Homeನ್ಯಾಯ ಪಥಪುಸ್ತಕ ವಿಮರ್ಶೆ; ಆತ್ಮಮರುಕದಾಚೆ ಸಿಡಿಯುವ ಕಾರುಣ್ಯದ ಕಿಡಿಯ ರೂಪಕಗಳು

ಪುಸ್ತಕ ವಿಮರ್ಶೆ; ಆತ್ಮಮರುಕದಾಚೆ ಸಿಡಿಯುವ ಕಾರುಣ್ಯದ ಕಿಡಿಯ ರೂಪಕಗಳು

- Advertisement -
- Advertisement -

ಉರಿಪಾದದ ನೆರಳಲ್ಲಿ
ತೊಡೆಯ ತೊಗಲ ಸುಲಿದು
ಮೆಟ್ಟಲೆಂದೇ ಅಟ್ಟೆಕಟ್ಟಿದ್ದ ಮಾದರ
ಕುಡಿ ಮಕ್ಕಳ ಚರ್ಮವ ಸುಲಿದು
ನಟ್ಟ ನಡುಬೀದಿಯಲ್ಲಿ ಕೆಡವಿ
ಕ್ಯಾಕರಿಸುವವರ ಉಘೇ ಉಘೇಯ
ಜೊಲ್ಲು ಸುರಿದು ನಾರುತ್ತಿದೆ ನಾಡು..

ಒಂದು ಕ್ಷಣ ಮೈಕೊಡವಿ ಕಣ್ಣು ಅಗಲಿಸಿ, ಎದೆ ಉರಿಯುವಂತೆ ಮಾಡುವ ಸಾಲುಗಳಿವು. ಅವಡುಗಚ್ಚಿ ಸಹಿಸಿಕೊಳ್ಳುತ್ತಿದ್ದರೂ, ಕಣ್ಣಲ್ಲಿ ಕಣ್ಣೀರ ಜೊತೆ ಕಿಡಿಯೂ ಸಿಡಿಯುತ್ತಿರುವಂತಿವೆ ಈ ಸಾಲುಗಳು. ‘ಕಾರುಣ್ಯದ ಮೋಹಕ ನವಿಲುಗಳೆ’ ಎಂಬ ರಮ್ಯವೆನಿಸುವ ಶೀರ್ಷೀಕೆಯೊಳಗೆ ಸುಡು ಕೆಂಡಗಳನ್ನೇ ಇಟ್ಟಿದ್ದಾರೆ ಕವಿ ಆರನಕಟ್ಟೆ ರಂಗನಾಥ. ಶತಮಾನಗಳ ಶೋಷಣೆಯಲ್ಲಿ ಬೆಂದ ಕತೆಗಳನ್ನು ನಮ್ಮ ಅಂಗೈಯಲ್ಲಿ ಸುಡುಸುಡುವಂತೆಯೇ ಇಟ್ಟ ಹಾಗೆನಿಸುತ್ತದೆ. ಈ ಕವಿತೆಗಳನ್ನು ಓದಿ ಮರುಗಬೇಕೆನಿಸುವಷ್ಟರಲ್ಲಿ, ಬೆಚ್ಚಿ ಬೀಳಿಸಿ ಜೀವದ ಘನತೆಯನ್ನೇ ಮರೆತ ನಮ್ಮ ಸಮಾಜದ ಶತಮಾನಗಳ ಶೋಷಣೆಯ ಚಿತ್ರಗಳನ್ನು ಕಟ್ಟಿಕೊಡುತ್ತಾ ಎಚ್ಚರಿಸುತ್ತದೆ.

