Homeನ್ಯಾಯ ಪಥಬ್ಲ್ಯಾಕ್ ಫಂಗಸ್: ವಾಸ್ತವವೇನು? ವೈದ್ಯರೇನು ಹೇಳುತ್ತಿದ್ದಾರೆ?: ಡಾ. ವಾಸು

ಬ್ಲ್ಯಾಕ್ ಫಂಗಸ್: ವಾಸ್ತವವೇನು? ವೈದ್ಯರೇನು ಹೇಳುತ್ತಿದ್ದಾರೆ?: ಡಾ. ವಾಸು

- Advertisement -
- Advertisement -

ಕೊರೊನಾ ಕಾಲದ ದೊಡ್ಡ ಸಮಸ್ಯೆ ಏನೆಂದರೆ ರಾಜಕಾರಣಿಗಳು ತಜ್ಞರ ಮಾತನ್ನು ಉಪೇಕ್ಷಿಸಿ ತೀರ್ಮಾನ ಕೈಗೊಳ್ಳುವುದು; ಟಿವಿ ಆಂಕರ್‌ಗಳು ಲಾಕ್‌ಡೌನ್ ಯಾವಾಗ, ಹೇಗೆ ಹೇರಬೇಕು ಎಂಬುದನ್ನೂ, ಯಾವ ಸಮಸ್ಯೆ ಎಷ್ಟು ರಣಭೀಕರ ಎಂದು ತೀರ್ಮಾನಿಸುವುದು; ಹೃದಯ ತಜ್ಞರು ಸಾಂಕ್ರಾಮಿಕ ರೋಗದ ಉಸ್ತುವಾರಿ ವಹಿಸುವುದು ಮತ್ತು ಅಂತಿಮವಾಗಿ ವಾಟ್ಸಾಪ್‌ನಲ್ಲಿ ಹರಿದುಬರುವ ಸುಳ್ಳುಗಳು ರೋಗಿಗಳ ಚಿಕಿತ್ಸೆ ನಿರ್ಧರಿಸುವುದು. ಬ್ಲ್ಯಾಕ್ ಫಂಗಸ್ (ಕಪ್ಪು ಶಿಲೀಂಧ್ರ) ಎಂಬ ರೋಗವು ಎಲ್ಲೆಡೆ ಹಬ್ಬುತ್ತಿರುವಾಗ ಮತ್ತೊಮ್ಮೆ ಇದನ್ನು ನೆನಪಿನಲ್ಲಿಟ್ಟುಕೊಳ್ಳುವ ಅಗತ್ಯವಿದೆ. ಈ ಲೇಖನ ಬರೆಯುವಾಗಲೂ, ತಜ್ಞ ವೈದ್ಯರುಗಳು ಹಾಗೂ ಸಂಶೋಧಕರು ಏನು ಹೇಳಿದ್ದಾರೆಂಬುದನ್ನು ಮಾತ್ರವೇ ಹೇಳಬೇಕೆಂಬ ಎಚ್ಚರವನ್ನಿಟ್ಟುಕೊಳ್ಳಲಾಗಿದೆ.
ಕಪ್ಪು ಫಂಗಸ್ ಕುರಿತಂತೆ ವೈದ್ಯಲೋಕದ ಆಚೆಗೆ ಎಲ್ಲರೂ ಕೇಳಲಾರಂಭಿಸಿದ್ದು ಕೊರೊನಾದ ಭಾರತದ ಎರಡನೇ ಅಲೆಯ ತುತ್ತತುದಿಯಲ್ಲಿ. ಮ್ಯುಕೊರ್ ಮೈಸಿಟಿಸ್ ಎಂಬ ಫಂಗಸ್‌ನಿಂದ ಬರುವ ಈ ಕಾಯಿಲೆಯು ಕೊರೊನಾದಿಂದ ಶುರುವಾದದ್ದಲ್ಲ. ಇದು ಮುಂಚಿನಿಂದಲೂ ಇರುವ ಕಾಯಿಲೆಯೇ. ಹಾಗೆ ನೋಡಿದರೆ ಮುಂಚಿನಿಂದಲೂ ಭಾರತವೇ ಅದರ ರಾಜಧಾನಿ. ಬೇರೆ ದೇಶಗಳಿಗಿಂತ ಎಷ್ಟೋ ಪಟ್ಟು ಹೆಚ್ಚು ಕೇಸುಗಳು ಇಲ್ಲಿ ಸಂಭವಿಸುತ್ತವೆ. ಆದರೂ ಅವು ಬಹಳಷ್ಟು ಇರುತ್ತಿರಲಿಲ್ಲ. ಕೇವಲ ಕಳೆದೆರಡು ತಿಂಗಳಲ್ಲೇ ೮,೦೦೦ ಪ್ರಕರಣಗಳು ಪತ್ತೆಯಾಗಿವೆ. ಫಂಗಸ್‌ನಿಂದ ಉಂಟಾಗುವ ಸೋಂಕು ದೊಡ್ಡದೇನಲ್ಲ. ಎಲ್ಲರಿಗೂ ಜೀವನದ ಒಂದಲ್ಲಾ ಒಂದು ಸಂದರ್ಭದಲ್ಲಿ ಫಂಗಸ್ ಸೋಂಕು ಇದ್ದೇ ಇರುತ್ತದೆ. ಆದರೆ ಮ್ಯುಕೊರ್ ಮೈಕೋಸಿಸ್ ಒಂದು ಅಪಾಯಕಾರಿ ಕಾಯಿಲೆ. ಈಗಲೂ ಶೇ.೫೦ರಷ್ಟು ಜನರನ್ನು ಅದು ಬಲಿತೆಗೆದುಕೊಳ್ಳುತ್ತಿದೆ. ಅಂದರೆ ಕೊರೊನಾಗಿಂತಲೂ ಹೆಚ್ಚು ಅಪಾಯಕಾರಿ.

