Homeಅಂಕಣಗಳುಗಂಗೆ ತೊಳೆಯಬಲ್ಲಳೇ ಈ ಪಾಪವನ್ನು?

ಗಂಗೆ ತೊಳೆಯಬಲ್ಲಳೇ ಈ ಪಾಪವನ್ನು?

- Advertisement -
- Advertisement -

ಇವರ್ಯಾರೂ ರಾಜಕಾರಣಿಗಳಲ್ಲ. ಯಾವೊಂದು ಪಕ್ಷದ ಪರ ಅಥವಾ ವಿರುದ್ಧವಾಗಿ ಅವರು ಇಲ್ಲ. ಕೇಂದ್ರದಲ್ಲಿ ಸಂಯುಕ್ತರಂಗದ ಸರ್ಕಾರವಿದ್ದಾಗ, 1998ರಲ್ಲಿ ಗಂಗಾನದಿಯನ್ನು ಉಳಿಸಿಕೊಳ್ಳುವ ಅವರ ಆಂದೋಲನ ಆರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೆ ಉತ್ತರಾಖಂಡದಲ್ಲಿ 3 ಸಾರಿ ಆಡಳಿತ ಪಕ್ಷಗಳು ಬದಲಾಗಿವೆ; ಕೇಂದ್ರದಲ್ಲೂ ಬದಲಾಗಿವೆ. ಇವರ ಹೋರಾಟ ನಿರಂತರವಾಗಿ ಮುಂದುವರೆದಿದೆ. ಗಂಗೆಯ ಮಾಲಿನ್ಯವನ್ನು ತೊಳೆಯಬೇಕೆಂಬುದು ಅವರಿಗೆ ಆಧ್ಯಾತ್ಮಿಕ ಸಂಗತಿಯಾಗಿತ್ತು. ಮಾಲಿನ್ಯಕ್ಕಿಂತ ಅವರು ವಿರೋಧಿಸಿದ್ದು, ಗಂಗೆಯ ಹರಿವನ್ನು ನಿರ್ಬಂಧಿಸುವ ಅಣೆಕಟ್ಟುಗಳ ನಿರ್ಮಾಣವನ್ನು. ಗಂಗಾನದಿ ಉಗಮ ಸ್ಥಾನದಿಂದ ಕನಿಷ್ಠ 125 ಕಿ.ಮೀ.ಗಳಷ್ಟು ಉದ್ದದ ಭಾಗದಲ್ಲಾದರೂ ಜಲವಿದ್ಯುತ್ ಸ್ಥಾವರ ನಿಲ್ಲಿಸಿ ಎಂದು ಕೇಳಿದರು. ಗಂಗಾನದಿಯಲ್ಲಿ ಮರಳು ಗಣಿಗಾರಿಕೆ ನಿಲ್ಲಿಸಬೇಕೆಂದು ಪದೇ ಪದೇ ಮನವಿ ಸಲ್ಲಿಸಿದರು. ಕೋರ್ಟುಗಳ ಮೊರೆ ಹೊಕ್ಕರು. ಅಂತಿಮವಾಗಿ ಉಪವಾಸ ಸತ್ಯಾಗ್ರಹವನ್ನು ತಮ್ಮ ಹೋರಾಟದ ಮಾರ್ಗವಾಗಿಸಿಕೊಂಡರು.
