ರಾಜ್ಯದ ಗಮನ ಸೆಳೆದಿದ್ದ ಸುರತ್ಕಲ್ ಟೋಲ್ಗೇಟ್ ವಿರೋಧಿ ಹೋರಾಟದ ಮುಂಚೂಣಿಯಲ್ಲಿದ್ದ, ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಕಾರ್ಪೋರೇಟರ್, ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಅವರ ವಿರುದ್ಧ ‘ಕಹಳೆ ನ್ಯೂಸ್’ ಎಂಬ ಬಿಜೆಪಿ ಪರ ಪ್ರೊಪಗಾಂಡ ಸೃಷ್ಟಿಸುವ ವೆಬ್ಸೈಟೊಂದರ ಸಂಪಾದಕ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.
ಸುರತ್ಕಲ್ನಲ್ಲಿ ಬುಧವಾರ ನಡೆದ ಬೃಹತ್ ಟೋಲ್ಗೇಟ್ ವಿರೋಧಿ ಹೋರಾಟದ ಸಮಯದಲ್ಲಿ ಬಿಲ್ಲವ ನಾಯಕಿ ಪ್ರತಿಭಾ ಕುಳಾಯಿ ಅವರನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ಅವರು ತಮ್ಮ ಬಂಧನ ನಡೆಸುವ ಪೊಲೀಸರ ವಿರುದ್ಧ ಪ್ರತಿಭಟಿಸಿದ್ದರು. ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಕೂಡಾ ಆಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕಹಲೆ ನ್ಯೂಸ್ ಮಾಲೀಕ ಮತ್ತು ಮುಖ್ಯ ಸಂಪಾದಕ ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಶ್ಯಾಮ ಸುದರ್ಶನ ಭಟ್ ಹೊಸಮೂಲೆ ಎಂಬವರು, ಈ ವಿಡಿಯೊವನ್ನು ಫೇಸ್ಬುಕ್ನಲ್ಲಿ ಹಂಚಿ ಪ್ರತಿಭಾ ಕುಳಾಯಿ ಅವರ ಬಗ್ಗೆ ಅಶ್ಲೀಲವಾಗಿ ಬರೆದುಕೊಂಡಿದ್ದು, ಅವರ ಘನತೆಗೆ ಕುಂದುಂಟು ಮಾಡುವ ಪ್ರಯತ್ನ ನಡೆಸಿದ್ದಾರೆ.
ಇದನ್ನೂ ಓದಿ: ಸುರತ್ಕಲ್ ಟೋಲ್ಗೇಟ್ ವಿರೋಧಿ ಹೋರಾಟಗಾರರ ವಿರುದ್ಧ 2 ಪ್ರತ್ಯೇಕ FIR ದಾಖಲು
ಶ್ಯಾಮ ಸುದರ್ಶನ ಭಟ್ ಹೊಸಮೂಲೆ ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರ ಆಪ್ತ ಎನ್ನಲಾಗಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಬಿಜೆಪಿ ಶಾಸಕರಾದ ಹರೀಶ್ ಪೂಂಜಾ, ಭರತ್ ಶೆಟ್ಟಿ, ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್, ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಸಚಿವ ಬಿಸಿ ನಾಗೇಶ್ ಮತ್ತು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸೇರಿದಂತೆ ಹಲವರ ಜೊತೆಗೆ ಇರುವ ಚಿತ್ರಗಳು ಕೂಡಾ ವೈರಲ್ ಆಗಿದೆ.
ಈ ಬಗ್ಗೆ ಫೇಸ್ಬುಕ್ನಲ್ಲಿ ಪ್ರತಿಕ್ರಿಯೆ ನೀಡಿರುವ ಪ್ರತಿಭಾ ಕುಳಾಯಿ, “ನಾನು ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಕೊಂಡಿದ್ದು ಪ್ರತೀ ಬಾರಿಯೂ ನನ್ನ ಬಿಲ್ಲವ ಸಮುದಾಯ ನನ್ನ ಜೊತೆ ಬೆಂಗಾವಲಾಗಿ ನಿಂತಿದೆ. ನಾನು ಬಿಲ್ಲವ ಸಮುದಾಯದ ನನ್ನ ಅಣ್ಣ ತಮ್ಮಂದಿರಿಗೆ ಏನೇ ಸಮಸ್ಯೆ ಎದುರಾದರೂ ಅವರ ಜೊತೆ ಹಿಂದೆಯೂ ಇದ್ದೆ ಮುಂದೆಯೂ ಇದ್ದೇನೆ” ಎಂದು ಹೇಳಿದ್ದಾರೆ.
