ಬಿಹಾರ ವಿಧಾನಸಭಾ ಚುನಾವಣೆಗೆ 143 ಅಭ್ಯರ್ಥಿಗಳ ಪಟ್ಟಿಯನ್ನು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ಸೋಮವಾರ (ಅ.20) ಪ್ರಕಟಿಸಿದ್ದು, ಎರಡನೇ ಮತ್ತು ಅಂತಿಮ ಹಂತದ ನಾಮಪತ್ರ ಸಲ್ಲಿಕೆಯ ಅವಧಿ ಮುಗಿಯುವ ಕೆಲವೇ ಗಂಟೆಗಳ ಮೊದಲು ಈ ಪಟ್ಟಿಯನ್ನು ಪ್ರಕಟಿಸಲಾಗಿದೆ. ನವೆಂಬರ್ 6 ಮತ್ತು 11 ರಂದು ಮತದಾನ ನಡೆಯಲಿದ್ದು, ನವೆಂಬರ್ 14 ರಂದು ಮತ ಎಣಿಕೆಯಾಗಿ ಫಲಿತಾಂಶ ಘೋಷಣೆಯಾಗಲಿದೆ.
ವೈಶಾಲಿ ಜಿಲ್ಲೆಯ ರಾಘೋಪುರ ವಿಧಾನಸಭಾ ಕ್ಷೇತ್ರದಿಂದ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಕಣಕ್ಕಿಳಿದಿದ್ದಾರೆ. ರಾಘೋಪುರ ಯಾದವ್ ಕುಟುಂಬಕ್ಕೆ ಅಪಾರ ರಾಜಕೀಯ ಮತ್ತು ಭಾವನಾತ್ಮಕ ಸಂಬಂಧವನ್ನು ಹೊಂದಿರುವ ಕ್ಷೇತ್ರವಾಗಿದೆ. ಈ ಕ್ಷೇತ್ರವು ಆರ್ಜೆಡಿಯ ಭದ್ರಕೋಟೆಯಾಗಿದ್ದು, ಈ ಹಿಂದೆ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ಅವರ ಪತ್ನಿ, ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಪ್ರತಿನಿಧಿಸಿದ್ದರು. ತೇಜಸ್ವಿ ಯಾದವ್ 2015ರಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಸತತ ಮೂರನೇ ಅವಧಿಗೆ ಸ್ಪರ್ಧಿಸುತ್ತಿದ್ದಾರೆ.
143 ಅಭ್ಯರ್ಥಿಗಳಲ್ಲಿ, ಐವರು ಇಂಡಿಯಾ ಒಕ್ಕೂಟದ ಇತರ ಪಕ್ಷಗಳ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಲಿದ್ದಾರೆ. ಆರ್ಜೆಡಿ ಪ್ರಸ್ತುತ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿರುವ ರಾಜೇಶ್ ಕುಮಾರ್ ರಾಮ್ ಪ್ರತಿನಿಧಿಸುವ ಕುಟುಂಬ ಕ್ಷೇತ್ರದಿಂದಲೂ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಂದಾಗಿದೆ ಎಂಬ ಚರ್ಚೆಗೆ ಮುನ್ನೆಲೆಗೆ ಬಂದಿತ್ತು. ಇಂಡಿಯಾ ಒಕ್ಕೂಟದ ಎರಡು ಪ್ರಮುಖ ಪಕ್ಷಗಳ ನಡುವೆ ತಿಕ್ಕಾಟಕ್ಕೆ ಕಾರಣವಾಗುತ್ತಿದ್ದ ಆ ವಂದಂತಿಗೆ ಆರ್ಜೆಡಿಯ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಇತಿಶ್ರಿ ಹಾಡಿದೆ.