ಉಪವಾಸ ಮಾಡುತ್ತಲೇ ತೀರಿ ಹೋದವರಲ್ಲಿ ಮೂರು ದಿನದ ಕೆಳಗೆ ಇಲ್ಲವಾದ ಸಂತ ಸ್ವಾಮಿ ಗ್ಯಾನ್ ಸ್ವರೂಪ್ ಆನಂದ್ ಮೂರನೆಯವರು. ಇದಕ್ಕೆ ಹಿಂದೆ ಸ್ವಾಮಿ ನಿಗಮಾನಂದ್ ಮತ್ತು ಸ್ವಾಮಿ ಗೋಕುಲಾನಂದರು ಸಹಾ ಉಪವಾಸನಿರತರಾಗಿದ್ದಾಗಲೇ ಮರಣ ಹೊಂದಿದ್ದರು. ಸ್ವಾಮಿ ನಿಗಮಾನಂದ್ ಕೋಮಾದಲ್ಲಿದ್ದಾಗ, ಹೈಕೋರ್ಟು ಅಣೆಕಟ್ಟು ನಿರ್ಮಾಣವನ್ನು ನಿಲ್ಲಿಸಲು ಆದೇಶ ಹೊರಡಿಸಿತು. ಒಂದಲ್ಲಾ, ಎರಡಲ್ಲಾ ಹಲವು ಗೆಲುವುಗಳನ್ನು ಈ ಸಂತರು ಸಾಧಿಸಿದ್ದಾರೆ. ಆ ಅರ್ಥದಲ್ಲಿ ಇವರದ್ದು ಫಲವಿಲ್ಲದ ಹೋರಾಟವೂ ಅಲ್ಲ.
ಗಂಗೆಯ ಪಾವಿತ್ರ್ಯದ ಕಲ್ಪನೆ ಇಟ್ಟುಕೊಂಡು ವಾರಣಾಸಿ (ಕಾಶಿ)ಗೆ ಹೋದವರಿಗೆ ಅದರ ಕೊಳಕು ಗಾಬರಿ ಹುಟ್ಟಿಸುತ್ತದೆ; ‘ಹಿಂದುಗಳಿಗೆ ಪವಿತ್ರ’ವೆಂದು ಹೇಳಲಾಗುವ ಈ ನದಿಯ ಸ್ವಚ್ಛತೆಗೆ ಯಾರೂ ಏನೂ ಮಾಡುತ್ತಲೇ ಇಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ಸಿನಿಕರೂ, ಧಾರ್ಮಿಕ ಢಾಂಬಿಕತೆಯ ಕುರಿತು ತಿರಸ್ಕಾರ ಹೊಂದಿರುವವರು ‘ಶ್ರದ್ಧಾವಂತ ಹಿಂದೂ ಧಾರ್ಮಿಕ’ ವ್ಯಕ್ತಿಗಳನ್ನು ಆಡಿಕೊಳ್ಳುತ್ತಾರೆ. ಆದರೆ, ‘ಧಾರ್ಮಿಕ ನೆಲೆ’ಯಲ್ಲಿ ಈ ಕುರಿತು ಕೆಲಸ ಮಾಡುತ್ತಿರುವ ಎರಡು ಬಗೆಯ ಜನರಿದ್ದಾರೆ. ಒಂದು, ಉತ್ತರಾಖಂಡದ ವಿವಿಧ ಹಿಂದೂ ಸಂತರು ಮತ್ತು ಅವರ ಅನುಯಾಯಿಗಳು. ಇವರಿಗೆ ಇದು ಗಂಗಾ ತಪಸ್ಯಾ. ಎರಡು, ‘ತಾಯಿ ಗಂಗೆಯೇ ನನ್ನನ್ನು ಇಲ್ಲಿಗೆ ಕರೆಸಿಕೊಂಡಿದ್ದಾಳೆ’ ಎಂದು ಹೇಳಿ ವಾರಣಾಸಿಯಲ್ಲಿ ರಾಜಕಾರಣ ಮಾಡಲು ಹೋದ ‘ಹಿಂದುತ್ವ’ವಾದಿಗಳು. ಎಲ್ಲಾ ಪಕ್ಷಗಳ ಎಲ್ಲಾ ಸರ್ಕಾರಗಳ ವಿರುದ್ಧ ನಿರಂತರ ಹೋರಾಟ ಮಾಡುತ್ತಾ ಬಂದ ನಿಜಸಂತರಿಗೂ, ಈ ವಾದಿಗಳಿಗೂ ಈಗ ವೈರುಧ್ಯ ಏರ್ಪಟ್ಟಿರುವುದು ಆಶ್ಚರ್ಯವೇನಲ್ಲ.