ಮೂವತ್ತೆಂಟು ಕವಿತೆಗಳ ಈ ಸಂಕಲನದಲ್ಲಿ ಕವಿ ರಂಗನಾಥ ಒಂದು ಮಹಾಪಯಣದ ಕತೆಯನ್ನು ಬಿಡಿಬಿಡಿಯಾಗಿ ವಿವರಿಸಿದ್ದಾರೆ. ತನ್ನ ಅಜ್ಜ, ಅಜ್ಜಿ, ಅಪ್ಪ, ತಾನು ಬೆಳೆದ ಊರು, ದಲಿತ ಹೆಣ್ಣು ಜೀವಗಳ ಮೇಲೆ ನಡೆದ ದೌರ್ಜನ್ಯ, ಶೋಷಣೆಯ ವಿರುದ್ಧದ ಸೆಡವು ಎಲ್ಲವೂ ತೀವ್ರವಾದ ರೂಪಕಗಳೊಂದಿಗೆ ಬಿಚ್ಚಿಕೊಳ್ಳುತ್ತವೆ. ಹೀಗೆ ಬಿಚ್ಚಿಕೊಳ್ಳುವ ಚಿತ್ರಗಳು ನಮ್ಮೊಳಗೆ ಮರುಕ ಹುಟ್ಟಿಸುವಷ್ಟು ತೀವ್ರವಾಗಿದ್ದರೂ, ಉರಿಯ ರೂಪಕಗಳ ಆ ಮರುಕವನ್ನು ಸುಟ್ಟುಹಾಕುತ್ತಾ, ಪ್ರತಿರೋಧ ಮತ್ತು ಹೊಸ ಕಾಲದ ಎಚ್ಚರದವನ್ನು ದಾಖಲಿಸುತ್ತವೆ.

ಹಕ್ಕು, ಹೋರಾಟ, ಶೋಷಣೆಯ ವಿರುದ್ಧದ ಘೋಷಣೆಯ ಸಾಲುಗಳಾಗಿ ಬಿಡುತ್ತವೇನೊ ಅನ್ನಿಸುವಷ್ಟರಲ್ಲೇ ನಮ್ಮನ್ನು ತನ್ನ ಕಾವ್ಯ ತೀವ್ರತೆಯಲ್ಲಿ ತಲ್ಲಣಿಸುವಂತೆ ಮಾಡಿಬಿಡುತ್ತವೆ ಇಲ್ಲಿರುವ ಕವನಗಳ ಸಾಲುಗಳು. ಶತಮಾನಗಳಿಂದ ಜಾತಿ ಹೆಸರಿನಲ್ಲಿ ಮನುಷ್ಯ ಸಹಜ ಘನತೆ, ಸಂವೇದನೆಗಳನ್ನು ಮೀರಿದ ಶೋಷಣೆಯನ್ನು ಪ್ರತಿಯೊಬ್ಬನಲ್ಲೂ ಪಾಪಪ್ರಜ್ಞೆಯಾಗಿಸುವಂತೆ ಕಾಡುತ್ತವೆ. ಊರಿನ ಎಲ್ಲ ಕೆಲಸಗಳನ್ನು ಮಾಡಿ ಊರಿನಂಚಿಗೆ ಬದುಕುವಂತೆ ಮಾಡುವ ಕ್ರೌರ್ಯವಿದೆಯಲ್ಲ ಅದು ಅರಗಿಸಿಕೊಳ್ಳಲಾಗದ್ದು. ಅದನ್ನೇ ಕವಿ,

ಊರು ಕಟ್ಟಿದವರಿಗೆ ಕೇರಿಯವರೆಂದು
ಕಾಲೋನಿಗಳ ಪಟ್ಟವ ಕಟ್ಟಿದ ಪ್ರತಿಷ್ಠೆಗೆ
ಊರು ಸಾರಿದವರ ಸಾವು ಕೋರಿ
ಸಂತಾನಗಳಿಗೆ ಶವ ಕೂಡಿಟ್ಟು ಉಣಿಸಿದಿರಿ
ಎನ್ನುತ್ತಾರೆ,

ದೂರದ ತಂಜಾವೂರಿನಿಂದು ಬಂದು ಆರನಕಟ್ಟೆಯಲ್ಲಿ ಬದುಕು ಕಟ್ಟಿಕೊಂಡ ಅಜ್ಜ ಸುಬ್ಬನ್, ಬೀಡಿಯ ಉರಿಯಲ್ಲಿ ತನ್ನೆಲ್ಲಾ ಕೋಪವನ್ನು ಸುಟ್ಟ ಅಯ್ಯನ್, ತಂಬೂರಿ ರಾಜಮ್ಮ ಇಲ್ಲಿ ಆತ್ಮಾಭಿಮಾನದ ಸಂಕೇತಗಳಾಗಿ, ಹೆಮ್ಮೆಯಾಗಿ ಮೆರೆಯುತ್ತವೆ. ಶೋಷಣೆಯ ನೋವು, ಸಂಕಟ ಕಣ್ಣೀರು ಉಕ್ಕಿಸಿದರೂ ತಡೆದುಕೊಳ್ಳುವುದನ್ನು ಹೇಳುವ ಇಲ್ಲಿನ ಸಾಲುಗಳು ಎದೆಯ ಉರಿಯನ್ನು ನಂದಿಸದೇ ಇಟ್ಟುಕೊಳ್ಳುವ ಹಠವನ್ನು ಪ್ರತಿಧ್ವನಿಸುತ್ತವೆ.

