Homeಮುಖಪುಟಕರ್ನಾಟಕದಲ್ಲಿ ಒಕ್ಕಲಿಗ-ಮುಸ್ಲಿಂ ಒಗ್ಗಟ್ಟು ಮುರಿಯಲು ಬಿಜೆಪಿ ನಡೆಸುತ್ತಿರುವ ಕುತಂತ್ರಗಳು

ಕರ್ನಾಟಕದಲ್ಲಿ ಒಕ್ಕಲಿಗ-ಮುಸ್ಲಿಂ ಒಗ್ಗಟ್ಟು ಮುರಿಯಲು ಬಿಜೆಪಿ ನಡೆಸುತ್ತಿರುವ ಕುತಂತ್ರಗಳು

ಟಿಪ್ಪು ಮತ್ತು ಕೆಂಪೇಗೌಡರಿಬ್ಬರ ಹಾಸುಹೊಕ್ಕಾದ ಕೊಡುಗೆಗಳನ್ನು ಪ್ರತ್ಯೇಕಿಸಿ ಬೆಂಗಳೂರಿನ ಇತಿಹಾಸವನ್ನು ನೋಡಲು ಸಾಧ್ಯವಿಲ್ಲ. ಆದರೆ ಬಿಜೆಪಿ ಮಾಡುತ್ತಿರುವುದೇನು?

- Advertisement -
- Advertisement -

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಒಂದು ಭವ್ಯ ಥೀಮ್ ಪಾರ್ಕ್ ಕಟ್ಟಿ, ಬೆಂಗಳೂರಿನ ಸ್ಥಾಪಕನೆಂದು ವ್ಯಾಪಕವಾಗಿ ನಂಬಲಾಗುತ್ತಿರುವ 16ನೇ ಶತಮಾನದ ಒಕ್ಕಲಿಗ ಪಾಳೆಗಾರ ಕೆಂಪೇಗೌಡರ ಆಡಳಿತವನ್ನು ಸ್ಮರಿಸುವ ಕರ್ನಾಟಕದ ಬಿಜೆಪಿ ಸರಕಾರದ ಘೋಷಣೆಯು, ರಾಜ್ಯದ ಜನಸಂಖ್ಯೆಯಲ್ಲಿ ಸರಿಸುಮಾರು 14 ಶೇಕಡಾದಷ್ಟಿದೆ ಎಂದು ಅಂದಾಜಿಸಲಾಗಿರುವ ಮತ್ತು ಈ ತನಕ ಅದರ ಕೈಗೆ ಹತ್ತದಿರುವ ಒಕ್ಕಲಿಗ ಮತಗಳನ್ನು ಪಡೆಯಲು ಭಾರತೀಯ ಜನತಾ ಪಕ್ಷ ಮಾಡುತ್ತಿರುವ ಇನ್ನೊಂದು ಯತ್ನಕ್ಕಿಂತ ಹೆಚ್ಚೇನಿಲ್ಲ.

