ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿರುವ ನೀಟ್ (NEET) ಪರೀಕ್ಷಾ ಹಗರಣದ ವಿರುದ್ಧ ಜಂತರ್ ಮಂತರ್ನಲ್ಲಿ ಸೋನಮ್ ವಾಂಗ್ಚುಕ್ ಹಾಗೂ ಕಾಕ್ರೋಚ್ ಜನತಾ ಪಾರ್ಟಿ (CJP) ಯುವಜನರು ನಡೆಸುತ್ತಿರುವ ಹೋರಾಟದ ಮೈದಾನದಿಂದ ಆತಂಕಕಾರಿ ವರದಿಗಳು ಹೊರಬರುತ್ತಿವೆ. ಪ್ರತಿಭಟನಾ ಸ್ಥಳಕ್ಕೆ 30 ರಿಂದ 40 ಮಂದಿ ಅಪರಿಚಿತ ನುಸುಳುಕೋರರು ನುಗ್ಗಿದ್ದು, ಇವರು ಶಾಂತಿಯುತ ಹೋರಾಟವನ್ನು ಪ್ರಚೋದನಾತ್ಮಕ ಮತ್ತು ದೇಶವಿರೋಧಿ ಘೋಷಣೆಗಳ ಮೂಲಕ ಹಾದಿ ತಪ್ಪಿಸಲು ಸಂಚು ರೂಪಿಸುತ್ತಿದ್ದಾರೆ ಎಂದು ಸಿಜೆಪಿ ಗಂಭೀರ ಆರೋಪ ಮಾಡಿದೆ.
ಪ್ರತಿಭಟನಾ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಜೆಪಿ ವಕ್ತಾರ ಅಶುತೋಷ್ ರಂಕಾ, BJP ಮತ್ತು ದೆಹಲಿ ಪೊಲೀಸರೊಂದಿಗೆ ಸಂಬಂಧ ಹೊಂದಿರುವ ಕಿಡಿಗೇಡಿಗಳು ನಮ್ಮ ಪ್ರತಿಭಟನಾ ಸ್ಥಳಕ್ಕೆ ನುಸುಳಿದ್ದಾರೆ. ನಮ್ಮ ಶಾಂತಿಯುತ ಪ್ರತಿಭಟನೆಯನ್ನು ಹತ್ತಿಕ್ಕಲು ದೊಡ್ಡ ಮಟ್ಟದ ಪಿತೂರಿ ನಡೆದಿದೆ. ನುಗ್ಗಿರುವ ಈ ಕಿಡಿಗೇಡಿಗಳಿಗೂ ನಮ್ಮ ಪಕ್ಷಕ್ಕಾಗಲಿ ಅಥವಾ ಸೋನಮ್ ವಾಂಗ್ಚುಕ್ ಅವರಿಗಾಗಲಿ ಯಾವುದೇ ಸಂಬಂಧವಿಲ್ಲ. ನಮ್ಮ ಬೆಂಬಲಿಗರು ಜಾಗರೂಕರಾಗಿರಬೇಕು ಮತ್ತು ಇಂತಹ ಪಿತೂರಿ ಶಕ್ತಿಗಳನ್ನು ಗುರುತಿಸಿ ದೂರ ಇಡಬೇಕು ಎಂದು ಕರೆ ನೀಡಿದ್ದಾರೆ.
ಮತ್ತೊಂದೆಡೆ, ನೀಟ್ ಪೇಪರ್ ಲೀಕ್ ಹಗರಣವನ್ನು ವಿರೋಧಿಸಿ ಜುಲೈ 20ರಂದು ಹಮ್ಮಿಕೊಳ್ಳಲಾಗಿರುವ ಬೃಹತ್ ಸಂಸತ್ ಚಲೋ ಮೆರವಣಿಗೆಯನ್ನು ಶಿಕ್ಷಣ ತಜ್ಞ ಸೋನಮ್ ವಾಂಗ್ಚುಕ್ ಅವರು ಭಾರತದ ‘ಎರಡನೇ ಸ್ವಾತಂತ್ರ್ಯ ಚಳವಳಿ’ ಎಂದು ಬಣ್ಣಿಸಿದ್ದಾರೆ.
ದೆಹಲಿ ಪೊಲೀಸರಿಂದ ಬಂಧನಕ್ಕೊಳಗಾಗಿ ಆಸ್ಪತ್ರೆಯಲ್ಲಿರುವ ವಾಂಗ್ಚುಕ್ ಅವರು ತಮ್ಮ ಪತ್ನಿಯ ಮೂಲಕ ಬೆಂಬಲಿಗರಿಗೆ ಮಹತ್ವದ ಸಂದೇಶ ರವಾನಿಸಿದ್ದು, “ದೇಶದ ಯುವಜನರ ಭವಿಷ್ಯಕ್ಕಾಗಿ ಹಮ್ಮಿಕೊಳ್ಳಲಾಗಿರುವ ಈ ಸಂಸತ್ ಚಲೋ ಮೆರವಣಿಗೆಯನ್ನು ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಯಶಸ್ವಿಗೊಳಿಸಬೇಕು,” ಎಂದು ದೇಶದ ಜನತೆಗೆ ಮನವಿ ಮಾಡಿದ್ದಾರೆ.
ಹೈಕೋರ್ಟ್ ಮೆಟ್ಟಿಲೇರಿದ ವಾಂಗ್ಚುಕ್ ಪತ್ನಿ
ಉಪವಾಸ ಸತ್ಯಾಗ್ರಹದ ಹಿನ್ನೆಲೆಯಲ್ಲಿ ಸೋನಮ್ ವಾಂಗ್ಚುಕ್ ಅವರನ್ನು ದೆಹಲಿ ಪೊಲೀಸರು ಬಲವಂತವಾಗಿ ಸಫ್ದರ್ಜಂಗ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಸಫ್ದರ್ಜಂಗ್ ಆಸ್ಪತ್ರೆಯ ಚಿಕಿತ್ಸೆಯ ಮೇಲೆ ನಮಗೆ ನಂಬಿಕೆಯಿಲ್ಲ, ಎಂದು ವಾಂಗ್ಚುಕ್ ಅವರ ಪತ್ನಿ ಆತಂಕ ವ್ಯಕ್ತಪಡಿಸಿದ್ದಾರೆ.
ವಾಂಗ್ಚುಕ್ ಅವರ ಆರೋಗ್ಯದ ಹಿತದೃಷ್ಟಿಯಿಂದ ಅವರನ್ನು ತಮಗೆ ಇಷ್ಟಬಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಅನುಮತಿ ಕೋರಿ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇದೇ ವೇಳೆ, ಸೋನಮ್ ವಾಂಗ್ಚುಕ್ ಅವರನ್ನು ದೆಹಲಿ ಪೊಲೀಸರು ಬಲವಂತವಾಗಿ ಹೊತ್ತೊಯ್ದ ದಿನದಿಂದಲೇ, ಸಿಜೆಪಿ ಸಂಸ್ಥಾಪಕರಾದ ಅಭಿಜೀತ್ ದೀಪ್ಕೆ ಅವರು ಜಂತರ್ ಮಂತರ್ನಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದಾರೆ.


