Homeನ್ಯಾಯ ಪಥಪುಸ್ತಕ ವಿಮರ್ಶೆ; ಆತ್ಮಮರುಕದಾಚೆ ಸಿಡಿಯುವ ಕಾರುಣ್ಯದ ಕಿಡಿಯ ರೂಪಕಗಳು

ಪುಸ್ತಕ ವಿಮರ್ಶೆ; ಆತ್ಮಮರುಕದಾಚೆ ಸಿಡಿಯುವ ಕಾರುಣ್ಯದ ಕಿಡಿಯ ರೂಪಕಗಳು

- Advertisement -
- Advertisement -

ಉರಿಪಾದದ ನೆರಳಲ್ಲಿ
ತೊಡೆಯ ತೊಗಲ ಸುಲಿದು
ಮೆಟ್ಟಲೆಂದೇ ಅಟ್ಟೆಕಟ್ಟಿದ್ದ ಮಾದರ
ಕುಡಿ ಮಕ್ಕಳ ಚರ್ಮವ ಸುಲಿದು
ನಟ್ಟ ನಡುಬೀದಿಯಲ್ಲಿ ಕೆಡವಿ
ಕ್ಯಾಕರಿಸುವವರ ಉಘೇ ಉಘೇಯ
ಜೊಲ್ಲು ಸುರಿದು ನಾರುತ್ತಿದೆ ನಾಡು..

ಒಂದು ಕ್ಷಣ ಮೈಕೊಡವಿ ಕಣ್ಣು ಅಗಲಿಸಿ, ಎದೆ ಉರಿಯುವಂತೆ ಮಾಡುವ ಸಾಲುಗಳಿವು. ಅವಡುಗಚ್ಚಿ ಸಹಿಸಿಕೊಳ್ಳುತ್ತಿದ್ದರೂ, ಕಣ್ಣಲ್ಲಿ ಕಣ್ಣೀರ ಜೊತೆ ಕಿಡಿಯೂ ಸಿಡಿಯುತ್ತಿರುವಂತಿವೆ ಈ ಸಾಲುಗಳು. ‘ಕಾರುಣ್ಯದ ಮೋಹಕ ನವಿಲುಗಳೆ’ ಎಂಬ ರಮ್ಯವೆನಿಸುವ ಶೀರ್ಷೀಕೆಯೊಳಗೆ ಸುಡು ಕೆಂಡಗಳನ್ನೇ ಇಟ್ಟಿದ್ದಾರೆ ಕವಿ ಆರನಕಟ್ಟೆ ರಂಗನಾಥ. ಶತಮಾನಗಳ ಶೋಷಣೆಯಲ್ಲಿ ಬೆಂದ ಕತೆಗಳನ್ನು ನಮ್ಮ ಅಂಗೈಯಲ್ಲಿ ಸುಡುಸುಡುವಂತೆಯೇ ಇಟ್ಟ ಹಾಗೆನಿಸುತ್ತದೆ. ಈ ಕವಿತೆಗಳನ್ನು ಓದಿ ಮರುಗಬೇಕೆನಿಸುವಷ್ಟರಲ್ಲಿ, ಬೆಚ್ಚಿ ಬೀಳಿಸಿ ಜೀವದ ಘನತೆಯನ್ನೇ ಮರೆತ ನಮ್ಮ ಸಮಾಜದ ಶತಮಾನಗಳ ಶೋಷಣೆಯ ಚಿತ್ರಗಳನ್ನು ಕಟ್ಟಿಕೊಡುತ್ತಾ ಎಚ್ಚರಿಸುತ್ತದೆ.