ಈ ಕಾರ್ಯತಂತ್ರ ಸ್ಪಷ್ಟವಾಗಿದೆ. ಕಳೆದ ಎರಡು ದಶಕಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿಯು ರಾಜಕೀಯ ಅಧಿಕಾರದ ಪ್ರಮುಖ ಸ್ಪರ್ಧಿಯಾಗಿ ಮೂಡಿಬಂದಿದ್ದರೂ, ರಾಜ್ಯ ವಿಧಾನಸಭೆಯಲ್ಲಿ ಸ್ವಂತ ಬಲದಲ್ಲಿ ಸರಳ ಬಹುಮತವನ್ನು ಪಡೆಯಲು ಅದು ವಿಫಲವಾಗಿದೆ. 2008ರಲ್ಲಿ ಅದರ ಅತ್ಯಂತ ದೊಡ್ಡ ಸಾಧನೆಯ ಸಮಯದಲ್ಲೂ 224  ಸದಸ್ಯಬಲದ ವಿಧಾನಸಭೆಯಲ್ಲಿ ಸರಳ ಬಹುಮತ ಪಡೆಯಲು ಅದಕ್ಕೆ ಆರು ಸ್ಥಾನಗಳ ಕೊರತೆಯಾಗಿತ್ತು. ಕಳೆದ ಎರಡು ದಶಕಗಳಲ್ಲಿ ಅದರ ಬೆಳವಣಿಗೆಗೆಗೆ ಕಾರಣಗಳೆಂದರೆ, ವೀರಶೈವ-ಲಿಂಗಾಯತರ ನಡುವೆ ಅದರ ಬೆಳೆಯುತ್ತಿರುವ ಸಾಮಾಜಿಕ ನೆಲೆಗಟ್ಟು, ದಲಿತ ಜನರ ನಡುವೆ ಸಂಖ್ಯಾಬಲದಲ್ಲಿ ದೊಡ್ಡದಾಗಿರುವ ಮಾದಿಗ ಸಮುದಾಯವನ್ನು- ವಿಶೇಷವಾಗಿ ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಒಳಮೀಸಲಾತಿ ಪ್ರಶ್ನೆಗೆ ಸಂಬಂಧಿಸಿ- ಒಲಿಸಿಕೊಳ್ಳಲು ಸಂಘ ಪರಿವಾರ ನಡೆಸಿದ ಚಾಣಾಕ್ಷತನದ ಕ್ರೋಢೀಕರಣ ಮತ್ತು ಹಿಂದೂ ರಾಷ್ಟ್ರದ ಬೇಡಿಕೆಯ ಆಧಾರದಲ್ಲಿ ಇಡೀ ಕರ್ನಾಟಕದಲ್ಲಿ- ಅದರಲ್ಲೂ ಮುಖ್ಯವಾಗಿ ಕರಾವಳಿ ಪ್ರದೇಶದಲ್ಲಿ- ಪ್ರಬಲ ಮತ್ತು ಹಿಂದುಳಿದ ಜಾತಿಗಳ ಮುಸ್ಲಿಂ ವಿರೋಧಿ ಕ್ರೋಢೀಕರಣ.

ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ದಕ್ಷಿಣ ಕರ್ನಾಟಕದಲ್ಲಿ ಮತ್ತು ಒಕ್ಕಲಿಗರ ನಡುವೆ ಹಲವಾರು ದಶಕಗಳಿಂದ ಸಕ್ರಿಯವಾಗಿಯೇ ಇದ್ದರೂ, ಒಕ್ಕಲಿಗರನ್ನು ಇಡಿಯಾಗಿ ಗೆಲ್ಲಲು ಬಿಜೆಪಿಗೆ ಸಾಧ್ಯವಾಗಿಲ್ಲ. ಹಿಂದೂ ರಾಷ್ಟ್ರ ಅಥವಾ ಸಾರಾಸಗಟು ಮುಸ್ಲಿಂ ವಿರೋಧಿ ಅಜೆಂಡಾಗಳೆರಡೂ ಇಲ್ಲಿ ಇಡಿಯಾಗಿ ಕೆಲಸ ಮಾಡಿಲ್ಲ.

