Homeನ್ಯಾಯ ಪಥಪುಸ್ತಕ ವಿಮರ್ಶೆ; ಆತ್ಮಮರುಕದಾಚೆ ಸಿಡಿಯುವ ಕಾರುಣ್ಯದ ಕಿಡಿಯ ರೂಪಕಗಳು

ಪುಸ್ತಕ ವಿಮರ್ಶೆ; ಆತ್ಮಮರುಕದಾಚೆ ಸಿಡಿಯುವ ಕಾರುಣ್ಯದ ಕಿಡಿಯ ರೂಪಕಗಳು

- Advertisement -
- Advertisement -

ಉರಿಪಾದದ ನೆರಳಲ್ಲಿ
ತೊಡೆಯ ತೊಗಲ ಸುಲಿದು
ಮೆಟ್ಟಲೆಂದೇ ಅಟ್ಟೆಕಟ್ಟಿದ್ದ ಮಾದರ
ಕುಡಿ ಮಕ್ಕಳ ಚರ್ಮವ ಸುಲಿದು
ನಟ್ಟ ನಡುಬೀದಿಯಲ್ಲಿ ಕೆಡವಿ
ಕ್ಯಾಕರಿಸುವವರ ಉಘೇ ಉಘೇಯ
ಜೊಲ್ಲು ಸುರಿದು ನಾರುತ್ತಿದೆ ನಾಡು..

ಒಂದು ಕ್ಷಣ ಮೈಕೊಡವಿ ಕಣ್ಣು ಅಗಲಿಸಿ, ಎದೆ ಉರಿಯುವಂತೆ ಮಾಡುವ ಸಾಲುಗಳಿವು. ಅವಡುಗಚ್ಚಿ ಸಹಿಸಿಕೊಳ್ಳುತ್ತಿದ್ದರೂ, ಕಣ್ಣಲ್ಲಿ ಕಣ್ಣೀರ ಜೊತೆ ಕಿಡಿಯೂ ಸಿಡಿಯುತ್ತಿರುವಂತಿವೆ ಈ ಸಾಲುಗಳು. ‘ಕಾರುಣ್ಯದ ಮೋಹಕ ನವಿಲುಗಳೆ’ ಎಂಬ ರಮ್ಯವೆನಿಸುವ ಶೀರ್ಷೀಕೆಯೊಳಗೆ ಸುಡು ಕೆಂಡಗಳನ್ನೇ ಇಟ್ಟಿದ್ದಾರೆ ಕವಿ ಆರನಕಟ್ಟೆ ರಂಗನಾಥ. ಶತಮಾನಗಳ ಶೋಷಣೆಯಲ್ಲಿ ಬೆಂದ ಕತೆಗಳನ್ನು ನಮ್ಮ ಅಂಗೈಯಲ್ಲಿ ಸುಡುಸುಡುವಂತೆಯೇ ಇಟ್ಟ ಹಾಗೆನಿಸುತ್ತದೆ. ಈ ಕವಿತೆಗಳನ್ನು ಓದಿ ಮರುಗಬೇಕೆನಿಸುವಷ್ಟರಲ್ಲಿ, ಬೆಚ್ಚಿ ಬೀಳಿಸಿ ಜೀವದ ಘನತೆಯನ್ನೇ ಮರೆತ ನಮ್ಮ ಸಮಾಜದ ಶತಮಾನಗಳ ಶೋಷಣೆಯ ಚಿತ್ರಗಳನ್ನು ಕಟ್ಟಿಕೊಡುತ್ತಾ ಎಚ್ಚರಿಸುತ್ತದೆ.