ವಾರಣಾಸಿಯ ಲೋಕಸಭಾ ಸದಸ್ಯರೂ ಆದ ಪ್ರಧಾನಮಂತ್ರಿಗಳಿಗೆ ಸಂತ ಗ್ಯಾನ್ ಆನಂದರು ಈ ವರ್ಷದಲ್ಲಿ ಎರಡು ಬಾರಿ ಪತ್ರ ಬರೆದಿದ್ದರು. ‘ನೀವು ಗಂಗಾಜೀ (ಗಂಗೆಯನ್ನು ಅವರು ಬೇರೆ ರೀತಿಯಲ್ಲಿ ಸಂಬೋಧಿಸುತ್ತಿರಲಿಲ್ಲ) ಕುರಿತು ಆಸಕ್ತಿ ತೋರಿ, ಅದಕ್ಕೆಂದೇ ಒಂದು ಇಲಾಖೆಯನ್ನು ಸೃಷ್ಟಿಸಿದಾಗ ನಾನು ಬಹಳ ನಿರೀಕ್ಷೆಗಳನ್ನಿಟ್ಟುಕೊಂಡಿದ್ದೆ. ದೊಡ್ಡ ಮೊತ್ತದ ಹಣ ಇದಕ್ಕಾಗಿ ಕಾದಿರಿಸಿದಿರಿ. ಆದರೆ, ಈ ಕುರಿತು ನೀವು ಮಾಡಿದ್ದೆಲ್ಲವೂ ಕಾರ್ಪೊರೇಟ್ ಕಂಪೆನಿಗಳ ಹಿತಕ್ಕಾಗಿ ಎಂದು ಕಂಡುಕೊಂಡಿದ್ದೇನೆ.’ ಸೂಕ್ತ ಕ್ರಮಗಳಿಗೆ ಮುಂದಾಗದಿದ್ದಲ್ಲಿ ‘ಗಂಗಾ ದಸರಾ’ದ ಆರಂಭದ ದಿನದಿಂದ ತಾನು ಉಪವಾಸ ಆರಂಭಿಸುವುದಾಗಿ ಸಂತ ಆನಂದರು ತಿಳಿಸಿದ್ದರು. ಅದರಂತೆ ಜೂನ್ 22ರಂದು ಹರಿದ್ವಾರದಲ್ಲಿ ಶುರುವಾದ ಉಪವಾಸ ಅಂತ್ಯಗೊಂಡಿದ್ದು, 111 ದಿನಗಳ ನಂತರ ಅವರ ಮರಣದೊಂದಿಗೆ. ನವರಾತ್ರಿ ಶುರುವಾಗುವ ದಿನದಿಂದ ತಾನು ನೀರನ್ನೂ ನಿಲ್ಲಿಸುತ್ತೇನೆಂದು ಹೇಳಿದ್ದವರು ಅದೇ ರೀತಿ ನಡೆದುಕೊಂಡಿದ್ದಾರೆ.