ಹಳೆ ಮೈಸೂರು ಪ್ರದೇಶಗಳಲ್ಲಿ ಒಕ್ಕಲಿಗರ ಮೇಲೆ ಹಿಂದೂತ್ವವು ಉಳಿದ ಕಡೆಗಳಷ್ಟು ಪ್ರಭಾವ ಬೀರಲು ವಿಫಲವಾಗಿರುವುದಕ್ಕೆ ಒಂದು ಸಂಭಾವ್ಯ ಕಾರಣವೆಂದರೆ, ಒಕ್ಕಲುತನದಲ್ಲಿ ತೊಡಗಿದ್ದ ಒಕ್ಕಲಿಗ ಜಾತಿಗಳು ಮತ್ತು ವ್ಯಾಪಾರಿಗಳಾದ ಮುಸ್ಲಿಮರ ನಡುವೆ ಇರುವ ಐತಿಹಾಸಿಕ ಸಾಮರಸ್ಯ ಮತ್ತು ಈ ಪ್ರಾಂತ್ಯದಲ್ಲಿ ಈ ಸಂಬಂಧವನ್ನು ಟಿಪ್ಪು ಸುಲ್ತಾನ್ ಆಡಳಿತವು ಆರಂಭಿಸಿದ ಭೂಸುಧಾರಣಾ ಮತ್ತು ಪಾಳೇಗಾರಿ ವಿರೋಧಿ ಕ್ರಮಗಳು ಬಲಪಡಿಸಿದುದು. ಟಿಪ್ಪು ಸುಲ್ತಾನರ ಈ ಸುಧಾರಣೆಗಳ ಪ್ರಮುಖ ಫಲಾನುಭವಿಗಳೆಂದರೆ- ಬ್ರಾಹ್ಮಣ ಪಾಳೇಗಾರಿ ಧಣಿಗಳು ಮತ್ತು ದೇವಾಲಯಗಳು ಹೇರಿದ್ದ ಭಾರೀ ತೆರಿಗೆಗಳು ಮತ್ತು ಇತರ ಸಾಮಾಜಿಕ ಹೊರೆಗಳಿಂದ ಬಹುತೇಕ ವಿಮೋಚನೆಗೊಳಿಸಲಾದ- ಒಕ್ಕಲುತನದಲ್ಲಿ ತೊಡಗಿದ್ದ ಜಾತಿಗಳವರು. ಇದರಿಂದಾಗಿಯೇ ಒಕ್ಕಲಿಗರು ಮತ್ತು ದಲಿತರು ಸ್ವಂತ ಇಚ್ಚೆಯಿಂದ ಟಿಪ್ಪು ಸುಲ್ತಾನರ ಸೇನೆಯಲ್ಲಿ ಸೈನಿಕರಾದರು. ಅದು ಅವರಿಗೆ ಸಾಮಾಜಿಕ ಸ್ಥಾನಮಾನ ದೊರಕಿಸಿಕೊಟ್ಟದ್ದೇ ಅಲ್ಲದೆ, ಅವರಲ್ಲಿ ಬಲವಾದ ಬ್ರಿಟಿಷ್ ವಿರೋಧಿ ಮತ್ತು ಪಾಳೇಗಾರಿ ವಿರೋಧಿ ಆಶಯಗಳನ್ನು ತುಂಬಿತು. ಆದುದರಿಂದ, ಮರಾಠರು ಮತ್ತು ರಜಪೂತರಿಗೆ ವ್ಯತಿರಿಕ್ತವಾಗಿ ಟಿಪ್ಪು ಸುಲ್ತಾನರ ಸೇನೆ ಮಾತ್ರವೇ ಅವರು ಯುದ್ಧಭೂಮಿಯಲ್ಲಿ ವೀರೋಚಿತವಾಗಿ ಹುತಾತ್ಮರಾದ ನಂತರ ಬರಖಾಸ್ತುಗೊಂಡಿತು.

ನಂತರ ಮೈಸೂರು ಪ್ರಾಂತ್ಯವನ್ನು 20ನೇ ಶತಮಾನದ ಆರಂಭದಲ್ಲಿ ಅಳಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಈ ಸಂಪ್ರದಾಯವನ್ನು ಮುಂದುವರಿಸಿದರು. ಅವರು ಬ್ರಾಹ್ಮಣರ ಪ್ರಾಬಲ್ಯದ ವಿರುದ್ಧ ಒಕ್ಕಲಿಗರು ಮತ್ತು ಮುಸ್ಲಿಮರ ಮೈತ್ರಿಯ ಮುಖ್ಯ ಶಿಲ್ಪಿಯಾಗಿದ್ದರು. ಒಡೆಯರ್ 1920ರ ದಶಕದಲ್ಲಿ ಆರಂಭಿಸಿದ ಮೀಸಲಾತಿ ನೀತಿಗಳ ಜಂಟಿ ಫಲಾನುಭವಿಗಳು ಮುಸ್ಲಿಮರು ಮತ್ತು ಒಕ್ಕಲಿಗರಾಗಿದ್ದರು. ಅದು ಪ್ರಾಂತೀಯ ಆಡಳಿತದಲ್ಲಿ ಬ್ರಾಹ್ಮಣರ ಪ್ರಾಬಲ್ಯವನ್ನು ಮುರಿಯಿತು.

ನಂತರದಲ್ಲಿ ಗ್ರಾಮೀಣ ಮೈಸೂರಿನಲ್ಲಿ ಒಕ್ಕಲಿಗರು ಪ್ರಬಲ ಜಾತಿಗಳಾದರೂ, ಸ್ವಾತಂತ್ರ್ಯದ ನಂತರ ರಾಜ್ಯ ರಾಜಕಾರಣದಲ್ಲಿ ಪ್ರಬಲರಾದರೂ, ಉತ್ತರದಲ್ಲಿ ಇನ್ನಷ್ಟು ಪ್ರಬಲರಾದ ಲಿಂಗಾಯತರ ಜೊತೆಗೆ ಏಗಬೇಕಾಯಿತು. ಅಲ್ಲಿಯೂ ಮುಸ್ಲಿಮರು ಅವರ ಮಿತ್ರರಾಗಿದ್ದರು.

