Homeಮುಖಪುಟಬೀದರಿನ ಶಾಹೀನ ಶಾಲೆ ಬ್ರಿಟನ್ನಿನ ಗಾರ್ಡಿಯನ್ನೊಳಗ ಬಂದದ್ದಕ್ಕ ನಾಚಗೋಬೇಕು...

ಬೀದರಿನ ಶಾಹೀನ ಶಾಲೆ ಬ್ರಿಟನ್ನಿನ ಗಾರ್ಡಿಯನ್ನೊಳಗ ಬಂದದ್ದಕ್ಕ ನಾಚಗೋಬೇಕು…

ʻದ ಗಾರ್ಡಿಯನ್ʼ, ಬಿಬಿಸಿ, ಅಲ್ ಝಜೀರಾ, ಯುಕೆ ಟೆಲಿಗ್ರಾಫ, ಮುಂತಾದ ಅಂತಾರಾಷ್ಟ್ರೀಯ ಪೇಪರು, ಟೀವಿ, ವೆಬ್ ಸೈಟಿನ್ಯಾಗ ಛೀ, ಥೂ ಅಂತ ರಾಜ್ಯ ಸರಕಾರಕ್ಕ ಉಗುಳಿದರು.

- Advertisement -
- Advertisement -

ಸುದ್ದಿಯೇನೇ ಮನೋಲ್ಲಾಸಿನಿ

ಇಂಗ್ಲಂಡಿನ ಪ್ರಧಾನಿಯವರು ದಿನಾ ಬೆಳಿಗ್ಗೆ ಓದೋ ಪತ್ರಿಕೆ ʻದ ಗಾರ್ಡಿಯನ್ʼದಾಗ ಬೀದರಿನಂಥಾ ಸಣ್ಣ ಊರಿನ ದೊಡ್ಡು ಸುದ್ದಿ ಬಂತು ಅನ್ನೋದು ಇವತ್ತಿನ ಸುದ್ದಿ.

ಕುರುಡು ನಾಯಿ ಸಂತಿಗೆ ಬಂದಂಗ ಇದು ಯಾಕ ಬಂತು? ಬಂದದ್ದು ಎಂಥಾ ಸುದ್ದಿ? ಅನ್ನೋದನ್ನ ನೋಡೋಣ.

ಅದರಾಗ ಬಂದಿದ್ದು ಅಲ್ಲಮಾ ಇಕಬಾಲ್ ಟ್ರಸ್ಟಿನವರು ನಡೆಸೋ ಶಾಹೀನ್ ಶಾಲೆಯೊಳಗ ಹತ್ತು – ಹನ್ನೊಂದು ವರ್ಷದ ಹುಡುಗ-ಹುಡುಗಿಯರು ಆಡಿದ ನಾಟಕಕ್ಕ ಸಂಬಂಧಪಟ್ಟ ಸುದ್ದಿ. ಅದು ಏನಾತು ಅಂದರ ಅದರಾಗ ಒಂದು ಹುಡುಗಿ ಹಣ್ಣ ಹಣ್ಣ ಮುದಕೀ ಪಾತ್ರ ಮಾಡಿದ್ಲು. ನಮ್ಮ ಕಣ್ಣ ಮುಂದ ಬೆಳದ ಹುಡುಗಾ, ಚಹಾ ಮಾರತಿದ್ದ, ಅಂಥವಾ ಈಗ ದೊಡ್ಡ ಮನಿಷಾ ಆಗ್ಯಾನ, ನಮ್ಮ ದಾಖಲೆ ಕೇಳಲಿಕ್ಕೆ ಹತ್ಯಾನ ಅಂತ ಬೈತಾಳ. ನನ್ನೇನರ ಕಾಗದ ತೋರಸು ಅಂತ ಕೇಳಿದರ ಚಪ್ಪಲ ತೊಗೊಂಡು ಹೊಡೀತೇನಿ ಅಂತ ಅಂತಾಳ. ಇದನ್ನ ದೊಡ್ಡದು ಮಾಡಿ ಪೊಲಿಸರು ಆ ಹುಡುಗಿ ಅವ್ವನ್ನ, ಅಕೀ ಟೀಚರನ ಜೈಲಿಗೆ ಹಾಕ್ಯಾರ.

