Homeನ್ಯಾಯ ಪಥಪುಸ್ತಕ ವಿಮರ್ಶೆ; ಆತ್ಮಮರುಕದಾಚೆ ಸಿಡಿಯುವ ಕಾರುಣ್ಯದ ಕಿಡಿಯ ರೂಪಕಗಳು

ಪುಸ್ತಕ ವಿಮರ್ಶೆ; ಆತ್ಮಮರುಕದಾಚೆ ಸಿಡಿಯುವ ಕಾರುಣ್ಯದ ಕಿಡಿಯ ರೂಪಕಗಳು

- Advertisement -
- Advertisement -

ಉರಿಪಾದದ ನೆರಳಲ್ಲಿ
ತೊಡೆಯ ತೊಗಲ ಸುಲಿದು
ಮೆಟ್ಟಲೆಂದೇ ಅಟ್ಟೆಕಟ್ಟಿದ್ದ ಮಾದರ
ಕುಡಿ ಮಕ್ಕಳ ಚರ್ಮವ ಸುಲಿದು
ನಟ್ಟ ನಡುಬೀದಿಯಲ್ಲಿ ಕೆಡವಿ
ಕ್ಯಾಕರಿಸುವವರ ಉಘೇ ಉಘೇಯ
ಜೊಲ್ಲು ಸುರಿದು ನಾರುತ್ತಿದೆ ನಾಡು..

ಒಂದು ಕ್ಷಣ ಮೈಕೊಡವಿ ಕಣ್ಣು ಅಗಲಿಸಿ, ಎದೆ ಉರಿಯುವಂತೆ ಮಾಡುವ ಸಾಲುಗಳಿವು. ಅವಡುಗಚ್ಚಿ ಸಹಿಸಿಕೊಳ್ಳುತ್ತಿದ್ದರೂ, ಕಣ್ಣಲ್ಲಿ ಕಣ್ಣೀರ ಜೊತೆ ಕಿಡಿಯೂ ಸಿಡಿಯುತ್ತಿರುವಂತಿವೆ ಈ ಸಾಲುಗಳು. ‘ಕಾರುಣ್ಯದ ಮೋಹಕ ನವಿಲುಗಳೆ’ ಎಂಬ ರಮ್ಯವೆನಿಸುವ ಶೀರ್ಷೀಕೆಯೊಳಗೆ ಸುಡು ಕೆಂಡಗಳನ್ನೇ ಇಟ್ಟಿದ್ದಾರೆ ಕವಿ ಆರನಕಟ್ಟೆ ರಂಗನಾಥ. ಶತಮಾನಗಳ ಶೋಷಣೆಯಲ್ಲಿ ಬೆಂದ ಕತೆಗಳನ್ನು ನಮ್ಮ ಅಂಗೈಯಲ್ಲಿ ಸುಡುಸುಡುವಂತೆಯೇ ಇಟ್ಟ ಹಾಗೆನಿಸುತ್ತದೆ. ಈ ಕವಿತೆಗಳನ್ನು ಓದಿ ಮರುಗಬೇಕೆನಿಸುವಷ್ಟರಲ್ಲಿ, ಬೆಚ್ಚಿ ಬೀಳಿಸಿ ಜೀವದ ಘನತೆಯನ್ನೇ ಮರೆತ ನಮ್ಮ ಸಮಾಜದ ಶತಮಾನಗಳ ಶೋಷಣೆಯ ಚಿತ್ರಗಳನ್ನು ಕಟ್ಟಿಕೊಡುತ್ತಾ ಎಚ್ಚರಿಸುತ್ತದೆ.