ನಂತರದ ದಶಕಗಳಲ್ಲಿ, ಲಿಂಗಾಯತರಿಗೆ ಬಿಜೆಪಿಯು ಕಾಂಗ್ರೆಸ್ ಪಕ್ಷಕ್ಕೆ  ಪರ್ಯಾಯವನ್ನು ಒದಗಿಸಿದ ಉತ್ತರಕ್ಕೆ ವ್ಯತಿರಿಕ್ತವಾಗಿ, ದಕ್ಷಿಣದಲ್ಲಿ ಒಕ್ಕಲಿಗರು ಜನತಾ ದಳ (ಜಾತ್ಯತೀತ)ದ ಆಶ್ರಯ ಪಡೆದರು. ಅದು ಅಲ್ಲಿ ಒಕ್ಕಲಿಗರು ಮತ್ತು ಮುಸ್ಲಿಮರ ನಡುವೆ ಬಲವಾದ ಚುನಾವಣಾ ಮೈತ್ರಿಯನ್ನು ಮೂಡಿಸಿತು.

ಹೀಗೆ, ಈ ಪ್ರದೇಶದಲ್ಲಿ ಆರೆಸ್ಸೆಸ್ ಕೂಡಾ ಬೆಳೆಯುತ್ತಿದ್ದರೂ, ತನ್ನ ಹೆಗ್ಗುರುತಾದ ಬಲವಾದ ಮುಸ್ಲಿಂ ವಿರೋಧಿ ಜನಮರುಳು ತಂತ್ರಗಳು ಇತ್ತೀಚಿನವರೆಗೂ ಹೆಚ್ಚು ಪ್ರಯೋಜನಕಾರಿಯಾಗಿ ಇರದಿರುವುದನ್ನು ಕಾಣಬೇಕಾಯಿತು. ಇದರಿಂದಾಗಿ, ಯಡಿಯೂರಪ್ಪ, ಜಗದೀಶ ಶೆಟ್ಟರ್ ಮತ್ತು ಬಿಜೆಪಿಯ ಒಕ್ಕಲಿಗ ನಾಯಕ ಆರ್. ಅಶೋಕ್ ಮುಂತಾದವರು ಟಿಪ್ಪು ಸುಲ್ತಾನ್ ಮಾದರಿಯ ಕಿರೀಟ ಧರಿಸಿ, ಕತ್ತಿ ಹಿಡಿದು ಟಿಪ್ಪು ಜಯಂತಿ ಆಚರಿಸುವುದು ಕಂಡುಬಂತು.

ಆದರೆ, ಇವೆಲ್ಲವೂ 2019ರಲ್ಲಿ ಮೋದಿತ್ವದ ಎರಡನೇ ವಿಜಯದ ಬಳಿಕ ಬದಲಾಗಿ, ಈಗ ಯಾವುದೇ ಕಲ್ಯಾಣ ಕಾರ್ಯಕ್ರಮಗಳ ಭರವಸೆಯ ಬದಲು, ಸಂಪೂರ್ಣವಾಗಿ ಹಿಂದೂ ರಾಷ್ಟ್ರದ ಅಗತ್ಯ ಮತ್ತು ಬೇಡಿಕೆಯ ಆಧಾರದಲ್ಲಿ ಮತ ಕೇಳಲಾಗುತ್ತಿದೆ. ಮೇಲೇರುತ್ತಿರುವ ಸ್ಥಿತಿವಂತ ಒಕ್ಕಲಿಗರು ನಿಧಾನವಾಗಿ ಹಿಂದೂತ್ವದ ಹೆಮ್ಮೆಯಲ್ಲಿ ಮೆರೆಯಲು ಬಯಸುತ್ತಿದ್ದಾರೆ.

