ಗುಜರಾತ್ನ ಭುಜ್ನ ಶ್ರೀ ಸಹಜಾನಂದ್ ಬಾಲಕಿಯರ ಸಂಸ್ಥೆಯ (ಎಸ್ಎಸ್ಜಿಐ) ಕನಿಷ್ಠ 68 ಬಾಲಕಿಯರಿಗೆ ಮುಟ್ಟಾಗಿಲ್ಲ ಎಂದು ಸಾಬೀತುಪಡಿಸಲು ಅವರ ಒಳ ಉಡುಪುಗಳನ್ನು ತೆಗೆಯುವಂತೆ ಒತ್ತಾಯಿಸಿರುವ ಆಘಾತಕಾರಿ ಘಟನೆಯೊಂದು ಜರುಗಿದೆ. ದೇಶವೇ ತಲೆತಗ್ಗಿಸುವಂತಹ ಈ ಬಲವಂತದ ಕ್ರಮ ಕೈಗೊಂಡಿದ್ದಕ್ಕಾಗಿ ಶಿಕ್ಷಣ ಸಂಸ್ಥೆಯ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿಗಳು ಈಗ ಒತ್ತಾಯಿಸುತ್ತಿದ್ದಾರೆ.
ಮುಟ್ಟಾದ ಹೆಣ್ಣು ಮಕ್ಕಳು ಅಡುಗೆ ಮನೆಗೆ, ದೇವರ ಕೋಣೆಗೆ ಬಂದು ಎಲ್ಲರನ್ನು ಮುಟ್ಟುತ್ತಾರೆ ಎಂದು ಹಾಸ್ಟೆಲ್ನ ವಾರ್ಡನ್ ದೂರು ನೀಡಿದ ನಂತರ ಕಾಲೇಜಿನ ಪ್ರಾಂಶುಪಾಲರು 68 ವಿದ್ಯಾರ್ಥಿನಿಯರನ್ನು ಶೌಚಾಲಯಕ್ಕೆ ಕರೆಸಿ ಅವರ ಒಳವಸ್ತ್ರ ತೆಗೆಯುವಂತೆ ಒತ್ತಾಯಿಸಿದ್ದಾರೆ ಎಂದು ವರದಿಯಾಗಿದೆ.
“ನಾವು ನಮ್ಮ ಸಂಸ್ಥೆಯನ್ನು ಗೌರವಿಸುತ್ತೇವೆ, ಆದರೆ ಅವರು ಮಾಡಿದ್ದು ಸರಿಯಲ್ಲ. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಈ ವಿಷಯದ ಬಗ್ಗೆ ಬೆಳಕು ಚೆಲ್ಲುವಂತೆ ನಾವು ಮಾಧ್ಯಮಗಳನ್ನು ಕರೆಯಲು ನಿರ್ಧರಿಸಿದ್ದೇವೆ “ಎಂದು ದೂರುದಾರರೊಬ್ಬರು ಎಎನ್ಐಗೆ ತಿಳಿಸಿದ್ದಾರೆ.
ಈ ಮಧ್ಯೆ ಸಂಸ್ಥೆಯ ಪ್ರಾಂಶುಪಾಲರು ನಮ್ಮನ್ನು ಬ್ಲ್ಯಾಕ್ಮೇಲ್ ಮಾಡುತ್ತಿದ್ದು, ದೂರನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ ಎಂದು ಬಾಲಕಿಯೊಬ್ಬರು ಆರೋಪಿಸಿದ್ದಾರೆ.
