Homeಮುಖಪುಟವಿಧಾನ ಪರಿಷತ್‌ಗೆ ಟಿಕೆಟ್ ಪೈಪೋಟಿ; ಉತ್ತರ ಕನ್ನಡ ಬಿಜೆಪಿಯಲ್ಲಿ ಬೆಂಕಿ!!

ವಿಧಾನ ಪರಿಷತ್‌ಗೆ ಟಿಕೆಟ್ ಪೈಪೋಟಿ; ಉತ್ತರ ಕನ್ನಡ ಬಿಜೆಪಿಯಲ್ಲಿ ಬೆಂಕಿ!!

- Advertisement -
- Advertisement -

ಉತ್ತರ ಕನ್ನಡದಲ್ಲಿ ವಿಧಾನ ಪರಿಷತ್ತಿಗೆ ಸ್ಥಳಿಯಾಡಳಿತ ಸಂಸ್ಥೆಗಳ ಕ್ಷೇತ್ರದಿಂದ ನಡೆಯಲಿರುವ ಚುನಾವಣೆ ಆಖಾಡಕ್ಕೀಗ ರಂಗೇರಿದೆ! ಆಡಳಿತಾರೂಢ ಬಿಜೆಪಿಯಲ್ಲಿ ತಿಂಗಳಾನುಗಟ್ಟಳೆ ನಡೆದ ಟಿಕೆಟ್‌ಗೆ ಪೈಪೋಟಿಗೆ ಬ್ರೇಕ್ ಬಿದ್ದಿದ್ದು, ಕಾರವಾರದ ಮೀನುಗಾರ ಸಮುದಾಯದ ಗಣಪತಿ ದುಮ್ಮಾ ಉಳ್ವೇಕರ್‌ರನ್ನು ಅಭ್ಯರ್ಥಿಯೆಂದು ಘೋಷಿಸಲಾಗಿದೆ. ಅಭ್ಯರ್ಥಿ ಹೆಸರು ಪ್ರಕಟವಾಗುತ್ತಿದ್ದಂತೆ ಜಿಲ್ಲಾ ಬಿಜೆಪಿಯಲ್ಲಿ ಬೆಂಕಿಬಿದ್ದಂತಾಗಿದ್ದು, ಕೆಲ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಹೊರಹಾಕುತ್ತಿದ್ದಾರೆ.

ಬಿಜೆಪಿ ತನ್ನ ಭಾರಕ್ಕೆ ತಾನೆ ಕುಸಿಯುತ್ತಿದೆ; ಹಾದಿ-ಬೀದಿಯಲ್ಲಿ ಹೋಗುವವರನ್ನೆಲ್ಲ ಕಾಂಗ್ರೆಸ್ಸಿಂದ ಬಂದವರೆಂದು ಹೇಳಿ ತಂದು ತುಂಬಿಕೊಂಡಿದ್ದರ ಫಲವಿದು ಎಂದು ಎರಡ್ಮೂರು ದಶಕದಿಂದ ಪಕ್ಷಕ್ಕಾಗಿ ಬೆವರಿಳಿಸಿದ ಹಿರಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬಿಜೆಪಿಯ ಕಷ್ಟದ ದಿನಗಳಿಂದಲೂ ಆ ಪಾರ್ಟಿಯಲ್ಲಿದ್ದವರೂ ಸೇರಿದಂತೆ ಸುಮಾರು ಒಂದೂ ಮುಕ್ಕಾಲು ಡಜನ್ ಮಂದಿ ಟಿಕೆಟ್‌ಗಾಗಿ ಲಾಭಿ ನಡೆಸಿದ್ದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಮಂತ್ರಿ ಹೆಬ್ಬಾರ್, ಸಂಸದ ಅನಂತಕುಮಾರ್ ಹೆಗಡೆ ಮತ್ತು ಶಾಸಕಿ ರೂಪಾಲಿ ನಾಯ್ಕ್ ಒಂದಾಗಿ ಉಳ್ವೇಕರ್ ಕ್ಯಾಂಡಿಡೇಟ್ ಮಾಡಿದ್ದಾರೆನ್ನಲಾಗಿದೆ.