ಬೇಗನೇ ಪ್ರಮುಖ ವೆಬ್‌ಸೈಟುಗಳಲ್ಲಿ “ಮೋದಿ ದೇಶಕ್ಕೆ, ಕುಮಾರಣ್ಣ ಕರ್ನಾಟಕಕ್ಕೆ” ಎಂಬ ಘೋಷಣೆ ಮೊಳಗಲಾರಂಭಿಸಿತು. ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ಮುಸ್ಲಿಮರ ಓಲೈಕೆ ಮಾಡುವವರು, ದೇವೇಗೌಡರನ್ನೂ- ಆ ಮೂಲಕ ಒಕ್ಕಲಿಗರನ್ನೂ ವಿರೋಧಿಸುವವರು ಎಂದು ಅವಹೇಳನಕಾರಿ ಪ್ರಚಾರಾಭಿಯಾನ ನಡೆಸಲಾಯಿತು. ಪರಿಣಾಮವಾಗಿ 2019ರ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಹೊರತಾಗಿಯೂ ಬಿಜೆಪಿಯು ಒಕ್ಕಲಿಗರ ಪ್ರದೇಶದಲ್ಲೂ ತುಂಬಾ ಒಳ್ಳೆಯ ಸಾಧನೆ ಮಾಡಿ, ಮತಗಳಿಕೆಯಲ್ಲಿ ಕಾಂಗ್ರೆಸನ್ನು ಮೀರಿ, 52 ಶೇಕಡಾ ತಲುಪಿತು. ಮುಸ್ಲಿಮರ ವಿರುದ್ಧ ವಿಷಕಾರಿದ ಎಲ್ಲಾ ಅಭ್ಯರ್ಥಿಗಳು ಕರ್ನಾಟಕದಲ್ಲೂ, ಭಾರತದಲ್ಲೂ ಭಾರೀ ಬಹುಮತದಿಂದ ಗೆದ್ದರು.

ಇದು ಬಿಜೆಪಿಗೆ ತನ್ನ ರಕ್ಷಣಾತ್ಮಕ ಕಾರ್ಯತಂತ್ರವನ್ನು ಬದಲಿಸಲು ಧೈರ್ಯ ತಂದುಕೊಟ್ಟಿತು. ಈ ಪ್ರಕ್ರಿಯೆಯಲ್ಲಿ ಮೈಸೂರು ಪ್ರದೇಶದ ಹಲವಾರು ಒಕ್ಕಲಿಗರು ಮತ್ತು ಸಮಾನ ಜಾತಿಗಳ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿ, 2019ರಲ್ಲಿ ಬಿಜೆಪಿಯು ರಾಜ್ಯದಲ್ಲಿ ಸರಕಾರ ರಚಿಸುವುದಕ್ಕೆ ನೆರವಾದರು. 2021ರಲ್ಲಿ ಪಕ್ಷ ಮತ್ತು ಆರೆಸ್ಸೆಸನ್ನು ಮೀರಿದ ಹಿಂಬಾಲಕರನ್ನು ಹೊಂದಿರುವ ಯಡಿಯೂರಪ್ಪ ರಾಜೀನಾಮೆ ನೀಡುವಂತೆ ಮಾಡಿ, ಆರೆಸ್ಸೆಸ್ಸಿನ ಆದೇಶಗಳ ನಿಷ್ಟಾವಂತ ಪಾಲಕ ಬಸವರಾಜ ಬೊಮ್ಮಾಯಿಯನ್ನು ಮುಖ್ಯಮಂತ್ರಿ ಮಾಡಲಾಯಿತು.

ಆ ಹೊತ್ತಿನಿಂದ ಆರೆಸ್ಸೆಸ್ ಮತ್ತು ಬಿಜೆಪಿ, ಒಕ್ಕಲಿಗರನ್ನು ಓಲೈಸುವ ಮತ್ತು ಅವರನ್ನು ಮುಸ್ಲಿಮರ ಜೊತೆಗೆ ಅವರ ಪರಂಪರಾಗತ ಸಾಮಾಜಿಕ ಮೈತ್ರಿಯಿಂದ ದೂರ ಸೆಳೆಯುವ ಜಂಟಿ ಮತ್ತು ಬಹುಮುಖಿ ಕಾರ್ಯತಂತ್ರಗಳನ್ನು ಛೂಬಿಟ್ಟವು. ಟಿಪ್ಪುವನ್ನು ಕನ್ನಡ ವಿರೋಧಿ, ಒಕ್ಕಲಿಗರ ವಿರೋಧಿ, ಹಿಂದೂ ವಿರೋಧಿ, ಕರ್ನಾಟಕ ವಿರೋಧಿ ಎಂದು ನಿಂದಿಸಿ ಹೆಸರು ಕೆಡಿಸದೆ ಇದು ಸಾಧ್ಯವಿಲ್ಲ ಎಂಬುದು ಅವರಿಗೆ ಮನವರಿಕೆಯಾಗಿತ್ತು. ಆದುದರಿಂದ, ಟಿಪ್ಪುವನ್ನು ನಿಂದಿಸಿ, ಕೆಂಪೇಗೌಡರನ್ನು ಹೊಗಳಿ ಮೇಲಕ್ಕೇರಿಸುವುದನ್ನು ಪೂರಕ ರಾಜಕೀಯ ಯೋಜನೆಯನ್ನಾಗಿ ಮಾಡಲಾಯಿತು.