ಆದರೆ ಹಾಗೆಂದು ಅದು ವ್ಯಕ್ತಿಯಿಂದ ವ್ಯಕ್ತಿಗೆ (ಕೊರೊನಾದಂತೆ) ಹರಡುವುದಿಲ್ಲ. ಮ್ಯುಕೊರ್ ಮೈಸಿಟಿಸ್‌ನ ಸ್ಪೋರ್‌ಗಳು (ಬೀಜ ಎಂದಿಟ್ಟುಕೊಳ್ಳೋಣ) ವಾತಾವರಣದಲ್ಲಿ, ಮಣ್ಣಿನಲ್ಲೂ ಸೇರಿದಂತೆ, ಎಲ್ಲೆಡೆ ಇರುತ್ತವೆ. ಹಾಗಾಗಿ ಅದು ಒಬ್ಬರಿಂದ ಇನ್ನೊಬ್ಬರಿಗೆ ಬರಬೇಕಾದ ಅಗತ್ಯವಿಲ್ಲ. ಯಾರಲ್ಲಿ ರೋಗನಿರೋಧಕ ಶಕ್ತಿ ಅತೀ ಕಡಿಮೆಯಾಗುತ್ತದೋ ಅಂಥವರಿಗೆ ಅದು ಹರಡುತ್ತದೆ. ಬಹುತೇಕ ಮೂಗಿನಿಂದ ಒಳಹೊಕ್ಕು, ಮೂಗಿನ ಎರಡೂ ಬದಿಯಲ್ಲಿ ಇರುವ ಸೈನಸ್ ಒಳಗೂ ವೃದ್ಧಿಯಾಗುತ್ತದೆ ಮತ್ತು ಪಕ್ಕದಲ್ಲೇ ಇರುವ ಕಣ್ಣಿನ ಕುಳಿಗೆ ಪ್ರವೇಶಿಸುತ್ತದೆ; ತಲೆಬುರುಡೆಯೊಳಕ್ಕೂ ಹೋಗಿ ಮೆದುಳಿಗೂ ಹಾನಿಯುಂಟು ಮಾಡುವ ಶಕ್ತಿ ಅದಕ್ಕಿದೆ. ಸಣ್ಣಪುಟ್ಟ ಔಷಧಿಗಳ ಬಡಪೆಟ್ಟಿಗೆ ಅದು ಬಗ್ಗುವುದಿಲ್ಲ. ಯಾವ ಭಾಗದಲ್ಲಿ ಅದು ಬೆಳೆದಿರುತ್ತದೋ, ಅದನ್ನೇ ಕೆರೆದು ಅಥವಾ ಕತ್ತರಿಸಿ ತೆಗೆಯಬೇಕಾಗುತ್ತದೆ. ಇಎನ್‌ಟಿ (ಕಿವಿ, ಮೂಗು ಮತ್ತು ಗಂಟಲು) ತಜ್ಞರು ಹಾಗೂ ಕಣ್ಣಿನ ತಜ್ಞರು ಅದನ್ನು ನಿಭಾಯಿಸುತ್ತಾರೆ. ಈ ಸದ್ಯ ಅದಕ್ಕೆ ಲಭ್ಯವಿರುವ ಔಷಧಿಗಳು ವಿಪರೀತ ದುಬಾರಿಯಾಗಿವೆ. ಅದರಲ್ಲೂ ಆಂಫೋಟೆರಿಸಿನ್ ಬಿ ಎಂಬ ಔಷಧಿಯು ದುಬಾರಿಯೂ ಹೌದು; ದುರ್ಲಭವೂ ಹೌದು.

