ನಟ ದರ್ಶನ್ ಬಂಧಿತರಾಗಿರುವ ಪ್ರಕರಣದಲ್ಲಿ ಕೊಲೆಯಾಗಿರುವ ರೇಣುಕಾಸ್ವಾಮಿಯ ಮೊಬೈಲ್ ಫೋನ್ ಹುಡುಕಲು ಪೌರ ಕಾರ್ಮಿಕರನ್ನು ರಾಜಕಾಲುವೆಗೆ ಇಳಿಸಿದ ಬಿಬಿಎಂಪಿಗೆ ಸಮಾಜ ಕಲ್ಯಾಣ ಇಲಾಖೆ ನೋಟಿಸ್ ನೀಡಿದೆ.ರೇಣುಕಾಸ್ವಾಮಿಯ ಮೊಬೈಲ್ ಹುಡುಕಲು ಮೂತ್ರದಿಂದ ತುಂಬಿದ ಕೊಳಚೆ ಕಾಲುವೆಗೆ ಅಮಾಯಕ ಪರಿಶಿಷ್ಟ ಜಾತಿ ವರ್ಗದ ಪೌರ ಕಾರ್ಮಿಕರನ್ನು ಯಾವುದೇ ಸುರಕ್ಷಾ ವಿಧಾನಗಳಿಲ್ಲದೆ ಇಳಿಸಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿಎಸ್ಎಸ್) ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗಕ್ಕೆ ದೂರು ನೀಡಿತ್ತು.
ರೇಣುಕಾಸ್ವಾಮಿಯ ಮೃತದೇಹ ಸುಮ್ಮನಹಳ್ಳಿ ಸುಂಕದಕಟ್ಟೆ ರಾಜಕಾಲುವೆ ಬಳಿ ಪತ್ತೆಯಾಗಿತ್ತು. ಹಂತಕರು ರೇಣುಕಾಸ್ವಾಮಿಯ ಮೊಬೈಲ್ ಫೋನ್ ಅನ್ನು ಅದೇ ಕಾಲುವೆಗೆ ಎಸೆದಿದ್ದಾರೆಂದು ಪೊಲೀಸರು ಬಿಬಿಎಂಪಿ ಮೂಲಕ ಪೌರ ಕಾರ್ಮಿಕರನ್ನು ಯಾವುದೇ ಸುರಕ್ಷಾ ವಿಧಾನಗಳಿಲ್ಲದೆ ಕಾಲುವೆಗೆ ಇಳಿಸಿದ್ದಾರೆ. ಈ ಮೂಲಕ ನಿಯಮ ಉಲ್ಲಂಘಿಸಿದ್ದಾರೆ ಎಂದು ಡಿಎಸ್ಎಸ್ ದೂರಿನಲ್ಲಿ ಆರೋಪಿಸಿತ್ತು.
ನಿಯಮಾವಳಿಗಳನ್ನು ಉಲ್ಲಂಘಿಸಿ ಪರಿಶಿಷ್ಟ ಜಾತಿ ವರ್ಗದ ಪೌರ ಕಾರ್ಮಿಕರನ್ನು ಬಳಸಿಕೊಂಡಿರುವ ಬಗ್ಗೆ ಕೂಲಂಕುಷ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ದ ಪರಿಶಿಷ್ಟ ಜಾತಿ/ ವರ್ಗದ ದೌರ್ಜನ್ಯ ತಡೆ ಕಾಯ್ದೆ, ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ವೃತ್ತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ 2013 ಮತ್ತು ಇತರ ಸಂಬಂಧಿತ ಕಾಯ್ದೆಗಳಡಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿತ್ತು.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಬಿಬಿಎಂ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗಕ್ಕೆ ಡಿಎಸ್ಎಸ್ ದೂರು ನೀಡಿತ್ತು. ಈ ಹಿನ್ನೆಲೆ ಬಿಬಿಎಂಪಿ ಆಯುಕ್ತರಿಗೆ ನೋಟಿಸ್ ಜಾರಿ ಮಾಡಿರುವ ಸಮಾಜ ಕಲ್ಯಾಣ ಇಲಾಖೆಯ ಅಧೀನ ಸಫಾಯಿ ಕರ್ಮಚಾರಿಗಳ ಆಯೋಗ, ಪೌರ ಕಾರ್ಮಿಕರನ್ನು ರಾಜ ಕಾಲುವೆ ಪರಿಶೀಲನೆಗೆ ಬಳಸಿಕೊಂಡಿರುವ ಬಗ್ಗೆ ತುರ್ತಾಗಿ ವರದಿ ಸಲ್ಲಿಸುವಂತೆ ಸೂಚಿಸಿದೆ.
ಇದನ್ನೂ ಓದಿ : ಭ್ರೂಣ ಲಿಂಗ ಪತ್ತೆ ಬಗ್ಗೆ ಸುಳಿವು ನೀಡಿದವರಿಗೆ 1 ಲಕ್ಷ ರೂ ಬಹುಮಾನ ಘೋಷಣೆ