ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರು ಓಖ್ಲಾ ಕ್ಷೇತ್ರದಿಂದ ಬರೋಬ್ಬರಿ 91,000 ಮತಗಳ ಅಂತರದಿಂದ ಗೆದ್ದಿದ್ದಾರೆ. ಆರಂಭಿಕ ಕೆಲವು ಸುತ್ತುಗಳ ಎಣಿಕೆಯಲ್ಲಿ ಹಿನ್ನಡೆಯಾದರೂ ಬಿಜೆಪಿಯ ಬ್ರಾಹಮ್ ಸಿಂಗ್ ಮತ್ತು ಕಾಂಗ್ರೆಸ್ ನ ಪರ್ವೇಜ್ ಹಶ್ಮಿ ಅವರನ್ನು ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ.
ಗೆಲುವಿನ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಮಾನತುಲ್ಲಾ ಖಾನ್, ತಮ್ಮ ವಿಜಯವನ್ನು ಬಿಜೆಪಿಯ ವಿಭಜಕ ರಾಜಕಾರಣದ ವಿರುದ್ಧ ಆಮ್ ಆದ್ಮಿ ಪಕ್ಷದ ‘ಕೆಲಸ’ ಮಾಡಿದ ವಿಜಯ ಎಂದು ಬಣ್ಣಿಸಿದರು. “ದೆಹಲಿಯ ಜನರು ಇವತ್ತು ಬಿಜೆಪಿ ಮತ್ತು ಅಮಿತ್ ಷಾ ಅವರಿಗೆ ವಿದ್ಯುತ್ ಶಾಕ್ ಕೊಡುವ ಕೆಲಸ ಮಾಡಿದ್ದಾರೆ. ಇದು ಕೆಲಸದ ವಿಜಯ ಮತ್ತು ದ್ವೇಷದ ಸೋಲು” ಎಂದಿದ್ದಾರೆ.
ಈ ಮೊದಲು ಗೃಹ ಸಚಿವ ಅಮಿತ್ ಶಾ “ನೀವು ಹೇಗೆ ಇವಿಯಂನಲ್ಲಿ ಓಟು ಒತ್ತಬೇಕೆಂದರೆ ಶಾಹೀನ್ ಬಾಗ್ಗೆ ವಿದ್ಯುತ್ ಶಾಕ್ ಹೊಡೆಯಬೇಕು” ಎಂಬ ಹೇಳಿಕೆ ನೀಡಿದ್ದರು. ಅದಕ್ಕೆ ಖಾನ್ ಇಂದು ತಿರುಗೇಟು ನೀಡಿದ್ದಾರೆ.
ಅತಿಹೆಚ್ಚು ಅಂತರದಿಂದ ಈ ಕ್ಷೇತ್ರದಲ್ಲಿ ಆಪ್ನ ಅಮಾನತುಲ್ಲಾ ಖಾನ್ ವಿಜಯ ಸಾಧಿಸುವ ಮೂಲಕ ಬಿಜೆಪಿ ಮುಖಭಂಗ ಉಂಟು ಮಾಡಿದ್ದಾರೆ.
ಎಕ್ಸಿಟ್ ಪೋಲ್ ಸಮೀಕ್ಷೆಗಳು ಖಾನ್ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುತ್ತಾರೆ ಎಂದು ಹೇಳಿದ್ದವು. ಓಖ್ಲಾ ಮುಸ್ಲಿಂ ಪ್ರಾಬಲ್ಯದ ಕ್ಷೇತ್ರವಾಗಿದ್ದು, ಸಮುದಾಯವು 40% ಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಸಿಎಎ ವಿರೋಧಿ ಮತ್ತು ಎನ್ಆರ್ಸಿ ವಿರೋಧಿ ಪ್ರತಿಭಟನೆಯ ಕೇಂದ್ರವೆಂದು ಬಿಂಬಿತವಾಗಿರುವ ಶಹೀನ್ ಬಾಗ್ ಕೂಡಾ ಇದೇ ಕ್ಷೇತ್ರಕ್ಕೆ ಸೇರುತ್ತದೆ.
ಚುನಾವಣೆಗೆ ಮುಂಚಿತವಾಗಿ ಖಾನ್ ಡಿಸೆಂಬರ್ 15 ರಂದು ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಲ್ಲಿ ಮೊದಲು ಭಾಷಣ ಮಾಡಿದ್ದರು. ಹಿಂಸಾಚಾರದ ನಂತರ ಸಾಮಾಜಿಕ ಮಾಧ್ಯಮ ಪೋಸ್ಟ್ಗಳ ಮೂಲಕ ಹಿಂಸಾಚಾರವನ್ನು ಪ್ರಚೋದಿಸಿದ್ದಾಗಿ ಹೇಳಿ ಅವರ ಮೇಲೆ ಎಫ್ಐಆರ್ ದಾಖಲಿಸಲಾಗಿತ್ತು.