ಸಾವಿನ ಹಿಂದಿನ ದಿನವೂ ಸ್ಪಷ್ಟವಾಗಿ, ನಿಷ್ಠುರವಾಗಿ ಮಾತನಾಡಿದ್ದಾರೆ. ಕಾನೂನುಪ್ರಕಾರ ತನ್ನ ಒಪ್ಪಿಗೆಯಿಲ್ಲದೇ ಚಿಕಿತ್ಸೆ ಕೊಡುವ ಹಕ್ಕು ಇಲ್ಲ ಎಂದು ಪ್ರತಿಪಾದಿಸಿದ್ದಾರೆ. ಸಾವಿನ ದಿನ ಬೆಳಿಗ್ಗೆ ಒಂದು ಪತ್ರವನ್ನು ಬರೆದು ಪತ್ರಿಕೆಗಳಿಗೆ ಬಿಡುಗಡೆ ಮಾಡಲು ಹೇಳಿದ್ದಾರೆ. ತನ್ನ ಆಧ್ಯಾತ್ಮಿಕ ಗುರು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿಯವರಿಗೆ ತನ್ನ ಆರೋಗ್ಯ ಸ್ಥಿತಿ ಚೆನ್ನಾಗಿರುವುದರ ಕುರಿತು ಪತ್ರ ಬರೆದಿದ್ದಾರೆ. ಹೀಗಾಗಿಯೇ ಅವರ ಗುರು ಇದನ್ನೊಂದು ಕೊಲೆಯೆಂದು ಕರೆದು ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.
ತಮಗೆ ತಿಳಿದಿರಲಿ, ಈ ಹಿಂದೆ 68 ದಿನಗಳ ಉಪವಾಸದ ನಂತರ ತೀರಿಕೊಂಡ ಸ್ವಾಮಿ ನಿಗಮಾನಂದರ ಮರಣದ ತನಿಖೆಯನ್ನೂ ಸಿಬಿಐ ನಡೆಸುತ್ತಿದೆ. ಬಲವಂತವಾಗಿ ಆಸ್ಪತ್ರೆಗೆ ಸೇರಿಸಲ್ಪಟ್ಟಿದ್ದ ಅವರ ಮರಣಾನಂತರದ ದೇಹಸ್ಥಿತಿಯನ್ನು ನೋಡಿ ಅನುಯಾಯಿಗಳು ದನಿಯೆತ್ತಿದ್ದರು. ವೈದ್ಯಕೀಯ ವರದಿ ಪ್ರಕಾರ ಅವರ ದೇಹದಲ್ಲಿ ಆರ್ಗನೋಫಾಸ್ಫೇಟ್ ವಿಷವಿತ್ತು. 2003ರಲ್ಲಿ ಅದೇ ಆಶ್ರಮದ ಇನ್ನೊಬ್ಬ ಸ್ವಾಮಿ ಗೋಕುಲಾನಂದರಿಗೆ ಸ್ಕೋಲೀನ್ ಎಂಬ ಇಂಜೆಕ್ಷನ್ ಕೊಟ್ಟು ಕೊಲ್ಲಲಾಯಿತು ಎಂದು ಹೇಳಲಾಗುತ್ತಿದೆ.
ಆಶ್ಚರ್ಯವೆನಿಸಬಹುದು, ಆದರೆ ನಿಜ. ಇದೇ ದೇಶದಲ್ಲಿ ‘ಹಿಂದೂ ಸಂತ’ರು ಕಾರ್ಪೋರೇಟ್ ಸಂಸ್ಥೆಗಳು ಮತ್ತು ಮೈನಿಂಗ್ ಹಾಗೂ ರಿಯಲ್ ಎಸ್ಟೇಟ್ ಮಾಫಿಯಾ ವಿರುದ್ಧ ಇಂತಹ ಆಂದೋಲನವನ್ನು 2 ದಶಕಗಳಿಂದ ನಡೆಸುತ್ತಿದ್ದಾರೆ. 2003ರಲ್ಲಿ ತೀರಿಹೋದ (?ಕೊಲ್ಲಲ್ಪಟ್ಟ) ಸ್ವಾಮಿ ಗೋಕುಲಾನಂದರು ನೈನಿತಾಲ್ ಅರಣ್ಯದಲ್ಲಿ ರಿಯಲ್ ಎಸ್ಟೇಟ್ ಚಟುವಟಿಕೆಗಳನ್ನು ವಿರೋಧಿಸುತ್ತಿದ್ದರು.