ಅಷ್ಟ ಅಲ್ಲಾ, ಪೊಲೀಸರು ಆ ಹುಡುಗ – ಹುಡುಗಿಯರನ್ನ ಅವರ ಪಾಲಕರು ಅಥವಾ ವಕೀಲರಿಲ್ಲದೇ ವಿಚಾರಣೆ ಮಾಡ್ಯಾರ. ಪ್ರತಿ ಸಲೆ ನಾಲ್ಕೈದು ತಾಸು ಅವರನ್ನು ಕೂಡಿಸಿಕೊಂಡು ವಿಚಾರಣೆ ಮಾಡ್ಯಾರ. ಖಲಿಸ್ತಾನ ಕೇಸು, ಕಸಾಬ ಕೇಸು, ಕಂದಹಾರ ಅಪಹರಣ ಕೇಸು, ಇಂದಿರಾಗಾಂಧಿ, ರಾಜೀವ ಗಾಂಧಿ ಹತ್ಯೆ ಕೇಸಿನ್ಯಾಗನೂ ಇಷ್ಟು ವಿಚಾರಣೆ ಮಾಡಿದ್ದರೋ ಇಲ್ಲೋ.

ಹಿಂಗ ಬರೆ ಒಂದೆರಡಲ್ಲ, ಬರೋಬ್ಬರಿ ಐದು ಸರೆ ಮಾಡ್ಯಾರ. ಹದಿನೆಂಟು ವರ್ಷಕ್ಕಿಂತ ಚಿಕ್ಕ ಮಕ್ಕಳನ್ನ ಪೊಲೀಸರು ವಿಚಾರಣೆ ಮಾಡಬಾರದು. ಮಾಹಿತಿ ಸಂಗ್ರಹ ಮಾಡಬಹುದು. ಮಾಡುವಾಗ ಅವರ ಪಾಲಕರು ಅಥವಾ ವಕೀಲರು ಇರಬೇಕು ಅಂತ ಅನ್ನೋದು ಸತ್ ಸಂಪ್ರದಾಯ. ಭಾರತ ಸರಕಾರ ಸಹಿ ಮಾಡಿದ ಅಂತಾರಾಷ್ಟ್ರೀಯ ಮಕ್ಕಳ ಹಕ್ಕುಗಳ ಒಪ್ಪಂದದ ಪ್ರಕಾರ ಅದು ಶಿಕ್ಷಾರ್ಹ ಅಪರಾಧ. ಆದರ ಇವೆಲ್ಲಾ ಆ ಪೊಲೀಸರಿಗೆ ನೆನಪಾಗಲಿಲ್ಲ. ಅವರು ರಾಜಕಾರಣಿಗಳ ಒತ್ತಡದಲ್ಲಿ ಮುಸ್ಲಿಂ ಸಾಲಿ ಒಳಗ ನಡಿಯೋದೆಲ್ಲಾ ತಪ್ಪು. ಆ ಹುಡುಗರು ಮುಸ್ಲಿಮರು ಇದ್ದದ್ದಕ್ಕ ಅವರು ಮಾಡಿದ್ದೆಲ್ಲಾ ತಪ್ಪ ಇರಬೇಕು ಅಂತ ಇವರು ನಿರ್ಧಾರ ಮಾಡಿದರು. ಆ ಹುಡುಗ- ಹುಡುಗಿಯರಿಗೆ ಜೀವನಪೂರ್ತಿ ಮರಿಯಲಾರದಂಥಾ ಕೆಟ್ಟ ಅನುಭವ ಮೂಡಿಸಿದರು. ಪೊಲೀಸರ ಕಂಡಾಗೆಲ್ಲಾ ಥರಾ ಥರಾ ಹೆದರೋಹಂಗ ಮಾಡಿದರು.

ಇದೆಲ್ಲಾ ನೋಡಿದ ʻದ ಗಾರ್ಡಿಯನ್ʼ, ಬಿಬಿಸಿ, ಅಲ್ ಝಜೀರಾ, ಯುಕೆ ಟೆಲಿಗ್ರಾಫ, ಮುಂತಾದ ಅಂತಾರಾಷ್ಟ್ರೀಯ ಪೇಪರು, ಟೀವಿ, ವೆಬ್ ಸೈಟಿನ್ಯಾಗ ಛೀ, ಥೂ ಅಂತ ರಾಜ್ಯ ಸರಕಾರಕ್ಕ ಉಗುಳಿದರು. ಈ ಸುದ್ದಿ ಭಾರತದ ಎಲ್ಲಾ ಪ್ರಮುಖ ಪೇಪರಿನ್ಯಾಗನೂ ಬಂತು. ಅಷ್ಟಕ್ಕ ದಪ್ಪ ಚರ್ಮದವರಿಗೆ ಒಂಚೂರು ಚುಚ್ಚಿದಂಗ ಆತು. ಅಲ್ಲಿನ ಪೊಲೀಸ ವರಿಷ್ಠಾಧಿಕಾರಿ ಬದಲಾದರು. ಆದರೂ ಇನ್ನೂ ಆ ಸಾಲಿಯವರಿಗೆ ಪೊಲೀಸರ ಕಿರಿಕಿರಿ ಕಡಿಮಿ ಆಗಿಲ್ಲ.