ಮೂವತ್ತೆಂಟು ಕವಿತೆಗಳ ಈ ಸಂಕಲನದಲ್ಲಿ ಕವಿ ರಂಗನಾಥ ಒಂದು ಮಹಾಪಯಣದ ಕತೆಯನ್ನು ಬಿಡಿಬಿಡಿಯಾಗಿ ವಿವರಿಸಿದ್ದಾರೆ. ತನ್ನ ಅಜ್ಜ, ಅಜ್ಜಿ, ಅಪ್ಪ, ತಾನು ಬೆಳೆದ ಊರು, ದಲಿತ ಹೆಣ್ಣು ಜೀವಗಳ ಮೇಲೆ ನಡೆದ ದೌರ್ಜನ್ಯ, ಶೋಷಣೆಯ ವಿರುದ್ಧದ ಸೆಡವು ಎಲ್ಲವೂ ತೀವ್ರವಾದ ರೂಪಕಗಳೊಂದಿಗೆ ಬಿಚ್ಚಿಕೊಳ್ಳುತ್ತವೆ. ಹೀಗೆ ಬಿಚ್ಚಿಕೊಳ್ಳುವ ಚಿತ್ರಗಳು ನಮ್ಮೊಳಗೆ ಮರುಕ ಹುಟ್ಟಿಸುವಷ್ಟು ತೀವ್ರವಾಗಿದ್ದರೂ, ಉರಿಯ ರೂಪಕಗಳ ಆ ಮರುಕವನ್ನು ಸುಟ್ಟುಹಾಕುತ್ತಾ, ಪ್ರತಿರೋಧ ಮತ್ತು ಹೊಸ ಕಾಲದ ಎಚ್ಚರದವನ್ನು ದಾಖಲಿಸುತ್ತವೆ.

ಹಕ್ಕು, ಹೋರಾಟ, ಶೋಷಣೆಯ ವಿರುದ್ಧದ ಘೋಷಣೆಯ ಸಾಲುಗಳಾಗಿ ಬಿಡುತ್ತವೇನೊ ಅನ್ನಿಸುವಷ್ಟರಲ್ಲೇ ನಮ್ಮನ್ನು ತನ್ನ ಕಾವ್ಯ ತೀವ್ರತೆಯಲ್ಲಿ ತಲ್ಲಣಿಸುವಂತೆ ಮಾಡಿಬಿಡುತ್ತವೆ ಇಲ್ಲಿರುವ ಕವನಗಳ ಸಾಲುಗಳು. ಶತಮಾನಗಳಿಂದ ಜಾತಿ ಹೆಸರಿನಲ್ಲಿ ಮನುಷ್ಯ ಸಹಜ ಘನತೆ, ಸಂವೇದನೆಗಳನ್ನು ಮೀರಿದ ಶೋಷಣೆಯನ್ನು ಪ್ರತಿಯೊಬ್ಬನಲ್ಲೂ ಪಾಪಪ್ರಜ್ಞೆಯಾಗಿಸುವಂತೆ ಕಾಡುತ್ತವೆ. ಊರಿನ ಎಲ್ಲ ಕೆಲಸಗಳನ್ನು ಮಾಡಿ ಊರಿನಂಚಿಗೆ ಬದುಕುವಂತೆ ಮಾಡುವ ಕ್ರೌರ್ಯವಿದೆಯಲ್ಲ ಅದು ಅರಗಿಸಿಕೊಳ್ಳಲಾಗದ್ದು. ಅದನ್ನೇ ಕವಿ,

ಊರು ಕಟ್ಟಿದವರಿಗೆ ಕೇರಿಯವರೆಂದು
ಕಾಲೋನಿಗಳ ಪಟ್ಟವ ಕಟ್ಟಿದ ಪ್ರತಿಷ್ಠೆಗೆ
ಊರು ಸಾರಿದವರ ಸಾವು ಕೋರಿ
ಸಂತಾನಗಳಿಗೆ ಶವ ಕೂಡಿಟ್ಟು ಉಣಿಸಿದಿರಿ
ಎನ್ನುತ್ತಾರೆ,

ದೂರದ ತಂಜಾವೂರಿನಿಂದು ಬಂದು ಆರನಕಟ್ಟೆಯಲ್ಲಿ ಬದುಕು ಕಟ್ಟಿಕೊಂಡ ಅಜ್ಜ ಸುಬ್ಬನ್, ಬೀಡಿಯ ಉರಿಯಲ್ಲಿ ತನ್ನೆಲ್ಲಾ ಕೋಪವನ್ನು ಸುಟ್ಟ ಅಯ್ಯನ್, ತಂಬೂರಿ ರಾಜಮ್ಮ ಇಲ್ಲಿ ಆತ್ಮಾಭಿಮಾನದ ಸಂಕೇತಗಳಾಗಿ, ಹೆಮ್ಮೆಯಾಗಿ ಮೆರೆಯುತ್ತವೆ. ಶೋಷಣೆಯ ನೋವು, ಸಂಕಟ ಕಣ್ಣೀರು ಉಕ್ಕಿಸಿದರೂ ತಡೆದುಕೊಳ್ಳುವುದನ್ನು ಹೇಳುವ ಇಲ್ಲಿನ ಸಾಲುಗಳು ಎದೆಯ ಉರಿಯನ್ನು ನಂದಿಸದೇ ಇಟ್ಟುಕೊಳ್ಳುವ ಹಠವನ್ನು ಪ್ರತಿಧ್ವನಿಸುತ್ತವೆ.

