ಭಾರತದ ಏಕತೆ ಮತ್ತು ಸಮಗ್ರತೆಗೆ ಅಪಾಯವನ್ನುಂಟುಮಾಡುವ ಕೃತ್ಯಗಳನ್ನು ಅಪರಾಧೀಕರಿಸುವ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ಸೆಕ್ಷನ್ 152 ಅನ್ನು ಕಾನೂನುಬದ್ಧ ಭಿನ್ನಾಭಿಪ್ರಾಯದ ವಿರುದ್ಧ ಅಸ್ತ್ರವಾಗಿ ಬಳಸಬಾರದು ಎಂದು ರಾಜಸ್ಥಾನ ಹೈಕೋರ್ಟ್ ಹೇಳಿದೆ.
ಬಿಎನ್ಎಸ್ ಸೆಕ್ಷನ್ನ ಮೂಲ ದೇಶದ್ರೋಹವನ್ನು ಅಪರಾಧೀಕರಿಸುವ ಬ್ರಿಟಿಷರು ಜಾರಿಗೆ ತಂದಿದ್ದ ಐಪಿಸಿ ಸೆಕ್ಷನ್ 124ಎರಲ್ಲಿ ಇದೆ ಎಂದು ನ್ಯಾ. ಅರುಣ್ ಮೋಂಗಾ ತಿಳಿಸಿದ್ದಾರೆ.
ತಮ್ಮ ವಿರುದ್ಧ ಬಿಎನ್ಎಸ್ ಸೆಕ್ಷನ್ 152 ಮತ್ತು ಸೆಕ್ಷನ್ 197(1)(ಸಿ) (ಆರೋಪಗಳು, ರಾಷ್ಟ್ರೀಯ ಏಕೀಕರಣಕ್ಕೆ ಪ್ರತಿಕೂಲವಾದ ಸಮರ್ಥನೆಗಳು) ಅಡಿ ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಸಿಖ್ ಬೋಧಕ ತೇಜೇಂದರ್ ಪಾಲ್ ಸಿಂಗ್ ಸಲ್ಲಿಸಿದ್ದ ಮನವಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅವಲೋಕನ ಮಾಡಿದೆ.
ಖಲಿಸ್ತಾನ ಪರ ನಾಯಕ ಮತ್ತು ಸಂಸದ ಅಮೃತಪಾಲ್ ಸಿಂಗ್ ಅವರಿಗೆ ಸಹಾನುಭೂತಿ ತೋರಿದ್ದ ವಿಡಿಯೋವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡ ಹಿನ್ನೆಲೆಯಲ್ಲಿ ತೇಜೇಂದರ್ ಅವರ ವಿರುದ್ದ ಕಳೆದ ಜುಲೈನಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ದುರುದ್ದೇಶದಿಂದ ಮಾಡುವ ಕೃತ್ಯಗಳ ಮಾತ್ರವೇ ಬಿಎನ್ಎಸ್ ಸೆಕ್ಷನ್ 152ರ ವ್ಯಾಪ್ತಿಯಲ್ಲಿ ಬರುತ್ತವೆ. ಬಿಎನ್ಎಸ್ ಸೆಕ್ಷನ್ 152ಕ್ಕೆ ಇರುವ ವಿವರಣೆಯು ಸರ್ಕಾರದ ನೀತಿಗಳ ನ್ಯಾಯಸಮ್ಮತ ಟೀಕೆಗೆ ವಿನಾಯಿತಿ ನೀಡುವ ಮೂಲಕ ಅಗತ್ಯವಾದ ಸುರಕ್ಷತೆಯನ್ನು ಒದಗಿಸುತ್ತದೆ ಎಂದು ನ್ಯಾಯಾಲಯ ಒತ್ತಿ ಹೇಳಿದೆ.
ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿಗೆ ಅನುಗುಣವಾಗಿ ಬಿಎನ್ಎಸ್ ಸೆಕ್ಷನ್ 152ನ್ನು ಎಚ್ಚರಿಕೆಯಿಂದ ಅನ್ವಯಿಸುವಂತೆ ನ್ಯಾಯಾಲಯ ಸೂಚಿಸಿದೆ. ರಚನಾತ್ಮಕ ಸಂವಾದ ಅಥವಾ ರಾಜಕೀಯ ಅಭಿಪ್ರಾಯ ಭೇದವನ್ನು ಹತ್ತಿಕ್ಕುವುದನ್ನು ತಪ್ಪಿಸುವುದಕ್ಕಾಗಿ ಕಾನೂನು ಜಾರಿ ಅಧಿಕಾರಿಗಳು ಸಂಯಮ ಮತ್ತು ವಿವೇಚನೆಯನ್ನು ಬಳಸಬೇಕು ಎಂದು ಪೀಠ ಕಿವಿಮಾತು ಹೇಳಿದೆ.
ಝುಬೈರ್ ವಿರುದ್ದ ಸೆಕ್ಷನ್ 152 ಅಡಿ ಆರೋಪ ಹೊರಿಸಿರುವ ಯುಪಿ ಪೊಲೀಸರು
ಖ್ಯಾತ ಫ್ಯಾಕ್ಟ್ಚೆಕ್ಕರ್ ಮೊಹಮ್ಮದ್ ಝುಬೈರ್ ಅವರು ಯತಿ ನರಸಿಂಗಾನದ ಅವರ ಪ್ರಚೋದನಕಾರಿ ಭಾಷಣದ ವಿಡಿಯೋ ಹಂಚಿಕೊಂಡಿದ್ದಕ್ಕೆ ಉತ್ತರ ಪ್ರದೇಶ ಪೊಲೀಸರು ಬಿಎನ್ಎಸ್ ಸೆಕ್ಷನ್ 152 ಅಡಿ ಪ್ರಕರಣ ದಾಖಲಿಸಿದ್ದಾರೆ.
ಇದಕ್ಕೆ ತೀವ್ರ ಖಂಡನೆ ವ್ಯಕ್ತಪಡಿಸಿರುವ ಪ್ರೆಸ್ ಕ್ಲಬ್ ಆಫ್ ಇಂಡಿಯಾ (ಪಿಸಿಐ) ಸೇರಿದಂತೆ ಪತ್ರಿಕಾ ಸಂಸ್ಥೆಗಳು, “ಈ ಸೆಕ್ಷನ್ ಸ್ವತಂತ್ರ ಚಿಂತಕರು ಮತ್ತು ಮಾಧ್ಯಮಗಳನ್ನು ಮೌನಗೊಳಿಸುವ ಸಾಮರ್ಥ್ಯ ಹೊಂದಿರುವುದರಿಂದ ಎಲ್ಲಾ ವಿವೇಕಯುತ ಮನಸ್ಸುಗಳು ಇದನ್ನು ವಿರೋಧಿಸುತ್ತಿವೆ. ದೇಶದ್ರೋಹದ ಕಾನೂನನ್ನು ದುರುಪಯೋಗಪಡಿಸಿಕೊಂಡ ಹಲವಾರು ಪ್ರಕರಣಗಳನ್ನು ನಾವು ಈ ಹಿಂದೆ ನೋಡಿದ್ದೇವೆ. ಬಿಎನ್ಎಸ್ ಸೆಕ್ಷನ್ 152ಕೂಡ ಅದೇ, ಆದರೆ ಹೊಸ ಅವತಾರದಲ್ಲಿದೆ ಎಂದು ನವೆಂಬರ್ 29ರಂದು ಹೊರಡಿಸಿದ್ದ ಪ್ರಕಟಣೆಯಲ್ಲಿ ಹೇಳಿದೆ.
ಇದನ್ನೂ ಓದಿ : ಚುನಾವಣಾ ಆಯೋಗದ ಸಾಂಸ್ಥಿಕ ಸಮಗ್ರತೆ ನಾಶಪಡಿಸುವುದು ಮೋದಿ ಸರ್ಕಾರದ ಪಿತೂರಿಯ ಭಾಗ: ಖರ್ಗೆ ಆರೋಪ


