Homeಮುಖಪುಟ‘ಹೆಡ್‌ ಬುಷ್‌’ ವಿಮರ್ಶೆ: ಜಯರಾಜ್‌ ದಾದಾಗಿರಿಯ ದಿನಗಳ ದರ್ಶನ

‘ಹೆಡ್‌ ಬುಷ್‌’ ವಿಮರ್ಶೆ: ಜಯರಾಜ್‌ ದಾದಾಗಿರಿಯ ದಿನಗಳ ದರ್ಶನ

- Advertisement -
- Advertisement -

ಇತ್ತೀಚಿನ ದಿನಗಳಲ್ಲಿ ರೌಡಿಸಂ ಕಥೆಗಳು ಕನ್ನಡ ಚಿತ್ರರಂಗದಿಂದ ಸ್ವಲ್ಪ ಹಿಂದಕ್ಕೆ ಸರಿದಂತೆ ಕಾಣುತ್ತಿದ್ದವು. ದುನಿಯಾ ಸೂರಿ ನಿರ್ದೇಶನದ ‘ಪಾಪ್‌ ಕಾರ್ನ್‌ ಮಂಕಿ ಟೈಗರ್‌’, ‘ಕೆಜಿಎಫ್‌’ ನಂತರದಲ್ಲಿ ರೌಡಿಸಂ ಸಿನಿಮಾಗಳು ಇಳಿಮುಖವಾದಂತೆ ಕಾಣುತ್ತಿದ್ದವು. ಆದರೆ ಡಾಲಿ ಧನಂಜಯ್‌ ಅಭಿನಯದ ‘ಹೆಡ್‌ ಬುಷ್‌’ ಇಂತಹ ಸಿನಿಮಾಗಳಿಗೆ ಮರುಜೀವ ನೀಡಿದೆ.

‘ಆ ದಿನಗಳು’, ‘ಎದೆಗಾರಿಕೆ’, ‘ತಮಸ್ಸು’, ‘ಕಳ್ಳರ ಸಂತೆ’ ಸಿನಿಮಾಗಳ ಮೂಲಕ ರಾಜಕೀಯ, ರೌಡಿಸಂ ಆಧಾರಿತ ಚಿತ್ರಕಥೆಗಳಿಗೆ ಬೇರೊಂದು ಆಯಾಮ ನೀಡಿದವರು ಅಗ್ನಿ ಶ್ರೀಧರ್‌. ಅವರ ‘ದಾದಾಗಿರಿಯ ದಿನಗಳು’ ಕೃತಿಯು ರಾಜ್ಯ ಕಂಡ ಭೂಗತ ಜಗತ್ತಿನ ದಾಖಲೆಯಾಗಿಯೂ ಗುರುತಿಸಿಕೊಂಡಿದೆ. ಈ ಕೃತಿಯನ್ನು ಆಧಾರಿಸಿಯೇ ‘ಆ ದಿನಗಳು’ ತೆರೆಗೆ ಬಂದಿತ್ತು. ಇದೇ ಪುಸ್ತಕವನ್ನು ಆಧರಿಸಿ ‘ಹೆಡ್‌ ಬುಷ್‌’ ನಿರ್ದೇಶಿಸಿದ್ದಾರೆ ‘ಶೂನ್ಯ’.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬೆಂಗಳೂರಿನ ಭೂಗತ ಪಾತಕಿ ಡಾನ್ ಜಯರಾಜ್‌ ಜೀವನದ ಸುತ್ತ ಸಾಗುವ ಶ್ರೀಧರ್‌ ಅವರ ಚಿತ್ರಕಥೆಯು, ಆ ಕಾಲದ ರಾಜಕಾರಣ, ರೌಡಿಸಂ, ಪಾತಕಿಗಳ ಪುಂಡಾಟ, ಪುಡಾರಿಗಳ ಒಳರಾಜಕಾರಣ, ಜನಜೀವನ ಒಂದರೊಳಗೊಂದು ಬೆಸೆದುಕೊಂಡಿರುವುದನ್ನು ಸರಳು ಸರಳಾಗಿ ಬಿಚ್ಚುತ್ತಾ ಹೋಗುತ್ತದೆ.