ಮೂವತ್ತೆಂಟು ಕವಿತೆಗಳ ಈ ಸಂಕಲನದಲ್ಲಿ ಕವಿ ರಂಗನಾಥ ಒಂದು ಮಹಾಪಯಣದ ಕತೆಯನ್ನು ಬಿಡಿಬಿಡಿಯಾಗಿ ವಿವರಿಸಿದ್ದಾರೆ. ತನ್ನ ಅಜ್ಜ, ಅಜ್ಜಿ, ಅಪ್ಪ, ತಾನು ಬೆಳೆದ ಊರು, ದಲಿತ ಹೆಣ್ಣು ಜೀವಗಳ ಮೇಲೆ ನಡೆದ ದೌರ್ಜನ್ಯ, ಶೋಷಣೆಯ ವಿರುದ್ಧದ ಸೆಡವು ಎಲ್ಲವೂ ತೀವ್ರವಾದ ರೂಪಕಗಳೊಂದಿಗೆ ಬಿಚ್ಚಿಕೊಳ್ಳುತ್ತವೆ. ಹೀಗೆ ಬಿಚ್ಚಿಕೊಳ್ಳುವ ಚಿತ್ರಗಳು ನಮ್ಮೊಳಗೆ ಮರುಕ ಹುಟ್ಟಿಸುವಷ್ಟು ತೀವ್ರವಾಗಿದ್ದರೂ, ಉರಿಯ ರೂಪಕಗಳ ಆ ಮರುಕವನ್ನು ಸುಟ್ಟುಹಾಕುತ್ತಾ, ಪ್ರತಿರೋಧ ಮತ್ತು ಹೊಸ ಕಾಲದ ಎಚ್ಚರದವನ್ನು ದಾಖಲಿಸುತ್ತವೆ.

ಹಕ್ಕು, ಹೋರಾಟ, ಶೋಷಣೆಯ ವಿರುದ್ಧದ ಘೋಷಣೆಯ ಸಾಲುಗಳಾಗಿ ಬಿಡುತ್ತವೇನೊ ಅನ್ನಿಸುವಷ್ಟರಲ್ಲೇ ನಮ್ಮನ್ನು ತನ್ನ ಕಾವ್ಯ ತೀವ್ರತೆಯಲ್ಲಿ ತಲ್ಲಣಿಸುವಂತೆ ಮಾಡಿಬಿಡುತ್ತವೆ ಇಲ್ಲಿರುವ ಕವನಗಳ ಸಾಲುಗಳು. ಶತಮಾನಗಳಿಂದ ಜಾತಿ ಹೆಸರಿನಲ್ಲಿ ಮನುಷ್ಯ ಸಹಜ ಘನತೆ, ಸಂವೇದನೆಗಳನ್ನು ಮೀರಿದ ಶೋಷಣೆಯನ್ನು ಪ್ರತಿಯೊಬ್ಬನಲ್ಲೂ ಪಾಪಪ್ರಜ್ಞೆಯಾಗಿಸುವಂತೆ ಕಾಡುತ್ತವೆ. ಊರಿನ ಎಲ್ಲ ಕೆಲಸಗಳನ್ನು ಮಾಡಿ ಊರಿನಂಚಿಗೆ ಬದುಕುವಂತೆ ಮಾಡುವ ಕ್ರೌರ್ಯವಿದೆಯಲ್ಲ ಅದು ಅರಗಿಸಿಕೊಳ್ಳಲಾಗದ್ದು. ಅದನ್ನೇ ಕವಿ,

ಊರು ಕಟ್ಟಿದವರಿಗೆ ಕೇರಿಯವರೆಂದು
ಕಾಲೋನಿಗಳ ಪಟ್ಟವ ಕಟ್ಟಿದ ಪ್ರತಿಷ್ಠೆಗೆ
ಊರು ಸಾರಿದವರ ಸಾವು ಕೋರಿ
ಸಂತಾನಗಳಿಗೆ ಶವ ಕೂಡಿಟ್ಟು ಉಣಿಸಿದಿರಿ
ಎನ್ನುತ್ತಾರೆ,

ದೂರದ ತಂಜಾವೂರಿನಿಂದು ಬಂದು ಆರನಕಟ್ಟೆಯಲ್ಲಿ ಬದುಕು ಕಟ್ಟಿಕೊಂಡ ಅಜ್ಜ ಸುಬ್ಬನ್, ಬೀಡಿಯ ಉರಿಯಲ್ಲಿ ತನ್ನೆಲ್ಲಾ ಕೋಪವನ್ನು ಸುಟ್ಟ ಅಯ್ಯನ್, ತಂಬೂರಿ ರಾಜಮ್ಮ ಇಲ್ಲಿ ಆತ್ಮಾಭಿಮಾನದ ಸಂಕೇತಗಳಾಗಿ, ಹೆಮ್ಮೆಯಾಗಿ ಮೆರೆಯುತ್ತವೆ. ಶೋಷಣೆಯ ನೋವು, ಸಂಕಟ ಕಣ್ಣೀರು ಉಕ್ಕಿಸಿದರೂ ತಡೆದುಕೊಳ್ಳುವುದನ್ನು ಹೇಳುವ ಇಲ್ಲಿನ ಸಾಲುಗಳು ಎದೆಯ ಉರಿಯನ್ನು ನಂದಿಸದೇ ಇಟ್ಟುಕೊಳ್ಳುವ ಹಠವನ್ನು ಪ್ರತಿಧ್ವನಿಸುತ್ತವೆ.