ಅಷ್ಟಕ್ಕೂ ಆ ಹುಡುಗಿ ಮಾಡಿದ್ದು ಮುದುಕಿಯ ಪಾತ್ರ. ಕೋಲಾರದ ಮುದುಕಿಯೊಬ್ಬಾಕಿಗೆ ಯಾರೋ ನಿನ್ನ ಕಾಗದಾ ಕೇಳಿದರ ಏನು ಮಾಡತೀ ಅಂದಾಗ ಮೆಟ್ಟಿನ್ಯಾಗ ಹೊಡೀತೇನಿ ಅಂದದ್ದು ವಾಟ್ಸಪ್ಪಿನ್ಯಾಗ ಬಂದಿತ್ತು. ಅದನ್ನು ನೋಡಿದ ಪಾಲಕರು- ಹುಡುಗರು ಅದರ ನಾಟಕ ಮಾಡಿದರು. ಇದರ ಹಕೀಕತ್ತು ಏನಪಾ ಅಂದರ ಚರ್ಚಾಸ್ಪದ ಮಾತು ಆಡಿದ್ದು ಆ ಪುಟ್ಟ ಹುಡುಗಿಯಲ್ಲ, ಆ ನಾಟಕದ ಮುದುಕಿಯ ಪಾತ್ರ.

ಈಗ ನಮ್ಮ ಪೊಲೀಸರು ಆ ಹತ್ತು- ಹನ್ನೊಂದರ ಹುಡುಗಾ- ಹುಡುಗಿಯರ ವಿಚಾರಣೆ ನಡಸಬಹುದು ಅಂದರ, ಅವರ ಅವ್ವನ್ನ, ಟೀಚರನ ಜೈಲಿಗೆ ಹಾಕಬಹುದು ಅಂದರ ಯರ‍್ಯಾರನ್ನ ವಿಚಾರಣೆ ನಡಸಬಹುದು, ಯರ‍್ಯಾರನ್ನು ಹಿಡೀಬಹುದು ಅನ್ನೂದನ್ನು ನೋಡೋಣ.

ʻʻಕರ್ಮʼʼ ಅನ್ನೋ ಹಿಂದಿ ಚಲನಚಿತ್ರದಾಗ ಅನುಪಮ ಖೇರ ಅವರು ಡಾಕ್ಟರ್ ಡ್ಯಾಂಗ ಅನ್ನೋ ಹೆಸರಿನ ವಿಲನ್ ಪಾತ್ರ ಮಾಡಿದ್ದರು. ಅದರಾಗ ಅವರು ನಾನು ಇಂಡಿಯಾವನ್ನು ಉಡಾಯಿಸಿ ಬಿಡತೇನಿ ಅಂತ ಮಾತಾಡಿದರು, ಮಿಸೈಲು ತಯಾರಿಸಿದರು, ಹೀರೋಗಳನ್ನು ಗೋಳು ಹೊಯಕೊಂಡರು. ಅವರನ್ನು ವಿಚಾರಣೆ ಮಾಡಬೇಕು.

ಅವರ ಅಪ್ಪ ಪುಷ್ಕರನಾಥ ಹಾಗೂ ಅವ್ವ ದುಲಾರಿ ಅವರನ್ನ ಜೈಲಿಗೆ ಹಾಕಬೇಕು.

ʻನಾಯಕʼ ಚಿತ್ರದಲ್ಲಿ ಅನಿಲಕಪೂರ್ ಅವರು ಮುಖ್ಯಮಂತ್ರಿಯನ್ನು ಹೊಡೆದದ್ದಕ್ಕೆ ಅವರನ್ನು ವಿಚಾರಣೆಗೆ ಒಳಪಡಿಸುವುದಲ್ಲದೇ ಒದ್ದು ಒಳಗೆ ಹಾಕಬೇಕು. ಅವರಪ್ಪ ಸುರಿಂದರ ಕಪೂರ್ ಅವರು ತೀರಿಕೊಂಡಾರ. ರೋಷೋಮನ್ ಚಿತ್ರದಲ್ಲಿ ಮಾಡಿದಂಗ ಅವರ ಆತ್ಮವನ್ನು ಆಹ್ವಾನಿಸಿ ಜೈಲಿಗೆ ಹಾಕಬೇಕು.

