ಮೊಟ್ಟಮೊದಲ ಬಾರಿಗೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯವಾದ ಕರ್ನಾಟಕದಲ್ಲಿ ಆಡಳಿತ ಪಕ್ಷದ ಶಾಸಕನ ಪುತ್ರನ ಕಚೇರಿ ಮತ್ತು ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳ್ 40 ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಕರ್ನಾಟಕದ ವಿಧಾನಸಭಾ ಚುನಾವಣೆಯ ಸಮಯದಲ್ಲಿ, ಅದು ಗೃಹ ಸಚಿವ ಅಮಿತ್ ಶಾ ರಾಜ್ಯದಲ್ಲಿ ಇರುವಾಗಲೇ ಬಿಜೆಪಿಗೆ ಶಾಕಿಂಗ್ ನ್ಯೂಸ್ ಅಪ್ಪಳಿಸಿದೆ. ಕೆಲದಿನಗಳ ಹಿಂದಷ್ಟೆ ಅಮಿತ್ ಶಾ ಕರ್ನಾಟಕವನ್ನು ಭ್ರಷ್ಟಾಚಾರ ಮುಕ್ತ ರಾಜ್ಯವನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಅತಿ ಭ್ರಷ್ಟರನ್ನು ಪಕ್ಷದಲ್ಲೇ ಇಟ್ಟುಕೊಂಡು ಯಾವ ಭ್ರಷ್ಟಾಚಾರ ನಿರ್ಮೂಲನೆ ಮಾಡುತ್ತಾರೆ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಇದುವರೆಗೂ ಬಿಜೆಪಿಯ ದಾಳಿಗೆ ವಿಪಕ್ಷಗಳು, ಸ್ವತಂತ್ರ ಮಾಧ್ಯಮಗಳು ಗುರಿಯಾಗಿದ್ದವು. ಅಲ್ಲದೆ ವಾಷಿಂಗ್ ಮೆಷಿನ್ ಪಕ್ಷ ಎಂದು ಬಿಜೆಪಿಯನ್ನು ದೂರಲಾಗುತ್ತಿತ್ತು. ಏಕೆಂದರೆ ವಿರೋಧ ಪಕ್ಷಗಳಲ್ಲಿದ್ದ ಭ್ರಷ್ಟಾಚಾರದ ಆರೋಪ ಹೊತ್ತಿದ್ದ ಹಲವು ಮುಖಂಡರು ಬಿಜೆಪಿ ಸೇರಿ ಅಧಿಕಾರ ಅನುಭವಿಸುತ್ತಿದ್ದಾರೆ. ಆದರೆ ಮೊದಲ ಬಾರಿಗೆ ಕರ್ನಾಟಕದಲ್ಲಿ ಭ್ರಷ್ಟಾಚಾರದ ಬಲೆಗೆ ಬಿಜೆಪಿ ಶಾಸಕನ ಪುತ್ರ ಬಿದ್ದಿದ್ದಾರೆ. ಇನ್ನು ಕರ್ನಾಟಕದ ಬಿಜೆಪಿ ಸರ್ಕಾರ ಯಾವುದೇ ಕಾಮಗಾರಿಯಲ್ಲಿ 40% ಕಮಿಷನ್ ಕೇಳುತ್ತದೆ ಎಂಬ ಆರೋಪವಿರುವ ಸಮಯದಲ್ಲಿಯೇ ಈ ಪ್ರಕರಣ ಜರುಗಿದೆ.
