ಸೇನಾ ಹೆಲಿಕಾಪ್ಟರ್ ಪತನದಿಂದಾಗಿ ಮೃತಪಟ್ಟ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಬಿಪಿನ್ ರಾವತ್ ರವರ ಮತ್ತು ಅವರ ಪತ್ನಿ ಮಧುಲಿಕಾ ರಾವತ್ ರವರ ಮೃತದೇಹಗಳನ್ನು ಇಂದು ಸಂಜೆ ವಿಶೇಷ ವಿಮಾನದಲ್ಲಿ ಸಾಗಿಸಲಿದ್ದು, ನಾಳೆ ಅಂತ್ಯಕ್ರಿಯೆ ನಡೆಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಈ ದುರ್ಘಟನೆಯಲ್ಲಿ ಬದುಕುಳಿದಿರುವ ಏಕೈಕ ವ್ಯಕ್ತಿ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಆಗಿದ್ದಾರೆ. ಅವರು ತೀವ್ರ ಸುಟ್ಟಗಾಯಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಜನರಲ್ ರಾವತ್ ಅವರನ್ನು ಬರಮಾಡಿಕೊಳ್ಳಲು ವರುಣ್ ಸಿಂಗ್ ವೆಲ್ಲಿಂಗ್ಟನ್ ನಿಂದ ಸೂಲೂರಿಗೆ ತೆರಳಿದ್ದರು.
ರಾವತ್ರವರ ಸಾವಿಗೆ ದೇಶ-ವಿದೇಶಗಳಿಂದ ಸಂತಾಪ ಸೂಚಿಸಲಾಗಿದೆ. ಅಮೆರಿಕ, ರಷ್ಯಾ, ಚೀನಾ, ಪಾಕಿಸ್ತಾನ, ಭೂತಾನ್, ನೇಪಾಳ ಒಳಗೊಂಡಂತೆ ಹಲವು ದೇಶಗಳು ಸಂತಾಪ ಸಂದೇಶ ಕಳುಹಿಸಿವೆ.
ರಾವತ್ರವರ ಹಠಾತ್ ನಿರ್ಗಮನಕ್ಕೆ ಅವರ ಸ್ವಂತ ರಾಜ್ಯ ಉತ್ತರಖಂಡ ರಾಜ್ಯ ಮರುಗಿದೆ. ರಾಜ್ಯದಲ್ಲಿ ಮೂರು ದಿನಗಳ ಶೋಕಾಚರಣೆಗೆ ರಾಜ್ಯ ಸರ್ಕಾರ ನಿರ್ಧರಿಸಿದೆ.
ಅಪಘಾತದಲ್ಲಿ ಸಾವನ್ನಪ್ಪಿದ ಇತರ ರಕ್ಷಣಾ ಸಿಬ್ಬಂದಿಗಳಲ್ಲಿ ಬ್ರಿಗೇಡಿಯರ್ ಎಲ್ಎಸ್ ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಹರ್ಜಿಂದರ್ ಸಿಂಗ್, ವಿಂಗ್ ಕಮಾಂಡರ್ ಪಿಎಸ್ ಚೌಹಾಣ್, ಸ್ಕ್ವಾಡ್ರನ್ ಲೀಡರ್ ಕೆ ಸಿಂಗ್, ಜೆಡಬ್ಲ್ಯೂಒ ದಾಸ್, ಜೆಡಬ್ಲ್ಯೂಒ ಪ್ರದೀಪ್ ಎ, ಹವಾಲ್ದಾರ್ ಸತ್ಪಾಲ್, ನಾಯಕ್ ಗುರುಸೇವಕ್ ಸಿಂಗ್, ನಾಯಕ್ ಜಿತೇಂದರ್ ಕುಮಾರ್, ಲ್ಯಾನ್ಸ್ ನಾಯಕ್ ವಿವೇಕ್ ಕುಮಾರ್ ಮತ್ತು ಲ್ಯಾನ್ಸ್ ನಾಯಕ್ ಸಾಯಿ ತೇಜಾ ಸೇರಿದ್ದಾರೆ.
ಇದನ್ನೂ ಓದಿ: ನಾಗಾಲ್ಯಾಂಡ್ ಹತ್ಯಾಕಾಂಡ-‘AFSPA ನೆರಳಿನಲ್ಲಿ ಶಾಂತಿ ಮಾತುಕತೆ ಇಲ್ಲ’: ಮಾಜಿ ಬಂಡಾಯ ನಾಗಾ ಸಂಘಟನೆ