ರಾಜೇಂದ್ರ ಕುಮಾರ ಅವರ ʻಶತರಂಜʼ ಚಿತ್ರದಲ್ಲಿ ಮದನ ಪುರಿ ಅವರು ಹಾಗೂ ಅವರ ತಂದೆ ನಿಹಾಲ ಸಿಂಗ್ ಅವರಿಬ್ಬರೂ ಈಗ ಇಲ್ಲ. ಪುರಿ ಅವರು ಭಾರತವನ್ನು ನಾಶಪಡಿಸುವ ಮಾತಾಡಿದ್ದಕ್ಕೆ ಅವರನ್ನು ವಿಚಾರಣೆ ಮಾಡಿ ಅವರ ಅಪ್ಪ ನಿಹಾಲ ಸಿಂಗ್ ಜೊತೆಗೆ ಒಳಗ ಹಾಕಬೇಕು.

ಜಿತೇಂದ್ರ ಅವರ ಫರ್ಜ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿ ದೇಶದ ಮೇಲೆ ಬಾಂಬ ದಾಳಿ ನಡೆಸಿದ ರಾಜನಾಳಾ ಕಾಲೇಶ್ವರ ರಾವು ಅವರು ನಿಧನ ಹೊಂದಿದ್ದಾರೆ. ಅವರ ಆತ್ಮ ಮರಳಿ ಬರಲು ಒಪ್ಪದಿದ್ದರ ಅವರ ಹೆಂಡತಿ – ಮಕ್ಕಳನ್ನ ಜೈಲಿಗೆ ಹಾಕಬೇಕು.

ಮೊನ್ನೆ ಮೊನ್ನೆ ಬಂದ ಆಲಿಯಾ ಭಟ ಅವರ ರಾಝೀ ಸಿನಿಮಾದಾಗ ಪಾಕಿಸ್ತಾನದ ಸೈನ್ಯದ ಕಮಾಂಡರ ಪಾತ್ರ ಮಾಡಿದ್ದ ಅಶ್ವಥ ಭಟ್ ಅವರನ್ನು ಒಳಗ ಹಾಕಬೇಕು.

ಇವೆಲ್ಲಾ ಬರೇ ಉದಾಹರಣೆ ಅಷ್ಟ. ಚೈನಾ, ಪಾಕಿಸ್ತಾನದ ವಿಲನ್‌ಗಳ ಪಾತ್ರ ಮಾಡಿದರ ಜೈಲಿಗೆ ಹಾಕತಾರ ಅಂತ ಗೊತ್ತಾದರ ಸಾಕು, ಧೈರ್ಯವಂತರಿಂದ ತುಂಬಿ ತುಳುಕತಾ ಇರೋ ಹಿಂದಿ ಸಿನಿಮಾ ರಂಗದ ಮಹಾಮಹಿಮರೆಲ್ಲಾ ಅದನ್ನ ಬಿಟ್ಟ ಬಿಡತಾರ. ಬರೇ ನಮ್ಮ ವಜ್ರಮುನಿ, ತೂಗುದೀಪ ಶ್ರೀನಿವಾಸರಂಥಾ ಹಳ್ಳೀ ಗೌಡರ ಪಾತ್ರ ಅಷ್ಟ ಮಾಡತಾರ. ಸಿನಿಮಾರಂಗದ ಭಾರತೀಕರಣ ಆಗತದ.

ಅಂದಂಗ ಶಾಹೀನ ಅಂದರ ಪರ್ಶಿಯನ್- ಉರ್ದು ದಾಗ ಗರುಡ. ಶಾಹೀನ ಅನ್ನೋದರ ಬಗ್ಗೆ ಈ ಯುಗದ ಕವಿ ಅಲ್ಲಮಾ (ಜ್ಞಾನಿ) ಇಕಬಾಲ್ ಏನು ಹೇಳ್ಯಾರ ಅಂತ ನೋಡೋಣ