ಚನ್ನಗಿರಿ ಕ್ಷೇತ್ರದ ಬಿಜೆಪಿ ಎಂಎಲ್ಎ, ಕೆ ಎಸ್ ಡಿ ಎಲ್ ಅಧ್ಯಕ್ಷ ಮಾಡಾಳ್ ವಿರುಪಾಕ್ಷಪ್ಪರವರ ಪುತ್ರ ಪ್ರಶಾಂತ್ ಮಾಡಾಳ್ ತಮ್ಮ ತಂದೆಯ ಪರವಾಗಿ 40 ಲಕ್ಷ ರೂ ಲಂಚ ವಸೂಲಿ ಮಾಡುವಾಗ ಕ್ರೆಸೆಂಟ್ ರಸ್ತೆಯಲ್ಲಿರುವ ಎಂಸ್ಟುಡಿಯೊದಲ್ಲಿ ಲೋಕಾಯುಕ್ತಗೆ ಸಿಕ್ಕಿಬಿದ್ದಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಯಾಗಿರುವ ಅವರು, ನಿಯೋಜನೆ ಮೇಲೆ ಬಿಡಬ್ಲೂಎಸ್ಎಸ್ಬಿಯಲ್ಲಿ (ಬೆಂಗಳೂರು ಜಲಮಂಡಳಿ) ಮುಖ್ಯ ಲೆಕ್ಕಾಧಿಕಾರಿಯಾಗಿದ್ದರು. ಕೆಎಸ್ ಡಿಎಲ್ ಗೆ ಕಚ್ಚಾ ವಸ್ತುಗಳ ಪೂರೈಕೆ ಟೆಂಡರ್ ನ ಪರ್ಚೇಸ್ ಆರ್ಡರ್ ನೀಡಲು 81 ಲಕ್ಷ ರೂ ಲಂಚ ಕೇಳಿದ್ದರು. ಹಾಗಾಗಿ ಶ್ರೇಯಸ್ ಕಶ್ಯಪ್ ಎಂಬುವವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಗುರುವಾರ ಸಂಜೆ ಮುಂಗಡವಾಗಿ 40 ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಆನಂತರ ಲೋಕಾಯುಕ್ತ ಅಧಿಕಾರಿಗಳು ಶೋಧ ಮುಂದುವರೆಸಿದಾಗ ಅವರ ಕಚೇರಿಯಲ್ಲಿ 1.6 ಕೋಟಿ ಹಣ ಪತ್ತೆಯಾಗಿದೆ. ಅವರ ಡಾಲರ್ಸ್ ಕಾಲೋನಿ ಮನೆಯಲ್ಲಿ 6 ಕೋಟಿ ರೂ. ಸಿಕ್ಕಿದೆ. ಇತರೆ ಅಧಿಕಾರಿಗಳ ಮನೆಯಲ್ಲಿ 70 ಲಕ್ಷದಷ್ಟು ಪತ್ತೆಯಾಗಿದ್ದು ಒಟ್ಟು 8.2 ಕೋಟಿಗೂ ಅಧಿಕ ಹಣ ಪತ್ತೆಯಾಗಿದ್ದು ಶೋಧ ಕಾರ್ಯ ಮುಂದುವರೆದಿದೆ. ತಂದೆ ಮಗ ಇಬ್ಬರನ್ನೂ ಆರೋಪಿಗಳನ್ನಾಗಿ ಮಾಡಲಾಗಿದೆ.
2008ರ ಬ್ಯಾಚ್ನ ಕೆಎಎಸ್ ಅಧಿಕಾರಿಯಾಗಿರುವ ಪ್ರಶಾಂತ್ ಮಾಡಾಳ್ ಈ ಹಿಂದೆಯೂ ಸಹ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿದ್ದರು. ಕರ್ನಾಟಕ ರೂರಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಡ್ ಲಿಮಿಟೆಡ್ (KRIDL) ಉಪ ಹಣಕಾಸು ಅಧಿಕಾರಿಯಾಗಿದ್ದಾಗ ಸರ್ಕಾರದ 55 ಕೋಟಿ ರೂ. ಹಣವನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡ ಪ್ರಕರಣದಲ್ಲಿ ಆರೋಪಿಯಾಗಿದ್ದು, 2017ರಲ್ಲಿ ಅವರನ್ನು ಅಮಾನತು ಮಾಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿತ್ತು. ಸದ್ಯದ ಲಂಚ ಪ್ರಕರಣದಲ್ಲಿ ಅವರೊಂದಗೆ ಐವರು ಅಧಿಕಾರಿಗಳನ್ನು ಬಂಧಿಸಲಾಗಿದೆ. ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಬಿಜೆಪಿ ಸರ್ಕಾರ 40% ಕಮಿಷನ್ ಸರ್ಕಾರ – ಗುತ್ತಿಗೆದಾರರ ಆರೋಪ
ಎಲ್ಲಾ ಕಾಮಗಾರಿಗಳಲ್ಲಿ ಬಿಜೆಪಿ ಸರ್ಕಾರದ ಶಾಸಕರು, ಸಚಿವರು 40% ಕಮಿಷನ್ ಕೇಳುತ್ತಿದ್ದಾರೆ ಎಂದು ಕರ್ನಾಟಕದ ಗುತ್ತಿಗೆದಾರರ ಸಂಘ ಆರೋಪಿಸಿತ್ತು. ಈ ಕುರಿತು ಪ್ರಧಾನಿ ಮೋದಿಯವರಿಗೆ ಪತ್ರವನ್ನು ಬರೆದಿತ್ತು. ಆದರೆ ಈ ಕುರಿತು ತನಿಖೆಯಾಗಲಿಲ್ಲ. ಬದಲಿಗೆ ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಡಿ.ಕೆಂಪಣ್ಣನವರನ್ನೇ ಸರ್ಕಾರ ಬಂಧಿಸಿತ್ತು.