बिहार विधानसभा चुनाव-2025 के लिए राष्ट्रीय जनता दल द्वारा चयनित प्रत्याशियों की सूची।
सभी उम्मीदवारों को हार्दिक बधाई एवं विजय की अग्रिम शुभकामनाएं। #Bihar #RJD pic.twitter.com/QI7ckgoIQ6
— Rashtriya Janata Dal (@RJDforIndia) October 20, 2025
ಆರ್ಜೆಡಿ ವೈಶಾಲಿ, ಲಾಲ್ಗಂಜ್ ಮತ್ತು ಕಹಲ್ಗಾಂವ್ನಲ್ಲಿ ಕಾಂಗ್ರೆಸ್ ವಿರುದ್ಧ ಹಾಗೂ ತಾರಾಪುರ ಮತ್ತು ಗೌರ ಬೋರಂನಲ್ಲಿ ಮಾಜಿ ರಾಜ್ಯ ಸಚಿವ ಮುಖೇಶ್ ಸಾಹ್ನಿ ಅವರ ವಿಕಾಸಶೀಲ ಇನ್ಸಾನ್ ಪಕ್ಷದ ವಿರುದ್ಧ ಸ್ಪರ್ಧಿಸಲಿದೆ ಎಂದು ಹೇಳಲಾಗಿತ್ತು. ಈ ವದಂತಿಗೂ ಪಟ್ಟಿ ಪ್ರಕಟಣೆ ತೆರೆ ಎಳೆದಿದೆ.
ಅಭ್ಯರ್ಥಿಗಳ ಪೈಕಿ ತೇಜಸ್ವಿ ಯಾದವ್ (ರಾಘೋಪುರ್), ಅಲೋಕ್ ಮೆಹ್ತಾ (ಉಜಿಯಾರ್ಪುರ್), ಮುಖೇಶ್ ರೌಶನ್ (ಮಹುವಾ) ಮತ್ತು ಅಖ್ತರುಲ್ ಇಸ್ಲಾಂ ಶಾಹಿನ್ (ಸಮಸ್ತಿಪುರ್) ಇವರೆಲ್ಲರೂ ತಮ್ಮ ಹಾಲಿ ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದ್ದಾರೆ.
ಆರ್ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರ ಆಪ್ತ ಸಹಾಯಕ ಭೋಲಾ ಯಾದವ್, 2015ರಲ್ಲಿ ಬಹದ್ದೂರ್ಪುರ ಸ್ಥಾನವನ್ನು ಗೆದ್ದಿದ್ದರು. ಆದರೆ, ಐದು ವರ್ಷಗಳ ನಂತರ ಪಕ್ಷವು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿ (ಯು)ಗೆ ವಿರುದ್ದ ಕ್ಷೇತ್ರವನ್ನು ಕಳೆದುಕೊಂಡಿತ್ತು. ಈ ಬಾರಿ ಸಚಿವ ಮದನ್ ಸಾಹ್ನಿಯಿಂದ ಅದನ್ನು ಮರಳಿ ಪಡೆಯಲು ಮುಂದಾಗಿದೆ.
ಕಳೆದ ವರ್ಷ ಲೋಕಸಭಾ ಚುನಾವಣೆಯಲ್ಲಿ ಸಿವಾನ್ನಿಂದ ಸ್ಪರ್ಧಿಸಿ ಜೆಡಿಯು ವಿರುದ್ದ ಸೋತಿದ್ದ ಮಾಜಿ ಸ್ಪೀಕರ್ ಅವಧ್ ಬಿಹಾರಿ ಚೌಧರಿ ಅವರಿಗೆ ಅದೇ ಕ್ಷೇತ್ರವನ್ನು ಮತ್ತೆ ನೀಡಲಾಗಿದೆ.
ಹಿಂದೂ ಧರ್ಮಗ್ರಂಥಗಳ ಕುರಿತು ವಿವಾದಾತ್ಮಕ ದೃಷ್ಟಿಕೋನಗಳಿಂದ ಸುದ್ದಿಯಲ್ಲಿರುವ ಮಾಜಿ ಶಿಕ್ಷಣ ಸಚಿವ ಚಂದ್ರಶೇಖರ್ ಅವರನ್ನು ಅವರ ಹಾಲಿ ಕ್ಷೇತ್ರ ಮಾಧೇಪುರದಿಂದ ಕಣಕ್ಕಿಳಿಸಲಾಗಿದೆ.
