Homeನ್ಯಾಯ ಪಥಬ್ಲ್ಯಾಕ್ ಫಂಗಸ್: ವಾಸ್ತವವೇನು? ವೈದ್ಯರೇನು ಹೇಳುತ್ತಿದ್ದಾರೆ?: ಡಾ. ವಾಸು

ಬ್ಲ್ಯಾಕ್ ಫಂಗಸ್: ವಾಸ್ತವವೇನು? ವೈದ್ಯರೇನು ಹೇಳುತ್ತಿದ್ದಾರೆ?: ಡಾ. ವಾಸು

- Advertisement -
- Advertisement -

ಕೊರೊನಾ ಕಾಲದ ದೊಡ್ಡ ಸಮಸ್ಯೆ ಏನೆಂದರೆ ರಾಜಕಾರಣಿಗಳು ತಜ್ಞರ ಮಾತನ್ನು ಉಪೇಕ್ಷಿಸಿ ತೀರ್ಮಾನ ಕೈಗೊಳ್ಳುವುದು; ಟಿವಿ ಆಂಕರ್‌ಗಳು ಲಾಕ್‌ಡೌನ್ ಯಾವಾಗ, ಹೇಗೆ ಹೇರಬೇಕು ಎಂಬುದನ್ನೂ, ಯಾವ ಸಮಸ್ಯೆ ಎಷ್ಟು ರಣಭೀಕರ ಎಂದು ತೀರ್ಮಾನಿಸುವುದು; ಹೃದಯ ತಜ್ಞರು ಸಾಂಕ್ರಾಮಿಕ ರೋಗದ ಉಸ್ತುವಾರಿ ವಹಿಸುವುದು ಮತ್ತು ಅಂತಿಮವಾಗಿ ವಾಟ್ಸಾಪ್‌ನಲ್ಲಿ ಹರಿದುಬರುವ ಸುಳ್ಳುಗಳು ರೋಗಿಗಳ ಚಿಕಿತ್ಸೆ ನಿರ್ಧರಿಸುವುದು. ಬ್ಲ್ಯಾಕ್ ಫಂಗಸ್ (ಕಪ್ಪು ಶಿಲೀಂಧ್ರ) ಎಂಬ ರೋಗವು ಎಲ್ಲೆಡೆ ಹಬ್ಬುತ್ತಿರುವಾಗ ಮತ್ತೊಮ್ಮೆ ಇದನ್ನು ನೆನಪಿನಲ್ಲಿಟ್ಟುಕೊಳ್ಳುವ ಅಗತ್ಯವಿದೆ. ಈ ಲೇಖನ ಬರೆಯುವಾಗಲೂ, ತಜ್ಞ ವೈದ್ಯರುಗಳು ಹಾಗೂ ಸಂಶೋಧಕರು ಏನು ಹೇಳಿದ್ದಾರೆಂಬುದನ್ನು ಮಾತ್ರವೇ ಹೇಳಬೇಕೆಂಬ ಎಚ್ಚರವನ್ನಿಟ್ಟುಕೊಳ್ಳಲಾಗಿದೆ.
ಕಪ್ಪು ಫಂಗಸ್ ಕುರಿತಂತೆ ವೈದ್ಯಲೋಕದ ಆಚೆಗೆ ಎಲ್ಲರೂ ಕೇಳಲಾರಂಭಿಸಿದ್ದು ಕೊರೊನಾದ ಭಾರತದ ಎರಡನೇ ಅಲೆಯ ತುತ್ತತುದಿಯಲ್ಲಿ. ಮ್ಯುಕೊರ್ ಮೈಸಿಟಿಸ್ ಎಂಬ ಫಂಗಸ್‌ನಿಂದ ಬರುವ ಈ ಕಾಯಿಲೆಯು ಕೊರೊನಾದಿಂದ ಶುರುವಾದದ್ದಲ್ಲ. ಇದು ಮುಂಚಿನಿಂದಲೂ ಇರುವ ಕಾಯಿಲೆಯೇ. ಹಾಗೆ ನೋಡಿದರೆ ಮುಂಚಿನಿಂದಲೂ ಭಾರತವೇ ಅದರ ರಾಜಧಾನಿ. ಬೇರೆ ದೇಶಗಳಿಗಿಂತ ಎಷ್ಟೋ ಪಟ್ಟು ಹೆಚ್ಚು ಕೇಸುಗಳು ಇಲ್ಲಿ ಸಂಭವಿಸುತ್ತವೆ. ಆದರೂ ಅವು ಬಹಳಷ್ಟು ಇರುತ್ತಿರಲಿಲ್ಲ. ಕೇವಲ ಕಳೆದೆರಡು ತಿಂಗಳಲ್ಲೇ ೮,೦೦೦ ಪ್ರಕರಣಗಳು ಪತ್ತೆಯಾಗಿವೆ. ಫಂಗಸ್‌ನಿಂದ ಉಂಟಾಗುವ ಸೋಂಕು ದೊಡ್ಡದೇನಲ್ಲ. ಎಲ್ಲರಿಗೂ ಜೀವನದ ಒಂದಲ್ಲಾ ಒಂದು ಸಂದರ್ಭದಲ್ಲಿ ಫಂಗಸ್ ಸೋಂಕು ಇದ್ದೇ ಇರುತ್ತದೆ. ಆದರೆ ಮ್ಯುಕೊರ್ ಮೈಕೋಸಿಸ್ ಒಂದು ಅಪಾಯಕಾರಿ ಕಾಯಿಲೆ. ಈಗಲೂ ಶೇ.೫೦ರಷ್ಟು ಜನರನ್ನು ಅದು ಬಲಿತೆಗೆದುಕೊಳ್ಳುತ್ತಿದೆ. ಅಂದರೆ ಕೊರೊನಾಗಿಂತಲೂ ಹೆಚ್ಚು ಅಪಾಯಕಾರಿ.

