Homeಅಂಕಣಗಳುಬಹುಜನ ಭಾರತ: ಬಹುತ್ವ ಭಿನ್ನಮತ ಸಹನೆ ಸಹಬಾಳುವೆಯ ಆಮ್ಲಜನಕವೂ ಬಲು ವೇಗದಲ್ಲಿ ಬರಿದಾಗುತ್ತಿದೆ

ಬಹುಜನ ಭಾರತ: ಬಹುತ್ವ ಭಿನ್ನಮತ ಸಹನೆ ಸಹಬಾಳುವೆಯ ಆಮ್ಲಜನಕವೂ ಬಲು ವೇಗದಲ್ಲಿ ಬರಿದಾಗುತ್ತಿದೆ

- Advertisement -
- Advertisement -

ಕೊರೊನಾ ವೈರಾಣು ವಿರುದ್ಧದ ಸಮರದಲ್ಲಿ ಆಮ್ಲಜನಕವೆಂಬ ಪ್ರಾಣವಾಯು ಬೆಲೆಕಟ್ಟಲಾಗದ ಹತಾರುಗಳಲ್ಲಿ ಒಂದು. ಈ ಅಂಶ ವರ್ಷದ ಹಿಂದೆ ಎರಗಿದ ಮೊದಲ ಕೋವಿಡ್ ದಾಳಿಯಲ್ಲಿ ಬೆಳಕಿನಷ್ಟೇ ನಿಚ್ಚಳವಾಗಿ ಗೊತ್ತಾಗಿತ್ತು. ಕೋವಿಡ್ ಮಹಾಸಾಂಕ್ರಾಮಿಕವನ್ನು ವಿನಾಶಕಾರಿ ವಿಪತ್ತು ಎಂದು ಭಾರತ ಸರ್ಕಾರ 2020ರ ಮಾರ್ಚ್ 14ರಂದೇ ಘೋಷಿಸಿತ್ತು. ಆನಂತರ ಘೋಷಿಸಲಾದ ಲಾಕ್‌ಡೌನ್ ಜಗತ್ತಿನ ಅತಿಕ್ರೂರ ಲಾಕ್‌ಡೌನ್ ಎಂದು ಇತಿಹಾಸಕ್ಕೆ ಸಂದು ಹೋಗಿದೆ.

ಆನಂತರ ನಿದ್ದೆಗೆ ಜಾರುವ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳುವುದು ಏಳು ತಿಂಗಳ ನಂತರ. ದೇಶದ 150 ಜಿಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನೆ ಘಟಕಗಳ ಸ್ಥಾಪನೆಯ ಟೆಂಡರ್ ಹೊರಟದ್ದು 2020ರ ಅಕ್ಟೋಬರ್ ತಿಂಗಳಿನಲ್ಲಿ. ಈ ಸಂಖ್ಯೆಗೆ ಇನ್ನೂ ಹನ್ನೆರಡು ಘಟಕಗಳನ್ನು ಸೇರಿಸಲಾಗಿತ್ತು. ಏಳು ತಿಂಗಳ ಮಹಾವಿಳಂಬದ ಹಿಂದಿನ ಕಾರಣ ಏನಿದ್ದೀತು ಊಹಿಸಬಲ್ಲಿರಾ? ಅದು ಹಣಕಾಸಿನ ಕೊರತೆಯಂತೆ!

150 ಉತ್ಪಾದನಾ ಘಟಕಗಳ ಸ್ಥಾಪನೆಗೆ ಬೇಕಿದ್ದ ಹಣವಾದರೂ ಎಷ್ಟು? ಕೇವಲ 201.58 ಕೋಟಿ ರುಪಾಯಿಗಳು. ಕಡೆಗೂ ಈ ಹಣವನ್ನು ಹಂಚಿಕೆ ಮಾಡಿದ್ದು PM- CARES ನಿಧಿಯಿಂದ. ಭಾರತ ಸರ್ಕಾರದ ಬೊಕ್ಕಸ ಅದೆಷ್ಟು ಬಡವಾಗಿತ್ತು!