ಈಗ ಅದು ಏಕೆ ಇಷ್ಟೊಂದು ಹೆಚ್ಚಾಗಿದೆ ಎಂಬ ಬಗ್ಗೆ ಸಾಕಷ್ಟು ಚರ್ಚೆ ಈ ಒಂದು ತಿಂಗಳಲ್ಲಿ ನಡೆದಿದೆ. ಕೊರೊನಾ ಬಂದವರಲ್ಲೇ ಅದು ಅತಿ ಹೆಚ್ಚು ಕಾಣಿಸಿಕೊಂಡಿದ್ದು, ಈ ಹಿಂದಿನಂತೆ ಕ್ಯಾನ್ಸರ್‌ಗೆ ಕೀಮೋಥೆರಪಿ ತೆಗೆದುಕೊಂಡವರು, ಕಿಡ್ನಿ ಕಸಿ ಮಾಡಿಸಿಕೊಂಡವರು ಮುಂತಾದವರಲ್ಲೂ ಇದೆ. ಅತೀ ಹೆಚ್ಚು ಡಯಾಬಿಟಿಸ್ ಇರುವವರನ್ನು ಬಾಧಿಸಿದೆಯಾದರೂ ಡಯಾಬಿಟಿಸ್ ಇಲ್ಲದವರಿಗೂ ಬಂದಿದೆ. ಕೊರೊನಾ ಬಂದು ಆಸ್ಪತ್ರೆ ಸೇರಿ ಆಕ್ಸಿಜನ್ ಕೊಟ್ಟವರಲ್ಲಿ ಸಾಕಷ್ಟು ಜನರಲ್ಲಿ ಬಂದಿದೆಯಾದರೂ, ಆಸ್ಪತ್ರೆಗೇ ಹೋಗದೇ ಮನೆಯಲ್ಲೇ ಚಿಕಿತ್ಸೆ ತೆಗೆದುಕೊಂಡವರಿಗೂ ಬಂದಿದೆ. ಸ್ಟಿರಾಯ್ಡ್ ಔಷಧಿ (ಮಧ್ಯಮದಿಂದ ತೀವ್ರ ಪ್ರಮಾಣದ ಕೊರೊನಾ ಬಂದವರೆಲ್ಲರಿಗೂ ನೀಡಲಾಗುತ್ತಿದೆ) ತೆಗೆದುಕೊಂಡವರನ್ನು ಹೆಚ್ಚಿನ ಪ್ರಮಾಣದಲ್ಲಿ ಬಾಧಿಸಿದೆಯಾದರೂ, ಸ್ಟಿರಾಯ್ಡ್ ಮಾತ್ರೆಯನ್ನೂ ತೆಗೆದುಕೊಂಡಿಲ್ಲದವರಿಗೂ ಬಂದಿದೆ.