ಪೂರ್ವಿಕರ ಅನುಭವಗಳೊಂದಿಗೆ ತನ್ನ ಅನುಭವವನ್ನು ಬೆರೆಸಿ ನೋಡುವ ಕವಿ, ಈ ಎರಡೂ ನೆಲೆಗಳ ಅಸ್ಮಿತೆಯ ಹಿನ್ನೆಲೆಯಲ್ಲಿ, ಎರಡೂ ನೆಲೆಗಳ ಪುರಾಣ, ಚರಿತ್ರೆ, ಸಂಸ್ಕೃತಿ ಮತ್ತು ಭಾಷೆಗಳನ್ನು ತಮ್ಮ ಕಾವ್ಯದಲ್ಲಿ ತಂದಿದ್ದಾರೆ. ಹಾಗಾಗಿ ಇಲ್ಲಿನ ಕವಿತೆಗಳಲ್ಲಿ ವಿಭಿನ್ನ ಪ್ರತಿಮೆ-ರೂಪಕಗಳು, ನುಡಿಗಟ್ಟುಗಳು ತೀವ್ರವಾಗಿ ಮೂಡಿ ಬಂದಿವೆ. ವಚನ ಚಳುವಳಿಯ ಪಿತಾಮಹ, ಆದಿ ವಚನಕಾರ ಚನ್ನಯ್ಯ, ಜಾಂಬವಮುನಿ, ಹೆಪ್ಪುಮುನಿ, ಬೆಪ್ಪುಮುನಿ, ನಂದನ, ರವಿದಾಸ, ಗಲ್ಲೇಬಾನಿ, ಚಮ್ಮಾವುಗೆಯಂತಹ ಪ್ರತಿಮಾ ಸಂಕೇತಗಳು ಸಂಕಲನದುದ್ದಕ್ಕೂ ಕಾಣಿಸುತ್ತವೆ. ಮಾದರ ಚನ್ನಯ್ಯನ ವಚನದ ಅಂಕಿತವನ್ನು ಕವಿ ಕವಿತೆಯೊಂದರ ಸಾಲನ್ನಾಗಿಸಿದ್ದಾರೆ. ಇಲ್ಲಿನ ಕವಿತೆಗಳಲ್ಲಿ ಮತ್ತೆ ಮತ್ತೆ ಕಾಣಿಸುವ ಮೆಟ್ಟಿನ ಸಂಕೇತ ಪರಂಪರೆಗೂ ಸಮುದಾಯಕ್ಕೂ ಇರುವ ಅಂತಃಕರಣವನ್ನು ಹೇಳುತ್ತದೆ.

ಕವಿ ತನ್ನ, ತನ್ನವರ ಒಡಲ ಸಂಕಟವನ್ನು ಬಿಚ್ಚಿಡುವ ಈ ಕವಿತೆಗಳು ಅಷ್ಟಕ್ಕೆ ಸೀಮಿತವಾಗಿದ್ದರೆ, ಕಾವ್ಯ ಸಾರ್ಥಕತೆಯೂ ಸೀಮಿತವಾಗುತ್ತಿತ್ತೆನೊ! ಸಮುದಾಯದ ಶತಮಾನಗಳ ಸಂಕಟವನ್ನು ಕಿಡಿಯಾಗಿ ಸಿಡಿಸುವುದಷ್ಟೇ ಅಲ್ಲ, ಅದನ್ನು ಮೀರುವ ಬೆಳಕಿನ ದಾರಿಯ ಬಗ್ಗೆಯೂ ಮಾತಾಡಿದ್ದಾರೆ. ಸಂಕಲನದ ಮೊದಲ ಕವಿತೆಯೇ ಬಹಳ ಆಪ್ತ ಹಾಗೂ ಬುದ್ಧ ಬೆಳಕಿನ ಸ್ಪರ್ಶದ ಅನುಭವ ನೀಡುತ್ತದೆ. ಅವ್ವನೆದೆಯ ಅಜ್ಜನ ಅರಿವು ಶೀರ್ಷಿಕೆಯ ಈ ಕವಿತೆಯಲ್ಲಿ, ಅವ್ವ, ಕವಿಗೆ ಅಂಬೇಡ್ಕರ್ ಅವರನ್ನು ಅಜ್ಜನೆಂದು ಪರಿಚಯಿಸುತ್ತಾರೆ.