ಪೂರ್ವಿಕರ ಅನುಭವಗಳೊಂದಿಗೆ ತನ್ನ ಅನುಭವವನ್ನು ಬೆರೆಸಿ ನೋಡುವ ಕವಿ, ಈ ಎರಡೂ ನೆಲೆಗಳ ಅಸ್ಮಿತೆಯ ಹಿನ್ನೆಲೆಯಲ್ಲಿ, ಎರಡೂ ನೆಲೆಗಳ ಪುರಾಣ, ಚರಿತ್ರೆ, ಸಂಸ್ಕೃತಿ ಮತ್ತು ಭಾಷೆಗಳನ್ನು ತಮ್ಮ ಕಾವ್ಯದಲ್ಲಿ ತಂದಿದ್ದಾರೆ. ಹಾಗಾಗಿ ಇಲ್ಲಿನ ಕವಿತೆಗಳಲ್ಲಿ ವಿಭಿನ್ನ ಪ್ರತಿಮೆ-ರೂಪಕಗಳು, ನುಡಿಗಟ್ಟುಗಳು ತೀವ್ರವಾಗಿ ಮೂಡಿ ಬಂದಿವೆ. ವಚನ ಚಳುವಳಿಯ ಪಿತಾಮಹ, ಆದಿ ವಚನಕಾರ ಚನ್ನಯ್ಯ, ಜಾಂಬವಮುನಿ, ಹೆಪ್ಪುಮುನಿ, ಬೆಪ್ಪುಮುನಿ, ನಂದನ, ರವಿದಾಸ, ಗಲ್ಲೇಬಾನಿ, ಚಮ್ಮಾವುಗೆಯಂತಹ ಪ್ರತಿಮಾ ಸಂಕೇತಗಳು ಸಂಕಲನದುದ್ದಕ್ಕೂ ಕಾಣಿಸುತ್ತವೆ. ಮಾದರ ಚನ್ನಯ್ಯನ ವಚನದ ಅಂಕಿತವನ್ನು ಕವಿ ಕವಿತೆಯೊಂದರ ಸಾಲನ್ನಾಗಿಸಿದ್ದಾರೆ. ಇಲ್ಲಿನ ಕವಿತೆಗಳಲ್ಲಿ ಮತ್ತೆ ಮತ್ತೆ ಕಾಣಿಸುವ ಮೆಟ್ಟಿನ ಸಂಕೇತ ಪರಂಪರೆಗೂ ಸಮುದಾಯಕ್ಕೂ ಇರುವ ಅಂತಃಕರಣವನ್ನು ಹೇಳುತ್ತದೆ.

ಕವಿ ತನ್ನ, ತನ್ನವರ ಒಡಲ ಸಂಕಟವನ್ನು ಬಿಚ್ಚಿಡುವ ಈ ಕವಿತೆಗಳು ಅಷ್ಟಕ್ಕೆ ಸೀಮಿತವಾಗಿದ್ದರೆ, ಕಾವ್ಯ ಸಾರ್ಥಕತೆಯೂ ಸೀಮಿತವಾಗುತ್ತಿತ್ತೆನೊ! ಸಮುದಾಯದ ಶತಮಾನಗಳ ಸಂಕಟವನ್ನು ಕಿಡಿಯಾಗಿ ಸಿಡಿಸುವುದಷ್ಟೇ ಅಲ್ಲ, ಅದನ್ನು ಮೀರುವ ಬೆಳಕಿನ ದಾರಿಯ ಬಗ್ಗೆಯೂ ಮಾತಾಡಿದ್ದಾರೆ. ಸಂಕಲನದ ಮೊದಲ ಕವಿತೆಯೇ ಬಹಳ ಆಪ್ತ ಹಾಗೂ ಬುದ್ಧ ಬೆಳಕಿನ ಸ್ಪರ್ಶದ ಅನುಭವ ನೀಡುತ್ತದೆ. ಅವ್ವನೆದೆಯ ಅಜ್ಜನ ಅರಿವು ಶೀರ್ಷಿಕೆಯ ಈ ಕವಿತೆಯಲ್ಲಿ, ಅವ್ವ, ಕವಿಗೆ ಅಂಬೇಡ್ಕರ್ ಅವರನ್ನು ಅಜ್ಜನೆಂದು ಪರಿಚಯಿಸುತ್ತಾರೆ.

