Homeಅಂಕಣಗಳುಪುಟಕ್ಕಿಟ್ಟ ಪುಟಗಳುಬೆಂಗಳೂರಿನ ಹುಟ್ಟು, ಒಬ್ಬರಿಂದ ಮತ್ತೊಬ್ಬರ ಕೈಬದಲಾದುದರ ರೋಚಕ ಇತಿಹಾಸ ತಿಳಿಯಲು ಈ ಪುಸ್ತಕ ಓದಿ

ಬೆಂಗಳೂರಿನ ಹುಟ್ಟು, ಒಬ್ಬರಿಂದ ಮತ್ತೊಬ್ಬರ ಕೈಬದಲಾದುದರ ರೋಚಕ ಇತಿಹಾಸ ತಿಳಿಯಲು ಈ ಪುಸ್ತಕ ಓದಿ

ಹೈದರ್ ಅಲಿ ಮರಾಠರ ದಾಳಿಗಳನ್ನು ಎದುರಿಸಲು ಕೆಂಪೇಗೌಡರು ಮಣ್ಣಿಂದ ಕಟ್ಟಿದ್ದ ಕೋಟೆಯನ್ನು ಕಲ್ಲಿನಿಂದ ಮರು ನಿರ್ಮಾಣ ಮಾಡಿದ ಮೇಲೆ ಇದು ಸೇನೆಯ ಕೇಂದ್ರವಾಯಿತು.

- Advertisement -
- Advertisement -

(ಇದು ಬೆಂಗಳೂರು ಮಿರರ್ ಪತ್ರಿಕೆಗಾಗಿ ಗೌರಿಲಂಕೇಶ್ 25, ಜುಲೈ 2016ರಲ್ಲಿ ಮಾಡಿದ ಪುಸ್ತಕ ವಿಮರ್ಶೆಯ ಭಾವಾನುವಾದ)

“ಭಾರತದ ಅರಸೊತ್ತಿಗೆಗಳ ರಾಜಕಾರಣದಲ್ಲಿ ಬೆಂಗಳೂರೊಂದು ಚದುರಂಗದಾಟದ ಕಾಯಿಯಂತಾಗಿದ್ದೇ ಒಂದು ಕುತೂಹಲಕರ ವಿಷಯ. ಕೆಂಪೇಗೌಡರು ನಿರ್ಮಿಸಿದರು. ಬಿಜಾಪುರದ ಸುಲ್ತಾನರಿದನ್ನು ಗೆದ್ದರು. ಮೊಘಲರು ಮಾರಿದರು. ಚಿಕ್ಕದೇವರಾಜ ಒಡೆಯರ್ ಕೊಂಡರು. ಇತಿಹಾಸದ ಭಿನ್ನ ಕಾಲಘಟ್ಟಗಳಲ್ಲಿ ಇದು ಶಹಾಜಿ ಭೋಸ್ಲೇ ಮತ್ತು ಹೈದರ್ ಅಲಿಯವರಿಗೆ ವ್ಯಕ್ತಿಗತವಾಗಿ ಗಳಿಸಿದ ಜಹಗೀರ್ ಆಗಿತ್ತು. ಬ್ರಿಟಿಷ್ ರಾಜ್ ಕಾಲದಲ್ಲಿ ಇಂಗ್ಲೆಂಡಿನ ಗಮನವಾಗಿತ್ತು,” ಇವು ಮೈಸೂರಿನ ರಾಜ್ಯಪಾಲರಾದ ಧರ್ಮವೀರರವರು ಎಂ ಫಜ್ಲುಲ್ ಬರೆದಿರುವ ‘ದ ಸೆಂಚುರೀಸ್’ ಪುಸ್ತಕದ ಮುನ್ನುಡಿಯಲ್ಲಿ ಹೇಳಿರುವ ಮಾತುಗಳು. ಫಜ್ಲುಲ್ ಅವರ ಬಗ್ಗೆ ಹೆಚ್ಚು ತಿಳಿದಿಲ್ಲದಿದ್ದರೂ, 1970ರಲ್ಲಿ ಪ್ರಕಟವಾದ (ಈಗ ಪ್ರತಿಗಳು ದೊರಕುತ್ತಿಲ್ಲ) ಈ ಪುಸ್ತಕ, ಬೃಹತ್ತಾಗಿ ಬೆಳೆಯುತ್ತಿರುವ, ಆಕರ್ಷಕವಾದ ಮತ್ತು ಬಹುಭಾಷಿಕ ನಗರವಾದ ಬೆಂಗಳೂರನ್ನು ತಿಳಿಯಲು ಓದಲೇಬೇಕಾದ ಪುಸ್ತಕ.

