ಸಂವಿಧಾನವನ್ನೆ ಬದಲಿಸುವುದಾಗಿ ಹೇಳುವ ಬಿಜೆಪಿ ಪಕ್ಷದವರಿಗೆ ಪಂಚಾಯತ್ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲ. ಆ ಪಕ್ಷದವರಿಗೆ ಜನರ ಸಂಕಷ್ಟದ ಅರಿವಿಲ್ಲ. ಅಭಿವೃದ್ದಿ ಪರಿಕಲ್ಪನೆಗಳಿಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ, ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ. ಅವರು ಮಂಗಳವಾರ ಭಟ್ಕಳದಲ್ಲಿ ನಡೆದ ಕಾಂಗ್ರೆಸ್ನ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತಾಡುತ್ತ ಕೇಂದ್ರ ಮತ್ತು ರಾಜ್ಯದಲ್ಲಿ ಜನವಿರೋಧಿ ನೀತಿಯ ಹೊಣೆಗೇಡಿ ಸರ್ಕಾರಗಳಿವೆಯೆಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದಲ್ಲಿ ರೈತ ವಿರೋಧಿ ಕಾಯ್ದೆ ರದ್ದತಿಗಾಗಿ ಪ್ರತಿಭಟನೆ ನಡೆಸಿದ ರೈತರಲ್ಲಿ 700ಕೂ ಹೆಚ್ಚು ಮಂದಿ ಮೃತರಾದರೂ ಪ್ರಧಾನಿ ಮೋದಿ ಒಂದು ವಿಷಾಧವಾಗಲಿ, ಕ್ಷಮೆಯಾಗಲಿ ಕೇಳಲಿಲ್ಲ. ಜನರ ಸಮಸ್ಯೆ ಧಿಕ್ಕರಿಸಿ ಕೇಂದ್ರ ಸರ್ಕಾರ ಅಗತ್ಯ ವಸ್ತು, ತೈಲ ಬೆಲೆ ಏರಿಸುತ್ತಲೇ ಇದೆ. ಮೋದಿ ಸರ್ಕಾರ ಎಲ್ಲ ರಂಗದಲ್ಲೂ ಖಾಸಗೀಕರಣ ಮಾಡಲು ಹೊರಟಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳ ಜನ ವಿರೋಧಿ ಧೋರಣೆಗೆ ಜನರು ಬೇಸತ್ತಿದ್ದು ಅದು ಸ್ಥಳಿಯಾಡಳಿತ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಈಗ ನಡೆಯುವ ಚುನಾವಣೆಯಲ್ಲಿ ಆಸ್ಪೋಟವಾಗಲಿದೆ ಎಂದು ಹರಿಪ್ರಸಾದ್ ಉತ್ತರ ಕನ್ನಡವೂ ಸೇರಿದಂತೆ ರಾಜ್ಯದ ಹೆಚ್ಚಿನ ಕಡೆ ಕಾಂಗ್ರೆಸ್ ಗೆಲ್ಲಲಿದೆಯೆಂದು ವಿಶ್ವಾಸ ವ್ಯಕ್ತಪಡಿಸಿದರು.
ಭಟ್ಕಳದಲ್ಲಿ ಹಿಂದಿನ ಅವಧಿಯಲ್ಲಿ ಶಾಸಕರಾಗಿದ್ದ ಮಂಕಾಳ ವೈದ್ಯ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ದೊಡ್ಡ ಪ್ರಮಾಣದಲ್ಲಿ ಮಾಡಿದ್ದರು. ಆದರೆ ಬಿಜೆಪಿ ಚುನಾವಣೆ ಸಂದರ್ಭದಲ್ಲಿ ಮರಣ ಹೊಂದಿದ್ದ ಪರೇಶ್ ಮೇಸ್ತ ಪ್ರಕರಣ ಕೋಮು ರಾಜಕಾರಣಕ್ಕೆ ಬಳಸಿಕೊಂಡು ಚುನಾವಣೆ ಗೆದ್ದಿತು. ಕೇಂದ್ರ ಹಾಗೂ ರಾಜ್ಯ ಎರಡು ಕಡೆ ಬಿಜೆಪಿಯವರೆ ಆಡಳಿತ ನಡೆಸುತ್ತಿದ್ದರೂ ಪರೇಶ್ ಸಾವಿನ ಕಾರಣವಾಗಲಿ, ಆರೋಪಿಗಳನ್ನಾಗಲಿ ಪತ್ತೆಹಚ್ಚಲಾಗಿಲ್ಲ. ಸರಿಯಾದ ತನಿಖೆ ನಡೆದರೆ ಆರ್ಎಸ್ಎಸ್ ಮತ್ತು ಬಿಜೆಪಿಯವರೆ ಸಿಕ್ಕಿಬೀಳಲಿದ್ದಾರೆಂದು ಹೇಳಿದ ಹರಿಪ್ರಸಾದ್ ಸುಪ್ರೀಮ್ ಕೋರ್ಟ್ ಮೇಲ್ವಿಚಾರಣೆಯಲ್ಲಿ ಪರೇಶ್ ಸಾವಿನ ತನಿಖೆ ನಡೆಸುವಂತೆ ಆಗ್ರಹಿಸಿದರು.
ಇದನ್ನೂ ಓದಿ: ವಿಧಾನ ಪರಿಷತ್ಗೆ ಟಿಕೆಟ್ ಪೈಪೋಟಿ; ಉತ್ತರ ಕನ್ನಡ ಬಿಜೆಪಿಯಲ್ಲಿ ಬೆಂಕಿ!!