ಮೈಸವರಿದ ಅವ್ವ
ಮನಸ್ಸಿಗೆ ಬಸಿದ ಮಾತು
ಕೈತೋರಿ ಸದಾ ಪುಸ್ತಕ ಹೊತ್ತಿರುವ
ನಿನ್ನಜ್ಜ ಅಂಬೇಡ್ಕರ್ ಓದಿದ್ದು
ಬೀದಿ ಬಲ್ಪಿನ ಕೆಳಗೆ ಎಂದು
ಒಂದೊಂದೇ ಪದವ ಎದೆಗಿಟ್ಟು…

ಶಿಕ್ಷಣ ಸ್ವಾಭಿಮಾನ, ಮಾನವೀಯತೆಯ ಮೌಲ್ಯ ಕವಿಯ ಎಳೆಯ ಎದೆಗೆ ಎರೆಯುವ ತಾಯಿಯನ್ನು ಈ ಕವಿತೆ ಕಟ್ಟಿಕೊಡುತ್ತದೆ. ತಮ್ಮೆಲ್ಲ ಸಂಕಟಗಳ ಬಿಡುಗಡೆಯ ಬೆಳಕಾಗಿ ಹೊಮ್ಮುತ್ತದೆ. ಇದೇ ಪರಂಪರೆಯುದ್ದಕ್ಕೂ ಕಾಡಿದ ಶೋಷಣೆಗೆ ಇದೇ ಪರಿಹಾರ ಮಾರ್ಗವೆಂದು ದಾಖಲಿಸುತ್ತದೆ.

ಗಂಡು ಒಂದು ರೀತಿಯ ಶೋಷಣೆಗೆ ಒಳಗಾಗುತ್ತಿದ್ದರೆ, ಹೆಣ್ಣಿನ ಮೇಲೆ ನಡೆವ ದೌರ್ಜನ್ಯದ ಭೀಕರತೆಯನ್ನು ಕವಿ ರೂಪಕಗಳಲ್ಲಿ ಅಲುಗಾಡಿಸಿಬಿಡುತ್ತಾರೆ. ಅಸಹಾಯಕತೆ ಒಂದೆಡೆ, ಅಂತಹ ಸಂದರ್ಭ ಸೃಷ್ಟಿಸಿ ಶೋಷಿಸುವ ಮನಸ್ಸುಗಳನ್ನು ಇನ್ನೊಂದೆಡೆ. ಅನ್ನಕ್ಕಾಗಿ ಅಂಗಲಾಚುವ ಹೆಣ್ಣಿನ ಮುಂದೆ ಕಾಮತೃಷೆ ತೀರಿಸುವ ಕೋರಿಕೆ ಇಡುವುದು, ಬದುಕು ಕಟ್ಟಿಕೊಳ್ಳುವುದಕ್ಕಾಗಿ ತನ್ನ ದೇಹವನ್ನು ಮಾರಿಕೊಳ್ಳಬೇಕಾದ ಸ್ಥಿತಿ ತಲುಪಿದ ಹೆಣ್ಣು ಎದುರಿಸುವ ಕ್ರೌರ್ಯವನ್ನು ಕವಿತೆಗಳು ಮಾತಾಡುತ್ತವೆ. ಅತ್ಯಾಚಾರ, ಕೊಲೆಗೆ ಗುರಿಯಾದ ಮುಗ್ದ ಜೀವಗಳನ್ನು ಕವಿ ನಮಗೆ ಎದುರಾಗಿಸುವ ರೀತಿ ಹೃದಯವನ್ನು ಕರಗಿಸುತ್ತದೆ, ಕೆಲವೊಮ್ಮೆ ನಡುಗಿಸುತ್ತದೆ ಕೂಡ. ಮನುಷ್ಯ ಘನತೆ, ಮಾನವೀಯತೆಯ ಹಂಬಲವನ್ನು ಧ್ಯಾನಿಸುತ್ತಾ ಅದನ್ನು ಕಾಲದ ಎಲ್ಲ ಶೋಷಣೆಗಳಿಗೆ ಮುಖಾಮುಖಿಯಾಗಿಸುತ್ತಾರೆ ಕವಿ ರಂಗನಾಥ್.