ಮೈಸವರಿದ ಅವ್ವ
ಮನಸ್ಸಿಗೆ ಬಸಿದ ಮಾತು
ಕೈತೋರಿ ಸದಾ ಪುಸ್ತಕ ಹೊತ್ತಿರುವ
ನಿನ್ನಜ್ಜ ಅಂಬೇಡ್ಕರ್ ಓದಿದ್ದು
ಬೀದಿ ಬಲ್ಪಿನ ಕೆಳಗೆ ಎಂದು
ಒಂದೊಂದೇ ಪದವ ಎದೆಗಿಟ್ಟು…

ಶಿಕ್ಷಣ ಸ್ವಾಭಿಮಾನ, ಮಾನವೀಯತೆಯ ಮೌಲ್ಯ ಕವಿಯ ಎಳೆಯ ಎದೆಗೆ ಎರೆಯುವ ತಾಯಿಯನ್ನು ಈ ಕವಿತೆ ಕಟ್ಟಿಕೊಡುತ್ತದೆ. ತಮ್ಮೆಲ್ಲ ಸಂಕಟಗಳ ಬಿಡುಗಡೆಯ ಬೆಳಕಾಗಿ ಹೊಮ್ಮುತ್ತದೆ. ಇದೇ ಪರಂಪರೆಯುದ್ದಕ್ಕೂ ಕಾಡಿದ ಶೋಷಣೆಗೆ ಇದೇ ಪರಿಹಾರ ಮಾರ್ಗವೆಂದು ದಾಖಲಿಸುತ್ತದೆ.

ಗಂಡು ಒಂದು ರೀತಿಯ ಶೋಷಣೆಗೆ ಒಳಗಾಗುತ್ತಿದ್ದರೆ, ಹೆಣ್ಣಿನ ಮೇಲೆ ನಡೆವ ದೌರ್ಜನ್ಯದ ಭೀಕರತೆಯನ್ನು ಕವಿ ರೂಪಕಗಳಲ್ಲಿ ಅಲುಗಾಡಿಸಿಬಿಡುತ್ತಾರೆ. ಅಸಹಾಯಕತೆ ಒಂದೆಡೆ, ಅಂತಹ ಸಂದರ್ಭ ಸೃಷ್ಟಿಸಿ ಶೋಷಿಸುವ ಮನಸ್ಸುಗಳನ್ನು ಇನ್ನೊಂದೆಡೆ. ಅನ್ನಕ್ಕಾಗಿ ಅಂಗಲಾಚುವ ಹೆಣ್ಣಿನ ಮುಂದೆ ಕಾಮತೃಷೆ ತೀರಿಸುವ ಕೋರಿಕೆ ಇಡುವುದು, ಬದುಕು ಕಟ್ಟಿಕೊಳ್ಳುವುದಕ್ಕಾಗಿ ತನ್ನ ದೇಹವನ್ನು ಮಾರಿಕೊಳ್ಳಬೇಕಾದ ಸ್ಥಿತಿ ತಲುಪಿದ ಹೆಣ್ಣು ಎದುರಿಸುವ ಕ್ರೌರ್ಯವನ್ನು ಕವಿತೆಗಳು ಮಾತಾಡುತ್ತವೆ. ಅತ್ಯಾಚಾರ, ಕೊಲೆಗೆ ಗುರಿಯಾದ ಮುಗ್ದ ಜೀವಗಳನ್ನು ಕವಿ ನಮಗೆ ಎದುರಾಗಿಸುವ ರೀತಿ ಹೃದಯವನ್ನು ಕರಗಿಸುತ್ತದೆ, ಕೆಲವೊಮ್ಮೆ ನಡುಗಿಸುತ್ತದೆ ಕೂಡ. ಮನುಷ್ಯ ಘನತೆ, ಮಾನವೀಯತೆಯ ಹಂಬಲವನ್ನು ಧ್ಯಾನಿಸುತ್ತಾ ಅದನ್ನು ಕಾಲದ ಎಲ್ಲ ಶೋಷಣೆಗಳಿಗೆ ಮುಖಾಮುಖಿಯಾಗಿಸುತ್ತಾರೆ ಕವಿ ರಂಗನಾಥ್.

