ಕೇಂದ್ರದ ‘ಕಾರ್ಮಿಕ, ರೈತ ವಿರೋಧಿ ಮತ್ತು ಕಾರ್ಪೊರೇಟ್ ಪರ’ ನೀತಿಗಳ ವಿರುದ್ಧ ಇಂದು (ಜು.9) ದೇಶದಾದ್ಯಂತ ಬೃಹತ್ ಮುಷ್ಕರಕ್ಕೆ ಕರೆ ಕೊಡಲಾಗಿದೆ. ವಿವಿಧ ಕ್ಷೇತ್ರಗಳ 25 ಕೋಟಿಗೂ ಹೆಚ್ಚು ಕಾರ್ಮಿಕರು ಪ್ರತಿಭಟನೆ ನಡೆಸಲಿದ್ದಾರೆ.
ರೈತ ಸಂಘಟನೆಗಳು ಮತ್ತು ಕಾರ್ಮಿಕ ಗುಂಪುಗಳ ಬೆಂಬಲದೊಂದಿಗೆ 10 ಕೇಂದ್ರ ಕಾರ್ಮಿಕ ಸಂಘಗಳ ಜಂಟಿ ವೇದಿಕೆಯು ಸಾರ್ವತ್ರಿಕ ಮುಷ್ಕರ ಅಥವಾ ‘ಭಾರತ್ ಬಂದ್’ಗೆ ಕರೆ ಕೊಟ್ಟಿದೆ. ಬ್ಯಾಂಕಿಂಗ್, ಅಂಚೆ ಕಾರ್ಯಾಚರಣೆಗಳು, ಸಾರಿಗೆ ಮತ್ತು ವಿದ್ಯುತ್ ಸರಬರಾಜು ಸೇರಿದಂತೆ ಅಗತ್ಯ ಸಾರ್ವಜನಿಕ ಸೇವೆಗಳಲ್ಲಿ ಅಡಚಣೆ ಉಂಟಾಗುವ ನಿರೀಕ್ಷೆಯಿದೆ.
ಏನಿರುತ್ತೆ.. ಏನಿರಲ್ಲ?
ಬ್ಯಾಂಕಿಂಗ್ ಮತ್ತು ವಿಮಾ ಸೇವೆಗಳು, ಅಂಚೆ ಕಾರ್ಯಾಚರಣೆಗಳು, ಕಲ್ಲಿದ್ದಲು ಗಣಿಗಾರಿಕೆ ಮತ್ತು ಕೈಗಾರಿಕಾ ಉತ್ಪಾದನೆ, ಸರ್ಕಾರಿ ಸಾರ್ವಜನಿಕ ಸಾರಿಗೆ, ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ವಲಯದ ಘಟಕಗಳು, ಗ್ರಾಮೀಣ ಪ್ರದೇಶಗಳಲ್ಲಿ ರೈತರ ನೇತೃತ್ವದ ಕಾರ್ಯಚರಣೆಗಳು ಇಂದು ಬಂದ್ ಆಗುವ ಸಾಧ್ಯತೆ ಇದೆ.
ಶಾಲಾ, ಕಾಲೇಜುಗಳು, ಖಾಸಗಿ ಕಚೇರಿಗಳು ಕಾರ್ಯಾಚರಿಸಲಿವೆ. ರೈಲು ಸೇವೆಗಳು ಇದ್ದರೂ, ವಿಳಂಬ ಆಗುವ ಸಾಧ್ಯತೆಗಳು ಹೆಚ್ಚಿದೆ.
“ದೇಶದಾದ್ಯಂತ ರೈತರು ಮತ್ತು ಗ್ರಾಮೀಣ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ” ಎಂದು ಎಐಟಿಯುಸಿಯ ಅಮರ್ಜೀತ್ ಕೌರ್ ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. “ಸರ್ಕಾರ ನಮ್ಮ 17 ಅಂಶಗಳ ಬೇಡಿಕೆ ಪಟ್ಟಿಯನ್ನು ನಿರ್ಲಕ್ಷಿಸಿದೆ ಮತ್ತು ಕಳೆದ 10 ವರ್ಷಗಳಲ್ಲಿ ವಾರ್ಷಿಕ ಕಾರ್ಮಿಕ ಸಮ್ಮೇಳನವನ್ನು ಸಹ ಕರೆದಿಲ್ಲ” ಎಂದು ಅವರು ಹೇಳಿದ್ದಾರೆ.
