| ನಾನುಗೌರಿ ಡೆಸ್ಕ್ |
ಗುಜರಾತಿನ ವಡೋದರಾದ ಫಾರ್ತಿಕುಯಿ ಎಂಬ ಊರಿನ ಹೊಟೆಲ್ ಒಂದರ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಬ್ರಿಜೇಶ್ ಹರಿಜನ್ (23), ಮಹೇಶ್ ಹರಿಜನ್ (25), ವಿಜಯ್ ಚೌಧುರಿ (22), ಸಹದೇವ್ ವಾಸವಾ (22), ಅಜಯ್ ವಾಸವಾ (22), ಮಹೇಶ್ ಪಟಾನ್ವಾಡಿಯಾ (47), ಅಶೋಕ್ ಹರಿಜನ್ (45) ಎನ್ನುವ ನಾಲ್ಕು ಮಂದಿ ಪೌರಕಾರ್ಮಿಕರು ಮತ್ತು 3 ಜನ ಹೊಟೇಲ್ ಸಿಬ್ಬಂದಿ ಸೇರಿ ಒಟ್ಟು 7 ಮಂದಿ ಕಾರ್ಮಿಕರು ದುರ್ಮರಣಕ್ಕೀಡಾಗಿರುವುದು ದುರಂತದ ಸಂಗತಿ.
ಈ ದುರಂತದ ನಂತರ ಘಟನೆಯನ್ನು ಖಂಡಿಸಿ, ಈ ರೀತಿಯ ಮ್ಯಾನುವಲ್ ಸ್ಕ್ಯಾವೆಜಿಂಗ್ ಬಿಟ್ಟು ಸಂಪೂರ್ಣ ಯಾಂತ್ರಿಕೃತ ವ್ಯವಸ್ಥೆ ಜಾರಿಗೆ ಬರಬೇಕೇಂದು ಹಲವರು ದನಿಯೆತ್ತಿದ್ದರೆ, ಆನಂದ್ ಮಹಿಂದ್ರ, ಅಮಿತಾಬ್ ಬಚ್ಚನ್ ಸೇರಿದಂತೆ ಹಲವರು ಸಹಾಯ ಮಾಡಲು ಮುಂದೆ ಬಂದಿದ್ದಾರೆ.
ಈ ಕುರಿತ ಟ್ವೀಟ್ ಮಾಡಿರುವ ಆನಂದ್ ಮಹಿಂದ್ರ “ಮಾನವ ಜೀವನದ ಈ ಅಧಃಪತನ ಸಾಕು, ಯುವ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಸ್ವಯಂಚಾಲಿತ ಸ್ಕ್ಯಾವೆಂಜಿಂಗ್ ಯಂತ್ರ-ಬ್ಯಾಂಡಿಕೂಟ್ ಬಗ್ಗೆ ನಾನು ಈ ಹಿಂದೆ ಬಹಳಷ್ಟು ಸಲ ಹೇಳಿದ್ದೇನೆ. ಅವುಗಳನ್ನು ವ್ಯಾಪಕ ಪ್ರಮಾಣದಲ್ಲಿ ತಯಾರಿಸುವುದಾದರೆ ಹಣದ ವಿಷಯದಲ್ಲಿ ನನ್ನನ್ನು ಪರಿಗಣಿಸಿ” ಎಂದಿದ್ದಾರೆ.