ರಾಜ್ಯದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದ ಮುಖ್ಯಮಂತ್ರಿ ದೇವರಾಜ ಅರಸು ಅವರ ಕಾಲದಲ್ಲಿನ ಬೆಂಗಳೂರು, ರಾಷ್ಟ್ರ ರಾಜಕಾರಣದ ಬಿಕ್ಕಟ್ಟುಗಳ ನಡುವೆ ಇಂದಿರಾ ಕಾಂಗ್ರೆಸ್‌ನ ಭಾಗವಾಗಿ ಹುಟ್ಟಿಕೊಂಡ ಇಂದಿರಾ ಬ್ರಿಗೇಡ್‌, ಅರಸು ಅವರ ಅಳಿಯ ಎಂ.ಡಿ.ನಟರಾಜ್‌ ಹಾಗೂ ಮಗಳಾದ ನಾಗರತ್ನ (ಸಿನಿಮಾದಲ್ಲಿ ರತ್ನಪ್ರಭಾ) ಅವರ ಒಡನಾಟಕ್ಕೆ ಬಂದ ಡಾನ್ ಜಯರಾಜ್‌, ರೌಡಿಗಳಿಗೆ ಸಿಕ್ಕ ಪ್ರಭುತ್ವದ ಪೋಷಣೆ, ಆ ಕಾಲದ ಬಡ್ಡಿ ದಂಧೆ, ಸೇಟುಗಳ ವ್ಯವಹಾರ, ಕಾಂಗ್ರೆಸ್‌ನೊಳಗಿನ ಒಳರಾಜಕಾರಣ ಇತ್ಯಾದಿಗಳೆಲ್ಲ ಕಥೆಯೊಳಗೆ ಬರುತ್ತವೆ. ಪಾತಕಿಗಳಿಗೆ ಪ್ರಭುತ್ವದ ಪೋಷಣೆ ಸಿಕ್ಕರೆ ಏನೆಲ್ಲ ಅನಾಹುತಗಳಾಗುತ್ತವೆ ಎಂಬುದನ್ನು ಇಲ್ಲಿ ಕಾಣಬಹುದು.

“ರಾಜಕೀಯ ಅಂದರೆ ಉಪಾಯವಾಗಿ ಇರೋರ್‌ ಅತ್ರ ತಗೊಂಡು ಇಲ್ಲದೆ ಇರೋರಿಗೆ ಕೊಡೋದು” ಎನ್ನುತ್ತಾರೆ ಅರಸು. ಈ ಪಾಲಿಸಿಯನ್ನು ಪಾಲಿಸುವ ಜಯರಾಜ್‌ ಗ್ಯಾಂಗ್‌ನ ಗೂಂಡಾಗಿರಿಗೆ ಮಾನವೀಯ ಸ್ಪರ್ಶ ನೀಡಲು ಯತ್ನಿಸಲಾಗಿದೆ. ರೌಡಿಗಳ ಅಟ್ಟಹಾಸದ ಹಿಂದೆ ಬಡವರ ಪರ ಕಾಳಜಿಯೂ ಇತ್ತು ಎಂಬ ನಿರೂಪಣೆಯನ್ನು ಆರಂಭದಲ್ಲಿ ನೀಡಲಾಗಿದೆ. ಆದರೆ ಭೂಗತ ಸಾಮ್ರಾಜ್ಯದಲ್ಲಿ ಮೇಲುಗೈ ಸಾಧಿಸಬೇಕೆಂದು ನಡೆಸುವ ಗ್ಯಾಂಗ್‌ವಾರ್‌, ಅದರೊಳಗಿನ ಪಿತೂರಿಗಳು, ಸನ್ನಿವೇಶಗಳು ಉಂಟು ಮಾಡುವ ವೈಷಮ್ಯ, ಪಾತಕಿಗಳಿಗೆ ಪ್ರಭುತ್ವದ ಬೆಂ‘ಬಲ’ ಸಿಕ್ಕರೆ ಆಗಬಹುದಾದ ಅನಾಹುತಗಳೆಲ್ಲ ಕಥೆಯೊಳಗೆ ಮುಖ್ಯಸ್ಥಾನ ಪಡೆದಿವೆ. ರೌಡಿಗಳ ವೈಯಕ್ತಿಕ ದ್ವೇಷ, ಅಸೂಯೆ, ಸೇಡು ತೀರಿಸಿಕೊಳ್ಳುವ ಹಪಾಹಪಿ, ರಾಜಕೀಯ, ಪೊಲೀಸ್ ವ್ಯವಸ್ಥೆ- ಇವುಗಳೇ ಮುಖ್ಯವಾಗುವುದನ್ನು ‘ಹೆಡ್‌ ಬುಷ್‌’ನಲ್ಲಿ ಕಾಣಬಹುದು.