ಮೂವತ್ತೆಂಟು ಕವಿತೆಗಳ ಈ ಸಂಕಲನದಲ್ಲಿ ಕವಿ ರಂಗನಾಥ ಒಂದು ಮಹಾಪಯಣದ ಕತೆಯನ್ನು ಬಿಡಿಬಿಡಿಯಾಗಿ ವಿವರಿಸಿದ್ದಾರೆ. ತನ್ನ ಅಜ್ಜ, ಅಜ್ಜಿ, ಅಪ್ಪ, ತಾನು ಬೆಳೆದ ಊರು, ದಲಿತ ಹೆಣ್ಣು ಜೀವಗಳ ಮೇಲೆ ನಡೆದ ದೌರ್ಜನ್ಯ, ಶೋಷಣೆಯ ವಿರುದ್ಧದ ಸೆಡವು ಎಲ್ಲವೂ ತೀವ್ರವಾದ ರೂಪಕಗಳೊಂದಿಗೆ ಬಿಚ್ಚಿಕೊಳ್ಳುತ್ತವೆ. ಹೀಗೆ ಬಿಚ್ಚಿಕೊಳ್ಳುವ ಚಿತ್ರಗಳು ನಮ್ಮೊಳಗೆ ಮರುಕ ಹುಟ್ಟಿಸುವಷ್ಟು ತೀವ್ರವಾಗಿದ್ದರೂ, ಉರಿಯ ರೂಪಕಗಳ ಆ ಮರುಕವನ್ನು ಸುಟ್ಟುಹಾಕುತ್ತಾ, ಪ್ರತಿರೋಧ ಮತ್ತು ಹೊಸ ಕಾಲದ ಎಚ್ಚರದವನ್ನು ದಾಖಲಿಸುತ್ತವೆ.

ಹಕ್ಕು, ಹೋರಾಟ, ಶೋಷಣೆಯ ವಿರುದ್ಧದ ಘೋಷಣೆಯ ಸಾಲುಗಳಾಗಿ ಬಿಡುತ್ತವೇನೊ ಅನ್ನಿಸುವಷ್ಟರಲ್ಲೇ ನಮ್ಮನ್ನು ತನ್ನ ಕಾವ್ಯ ತೀವ್ರತೆಯಲ್ಲಿ ತಲ್ಲಣಿಸುವಂತೆ ಮಾಡಿಬಿಡುತ್ತವೆ ಇಲ್ಲಿರುವ ಕವನಗಳ ಸಾಲುಗಳು. ಶತಮಾನಗಳಿಂದ ಜಾತಿ ಹೆಸರಿನಲ್ಲಿ ಮನುಷ್ಯ ಸಹಜ ಘನತೆ, ಸಂವೇದನೆಗಳನ್ನು ಮೀರಿದ ಶೋಷಣೆಯನ್ನು ಪ್ರತಿಯೊಬ್ಬನಲ್ಲೂ ಪಾಪಪ್ರಜ್ಞೆಯಾಗಿಸುವಂತೆ ಕಾಡುತ್ತವೆ. ಊರಿನ ಎಲ್ಲ ಕೆಲಸಗಳನ್ನು ಮಾಡಿ ಊರಿನಂಚಿಗೆ ಬದುಕುವಂತೆ ಮಾಡುವ ಕ್ರೌರ್ಯವಿದೆಯಲ್ಲ ಅದು ಅರಗಿಸಿಕೊಳ್ಳಲಾಗದ್ದು. ಅದನ್ನೇ ಕವಿ,

ಊರು ಕಟ್ಟಿದವರಿಗೆ ಕೇರಿಯವರೆಂದು
ಕಾಲೋನಿಗಳ ಪಟ್ಟವ ಕಟ್ಟಿದ ಪ್ರತಿಷ್ಠೆಗೆ
ಊರು ಸಾರಿದವರ ಸಾವು ಕೋರಿ
ಸಂತಾನಗಳಿಗೆ ಶವ ಕೂಡಿಟ್ಟು ಉಣಿಸಿದಿರಿ
ಎನ್ನುತ್ತಾರೆ,

ದೂರದ ತಂಜಾವೂರಿನಿಂದು ಬಂದು ಆರನಕಟ್ಟೆಯಲ್ಲಿ ಬದುಕು ಕಟ್ಟಿಕೊಂಡ ಅಜ್ಜ ಸುಬ್ಬನ್, ಬೀಡಿಯ ಉರಿಯಲ್ಲಿ ತನ್ನೆಲ್ಲಾ ಕೋಪವನ್ನು ಸುಟ್ಟ ಅಯ್ಯನ್, ತಂಬೂರಿ ರಾಜಮ್ಮ ಇಲ್ಲಿ ಆತ್ಮಾಭಿಮಾನದ ಸಂಕೇತಗಳಾಗಿ, ಹೆಮ್ಮೆಯಾಗಿ ಮೆರೆಯುತ್ತವೆ. ಶೋಷಣೆಯ ನೋವು, ಸಂಕಟ ಕಣ್ಣೀರು ಉಕ್ಕಿಸಿದರೂ ತಡೆದುಕೊಳ್ಳುವುದನ್ನು ಹೇಳುವ ಇಲ್ಲಿನ ಸಾಲುಗಳು ಎದೆಯ ಉರಿಯನ್ನು ನಂದಿಸದೇ ಇಟ್ಟುಕೊಳ್ಳುವ ಹಠವನ್ನು ಪ್ರತಿಧ್ವನಿಸುತ್ತವೆ.