ಇನ್ನು ಸಂತೋಷ್ ಪಾಟೀಲ್ ಎಂಬ ಗುತ್ತಿಗೆದಾರ ಸಚಿವರಾಗಿದ್ದ ಈಶ್ವರಪ್ಪರವರ ಮೇಲೆ ಕಮಿಷನ್ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ಕೆ.ಎಸ್ ಈಶ್ವರಪ್ಪ ರಾಜೀನಾಮೆ ನೀಡುವಂತಾಗಿತ್ತು. ಆದರೆ ಬಿ ರಿಪೋರ್ಟ್ ಹಾಕಿ ಪ್ರಕರಣ ಮುಚ್ಚಿ ಹಾಕಲಾಗಿತ್ತು.
ಇದೇ ಸಂದರ್ಭದಲ್ಲಿ ಬಿಟ್ ಕಾಯಿನ್ ಹಗರಣ, ಪಿಎಸ್ಐ ಹಗರಣಗಳು ಹೊರಬಂದಿದ್ದವು. ಇವುಗಳಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಅಶ್ವಥ್ ನಾರಾಯಣ್ರಂತಹ ಪ್ರಭಾವಿಗಳ ಹೆಸರು ಕೇಳಿಬಂದಿದ್ದವು. ಆದರೆ ಈ ಎಲ್ಲಾ ಸಂದರ್ಭಗಳಲ್ಲಿ ಬಿಜೆಪಿ ಮುಖಂಡರು ದಾಖಲೆ ಕೊಡಿ, ಸಾಕ್ಷ್ಯ ಕೊಡಿ ಅನ್ನುತ್ತಿದ್ದರು.
ಈಗ ಬಿಜೆಪಿ ಶಾಸಕನ ಪುತ್ರನ ಮನೆಯಲ್ಲಿ ಕೋಟಿ ಕೋಟಿ ರೂ.ಗಳ ಹಣದ ಕಂತೆ ಕಮಿಷನ್ ಆರೋಪಕ್ಕೆ ಪ್ರಬಲ ಸಾಕ್ಷಿಯಾಗಿ ನಿಂತಿದೆ. ಆದರೆ ಈ ಕುರಿತು ನಿಷ್ಪಷಪಾತ ತನಿಖೆ ನಡೆಯಲಿದೆಯೇ? ಬಿಜೆಪಿ ತನ್ನ ವಿರುದ್ಧ ತಾನೇ ತನಿಖೆ ಮಾಡಬಲ್ಲದೆ? ಎಂಬ ಪ್ರಶ್ನೆಗಳು ಎದ್ದಿವೆ.
ಈ ದಾಳಿ ಬೆನ್ನಲ್ಲೆ ಸರ್ಕಾರದ ವಿರುದ್ದ ಕಾಂಗ್ರೆಸ್ ಮುಗಿಬಿದ್ದಿದ್ದು ಆಕ್ರೋಶ ವ್ಯಕ್ತಪಡಿಸಿದೆ. ”ಇಷ್ಟು ದಿನ ಭ್ರಷ್ಟಾಚಾರಕ್ಕೆ ಸಾಕ್ಷಿ ಕೇಳ್ತಿದ್ರು. ಈಗ ಲೋಕಾಯುಕ್ತದವರೇ ಕೊಟ್ಟಿದ್ದಾರೆ ತಗೊಳ್ಳಿ. ಈಗ ರಾಜೀನಾಮೆ ಕೋಡೋರು ಯಾರು..? ಸಿಎಂ ರಾಜೀನಾಮೆ ಕೊಡ್ತಾರಾ..? ಸಚಿವರು ಕೊಡ್ತಾರಾ? ನಿಗಮ ಮಂಡಳಿ ಅಧ್ಯಕ್ಷರು ರಾಜೀನಾಮೆ ಕೊಡ್ತಾರಾ..? ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
40% ಕಮಿಷನ್ಗೆ ದಾಖಲೆ ಕೊಡಿ ಎನ್ನುತ್ತಿದ್ದ ಸಿಎಂ ಅವರೇ, ಇಂದು ಲೋಕಾಯುಕ್ತ ದಾಳಿಯಲ್ಲಿ ಕಮಿಷನ್ ಕರ್ಮಕಾಂಡಕ್ಕೆ ದಾಖಲೆ ಸಿಕ್ಕಿತಲ್ಲವೇ? ಇದು ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಸಾಕ್ಷಿಯಲ್ಲವೇ? ಎಂದು ಟ್ವೀಟ್ ಮಾಡಿದ್ದಾರೆ.