ಪೂರ್ವಿಕರ ಅನುಭವಗಳೊಂದಿಗೆ ತನ್ನ ಅನುಭವವನ್ನು ಬೆರೆಸಿ ನೋಡುವ ಕವಿ, ಈ ಎರಡೂ ನೆಲೆಗಳ ಅಸ್ಮಿತೆಯ ಹಿನ್ನೆಲೆಯಲ್ಲಿ, ಎರಡೂ ನೆಲೆಗಳ ಪುರಾಣ, ಚರಿತ್ರೆ, ಸಂಸ್ಕೃತಿ ಮತ್ತು ಭಾಷೆಗಳನ್ನು ತಮ್ಮ ಕಾವ್ಯದಲ್ಲಿ ತಂದಿದ್ದಾರೆ. ಹಾಗಾಗಿ ಇಲ್ಲಿನ ಕವಿತೆಗಳಲ್ಲಿ ವಿಭಿನ್ನ ಪ್ರತಿಮೆ-ರೂಪಕಗಳು, ನುಡಿಗಟ್ಟುಗಳು ತೀವ್ರವಾಗಿ ಮೂಡಿ ಬಂದಿವೆ. ವಚನ ಚಳುವಳಿಯ ಪಿತಾಮಹ, ಆದಿ ವಚನಕಾರ ಚನ್ನಯ್ಯ, ಜಾಂಬವಮುನಿ, ಹೆಪ್ಪುಮುನಿ, ಬೆಪ್ಪುಮುನಿ, ನಂದನ, ರವಿದಾಸ, ಗಲ್ಲೇಬಾನಿ, ಚಮ್ಮಾವುಗೆಯಂತಹ ಪ್ರತಿಮಾ ಸಂಕೇತಗಳು ಸಂಕಲನದುದ್ದಕ್ಕೂ ಕಾಣಿಸುತ್ತವೆ. ಮಾದರ ಚನ್ನಯ್ಯನ ವಚನದ ಅಂಕಿತವನ್ನು ಕವಿ ಕವಿತೆಯೊಂದರ ಸಾಲನ್ನಾಗಿಸಿದ್ದಾರೆ. ಇಲ್ಲಿನ ಕವಿತೆಗಳಲ್ಲಿ ಮತ್ತೆ ಮತ್ತೆ ಕಾಣಿಸುವ ಮೆಟ್ಟಿನ ಸಂಕೇತ ಪರಂಪರೆಗೂ ಸಮುದಾಯಕ್ಕೂ ಇರುವ ಅಂತಃಕರಣವನ್ನು ಹೇಳುತ್ತದೆ.

ಕವಿ ತನ್ನ, ತನ್ನವರ ಒಡಲ ಸಂಕಟವನ್ನು ಬಿಚ್ಚಿಡುವ ಈ ಕವಿತೆಗಳು ಅಷ್ಟಕ್ಕೆ ಸೀಮಿತವಾಗಿದ್ದರೆ, ಕಾವ್ಯ ಸಾರ್ಥಕತೆಯೂ ಸೀಮಿತವಾಗುತ್ತಿತ್ತೆನೊ! ಸಮುದಾಯದ ಶತಮಾನಗಳ ಸಂಕಟವನ್ನು ಕಿಡಿಯಾಗಿ ಸಿಡಿಸುವುದಷ್ಟೇ ಅಲ್ಲ, ಅದನ್ನು ಮೀರುವ ಬೆಳಕಿನ ದಾರಿಯ ಬಗ್ಗೆಯೂ ಮಾತಾಡಿದ್ದಾರೆ. ಸಂಕಲನದ ಮೊದಲ ಕವಿತೆಯೇ ಬಹಳ ಆಪ್ತ ಹಾಗೂ ಬುದ್ಧ ಬೆಳಕಿನ ಸ್ಪರ್ಶದ ಅನುಭವ ನೀಡುತ್ತದೆ. ಅವ್ವನೆದೆಯ ಅಜ್ಜನ ಅರಿವು ಶೀರ್ಷಿಕೆಯ ಈ ಕವಿತೆಯಲ್ಲಿ, ಅವ್ವ, ಕವಿಗೆ ಅಂಬೇಡ್ಕರ್ ಅವರನ್ನು ಅಜ್ಜನೆಂದು ಪರಿಚಯಿಸುತ್ತಾರೆ.