ಗೋವಿಂದ ನಾಯ್ಕ್‌

ಕಳೆದ ಬಾರಿ ಸೋಲುತ್ತಾರೆಂದು ಗೊತ್ತಿದ್ದೂ ಉಳ್ವೇಕರ್‌ರನ್ನು ನಿಲ್ಲಿಸಲಾಗಿತ್ತು. ಈಗ ಗೆಲ್ಲುವ ಅವಕಾಶವಿರುವಾಗ ಅಂದು ಪಟ್ಟ ಕಷ್ಟಕ್ಕೆ ಇನಾಮು ಕೊಡಬೇಕಾದುದು ಧರ್ಮವೆಂದು ಪಕ್ಷದ ಹಿರಿಯರು ಹೇಳುತ್ತಿದ್ದಾರಾದರೂ, ಇದೆಲ್ಲ ಮುನಿಸಿಕೊಂಡಿರುವ ಮೀನುಗಾರ ಸಮುದಾಯವನ್ನು ಸಮಾಧಾನಿಸುವ ನಾಟಕವೆಂದು ಟಿಕೆಟ್ ವಂಚಿತರ ಬೆಂಬಲಿಗರ ಅಭಿಪ್ರಾಯವಾಗಿದೆ. ಉಳ್ವೇಕರ್ ನಿಷ್ಟಾವಂತ ಬಿಜೆಪಿಗರಲ್ಲ; ಅವರು ಆನಂದ ಅಸ್ನೋಟಿಕರ್ ಮತ್ತವರ ತಂದೆಯ ಹಿಂಬಾಲಕರಾಗಿದ್ದರು. ಆನಂದ ಬಿಜೆಪಿಗೆ ಬಂದಾಗ ಅವರೊಂದಿಗೆ ಉಳ್ವೇಕರ್ ಬಂದಿದ್ದರು. ಆದರೆ ಆನಂದ್ ಜತೆಗಿನ ಬಂದರು ವ್ಯವಹಾರದ ವೈಮನಸ್ಸಿನಿಂದ ಉಳ್ವೇಕರ್ ಬಿಜೆಪಿಯಲ್ಲೆ ಉಳಿದರೆಂಬುದು ಕಟ್ಟರ್ ಬಿಜೆಪಿಗರು ಹೇಳುತ್ತಾರೆ.

ಕಳೆದ ವಿಧಾನ ಸಭಾ ಚುನಾವಣೆ ಹೊತ್ತಲ್ಲಿ ನಿಗೂಢವಾಗಿ ಸಾವಗೀಡಾಗಿದ್ದ ಮೀನುಗಾರರ ಹುಡುಗ ಪರೇಶ್ ಮೇಸ್ತನ ಹೆಸರಲ್ಲಿ ಇಡೀ ಕರಾವಳಿಯ ಮೀನುಗಾರರ ಮತ ಪಡೆದಿದ್ದ ಬಿಜೆಪಿಯವರು ಆ ಬಳಿಕ ಉದಾಸೀನ ಮಾಡಿದ್ದರೆಂಬ ಬೇಸರ ಬೆಸ್ತರಲ್ಲಿತ್ತು. ಅಲ್ಲದೆ ಕಾರವಾರದ ವಾಣಿಜ್ಯ ಬಂದರು ವಿಸ್ತರಣೆಯಿಂದ ತೊಂದರೆಗೀಡಾಗುವ ಮೀನುಗಾರರು ಬಿಜೆಪಿ ಮೇಲೆ ಸಿಟ್ಟಾಗಿದ್ದಾರೆ. ಇದೆಲ್ಲ ಸರಿ ತೂಗಿಸಲು ಮೀನುಗಾರ ಪಂಗಡದ ಉಳ್ವೇಕರ್‌ಗೆ ಟಿಕೆಟ್ ಕೊಟ್ಟು ಅರ್ಹರಿಗೆ ಮೋಸ ಮಾಡಲಾಗಿದೆ ಎಂದು ಬಿಜೆಪಿ ಬಂಡಯಗಾರರು ಹೇಳುತ್ತಿದ್ದಾರೆ.