ಒತ್ತೊತ್ತಾಗಿ ಬೆಳೆದಿರುವ ಕಾಡುಗಳಿಂದ ಮತ್ತು ಕುರುಚಲು ಕಳೆಗಳಿಂದ ತುಂಬಿದ್ದ ಈ ಪ್ರದೇಶವನ್ನು ಕೆಂಪೇಗೌಡರು ತಮ್ಮ ಕನಸಿನ ನಗರವನ್ನಾಗಿ ರೂಪಿಸಿದರು ಎಂಬುದೇನೋ ಎಲ್ಲರಿಗೂ ಗೊತ್ತು. ಆದರೆ, ಎತ್ತುಗಳು ನಮ್ಮ ಈ ನಗರದ ಮೊದಲ ದಾರಿಯನ್ನು ರೂಪಿಸಿದ್ದು ಎಂದು ಯಾರಿಗೆ ಊಹಿಸಲು ಸಾಧ್ಯ. ತಮ್ಮ ಜ್ಯೋತಿಷಿಗಳು ಗೊತ್ತುಪಡಿಸಿದ 1537ರ ಒಂದು ಶುಭ ಮುಂಜಾನೆಯಲ್ಲಿ ಗೌಡರು ಸಾಂಪ್ರದಾಯಿಕವಾಗಿ ನಿರ್ಮಾಣದ ಕೆಲಸವನ್ನು ಆರಂಭಿಸಿದ್ದರು. ನಗರದ ಹೃದಯಭಾಗವಾಗಿರುವ, ಈಗ ಯಾವುದನ್ನು ದೊಡ್ಡಪೇಟೆ ಚೌಕವೆನ್ನುತ್ತೇವೆಯೋ, ಅಲ್ಲಿ ಹಾಲು ಬಿಳುಪಿನ ನಾಲ್ಕು ಜೊತೆ ಎತ್ತುಗಳು, ಸಿಂಗರಿಸಿದ ನೇಗಿಲುಗಳಿಂದ ನಾಲ್ಕೂ ದಿಕ್ಕುಗಳಿಗೆ ಮುಖ ಮಾಡಿ ಚಲಿಸುತ್ತಾ ಉತ್ತಿದವು. ಹಾಗೆ ನಾಲ್ಕು ದಿಕ್ಕುಗಳಿಗೆ ಮುಖ ಮಾಡಿ ಉತ್ತಲ್ಪಟ್ಟ ಕೇಂದ್ರಭಾಗದಿಂದಲೇ ನಾಲ್ಕು ಮುಖ್ಯ ನಗರಗಳು ತಲೆಯೆತ್ತಿದವು. ಬೆಂಗಳೂರಿನ ಹಳೆಯ ರಸ್ತೆಗಳನ್ನು ಗಮನಿಸಿ. ಚಿಕ್ಕಪೇಟೆ ಮತ್ತು ದೊಡ್ಡಪೇಟೆಯ ರಸ್ತೆಗಳು ಪೂರ್ವದಿಂದ ಪಶ್ಚಿಮಕ್ಕೆ, ಹಲಸೂರು ಗೇಟಿಂದ ಸೊಂಡೇಕೊಪ್ಪ ಗೇಟಿಗಾದರೆ, ಉತ್ತರದಿಂದ ದಕ್ಷಿಣಕ್ಕೆ ಯಲಹಂಕ ಗೇಟಿನಿಂದ ಆನೇಕಲ್ ಗೇಟಿಗೆ ರಸ್ತೆಗಳಾದವು. ಈಗ ಇಕ್ಕಟ್ಟೆನಿಸುವ ದಾರಿಗಳು ಈಗಲೂ ಬೆಂಗಳೂರಿನ ಸದಾ ಚಟುವಟಿಕೆಯಿಂದ ಕೂಡಿರುವ ವಾಣಿಜ್ಯದ ಕೇಂದ್ರವಾಗಿವೆ.

ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಕೆಂಪೇಗೌಡರು ಯಲಹಂಕದಲ್ಲಿದ್ದ ತಮ್ಮ ರಾಜಧಾನಿಯನ್ನು ಬೆಂಗಳೂರಿಗೆ ಬದಲಿಸಿ ಮಣ್ಣಿನ ಕೋಟೆಯನ್ನೂ ಕೂಡ ಕಟ್ಟಿಸಿದರು. ಆಗಲೇ ಇದು ಯಶಸ್ವೀ ವಾಣಿಜ್ಯ ನಗರಿಯಾಗಿ ಇವರ ಕೀರ್ತಿ ಹಬ್ಬಿತು. ಇದರಿಂದ ಪ್ರಭುಗಳು ತಾವು ಸಾಮಂತರೆಂಬುವ ಚೌಕಟ್ಟಿನಿಂದಾಚೆಗೂ ಒಂದು ಹೆಜ್ಜೆ ಇಟ್ಟರು. ಟಂಕಸಾಲೆಯನ್ನು ಸ್ಥಾಪಿಸಿ ತಾವೇ ವೀರಭದ್ರ ವರಹವೆಂದು ನಾಣ್ಯವನ್ನು ಚಲಾವಣೆಗೆ ತಂದರು. ಇದು ವಿಜಯನಗರದ ಆಗಿನ ಅರಸು ಸದಾಶಿವ ರಾಯನನ್ನು ಕೆರಳಿಸಿತು. ಇದು ಕೆಂಪೇಗೌಡರ ಬಂಧನಕ್ಕೆ ಕಾರಣವಾಗಿ ಐದು ವರ್ಷಗಳ ಕಾಲ ಕಾರಾಗೃಹದಲ್ಲಿರಬೇಕಾಯಿತು. ಸದಾಶಿವರಾಯನ ನಂತರ ಪಟ್ಟಕ್ಕೆ ಬಂದ ರಾಮರಾಯ. ಆಗ ಅಹಮದ್ ನಗರ, ಬಿಜಾಪುರ ಮತು ಗೋಲ್ಕಂಡದ ಅರಸರು ಒಟ್ಟಾಗಿ ವಿಜಯನಗರದ ಮೇಲೆ ದಾಳಿ ಮಾಡುವ ಭೀತಿಯಿಂದ ತಮ್ಮ ಅವರು ಖಜಾನೆಯನ್ನು ಹಿಗ್ಗಿಸಿಕೊಳ್ಳಬೇಕಾಗಿತ್ತು. ಹಾಗಾಗಿ ಭಾರೀ ಮೊತ್ತದ ಹಣವನ್ನು ಸಂದಾಯ ಮಾಡುವ ಷರತ್ತಿನ ಮೇಲೆ ಕೆಂಪೇಗೌಡರನ್ನು ಬಿಡುಗಡೆ ಮಾಡಿದರು.