ಪೂರ್ವಿಕರ ಅನುಭವಗಳೊಂದಿಗೆ ತನ್ನ ಅನುಭವವನ್ನು ಬೆರೆಸಿ ನೋಡುವ ಕವಿ, ಈ ಎರಡೂ ನೆಲೆಗಳ ಅಸ್ಮಿತೆಯ ಹಿನ್ನೆಲೆಯಲ್ಲಿ, ಎರಡೂ ನೆಲೆಗಳ ಪುರಾಣ, ಚರಿತ್ರೆ, ಸಂಸ್ಕೃತಿ ಮತ್ತು ಭಾಷೆಗಳನ್ನು ತಮ್ಮ ಕಾವ್ಯದಲ್ಲಿ ತಂದಿದ್ದಾರೆ. ಹಾಗಾಗಿ ಇಲ್ಲಿನ ಕವಿತೆಗಳಲ್ಲಿ ವಿಭಿನ್ನ ಪ್ರತಿಮೆ-ರೂಪಕಗಳು, ನುಡಿಗಟ್ಟುಗಳು ತೀವ್ರವಾಗಿ ಮೂಡಿ ಬಂದಿವೆ. ವಚನ ಚಳುವಳಿಯ ಪಿತಾಮಹ, ಆದಿ ವಚನಕಾರ ಚನ್ನಯ್ಯ, ಜಾಂಬವಮುನಿ, ಹೆಪ್ಪುಮುನಿ, ಬೆಪ್ಪುಮುನಿ, ನಂದನ, ರವಿದಾಸ, ಗಲ್ಲೇಬಾನಿ, ಚಮ್ಮಾವುಗೆಯಂತಹ ಪ್ರತಿಮಾ ಸಂಕೇತಗಳು ಸಂಕಲನದುದ್ದಕ್ಕೂ ಕಾಣಿಸುತ್ತವೆ. ಮಾದರ ಚನ್ನಯ್ಯನ ವಚನದ ಅಂಕಿತವನ್ನು ಕವಿ ಕವಿತೆಯೊಂದರ ಸಾಲನ್ನಾಗಿಸಿದ್ದಾರೆ. ಇಲ್ಲಿನ ಕವಿತೆಗಳಲ್ಲಿ ಮತ್ತೆ ಮತ್ತೆ ಕಾಣಿಸುವ ಮೆಟ್ಟಿನ ಸಂಕೇತ ಪರಂಪರೆಗೂ ಸಮುದಾಯಕ್ಕೂ ಇರುವ ಅಂತಃಕರಣವನ್ನು ಹೇಳುತ್ತದೆ.

ಕವಿ ತನ್ನ, ತನ್ನವರ ಒಡಲ ಸಂಕಟವನ್ನು ಬಿಚ್ಚಿಡುವ ಈ ಕವಿತೆಗಳು ಅಷ್ಟಕ್ಕೆ ಸೀಮಿತವಾಗಿದ್ದರೆ, ಕಾವ್ಯ ಸಾರ್ಥಕತೆಯೂ ಸೀಮಿತವಾಗುತ್ತಿತ್ತೆನೊ! ಸಮುದಾಯದ ಶತಮಾನಗಳ ಸಂಕಟವನ್ನು ಕಿಡಿಯಾಗಿ ಸಿಡಿಸುವುದಷ್ಟೇ ಅಲ್ಲ, ಅದನ್ನು ಮೀರುವ ಬೆಳಕಿನ ದಾರಿಯ ಬಗ್ಗೆಯೂ ಮಾತಾಡಿದ್ದಾರೆ. ಸಂಕಲನದ ಮೊದಲ ಕವಿತೆಯೇ ಬಹಳ ಆಪ್ತ ಹಾಗೂ ಬುದ್ಧ ಬೆಳಕಿನ ಸ್ಪರ್ಶದ ಅನುಭವ ನೀಡುತ್ತದೆ. ಅವ್ವನೆದೆಯ ಅಜ್ಜನ ಅರಿವು ಶೀರ್ಷಿಕೆಯ ಈ ಕವಿತೆಯಲ್ಲಿ, ಅವ್ವ, ಕವಿಗೆ ಅಂಬೇಡ್ಕರ್ ಅವರನ್ನು ಅಜ್ಜನೆಂದು ಪರಿಚಯಿಸುತ್ತಾರೆ.