ಇನ್ನೊಬ್ಬ ಸಂತ ಶಿವಾನಂದರೂ 2011ರ ಹೊತ್ತಿಗೇ ಸುಮಾರು ಆರು ದೀರ್ಘ ಉಪವಾಸಗಳನ್ನು ನಡೆಸಿದ್ದರು. ಅವರ ವೈಶಿಷ್ಟ್ಯವೆಂದರೆ, ಅವರು ಉಪವಾಸ ತಡೆಯಲು ಬರುವವರ ಕೈಗೆ ಸಿಗದಂತಿರಲು ತಮ್ಮ ಆಶ್ರಮದ ಸುತ್ತ ಭದ್ರ ಮಾಡಿಕೊಂಡು, ಒಳಗಿನಿಂದ ಬೀಗ ಹಾಕಿ ಉಪವಾಸ ಕೂರುತ್ತಾರೆ. ಸರ್ಕಾರದ ವತಿಯಿಂದ ಗಣಿಗಾರಿಕೆ ನಿಲ್ಲಿಸುವ ಆದೇಶವನ್ನು ಅವರ ಆಶ್ರಮದ ಬಾಗಿಲಿಗೆ ಅಂಟಿಸಿ, ಭಕ್ತರು ಅದನ್ನು ಶಿವಾನಂದರಿಗೆ ತಲುಪಿಸಿ ಅವರು ಓದಿದ ನಂತರವೇ ಬಾಗಿಲು ತೆಗೆದು ಸತ್ಯಾಗ್ರಹ ನಿಲ್ಲಿಸುತ್ತಾರೆ.
ಹಿಮಾಲಯದ ತಪ್ಪಲಲ್ಲಿ, ಗಂಗೆಯಂತಹ ಜೀವನದಿಗಳು ಹರಿಯುವ ಪ್ರದೇಶದಲ್ಲೂ ಅಂತರ್ಜಲದ ಮಟ್ಟ ಕುಸಿದಿದ್ದು, 10 ಲಕ್ಷ ಎಕರೆಗಳಿಗೂ ಹೆಚ್ಚು ಪ್ರದೇಶ ಬಂಜರಾಗಿರಲು ಮರಳು ಮತ್ತು ಕಲ್ಲು ಗಣಿಗಾರಿಕೆಯೇ ಕಾರಣವೆಂದು ಉತ್ತರಾಖಂಡದ ಹೈಕೋರ್ಟ್ ಹೇಳಿದೆ. ಬಹುಶಃ ಈಗ ನಿಮಗೆ ಬಲಪಂಥೀಯರು ಉತ್ತರಾಂಚಲವೆಂದು (ಅದು ‘ದೇವರಿರುವ ಜಾಗ’ವೆನ್ನುವ ಕಾರಣಕ್ಕೆ) ಕರೆಯಬಯಸುವ ಉತ್ತರಾಖಂಡ ರಾಜ್ಯದಲ್ಲಿ ಭೂಮಿ, ನೀರು ಮತ್ತು ಅರಣ್ಯ ಲೂಟಿಯ ಪ್ರಮಾಣ ಹಾಗೂ ಅದರ ಹಿಂದಿನ ಕಾರ್ಪೋರೇಟ್ ಮಾಫಿಯಾ ಅರ್ಥವಾಗುತ್ತಿರಬಹುದು.
