ಬೆಂಗಳೂರು ಕ್ಯಾಂಪಸ್ನಲ್ಲಿ ಶನಿವಾರ (ನ.1) ಕನ್ನಡ ರಾಜ್ಯೋತ್ಸವ ಆಚರಿಸಲಾಗುವುದು ಎಂದು ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್ಇಎಲ್) ಶುಕ್ರವಾರ (ಅ.31) ಕರ್ನಾಟಕ ಹೈಕೋರ್ಟ್ಗೆ ತಿಳಿಸಿದೆ. ಈ ಹಿನ್ನೆಲೆ ಬಿಎಚ್ಇಎಲ್ ಉದ್ಯೋಗಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ಇತ್ಯರ್ಥಪಡಿಸಿದೆ.
ಬೆಂಗಳೂರಿನ ಬಿಎಚ್ಇಎಲ್ ಆವರಣದಲ್ಲಿ 70ನೇ ಕನ್ನಡ ರಾಜ್ಯೋತ್ಸವ ಆಚರಿಸಲು ಅನುಮತಿ ನೀಡುವಂತೆ ಬಿಎಚ್ಇಎಲ್ ಆಡಳಿತ ಮಂಡಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಬಿಎಚ್ಇಎಲ್ ನೌಕರರ ‘ಕರ್ನಾಟಕ ಸಂಘ’ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿದೆ.
ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, “ಅರ್ಜಿದಾರ ಸಂಘವು ಹೊಸ ಚುನಾಯಿತ ಮಂಡಳಿಯನ್ನು ಹೊಂದಿದ್ದು, ವಿರೋಧಿ ಸಂಘಟನೆಯೊಂದಿಗೆ ಸೇರಿಕೊಂಡು ಬಿಎಚ್ಇಎಲ್ ಆಡಳಿತವು ಕನ್ನಡ ರಾಜ್ಯೋತ್ಸವ ಆಚರಿಸಲು ಅನುಮತಿ ನಿರಾಕರಿಸುತ್ತಿದೆ” ಎಂದು ಆರೋಪಿಸಿದ್ದರು.
ಬಿಎಚ್ಇಎಲ್ ಪರ ವಕೀಲರು, “ಎರಡು ಸಂಘಟನೆಗಳು ರಾಜ್ಯೋತ್ಸವ ಆಚರಿಸಲು ತಿಕ್ಕಾಟ ನಡೆಸುತ್ತಿದ್ದು, ಇದಕ್ಕಾಗಿ ಆಡಳಿತ ಮಂಡಳಿಯೇ ರಾಜ್ಯೋತ್ಸವ ಆಚರಿಸಲು ನಿರ್ಧರಿಸಿದೆ” ಎಂದು ತಿಳಿಸಿದ್ದರು.
ವಾದ-ಪ್ರತಿವಾದ ಆಲಿಸಿದ ಪೀಠವು, “ನಾಳೆ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತದೆ. ಯಾರು ರಾಜ್ಯೋತ್ಸವ ನಡೆಸುತ್ತಾರೆ ಎಂಬುದು ಪ್ರಶ್ನೆಯಲ್ಲ. ಆಡಳಿತ ಮಂಡಳಿಯೇ ರಾಜ್ಯೋತ್ಸವ ಆಚರಿಸುತ್ತದೆ. ಇದರಿಂದ ನಿಮಗೆ ಸಮಸ್ಯೆ ಏನು?” ಎಂದು ಅರ್ಜಿದಾರರನ್ನು ಪ್ರಶ್ನಿಸಿದೆ. ಅಂತಿಮವಾಗಿ ಅರ್ಜಿ ಇತ್ಯರ್ಥಪಡಿಸಿದೆ.
“ಸಂಸ್ಥೆಯೇ ರಾಜ್ಯೋತ್ಸವ ಆಚರಿಸಲು ಮುಂದಾಗಿರುವಾಗ ಬಿಎಚ್ಇಎಲ್ನ ಎಲ್ಲಾ ಉದ್ಯೋಗಿಗಳೂ ಅದರಲ್ಲಿ ಭಾಗವಹಿಸಬೇಕು. ಯಾವ ಸಂಘ ಅಥವಾ ಸಂಸ್ಥೆ ರಾಜ್ಯೋತ್ಸವ ನಡೆಸುತ್ತದೆ ಎಂಬುದು ವಿಚಾರವೇ ಅಲ್ಲ. ಸಂಸ್ಥೆಯೇ ರಾಜ್ಯೋತ್ಸವ ನಡೆಸಲು ಮುಂದಾಗಿರುವುದರಿಂದ ಅರ್ಜಿದಾರರಿಗೆ ಯಾವುದೇ ಅಹವಾಲು ಇರುವಂತಿಲ್ಲ. ಎಲ್ಲಾ ಉದ್ಯೋಗಿಗಳ ಕುಟುಂಬಸ್ಥರು ರಾಜ್ಯೋತ್ಸವದಲ್ಲಿ ಭಾಗವಹಿಸಬಹುದು ಎಂದು ಸಂಸ್ಥೆ ಹೇಳಿದೆ” ಎಂದು ನ್ಯಾಯಾಲಯ ಹೇಳಿದೆ.
ಅಲೆಮಾರಿಗಳ ಮೀಸಲಾತಿ ಹೋರಾಟ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸಕಾರಾತ್ಮಕ ಭರವಸೆ