ಪ್ರೀತಿ, ವಿರಹಗಳನ್ನು ಧ್ಯಾನಿಸುವ ರಂಗನಾಥ್ ರಾಜಕೀಯ ಬೆಳವಣಿಗೆಗಳನ್ನೂ ಕಾವ್ಯದ ವಸ್ತುವಾಗಿಸಿಕೊಂಡಿದ್ದಾರೆ. ಜಲದ ಪಾದುಕೆಯ ಹಾಡು, ಈ ಸುದ್ದಿ ಇಂದಿನ ವರದಿಯಾಗಿಯೇ ಉಳಿಯಬೇಕಿಲ್ಲ, ದಲಿತರಾಗುವುದೆಂದರೆ ಎಷ್ಟು ಸಡಗರ, ಅಲೆದಷ್ಟು ಅನಾಥಗೊಂಡ ಪಾದಗಳು, ಅವ್ವನೆದೆಯ ಅಜ್ಜನ ಅರಿವು, ಕರಿಯಜ್ಜನ ಯಶೋಗಾಥೆ, ಉರಿಪಾದದ ನೆರಳಲ್ಲಿ, ಕರಿ ಮೈಯ್ಯ ಕಸುವು ಬಹಳ ಮುಖ್ಯವಾದ ಕವಿತೆಗಳು.

ಪರಂಪರೆಯ ಎಲ್ಲ ನೆನಪುಗಳನ್ನು ಕೆದಕುತ್ತಾ, ತಮ್ಮ ಅಸ್ಮಿತೆಯನ್ನು ಅನಾವರಣ ಮಾಡುತ್ತಲೇ ಅದನ್ನು ಒಡೆದು ನಿಲ್ಲಲು ಯತ್ನಿಸುವ ಇಲ್ಲಿನ ಕವಿತೆಗಳು, ಈ ಮಹಾಪಯಣದಲ್ಲಿ ಎಂದೂ ಹಂಗಿನಲಿ ಬಾಳದ ಉದಾಹರಣೆಗಳನ್ನು ಧ್ಯಾನಿಸುತ್ತಾ, ತನ್ನ ಕಾಲದ ದನಿಯನ್ನು ತೀಕ್ಷ್ಣವಾಗಿಯೂ ತೀವ್ರವಾಗಿಯೂ ಕವಿ ರಂಗನಾಥ್ ದಾಖಲಿಸಿದ್ದಾರೆ.


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಬದಿಕಿರುವುದೇ ಕಥೆ ಹೇಳಲಿಕ್ಕೆ ಎಂದು ಬರೆದು ಬದುಕಿದ ಲ್ಯಾಟಿನ್ ಅಮೆರಿಕನ್ ಲೇಖಕ ಮಾರ್ಕ್ವೆಜ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ವಿಮರ್ಶೆ ಅದ್ಬುತ ವಾಗಿದೆ ಸರ್
    ಕವಿಯ ಅಂತರಾಳವ ಹೊಕ್ಕು ಪರಿಚಯಿಸಿದಿರಿ ಸರ್

  2. ಕವಿಯ ಹಿನ್ನೆಲೆಯ ಕ್ಯಾನ್ವಾಸಿನಲ್ಲಿ ಕವನದ ಸೊಗಸಾದ ಚಿತ್ರವನ್ನು ಹೇಗೆ ಕವಿ ಅಭಿವ್ಯಕ್ತಿಸಿದ್ದಾರೆಂದು ಸೊಗಸಿನ ವಿಮರ್ಶೆ ಮಾಡಿರುವುದು ಮುದ ನೀಡಿದೆ. ಪ್ರತಿಮೆಯಾದ ಮೆಟ್ಟು ಮೆಟ್ಟುವ ಜನ ಮೆಟ್ಟಸೃಷ್ಟಿಶಿದವರ ಮುಟ್ಟದಿರುವುದು ಈ ಸಮಾಜದ ಕೊಳೆತ ಮನಸಿನ ಘಾಟು ರಾಚಬೇಕಿತ್ತು‌ ಇನ್ನೂ.

    ವಿಮರ್ಶಕರಿಗೆ ಮತ್ತು ಕವಿವರ್ಯರಿಗೆ ಅಭಿನಂದನೆಗಳು

    ಜಯರಾಮ.ಸಿ.ವಿ. ನಾಗಮಂಗಲ.