.@vijayrupanibjp जी इस मामले को संज्ञान में लेकर जिम्मेदारों के खिलाफ कड़ी से कड़ी कार्यवाही की जिए। जिससे ऐसा 'गुजरात मॉडल' कहीं दोहराया ना जा सके।
धिक्कार है !! https://t.co/SDb2bkX1HX
— Jignesh Mevani (@jigneshmevani80) February 14, 2020
“ಪ್ರಾಂಶುಪಾಲರು ಮತ್ತು ಇತರರು ನಮ್ಮನ್ನು ಕರೆದು ಭಾವನಾತ್ಮಕವಾಗಿ ಬ್ಲ್ಯಾಕ್ ಮೇಲ್ ಮಾಡಲು ಪ್ರಯತ್ನಿಸಿದ್ದಾರೆ. ಈಗ ಎಲ್ಲವೂ ಸರಿಯಾಗಿದೆ, ನಮಗೆ ಯಾವುದೆ ಸಮಸ್ಯೆಯಿಲ್ಲ ಎಂದು ಲಿಖಿತವಾಗಿ ಹೇಳಿಕೆ ನೀಡುವಂತೆ ಅವರು ಹೇಳಿದ್ದಾರೆ. ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು. ಅಷ್ಟೆ ಅಲ್ಲದೆ ಘಟನೆಯ ಬಗ್ಗೆ ಇದುವರೆಗೂ ಆಡಳಿತ ಮಂಡಳಿ ಕ್ಷಮೆಯಾಚಿಸಿಲ್ಲ” ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.
ಇದುವರೆಗೂ ಈ ವಿಚಾರದ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಆದರೆ ಈ ಬಗ್ಗೆ ಪರಿಶೀಲನೆ ನಡೆಸಲು ತನಿಖಾ ತಂಡವನ್ನು ರಚಿಸಲಾಗಿದೆ ಎಂದು ಎಸ್ಎಸ್ಜಿಐ ಡೀನ್ ದರ್ಶನಾ ಧೋಲಾಕಿಯಾ ಹೇಳಿದ್ದಾರೆ.
“ಈ ವಿಷಯವು ಹಾಸ್ಟೆಲ್ಗೆ ಸಂಬಂಧಿಸಿದ್ದು, ಘಟನೆಗೂ ವಿಶ್ವವಿದ್ಯಾಲಯ ಅಥವಾ ಕಾಲೇಜಿಗೂ ಯಾವುದೇ ಸಂಬಂಧವಿಲ್ಲ. ಹುಡುಗಿಯರ ಅನುಮತಿಯೊಂದಿಗೆ ಎಲ್ಲವೂ ಸಂಭವಿಸಿದೆ. ಯಾರನ್ನೂ ಒತ್ತಾಯಿಸಲಿಲ್ಲ. ಯಾರೂ ಅವರನ್ನು ಮುಟ್ಟಲಿಲ್ಲ. ಈ ಬಗ್ಗೆ ತನಿಖೆ ನಡೆಸಲು ತನಿಖಾ ತಂಡವನ್ನು ರಚಿಸಲಾಗಿದೆ” ಎಂದು ಹೇಳಿದ್ದಾರೆ.
ಈ ವಿಷಯದ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಗುಜರಾತ್ನ ವಡ್ನಾವ್ನ ಶಾಸಕ ಜಿಗ್ನೇಶ್ ಮೇವಾನಿ “ಮುಖ್ಯಮಂತ್ರಿ ವಿಜಯ್ ರೂಪಾಣಿಯವರೆ ಈ ವಿಷಯವನ್ನು ತಿಳಿದುಕೊಳ್ಳಿ. ತಪ್ಪತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ. ಹೀಗೆ ಕ್ರಮ ಕೈಗೊಂಡರೆ ಇಂತಹ ‘ಗುಜರಾತ್ ಮಾದರಿ’ ಎಲ್ಲಿಯೂ ಮತ್ತೆ ನಡೆಯುವುದಿಲ್ಲ. ಡ್ಯಾಮ್ ಇಟ್!!” ಎಂದು ಟ್ವೀಟ್ ಮಾಡಿದ್ದಾರೆ.
ಈ ಅಮಾನವೀಯ ಕ್ರಮಕ್ಕೆ ದಿಕ್ಕಾರ. ನಿಷ್ಪಕ್ಷಪಾತವಾದ ತನಿಖೆ ನಡೆದು, ತಪ್ಪಿತಸ್ಥರೆಲ್ಲರಿಗೂ ಶಿಕ್ಷೆ ಆಗಬೇಕು.