ಗೌರವದಿಂದ ನಾಡಪ್ರಭು ಎಂದು ಕರೆಯಲಾಗುವ ಕೆಂಪೇಗೌಡರು 16ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಸಾಮಂತ ಮುಖ್ಯಸ್ಥರಾಗಿದ್ದರು. ಬೆಂಗಳೂರಿನ ಹುಟ್ಟಿಗೆ ಅವರ ದೂರದೃಷ್ಟಿಯ ಯೋಜನೆ ಕಾರಣ ಎಂದು ಹೇಳಲಾಗುತ್ತದೆ. ಆದರೆ, ಬೆಂಗಳೂರಿಗಿಂತ ಹೆಚ್ಚಾಗಿ, ಐತಿಹಾಸಿಕ ಕಾರಣ ಮತ್ತು ಆ ಪ್ರದೇಶಗಳ ಭೌಗೋಳಿಕತೆಗಳ ಕಾರಣದಿಂದಾಗಿ ಹತ್ತಿರದ ಯಲಹಂಕ ಮತ್ತು ಮಾಗಡಿಯಂತಾ ಜನವಸತಿಗಳು ಅವರ ಮರಣಾನಂತರ ಹೆಚ್ಚು ಬೆಳೆದವು. ಬೆಂಗಳೂರು ಒಂದು ಸೈನಿಕ ಠಾಣಾ ನಗರವಾಗುವುದಕ್ಕೆ ಹೊರತಾಗಿ, ಒಂದು ವಾಣಿಜ್ಯ ಮತ್ತು ಮಾದರಿ ಕೈಗಾರಿಕಾ ನಗರವಾಗಿ ಬೆಳೆದದ್ದು ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಆಡಳಿತಾವಧಿಯಲ್ಲಿ. ಟಿಪ್ಪು ಸುಲ್ತಾನರು ಲಾಲ್‌ಬಾಗನ್ನು ಒಂದು ವಿಶ್ವದರ್ಜೆಯ ತೋಟಗಾರಿಕಾ ತಾಣವನ್ನಾಗಿ ಕೂಡಾ ಅಭಿವೃದ್ಧಿಪಡಿಸಿದರು.

ಹೀಗೆ, ಒಕ್ಕಲಿಗರು ಮತ್ತು ಮುಸ್ಲಿಮರ ನಡುವಿನ ಪರಂಪರಾಗತ ಸಾಮರಸ್ಯವು ಹಾಸುಹೊಕ್ಕಾಗಿ ಇರುವಂತೆಯೇ, ಟಿಪ್ಪು ಮತ್ತು ಕೆಂಪೇಗೌಡರಿಬ್ಬರ ಹಾಸುಹೊಕ್ಕಾದ ಕೊಡುಗೆಗಳನ್ನು ಪ್ರತ್ಯೇಕಿಸಿ ಬೆಂಗಳೂರಿನ ಇತಿಹಾಸವನ್ನು ತಿಳಿದುಕೊಳ್ಳುವುದು  ಸಾಧ್ಯವಿಲ್ಲ. ಮತ್ತೆ, ಐತಿಹಾಸಿಕ ಕಾರಣಗಳಿಗಾಗಿ ಹೈದರಾಲಿ ಮತ್ತು ಟಿಪ್ಪು ಸುಲ್ತಾನರು ಬ್ರಿಟಿಷ್ ವಸಾಹತುಶಾಹಿಗಳ ವಿರುದ್ಧ ಮಾಡಿದ ವೀರೋಚಿತ ಯುದ್ಧಗಳು- ಬೆಂಗಳೂರನ್ನು ಅಮೇರಿಕಾ ಮತ್ತು ಫ್ರೆಂಚ್ ಕ್ರಾಂತಿಕಾರಿಗಳ ನಡುವೆಯೂ ಸೇರಿದಂತೆ-  ಅಂತರರಾಷ್ಟ್ರೀಯವಾಗಿ ಪ್ರಸಿದ್ಧ ನಗರವನ್ನಾಗಿ ಮಾಡುವುದಕ್ಕೆ ತಮ್ಮ ಪಾಲು ಸಲ್ಲಿಸಿವೆ.

