ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....