LEAVE A REPLY

Please enter your comment!
Please enter your name here

- Advertisment -

ರೋಹಿತ್ ವೇಮುಲ ಕಾಯ್ದೆ ಘೋಷಣೆಯಲ್ಲ, ಅಗತ್ಯ : ರಾಹುಲ್ ಗಾಂಧಿ

ಹೈದರಾಬಾದ್ ವಿಶ್ವವಿದ್ಯಾಲಯದ ಪಿಎಚ್‌ಡಿ ವಿದ್ಯಾರ್ಥಿ ರೋಹಿತ್ ವೇಮುಲ ಜಾತಿ ತಾರತಮ್ಯಕ್ಕೆ ಬಲಿಯಾಗಿ ಇಂದಿಗೆ (17 ಜನವರಿ 2026) 10 ವರ್ಷಗಳಾಗಿದ್ದು, ಲೋಕಸಭೆಯ ವಿರೋಧಪಕ್ಷದ ನಾಯಕ ರಾಹುಲ್ ಗಾಂಧಿ ರೋಹಿತ್ ಅವರನ್ನು ಸ್ಮರಿಸಿ ಸಾಮಾಜಿಕ...

ದೇವರು-ಹುತಾತ್ಮರ ಹೆಸರಿನಲ್ಲಿ ಪ್ರಮಾಣವಚನ; ಬಿಜೆಪಿ ಕೌನ್ಸಿಲರ್‌ಗಳಿಗೆ ಕೇರಳ ಹೈಕೋರ್ಟ್ ನೋಟಿಸ್

ತಿರುವನಂತಪುರಂ ನಗರಸಭೆಯ ಬಿಜೆಪಿ ಕೌನ್ಸಿಲರ್‌ಗಳು ವಿವಿಧ ದೇವರು, ಹುತಾತ್ಮರು ಮತ್ತು ರಾಜಕೀಯ ಚಳುವಳಿಗಳ ಹೆಸರಿನಲ್ಲಿ ಮಾಡಿದ ಪ್ರಮಾಣವಚನಗಳ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ರಿಟ್ ಅರ್ಜಿಯ ಕುರಿತು ಕೇರಳ ಹೈಕೋರ್ಟ್ ಗುರುವಾರ ನೋಟಿಸ್ ಜಾರಿ...

ಮಧ್ಯಪ್ರದೇಶ: ಬುಡಕಟ್ಟು ವಿಶ್ವವಿದ್ಯಾಲಯ ಹಾಸ್ಟೆಲ್ ಒಳಗೆ ಅಸ್ಸಾಮಿ ವಿದ್ಯಾರ್ಥಿ ಮೇಲೆ ಗುಂಪು ಹಲ್ಲೆ

ಮಧ್ಯಪ್ರದೇಶದ ಇಂದಿರಾ ಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಹಾಸ್ಟೆಲ್ ಕೋಣೆಯೊಳಗೆ ಐದು ಜನ ವಿದ್ಯಾರ್ಥಿಗಳ ತಂಡವು ಅಸ್ಸಾಮಿ ವಿದ್ಯಾರ್ಥಿಯ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ. ಗುಂಪು ಆತನಿಗೆ ಇಲ್ಲಿಯೇ ಸಾಯಬೇಕು ಎಂದು...

ಮಹಿಳೆಯರ ಜೊತೆ ಪುರುಷರಿಗೂ ಉಚಿತ ಬಸ್‌ ಪ್ರಯಾಣ, ಗ್ರಾಮೀಣರಿಗೆ 150 ಕೂಲಿ ದಿನ : ಎಐಎಡಿಎಂಕೆ ಚುನಾವಣಾ ಭರವಸೆ

ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಶನಿವಾರ (ಜ.17) ಪಕ್ಷದ ಮೊದಲ ಹಂತದ ಪ್ರಣಾಳಿಕೆ (ಚುನಾವಣಾ ಭರವಸೆ) ಬಿಡುಗಡೆ ಮಾಡಿದ್ದಾರೆ. ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯಂತೆ ಎಲ್ಲಾ ಪಡಿತರ...