ಹೀಗೆ, 2003ರಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ- ಅದು ಅವರ ಹುಟ್ಟಿದ ಸ್ಥಳವಾದ ದೇವನಹಳ್ಳಿಗೆ ಹತ್ತಿರ ಇರುವುದರಿಂದ ಟಿಪ್ಪು ಸುಲ್ತಾನರ ಹೆಸರಿಡಬೇಕು ಎಂದು ವ್ಯಾಪಕವಾಗಿ ಸೂಚಿಸಲಾಗಿತ್ತು. ಅಷ್ಟು ಮಾತ್ರವಲ್ಲದೆ, ಅದಕ್ಕೆ ಬೆಂಗಳೂರು ಮತ್ತು ಮೈಸೂರನ್ನು ವಿಶ್ವಮಟ್ಟದಲ್ಲಿ ಪ್ರಸಿದ್ಧಿಗೆ ತಂದವರು ಟಿಪ್ಪು ಸುಲ್ತಾನ್ ಎಂಬ ಕಾರಣವೂ ಇತ್ತು. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಯಾವುದೇ ಹೆಸರಿಡದೆ, ಕೇವಲ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಮಾತ್ರ ಕರೆಯಲಾಗುವುದು ಎಂಬ ರಾಜಿಸೂತ್ರಕ್ಕೆ-  ಆಗಲೂ ಕೂಡಾ ಟಿಪ್ಪು ಹೆಸರಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ-ಆರೆಸ್ಸೆಸ್ ಪ್ರಭಾವ ಬೆಳೆಯುತ್ತಿದ್ದುದು ಕಾರಣವಾಗಿತ್ತು.

ಹೀಗಿದ್ದರೂ, ಹಿಂದೂತ್ವದ ವ್ಯೂಹಾತ್ಮಕ ಒತ್ತಡಕ್ಕೆ ಮಣಿಯುವ ಚಾಳಿ ಇರುವ ಕಾಂಗ್ರೆಸ್ ಸರಕಾರ ಇರುವಾಗಲೇ, 2019ರಲ್ಲಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಹೆಸರಿಡಲಾಯಿತು.  ಊಹಿಸಿದಂತೆಯೇ ಇದನ್ನು ತನಗೆ ಸಂದ ಜಯವೆಂದು ಆಚರಿಸಿದ ಬಿಜೆಪಿಯು, ಒಕ್ಕಲಿಗ ರಾಜನೊಬ್ಬನಿಗೆ ಗೌರವ ತಂದುಕೊಟ್ಟ ಶ್ರೇಯಸ್ಸು ತನ್ನದೆಂದು ಬಿಂಬಿಸಿತು. ದಶಕದಿಂದ ನಡೆಯುತ್ತಿರುವ ಈ ನಡೆಗಳ ಮುಂದುವರಿಕೆಯಾಗಿ, ಬಿಜೆಪಿಯು ಇದೀಗ ಕೆಂಪೇಗೌಡರ ಆಡಳಿತದ ಸುತ್ತ ಒಂದು ಥೀಮ್ ಪಾರ್ಕನ್ನು ಯೋಜಿಸಿ, ವಿಮಾನ ನಿಲ್ದಾಣದ ಆವರಣದಲ್ಲಿ ಕೆಂಪೇಗೌಡರ ಒಂದು 108 ಅಡಿಗಳ ಪ್ರತಿಮೆಯನ್ನು ಅನಾವರಣಗೊಳಿಸಿದೆ. ಇದನ್ನು ಮುಂದೆ ಚುನಾವಣಾ ಪ್ರಚಾರದ ವೇಳೆ- ತಾವು ಹೇಗೆ ಒಬ್ಬ ಒಕ್ಕಲಿಗ ಅರಸನಿಗೆ ವಿಶ್ವಪ್ರಸಿದ್ಧಿಯನ್ನು ತಂದುಕೊಟ್ಟೆವು ಎಂದು ಬಿಂಬಿಸಲು ಬಳಸಲಾಗುವುದು.