Enough. Enough of this debasement of human life. I had tweeted about an automated scavenging machine—the Bandicoot—developed by young students & many others have also been designed. What’s preventing their widespread adoption? If funding’s needed to produce in scale, count me in https://t.co/S9hPBOLkkF
— anand mahindra (@anandmahindra) June 15, 2019
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಖ್ಯಾತ ಬಾಲಿವುಟ್ ನಟ ಅಮಿತಾಬ್ ಬಚ್ಚನ್ “ಆನಂದ್ .. ನಾನು ಬಿಎಂಸಿಗೆ 25 ಯಂತ್ರಗಳನ್ನು ಮತ್ತು ಅವರಿಗೆ ಒಂದು ಟ್ರಕ್ ಅನ್ನು ಉಡುಗೊರೆಯಾಗಿ ನೀಡಿದ್ದೇನೆ .. ಯಂತ್ರಗಳನ್ನು ವ್ಯಕ್ತಿಗಳಿಗೆ, ಟ್ರಕ್ ಅನ್ನು ಬಿಎಂಸಿಗೆ ನೀಡಲಾಯಿತು. ರಂಗಾಬಾದ್ನ ಒಂದು ಕಂಪನಿಯು ಅವುಗಳನ್ನು ಮಾಡುತ್ತದೆ.” ಎಂದು ರೀಟ್ವೀಟ್ ಮಾಡಿದ್ದಾರೆ.
Anand .. I had gifted 25 machines to BMC and a Truck to them .. the machines were given to individuals, the truck to BMC .. a Company in Aurangabad makes them .. never publicised it because that is not the reason for the gift .. its horrifying to learn of this day in and day out https://t.co/Vrh5nIOQjc
— Amitabh Bachchan (@SrBachchan) June 15, 2019
ಈ ಹಿಂದೆ ದೆಹಲಿಯಲ್ಲಿ ಈ ರೀತಿಯ ಪೌರಕಾರ್ಮಿಕರ ಸಾವುಗಳು ಹೆಚ್ಚಾದ ಹಿನ್ನೆಲೆಯಲ್ಲಿ ಅಲ್ಲಿನ ಆಮ್ ಆದ್ಮಿ ಪಕ್ಷದ ಅರವಿಂದ್ ಕೇಜ್ರಿವಾಲ್ ರವರು 200 ಯಂತ್ರಗಳನ್ನು ಅಲ್ಲಿನ ಪೌರಕಾರ್ಮಿಕರಿಗೆ ಹಸ್ತಾಂತರಿಸಿದ್ದರು. ಈ ಮೊದಲು ಕೇರಳದಲ್ಲಿಯೂ ಸಹ ಅಲ್ಲಿನ ಸಿಪಿಎಂನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರವರು ಮ್ಯಾನ್ ಹೋಲ್ ಕ್ಲೀನ್ ಮಾಡಲು ರೋಬೋಟ್ ಒಂದನ್ನು ಅನ್ವೇಷಣೆ ಮಾಡಲು ಪ್ರೇರಣೆ ನೀಡಿ ಮಾಡಿಸಿದ್ದರು.
ಈ ರೀತಿ ಮ್ಯಾನ್ ಹೋಲ್ ನಲ್ಲಿ ಇಳಿದು ಸಾವನಪ್ಪುವ ಪೌರ ಕಾರ್ಮಿಕರ ಪರವಾಗಿ ದಶಕಗಳಿಂದ ಹೋರಾಡುತ್ತಾ ಬಂದಿರುವ ಬೆಜವಾಡ ವಿಲ್ಸನ್ ರವರು ದಶಕಗಳಿಂದಲೂ ಈ ರೀತಿಯ ಯಂತ್ರಗಳನ್ನು ತಯಾರಿಸಿ ನೀಡಬೇಕೆಂದು ಒತ್ತಾಯ ಮಾಡುತ್ತಲೇ ಬಂದಿದ್ದಾರೆ. ಹಲವು ಹೋರಾಟಗಳನ್ನು ಮಾಡಿಸಿದ್ದಾರೆ. ಆದರೆ ಆಳುವ ಸರ್ಕಾರಗಳು ತಮ್ಮ ಇದಕ್ಕೆ ಗಮನಹರಿಸಿಲ್ಲ.
ಚುನಾವಣೆಗೆ ಮುನ್ನ ನರೇಂದ್ರ ಮೋದಿಯವರು ಕುಂಭಮೇಳದಲ್ಲಿ ಐವರು ಪೌರಕಾರ್ಮಿಕರ ಪಾದ ತೊಳೆಯುವ ಮೂಲಕ ಸುದ್ದಿಯಾಗಿದ್ದರು. ಆದರೆ ಅವರ ಬದುಕನ್ನು ಹಸನು ಮಾಡುವ ಕೆಲಸಕ್ಕೆ ಮುಂದಾಗಿಲ್ಲ ಎಂದು ಬೆಜವಾಡ ವಿಲ್ಸನ್ ರವರು ಕಿಡಿಕಾರಿದ್ದರು.