ಆದರೆ ಹಾಗೆಂದು ಅದು ವ್ಯಕ್ತಿಯಿಂದ ವ್ಯಕ್ತಿಗೆ (ಕೊರೊನಾದಂತೆ) ಹರಡುವುದಿಲ್ಲ. ಮ್ಯುಕೊರ್ ಮೈಸಿಟಿಸ್‌ನ ಸ್ಪೋರ್‌ಗಳು (ಬೀಜ ಎಂದಿಟ್ಟುಕೊಳ್ಳೋಣ) ವಾತಾವರಣದಲ್ಲಿ, ಮಣ್ಣಿನಲ್ಲೂ ಸೇರಿದಂತೆ, ಎಲ್ಲೆಡೆ ಇರುತ್ತವೆ. ಹಾಗಾಗಿ ಅದು ಒಬ್ಬರಿಂದ ಇನ್ನೊಬ್ಬರಿಗೆ ಬರಬೇಕಾದ ಅಗತ್ಯವಿಲ್ಲ. ಯಾರಲ್ಲಿ ರೋಗನಿರೋಧಕ ಶಕ್ತಿ ಅತೀ ಕಡಿಮೆಯಾಗುತ್ತದೋ ಅಂಥವರಿಗೆ ಅದು ಹರಡುತ್ತದೆ. ಬಹುತೇಕ ಮೂಗಿನಿಂದ ಒಳಹೊಕ್ಕು, ಮೂಗಿನ ಎರಡೂ ಬದಿಯಲ್ಲಿ ಇರುವ ಸೈನಸ್ ಒಳಗೂ ವೃದ್ಧಿಯಾಗುತ್ತದೆ ಮತ್ತು ಪಕ್ಕದಲ್ಲೇ ಇರುವ ಕಣ್ಣಿನ ಕುಳಿಗೆ ಪ್ರವೇಶಿಸುತ್ತದೆ; ತಲೆಬುರುಡೆಯೊಳಕ್ಕೂ ಹೋಗಿ ಮೆದುಳಿಗೂ ಹಾನಿಯುಂಟು ಮಾಡುವ ಶಕ್ತಿ ಅದಕ್ಕಿದೆ. ಸಣ್ಣಪುಟ್ಟ ಔಷಧಿಗಳ ಬಡಪೆಟ್ಟಿಗೆ ಅದು ಬಗ್ಗುವುದಿಲ್ಲ. ಯಾವ ಭಾಗದಲ್ಲಿ ಅದು ಬೆಳೆದಿರುತ್ತದೋ, ಅದನ್ನೇ ಕೆರೆದು ಅಥವಾ ಕತ್ತರಿಸಿ ತೆಗೆಯಬೇಕಾಗುತ್ತದೆ. ಇಎನ್‌ಟಿ (ಕಿವಿ, ಮೂಗು ಮತ್ತು ಗಂಟಲು) ತಜ್ಞರು ಹಾಗೂ ಕಣ್ಣಿನ ತಜ್ಞರು ಅದನ್ನು ನಿಭಾಯಿಸುತ್ತಾರೆ. ಈ ಸದ್ಯ ಅದಕ್ಕೆ ಲಭ್ಯವಿರುವ ಔಷಧಿಗಳು ವಿಪರೀತ ದುಬಾರಿಯಾಗಿವೆ. ಅದರಲ್ಲೂ ಆಂಫೋಟೆರಿಸಿನ್ ಬಿ ಎಂಬ ಔಷಧಿಯು ದುಬಾರಿಯೂ ಹೌದು; ದುರ್ಲಭವೂ ಹೌದು.