ಹೀಗಾಗಿ ಮೊದಲು ಹೇಳುತ್ತಿದ್ದಂತೆ ಕೈಗಾರಿಕಾ ಆಕ್ಸಿಜನ್ ಬಳಸಿದ್ದರಿಂದ ಬಂದಿದೆ; ಆಕ್ಸಿಜನ್ ನೀಡುವಾಗ ಬಳಸುವ ಹ್ಯೂಮಿಡಿಫೈಯರ್‌ನಲ್ಲಿ ಶುದ್ಧ ನೀರು ಬಳಸದ್ದರಿಂದ ಹೀಗಾಗಿದೆ ಎಂಬ ಮಾತುಗಳಿಗೆ ಈಗ ಹೆಚ್ಚು ಅರ್ಥವಿಲ್ಲ. ಹಾಗೆ ನೋಡಿದರೆ ಮೊದಲ ಅಲೆಯಲ್ಲೂ ಆಕ್ಸಿಜನ್ ನೀಡಲಾಗಿತ್ತು; ಡಯಾಬಿಟಿಸ್ ಇದ್ದವರಿಗೂ ಸ್ಟಿರಾಯ್ಡ್ ನೀಡಲಾಗಿತ್ತು. ಆದರೆ ಆಗ ಈ ರೀತಿ ಈ ಪ್ರಮಾಣದಲ್ಲಿ ಕಪ್ಪು ಫಂಗಸ್ ಇರಲಿಲ್ಲ.

ಮೊದಲ ಅಲೆಯ ಹೊತ್ತಿನಲ್ಲಿ ನಡೆದ ಅಧ್ಯಯನಗಳೂ ಇವನ್ನು ದೃಢಪಡಿಸುತ್ತವೆ. 2020ರ ಜೂನ್ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಕೊರೊನಾದಿಂದ ತೊಂದರೆಗೀಡಾಗಿದ್ದ 17,534 ರೋಗಿಗಳಲ್ಲಿ ಉಂಟಾದ ಸೆಕೆಂಡರಿ ಸೋಂಕನ್ನು ಅಧ್ಯಯನ ಮಾಡಲಾಗಿತ್ತು. ಅವುಗಳಲ್ಲಿ ಮ್ಯುಕೊರ್ ಮೈಕೋಸಿಸ್ ಅಥವಾ ಬ್ಲ್ಯಾಕ್ ಫಂಗಸ್ ಕಂಡುಬಂದಿದ್ದು ಕೆಲವೇ ಕೆಲವು ಪ್ರಕರಣಗಳಲ್ಲಿ.

ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಜಗತ್ತಿನಲ್ಲಿ ಇನ್ನೆಲ್ಲೂ ಕಾಣದ ಪ್ರಮಾಣದಲ್ಲಿ ಭಾರತದಲ್ಲಿ ಕಪ್ಪು ಫಂಗಸ್ ಕಾಣಿಸಿಕೊಂಡಿದ್ದರಿಂದ ಸಹಜವಾಗಿ ಇಲ್ಲಿನ ತಜ್ಞರೇ ಹೆಚ್ಚು ತಿಳಿದವರೂ ಆಗಿದ್ದಾರೆ. ಇದುವರೆಗೆ ಈ ತಜ್ಞರು ಮೇಲೆ ಹೇಳಲಾದ ಸಂಗತಿಗಳನ್ನು ಗುರುತಿಸಿದ್ದರೂ, ಡಯಾಬಿಟಿಸ್, ಸ್ಟಿರಾಯ್ಡ್ ಹಾಗೂ ರೋಗನಿರೋಧಕತೆಯನ್ನು ಕಡಿಮೆ ಮಾಡುವ ಇತರ ಸಂಗತಿಗಳನ್ನು ಈಗಲೇ ತಳ್ಳಿ ಹಾಕಲಾಗದು. ಏಕೆಂದರೆ ಜಗತ್ತಿನಲ್ಲಿ ಡಯಾಬಿಟಿಸ್ ಅತೀ ಹೆಚ್ಚು ಇರುವ ದೇಶಗಳಲ್ಲಿ ಭಾರತ ಅಗ್ರಗಣ್ಯ ದೇಶವಾಗಿದೆ. ಇಲ್ಲಿ ಸ್ಟಿರಾಯ್ಡ್ ವಿಪರೀತ ಬಳಸಲಾಗುತ್ತದೆ. ಜೊತೆಗೆ ಟೊಸಿಲಿಜುಮಾಬ್‌ನಂತಹ ರೋಗ ನಿರೋಧಕತೆಯನ್ನು ಏರುಪೇರು ಮಾಡುವ ಔಷಧಗಳನ್ನೂ ಬಳಸಲಾಗುತ್ತಿದೆ.