ಹಿರಿಯ ಕೆಂಪೇಗೌಡರ ಮಗ ಇಮ್ಮಡಿ ಕೆಂಪೇಗೌಡರು ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿದ್ದೇ ಅಲ್ಲದೇ ಪ್ರಖ್ಯಾತವಾದ ನಾಲ್ಕು ಗೋಪುರಗಳನ್ನು ಕಟ್ಟಿಸಿದರು. ಅವರು ಮಹಾನ್ ಯೋಧರಾಗಿದ್ದರೂ ಬಿಜಾಪುರ ಸುಲ್ತಾನರ ವಿರುದ್ಧವಾಗಿ ಹೋರಾಡಲಾಗಲಿಲ್ಲ. ಬಿಜಾಪುರದ ಸುಸಜ್ಜಿತ ಸೇನೆಯಿಂದ ಕೋಟೆಯ ದ್ವಾರಗಳನ್ನು ತೆರೆಯಲು ಒತ್ತಡ ತಂದಾಗ ವಿಧಿಯಿಲ್ಲದೇ ವಿಜಯಿಗಳಿಗೆ ಬೆಂಗಳೂರನ್ನು ಒಪ್ಪಿಸಿ ಮಾಗಡಿಗೆ ಸರಿಯಬೇಕಾಯಿತು.

ಕುತೂಹಲಕರವಾದ ಸಂಗತಿಯೆಂದರೆ, ಛತ್ರಪತಿ ಶಿವಾಜಿಯ ತಂದೆ ಶಹಜಿ ಭೋನ್‍ಸ್ಲೇ ಬಿಜಾಪುರ ಸೇನೆಯ ಮುಂದಾಳಾಗಿದ್ದವರು. ಶಹಜಿಯ ಶೌರ್ಯದಿಂದ ಸಂಪ್ರೀತನಾದ ಎರಡನೆಯ ಅಲಿ ಆದಿಲ್ ಷಾ ಬೆಂಗಳೂರನ್ನು ಜಹಗೀರಾಗಿ ಶಹಜಿಗೇ ಕೊಟ್ಟರು. ಇದರಿಂದಾಗಿ ಶಹಜಿಯ ಇಬ್ಬರು ಮಕ್ಕಳು ಶಿವಾಜಿ ಮತ್ತು ವೆಂಕೋಜಿ ಇಬ್ಬರೂ ಬೆಂಗಳೂರಲ್ಲಿ ಬೆಳೆದರು. ಶಹಜಿಯ ಮರಣಾನಂತರ ಶಿವಾಜಿಗೆ ಪುಣೆಯ ಭಾಗವೂ, ವೆಂಕೋಜಿಗೆ ಬೆಂಗಳೂರಿನ ಭಾಗವೂ ಲಭಿಸಿತು. ಸ್ವಯಂ ಸೇನಾನಿಯಾಗಿದ್ದ ವೆಂಕೋಜಿಯು ತಂಜಾವೂರನ್ನು ವಶಪಡಿಸಿಕೊಂಡು ತನ್ನ ಕೇಂದ್ರವನ್ನು ಅಲ್ಲಿಗೆ ವರ್ಗಾಯಿಸಲು ಆಲೋಚಿಸಿದರು. ತನ್ನ ತುಂಬಿದ ಕೈಗಳಿಂದಾಗಿ ಬೆಂಗಳೂರಿನ ಬಿರುಸಿನ ಚಟುವಟಿಕೆಗಳನ್ನು ನಿರ್ವಹಿಸುವ ಒತ್ತಡವನ್ನು ತಾಳದೇ ಇದನ್ನು ಚಿಕ್ಕದೇವರಾಜ ಒಡೆಯರಿಗೆ ಮೂರು ಲಕ್ಷ ರೂಪಾಯಿಗಳ ರಾಯಧನಕ್ಕೆ ಮಾರುವ ನಿರ್ಧಾರ ಮಾಡಿದರು.

ಬೆಂಗಳೂರಿನೊಂದಿಗೆ ಬಹಳ ಭಾವನಾತ್ಮಕ ಸಂಬಂಧವಿದ್ದ ಶಿವಾಜಿಗೆ ವೆಂಕೋಜಿಯ ಆಲೋಚನೆ ತಿಳಿದು ಭಲೇ ಕೋಪ ಬಂತು. ಬೆಂಗಳೂರನ್ನು ಮಾರದಿರಲು ತಮ್ಮ ಸೋದರನನ್ನು ಕೋರಿಕೊಂಡರು. ವೆಂಕೋಜಿ ಮತ್ತು ಒಡೆಯರ್ ನಡುವೆ ಮಾತುಕತೆಗಳು ನಡೆಯುತ್ತಿರುವಾಗಲೇ ಶಿವಾಜಿಯ ದೇಹಾಂತ್ಯವಾಯಿತು. ಮೊಘಲರು ಮತ್ತು ಮರಾಠರಿಬ್ಬರೂ ಬೆಂಗಳೂರನ್ನು ವಶಪಡಿಸಿಕೊಳ್ಳುವ ಇರಾದೆಯಲ್ಲಿದ್ದರು. ಆದರೆ, ಮರಾಠರ ದುರದೃಷ್ಟಕ್ಕೆ ಮೊಘಲರ ಸೇನೆ ಮುಂದಾಗಿ ಬಂತು ಮತ್ತು 1687ರಲ್ಲಿ ವೆಂಕೋಜಿಯನ್ನು ಪರಾಜಯಗೊಳಿಸಿತು.

ಹಸನ್ ಗುರುತಿಸುವಂತೆ ಕಾಸ್ಮಾಪಾಲಿಟನ್ (ಸಮದರ್ಶಿ ಅಥವಾ ವಿಶ್ವಪ್ರಜೆ) ಗುಣ ಈ ನಗರದ ಚರಿತ್ರೆಯಲ್ಲೇ ಬೇರುಬಿಟ್ಟಿದೆ. ಮೊಘಲರ ಅಧಿಕಾರಿಗಳು ಮತ್ತು ಯೋಧರು ಪುಶ್ತು, ಪಂಜಾಬಿ, ಗುಜರಾತಿ, ರಾಜಸ್ತಾನಿ, ಮೊಘಲಾಯಿ ಮತು ಪಾರ್ಸಿ ಭಾಷೆಗಳನ್ನು ಆಡುತ್ತಿದ್ದರು. ಸ್ಥಳೀಯರು ಮತ್ತು ಹೊರಗಿಂದ ಬಂದವರಿಗೆ ಸಂಪರ್ಕ ಭಾಷೆಯಾಗಿದ್ದದ್ದು ದಕ್ಷಿಣದಲ್ಲಿ ದಖನಿ ಎಂದು ಕರೆಯಿಸಿಕೊಳ್ಳಲ್ಪಡುವ ರೆಖ್ತಾ ಮತ್ತು ವಿಂಧ್ಯ ಪ್ರಾಂತ್ಯವನ್ನು ದಾಟಿ ರೂಪುಗೊಂಡಿದ್ದ ಉರ್ದು. ಮೊಘಲರು ಬೆಂಗಳೂರಿನಲ್ಲಿ ತಮ್ಮ ಚಟುವಟಿಕೆಗಳಲ್ಲಿ ನಿರತವಾಗಿರುವಾಗಲೇ ಒಡೆಯರ್ ತಮ್ಮ ಬೆಂಗಳೂರು ಕೊಳ್ಳುವ ಪ್ರಸ್ತಾಪವನ್ನು ಮತ್ತೆ ಮುಂದಿಟ್ಟರು. ಆಗ 1690ರಲ್ಲಿ ಮೊಘಲರು ಒಡೆಯರಿಗೆ, ಮೊದಲು ವೆಂಕೋಜಿಯ ಜೊತೆ ಮಾತಾಡಿದ್ದ ಮೊತ್ತಕ್ಕೇ ಮಾರಿದರು.

