ಇತ್ತೀಚೆಗೆ ಅಸ್ಸಾಂ ಮತ್ತು ಮಿಜೋರಾಂ ಅಂತರ ರಾಜ್ಯ ಗಡಿಯಲ್ಲಿ ನಡೆದ ಸಂಘರ್ಷದಿಂದಾಗಿ ಆರು ಅಸ್ಸಾಂ ಪೊಲೀಸ್ ಸಿಬ್ಬಂದಿಗಳು ಸಾವನ್ನಪ್ಪಿದ್ದು ಮತ್ತು ಹಲವಾರು ಜನರು ಗಾಯಗೊಂಡಿದ್ದರು. ಇದಾಗಿಯು ಅಸ್ಸಾಂನ ಕ್ಯಾಚಾರ್, ಹೈಲಕಂಡಿ ಮತ್ತು ಕರಿಮಗಂಜ್ ಜಿಲ್ಲೆಗಳ ಮಿಜೋರಾಂ ಗಡಿಯ ಬಳಿ ಇತ್ತೀಚಿನ ಕೆಲವು ಘರ್ಷಣೆಗಳನ್ನು ಸೂಚಿಸಿರುವ ಅಸ್ಸಾಂ ಸರ್ಕಾರ, ಗುರುವಾರದಂದು ‘ಪ್ರವಾಸ ಸಲಹೆ’ ನೀಡಿದೆ. ಈ ಸಲಹೆಯಲ್ಲಿ ರಾಜ್ಯದ ಜನರು ಮಿಜೋರಾಂಗೆ ಪ್ರಯಾಣಿಸದಂತೆ ಅದು ಕೇಳಿಕೊಂಡಿದೆ.
“ಈ ಘಟನೆಯ ನಂತರವೂ, ಕೆಲವು ಮಿಜೋ ನಾಗರಿಕ ಸಮಾಜ ಹಾಗೂ ವಿದ್ಯಾರ್ಥಿ ಮತ್ತು ಯುವ ಸಂಘಟನೆಗಳು ನಿರಂತರವಾಗಿ ಅಸ್ಸಾಂ ಮತ್ತು ಅದರ ಜನರ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿವೆ …” ಎಂದು ಸರ್ಕಾರ ಹೇಳಿದೆ.
ಇದನ್ನೂ ಓದಿ: ಗಡಿ ಸಂಘರ್ಷಯಲ್ಲಿ ಮಿಜೋರಾಂ ಸಂಸದನ ಕೈವಾಡ: ಅಸ್ಸಾಂ ಪೊಲೀಸರ ಆರೋಪ
“ಅನೇಕ ನಾಗರಿಕರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆಂದು ಅಸ್ಸಾಂ ಪೊಲೀಸರ ಬಳಿಯಿರುವ ವೀಡಿಯೊ ತುಣುಕಿನಿಂದ ತಿಳಿದುಬಂದಿದೆ. ಅದರಂತೆ, ಅಸ್ಸಾಂ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು, ಈ ಮೂಲಕ ಪ್ರಯಾಣ ಸಲಹೆಯನ್ನು ನೀಡಲಾಗುತ್ತದೆ” ಎಂದು ಸಲಹೆಯು ಹೇಳಿದೆ.
ಮಿಜೋರಾಂನಲ್ಲಿ ಕೆಲಸ ಮಾಡುತ್ತಿರುವ ರಾಜ್ಯದ ಜನರು ಅತ್ಯಂತ ಎಚ್ಚರಿಕೆಯಿಂದ ವರ್ತಿಸುವಂತೆ ಅಸ್ಸಾಂ ಸರ್ಕಾರ ಸಲಹೆ ನೀಡಿದೆ. ಮಿಜೋರಾಂನಿಂದ ಅಸ್ಸಾಂಗೆ ಪ್ರವೇಶಿಸುವ ಪ್ರತಿಯೊಂದು ವಾಹನವನ್ನು ಸಂಪೂರ್ಣವಾಗಿ ಪರಿಶೀಲಿಸುವುದಾಗಿ ಸರ್ಕಾರ ಹೇಳಿದೆ.
“ಅಕ್ರಮ ಮಾದಕವಸ್ತುಗಳ ಕಳ್ಳಸಾಗಣೆ ಪರಿಶೀಲಿಸಲು, ಮಿಜೋರಾಂನಿಂದ ಅಸ್ಸಾಂಗೆ ಪ್ರವೇಶಿಸುವ ಎಲ್ಲಾ ವಾಹನಗಳನ್ನು ಪರಿಶೀಲಿಸುವುದು ಅವಶ್ಯಕ. ವಾಹನಗಳನ್ನು ಅಸ್ಸಾಂ ಪೊಲೀಸರು ಸಂಪೂರ್ಣವಾಗಿ ಪರಿಶೀಲಿಸುತ್ತಾರೆ. ಸಬ್ ಇನ್ಸ್ಪೆಕ್ಟರ್ ಹುದ್ದೆಗಿಂತ ಕೆಳಗಿಲ್ಲದ ಅಧಿಕಾರಿಯೊಬ್ಬರು ವಾಹನಗಳನ್ನು ಪರಿಶೀಲಿಸಿ ವಾಹನದಲ್ಲಿ ಅಕ್ರಮ ದ್ರವ್ಯಗಳು ಇಲ್ಲ ಎಂದು ತಿಳಿದ ನಂತರವೇ ಬಿಡುಗಡೆ ಮಾಡಲಾಗುವುದು” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಅಸ್ಸಾಂ-ಮಿಜೋರಾಂ ವಿವಾದಿತ ಗಡಿಯಲ್ಲಿ ಹಿಂಸಾಚಾರ: ಅಸ್ಸಾಂನ 6 ಪೊಲೀಸರ ಹತ್ಯೆ
ಈ ಮಧ್ಯೆ, ಅಸ್ಸಾಂ ಮೂಲದ ