ಒಕ್ಕೂಟ ಸರ್ಕಾರದ ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಒತ್ತಾಯಿಸಿ ಮತ್ತು ಎಂಎಸ್ಪಿ ಖಾತ್ರಿ ಕಾನೂನು ಜಾರಿಗೆ ಆಗ್ರಹಿಸಿ ರೈತರು ದೆಹಲಿಯ ಗಡಿಗಳಲ್ಲಿ ನಡೆಸುತ್ತಿರುವ ಹೋರಾಟಕ್ಕೆ ಒಂದು ವರ್ಷ ತುಂಬುತ್ತಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ರೈತ ಹೋರಾಟ ಮತ್ತೆ ಗರಿಗೆದರಲಿದೆ. ಒಂದು ವರ್ಷದ ನೆನೆಪಿನಲ್ಲಿ ಮಹಾರಾಷ್ಟ್ರದ ಮುಂಬೈ ಮತ್ತು ಉತ್ತರ ಪ್ರದೇಶದ ಲಕ್ನೋಗಳಲ್ಲಿ ರೈತ ಮಹಾಪಂಚಾಯತ್ ಹೋರಾಟ ಹಮ್ಮಿಕೊಳ್ಳಲಾಗಿದೆ.
ಮಹಾರಾಷ್ಟ್ರದ 100 ಕ್ಕೂ ಹೆಚ್ಚು ರೈತ ಸಂಘಟನೆಗಳು ನವೆಂಬರ್ 28, 2021 ರಂದು ಮುಂಬೈನ ಆಜಾದ್ ಮೈದಾನದಲ್ಲಿ ‘ಕಿಸಾನ್ ಮಜ್ದೂರ್ ಮಹಾಪಂಚಾಯತ್’ ಆಚರಿಸಲು ನಿರ್ಧರಿಸಿವೆ. ಸಂಯುಕ್ತ ಶೇತ್ಕರ್ ಕಾಮಗಾರ್ ಮೋರ್ಚಾ ವೇದಿಕೆಯ ಅಡಿಯಲ್ಲಿ ಈ ಹೋರಾಟ ನಡೆಯಲಿದೆ.
ಥಾಣೆ, ಪಾಲ್ಘರ್ ಮತ್ತು ನಾಸಿಕ್ ಜಿಲ್ಲೆಗಳ ರೈತರು ಮತ್ತು ಕಾರ್ಮಿಕರು ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದು ಸುಮಾರು 60,000 ಜನರು ಭಾಗವಹಿಸುವ ನಿರೀಕ್ಷೆಯಿದೆಯೆಂದು ಸಬ್ರಂಗ್ ಪತ್ರಿಕೆ ವರದಿ ಮಾಡಿದೆ.
ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ಒಕ್ಕೂಟದ ರಾಷ್ಟ್ರೀಯ ನಾಯಕರೊಂದಿಗೆ ಡಿವೈಎಫ್ಐ, ಎಸ್ಎಫ್ಐ ಮತ್ತು ಶಿಕ್ಷಕರ ಮೋರ್ಚಾದಂತಹ ಟ್ರೇಡ್ ಯೂನಿಯನ್ಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ.
ಮಹಾಪಂಚಾಯತ್ಗೆ ಒಂದು ದಿನ ಮುಂಚಿತವಾಗಿ, ಉತ್ತರ ಪ್ರದೇಶದ ಲಖಿಂಪುರ ಖೇರಿ ಹತ್ಯಾಕಾಂಡದಲ್ಲಿ ಹುತಾತ್ಮರ ನೆನಪಿನ ಕಳಶ ಯಾತ್ರೆಗಳು ನವೆಂಬರ್ 27 ರಂದು ನಗರಕ್ಕೆ ಆಗಮಿಸಲಿವೆ. ಮರುದಿನ ಸಂಜೆ ಗೇಟ್ವೇ ಆಫ್ ಇಂಡಿಯಾದಲ್ಲಿ ಒಗ್ಗೂಡಿ ಹುತಾತ್ಮರ ಚಿತಾಭಸ್ಮವನ್ನು ಅರಬ್ಬಿ ಸಮುದ್ರದಲ್ಲಿ ವಿಸರ್ಜಿಸಲಾಗುವುದು ಎನ್ನಲಾಗಿದೆ.
ಮೇಧಾ ಪಾಟ್ಕರ್, ಪ್ರತಿಭಾ ಶಿಂಧೆ, ನಾಮದೇವ್ ಗಾವಡೆ, ಮಿಲಿಂದ್ ರಾನಡೆ, ಕಿಸಾನ್ ಗುಜಾರ್, ಡಾ ಅಜಿತ್ ನವಲೆ, ಡಾ ಎಸ್ ಕೆ ರೇಗೆ, ಶೈಲೇಂದ್ರ ಕಾಂಬಳೆ ಮುಂತಾದವರು ಹೋರಾಟದಲ್ಲಿ ಭಾಗಿಯಾಗಲಿದ್ದಾರೆ.
ಇನ್ನು ಲಕ್ನೋದಲ್ಲಿ ನವೆಂಬರ್ 22 ರಂದು ಮಹಾಪಂಚಾಯತ್ ಹಮ್ಮಿಕೊಳ್ಳಲಾಗುವುದು ಎಂದು ಬಿಕೆಯು ಮುಖಂಡ ರಾಕೇಶ್ ಟಿಕಾಯತ್ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, “ನವೆಂಬರ್ 22 ರಂದು ಲಕ್ನೋದಲ್ಲಿ ಆಯೋಜಿಸಲಾದ ಕಿಸಾನ್ ಮಹಾಪಂಚಾಯತ್ ಐತಿಹಾಸಿಕವಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾದ ಈ ಮಹಾಪಂಚಾಯತ್ ರೈತ ವಿರೋಧಿ ಸರ್ಕಾರ ಮತ್ತು ಮೂರು ಕರಾಳ ಕಾನೂನುಗಳ ಶವಪೆಟ್ಟಿಗೆಗೆ ಕೊನೆಯ ಮೊಳೆ ಎಂದು ಸಾಬೀತುಪಡಿಸುತ್ತದೆ. ಈಗ ಪೂರ್ವಾಂಚಲದಲ್ಲೂ ಅನ್ನದಾತರ ಚಳವಳಿ ತೀವ್ರಗೊಳ್ಳಲಿದೆ” ಎಂದು ಘೋಷಿಸಿದ್ದಾರೆ.
• ऐतिहासिक होगी लखनऊ में आयोजित 22 नवंबर की किसान महापंचायत ।
• SKM की यह महापंचायत किसान विरोधी सरकार और तीनों काले कानूनों के विरोध में ताबूत में आखिरी कील साबित होगी ।
• अब पूर्वांचल में भी और तेज होगा अन्नदाता का आंदोलन ।#22NovemberLucknowKisanMahapanchayat— Rakesh Tikait (@RakeshTikaitBKU) November 9, 2021
ಇದನ್ನೂ ಓದಿ: ಲಕ್ನೋದಲ್ಲಿ ಕಿಸಾನ್ ಮಹಾಪಂಚಾಯತ್: ಬಿಜೆಪಿ ವಿರುದ್ಧ ರೈತರ ಸಮರ