ಬಿಹಾರದ ಬೇಗುಸರಾಯ್ ಜಿಲ್ಲೆಯಲ್ಲಿ ಹಿಜಾಬ್ ಧರಿಸಿರುವ ಯುವತಿಗೆ ರಾಷ್ಟ್ರೀಕೃತ ಬ್ಯಾಂಕ್ನಲ್ಲಿ ವಹಿವಾಟು ನಡೆಸದಂತೆ ತಡೆಯಲಾಗಿದೆ ಎಂದು ವರದಿಯಾಗಿದೆ. ಯುವತಿಯು ಘಟನೆಯನ್ನು ವಿಡಿಯೊ ರೆಕಾರ್ಡ್ ಮಾಡಿ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಶನಿವಾರದಂದು ಈ ಘಟನೆ ನಡೆದಿದ್ದು, ಯುವತಿ ಬೇಗುಸರಾಯ್ನಲ್ಲಿರುವ ಮನ್ಸೂರ್ ಚೌಕ್ನ ಯುಕೊ ಬ್ಯಾಂಕ್ಗೆ ಹಣ ಡ್ರಾ ಮಾಡಲು ತೆರಳಿದ್ದರು.
ವೀಡಿಯೊದ ಪ್ರಕಾರ, ಮೂರ್ನಾಲ್ಕು ಬ್ಯಾಂಕ್ ಉದ್ಯೋಗಿಗಳು ಹಿಜಾಬ್ ಅನ್ನು ತೆಗೆದು ಹಾಕುವಂತೆ ಕೇಳಿದ್ದು, ನಂತರವಷ್ಟೇ ಹಣವನ್ನು ಹಿಂಪಡೆಯಲು ಅರ್ಜಿ ಸಲ್ಲಿಸಬಹುದು ಎಂದು ಹೇಳಿದ್ದಾರೆ. ಇದಕ್ಕೆ ಬಾಲಕಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪೋಷಕರಿಗೆ ಕರೆ ಮಾಡಿದ್ದಾರೆ. ಬ್ಯಾಂಕಿಗೆ ಆಗಮಿಸಿದ ಅವರ ಪೋಷಕರು ಬ್ಯಾಂಕಿನೊಳಗೆ ಹಿಜಾಬ್ ಅನ್ನು ಅನುಮತಿಸಲಾಗುವುದಿಲ್ಲ ಎಂದು ಲಿಖಿತ ಸೂಚನೆಯನ್ನು ತೋರಿಸಲು ಬ್ಯಾಂಕ್ ಉದ್ಯೋಗಿಗಳನ್ನು ಕೇಳಿದ್ದಾರೆ.
ಇದನ್ನೂ ಓದಿ: ಬಜರಂಗದಳ ಸದಸ್ಯನ ಕೊಲೆಯ ಹಿಂದೆ ಸಂಘಟನೆಗಳಿರುವ ಮಾಹಿತಿ ಸಿಕ್ಕಿಲ್ಲ: ಗೃಹಸಚಿವ
‘‘ನಾನು ಮತ್ತು ನನ್ನ ಮಗಳು ಪ್ರತಿ ತಿಂಗಳು ಬ್ಯಾಂಕ್ಗೆ ಬರುತ್ತಿದ್ದೆವು ಆದರೆ ಹಿಂದೆ ಯಾರೂ ಆಕ್ಷೇಪಿಸಿರಲಿಲ್ಲ. ಈಗ ಯಾಕೆ ಹೀಗೆ ಮಾಡುತ್ತಿದ್ದಾರೆ? ಬ್ಯಾಂಕಿಂಗ್ ಜೊತೆಗೆ ವ್ಯವಹರಿಸುವಾಗ ಹಿಜಾಬ್ ಅನ್ನು ನಿಷೇಧಿಸುವ ಕುರಿತು ಅವರು ಯಾವುದೇ ಲಿಖಿತ ಅಧಿಸೂಚನೆ ಅವರಲ್ಲಿ ಇದೆಯೇ?” ಎಂದು ಆಕೆಯ ತಂದೆ ವಿಡಿಯೋದಲ್ಲಿ ಪ್ರಶ್ನಿಸಿದ್ದಾರೆ.
ಈ ಮಧ್ಯೆ ಯುವತಿ ಘಟನೆಯ ವಿಡಿಯೊ ಮಾಡುತ್ತಿರುವುದನ್ನು ಆಕ್ಷೇಪ ವ್ಯಕ್ತಪಡಿಸಿರುವ ಬ್ಯಾಂಕ್ ಉದ್ಯೋಗಿಗಳು ಅದನ್ನು ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲಾಗಿದ್ದು, ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರು ರೀಟ್ವೀಟ್ ಮಾಡಿದ್ದಾರೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಟ್ಯಾಗ್ ಮಾಡಿರುವ ಅವರು, “ನಿಮ್ಮ ಹುದ್ದೆಯನ್ನು ಭದ್ರಪಡಿಸಿಕೊಳ್ಳಲು ನೀವು ಯಾವ ಮಟ್ಟಕ್ಕೆ ಹೋಗುತ್ತೀರಿ? ನೀವು ನಿಮ್ಮ ಸಿದ್ಧಾಂತ, ನೀತಿಗಳು, ನೈತಿಕ ಜವಾಬ್ದಾರಿ ಮತ್ತು ಆತ್ಮಸಾಕ್ಷಿಯನ್ನು ಬಿಜೆಪಿಯ ಮುಂದೆ ಅಡಮಾನವಿಟ್ಟಿದ್ದೀರಿ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ನೀವು ಸಂವಿಧಾನದ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದೀರಿ. ಕನಿಷ್ಠ ಸಂವಿಧಾನವನ್ನು ಗೌರವಿಸಿ ಮತ್ತು ಆಪಾದಿತ ನೌಕರರನ್ನು ಬಂಧಿಸಿ” ಎಂದು ಬರೆದಿದ್ದಾರೆ.
माननीय मुख्यमंत्री @NitishKumar जी,
कुर्सी की ख़ातिर आप बिहार में यह सब क्या करवा रहे है? माना आपने अपना विचार, नीति, सिद्धांत और अंतरात्मा सब भाजपा के पास गिरवी रख दिया है लेकिन संविधान की जो शपथ ली है कम से कम उसका तो ख़्याल रखिए। इस कुकृत्य के दोषी लोगों को गिरफ़्तार कीजिए। https://t.co/Ryg9FXzOMX
— Office of Tejashwi Yadav (@TejashwiOffice) February 21, 2022
ಈ ಮಧ್ಯೆ, UCO ಬ್ಯಾಂಕ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ನಿಂದ ಈ ಘಟನೆಯ ಕುರಿತು ಹೇಳಿಕೆಯನ್ನು ನೀಡಿದೆ. “ಬ್ಯಾಂಕ್ ನಾಗರಿಕರ ಧಾರ್ಮಿಕ ಭಾವನೆಗಳನ್ನು ಗೌರವಿಸುತ್ತದೆ ಮತ್ತು ತನ್ನ ಗೌರವಾನ್ವಿತ ಗ್ರಾಹಕರನ್ನು ಜಾತಿ ಅಥವಾ ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವುದಿಲ್ಲ. ಬ್ಯಾಂಕ್ ಈ ಪ್ರಕರಣದ ಬಗೆಗಿನ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದೆ” ಎಂದು ಹೇಳಿದೆ.
ಇದನ್ನೂ ಓದಿ: ಪಂಜಾಬ್ನಲ್ಲಿ ಕಾಂಗ್ರೆಸ್ ನಿರ್ನಾಮವಾಗಲಿದೆ: ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್