ಚಿಕ್ಕದೇವರಾಜ ಒಡೆಯರ್ ಕೂಡಾ ಕೆಂಪೇಗೌಡರಂತೆ ಬೆಂಗಳೂರಿನ ಅಭಿವೃದ್ಧಿಗೆ ಹಾತೊರೆದರು. ಆದರೆ ಅವರ ಮರಣಾನಂತರ ತಮ್ಮ ನೆರೆಹೊರೆಯ ಪ್ರಾಂತ್ಯಗಳ ನಿರಂತರ ದಾಳಿ ಮತ್ತು ಕಿರುಕುಳಗಳಿಂದ ಮೈಸೂರು ಸೊರಗಿತು. ಆಗ ಮೈಸೂರು ಅರ್ಕಾಟಿನ ನವಾಬನಿಗೆ ನಾಲ್ಕು ಕೋಟಿಗಳ ಬಾಕಿಯನ್ನು ಸಲ್ಲಿಸಬೇಕಿತ್ತು, ಸಲಾಬತ್ ಜಂಗ್ 56 ಲಕ್ಷ ರೂಪಾಯಿಗಳನ್ನು ಕಸಿದುಕೊಂಡ. ಪೇಶ್ವೆ ಬಾಲಾಜಿ ರಾವ್ ಒತ್ತಾಯಪೂರ್ವಕವಾಗಿ 32 ಲಕ್ಷ ರೂಪಾಯಿಗಳನ್ನು ಪಡೆದರು. ಒಡೆಯರ್ ಅರಸೊತ್ತಿಗೆಯು ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ಎದುರಿಸುವಾಗ ನೆರವಿಗೆ ಬಂದಿದ್ದು ಪರಾಕ್ರಮಿ ಯೋಧ ಹೈದರ್ ಅಲಿ. ಮತ್ತೊಮ್ಮೆ ಮರಾಠ ಸೈನ್ಯ ಮೈಸೂರಿನ ಮೇಲೆ ದಾಳಿ ಮಾಡಿದಾಗ ಎದುರಿಸಿದ್ದು ಇದೇ ಹೈದರ್ ಅಲಿ. ತಮ್ಮ ಅರಸೊತ್ತಿಗೆಯನ್ನು ಕಾಪಾಡಿದ್ದಕ್ಕೆ ಸಂತುಷ್ಟಗೊಂಡ ಮೈಸೂರಿನ ಅರಸರು ಫತೇ ಹೈದರ್ ಬಹಾದ್ದೂರ್ ಎಂದು ಬಿರುದು ನೀಡಿ ಗೌರವಿಸಿ ಬೆಂಗಳೂರು ಮತ್ತು ಸುತ್ತಮುತ್ತಲ ಪ್ರದೇಶಗಳನ್ನು ಜಹಗೀರಾಗಿ ನೀಡಿದರು. ಹೈದರ್ ಅಲಿ ಮರಾಠರ ದಾಳಿಗಳನ್ನು ಎದುರಿಸಲು ಕೆಂಪೇಗೌಡರು ಮಣ್ಣಿಂದ ಕಟ್ಟಿದ್ದ ಕೋಟೆಯನ್ನು ಕಲ್ಲಿನಿಂದ ಮರು ನಿರ್ಮಾಣ ಮಾಡಿದ ಮೇಲೆ ಇದು ಸೇನೆಯ ಕೇಂದ್ರವಾಯಿತು. ಶಸ್ತ್ರಾಸ್ತ್ರಗಳು ಮತ್ತು ಯುದ್ಧೋಪಕರಣಗಳ ತಯಾರಿಕೆಗಳಾಗತೊಡಗಿದವು.