ಈ ವಿಚಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿ, ನಾವು ಲೋಕಾಯುಕ್ತ ಪುನರ್ ಸ್ಥಾಪನೆ ಮಾಡಿರೋದೇ ಭ್ರಷ್ಟಾಚಾರ ತಡೆಯೋಕೆ. ಹಿಂದೆ ಲೋಕಾಯುಕ್ತ ಇಲ್ಲದೇ ಕಾಂಗ್ರೆಸ್ ಕಾಲದ ಕೇಸ್ ಗಳು ಮುಚ್ಚಿಹೋಯ್ತು. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಎಂದು ಹೇಳಿದ್ದಾರೆ.
ಹಾಗಾದರೆ, ದಾಖಲೆಗಳು – ದೂರುಗಳ ಮೇಲೆ ಇಂತಹ ದಾಳಿಗಳು ನಡೆಯುತ್ತವೆ ಎನ್ನುವುದಾದರೆ, ಈ ಹಿಂದೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಅವರು ಸರ್ಕಾರದ ಅಭಿವೃದ್ದಿ ಕೆಲಸಗಳಲ್ಲಿ 40% ಕಮಿಷನ್ ಪಡೆಯುತ್ತಿರುವುದು ಶೇ. 100ರಷ್ಟು ನಿಜ ಎಂದು ಆರೋಪಿಸಿದ್ದರು. ಅದಕ್ಕಾಗಿಯೇ ಅವರು ಸ್ವತಂತ್ರ ತನಿಖೆಗೆ ಆಗ್ರಹಿಸಿದರು. ಆದರೆ ಮುಖ್ಯಮಂತ್ರಿಯಾಗಿರುವ ಬೊಮ್ಮಾಯಿ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈಗ ಸಾಕ್ಷಿ ಸಿಕ್ಕಿದೆ. ಈಗಲಾದರೂ ಕ್ರಮ ಕೈಗೊಳ್ಳುತ್ತಾರೆಯೇ?
ರಾಜ್ಯದ ಅಧಿಕಾರಿಗಳು, ಶಾಸಕರು ಮತ್ತು ಸಚಿವರು ಎಲ್ಲಾ ಸರ್ಕಾರಿ ಗುತ್ತಿಗೆಗಳಿಗೆ 40% ಲಂಚವನ್ನು ಕೇಳುತ್ತಾರೆ ಎಂದು ಆರೋಪಿಸಿದ ಸುಮಾರು ತಿಂಗಳ ನಂತರ, ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ತಮ್ಮ ಪ್ರತಿಪಾದನೆಯನ್ನು ನಿರೂಪಿಸಲು ಆಡಿಯೊ ಕ್ಲಿಪ್ ಅನ್ನು ಬಿಡುಗಡೆ ಮಾಡಿತ್ತು. 15 ಶಾಸಕರು ಮತ್ತು ನಾಲ್ವರು ಸಚಿವರ ವಿರುದ್ಧ ಭ್ರಷ್ಟಾಚಾರದ ದಾಖಲೆಗಳು ತಮ್ಮ ಬಳಿ ಇದೆ ಎಂದು ಕೆಎಸ್ಸಿಎ ಕಾರ್ಯಾಧ್ಯಕ್ಷ ಆರ್. ಮಂಜುನಾಥ್ ಹೇಳಿದ್ದರು. ಆದರೆ ರಾಜ್ಯ ಸರ್ಕಾರ ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಈಗ ಒಬ್ಬ ಶಾಸಕನ ಪುತ್ರನ ಮನೆಯಲ್ಲಿ ಇಷ್ಟೊಂದು ಹಣ ಸಿಕ್ಕಿದೆ ಎಂದಾದರೆ ಅಷ್ಟೂ ಶಾಸಕರು-ಸಚಿವರ ಮೇಲೆ ತನಿಖೆ ನಡೆಸಿದರೆ ಸಾವಿರಾರು ಕೋಟಿ ರೂ ಪತ್ತೆಯಾಗುವುದಲ್ಲಿ ಅನುಮಾನವಿಲ್ಲ. ಆದರೆ ತನಿಖೆ ಮಾಡುವವರಾರು ಎಂಬುದೇ ಪ್ರಶ್ನೆಯಾಗಿದೆ.
ಇದನ್ನೂ ಓದಿ: ರಿಸರ್ವ್ ಬ್ಯಾಂಕಿನಲ್ಲಿರುವುದಕ್ಕಿಂತ ಹೆಚ್ಚು ಹಣ ಬಿಜೆಪಿಗರ ಮನೆಯಲ್ಲಿದೆ: ಕಾಂಗ್ರೆಸ್ ಆರೋಪ