ಇದೊಂದು ಉದಾಹರಣೆ ಹೇಳಿದರೆ ಆ ಲಾಬಿಯ ಕಾರ್ಯವಿಧಾನದ ಕುರಿತು ಅರಿವಾಗಬಹುದು. ಮರಳು ಲೂಟಿಯ ವಿರುದ್ಧ ಒಮ್ಮೆ 20 ವರ್ಷದ ಸ್ವಾಮಿ ಯಜ್ಞಾನಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾಗ ಆತನ ಆರೋಗ್ಯ ವಿಚಾರಿಸುವ ನೆಪದಲ್ಲಿ ಸ್ಥಳೀಯ ಅಧಿಕಾರಿಗಳು ಬಂದರು. ಅವರು ಮಾತನಾಡಿಸುವ ನಾಟಕ ಮಾಡುತ್ತಿದ್ದಾಗಲೇ, ಅವರ ಹಿಂದೆಯೇ ಬಂದಿದ್ದ ಮುಸುಕುಧಾರಿಗಳು ಆತನನ್ನು ಹೊತ್ತೊಯ್ದರು. ನಂತರ ಆ ಮುಸುಕುಧಾರಿಗಳನ್ನು ಪೊಲೀಸರೆಂದು ಹೇಳಲಾಯಿತು. ಯಜ್ಞಾನಂದರನ್ನು 2 ತಿಂಗಳ ಕಾಲ ಜೈಲಿನಲ್ಲಿಡಲಾಗಿತ್ತು. ಈ ಬಂಧನ ಅಕ್ರಮವೆಂದು ನ್ಯಾಯಾಲಯವು ಹೇಳಿದ ನಂತರ ಅವರನ್ನು ಬಿಡುಗಡೆ ಮಾಡಲಾಯಿತು.
ಗಂಗೆಯನ್ನು ಉಳಿಸಿಕೊಳ್ಳುವ ಆಂದೋಲನವು ಅಹಿಂಸಾತ್ಮಕವಾಗಿ ಈ ಪ್ರಮಾಣಕ್ಕೆ ನಡೆದ ಇಷ್ಟೆಲ್ಲಾ ಇತಿಹಾಸ ಇರುವುದರಿಂದಲೇ, ವಾರಣಾಸಿಯ ಸಂಸದರೂ ಸಹಾ ತಮ್ಮ ವಿರುದ್ಧವೇ ಉಪವಾಸ ನಡೆಸುತ್ತಿದ್ದ ಸಂತರೊಬ್ಬರು ತೀರಿಕೊಂಡಾಗ ಸಂತಾಪಸೂಚಕ ಟ್ವೀಟ್ ಮಾಡಬೇಕಾಯಿತು. ಆದರೆ, ಈ ಸಂತಾಪ ಸಂದೇಶದಿಂದ ಅವರ ಪಾಪ ತೊಳೆದು ಹೋಗುವುದು ಸಾಧ್ಯವಿಲ್ಲ. ಇದು ಕಾಂಗ್ರೆಸ್ ಅಥವಾ ಇನ್ನಾವುದೋ ಬಾಹ್ಯ ಶಕ್ತಿಯ ಚಿತಾವಣೆಯಿಂದ ನಡೆದ ಹೋರಾಟವೆಂದು ತಳ್ಳಿಹಾಕುವುದು ಸಾಧ್ಯವಿಲ್ಲ. ಸಂತ ಸ್ವಾಮಿ ಗ್ಯಾನ್ ಸ್ವರೂಪ್ ಆನಂದರ ಸಾವು ವಾರಣಾಸಿಯ ಸಂಸದರನ್ನು ಮಾತ್ರವಲ್ಲದೇ, ದೇಶದ ಜನರೆಲ್ಲರನ್ನೂ ಕಾಡುತ್ತದೆ.