ನಂತರ ಬಂದ ಬ್ರಿಟಿಷರು ಬೆಂಗಳೂರಿನ ಮಹತ್ವವನ್ನು ಅರಿತು ಅದನ್ನು ವಶಪಡಿಸಿಕೊಳ್ಳಲು ಯತ್ನಿಸಿದರು. ಮೊದಲಿನ ಪ್ರಯತ್ನಗಳು ವಿಫಲವಾದರೂ 1791ರಲ್ಲಿ ಮಾಡಿದ ಮಹಾಯುದ್ಧದಲ್ಲಿ ಬೆಂಗಳೂರನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ಸು ಸಾಧಿಸಿದರು. ಹಸನ್ ದಾಖಲಿಸುವಂತೆ ಈ ಯುದ್ಧ ಅದೆಷ್ಟು ಭೀಕರವಾಗಿತ್ತೆಂದರೆ ಕೋಟೆಯ ವಿಸ್ತಾರದ ಪ್ರದೇಶಗಳು ಮತ್ತು ಹಳೆಯ ಪಟ್ಟಣ ಜರ್ಜರಿತವಾಗಿ ಅಕ್ಷರಶಃ ಸ್ಮಶಾನವಾಗಿತ್ತು. ಆದರೆ ಒಂದು ವರ್ಷ ತಮ್ಮ ಅಧೀನದಲ್ಲಿಟ್ಟುಕೊಂಡಿದ್ದವರು ನಂತರ ಶ್ರೀರಂಗಪಟ್ಟಣದ ಸಂಧಾನದಂತೆ ಟಿಪ್ಪುವಿಗೆ ಮರಳಿ ನೀಡಬೇಕಾಯಿತು.

1799ನಲ್ಲಿ ಟಿಪ್ಪುವಿನ ಮರಣಾನಂತರ ಬೆಂಗಳೂರನ್ನು ಒಡೆಯರವರ ಅಧೀನಕ್ಕೆ ನೀಡಲಾಯಿತು. 1809ರಲ್ಲಿ ಬ್ರಿಟಿಷರು ಬೆಂಗಳೂರು ನಗರದಲ್ಲಿ ಸೇನೆಯ ದಂಡುಪ್ರದೇಶವನ್ನು (ಕಂಟೋನ್ಮೆಂಟ್) ನಿರ್ಮಿಸಿದರು. ಈ ದಂಡು ಪ್ರದೇಶ ವಿಸ್ತಾರವಾದಂತೆ ನಗರದ ಭಾಗವಾಗಿಬಿಟ್ಟಿತು. ಇಲ್ಲೊಂದು ವಿಲಕ್ಷಣ ಸನ್ನಿವೇಶವಿತ್ತು. ಅದೇನೆಂದರೆ, ಮೈಸೂರು ಮಹಾರಾಜರು ನಗರ ಭಾಗದ ಮುಖ್ಯಸ್ಥರಾದರೆ, ದಂಡುಪ್ರದೇಶದ ಯಜಮಾನಿಕೆ ಬ್ರಿಟಿಷರಲ್ಲಿಯೇ ಇತ್ತು. ಸ್ವಾತಂತ್ರ್ಯ ಹೋರಾಟವು ತೀವ್ರತೆಯನ್ನು ಪಡೆದುಕೊಳ್ಳುತ್ತಿದ್ದ ಸಮಯವದು. ಮಹಾರಾಜರು ದಂಡುಪ್ರದೇಶವೂ ತಮ್ಮ ಅಧಿಪತ್ಯಕ್ಕೇ ಒಳಪಡಬೇಕೆಂದು ಒತ್ತಾಯಿಸತೊಡಗಿದರು. ಭಾರತವು ಸ್ವಾತಂತ್ರ್ಯದ ಹೊಸ್ತಿಲಿನಲ್ಲಿರುವಾಗಲೇ 1947ನೇ ವರ್ಷದಲ್ಲೇ ಜುಲೈ 26ರಂದು ಬ್ರಿಟಿಷರು ದಂಡುಪ್ರದೇಶವನ್ನು ಮಹಾರಾಜರಿಗೆ ನೀಡಿದರು. ಎರಡು ವರ್ಷಗಳ ತರುವಾಯ, 1948ರಲ್ಲಿ ಕಂಟೋನ್ಮೆಂಟ್ ಪ್ರದೇಶವು ಬೆಂಗಳೂರು ನಗರದೊಳಗೇ ಸೇರಲ್ಪಟ್ಟು ಬೆಂಗಳೂರು ಮುನ್ಸಿಪಲ್ ಕಾರ್ಪೋರೇಶನ್ ರಚನೆಯಾಯಿತು.