‘ಹೆಡ್‌ಬುಷ್‌’ ಎಂಬ ಟೈಟಲ್‌ ಇಟ್ಟು, ಅದಕ್ಕೆ ಸಮರ್ಥನೆ ನೀಡಲೆಂದೇ ಎರಡು ದೃಶ್ಯಗಳನ್ನು ತರುಕಿದಂತಿದೆ. ಜಯರಾಜ್‌, ಗಂಗಾ ಹಾಗೂ ಇತರ ಸ್ನೇಹಿತರ ಬಾಲ್ಯವನ್ನು ತೋರಿಸುವಾಗ ‘ಹೆಡ್‌- ಬುಷ್‌’ (ಹೆಡ್‌ ಅಥವಾ ಟೈಲ್‌) ಜೂಜಿನ ಒಂದು ದೃಶ್ಯ ಬರುತ್ತದೆ. ಜಯರಾಜ್ ಗ್ಯಾಂಗ್ ಬಾರ್‌ನಲ್ಲಿ ಹೆಡ್‌ ಬುಷ್‌ ಆಡುತ್ತಿರುವ ಮತ್ತೊಂದು ದೃಶ್ಯ ಬರುತ್ತದೆ. ಈ ಸಂದರ್ಭದಲ್ಲಿ ಬರುವ ಪ್ರೊಫೆಸರ್‌ (ವಿ.ರವಿಚಂದ್ರನ್‌) ಹೆಡ್‌- ಬುಷ್‌ ಬಗ್ಗೆ ತತ್ವಜ್ಞಾನ ಹೊಡೆದು ಹೋಗುತ್ತಾರೆ. ಆ ಮೂಲಕ ಟೈಟಲ್‌ಗೊಂದು ಮಾನ್ಯತೆ ಕೊಡಲು ಶ್ರೀಧರ್‌ ಯತ್ನಿಸಿದ್ದಾರೆ.

ಅರಸು, ಎಂ.ಡಿ.ನಟರಾಜ್‌, ಜಯರಾ‌ಜ್‌, ಗಂಗಾ, ಖಾನ್‌, ಅರಸು, ರತ್ನಪ್ರಭಾ, ಕೊತ್ವಾಲ್‌ ರಾಮಚಂದ್ರ ರಾವ್, ಸಾಮ್ಸನ್‌, ಪೊಲೀಸ್ ಅಧಿಕಾರಿ ಗರುಡಾಚಾರ್‌ ಮೊದಲಾದ ಪಾತ್ರಗಳ ಸುತ್ತ ಸಾಗುವ ಹೆಡ್‌ಬುಷ್‌- ದಾದಾಗಿರಿಯ ದಿನಗಳನ್ನು ಢಾಳಾಗಿ ಚಿತ್ರಿಸಿದೆ.

ಈವರೆಗೆ ಬಂದಿರುವ ರೌಡಿಸಂ ಸಿನಿಮಾಗಳಿಗೆ ಹೋಲಿಸಿದರೆ ಇಲ್ಲಿನ ಕಾಸ್ಟ್ಯೂಮ್‌, ಮೇಕಿಂಗ್‌ ವಿಶಿಷ್ಟವಾಗಿದೆ. ಚರಣ್‌ ರಾಜ್‌ ಸಂಗೀತ ಇಷ್ಟವಾಗುತ್ತದೆ. ಆ ದಿನಗಳು, ಎದೆಗಾರಿಕೆಗಿಂತ ಹೆಚ್ಚಿನ ಸಿನಿಮೀಯತೆ ಹೆಡ್‌ಬುಷ್‌ನಲ್ಲಿದೆ. ಜಯರಾಜ್‌ನನ್ನು ವೈಭವೀಕರಿಸುವ ಹೊಡೆದಾಟದ ದೃಶ್ಯಗಳಿವೆ. ಎಪ್ಪತ್ತರ ದಶಕದ ಪಾತಕ ಲೋಕವನ್ನು ತೆರೆದಿಡಲಾಗಿದೆ. ತಾಂತ್ರಿಕವಾಗಿ ಸಿನಿಮಾ ಉತ್ತಮವಾಗಿದೆ. ಆದರೆ ‘ಎದೆಗಾರಿಕೆ’, ‘ಆ ದಿನಗಳು’ ಸಿನಿಮಾ ಕಥೆಯಲ್ಲಿ ಕಾಣುವಷ್ಟು ಕಲಾತ್ಮಕತೆ, ತೀವ್ರತೆ ಈ ಸಿನಿಮಾದಲ್ಲಿ ಇಲ್ಲ. ಮೊದಲೆರಡು ಸಿನಿಮಾಗಳಲ್ಲಿ ಪಾತಕ ಲೋಕದೊಳಗಿನ ತಲ್ಲಣಗಳಿಗೆ ಮಾನವೀಯ ಸ್ಪರ್ಶವನ್ನು ನೀಡಲಾಗಿದೆ. ಆದರೆ ಇಲ್ಲಿ ಗಂಡಸರ ತೋಳ್ಬಲ ಪ್ರದರ್ಶನ ರಾರಾಜಿಸಿದೆ.