ಈಗ ಅದು ಏಕೆ ಇಷ್ಟೊಂದು ಹೆಚ್ಚಾಗಿದೆ ಎಂಬ ಬಗ್ಗೆ ಸಾಕಷ್ಟು ಚರ್ಚೆ ಈ ಒಂದು ತಿಂಗಳಲ್ಲಿ ನಡೆದಿದೆ. ಕೊರೊನಾ ಬಂದವರಲ್ಲೇ ಅದು ಅತಿ ಹೆಚ್ಚು ಕಾಣಿಸಿಕೊಂಡಿದ್ದು, ಈ ಹಿಂದಿನಂತೆ ಕ್ಯಾನ್ಸರ್‌ಗೆ ಕೀಮೋಥೆರಪಿ ತೆಗೆದುಕೊಂಡವರು, ಕಿಡ್ನಿ ಕಸಿ ಮಾಡಿಸಿಕೊಂಡವರು ಮುಂತಾದವರಲ್ಲೂ ಇದೆ. ಅತೀ ಹೆಚ್ಚು ಡಯಾಬಿಟಿಸ್ ಇರುವವರನ್ನು ಬಾಧಿಸಿದೆಯಾದರೂ ಡಯಾಬಿಟಿಸ್ ಇಲ್ಲದವರಿಗೂ ಬಂದಿದೆ. ಕೊರೊನಾ ಬಂದು ಆಸ್ಪತ್ರೆ ಸೇರಿ ಆಕ್ಸಿಜನ್ ಕೊಟ್ಟವರಲ್ಲಿ ಸಾಕಷ್ಟು ಜನರಲ್ಲಿ ಬಂದಿದೆಯಾದರೂ, ಆಸ್ಪತ್ರೆಗೇ ಹೋಗದೇ ಮನೆಯಲ್ಲೇ ಚಿಕಿತ್ಸೆ ತೆಗೆದುಕೊಂಡವರಿಗೂ ಬಂದಿದೆ. ಸ್ಟಿರಾಯ್ಡ್ ಔಷಧಿ (ಮಧ್ಯಮದಿಂದ ತೀವ್ರ ಪ್ರಮಾಣದ ಕೊರೊನಾ ಬಂದವರೆಲ್ಲರಿಗೂ ನೀಡಲಾಗುತ್ತಿದೆ) ತೆಗೆದುಕೊಂಡವರನ್ನು ಹೆಚ್ಚಿನ ಪ್ರಮಾಣದಲ್ಲಿ ಬಾಧಿಸಿದೆಯಾದರೂ, ಸ್ಟಿರಾಯ್ಡ್ ಮಾತ್ರೆಯನ್ನೂ ತೆಗೆದುಕೊಂಡಿಲ್ಲದವರಿಗೂ ಬಂದಿದೆ.

