ಅಕ್ಟೋಬರ್ 2 ರಂದು ಮುಂಬೈ ಕರಾವಳಿಯಲ್ಲಿ ನಡೆದ ಕ್ರೂಸ್ ಶಿಪ್ ಪಾರ್ಟಿಗೆ ಕಾಶಿಫ್ ಖಾನ್ ಎಂಬಾತ ನನ್ನನ್ನು ಆಹ್ವಾನಿಸಿದ್ದ ಎಂದು ಮಂಗಳವಾರ ಮಹಾರಾಷ್ಟ್ರದ ಸಚಿವ ಮತ್ತು ಕಾಂಗ್ರೆಸ್ ನಾಯಕ ಅಸ್ಲಾಮ್ ಶೇಖ್ ಹೇಳಿದ್ದಾರೆ.
ಈ ಪಾರ್ಟಿಯಲ್ಲಿ ಡ್ರಗ್ಸ್ ಬಳಕೆ ಕುರಿತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅಧಿಕಾರಿಗಳು ದಾಳಿ ನಡೆಸಿದ್ದರು. ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಈ ದಾಳಿಯಲ್ಲಿ ಬಂಧಿಸಲಾಗಿತ್ತು.
ಕ್ರೂಸ್ ಶಿಫ್ ಪಾರ್ಟಿಯ ಸಂಘಟಕರಾದ ಕಾಶಿಫ್ ಖಾನ್ ಅವರು ಕಾಂಗ್ರೆಸ್ ನಾಯಕ ಅಸ್ಲಾಮ್ ಶೇಖ್ ಮತ್ತು ರಾಜ್ಯ ಸರ್ಕಾರದ ಉನ್ನತ ಸಚಿವರ ಮಕ್ಕಳನ್ನು ಆ ಪಾರ್ಟಿಗೆ ಹಾಜರಾಗುವಂತೆ ಮಾಡಲು ತುಂಬಾ ಶ್ರಮಿಸಿದ್ದರು ಎಂದು ಎನ್ಸಿಪಿ ಸಚಿವ ನವಾಬ್ ಮಲಿಕ್ ಆರೋಪಿಸಿದ್ದರು. ಇದಾದ ಒಂದು ದಿನದ ನಂತರ ಅಸ್ಲಾಮ್ ಶೇಖ್ ಅವರ ಹೇಳಿಕೆ ಬಂದಿದೆ.
ಇದನ್ನೂ ಓದಿ: ಡ್ರಗ್ಸ್ ಪ್ರಕರಣದಲ್ಲಿ ಪ್ರತಿಕ್ರಿಯೆ ನೀಡದಂತೆ ಸಚಿವ ನವಾಬ್ ಮಲಿಕ್ ವಿರುದ್ಧ ಪಿಐಎಲ್
“ವೈಯಕ್ತಿಕವಾಗಿ ನನಗೆ ಕಾಶಿಫ್ ಖಾನ್ ಎಂಬ ವ್ಯಕ್ತಿ ತಿಳಿದಿಲ್ಲ. ನಾನು ಅವರನ್ನು ಈ ಮೊದಲು ಭೇಟಿ ಮಾಡಿಲ್ಲ. ಮುಂಬೈನ ಸಚಿವನಾಗಿರುವುದರಿಂದ ನನ್ನನ್ನು ವಿವಿಧ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗುತ್ತದೆ. ಇದು ಕೂಡ ಅಂತಹ ಆಹ್ವಾನಗಳಲ್ಲಿ ಒಂದಾಗಿದೆ. ಅವರ ಜೊತೆ ಫೋನ್ನಲ್ಲಿ ಮಾತಾಡಿರುವ ನೆನಪಿಲ್ಲ. ಏಕೆಂದರೆ ಆತ ನನಗೆ ವೈಯಕ್ತಿಕವಾಗಿ ಗೊತ್ತಿಲ್ಲ. ಆತನ ನಂಬರ್ ಕೂಡ ನನ್ನ ಬಳಿ ಇಲ್ಲ. ಆದರೆ, ಯಾವುದೋ ಕಾರ್ಯಕ್ರಮದಲ್ಲಿ ಭೇಟಿಯಾಗಿ ಪಾರ್ಟಿಗೆ ಆಹ್ವಾನಿಸಿದ್ದರು. ಅದು ಅಲ್ಲಿಗೆ ಮುಗಿಯಿತು” ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
’ಸುಮಾರು ಎರಡು ವರ್ಷಗಳ ಹಿಂದೆ ಮಹಾ ವಿಕಾಸ್ ಅಘಾಡಿ ಬಣ ರಚನೆಯಾದಾಗಿನಿಂದ ಮಹಾರಾಷ್ಟ್ರ ಸರ್ಕಾರ ಮತ್ತು ಅದರ ಮಂತ್ರಿಗಳನ್ನು ದೂಷಿಸಲು ಸಂಘಟಿತ ಪ್ರಯತ್ನಗಳನ್ನು ಮಾಡಲಾಗಿದೆ ಎಂದು ಸಚಿವ ಅಸ್ಲಾಮ್ ಶೇಖ್ ಬಿಜೆಪಿ ಮತ್ತು ಕೇಂದ್ರವನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ.
ಕ್ರೂಸ್ ಶಿಪ್ ಪಾರ್ಟಿ ಮೇಲಿನ ದಾಳಿಯ ಮೇಲೆ ಎಲ್ಲಾ ಗಮನವನ್ನು ಕೇಂದ್ರೀಕರಿಸಲಾಗಿದೆ. ಆದರೆ, ಸೆಪ್ಟೆಂಬರ್ನಲ್ಲಿ ಗುಜರಾತ್ನಲ್ಲಿ ಬಹುಕೋಟಿ ಮಾದಕವಸ್ತು ವಶಪಡಿಸಿಕೊಂಡ ಬಗ್ಗೆ ಇದೇ ರೀತಿಯ ಗಮನ ನೀಡಿಲ್ಲ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ಸರ್ಕಾರ ಮತ್ತು ಬಾಲಿವುಡ್ಗೆ ಮಸಿ ಬಳಿಯಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪಿತೂರಿ ನಡೆಸುತ್ತಿದೆ. ಡ್ರಗ್ಸ್ ಪ್ರಕರಣವೇ ನಕಲಿ ಎಂದು ಒಕ್ಕೂಟ ಸರ್ಕಾರ ಮತ್ತು ಎನ್ಸಿಬಿ ವಿರುದ್ಧ ಸಚಿವ ನವಾಬ್ ಮಲಿಕ್ ಆರೋಪಿಸಿದ್ದಾರೆ.
ಇದನ್ನೂ ಓದಿ: ‘ನಿಮ್ಮ ಅತ್ತಿಗೆ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದಾರಾ?’: NCB ಅಧಿಕಾರಿಗೆ ನವಾಬ್ ಮಲಿಕ್ ಪ್ರಶ್ನೆ