ಇವೆಲ್ಲದರ ಜೊತೆಗೆ ಗಮನಿಸಬೇಕಾದ ಇನ್ನೂ ಕೆಲವು ಸಂಗತಿಗಳಿವೆ. ಕೊರೊನಾ ವೈರಸ್‌ನಿಂದ ಬಂದ ರೋಗವನ್ನು ನಿರ್ವಹಿಸುವಾಗ ವಿಪರೀತ ಆಂಟಿಬಯಾಟಿಕ್‌ಗಳನ್ನೂ ನೀಡಲಾಗಿದೆ. ಇದರ ಪರಿಣಾಮವಾಗಿ ಫಂಗಸ್ ರೋಗ ಹೆಚ್ಚಾಗಿರುವ ಸಾಧ್ಯತೆ ಇದೆಯೇ ಎಂಬುದನ್ನು ಒರೆಗೆ ಹಚ್ಚಲಾಗುತ್ತಿದೆ. ಅದೇನೇ ಇದ್ದರೂ, ಬಿ.1.217 (ಭಾರತೀಯ) ಕೊರೊನಾ ವೈರಸ್ ರೋಗನಿರೋಧಕತೆಯನ್ನು ಕಡಿಮೆ ಮಾಡುತ್ತಿದೆ. ಇದು ಎರಡನೆಯ ಅಲೆಯ ಸಂದರ್ಭದಲ್ಲಿ ಮಾತ್ರ ಹೆಚ್ಚಾಗಿರುವ ರೋಗ ಪ್ರಮಾಣಕ್ಕೆ ಒಂದು ಸಮರ್ಥ
ವಿವರಣೆಯನ್ನು ಒದಗಿಸುತ್ತದೆ. ಅದರ ಜೊತೆಗೆ ಚರ್ಚೆ ನಡೆಯುತ್ತಿರುವುದು ಇನ್ನೂ ಮೂರು ಸಂಗತಿಗಳ ಮೇಲೆ. ಒಂದು, ಅನಗತ್ಯವಾಗಿ ಪ್ರತಿಯೊಬ್ಬ ಕೊರೊನಾ ರೋಗಿಗೂ ಜಿಂಕ್ ಸಲ್ಫೇಟ್ ಕೊಡಲಾಗಿದೆ. ಜಿಂಕ್ ಲವಣವು ಈ ಮ್ಯುಕೊರ್ ಮೈಸಿಟಿಸ್ ಫಂಗಸ್ ಬೆಳೆಯಲು ಅತ್ಯಗತ್ಯ. ಹಾಗಾಗಿ ಅದು ಬೆಳೆಯಲು ಜಿಂಕ್ ಪ್ರಶಸ್ತ ವಾತಾವರಣ ಕಲ್ಪಿಸಿತೇ? ಎರಡು, ಎರಡೂ ವ್ಯಾಕ್ಸೀನ್ ತೆಗೆದುಕೊಂಡವರಲ್ಲಿ ಮ್ಯುಕೋರ್ ಬಂದಿರುವುದು ಕಡಿಮೆ. ಇದು ನಮಗೇನು ಸೂಚಿಸುತ್ತದೆ? ಮೂರು, ವಿಪರೀತ ಬಿಸಿನೀರಿನ ಹವೆ ತೆಗೆದುಕೊಳ್ಳುವುದರಿಂದ ಮೂಗು, ಗಂಟಲಿನ ತೆಳುವಾದ ಪದರಕ್ಕೆ ಹಾನಿಯಾಗಿ ಅದರ ರೋಗನಿರೋಧಕತೆ ಕಡಿಮೆಯಾಗಿದೆ. ಬೆಂಗಳೂರಿನ ಪ್ರಸಿದ್ಧ ಇಎನ್‌ಟಿ ತಜ್ಞ ಡಾ.ದೀಪಕ್ ಹಲ್ದಿಪುರ ಅವರ ಪ್ರಕಾರ ವಾಟ್ಸಾಪ್‌ನಲ್ಲಿ ಹರಿಯಬಿಟ್ಟ ಇಂತಹ ಚಿಕಿತ್ಸೆಗಳಿಂದಲೂ ಈ ಸಮಸ್ಯೆ ಉದ್ಭವಿಸಿದೆ.