ಅಭ್ಯರ್ಥಿಗಳ ಆಯ್ಕೆಯಲ್ಲಿ ಪಕ್ಷದ ‘ಎಂವೈ’ (ಮುಸ್ಲಿಂ-ಯಾದವ್) ಬೆಂಬಲ ನೆಲೆಯನ್ನು ಗಮನದಲ್ಲಿರಿಸಿಕೊಂಡಿರುವಂತೆ ತೋರುತ್ತದೆ. ಆದರೂ, ಇತರ ಹಿಂದುಳಿದ ಜಾತಿಗಳು ಮತ್ತು ಮೇಲ್ಜಾತಿಗಳಿಗೂ ಟಿಕೆಟ್ ನೀಡಲಾಗಿದೆ.
ಆರ್ಜೆಡಿ ಈ ಬಾರಿ 21 ಮಹಿಳೆಯರನ್ನು ಕಣಕ್ಕಿಳಿಸಿದೆ. ಈ ಮೂಲಕ ಪ್ರಮುಖ ಪ್ರತಿಸ್ಪರ್ಧಿಗಳಾದ ಜೆಡಿ(ಯು) ಮತ್ತು ಬಿಜೆಪಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ಅವಕಾಶ ನೀಡಿದೆ.
ಆಡಳಿತಾರೂಢ ಎನ್ಡಿಎಯ ಎರಡು ಪ್ರಮುಖ ಪಕ್ಷಗಳಾದ ಜೆಡಿಯು ಮತ್ತು ಬಿಜೆಪಿ ತಲಾ 101 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ.
ಅಧಿಕಾರದಲ್ಲಿದ್ದಾಗ ‘ಜಂಗಲ್ ರಾಜ್’ ಜಾರಿಯಾಗಿದೆ ಎಂದು ವಿರೋಧಿಗಳಿಂದ ಆಗಾಗ್ಗೆ ಆರೋಪಕ್ಕೊಳಗಾಗಿದ್ದ ಆರ್ಜೆಡಿ, ಇಮೇಜ್ ಬದಲಾವಣೆಗಿಂತ ವಾಸ್ತವ ರಾಜಕೀಯಕ್ಕೆ ಆದ್ಯತೆ ನೀಡಿದೆ.
ಮಾಫಿಯಾ ಡಾನ್ನಿಂದ ರಾಜಕಾರಣಿಯಾದ ಬೋಗೋ ಸಿಂಗ್ (ಮಾತಿಹಾನಿ) ಸ್ವತಃ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಮತ್ತೊಂದೆಡೆ ಒಸಾಮಾ ಶಹಾಬ್ಗೆ ತಮ್ಮ ದಿವಂಗತ ತಂದೆ ಮೊಹಮ್ಮದ್ ಶಹಾಬುದ್ದೀನ್ರ ರಾಜಕೀಯ ಪರಂಪರೆಯನ್ನು ಮುಂದುವರೆಸಲು ಅವಕಾಶ ನೀಡಲಾಗಿದೆ. ಒಸಾಮಾ ರಘುನಾಥ್ಪುರದಿಂದ ಚುನಾವಣೆಗೆ ಚೊಚ್ಚಲ ಪ್ರವೇಶ ಮಾಡುತ್ತಿದ್ದಾರೆ. ಇದು ಸಿವಾನ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ. ಈ ಕ್ಷೇತ್ರದಲ್ಲಿ ಶಹಾಬುದ್ದೀನ್ ಶಿಕ್ಷೆಗೆ ಒಳಗಾಗಿ ಅನರ್ಹಗೊಳ್ಳುವವರೆಗೂ ಯಾವುದೇ ಚುನಾವಣೆಯಲ್ಲಿ ಸೋಲದೆ ಗೆದ್ದಿದ್ದರು.