ಭಟ್ಕಳದ ಬಿಜೆಪಿ ಕಾರ್ಯರ್ಕರು ಸಾಮಾಜಿಕ ಜಾಲತಾಣದಲ್ಲಿ ”ನಿಷ್ಟಾವಂತರಾಗಿ, ಪ್ರಾಮಾಣಿಕರಾಗಿ ದುಡಿದವರಿಗೆ ಬಿಜೆಪಿಯಲ್ಲಿ ಅಧಿಕಾರ ಪಡೆಯಲು ಅವಕಾಶವಿಲ್ಲ. ಪೊಲೀಸ್ ಕೇಸ್ ಹಾಕಿಸಿಕೊಳ್ಳಲು, ಜೈಲಿಗೆ ಹೋಗಲು ಮಾತ್ರ ನಿಷ್ಟಾವಂತರು ಬೇಕೆ?” ಎಂಬ ಅಭಿಯಾನ ಶುರು ಹಚ್ಚಿಕೊಂಡಿದ್ದಾರೆ. ಬಹುಸಂಖ್ಯಾತ ನಾಮಧಾರಿ ಜಾತಿಯ ಭಟ್ಕಳದ ಗೋವಿಂದ ನಾಯ್ಕ್‌ಗೆ ಟಿಕೆಟ್ ಕೊಡುವಂತೆ ಒತ್ತಾಯಿಸಲಾಗಿತ್ತು. ಕೊನೆ ದಿನದವರೆಗೂ ಹಿಂದೂ ಸಂಘಟನೆಯ ಗೋವಿಂದ ನಾಯ್ಕರಿಗೆ ಟಿಕೆಟ್ ಎಂಬ ವಾತಾವರಣವೂ ಇತ್ತು. ಅಂತಿಮವಾಗಿ ಗೋವಿಂದ ನಾಯ್ಕರಿಗೆ ಟಿಕೆಟ್ ಕೊಡದಿರುವುದು ಹಿಂದುತ್ವ ಕಾರ್ಯಕರ್ತರನ್ನು ಕೆರಳಿಸಿದೆ.

ಕೆ.ಜಿ.ನಾಯ್ಕ್

ಸಾಮಾಜಿಕ ಜಾಲ ತಾಣದಲ್ಲಿ ದೀವರು[ನಾಮಧಾರಿ]ಸಮುದಾಯಕ್ಕೆ ಅನ್ಯಾಯ ಮಾಡಲಾಗುತ್ತಿದೆ ಎಂಬ ಚರ್ಚೆ ಜೋರಾಗಿದೆ. 32 ವರ್ಷದಿಂದ ನಾನು ಬಿಜೆಪಿಯ ವಿವಿಧ ಸಂಘಟನೆಯಲ್ಲಿ ಸಕ್ರಿಯನಾಗಿದ್ದೇನೆ. ಜಿಲ್ಲಾಧ್ಯಕ್ಷನಾಗಿಯೂ ಕೆಲಸ ಮಾಡಿದ್ದೇನೆ. ಟಿಕೆಟ್ ಕೇಳಿದವರಲ್ಲಿ ನಾನೇ ಹಿರಿಯ. ಒಮ್ಮೆ ಅವಕಾಶ ಕೊಡದಿದ್ದರೆ ಪಕ್ಷದ ಸಂಘಟನೆಯಲ್ಲಿ ಮುಂದುವರಿಯಲಾರೆ. ಕಳೆದ ಮೂರು ಬಾರಿ ಕರಾವಳಿ ಕಡೆಯವರಿಗೆ ಅವಕಾಶ ಕೊಟ್ಟರೂ ಗೆಲ್ಲಲಾಗಲಿಲ್ಲ. ಈ ಬಾರಿ ಘಟ್ಟದ ಮೇಲಿನ ನನಗೆ ಟಿಕೆಟ್ ಕೊಡಿಯೆಂದು ಸಿದ್ದಾಪುರದ ಕೆ.ಜಿ.ನಾಯ್ಕ್ ಬೇಡಿಕೆ ಇಟ್ಟಿದ್ದರು. ಅವರೀಗ ಒಳಗೊಳಗೆ ಬುಸುಗುಡುತ್ತಿದ್ದಾರೆಂಬ ಮಾತು ಬಿಜೆಪಿ ವಲಯಲ್ಲಿ ಕೇಳಿಬರುತ್ತಿದೆ. ಜಿಲ್ಲಾ ಬಿಜೆಪಿ ಮಾಧ್ಯಮ ವಕ್ತಾರ ನಾಗರಾಜ ನಾಯ್ಕ್, ಗೋಕರ್ಣದ ನಾಗರಾಜ್ ನಾಯ್ಕ್ ತೊರ್ಕೆ ಹತಾಶೆಲ್ಲಿದ್ದಾರೆ.