ಇದನ್ನೂ ಓದಿರಿ: ‘ಕಾಂತಾರ’ ದೈವಕ್ಕೂ ‘ಕರ್ಣನ್‌’ ದೈವಕ್ಕೂ ಎಷ್ಟೊಂದು ವ್ಯತ್ಯಾಸ!

‘ಎ’ ಸರ್ಟಿಫಿಕೇಟ್‌ ಪಡೆದಿರುವ ಈ ಸಿನಿಮಾದಲ್ಲಿ ರೌಡಿಗಳ ಭಾಷೆಯನ್ನು ಹಸಿಹಸಿಯಾಗಿ ಬಳಸಲಾಗಿದೆ. ಗತಕಾಲದ ಕತೆಯ ನೆಪದಲ್ಲಿ ಲಿಂಗ ಸೂಕ್ಷ್ಮತೆಗಳನ್ನು ಅಣಕಿಸುವ ಸಂಭಾಷಣೆಗಳು ಸೇರಿಕೊಂಡಿವೆ. ಮೊದಲಾರ್ಧ ಜಯರಾಜ್ ಗ್ಯಾಂಗ್‌ನ ಪಾತಕಗಳ ವೈಭವೀಕರಣಕ್ಕೆ ಮೀಸಲಾದರೆ, ದ್ವಿತೀಯಾರ್ಧ ರೌಡಿಸಂ ಜಗತ್ತಿನ ಒಳ ಹೂರಣವನ್ನು ತೆರೆದಿಡುತ್ತದೆ.

ಭೂಗತ ಜಗತ್ತಿಗೆ ಇದ್ದವರಿಗೆ ಬಡವರ ಪರ ಕಾಳಜಿಯೂ ಇತ್ತು ಎಂದು ತೋರಿಸಲು ಯತ್ನಿಸಿರುವುದು ಅಸ್ವೀಕೃತ ಸಂಗತಿ. ಜಯರಾಜ್‌ ಥರದ ರೌಡಿಗಳು ಬಡವರಿಗೆ ತೊಂದರೆ ಕೊಡುತ್ತಿರಲಿಲ್ಲ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಇಂತಹ ನಿರೂಪಣೆಯು ರೌಡಿಸಂಗೆ ಜನಪ್ರಿಯತೆಯನ್ನು ತಂದುಕೊಡುವ ಅಪಾಯವಿರುತ್ತದೆ. ಹೀಗಾಗಿ ನಾಯಕ ಪಾತ್ರವನ್ನು ವೈಭವೀಕರಿಸುವ ಭರದಲ್ಲಿ ಯಾವ ವಿಚಾರಕ್ಕೆ ಒತ್ತು ನೀಡುತ್ತಿದ್ದೇವೆ ಎಂಬ ಎಚ್ಚರಿಕೆಯೂ ಇರಬೇಕಾಗುತ್ತದೆ.

‘ಹಿಂದಿ ಹೇರಿಕೆ’ಯನ್ನು ಪ್ರಶ್ನಿಸುವ ಈ ಕಾಲದ ತುರ್ತಿನ ಭಾಗವಾಗಿ ದೃಶ್ಯವೊಂದನ್ನು ಸಿನಿಮಾದಲ್ಲಿ ಸೇರಿಸಲಾಗಿದೆ. ಹಿಂದಿಯನ್ನು ಗೌರವಿಸುತ್ತೇವೆ, ಆದರೆ ಕನ್ನಡ ನಮ್ಮ ಹೃದಯದ ಭಾಷೆ. ಹಿಂದಿ ಹೇರಿಕೆಯನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ಹೆಡ್‌ಬುಷ್ ಚಿತ್ರ ತಂಡ ನೀಡಿದೆ.