ʻನೋಡಪಾ ತಮ್ಮಾ ನೀ

ಮಹಾರಾಜರ ಅರಮನಿ ಮ್ಯಾಲೆ

ಅಲ್ಲೆ – ಇಲ್ಲೆ

ಎಲ್ಲಾ ಕಡೆ

ಗೂಡು ಕಟಿಗೋತ ಕೂಡಬ್ಯಾಡʼ

ʻನೀ ಗರುಡ ಅದೀ

ದೊಡ್ ದೊಡ್ಡ ಪರ್ವತದ ನೆತ್ತಿ ಮ್ಯಾಲೆ

ಇರಬೇಕಾದವ ನೀ

ಅಲ್ಲೇ ಇರಂತೀ ಹಾರಿಕೋತ ಹೋಗ್ ಈಗʼ

ʻನೋಡಪಾ ತಮ್ಮಾ,

ನೀ ಗರುಡ ಅದೀ

ಬ್ಯಾರೆ ಏನೇನೂ ಅಲ್ಲ

ಹಾರಿಕೋತ ಇರೋದ ನಿನ್ನ ಕೆಲಸ

ನಿನ್ನೆದುರಿಗೆ ಇರೋದು

ಬರೇ ಒಂದ ಆಕಾಶ ಅಲ್ಲ

ತಿಳಕೋʼ

ಬೀದರಿನ ಶಾಹೀನ ಸಾಲಿಗೂ ದೆಹಲಿಯ ಶಾಹೀನ ಬಾಗಿಗೂ ಏನೂ ಸಂಬಂಧ ಇಲ್ಲ. ಹೆಸರು ಮಾತ್ರ ಒಂದ. ಕನ್ನಡ ಸಿನಿಮಾದಾಗ ಅಪರಾಧ ಆದಮ್ಯಾಲೆ ಬರೋ ಪೊಲಿಸರಿಗೆ ಅದು ಕನ್‌ಫ್ಯೂಸ್ ಆಗಿರಬೇಕು. ಅದಕ್ಕ ಈ ಬಂಧನ- ವಿಚಾರಣೆ ಆಗಿರಬೇಕು, ಅಲ್ಲವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಒಟ್ಟಾರೆಯಾಗಿ ಕರ್ನಾಟಕದ ಮಾನ ಮರ್ಯಾದೆಯನ್ನು ನಮ್ಮ ಪೊಲೀಸರು ಅಂತರರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಿದ್ದಾರೆ. ಇನ್ನಾದರೂ ಇವರು ಬುದ್ದಿ ಕಲಿಯುತ್ತಾರಾ?

  2. ಮಕ್ಕಳ ಭವಿಷ್ಯದ ಬಗ್ಗೆ ಚೂರು ಯೋಚನೆ ಮಾಡದೆ ಕಾನೂನಿನ ವಿರುದ್ಧ ಮಕ್ಕಳಿಗೆ ತೊಂದರೆ ಕೊಟ್ಟು ಮಾಡಬಾರದ ಕೆಲಸ ಮಾಡಿದ, ಈ ವಿಷಯಕ್ಕೆ ಸಂಬಂಧಪಟ್ಟ ಎಲ್ಲಾ ಪೋಲೀಸರನ್ನು ಸಸ್ಪೆಂಡ್ ಮಾಡಬೇಕು ಮತ್ತು ಶಿಕ್ಷೆಗೊಳಪಡಿಸಬೇಕು ಹಾಗಾದರೆ ಮಾತ್ರ ಯಾರೂ ಇಂಥ ಬೇಜವಾಬ್ದಾರಿ ಕೆಲಸ ಮಾಡುವುದಿಲ್ಲ.

LEAVE A REPLY

Please enter your comment!
Please enter your name here

- Advertisment -

ಕೇಂದ್ರದ ವಿಬಿ-ಜಿ ರಾಮ್ ಜಿಗೆ ಟಕ್ಕರ್ : ಪ. ಬಂಗಾಳದ ‘ಕರ್ಮಶ್ರೀ’ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಡುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ

ಪಶ್ಚಿಮ ಬಂಗಾಳ ಸರ್ಕಾರದ ಉದ್ಯೋಗ ಖಾತರಿ ಯೋಜನೆ 'ಕರ್ಮಶ್ರೀ'ಯನ್ನು ಮಹಾತ್ಮ ಗಾಂಧಿ ಹೆಸರಿನಲ್ಲಿ ಮರುನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ (ಡಿಸೆಂಬರ್ 18) ಘೋಷಿಸಿದ್ದಾರೆ. ನರೇಗಾ ಯೋಜನೆಯಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ಕೈಬಿಟ್ಟಿರುವುದಕ್ಕೆ...