“ನನ್ನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುರತ್ಕಲ್ ಟೋಲ್ ವಿರೋಧಿ ಹೋರಾಟವನ್ನು ನೆಪವಾಗಿಟ್ಟು ತೀರಾ ಅಸಹ್ಯ ರೀತಿಯಲ್ಲಿ ಕಮೆಂಟ್ಸ್, ಪೋಸ್ಟ್ ಮಾಡುತ್ತಿದ್ದಾರೆ. ಈ ಪೋಸ್ಟ್ ನನ್ನ ಸಮುದಾಯದ ಅಣ್ಣ ತಮ್ಮಂದಿರು ಮಾತ್ರವಲ್ಲದೆ ನನಗೆ ಪ್ರತೀ ಬಾರಿ ಸಹಕಾರ ನೀಡುತ್ತಾ ಬಂದಿರುವ ತುಳುನಾಡಿನ ವಿದ್ಯಾವಂತ ಯುವಜನತೆ ಒಮ್ಮೆ ಗಮನಿಸಿದರೆ ಸಾಕು. ಈ ರೀತಿ ಕಮೆಂಟ್ಸ್ ಮಾಡುವವರ ಮನೆಯಲ್ಲೂ ತಾಯಿ, ಅಕ್ಕ, ತಂಗಿ, ಅತ್ತಿಗೆ, ಪತ್ನಿ… ಹೀಗೆ ಯಾರಾದರೂ ‘ಹೆಣ್ಣು’ ಎಂಬ ಪವಿತ್ರ ಸ್ಥಾನ ಪಡೆದ ಜೀವವೊಂದು ಇದ್ದರೆ ಇಂತಹ ಕೆಟ್ಟ ಪದ ಬಳಕೆ ಮಾಡುತ್ತಿರಲಿಲ್ಲ” ಎಂದು ಹೇಳಿದ್ದಾರೆ.
“ನನ್ನ ಕೋರಿಕೆ ಇಷ್ಟೇ… ನನ್ನ ಹೋರಾಟ, ಸಮುದಾಯದ ಮೇಲಿನ ನನ್ನ ಪ್ರೀತಿ, ಅಭಿಮಾನ ನೀವೆಲ್ಲ ಕಂಡಿದ್ದರೆ ನನ್ನನ್ನು ಈ ಸಂದರ್ಭದಲ್ಲೂ ಬೆಂಬಲಿಸಬೇಕು” ಎಂದು ಪ್ರತಿಭಾ ಕುಳಾಯಿ ವಿನಂತಿಸಿದ್ದಾರೆ.
ಇದನ್ನೂ ಓದಿ: ಸುರತ್ಕಲ್ ಅನಧಿಕೃತ ಟೋಲ್ ವಿರೋಧಿ ಹೋರಾಟ | ಪೊಲೀಸರಿಂದ ಬಂಧನ; ಬಿಡುಗಡೆಗೆ ಡಿವೈಎಫ್ಐ ಒತ್ತಾಯ
ತಮ್ಮ ಮೇಲಿನ ವೈಯಕ್ತಿಯ ಮತ್ತು ಅಶ್ಲೀಲ ದಾಳಿಯ ಬಗ್ಗೆ ನಾನುಗೌರಿ.ಕಾಂಗೆ ಪ್ರತಿಕ್ರಿಯಿಸಿರುವ ಪ್ರತಿಭಾ ಕುಳಾಯಿ ಅವರು, ಈ ಬಗ್ಗೆ ಪೊಲೀಸ್ ದೂರು ನೀಡುತ್ತಿದ್ದೇನೆ, ಅದಕ್ಕಾಗಿಯೆ ಪೊಲೀಸ್ ಠಾಣೆಯಲ್ಲಿ ಇದ್ದೇನೆ ಎಂದು ಹೇಳಿದ್ದಾರೆ.
ಶ್ಯಾಮ್ ಸುದರ್ಶನ್ ಭಟ್ನ ಕೃತ್ಯವನ್ನು ಸುರತ್ಕಲ್ ಟೋಲ್ಗೇಟ್ ವಿರೋಧಿ ಸಮಿತಿ ಖಂಡಿಸಿದ್ದು, “ಟೋಲ್ ವಿರೋಧಿ ಹೋರಾಟದ ಜನ ಬೆಂಬಲ ಕಂಡು ಬಿಜೆಪಿ ಪರಿವಾರ ಎಷ್ಟು ಕ್ರದ್ಧ ಆಗಿದೆ ಅಂದರೆ, ಹೋರಾಟದಲ್ಲಿ ಭಾಗಿಯಾಗಿರುವ ತುಳುವ ಹೆಣ್ಣು ಮಕ್ಕಳ ಕುರಿತ ‘ಸಭ್ಯ’ ಮುಖವಾಡಗಳೂ ವಿಕಾರವಾಗಿ ಅರಚಾಡತೊಡಗಿದೆ. ಸಮಾಜ ಇದನ್ನೆಲ್ಲಾ ಗಮನಿಸುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದೆ.
“ಇದು ಇಡೀ ಮಹಿಳಾ ಸಮುದಾಯಕ್ಕೆ ಮಾಡಿದ ಅವಮಾನ. ಸಮಿತಿ ಇದನ್ನು ತೀವ್ರವಾಗಿ ಖಂಡಿಸುತ್ತದೆ ಮತ್ತು ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಪ್ರತಿಭಾ ಕುಳಾಯಿ ಅವರ ಜೊತೆಗೆ ನಿಲ್ಲುತ್ತದೆ” ಎಂದು ಹೋರಾಟ ಸಮಿತಿ ಘೋಷಿಸಿದೆ.
ಇದನ್ನೂ ಓದಿ: ಸುರತ್ಕಲ್ ಟೋಲ್ ವಿರೋಧಿ ಹೋರಾಟಗಾರರಿಗೆ ತಡರಾತ್ರಿ ನೋಟಿಸ್: ‘ಜೈಲು ಸೇರಿದರೂ ಪ್ರತಿಭಟನೆ ನಿಲ್ಲಲ್ಲ’- ಮುನೀರ್ ಎಚ್ಚರಿಕೆ