ಜುಲೈ 2011ರಲ್ಲಿ ಈ ಹೆಸರು ಪಡೆದುಕೊಂಡು ಸನ್ಯಾಸಿಯಾಗುವ ಮುಂಚೆ ಅವರು ಪ್ರೊ.ಜಿ.ಡಿ.ಅಗರ್‍ವಾಲ್. ಮುಜಫ್ಪರ್‍ನಗರದ ಬಳಿಯ ರೈತ ಕುಟುಂಬವೊಂದರ ಹಿನ್ನೆಲೆಯ ಅವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪರಿಸರ ವಿಜ್ಞಾನದಲ್ಲಿ ಪಿಎಚ್‍ಡಿ ಪಡೆದಿದ್ದರು. ಐಐಟಿ ಕಾನ್‍ಪುರದಲ್ಲಿ ಸಿವಿಲ್ ಮತ್ತು ಪರಿಸರ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದುದಲ್ಲದೇ, 1979-80ರಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು. ಐಐಟಿ ಕಾನ್‍ಪುರದ ತನ್ನ ವಿದ್ಯಾರ್ಥಿಗಳೊಂದಿಗೆ ಆರಂಭಿಸಿದ ಕಂಪೆನಿ director of Envirotech Instruments (P) Limited, New Delhi ಯ ನಿರ್ದೇಶಕರಾಗಿದ್ದರು. ನವದೆಹಲಿಯ ಪ್ರಸಿದ್ಧ ವಿಜ್ಞಾನ ಮತ್ತು ಪರಿಸರ ಸಂಸ್ಥೆಯ ಸ್ಥಾಪಕ ಅನಿಲ್ ಅಗರ್‍ವಾಲ್ ಇವರ ವಿದ್ಯಾರ್ಥಿ. ಇಂತಹ ಹಿನ್ನೆಲೆಯ ಪ್ರೊ.ಜಿ.ಡಿ.ಅಗರ್‍ವಾಲ್ ‘ಶ್ರದ್ಧಾವಂತ ಹಿಂದೂ’ ಆಗಿದ್ದರು. ಪರಿಸರ ಮತ್ತು ಗಂಗಾಜೀ ಅವರಿಗೆ ವಿಜ್ಞಾನವೂ ಆಗಿತ್ತು, ಆಧ್ಯಾತ್ಮವೂ ಆಗಿತ್ತು.
ಭಾಗೀರಥಿಗೆ ಅಣೆಕಟ್ಟು ಕಟ್ಟಿ ಲೊಹಾರಿನಾಗ್ ಪಾಲಾ ಜಲವಿದ್ಯುತ್ ಯೋಜನೆ ಮಾಡುವುದರ ವಿರುದ್ಧ 2009ರಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಸರ್ಕಾರವು ಅದನ್ನು ಹಿಂತೆಗೆದುಕೊಳ್ಳುವ ಘೋಷಣೆ ಮಾಡುವ ಹೊತ್ತಿಗೆ ಉಪವಾಸವು 38ನೇ ದಿನ ತಲುಪಿ ಅಗರ್‍ವಾಲ್ ಸಾವಿನಂಚಿಗೆ ಸರಿದಿದ್ದರು. ಇವರ ಇನ್ನೊಂದು ಉಪವಾಸವನ್ನು ಬೆಂಬಲಿಸಿ, ರಾಷ್ಟ್ರೀಯ ಗಂಗಾ ನದಿ ಜಲಾನಯನ ಪ್ರದೇಶ ಪ್ರಾಧಿಕಾರದ ಸದಸ್ಯರಾದ ರಾಜೇಂದ್ರ ಸಿಂಗ್, ರವಿ ಚೋಪ್ರಾ, ಹಯಾತ್ ಸಿದ್ದಿಖಿ ಇವರುಗಳು 2012ರ ಮಾರ್ಚ್‍ನಲ್ಲಿ ರಾಜೀನಾಮೆ ನೀಡಿದ್ದರು.