ಹೀಗಾಗಿ ಮೊದಲು ಹೇಳುತ್ತಿದ್ದಂತೆ ಕೈಗಾರಿಕಾ ಆಕ್ಸಿಜನ್ ಬಳಸಿದ್ದರಿಂದ ಬಂದಿದೆ; ಆಕ್ಸಿಜನ್ ನೀಡುವಾಗ ಬಳಸುವ ಹ್ಯೂಮಿಡಿಫೈಯರ್‌ನಲ್ಲಿ ಶುದ್ಧ ನೀರು ಬಳಸದ್ದರಿಂದ ಹೀಗಾಗಿದೆ ಎಂಬ ಮಾತುಗಳಿಗೆ ಈಗ ಹೆಚ್ಚು ಅರ್ಥವಿಲ್ಲ. ಹಾಗೆ ನೋಡಿದರೆ ಮೊದಲ ಅಲೆಯಲ್ಲೂ ಆಕ್ಸಿಜನ್ ನೀಡಲಾಗಿತ್ತು; ಡಯಾಬಿಟಿಸ್ ಇದ್ದವರಿಗೂ ಸ್ಟಿರಾಯ್ಡ್ ನೀಡಲಾಗಿತ್ತು. ಆದರೆ ಆಗ ಈ ರೀತಿ ಈ ಪ್ರಮಾಣದಲ್ಲಿ ಕಪ್ಪು ಫಂಗಸ್ ಇರಲಿಲ್ಲ.

ಮೊದಲ ಅಲೆಯ ಹೊತ್ತಿನಲ್ಲಿ ನಡೆದ ಅಧ್ಯಯನಗಳೂ ಇವನ್ನು ದೃಢಪಡಿಸುತ್ತವೆ. 2020ರ ಜೂನ್ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಕೊರೊನಾದಿಂದ ತೊಂದರೆಗೀಡಾಗಿದ್ದ 17,534 ರೋಗಿಗಳಲ್ಲಿ ಉಂಟಾದ ಸೆಕೆಂಡರಿ ಸೋಂಕನ್ನು ಅಧ್ಯಯನ ಮಾಡಲಾಗಿತ್ತು. ಅವುಗಳಲ್ಲಿ ಮ್ಯುಕೊರ್ ಮೈಕೋಸಿಸ್ ಅಥವಾ ಬ್ಲ್ಯಾಕ್ ಫಂಗಸ್ ಕಂಡುಬಂದಿದ್ದು ಕೆಲವೇ ಕೆಲವು ಪ್ರಕರಣಗಳಲ್ಲಿ.

ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಜಗತ್ತಿನಲ್ಲಿ ಇನ್ನೆಲ್ಲೂ ಕಾಣದ ಪ್ರಮಾಣದಲ್ಲಿ ಭಾರತದಲ್ಲಿ ಕಪ್ಪು ಫಂಗಸ್ ಕಾಣಿಸಿಕೊಂಡಿದ್ದರಿಂದ ಸಹಜವಾಗಿ ಇಲ್ಲಿನ ತಜ್ಞರೇ ಹೆಚ್ಚು ತಿಳಿದವರೂ ಆಗಿದ್ದಾರೆ. ಇದುವರೆಗೆ ಈ ತಜ್ಞರು ಮೇಲೆ ಹೇಳಲಾದ ಸಂಗತಿಗಳನ್ನು ಗುರುತಿಸಿದ್ದರೂ, ಡಯಾಬಿಟಿಸ್, ಸ್ಟಿರಾಯ್ಡ್ ಹಾಗೂ ರೋಗನಿರೋಧಕತೆಯನ್ನು ಕಡಿಮೆ ಮಾಡುವ ಇತರ ಸಂಗತಿಗಳನ್ನು ಈಗಲೇ ತಳ್ಳಿ ಹಾಕಲಾಗದು. ಏಕೆಂದರೆ ಜಗತ್ತಿನಲ್ಲಿ ಡಯಾಬಿಟಿಸ್ ಅತೀ ಹೆಚ್ಚು ಇರುವ ದೇಶಗಳಲ್ಲಿ ಭಾರತ ಅಗ್ರಗಣ್ಯ ದೇಶವಾಗಿದೆ. ಇಲ್ಲಿ ಸ್ಟಿರಾಯ್ಡ್ ವಿಪರೀತ ಬಳಸಲಾಗುತ್ತದೆ. ಜೊತೆಗೆ ಟೊಸಿಲಿಜುಮಾಬ್‌ನಂತಹ ರೋಗ ನಿರೋಧಕತೆಯನ್ನು ಏರುಪೇರು ಮಾಡುವ ಔಷಧಗಳನ್ನೂ ಬಳಸಲಾಗುತ್ತಿದೆ.