ಇನ್ನೊಂದು ಕಡೆಯಲ್ಲಿ ಟಿಪ್ಪು ಸುಲ್ತಾನರ ಹೆಸರು ಕೆಡಿಸಿ, ಇತಿಹಾಸದಿಂದ ಅವರ ನೆನಪನ್ನು ಅಳಿಸುವ ಅಭಿಯಾನವನ್ನೂ ವ್ಯವಸ್ಥಿತವಾಗಿ ಅನಾವರಣಗೊಳಿಸಲಾಗಿದೆ. ಬಿಜೆಪಿ ಸರಕಾರದ ಹೊಸ ಪಠ್ಯ ಪುಸ್ತಕವು ಒಂದೋ ಟಿಪ್ಪು ಸುಲ್ತಾನರ ಸಾಧನೆಗಳನ್ನು ಕಿತ್ತುಹಾಕಿದೆ ಅಥವಾ ಅವರನ್ನು ಮತಾಂಧ ಎಂದು ಬಿಂಬಿಸುವ ಸುಳ್ಳು ಇತಿಹಾಸವನ್ನು ಸೇರಿಸಿದೆ. ದಶಕದ ಹಿಂದೆ ಟಿಪ್ಪು ಎಕ್ಸ್‌‌ಪ್ರೆಸ್ ಎಂದು ಹೆಸರಿಸಲಾಗಿದ್ದ ಬೆಂಗಳೂರು-ಮೈಸೂರು ರೈಲಿನ ಹೆಸರನ್ನು ಇತ್ತೀಚೆಗೆ ಬಿಜೆಪಿ ಸಂಸದ ಪ್ರತಾಪ ಸಿಂಹ ಸೂಚನೆಯಂತೆ ಬದಲಿಸಿ, ಒಡೆಯರ್ ಹೆಸರು ಇಡಲಾಗಿದೆ.

ಈ ಕೃತ್ಯಗಳು ಚುನಾವಣೆಯಲ್ಲಿ ಬಿಜೆಪಿಗೆ ನೆರವಾಗುತ್ತವೋ, ಇಲ್ಲವೋ, ಆದರೆ ಸಾರ್ವಜನಿಕ ಅಭಿಪ್ರಾಯವನ್ನು ನಿರಂತರವಾಗಿ ಕಲುಷಿತಗೊಳಿಸಿ, ಹಿಂದೂತ್ವದ ಕಥಾನಕವನ್ನು ಇನ್ನಷ್ಟು ಬೆಳೆಸುತ್ತವೆ.

ಇತಿಹಾಸವನ್ನು ತಿರುಚಿ ಮರಳಿ ಕಟ್ಟುವುದರಲ್ಲಿ ಬಹುಸಂಖ್ಯಾತವಾದಿ ಹಿಂದೂತ್ವ ಶಕ್ತಿಗಳ ಗೆಲುವು, ಇಂದಿನ ಜಾತ್ಯತೀತ ಶಕ್ತಿಗಳ ರಾಜಕೀಯ ಮತ್ತು ಸೈದ್ಧಾಂತಿಕ ಸೋಲಿನ ನೇರ ಫಲಿತಾಂಶವಾಗಿದೆ..

ಇತಿಹಾಸವು ಯಾವಾಗಲೂ ವಿಜಯಿಯ ಭಾಗಶಃ ಮುಖವನ್ನು ಮಾತ್ರ ತೋರಿಸುತ್ತದೆ.

ಶಿವಸುಂದರ್
ಕೃಪೆ: ಸಬ್‌ರಂಗ್
ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಇದನ್ನೂ ಓದಿ: ಕುವೆಂಪು & ನಾಡಗೀತೆ ನಿಂದಕನಿಗೆ ಪಠ್ಯ ಪರಿಷ್ಕರಣೆ ಜವಾಬ್ದಾರಿ: ಮುಂದುವರೆದ ಪ್ರತಿಭಟನೆಗಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...