ಈ ಗೊಣಗಾಟದ ನಡುವೆಯೇ ಅಂಕೋಲಾದ ಪಕ್ಕಾ ಸಂಘಪರಿವಾರಿ-ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷ ಭಾಸ್ಕರ್ ನಾರ್ವೇಕರ್ ಮತ್ತು ಭಟ್ಕಳ ಮೂಲದ ಹೈಕೋರ್ಟ್ ವಕೀಲ ದತ್ತಾತ್ರೇಯ ನಾಯ್ಕ್ ಬಂಡಾಯ ಅಭ್ಯರ್ಥಿಗಳಾಗಿ ಕಣಕ್ಕಿಳಿಯಲು ಸಿದ್ದರಾಗಿದ್ದಾರೆ.. .ಹಣವಿರುವವರಿಗೆ ಟಿಕೆಟ್ ಎಂತಾದರೆ ಹೋರಾಟದಲ್ಲಿ, ಸಂಘಟನೆಯಲ್ಲಿ ಕೇಸ್ ಹಾಕಿಸಿಕೊಳ್ಳುವ ನಿಷ್ಟಾವಂತರ ಪಾಡೇನು? ಎಂದು ನಾಯ್ಕ್ ಪ್ರಶ್ನಿಸುತ್ತಾರೆ. ಸಂಘ ಮೂಲದಿಂದ ಬಂದು 33 ವರ್ಷದಿಂದ ಪಾರ್ಟಿ ಕೆಲಸ ಮಾಡುತ್ತಿರವ ನನಗೆ ಟಿಕೆಟ್ ಕೊಡಿಸಿಯೆಂದು ಕಾಗೇರಿ, ಹೆಬ್ಬಾರ್, ಅನಂತ್ ಹೆಗಡೆ ಮನೆ ಬಾಗಿಲಿಗೆ ಅಲೆದಿದ್ದೇನೆ.. ಅವರ‍್ಯಾರೂ ಪ್ರಯತ್ನ ಮಾಡಿಲ್ಲ. ನಿಷ್ಟಾವಂತರಿಗೆ ನೋವಾಗಿದೆ. ಅದಕ್ಕಾಗಿ ಬಂಡಾಯ ಸ್ಪರ್ಧೆಯೆಂದು ನಾರ್ವೇಕರ್ ಸಂದಾನಕ್ಕೆ ಬಂದಿದ್ದ ಜಿಲ್ಲಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗೆ ಹೇಳಿಕಳಿಸಿದ್ದರೆ ಎನ್ನಲಾಗಿದೆ.

ಒಟ್ಟಿನಲ್ಲಿ ಈ ಬಂಡಾಯದಿಂದ ಬಿಜೆಪಿ ಕೈಗೆ ಬಂದ ತುತ್ತು ಬಾಯಿಗೆ ಬರುವುದು ಕಷ್ಟವಾಗಿದೆಯೆಂಬ ಚರ್ಚೆ ಜಿಲ್ಲೆಯಲ್ಲಿ ನಡೆದಿದೆ.


ಇದನ್ನೂ ಓದಿ: ಉತ್ತರ ಕನ್ನಡ; ಸ್ಥಳಿಯಾಡಳಿತ ಸಂಸ್ಥೆಗಳ ಕ್ಷೇತ್ರದ MLC ಟಿಕೆಟ್ ತಂತ್ರಗಾರಿಕೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಇವಿಎಂ’ ತಿರುಚಲು ಶಿವಸೇನಾ ನಾಯಕನಿಗೆ 2.5 ಕೋಟಿ ರೂ.ಬೇಡಿಕೆ ಇಟ್ಟ ಯೋಧ!

0
ವಿದ್ಯುನ್ಮಾನ ಮತಯಂತ್ರಗಳನ್ನು(ಇವಿಎಂ) ತಿರುಚಲು ಶಿವಸೇನಾ ಉದ್ಧವ್‌ ಬಣದ ನಾಯಕ ಅಂಬಾದಾಸ್ ದನ್ವೆ ಅವರಿಂದ 2.5 ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಕ್ಕಾಗಿ ಮಹಾರಾಷ್ಟ್ರ ಪೊಲೀಸರು ಛತ್ರಪತಿ ಸಂಭಾಜಿನಗರದಲ್ಲಿ ಸೇನಾ ಯೋಧನೋರ್ವನನ್ನು ಬಂಧಿಸಿದ್ದಾರೆ. ಮಾರುತಿ ಧಕ್ನೆ(42) ವಿರುದ್ಧ ದೂರು...