ಟೆಂಡರ್ ಕರೆದು ಒಂದು ವರ್ಷವೇ ಉರುಳಿದೆ. 162ರಲ್ಲಿ ಸ್ಥಾಪಿಸಲಾಗಿರುವ ಘಟಕಗಳು ಕೇವಲ 33. ಇದೇ ಏಪ್ರಿಲ್ ಕಡೆಯ ವೇಳೆಗೆ ಇನ್ನೂ 59ನ್ನು ಸ್ಥಾಪಿಸಲಾಗುವುದಂತೆ. ಮೇ ಅಂತ್ಯದ ವೇಳೆಗೆ ಒಟ್ಟು 80 ಘಟಕಗಳು ಆಮ್ಲಜನಕವನ್ನು ಉತ್ಪಾದಿಸಲಿವೆಯಂತೆ. ಅರ್ಥಾತ್ ವರ್ಷದ ಹಿಂದೆ ಟೆಂಡರ್ ಕರೆಯಲಾಗಿದ್ದ ಕೇವಲ ಅರ್ಧದಷ್ಟು ಘಟಕಗಳು! ಜಿಲ್ಲಾ ಆಸ್ಪತ್ರೆಗಳದ್ದೇ ಈ ಕತೆಯಾದರೆ ತಾಲ್ಲೂಕುಗಳು, ಸಣ್ಣಪುಟ್ಟ ಊರು ಕೇರಿಗಳ ಜನರ ಪಾಡೇನು?

ಆಮ್ಲಜನಕದ ಕೊರತೆಯಿಂದ ಆಸ್ಪತ್ರೆಗಳ ಹೊರಗಷ್ಟೇ ಅಲ್ಲ, ಒಳಗೂ ರೋಗಿಗಳು ಸಾಯುತ್ತಿರುವುದು ಹೃದಯವಿದ್ರಾವಕ. ಈ ಸಾವುಗಳು ಅಪ್ಪಟ ಮಾನವನಿರ್ಮಿತ. ಆಳುವವರ ಅದಕ್ಷತೆ, ಬೇಜವಾಬ್ದಾರಿ, ನಿರ್ಲಕ್ಷ್ಯವೇ ಈ ಮರಣಗಳ ಹಿಂದಿನ ಕಾರಣ.

ಕೋವಿಡ್ ಮಹಾಸಾಂಕ್ರಾಮಿಕ ಇಲ್ಲದೆ ಹೋಗಿದ್ದರೂ ಜಿಲ್ಲಾ ಆಸ್ಪತ್ರೆಗಳು ತಮ್ಮವೇ ಆದ ಆಮ್ಲಜನಕ ಘಟಕಗಳನ್ನು ಹೊಂದಿರುವುದು ಅತ್ಯಗತ್ಯ. ಹಾವು ಕಡಿತ, ಮೆದುಳುಜ್ವರ, ರಸ್ತೆ ಅಪಘಾತ ಮುಂತಾದ ಕಾರಣಗಳಿಂದಾಗಿ ಆಸ್ಪತ್ರೆ ಸೇರುವ ಸಾವಿರಾರು ರೋಗಿಗಳ ಪ್ರಾಣ ಉಳಿಸಲು ಆಮ್ಲಜನಕ ಬೇಕೇ ಬೇಕು. ಮಹಾಸಾಂಕ್ರಾಮಿಕದ ನೆಪದಲ್ಲಿ ನಮ್ಮ ಆರೋಗ್ಯವ್ಯವಸ್ಥೆಯಲ್ಲಿ ಉಳಿದುಹೋಗಿರುವ ಭಾರೀ ಕಂದಕಗಳನ್ನು ಮುಚ್ಚಬೇಕಿದೆ. ಅವುಗಳಲ್ಲಿ ಆಮ್ಲಜನಕ ಘಟಕಗಳ ಸ್ಥಾಪನೆಯೂ ಸೇರಿದೆ ಎನ್ನುತ್ತಾರೆ ಆರೋಗ್ಯ ವ್ಯವಸ್ಥೆಗಳ ತಜ್ಞ ಟಿ.ಸುಂದರರಾಮನ್.

ಜಾಗಟೆ, ತಟ್ಟೆ ಬಾರಿಸಿ ಮೇಣದಬತ್ತಿಗಳನ್ನು ಹೊತ್ತಿಸುವ, ಶಂಖ ಊದಿಸುವ ನಾಟಕಗಳನ್ನು ಮಾಡಿಸದೆ ದೇಶದ ಸಾಂಕ್ರಾಮಿಕ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಅವರ ಸಲಹೆಗಳ ಪ್ರಕಾರ ನಡೆದುಕೊಂಡಿದ್ದರೆ ಇಂದಿನ ವಿಪತ್ತನ್ನು ಸಮರ್ಥವಾಗಿ ಎದುರಿಸಬಹುದಿತ್ತು.