ಇದನ್ನೂ ಓದಿ: ಸ್ವಚ್ಛ ಭಾರತ – ಎಲ್ಲರೂ ಉತ್ತರದಾಯಿಗಳೇ
ಚಂದ್ರಯಾನ ಮಾಡಿದ್ದೇವೆ, ಬಾಹ್ಯಕಾಶದಲ್ಲಿ ನಿಲ್ದಾಣ ಸ್ಥಾಪಿಸುತ್ತೇವೆ ಎಂದೆಲ್ಲಾ ನಾವು ಹೆಮ್ಮೆಯಿಂದ ಕೊಚ್ಚಿಕೊಳ್ಳುವ ದೇಶದಲ್ಲಿ ಇಂದಿಗೂ ಒಂದೂವರೆ ಲಕ್ಷದಷ್ಟು ಜನ ಮಲ ಹೋರುವ ಅನಿಷ್ಟ ಕೆಲಸವನ್ನು ಮಾಡುತ್ತಿರುವುದು ನಮಗೆ ನಾಚಿಕೆಯೆನಿಸಬೇಕಲ್ಲವೇ? ಈ ಕುರಿತು ನಾವು ಮಾತಾಡಿದ್ದೇವೆಯೇ ಎಂದು ಬೆಜವಾಡರವರು ಪ್ರಶ್ನಿಸುತ್ತಾರೆ.
ಮ್ಯಾನ್ ಹೋಲ್ ಗೆ ಇಳಿಯಬಾರದು, ಆ ರೀತಿ ಕೆಲಸ ಮಾಡಿಸಬಾರದು ಎಂಬು ಕಾಯ್ದೆಯಿದ್ದರೂ ಯಾರು ಅದನ್ನು ಜಾರಿಗೊಳಿಸುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ದೇಶದ ಆರೋಗ್ಯ ಕಾಪಾಡುತ್ತಿರುವ ಪೌರಕಾರ್ಮಿಕರ ಆರೋಗ್ಯದ ಬಗ್ಗೆ ಸಮಾಜ ನಿರ್ಲಕ್ಷ್ಯ ವಹಿಸಿರುವುದು ದುರಂತವೇ ಸರಿ.
ಇದನ್ನೂ ಓದಿ: ಗಂಗೆ ತೊಳೆಯಬಲ್ಲಳೇ ಈ ಪಾಪವನ್ನು?
ಇಂತಹ ವಿಷಮ ಪರಿಸ್ಥಿತಿಯಲ್ಲಿಯೂ ಕೆಲ ರಾಜ್ಯಗಳು ಇದರ ಬಗ್ಗೆ ಎಚ್ಚೆತ್ತುಕೊಂಡು ಯಂತ್ರೋಪಕರಣಗಳನ್ನು ಬಳಸುತ್ತಿರುವುದು ಮಾದರಿ ನಡೆ. ಕೆಲ ಆನಂದ್ ಮಹಿಂದ್ರ ಮತ್ತು ಅಮಿತಾಬ್ ಬಚ್ಚನ್ ಸಹಾಯಹಸ್ತ ಚಾಚಿರುವುದು ಆಶಾದಾಯಕ ಬೆಳವಣಿಗೆ. ಇಂತಹ ಕೈಗಳು ನೂರು, ಸಾವಿರವಾಗಲಿ. ನಮ್ಮ ತೆರಿಗೆ ಹಣದಿಂದ ನಡೆಯುವ ಸರ್ಕಾರ ಈ ಕುರಿತು ಬೇಗ ಕಾರ್ಯಪ್ರವೃತ್ತರಾಗಲಿ ಎಂದು ಹಾರೈಸೋಣ.