ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಭಾಗವಹಿಸಿ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು ಎಂದು ಪ್ರತಿಪಾದಿಸಿ ನಕಲಿ ಚಿತ್ರವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಬಿಜೆಪಿ ಬೆಂಬಲಿಗ, ದುಷ್ಕರ್ಮಿ ಪ್ರಶಾಂತ್ ಸಂಬರಗಿ ವಿರುದ್ಧ ಶನಿವಾರ ಪ್ರಕಾಶ್ ರಾಜ್ ದೂರು ದಾಖಲಿಸಿದ್ದಾರೆ. ನಕಲಿ ಚಿತ್ರ ಹಂಚಿಕೆ
“ಪ್ರಶಾಂತ್ ಸಂಬರಗಿ ಅವರು ನನ್ನ ಖ್ಯಾತಿಗೆ ಕುತ್ತು ತರುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಫೇಸ್ಬುಕ್ನಲ್ಲಿ ನನ್ನ ಹೆಸರು ಬಳಸಿ ಕೃತಕ ಬುದ್ದಿಮತ್ತೆಯ ಮೂಲಕ ಸೃಷ್ಟಿಸಿದ ಭಾವಚಿತ್ರ ಬಳಸಿದ್ದು, ಸುಳ್ಳು ಶೀರ್ಷಿಕೆ ನೀಡಿದ್ದಾರೆ’ ಎಂದು ದೂರಿನಲ್ಲಿ ಉಲ್ಲೇಖಿಸಿ ಮೈಸೂರಿನ ಲಕ್ಷ್ಮಿಪುರಂ ಠಾಣೆಗೆ ನಟ ಪ್ರಕಾಶ್ ರಾಜ್ ದೂರು ನೀಡಿದ್ದಾರೆ.
“ಪ್ರಶಾಂತ್ ಸಂಬರಗಿ ಅವರಿಗೆ ಇ-ಮೇಲ್ ಮೂಲಕ ನೋಟಿಸ್ ಕಳುಹಿಸಿದ್ದು, ತನಿಖೆ ಮುಂದುವರಿದಿದೆ” ಎಂದು ಪೊಲೀಸರು ತಿಳಿಸಿದ್ದಾರೆ. ನಕಲಿ ಚಿತ್ರ ಹಂಚಿಕೆ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಪ್ರಶಾಂತ್ ಸಂಬರಗಿ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ‘‘ಕುಂಭಮೇಳದಲ್ಲಿ ನಟ ಪ್ರಕಾಶ್ ರಾಜ್. ತ್ರಿವೇಣಿ ಸಂಗಮದಲ್ಲಿ ಮಿಂದೆದ್ದರು. ಅವರ ಎಲ್ಲ ಪಾಪಗಳನ್ನು ಕ್ಷಮಿಸಿ, ತೆಗೆದುಹಾಕಲಾಗುವುದು ಎಂದು ಭಾವಿಸುತ್ತೇನೆ” ಎಂದು ಬರೆದುಕೊಂಡಿದ್ದರು.
“ಸುಳ್ಳ ರಾಜನ ಹೇಡಿಗಳ ಸೈನ್ಯಕ್ಕೆ… ಅವರ ಪವಿತ್ರ ಪೂಜೆಯಲ್ಲೂ ಸುಳ್ಳು ಸುದ್ದಿ ಹಬ್ಬಿಸಿ ಹೊಲಸು ಮಾಡುವುದೇ ಕೆಲಸ. ಪೊಲೀಸ್ ದೂರು ದಾಖಲಾಗಿದೆ. ಕೋರ್ಟಿನ ಕಟಕಟೆಯಲ್ಲಿ ಏನು ಮಾಡುತ್ತಾರೋ ನೋಡೋಣ” ಎಂದು ಎಕ್ಸ್ ತಾಣದಲ್ಲಿ ಪ್ರಕಾಶ್ ರಾಜ್ ಬರೆದುಕೊಂಡಿದ್ದರು.
ತಾವು ಹಾಕಿರುವ ಚಿತ್ರ ನಕಲಿ ಎಂದು ಗೊತ್ತಾದ ತಕ್ಷಣ ಪ್ರಶಾಂತ್ ಸಂಬರಗಿ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. ಇದನ್ನು ಗಮನಸಿದ ಪ್ರಕಾಶ್ ರಾಜ್, “ಹಬ್ಬಿಸಿದ ಸುಳ್ಳು ಸುದ್ದಿಯನ್ನು ಮಹಾವೀರ ಸಂಬರಗಿ ತಮ್ಮ ಖಾತೆಯಿಂದ ಈಗ ಹೆದರಿ ತೆಗೆದಾಯ್ತು. ಆದರೆ ಮಾಡಿದ ಕಿಡಿಗೇಡಿತನದಿಂದ ತಪ್ಪಿಸಿಕೊಳ್ಳಲಾಗದು ಎಂದು ಯಾರಾದರು ಉಗಿದು ಹೇಳಿ” ಎಂದು ಕುಟುಕಿದ್ದರು.