ಮೈಸವರಿದ ಅವ್ವ
ಮನಸ್ಸಿಗೆ ಬಸಿದ ಮಾತು
ಕೈತೋರಿ ಸದಾ ಪುಸ್ತಕ ಹೊತ್ತಿರುವ
ನಿನ್ನಜ್ಜ ಅಂಬೇಡ್ಕರ್ ಓದಿದ್ದು
ಬೀದಿ ಬಲ್ಪಿನ ಕೆಳಗೆ ಎಂದು
ಒಂದೊಂದೇ ಪದವ ಎದೆಗಿಟ್ಟು…

ಶಿಕ್ಷಣ ಸ್ವಾಭಿಮಾನ, ಮಾನವೀಯತೆಯ ಮೌಲ್ಯ ಕವಿಯ ಎಳೆಯ ಎದೆಗೆ ಎರೆಯುವ ತಾಯಿಯನ್ನು ಈ ಕವಿತೆ ಕಟ್ಟಿಕೊಡುತ್ತದೆ. ತಮ್ಮೆಲ್ಲ ಸಂಕಟಗಳ ಬಿಡುಗಡೆಯ ಬೆಳಕಾಗಿ ಹೊಮ್ಮುತ್ತದೆ. ಇದೇ ಪರಂಪರೆಯುದ್ದಕ್ಕೂ ಕಾಡಿದ ಶೋಷಣೆಗೆ ಇದೇ ಪರಿಹಾರ ಮಾರ್ಗವೆಂದು ದಾಖಲಿಸುತ್ತದೆ.

ಗಂಡು ಒಂದು ರೀತಿಯ ಶೋಷಣೆಗೆ ಒಳಗಾಗುತ್ತಿದ್ದರೆ, ಹೆಣ್ಣಿನ ಮೇಲೆ ನಡೆವ ದೌರ್ಜನ್ಯದ ಭೀಕರತೆಯನ್ನು ಕವಿ ರೂಪಕಗಳಲ್ಲಿ ಅಲುಗಾಡಿಸಿಬಿಡುತ್ತಾರೆ. ಅಸಹಾಯಕತೆ ಒಂದೆಡೆ, ಅಂತಹ ಸಂದರ್ಭ ಸೃಷ್ಟಿಸಿ ಶೋಷಿಸುವ ಮನಸ್ಸುಗಳನ್ನು ಇನ್ನೊಂದೆಡೆ. ಅನ್ನಕ್ಕಾಗಿ ಅಂಗಲಾಚುವ ಹೆಣ್ಣಿನ ಮುಂದೆ ಕಾಮತೃಷೆ ತೀರಿಸುವ ಕೋರಿಕೆ ಇಡುವುದು, ಬದುಕು ಕಟ್ಟಿಕೊಳ್ಳುವುದಕ್ಕಾಗಿ ತನ್ನ ದೇಹವನ್ನು ಮಾರಿಕೊಳ್ಳಬೇಕಾದ ಸ್ಥಿತಿ ತಲುಪಿದ ಹೆಣ್ಣು ಎದುರಿಸುವ ಕ್ರೌರ್ಯವನ್ನು ಕವಿತೆಗಳು ಮಾತಾಡುತ್ತವೆ. ಅತ್ಯಾಚಾರ, ಕೊಲೆಗೆ ಗುರಿಯಾದ ಮುಗ್ದ ಜೀವಗಳನ್ನು ಕವಿ ನಮಗೆ ಎದುರಾಗಿಸುವ ರೀತಿ ಹೃದಯವನ್ನು ಕರಗಿಸುತ್ತದೆ, ಕೆಲವೊಮ್ಮೆ ನಡುಗಿಸುತ್ತದೆ ಕೂಡ. ಮನುಷ್ಯ ಘನತೆ, ಮಾನವೀಯತೆಯ ಹಂಬಲವನ್ನು ಧ್ಯಾನಿಸುತ್ತಾ ಅದನ್ನು ಕಾಲದ ಎಲ್ಲ ಶೋಷಣೆಗಳಿಗೆ ಮುಖಾಮುಖಿಯಾಗಿಸುತ್ತಾರೆ ಕವಿ ರಂಗನಾಥ್.