ಮೈಸವರಿದ ಅವ್ವ
ಮನಸ್ಸಿಗೆ ಬಸಿದ ಮಾತು
ಕೈತೋರಿ ಸದಾ ಪುಸ್ತಕ ಹೊತ್ತಿರುವ
ನಿನ್ನಜ್ಜ ಅಂಬೇಡ್ಕರ್ ಓದಿದ್ದು
ಬೀದಿ ಬಲ್ಪಿನ ಕೆಳಗೆ ಎಂದು
ಒಂದೊಂದೇ ಪದವ ಎದೆಗಿಟ್ಟು…

ಶಿಕ್ಷಣ ಸ್ವಾಭಿಮಾನ, ಮಾನವೀಯತೆಯ ಮೌಲ್ಯ ಕವಿಯ ಎಳೆಯ ಎದೆಗೆ ಎರೆಯುವ ತಾಯಿಯನ್ನು ಈ ಕವಿತೆ ಕಟ್ಟಿಕೊಡುತ್ತದೆ. ತಮ್ಮೆಲ್ಲ ಸಂಕಟಗಳ ಬಿಡುಗಡೆಯ ಬೆಳಕಾಗಿ ಹೊಮ್ಮುತ್ತದೆ. ಇದೇ ಪರಂಪರೆಯುದ್ದಕ್ಕೂ ಕಾಡಿದ ಶೋಷಣೆಗೆ ಇದೇ ಪರಿಹಾರ ಮಾರ್ಗವೆಂದು ದಾಖಲಿಸುತ್ತದೆ.

ಗಂಡು ಒಂದು ರೀತಿಯ ಶೋಷಣೆಗೆ ಒಳಗಾಗುತ್ತಿದ್ದರೆ, ಹೆಣ್ಣಿನ ಮೇಲೆ ನಡೆವ ದೌರ್ಜನ್ಯದ ಭೀಕರತೆಯನ್ನು ಕವಿ ರೂಪಕಗಳಲ್ಲಿ ಅಲುಗಾಡಿಸಿಬಿಡುತ್ತಾರೆ. ಅಸಹಾಯಕತೆ ಒಂದೆಡೆ, ಅಂತಹ ಸಂದರ್ಭ ಸೃಷ್ಟಿಸಿ ಶೋಷಿಸುವ ಮನಸ್ಸುಗಳನ್ನು ಇನ್ನೊಂದೆಡೆ. ಅನ್ನಕ್ಕಾಗಿ ಅಂಗಲಾಚುವ ಹೆಣ್ಣಿನ ಮುಂದೆ ಕಾಮತೃಷೆ ತೀರಿಸುವ ಕೋರಿಕೆ ಇಡುವುದು, ಬದುಕು ಕಟ್ಟಿಕೊಳ್ಳುವುದಕ್ಕಾಗಿ ತನ್ನ ದೇಹವನ್ನು ಮಾರಿಕೊಳ್ಳಬೇಕಾದ ಸ್ಥಿತಿ ತಲುಪಿದ ಹೆಣ್ಣು ಎದುರಿಸುವ ಕ್ರೌರ್ಯವನ್ನು ಕವಿತೆಗಳು ಮಾತಾಡುತ್ತವೆ. ಅತ್ಯಾಚಾರ, ಕೊಲೆಗೆ ಗುರಿಯಾದ ಮುಗ್ದ ಜೀವಗಳನ್ನು ಕವಿ ನಮಗೆ ಎದುರಾಗಿಸುವ ರೀತಿ ಹೃದಯವನ್ನು ಕರಗಿಸುತ್ತದೆ, ಕೆಲವೊಮ್ಮೆ ನಡುಗಿಸುತ್ತದೆ ಕೂಡ. ಮನುಷ್ಯ ಘನತೆ, ಮಾನವೀಯತೆಯ ಹಂಬಲವನ್ನು ಧ್ಯಾನಿಸುತ್ತಾ ಅದನ್ನು ಕಾಲದ ಎಲ್ಲ ಶೋಷಣೆಗಳಿಗೆ ಮುಖಾಮುಖಿಯಾಗಿಸುತ್ತಾರೆ ಕವಿ ರಂಗನಾಥ್.