ಮಹಾಸಾಂಕ್ರಾಮಿಕದ ನಟ್ಟ ನಡುವೆಯೂ ಮಧ್ಯಪ್ರದೇಶದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸುವ ಕಾರ್ಯ ಬಿಡುವಿಲ್ಲದೆ ನಡೆಯಿತು. ರಾಜಸ್ತಾನವೂ ಈ ಮಾತಿಗೆ ಹೊರತಾಗಲಿಲ್ಲ. ಮಹಾರಾಷ್ಟ್ರದಲ್ಲಿ ಈ ಪ್ರಯತ್ನ ನಿಲ್ಲದೆ ನಡೆದಿದೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಮಿನಲ್ಲಿ ಅಧಿಕಾರ ಹಿಡಿಯುವುದೇ ಪರಮಗುರಿ. ಹರಿದ್ವಾರದ ಕುಂಭಮೇಳದಲ್ಲಿ ಯಾವುದೇ ಕೋವಿಡ್ ನಿಯಮ ಪಾಲಿಸದೆ ಮೂವತ್ತು ಲಕ್ಷಕ್ಕೂ ಹೆಚ್ಚು ಮಂದಿ ದಿನಗಟ್ಟಲೆ ನೆರೆದು ಭಾಗವಹಿಸಲು ಅವಕಾಶ ಮಾಡಿಕೊಡಲಾಯಿತು. ಇವರು ದೇಶದ ನಾನಾ ಭಾಗಗಳಿಂದ ಬಂದವರು. ಹಿಂತಿರುಗುವಾಗ ಬಹುತೇಕರು ಕೋವಿಡ್ ಪ್ರಸಾದ ಹೊತ್ತು ತೆರಳುವವರೇ. ಕಳೆದ ವರ್ಷ ಹಠಾತ್ತನೆ ಹೇರಿದ ಅಮಾನುಷ ಲಾಕ್‌ಡೌನ್ ಮಾನವ ಇತಿಹಾಸದ ಮಹಾವಲಸೆಯ ದುರಂತವನ್ನು ಸೃಷ್ಟಿಸಿತ್ತು. ಲಕ್ಷಾಂತರ ಶ್ರಮಜೀವಿಗಳು ನೂರಾರು ಕಿ.ಮೀ. ದೂರವನ್ನು ಬಿರುಬಿಸಿಲಿನ ದಳ್ಳುರಿಯಲ್ಲಿ ಕಾಲ್ನಡಿಗೆಯಲ್ಲಿ ಕ್ರಮಿಸಬೇಕಾಯಿತು. ಎಷ್ಟೋ ಮಂದಿ ರಸ್ತೆಯಲ್ಲೇ ಪ್ರಾಣಬಿಟ್ಟ ದುರಂತಗಳು ಜರುಗಿದವು. ಅಂತಹ ಜನರ ಮೇಲೆ ಸರ್ಕಾರಗಳು-ಪೊಲೀಸರು ಅಮಾನುಷವಾಗಿ ನಡೆದುಕೊಂಡರು. ಲವಲೇಶ ಕರುಣೆಯೂ ಅಲ್ಲಿ ಕಾಣದೆಹೋಯಿತು. ಕಾರ್ಮಿಕ ವಲಸೆಗಾರರು ತಮ್ಮ ಗೂಡು ಸೇರಿಕೊಳ್ಳಲು ರೈಲುಗಾಡಿಗಳನ್ನು ಓಡಿಸದ ಕೇಂದ್ರ ಸರ್ಕಾರ, ಮೊನ್ನೆ ಸಾಂಕ್ರಾಮಿಕದ ನಟ್ಟನಡುವೆಯೂ ಕುಂಭಮೇಳಕ್ಕೆ ವಿಶೇಷ ರೈಲುಗಾಡಿಗಳನ್ನು ಏರ್ಪಾಡು ಮಾಡಿ ಧನ್ಯವಾಯಿತು. ಖುದ್ದು ಪ್ರಧಾನಮಂತ್ರಿಯವರೇ ಮುಂದಾಗಿ ಕುಂಭಮೇಳಕ್ಕೆ ಬರುವಂತೆ ಜನರನ್ನು ಆಹ್ವಾನಿಸಿದರು. ಪತ್ರಿಕೆಗಳಲ್ಲಿ ಅಚ್ಚಾದ ಪುಟಗಟ್ಟಲೆ ಜಾಹೀರಾತುಗಳೇ ಈ ಮಾತಿಗೆ ಪುರಾವೆ. ದೇಶವನ್ನು ಕೋವಿಡ್ ವಿಪತ್ತಿನಿಂದ ಪಾರು ಮಾಡುವುದು ನಿನ್ನೆ ಮೊನ್ನೆ ಕೂಡ ಸರ್ಕಾರದ ಆದ್ಯತೆ ಆಗಿರಲಿಲ್ಲ.