“ಸಾರ್ವತ್ರಿಕ ಮುಷ್ಕರದಿಂದ ದೇಶದಾದ್ಯಂತ ಸಾರ್ವಜನಿಕ ಸೇವೆಗಳು ಅಸ್ತವ್ಯಸ್ತಗೊಳ್ಳಲಿವೆ. ಬ್ಯಾಂಕಿಂಗ್, ಅಂಚೆ, ಕಲ್ಲಿದ್ದಲು ಗಣಿಗಾರಿಕೆ, ಕಾರ್ಖಾನೆಗಳು, ರಾಜ್ಯ ಸಾರಿಗೆ ಸೇವೆಗಳ ಮೇಲೆ ಮುಷ್ಕರದ ಪರಿಣಾಮ ಬೀರಲಿದೆ” ಎಂದು ಹಿಂದ್ ಮಜ್ದೂರ್ ಸಭಾದ ಹರ್ಭಜನ್ ಸಿಂಗ್ ಸಿಧು ಪಿಟಿಐಗೆ ತಿಳಿಸಿದ್ದಾರೆ.
ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (AIBEA)ನೊಂದಿಗೆ ಸಂಯೋಜಿತವಾಗಿರುವ ಬಂಗಾಳ ಪ್ರಾಂತೀಯ ಬ್ಯಾಂಕ್ ನೌಕರರ ಸಂಘವು ಬ್ಯಾಂಕಿಂಗ್ ಮತ್ತು ವಿಮಾ ವಲಯಗಳೆರಡೂ ಮುಷ್ಕರದಲ್ಲಿ ಭಾಗವಹಿಸಲಿವೆ ಎಂದು ದೃಢಪಡಿಸಿದೆ. ಇಂದು ಔಪಚಾರಿಕ ಬ್ಯಾಂಕಿಂಗ್ ರಜೆ ಇಲ್ಲದಿದ್ದರೂ, ಶಾಖೆಗಳು ಮತ್ತು ಎಟಿಎಂಗಳಲ್ಲಿನ ಸೇವೆಗಳು ವ್ಯತ್ಯಯಗೊಳ್ಳುವ ಸಾಧ್ಯತೆಯಿದೆ.
ವಿದ್ಯುತ್ ಸರಬರಾಜಿನ ಮೇಲೂ ಪರಿಣಾಮ ಬೀರಬಹುದು. ಪಿಟಿಐ ವರದಿಯ ಪ್ರಕಾರ, 27 ಲಕ್ಷಕ್ಕೂ ಹೆಚ್ಚು ವಿದ್ಯುತ್ ಕ್ಷೇತ್ರದ ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ರೈಲ್ವೆ ಇಲಾಖೆ ಯಾವುದೇ ಅಧಿಕೃತ ಮುಷ್ಕರ ಸೂಚನೆಯನ್ನು ನೀಡಿಲ್ಲ. ಆದಾಗ್ಯೂ, ಪ್ರತಿಭಟನೆಗಳು ಅಥವಾ ಸಾಗಣೆ ಪರಿಣಾಮಗಳಿಂದಾಗಿ ರೈಲು ಸೇವೆಗಳಲ್ಲಿ ಸಂಭವನೀಯ ಅಡಚಣೆಗಳು ಅಥವಾ ವಿಳಂಬಗಳು ಸಂಭವಿಸಬಹುದು.
ಈ ಮುಷ್ಕರ ಕೇವಲ ಔಪಚಾರಿಕ ವಲಯದ ಉದ್ಯೋಗಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಅನೌಪಚಾರಿಕ ವಲಯದ ಕಾರ್ಮಿಕರು, ಸ್ವಯಂ ಉದ್ಯೋಗಿ ಮಹಿಳಾ ಸಂಘ (SEWA) ನಂತಹ ಸ್ವಯಂ ಉದ್ಯೋಗಿ ಗುಂಪುಗಳು ಮತ್ತು ಗ್ರಾಮೀಣ ಸಮುದಾಯಗಳು ಸಹ ಭಾಗವಹಿಸಲಿವೆ.
ಮುಷ್ಕರಕ್ಕೆ ಸಂಯುಕ್ತ ಕಿಸಾನ್ ಮೋರ್ಚಾದಂತಹ ರೈತ ಒಕ್ಕೂಟಗಳ ಬೆಂಬಲ ದೊರೆತಿದೆ. ಸಂಯುಕ್ತ ಕಿಸಾನ್ ಮೋರ್ಚಾ ಈಗ ರದ್ದುಗೊಂಡಿರುವ ಮೂರು ಕರಾಳ ಕೃಷಿ ಕಾನೂನುಗಳ ವಿರುದ್ಧದ ಐತಿಹಾಸಿಕ ರೈತರ ಆಂದೋಲನದ ನೇತೃತ್ವ ವಹಿಸಿತ್ತು.