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ: ಶಾಸಕ ಕುಣಿಗಲ್ ರಂಗನಾಥ್ ವಿರುದ್ಧ ಕೆ.ಎನ್. ರಾಜಣ್ಣ ವಾಗ್ದಾಳಿ

ಕೃಷಿ ಸಹಕಾರ ಸಂಘಗಳಿಗೆ ಹಣ ಬಿಡುಗಡೆ ಮಾಡುವುದನ್ನು ಮಾಜಿ ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಗುರುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಆಡಳಿತ ಪಕ್ಷದೊಳಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಡುವೆಯೂ, "ಸಂಘಗಳಿಗೆ ವಿತರಿಸಲಾದ ನಿಧಿ ಠೇವಣಿದಾರರ ಹಣ,...

ತನ್ನದೇ ಶಾಸಕರ ಅನರ್ಹತೆ ಕೋರಿ ಬಿಆರ್‌ಎಸ್‌ ಅರ್ಜಿ : ತಿರಸ್ಕರಿಸಿದ ತೆಲಂಗಾಣ ಸ್ಪೀಕರ್

ಆಡಳಿತಾರೂಢ ಕಾಂಗ್ರೆಸ್‌ಗೆ ನಿಷ್ಠೆ ಬದಲಾಯಿಸಿದ್ದಾರೆಂದು ಹೇಳಲಾದ ಹತ್ತು ಬಿಆರ್‌ಎಸ್ ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿದ್ದ ಅರ್ಜಿಗಳ ಪೈಕಿ ಐದು ಅರ್ಜಿಗಳನ್ನು ತೆಲಂಗಾಣ ವಿಧಾನಸಭೆಯ ಸ್ಪೀಕರ್ ಗದ್ದಂ ಪ್ರಸಾದ್ ಕುಮಾರ್ ಬುಧವಾರ (ಡಿಸೆಂಬರ್ 18) ತಿರಸ್ಕರಿಸಿದ್ದಾರೆ....

ಸಾಮಾಜಿಕ ಬಹಿಷ್ಕಾರ, ದ್ವೇಷ ಭಾಷಣ ತಡೆ ವಿಧೇಯಕಗಳು ವಿಧಾನಸಭೆಯಲ್ಲಿ ಅಂಗೀಕಾರ

ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ವಿಧೇಯಕ-2025 ಗುರುವಾರ (ಡಿ.18) ವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರಗೊಂಡಿತು. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನದ ವಿಧಾನಸಭೆ ಕಲಾಪದಲ್ಲಿ ಸಮಾಜ ಕಲ್ಯಾಣ ಇಲಾಖೆ...

ಆಕ್ರಮಿತ ಪೂರ್ವ ಜೆರುಸಲೆಮ್ ವಸಾಹತು ಪ್ರದೇಶದಲ್ಲಿ 9000 ವಸತಿ ಘಟಕಗಳ ಯೋಜನೆ ಮುಂದಿಟ್ಟ ಇಸ್ರೇಲ್ 

ಆಕ್ರಮಿತ ಪೂರ್ವ ಜೆರುಸಲೆಮ್‌ನಲ್ಲಿರುವ ಕೈಬಿಟ್ಟ ಖಲಾಂಡಿಯಾ ವಿಮಾನ ನಿಲ್ದಾಣದ ಸ್ಥಳ ಬಳಿ ಅಕ್ರಮ ವಸಾಹತು ಪ್ರದೇಶದಲ್ಲಿ ಸುಮಾರು 9,000 ಹೊಸ ವಸತಿ ಘಟಕಗಳನ್ನು ನಿರ್ಮಿಸಲು ಇಸ್ರೇಲಿ ಆಕ್ರಮಿತ ಅಧಿಕಾರಿಗಳು ಯೋಜನೆಗಳನ್ನು ರೂಪಿಸಲು ಸಜ್ಜಾಗಿದ್ದಾರೆ....

ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಲೋಕಸಭೆಯಲ್ಲಿ ‘ವಿಬಿ-ಜಿ ರಾಮ್ ಜಿ ಮಸೂದೆ’ ಅಂಗೀಕಾರ

ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೇ ಗುರುವಾರ (ಡಿ.18) ಲೋಕಸಭೆಯಲ್ಲಿ 'ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕ ಮಿಷನ್ (ಗ್ರಾಮೀಣ್ ) (ವಿಬಿ-ಜಿ ರಾಮ್ ಜಿ) ಮಸೂದೆ ಅಂಗೀಕಾರಗೊಂಡಿತು. ಈ ಮಸೂದೆ 2005ರಲ್ಲಿ...

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...