ಜಯರಾಜ್‌ ಹೆಂಡತಿಯ ಪಾತ್ರದಲ್ಲಿ ಪಾಯಲ್‌ ರಜಪೂತ್ ಅಭಿನಯಿಸಿದ್ದಾರೆ. ಆದರೆ ಈ ಪಾತ್ರದ ಮಹತ್ವ ಅರ್ಥವಾಗುವುದಿಲ್ಲ. ಹೀಗೆ ಬಂದು, ಹಾಗೆ ಹೋದದಷ್ಟೇ ಎನಿಸುತ್ತದೆ.

ದಾದಾಗಿರಿಯ ದಿನಗಳನ್ನು ದೃಶ್ಯರೂಪದಲ್ಲಿ ನೋಡಬೇಕೆಂದು ಬಯಸುವವರಿಗೆ, ಡಾಲಿ ಧನಂಜಯ ಅವರ ಅಭಿನಯವನ್ನು ಕಣ್ತುಂಬಿಕೊಳ್ಳಲು ಬಯಸುವವರಿಗೆ ಹೆಡ್‌ ಬುಷ್‌ ಇಷ್ಟವಾಗಬಹುದು.

ದೇವರಾಜ್ (ದೇವರಾಜ ಅರಸು), ಪ್ರಕಾಶ್ ಬೆಳವಾಡಿ (ಗರುಡಾಚಾರ್‌), ಧನಂಜಯ (ಜಯರಾಜ್‌), ಶ್ರುತಿ ಹರಿಹರನ್‌ (ಅರಸು ಅವರ ಮಗಳಾದ ನಾಗರತ್ನ), ಲೂಸ್‌ ಮಾದ ಯೋಗಿ (ಗಂಗಾ), ವಶಿಷ್ಟ ಸಿಂಹ (ಕೊಲ್ವಾಲ್ ರಾಮಚಂದ್ರ), ಬಾಲನಾಗೇಂದ್ರ (ಸಾಮ್ಸನ್‌), ರಘು ಮುಖರ್ಜಿ (ನಟರಾಜ್‌), ಪಯಲ್ ರಜಪೂತ್‌ (ಜಯರಾಜ್ ಹೆಂಡತಿ) ಅವರು ಅಭಿನಯದಲ್ಲಿ ಮಿಂಚಿದ್ದಾರೆ. ಬಾದಲ್ ನಂಜುಂಡಸ್ವಾಮಿಯವರ ಕಲಾ ನಿರ್ದೇಶನ ಆ ಕಾಲವನ್ನು ಮರುಸೃಷ್ಟಿಸುವಲ್ಲಿ ಹೆಚ್ಚಿನ ಪಾತ್ರವನ್ನು ವಹಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಭೋಜಶಾಲಾ-ಕಮಲ್ ಮೌಲಾ ಪ್ರಕರಣದಲ್ಲಿ ಹಿಂದೂಗಳ ಪರ ತೀರ್ಪು…ಮಸೀದಿಯಲ್ಲ ದೇವಸ್ಥಾನವೆಂದ ಕೋರ್ಟ್ : ಏನಿದು ವಿವಾದ?

ಸುಮಾರು 100 ವರ್ಷಗಳ ಹಳೆಯ ವಿವಾದವಾದ ಭೋಜಶಾಲಾ-ಕಮಲ್ ಮೌಲಾ ಮಸೀದಿ ಪ್ರಕರಣದಲ್ಲಿ ಶುಕ್ರವಾರ (ಮೇ 15) ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದ್ದು, ಭೋಜಶಾಲಾದಲ್ಲಿರುವ ಐತಿಹಾಸಿಕ ಸ್ಥಳವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು...

“ಮಹಿಳಾ ಮೀಸಲಾತಿ ಮುಖವಾಡದಲ್ಲಿ ಡಿಲಿಮಿಟೇಷನ್ ಕುತಂತ್ರ ವಿಫಲ” ಬಿಜೆಪಿಗೆ ದಕ್ಷಿಣ ಭಾರತದ ಎಚ್ಚರಿಕೆ

ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2026ರ ಏಪ್ರಿಲ್ 16ರಂದು ಸಂಸತ್ತಿನ ವಿಶೇಷ ಅಧಿವೇಶನ ಕರೆದು, ಮಹಿಳಾ ಮೀಸಲಾತಿ ಅನುಷ್ಠಾನವನ್ನು ತ್ವರಿತಗೊಳಿಸುವ ನೆಪವನ್ನು ಮುಂದುಮಾಡಿ ಮೂರು ಮಸೂದೆಗಳನ್ನು ಮಂಡಿಸಿತು. ಇವುಗಳಲ್ಲಿ ಪ್ರಮುಖವಾದ ಸಂವಿಧಾನ (131ನೇ...