ಲಕ್ಷ್ಮೀಪುರಂ ಠಾಣೆಯಲ್ಲಿ ದೂರು ನೀಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ನಟ ಪ್ರಕಾಶ್ ರಾಜ್, “ನಟಿಯರೂ ಸೇರಿದಂತೆ ಅನೇಕರಿಗೆ ಪ್ರಶಾಂತ್ ಸಂಬರಗಿ ಈ ರೀತಿ ತೊಂದರೆ ನೀಡಿದ್ದಾನೆ. ಆತನಿಗೆ ಪಾಠ ಆಗಬೇಕು. ಸಾಮಾಜಿಕ ಜಾಲತಾಣದಲ್ಲಿ ನಕಲಿ ಸುದ್ದಿ ಹರಡುವವರಿಗೂ ಇದೊಂದು ಪಾಠವಾಗಲಿ. ತಪ್ಪು ಪ್ರಚಾರ ಮಾಡುವುದು, ಅನುಮತಿ ಇಲ್ಲದೆ ಯಾರದೋ ಫೋಟೊಗಳನ್ನು ಬಳಸುವುದು ಅಕ್ಷಮ್ಯ ಅಪರಾಧ” ಎಂದು ಹೇಳಿದ್ದಾರೆ.
“ನಾನು ಮೂಢನಂಬಿಕೆಯನ್ನಷ್ಟೇ ಪ್ರಶ್ನಿಸುತ್ತೇನೆ. ಈ ಹಿಂದೆ ಕ್ರಿಶ್ಚಿಯನ್ಗಿಂತ ದೊಡ್ಡ ಮಾಫಿಯಾ ಇನ್ನೊಂದಿಲ್ಲ. ಮುಸ್ಲಿಂರಲ್ಲೂ ದೊಡ್ಡ ಟೆರೆರಿಸ್ಟ್ಗಳು ಇದ್ದಾರೆ ಎಂದು ಹೇಳಿದ್ದೇನೆ. ಅದು ಹೈಲೈಟ್ ಆಗಿಲ್ಲ. ನಾನು ಯಾವತ್ತೂ ಧರ್ಮ ಧರ್ಮಗಳನ್ನು ಎತ್ತಿ ಕಟ್ಟುವ ಕೆಲಸ ಮಾಡಿಲ್ಲ. ಅದೇ ಕೆಲಸ ಮಾಡುವವರು ದೂಷಿಸುತ್ತಾರೆ” ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.
“ಸ್ನಾನ ಮಾಡುವುದರಲ್ಲಿ ತಪ್ಪೇನಿದೆ. ಅದು ಅವರ ನಂಬಿಕೆ. ನನಗೆ ದೇವರ ಮೇಲೆ ನಂಬಿಕೆಯಿಲ್ಲ. ಮನುಷ್ಯರ ಮೇಲೆ ನಂಬಿಕೆ. ದೇವರಿಲ್ಲದೆ ಬದುಕಬಹುದು ಆದರೆ, ಮನುಷ್ಯರಿಲ್ಲದೆ ಬದುಕಲು ಸಾಧ್ಯವಿಲ್ಲ. ಹಾಗೆಂದು ಅವರ ನಂಬಿಕೆಯನ್ನು ಪ್ರಶ್ನಿಸುವುದಿಲ್ಲ. ಆದರೆ ಅದನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ತಪ್ಪು” ಎಂದು ಹೇಳಿದ್ದಾರೆ.
ಕುಂಭಮೇಳದ ಬಗ್ಗೆ ಕಾಂಗ್ರೆಸ್ ಟೀಕೆ ಮಾಡುತ್ತಿದೆ ಎಂಬ ಆರೋಪದ ಬಗ್ಗೆ ಉತ್ತರಿಸಿದ ಅವರು, “ಅವರವರ ಭಾವಕ್ಕೆ ಅವರ ಬಕುತಿಗೆ ಹೇಳುತ್ತಾ ಹೋಗಲಿ. ನಾನು ಯಾರ ಬಗ್ಗೆಯೂ ಮಾತನಾಡುವುದಿಲ್ಲ. ಯಾವ ನಂಬಿಕೆಯ ಬಗ್ಗೆ ಟೀಕೆ ಮಾಡಲ್ಲ” ಎಂದು ಅವರು ಹೇಳಿದ್ದಾರೆ.