ಎನ್ಎಂಡಿಸಿ ಲಿಮಿಟೆಡ್, ಉಕ್ಕು ಸ್ಥಾವರಗಳು ಮತ್ತು ರೈಲ್ವೆ ಕಾರ್ಯಾಚರಣೆಗಳು ಸೇರಿದಂತೆ ಪ್ರಮುಖ ಕೈಗಾರಿಕೆಗಳ ಸಾರ್ವಜನಿಕ ವಲಯದ ಉದ್ಯೋಗಿಗಳು ಸಹ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಎಐಟಿಯುಸಿ), ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಐಎನ್ಟಿಯುಸಿ), ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು), ಹಿಂದ್ ಮಜ್ದೂರ್ ಸಭಾ (ಹೆಚ್ಎಂಎಸ್), ಸೆಲ್ಫ್ ಎಂಪ್ಲಾಯಿಡ್ ವುಮೆನ್ಸ್ ಅಸೋಸಿಯೇಷನ್ (ಎಸ್ಇಡಬ್ಲ್ಯುಎ), ಲೇಬರ್ ಪ್ರೊಗ್ರೆಸಿವ್ ಫೆಡರೇಶನ್ (ಎಲ್ಪಿಎಫ್), ಯುನೈಟೆಡ್ ಟ್ರೇಡ್ ಯೂನಿಯನ್ ಕಾಂಗ್ರೆಸ್ (ಯುಟಿಯುಸಿ), ಸಂಯುಕ್ತ ಕಿಸಾನ್ ಮೊರ್ಚಾ, ರೂರಲ್ ವರ್ಕರ್ಸ್ ಯೂನಿಯನ್ ಹಾಗೂ ರೈಲ್ವೆ, ಎನ್ಎಂಡಿಸಿ ಲಿಮಿಟೆಡ್ ಮತ್ತು ಉಕ್ಕಿನ ಕೈಗಾರಿಕೆಗಳ ಸಾರ್ವಜನಿಕ ವಲಯದ ಸಿಬ್ಬಂದಿ ಮಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಂಸತ್ತು ಅಂಗೀಕರಿಸಿದ ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು ಎಂಬುವುದೇ ಮುಷ್ಕರದ ಪ್ರಮುಖ ಬೇಡಿಕೆಯಾಗಿದೆ.
ಈ ಕಾರ್ಮಿಕ ಸಂಹಿತೆಗಳು ಮುಷ್ಕರ ನಡೆಸುವುದನ್ನು ಹೆಚ್ಚು ಕಷ್ಟಕರವಾಗಿಸುವ ಮೂಲಕ, ಕೆಲಸದ ಸಮಯವನ್ನು ಹೆಚ್ಚಿಸುವ ಮೂಲಕ ಮತ್ತು ಕಾರ್ಮಿಕ ಕಾನೂನುಗಳನ್ನು ಉಲ್ಲಂಘಿಸಿದಾಗ ಉದ್ಯೋಗದಾತರನ್ನು ದಂಡದಿಂದ ರಕ್ಷಿಸುವ ಮೂಲಕ ಕಾರ್ಮಿಕರ ಹಕ್ಕುಗಳನ್ನು ದುರ್ಬಲಗೊಳಿಸುತ್ತವೆ ಎಂದು ಕಾರ್ಮಿಕ ಸಂಘಗಳು ವಾದಿಸಿವೆ.
ಅಲ್ಲದೆ, ಸಾರ್ವಜನಿಕ ವಲಯದ ಉದ್ದಿಮೆಗಳ ಖಾಸಗೀಕರಣಕ್ಕೆ ಮತ್ತು ಹೊರ ಗುತ್ತಿಗೆ ಆಧಾರದಲ್ಲಿ ಹೆಚ್ಚು ಕೆಲಸಗಾರರನ್ನು ನೇಮಿಸಲು ಅವಕಾಶ ನೀಡುತ್ತದೆ. ಹೊರ ಗುತ್ತಿಗೆ ಉದ್ಯೋಗ ಭದ್ರತೆ ಮತ್ತು ನ್ಯಾಯಯುತ ವೇತನಕ್ಕೆ ಧಕ್ಕೆ ತರುತ್ತದೆ ಎಂದು ಕಾರ್ಮಿಕ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ.
ಇಷ್ಟೊಂದು ದೊಡ್ಡ ಪ್ರಮಾಣದ ಮುಷ್ಕರ ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ 2020, 2022 ಮತ್ತು 2024ರಲ್ಲಿ ನಡೆದ ಇದೇ ರೀತಿಯ ರಾಷ್ಟ್ರವ್ಯಾಪಿ ಮುಷ್ಕರಗಳಲ್ಲಿ ಲಕ್ಷಾಂತರ ಕಾರ್ಮಿಕರು ಬೀದಿಗಿಳಿದು ಕಾರ್ಮಿಕ ವಿರೋಧಿ ನೀತಿಗಳು ಮತ್ತು ವಿವಾದಾತ್ಮಕ ಆರ್ಥಿಕ ಸುಧಾರಣೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದರು.