ಇವೆಲ್ಲದರ ಜೊತೆಗೆ ಗಮನಿಸಬೇಕಾದ ಇನ್ನೂ ಕೆಲವು ಸಂಗತಿಗಳಿವೆ. ಕೊರೊನಾ ವೈರಸ್‌ನಿಂದ ಬಂದ ರೋಗವನ್ನು ನಿರ್ವಹಿಸುವಾಗ ವಿಪರೀತ ಆಂಟಿಬಯಾಟಿಕ್‌ಗಳನ್ನೂ ನೀಡಲಾಗಿದೆ. ಇದರ ಪರಿಣಾಮವಾಗಿ ಫಂಗಸ್ ರೋಗ ಹೆಚ್ಚಾಗಿರುವ ಸಾಧ್ಯತೆ ಇದೆಯೇ ಎಂಬುದನ್ನು ಒರೆಗೆ ಹಚ್ಚಲಾಗುತ್ತಿದೆ. ಅದೇನೇ ಇದ್ದರೂ, ಬಿ.1.217 (ಭಾರತೀಯ) ಕೊರೊನಾ ವೈರಸ್ ರೋಗನಿರೋಧಕತೆಯನ್ನು ಕಡಿಮೆ ಮಾಡುತ್ತಿದೆ. ಇದು ಎರಡನೆಯ ಅಲೆಯ ಸಂದರ್ಭದಲ್ಲಿ ಮಾತ್ರ ಹೆಚ್ಚಾಗಿರುವ ರೋಗ ಪ್ರಮಾಣಕ್ಕೆ ಒಂದು ಸಮರ್ಥ
ವಿವರಣೆಯನ್ನು ಒದಗಿಸುತ್ತದೆ. ಅದರ ಜೊತೆಗೆ ಚರ್ಚೆ ನಡೆಯುತ್ತಿರುವುದು ಇನ್ನೂ ಮೂರು ಸಂಗತಿಗಳ ಮೇಲೆ. ಒಂದು, ಅನಗತ್ಯವಾಗಿ ಪ್ರತಿಯೊಬ್ಬ ಕೊರೊನಾ ರೋಗಿಗೂ ಜಿಂಕ್ ಸಲ್ಫೇಟ್ ಕೊಡಲಾಗಿದೆ. ಜಿಂಕ್ ಲವಣವು ಈ ಮ್ಯುಕೊರ್ ಮೈಸಿಟಿಸ್ ಫಂಗಸ್ ಬೆಳೆಯಲು ಅತ್ಯಗತ್ಯ. ಹಾಗಾಗಿ ಅದು ಬೆಳೆಯಲು ಜಿಂಕ್ ಪ್ರಶಸ್ತ ವಾತಾವರಣ ಕಲ್ಪಿಸಿತೇ? ಎರಡು, ಎರಡೂ ವ್ಯಾಕ್ಸೀನ್ ತೆಗೆದುಕೊಂಡವರಲ್ಲಿ ಮ್ಯುಕೋರ್ ಬಂದಿರುವುದು ಕಡಿಮೆ. ಇದು ನಮಗೇನು ಸೂಚಿಸುತ್ತದೆ? ಮೂರು, ವಿಪರೀತ ಬಿಸಿನೀರಿನ ಹವೆ ತೆಗೆದುಕೊಳ್ಳುವುದರಿಂದ ಮೂಗು, ಗಂಟಲಿನ ತೆಳುವಾದ ಪದರಕ್ಕೆ ಹಾನಿಯಾಗಿ ಅದರ ರೋಗನಿರೋಧಕತೆ ಕಡಿಮೆಯಾಗಿದೆ. ಬೆಂಗಳೂರಿನ ಪ್ರಸಿದ್ಧ ಇಎನ್‌ಟಿ ತಜ್ಞ ಡಾ.ದೀಪಕ್ ಹಲ್ದಿಪುರ ಅವರ ಪ್ರಕಾರ ವಾಟ್ಸಾಪ್‌ನಲ್ಲಿ ಹರಿಯಬಿಟ್ಟ ಇಂತಹ ಚಿಕಿತ್ಸೆಗಳಿಂದಲೂ ಈ ಸಮಸ್ಯೆ ಉದ್ಭವಿಸಿದೆ.