ಹೀಗಾಗಿ ಕೊರೊನಾ ಬಂದವರೆಲ್ಲರೂ ಎಚ್ಚರ ವಹಿಸಬೇಕಾದ ಕೆಲವು ಸಂಗತಿಗಳಿವೆ. ಡಯಾಬಿಟಿಸ್ ಇದ್ದರೆ ಅವರು ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು; ಸ್ಟಿರಾಯ್ಡ್ ಮಾತ್ರೆ/ಇಂಜೆಕ್ಷನ್ ಪಡೆದವರೆಲ್ಲರೂ ರಕ್ತದ ಸಕ್ಕರೆ ಪರೀಕ್ಷಿಸಿಕೊಂಡು ಹೆಚ್ಚಾಗಿದ್ದರೆ ವೈದ್ಯರನ್ನು ಸಂಪರ್ಕಿಸಬೇಕು. ಅನಗತ್ಯವಾಗಿ ಯಾವುದೇ ಮಾತ್ರೆಗಳನ್ನು ತೆಗೆದುಕೊಳ್ಳಬಾರದು. ಜೊತೆಗೆ ಕಪ್ಪು ಫಂಗಸ್‌ನ ಲಕ್ಷಣಗಳು ಕಂಡರೆ ಕೂಡಲೇ ತಜ್ಞ ವೈದ್ಯರನ್ನು (ಇಎನ್‌ಟಿ ವೈದ್ಯರನ್ನು) ಸಂಪರ್ಕ ಮಾಡಬೇಕು.

ಕಪ್ಪು ಫಂಗಸ್‌ನ ಲಕ್ಷಣಗಳು ಈ ಕೆಳಕಂಡಂತಿವೆ.
ತಲೆಯ ಒಂದು ಬದಿ ಮಾತ್ರ ಬರುವ ತಲೆನೋವು, ಅಂದರೆ ನಿದ್ದೆ ಮಾಡಲೇ ಬಿಡದಂತಹ ವಿಪರೀತ ತಲೆನೋವು (ಸ್ವಲ್ಪ ತಲೆ ನೋವಲ್ಲ), ಎದ್ದು ಕಾಣುವಂತಹ ಮುಖದ ಊತ, ಒಂದು ಕಣ್ಣು ಗುಡ್ಡೆ ಸ್ವಲ್ಪ ಹೊರಬರುವುದು, ಮೂಗಿನ ಒಳಗೆ ಹಾಗೂ ಹೊರಗೆ ಕಾಣುವಂತಹ ಕಪ್ಪು ಗಾಯ, ಕಣ್ಣಿನ ದೃಷ್ಟಿ ಏರುಪೇರಾಗುವುದು. ಮೂಗು, ಸೈನಸ್‌ನಲ್ಲಿ ಕಫ ದಟ್ಟಣೆ. ಮೂಗಿನ ಮೇಲೆ ಅಥವಾ ಬಾಯಿಯ ಒಳಭಾಗದಲ್ಲಿ ಕಪ್ಪು ಕಲೆಗಳು ಕಾಣಿಸಿಕೊಳ್ಳುವುದು, ಹಲ್ಲು ನೋವು ಹಾಗೂ ಹಲ್ಲುಗಳು ಒಸಡಿನಿಂದ ಸಡಿಲವಾಗುವುದು, ಎದೆ ನೋವು ಹಾಗೂ ಉಸಿರಾಟದ ತೊಂದರೆ, ಕೆಮ್ಮಿದಾಗ ಅಥವಾ ಮೂಗಿನಿಂದ ರಕ್ತ ಸೋರುವುದು.

– ಡಾ.ವಾಸು ಎಚ್.ವಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...