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...

ಗುಜರಾತ್| ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಹಲ್ಲೆ

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮಡಿ ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ದಲಿತ ವರನ ಮೇಲೆ ಮೇಲ್ಜಾತಿಯ ಪುರುಷರ ಗುಂಪೊಂದು ಜಾತಿ ನಿಂದನೆ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೇ 10 ರಂದು...

ಆತಂಕಕಾರಿಯಾದ ಆನೆ ದಾಳಿ

ಆನೆ ದಾಳಿ ಹಿಂದೆಂದಿಗಿಂತಲೂ ದುಪ್ಪಟ್ಟಾಗಿದೆ. ಅರಣ್ಯಮಂತ್ರಿ ಈಶ್ವರ್ ಖಂಡ್ರೆಯವರ ಪ್ರಕಾರ ಆನೆಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಾಡಿನ ಪ್ರಮಾಣ ಅಷ್ಟೆ ಇದೆ. ಅಂದರೆ ಕಾಡಿನ ಪ್ರಮಾಣ ಹೆಚ್ಚು ಮಾಡಬೇಕೆಂದರೆ ಮನುಷ್ಯರ ಆವಾಸ ಇಲ್ಲದೆ ಆನೆಗಳಿಗಾಗಿ...

ವೈದ್ಯಕೀಯ ಸೀಟುಗಳ ಹಂಚಿಕೆ ಕೇಂದ್ರೀಕರಣಕ್ಕೆ ದಕ್ಷಿಣದ ವಿರೋಧ; ನೀಟ್ ಪರೀಕ್ಷೆಯನ್ನೇ ರದ್ದುಗೊಳಿಸಲು ಇದು ಸಕಾಲ

ರಾಜ್ಯಪಟ್ಟಿಯಲ್ಲಿದ್ದ ಶಿಕ್ಷಣದ ಹಕ್ಕನ್ನು ನೀಟ್‌ ಹೆಸರಿನಲ್ಲಿ ಕೇಂದ್ರದ ಜಂಟಿ ಪಟ್ಟಿಗೆ ಸೇರಿಸುವ ಒಕ್ಕೂಟ ಸರ್ಕಾರದ ನಿರ್ಧಾರದಿಂದ ದಕ್ಷಿಣದ ರಾಜ್ಯಗಳು ಭಾರಿ ನಷ್ಟ ಅನುಭವಿಸುತ್ತಿವೆ. ಜೊತೆಗೆ, ನೀಟ್ ಪಾಸ್‌ ಮಾಡುವ ಒತ್ತಡ ತಾಳಲಾರದೆ ದೇಶದಾದ್ಯಂತ...

‘ಮತ’ ವ್ಯರ್ಥ ಮಾಡದ ಮತದಾರ: 2026ರಲ್ಲಿ ಕುಸಿಯಿತು ‘ನೋಟಾ’ ಅಬ್ಬರ

2026ರ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಾದ್ಯಂತ ಸುಮಾರು 10.9 ಲಕ್ಷ ಮತಗಳು 'ನೋಟಾ' (ಯಾರಿಗೂ ಮತವಿಲ್ಲ) ಪಾಲಾಗಿವೆ. ಆದರೆ, 2016 ಮತ್ತು 2021ರ ಚುನಾವಣೆಗಳಿಗೆ ಹೋಲಿಸಿದರೆ...

ಕೇರಳದ 13ನೇ ಮುಖ್ಯಮಂತ್ರಿ ವಿ.ಡಿ. ಸತೀಶನ್: ವಿದ್ಯಾರ್ಥಿ ನಾಯಕನಿಂದ ಸಿಎಂ ಸ್ಥಾನದವರೆಗೆ ಸತೀಶನ್ ಪಯಣ

ತಿರುವನಂತಪುರಂ: ಕೇರಳಂನ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಆಯ್ಕೆ ಮಾಡಿದೆ. ಆ ಮೂಲಕ ಹಲವು ದಿನಗಳಿಂದ ಈ ಬಗ್ಗೆ ನಡೆಯುತ್ತಿದ್ದ ಕುತೂಹಲ ಮತ್ತು ಚರ್ಚೆಗಳಿಗೆ ತೆರೆ ಬಿದ್ದಿದೆ.  ಅಖಿಲ ಭಾರತ...