ಪ್ರೀತಿ, ವಿರಹಗಳನ್ನು ಧ್ಯಾನಿಸುವ ರಂಗನಾಥ್ ರಾಜಕೀಯ ಬೆಳವಣಿಗೆಗಳನ್ನೂ ಕಾವ್ಯದ ವಸ್ತುವಾಗಿಸಿಕೊಂಡಿದ್ದಾರೆ. ಜಲದ ಪಾದುಕೆಯ ಹಾಡು, ಈ ಸುದ್ದಿ ಇಂದಿನ ವರದಿಯಾಗಿಯೇ ಉಳಿಯಬೇಕಿಲ್ಲ, ದಲಿತರಾಗುವುದೆಂದರೆ ಎಷ್ಟು ಸಡಗರ, ಅಲೆದಷ್ಟು ಅನಾಥಗೊಂಡ ಪಾದಗಳು, ಅವ್ವನೆದೆಯ ಅಜ್ಜನ ಅರಿವು, ಕರಿಯಜ್ಜನ ಯಶೋಗಾಥೆ, ಉರಿಪಾದದ ನೆರಳಲ್ಲಿ, ಕರಿ ಮೈಯ್ಯ ಕಸುವು ಬಹಳ ಮುಖ್ಯವಾದ ಕವಿತೆಗಳು.

ಪರಂಪರೆಯ ಎಲ್ಲ ನೆನಪುಗಳನ್ನು ಕೆದಕುತ್ತಾ, ತಮ್ಮ ಅಸ್ಮಿತೆಯನ್ನು ಅನಾವರಣ ಮಾಡುತ್ತಲೇ ಅದನ್ನು ಒಡೆದು ನಿಲ್ಲಲು ಯತ್ನಿಸುವ ಇಲ್ಲಿನ ಕವಿತೆಗಳು, ಈ ಮಹಾಪಯಣದಲ್ಲಿ ಎಂದೂ ಹಂಗಿನಲಿ ಬಾಳದ ಉದಾಹರಣೆಗಳನ್ನು ಧ್ಯಾನಿಸುತ್ತಾ, ತನ್ನ ಕಾಲದ ದನಿಯನ್ನು ತೀಕ್ಷ್ಣವಾಗಿಯೂ ತೀವ್ರವಾಗಿಯೂ ಕವಿ ರಂಗನಾಥ್ ದಾಖಲಿಸಿದ್ದಾರೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಬದಿಕಿರುವುದೇ ಕಥೆ ಹೇಳಲಿಕ್ಕೆ ಎಂದು ಬರೆದು ಬದುಕಿದ ಲ್ಯಾಟಿನ್ ಅಮೆರಿಕನ್ ಲೇಖಕ ಮಾರ್ಕ್ವೆಜ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ವಿಮರ್ಶೆ ಅದ್ಬುತ ವಾಗಿದೆ ಸರ್
    ಕವಿಯ ಅಂತರಾಳವ ಹೊಕ್ಕು ಪರಿಚಯಿಸಿದಿರಿ ಸರ್

  2. ಕವಿಯ ಹಿನ್ನೆಲೆಯ ಕ್ಯಾನ್ವಾಸಿನಲ್ಲಿ ಕವನದ ಸೊಗಸಾದ ಚಿತ್ರವನ್ನು ಹೇಗೆ ಕವಿ ಅಭಿವ್ಯಕ್ತಿಸಿದ್ದಾರೆಂದು ಸೊಗಸಿನ ವಿಮರ್ಶೆ ಮಾಡಿರುವುದು ಮುದ ನೀಡಿದೆ. ಪ್ರತಿಮೆಯಾದ ಮೆಟ್ಟು ಮೆಟ್ಟುವ ಜನ ಮೆಟ್ಟಸೃಷ್ಟಿಶಿದವರ ಮುಟ್ಟದಿರುವುದು ಈ ಸಮಾಜದ ಕೊಳೆತ ಮನಸಿನ ಘಾಟು ರಾಚಬೇಕಿತ್ತು‌ ಇನ್ನೂ.

    ವಿಮರ್ಶಕರಿಗೆ ಮತ್ತು ಕವಿವರ್ಯರಿಗೆ ಅಭಿನಂದನೆಗಳು

    ಜಯರಾಮ.ಸಿ.ವಿ. ನಾಗಮಂಗಲ.

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...