ಇಲ್ಲಿಗೆ ಗೌರಿ ಲಂಕೇಶ್ ಪುಸ್ತಕದ ಬಗ್ಗೆ ಬರೆಯುವಲ್ಲಿ ಲೇಖನಿಗೆ ವಿರಾಮ ನೀಡುತ್ತಾರೆ.

175 ಪುಟಗಳ ಈ ಪುಸ್ತಕದಲ್ಲಿ ಎಂ ಫಜ್ಲುಲ್ ಹಸನ್ ಹಲವಾರು ಹಳೆಯ ಚಿತ್ರಗಳ ದಾಖಲೆಗಳನ್ನು ನೀಡುತ್ತಾರೆ. ಗವಿಗಂಗಾಧರೇಶ್ವರ ಸ್ವಾಮಿ ದೇವಸ್ಥಾನದಂತಹ ಐತಿಹಾಸಿಕ ಮಹತ್ವದ ಅನೇಕ ದೇವಾಲಯಗಳ ಚರಿತ್ರೆಯನ್ನೂ, ಬೆಂಗಳೂರಿನ ಪ್ರಖ್ಯಾತ ಕರಗವು ಮೈದಳೆದಿರುವುದನ್ನೂ ವಿವರಿಸುತ್ತಾರೆ. ಬೆಂಗಳೂರಿನ ಮುಖ್ಯ ಆಯುಕ್ತರ ಕಚೇರಿಗಳು ಮತ್ತು ಇತರ ಸಾರ್ವಜನಿಕ ಕಚೇರಿಗಳು ಸ್ಥಾಪಿತವಾಗಿ ಬೆಳೆದುಬಂದ ರೀತಿಯನ್ನು ವಿವರಿಸುತ್ತಾರೆ. ಬೆಂಗಳೂರು ಉದ್ಯಾನ ನಗರವಾಗಿರುವುದರ ಐತಿಹಾಸಿಕ ವಿವರಗಳೊಂದಿಗೆ ಪುಸ್ತಕವನ್ನು ಮುಗಿಸುತ್ತಾರೆ. ಒಟ್ಟಾರೆ ನಾವಿರುವ ನೆಲದ ಕತೆ ಅದೆಷ್ಟು ಥ್ರಿಲ್ ಆಗಿದೆ ಎಂದು ಪುಳಕಗೊಳ್ಳಲು ಪುಸ್ತಕ ಪ್ರೇರೇಪಿಸುತ್ತದೆ. ಜಯನಗರದ ಹಿಸ್ಟಾರಿಕಲ್ ಪಬ್ಲಿಕೇಶನ್ಸ್ 1970ರಲ್ಲಿ ಇದನ್ನು ಪ್ರಕಟಿಸಿದ್ದು ಸದ್ಯಕ್ಕೆ ಪ್ರತಿಗಳು ಸಿಗುವ ಅವಕಾಶದ ಬಗ್ಗೆ ತಿಳಿಯದು. ಆದರೆ Digital Rare Book ನ ರೇರ್ ಬುಕ್ ಸೊಸೈಟಿ ಆಫ್ ಇಂಡಿಯಾದ ಅಂತರ್ಜಾಲದಲ್ಲಿ ಪಿಡಿಎಫ್ ಡೌನ್ಲೋಡ್ ಮಾಡಿಕೊಂಡು ಇಡೀ ಪುಸ್ತಕ ಓದಬಹುದು.


ಇದನ್ನೂ ಓದಿ: ಪುಟಕಿಟ್ಟ ಪುಟಗಳು: ದಿವ್ಯ ಜೀವನಕೆ ಪ್ರವೇಶಿಕೆ ಎಂಬ ಆಪ್ತ ಸಮಾಲೋಚನೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....