ಪ್ರೀತಿ, ವಿರಹಗಳನ್ನು ಧ್ಯಾನಿಸುವ ರಂಗನಾಥ್ ರಾಜಕೀಯ ಬೆಳವಣಿಗೆಗಳನ್ನೂ ಕಾವ್ಯದ ವಸ್ತುವಾಗಿಸಿಕೊಂಡಿದ್ದಾರೆ. ಜಲದ ಪಾದುಕೆಯ ಹಾಡು, ಈ ಸುದ್ದಿ ಇಂದಿನ ವರದಿಯಾಗಿಯೇ ಉಳಿಯಬೇಕಿಲ್ಲ, ದಲಿತರಾಗುವುದೆಂದರೆ ಎಷ್ಟು ಸಡಗರ, ಅಲೆದಷ್ಟು ಅನಾಥಗೊಂಡ ಪಾದಗಳು, ಅವ್ವನೆದೆಯ ಅಜ್ಜನ ಅರಿವು, ಕರಿಯಜ್ಜನ ಯಶೋಗಾಥೆ, ಉರಿಪಾದದ ನೆರಳಲ್ಲಿ, ಕರಿ ಮೈಯ್ಯ ಕಸುವು ಬಹಳ ಮುಖ್ಯವಾದ ಕವಿತೆಗಳು.

ಪರಂಪರೆಯ ಎಲ್ಲ ನೆನಪುಗಳನ್ನು ಕೆದಕುತ್ತಾ, ತಮ್ಮ ಅಸ್ಮಿತೆಯನ್ನು ಅನಾವರಣ ಮಾಡುತ್ತಲೇ ಅದನ್ನು ಒಡೆದು ನಿಲ್ಲಲು ಯತ್ನಿಸುವ ಇಲ್ಲಿನ ಕವಿತೆಗಳು, ಈ ಮಹಾಪಯಣದಲ್ಲಿ ಎಂದೂ ಹಂಗಿನಲಿ ಬಾಳದ ಉದಾಹರಣೆಗಳನ್ನು ಧ್ಯಾನಿಸುತ್ತಾ, ತನ್ನ ಕಾಲದ ದನಿಯನ್ನು ತೀಕ್ಷ್ಣವಾಗಿಯೂ ತೀವ್ರವಾಗಿಯೂ ಕವಿ ರಂಗನಾಥ್ ದಾಖಲಿಸಿದ್ದಾರೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಬದಿಕಿರುವುದೇ ಕಥೆ ಹೇಳಲಿಕ್ಕೆ ಎಂದು ಬರೆದು ಬದುಕಿದ ಲ್ಯಾಟಿನ್ ಅಮೆರಿಕನ್ ಲೇಖಕ ಮಾರ್ಕ್ವೆಜ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ವಿಮರ್ಶೆ ಅದ್ಬುತ ವಾಗಿದೆ ಸರ್
    ಕವಿಯ ಅಂತರಾಳವ ಹೊಕ್ಕು ಪರಿಚಯಿಸಿದಿರಿ ಸರ್

  2. ಕವಿಯ ಹಿನ್ನೆಲೆಯ ಕ್ಯಾನ್ವಾಸಿನಲ್ಲಿ ಕವನದ ಸೊಗಸಾದ ಚಿತ್ರವನ್ನು ಹೇಗೆ ಕವಿ ಅಭಿವ್ಯಕ್ತಿಸಿದ್ದಾರೆಂದು ಸೊಗಸಿನ ವಿಮರ್ಶೆ ಮಾಡಿರುವುದು ಮುದ ನೀಡಿದೆ. ಪ್ರತಿಮೆಯಾದ ಮೆಟ್ಟು ಮೆಟ್ಟುವ ಜನ ಮೆಟ್ಟಸೃಷ್ಟಿಶಿದವರ ಮುಟ್ಟದಿರುವುದು ಈ ಸಮಾಜದ ಕೊಳೆತ ಮನಸಿನ ಘಾಟು ರಾಚಬೇಕಿತ್ತು‌ ಇನ್ನೂ.

    ವಿಮರ್ಶಕರಿಗೆ ಮತ್ತು ಕವಿವರ್ಯರಿಗೆ ಅಭಿನಂದನೆಗಳು

    ಜಯರಾಮ.ಸಿ.ವಿ. ನಾಗಮಂಗಲ.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...