ಲಂಡನ್ನಿಂದ ಕಾನೂನು ಪದವಿ ಪಡೆದಿರುವ ಚೊಚ್ಚಲ ಸ್ಪರ್ಧಿ ಶಿವಾನಿ ಶುಕ್ಲಾ, ಲಾಲ್ಗಂಜ್ನಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರವನ್ನು ಉತ್ತರ ಬಿಹಾರದ ಅತ್ಯಂತ ಭಯಂಕರ ಗ್ಯಾಂಗ್ಲಾರ್ಡ್ಗಳಲ್ಲಿ ಒಬ್ಬರಾದ ಅವರ ತಂದೆ ಮುನ್ನಾ ಶುಕ್ಲಾ ಎರಡು ಬಾರಿ ಮತ್ತು ಅವರ ತಾಯಿ ಅನ್ನು ಶುಕ್ಲಾ ಒಮ್ಮೆ ಗೆದ್ದಿದ್ದರು.
ಮಹಾಘಟಬಂಧನದೊಳಗಿನ ಗೊಂದಲದಿಂದಾಗಿ, ಆರ್ಜೆಡಿ ಇಲ್ಲಿಯವರೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿರಲಿಲ್ಲ. ಆದಾಗ್ಯೂ, ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡುವ ಮೊದಲೇ, ಪಕ್ಷವು ತನ್ನ ಎಲ್ಲಾ ಅಭ್ಯರ್ಥಿಗಳಿಗೆ ಚಿಹ್ನೆಗಳನ್ನು ಹಂಚಿಕೆ ಮಾಡಿತ್ತು.
ಕಾಂಗ್ರೆಸ್ ಸೋಮವಾರ ಇನ್ನೂ ಏಳು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಪಕ್ಷವು ಘೋಷಿಸಿದ ಒಟ್ಟು ಅಭ್ಯರ್ಥಿಗಳ ಸಂಖ್ಯೆ 61ಕ್ಕೆ ತಲುಪಿದೆ.
ಮಹಾಘಟಬಂಧನ್ ಮೈತ್ರಿಕೂಟದ ಎರಡು ಪ್ರಮುಖ ಪಕ್ಷಗಳಾದ ಆರ್ಜೆಡಿ ಮತ್ತು ಕಾಂಗ್ರೆಸ್ ನಡುವಿನ ಔಪಚಾರಿಕ ಸೀಟು ಹಂಚಿಕೆ ಒಪ್ಪಂದವು ಒಮ್ಮತಕ್ಕೆ ಬರಲು ಸಾಧ್ಯವಾಗದಿದ್ದರೂ, ಮಧ್ಯರಾತ್ರಿಯ ನಂತರ ಕಾಂಗ್ರೆಸ್ ಪಟ್ಟಿಯನ್ನು ಪ್ರಕಟಿಸಿದೆ.
ಇದಕ್ಕೂ ಮೊದಲು, ಕಾಂಗ್ರೆಸ್ ವಕ್ತಾರ ಪವನ್ ಖೇರಾ ಇಂಡಿಯಾ ಒಕ್ಕೂಟದ ಪಕ್ಷಗಳ ನಡುವಿನ ಸೀಟು ಹಂಚಿಕೆ ಈಗಾಗಲೇ ಅಂತಿಮಗೊಳಿಸಲಾಗಿದೆ ಎಂದು ಹೇಳಿದ್ದರು. “ಎಲ್ಲವನ್ನೂ ಅಂತಿಮಗೊಳಿಸಲಾಗಿದೆ, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ, ಅದನ್ನು ಸೂಕ್ತ ಸಮಯದಲ್ಲಿ ಮಾಡಲಾಗುವುದು” ಎಂದಿದ್ದರು.
ಮಹಾರಾಷ್ಟ್ರದ ಮತದಾರರ ಪಟ್ಟಿಗೆ ಚುನಾವಣಾ ಆಯೋಗ 96 ಲಕ್ಷ ನಕಲಿ ಮತದಾರರನ್ನು ಸೇರಿಸಿದೆ : ರಾಜ್ ಠಾಕ್ರೆ ಆರೋಪ