ಛತ್ತೀಸ್‌ಗಢ| ಬಿಜಾಪುರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲರು ಸಾವು

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಶನಿವಾರ ಭದ್ರತಾ ಪಡೆಗಳೊಂದಿಗಿನ ಎನ್‌ಕೌಂಟರ್‌ನಲ್ಲಿ ಕನಿಷ್ಠ ಇಬ್ಬರು ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲೆಯ ವಾಯುವ್ಯ ಪ್ರದೇಶದ ಅರಣ್ಯ ಬೆಟ್ಟಗಳಲ್ಲಿ ಶನಿವಾರ ಬೆಳಿಗ್ಗೆ ಗುಂಡಿನ ಚಕಮಕಿ ನಡೆಯಿತು. ಹಿರಿಯ...

ಮಮತಾ ಬ್ಯಾನರ್ಜಿ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹೂಡಿದ ಸುವೇಂದು ಅಧಿಕಾರಿ

ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಶುಕ್ರವಾರ (ಜ.16) ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ 100 ಕೋಟಿ ರೂ.ಗಳ ಪರಿಹಾರ ಕೋರಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಮಮತಾ...

ಕೋಮುವಾದ ಕಾರಣಕ್ಕೆ ಬಾಲಿವುಡ್‌ನಲ್ಲಿ ಅವಕಾಶ ಕಡಿಮೆ; ರೆಹಮಾನ್ ಹೇಳಿಕೆ ತಳ್ಳಿಹಾಕಿದ ಜಾವೇದ್ ಅಖ್ತರ್

ಯಶಸ್ವೀ ಸಂಗೀತಗಾರನಾಗಿ ಹಲವು ಕೊಡುಗೆ ನೀಡಿದ್ದರೂ ಕೆಲವರಿಗೆ ಹೊರಗಿನವನು ಎಂಬ ಭಾವನೆ ಹೋಗಿಲ್ಲ. ಕಳೆದ ಎಂಟು ವರ್ಷಗಳಲ್ಲಿ ಬಾಲಿವುಡ್‌ನ ಕದ ಮುಚ್ಚಿದೆ ಎಂಬ ಬಗ್ಗೆ ಎ.ಆರ್. ರೆಹಮಾನ್ ಹೇಳಿಕೆಯನ್ನು ಹಿರಿಯ ಗೀತೆ ರಚನೆಕಾರ...

14 ವರ್ಷದ ದಲಿತ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ : 16 ವರ್ಷದ ಬಾಲಕನನ್ನು ವಶಕ್ಕೆ ಪಡೆದ ಪೊಲೀಸರು

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ 14 ವರ್ಷದ ದಲಿತ ಬಾಲಕಿಯ ಭೀಕರ ಅತ್ಯಾಚಾರ, ಕೊಲೆ ನಡೆದಿದ್ದು, ಈ ಸಂಬಂಧ 16 ವರ್ಷದ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುರುವಾರ (ಜ.15) ಬೆಳಿಗ್ಗೆ ಶಾಲೆಗೆ ಹೋದ...

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳುತ್ತದೆ: ಪಿಣರಾಯಿ ವಿಜಯನ್

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬಿಜೆಪಿ ಆಡಳಿತದ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ವಾಗ್ದಾಳಿ ನಡೆಸಿದ್ದಾರೆ. ಪೌರತ್ವ ಕಾಯ್ದೆ ಮತ್ತು ಹೊಸ ವಕ್ಫ್ ಕಾಯ್ದೆಯಂತಹ ಅದರ ವಿವಿಧ ಕಾನೂನುಗಳು ಮತ್ತು ನೀತಿಗಳು...

ಮಹಾರಾಷ್ಟ್ರ ಸ್ಥಳೀಯ ಸಂಸ್ಥೆ ಚುನಾವಣೆ: 114 ಸ್ಥಾನಗಳೊಂದಿಗೆ ಪ್ರಮುಖ ಪಕ್ಷವಾಗಿ ಹೊರಹೊಮ್ಮಿದ ಎಐಎಂಐಎಂ

ಮಹಾರಾಷ್ಟ್ರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಅಖಿಲ ಭಾರತ ಮಜ್ಲಿಸ್ ಇ ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷವು (ಎಐಎಂಐಎಂ) 114 ಸ್ಥಾನಗಳನ್ನು ಗೆದ್ದು, 2017 ರ ಸ್ಥಳೀಯ ಸಂಸ್ಥೆ ಚುನಾವಣೆಗಳಿಗಿಂತ ತನ್ನ ಸಂಖ್ಯೆಯನ್ನು ತೀವ್ರವಾಗಿ ಹೆಚ್ಚಿಸಿಕೊಂಡಿದೆ....