ವಲಸಿಗ

ಆಸ್ಪತ್ರೆಗಳ ಹಾಸಿಗೆಗಳನ್ನು ಹಂಗಾಮಿಯಾಗಿ ಹೆಚ್ಚಿಸಲು ಬಂದೀತು. ಆದರೆ ವೈದ್ಯರು-ಶುಶ್ರೂಷಕರು ಮುಂತಾದ ಆರೋಗ್ಯ ಸಿಬ್ಬಂದಿಯನ್ನು ದಿನ ಬೆಳಗಾಗುವುದರಲ್ಲಿ ಸೃಷ್ಟಿಸಲು ಆದೀತೇ? ಈ ಸಿಬ್ಬಂದಿ ಈಗಾಗಲೆ ತನ್ನ ಸಾಮರ್ಥ್ಯ ಮೀರಿ ಶ್ರಮಿಸತೊಡಗಿದೆ. ಒಂದು ಮಿತಿಯ ಆಚೆಗೆ ತಳ್ಳಿದರೆ ಅದು ಕೂಡ ಕುಸಿದುಹೋದೀತು.

ದೇಶದ ಆರೋಗ್ಯವ್ಯವಸ್ಥೆ ಮತ್ತು ಶಿಕ್ಷಣ ವ್ಯವಸ್ಥೆಯನ್ನು ಖಾಸಗಿ ಬಂಡವಾಳಿಗರ ಕೈಗಿಟ್ಟರೆ ಎದುರಿಸಬೇಕಿರುವ ಅಪಾಯಗಳ ಮಾದರಿಯೊಂದು ನಮ್ಮ ಕಣ್ಣಮುಂದೆ ಅನಾವರಣಗೊಳ್ಳುತ್ತಿದೆ. ಖಾಸಗೀಕರಣದ ಮಹಾಪೂಜಾರಿಗಳು ಈ ಸುನಾಮಿ ಸಾಂಕ್ರಾಮಿಕದಿಂದ ಪಾಠ ಕಲಿಯಬೇಕಿದೆ.

ಬಹುತ್ವದ ಭಿನ್ನಮತದ ಸಹನೆ ಸಹಬಾಳುವೆಯ ಆಮ್ಲಜನಕ ಕೂಡ ಭಾರತ ದೇಶದಲ್ಲಿ ಭಾರೀ ವೇಗದಲ್ಲಿ ಬರಿದಾಗುತ್ತಿದೆ. ದೇಶ ಉಸಿರುಗಟ್ಟುವ ಈ ಅಪಾಯವನ್ನೂ ಮುಂದಾಗಿಯೇ ಮನಗಾಣುವುದು ಒಳಿತು.

ಇತಿಹಾಸ ಕಂಡಿರುವ ಮಹಾನ್ ಆತ್ಮಪ್ರಶಂಸಕರ ಸಾಲಿಗೆ ಈಗಾಗಲೆ ಸೇರಿಹೋಗಿದ್ದಾರೆ ನಮ್ಮ ದೇಶದ ಹಾಲಿ ಪ್ರಚಂಡ ನಾಯಕಮಣಿ. ರೋಮ್ ನಗರ ಹೊತ್ತಿ ಉರಿಯುತ್ತಿದ್ದಾಗ ಪಿಟೀಲು ಬಾರಿಸುತ್ತಿದ್ದ ನೀರೋ ಕಾಲಕಾಲಕ್ಕೆ ಇತಿಹಾಸದ ಪುಟಗಳಿಂದ ಎದ್ದು ಬರುತ್ತಲೇ ಇರುತ್ತಾನೆ. ಇದೀಗ ಭಾರತದಲ್ಲಿ ಕಾಣತೊಡಗಿದ್ದಾನೆ.


ಇದನ್ನೂ ಓದಿ: ಬಹುಜನ ಭಾರತ: ಕಲ್ಲನಾಗರಕೆ ಹಾಲೆರೆವವರ ಡಾಂಭಿಕತನ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...