ಪ್ರೀತಿ, ವಿರಹಗಳನ್ನು ಧ್ಯಾನಿಸುವ ರಂಗನಾಥ್ ರಾಜಕೀಯ ಬೆಳವಣಿಗೆಗಳನ್ನೂ ಕಾವ್ಯದ ವಸ್ತುವಾಗಿಸಿಕೊಂಡಿದ್ದಾರೆ. ಜಲದ ಪಾದುಕೆಯ ಹಾಡು, ಈ ಸುದ್ದಿ ಇಂದಿನ ವರದಿಯಾಗಿಯೇ ಉಳಿಯಬೇಕಿಲ್ಲ, ದಲಿತರಾಗುವುದೆಂದರೆ ಎಷ್ಟು ಸಡಗರ, ಅಲೆದಷ್ಟು ಅನಾಥಗೊಂಡ ಪಾದಗಳು, ಅವ್ವನೆದೆಯ ಅಜ್ಜನ ಅರಿವು, ಕರಿಯಜ್ಜನ ಯಶೋಗಾಥೆ, ಉರಿಪಾದದ ನೆರಳಲ್ಲಿ, ಕರಿ ಮೈಯ್ಯ ಕಸುವು ಬಹಳ ಮುಖ್ಯವಾದ ಕವಿತೆಗಳು.

ಪರಂಪರೆಯ ಎಲ್ಲ ನೆನಪುಗಳನ್ನು ಕೆದಕುತ್ತಾ, ತಮ್ಮ ಅಸ್ಮಿತೆಯನ್ನು ಅನಾವರಣ ಮಾಡುತ್ತಲೇ ಅದನ್ನು ಒಡೆದು ನಿಲ್ಲಲು ಯತ್ನಿಸುವ ಇಲ್ಲಿನ ಕವಿತೆಗಳು, ಈ ಮಹಾಪಯಣದಲ್ಲಿ ಎಂದೂ ಹಂಗಿನಲಿ ಬಾಳದ ಉದಾಹರಣೆಗಳನ್ನು ಧ್ಯಾನಿಸುತ್ತಾ, ತನ್ನ ಕಾಲದ ದನಿಯನ್ನು ತೀಕ್ಷ್ಣವಾಗಿಯೂ ತೀವ್ರವಾಗಿಯೂ ಕವಿ ರಂಗನಾಥ್ ದಾಖಲಿಸಿದ್ದಾರೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಬದಿಕಿರುವುದೇ ಕಥೆ ಹೇಳಲಿಕ್ಕೆ ಎಂದು ಬರೆದು ಬದುಕಿದ ಲ್ಯಾಟಿನ್ ಅಮೆರಿಕನ್ ಲೇಖಕ ಮಾರ್ಕ್ವೆಜ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ವಿಮರ್ಶೆ ಅದ್ಬುತ ವಾಗಿದೆ ಸರ್
    ಕವಿಯ ಅಂತರಾಳವ ಹೊಕ್ಕು ಪರಿಚಯಿಸಿದಿರಿ ಸರ್

  2. ಕವಿಯ ಹಿನ್ನೆಲೆಯ ಕ್ಯಾನ್ವಾಸಿನಲ್ಲಿ ಕವನದ ಸೊಗಸಾದ ಚಿತ್ರವನ್ನು ಹೇಗೆ ಕವಿ ಅಭಿವ್ಯಕ್ತಿಸಿದ್ದಾರೆಂದು ಸೊಗಸಿನ ವಿಮರ್ಶೆ ಮಾಡಿರುವುದು ಮುದ ನೀಡಿದೆ. ಪ್ರತಿಮೆಯಾದ ಮೆಟ್ಟು ಮೆಟ್ಟುವ ಜನ ಮೆಟ್ಟಸೃಷ್ಟಿಶಿದವರ ಮುಟ್ಟದಿರುವುದು ಈ ಸಮಾಜದ ಕೊಳೆತ ಮನಸಿನ ಘಾಟು ರಾಚಬೇಕಿತ್ತು‌ ಇನ್ನೂ.

    ವಿಮರ್ಶಕರಿಗೆ ಮತ್ತು ಕವಿವರ್ಯರಿಗೆ ಅಭಿನಂದನೆಗಳು

    ಜಯರಾಮ.ಸಿ.ವಿ. ನಾಗಮಂಗಲ.

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...