ಪರಿಸರ ನಾಶ ಮತ್ತು ಲಾಬಿಗಳ ಜೊತೆ ಕೈ ಜೋಡಿಸುವುದರಲ್ಲಿ ಯಾವ ಪಕ್ಷಗಳೂ ಸಾಚಾ ಅಲ್ಲ. ಆದರೆ, ಗಂಗೆ ಕುರಿತಾದ ಧಾರ್ಮಿಕ ಭಾವನೆಗಳನ್ನು ಉದ್ದೀಪಿಸಿ ಲಾಭ ಪಡೆದುಕೊಳ್ಳಲು ಪ್ರಯತ್ನಿಸಿದ ಪಕ್ಷದ ಟ್ರ್ಯಾಕ್ ರೆಕಾರ್ಡ್ ಮಿಕ್ಕೆಲ್ಲರಿಗಿಂತ ಕೆಟ್ಟದಾಗಿದೆ. ಗಂಗೆಗೆ ನಿಷ್ಠರಾದ ಹಿಂದೂ ಸಂತರ ವಿಚಾರದಲ್ಲೂ ಮಿಕ್ಕೆಲ್ಲರಿಗಿಂತ ಕೆಟ್ಟದಾಗಿ ನಡೆದುಕೊಂಡಿರುವುದು ಅದೇ ಪಕ್ಷ. 2013ರವರೆಗೆ ಗಂಗೆಯ ಹೆಸರಿನಲ್ಲಿ ಖರ್ಚಾದ ಹಣ ಒಂದು ಕಾರ್ಗಿಲ್ ಯುದ್ಧಕ್ಕೆ ಆದ ಖರ್ಚಿನಷ್ಟಾದರೆ, ಈ ಒಂದು ಸರ್ಕಾರದ ಅವಧಿಯಲ್ಲಿ ಮತ್ತೆ ಅಷ್ಟು ಹಣ ಮಂಜೂರಾಗಿದೆ ಮತ್ತು ಆಗಲೇ ಮುಕ್ಕಾಲು ಭಾಗ ಖರ್ಚಾಗಿದೆ. ಆದರೆ, ತೀರಿಕೊಳ್ಳುವ ಮುಂಚೆ ಸಂತ ಗ್ಯಾನ್ ಆನಂದರು ಹೇಳಿರುವಂತೆ ಇದು ಕಾರ್ಪೋರೇಟ್‍ಗಳ ಜೇಬಿಗೆ ಹೋಗಿದೆ.
ಹಾಗಾದರೆ, ಮಾ ಗಂಗಾ, ನಮಾಮಿ ಗಂಗೆ, ಗಂಗಾರತಿ, ಪವಿತ್ರ ಗಂಗೆ ಈ ಮಾತುಗಳಿಗೆಲ್ಲಾ ಏನು ಅರ್ಥ? ನಿಜವಾದ ಸಂತರು ಮಾತ್ರವೇ ತೋರಬಹುದಾದ ಧೈರ್ಯ, ಬದ್ಧತೆಯನ್ನು ತೋರುತ್ತಾ ಗಂಗಾ ತಪಸ್ಸಿನಲ್ಲಿ ನಿರತರಾಗಿರುವವರ ಮಾತನ್ನು ಕೇಳಿಸಿಕೊಳ್ಳಲಾಗದಷ್ಟು ನಮ್ಮ ಸರ್ಕಾರಗಳು ಮತಿಗೆಟ್ಟಿವೆಯೇ? ಈ ಪಾಪವನ್ನು ಗಂಗೆ ತೊಳೆಯಲಾದೀತೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...

‘ಅಮೃತಕಾಲ’ದ ಸ್ವಪ್ನದಿಂದ ‘ಬಿಕ್ಕಟ್ಟಿನ ಕಾಲ’ಕ್ಕೆ: ಕಳಚಿಕೊಳ್ಳುತ್ತಿರುವ ಮೋದಿಯವರ ‘ಆತ್ಮನಿರ್ಭರ’ ಮುಖವಾಡ 

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗೂ ಮುನ್ನ ದೇಶವು ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆಯಿಂದ ಬಳಲುತ್ತಿದ್ದಾಗ, ಬಿಜೆಪಿ ನಾಯಕರು ಮತ್ತು ಕೇಂದ್ರ ಸರ್ಕಾರದ ಮಂತ್ರಿಗಳು ಮೋದಿಯವರ ‘ದಯೆ’ಯಿಂದ ಭಾರತಕ್ಕೆ ಯಾವುದೇ...

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...