ಹೀಗಾಗಿ ಕೊರೊನಾ ಬಂದವರೆಲ್ಲರೂ ಎಚ್ಚರ ವಹಿಸಬೇಕಾದ ಕೆಲವು ಸಂಗತಿಗಳಿವೆ. ಡಯಾಬಿಟಿಸ್ ಇದ್ದರೆ ಅವರು ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು; ಸ್ಟಿರಾಯ್ಡ್ ಮಾತ್ರೆ/ಇಂಜೆಕ್ಷನ್ ಪಡೆದವರೆಲ್ಲರೂ ರಕ್ತದ ಸಕ್ಕರೆ ಪರೀಕ್ಷಿಸಿಕೊಂಡು ಹೆಚ್ಚಾಗಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು. ಅನಗತ್ಯವಾಗಿ ಯಾವುದೇ ಮಾತ್ರೆಗಳನ್ನು ತೆಗೆದುಕೊಳ್ಳಬಾರದು. ಜೊತೆಗೆ ಕಪ್ಪು ಫಂಗಸ್‌ನ ಲಕ್ಷಣಗಳು ಕಂಡರೆ ಕೂಡಲೇ ತಜ್ಞ ವೈದ್ಯರನ್ನು (ಇಎನ್‌ಟಿ ವೈದ್ಯರನ್ನು) ಸಂಪರ್ಕ ಮಾಡಬೇಕು.

ಕಪ್ಪು ಫಂಗಸ್‌ನ ಲಕ್ಷಣಗಳು ಈ ಕೆಳಕಂಡಂತಿವೆ.
ತಲೆಯ ಒಂದು ಬದಿ ಮಾತ್ರ ಬರುವ ತಲೆನೋವು, ಅಂದರೆ ನಿದ್ದೆ ಮಾಡಲೇ ಬಿಡದಂತಹ ವಿಪರೀತ ತಲೆನೋವು (ಸ್ವಲ್ಪ ತಲೆ ನೋವಲ್ಲ), ಎದ್ದು ಕಾಣುವಂತಹ ಮುಖದ ಊತ, ಒಂದು ಕಣ್ಣು ಗುಡ್ಡೆ ಸ್ವಲ್ಪ ಹೊರಬರುವುದು, ಮೂಗಿನ ಒಳಗೆ ಹಾಗೂ ಹೊರಗೆ ಕಾಣುವಂತಹ ಕಪ್ಪು ಗಾಯ, ಕಣ್ಣಿನ ದೃಷ್ಟಿ ಏರುಪೇರಾಗುವುದು. ಮೂಗು, ಸೈನಸ್‌ನಲ್ಲಿ ಕಫ ದಟ್ಟಣೆ. ಮೂಗಿನ ಮೇಲೆ ಅಥವಾ ಬಾಯಿಯ ಒಳಭಾಗದಲ್ಲಿ ಕಪ್ಪು ಕಲೆಗಳು ಕಾಣಿಸಿಕೊಳ್ಳುವುದು, ಹಲ್ಲು ನೋವು ಹಾಗೂ ಹಲ್ಲುಗಳು ಒಸಡಿನಿಂದ ಸಡಿಲವಾಗುವುದು, ಎದೆ ನೋವು ಹಾಗೂ ಉಸಿರಾಟದ ತೊಂದರೆ, ಕೆಮ್ಮಿದಾಗ ಅಥವಾ ಮೂಗಿನಿಂದ ರಕ್ತ ಸೋರುವುದು.

– ಡಾ.ವಾಸು ಎಚ್.ವಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...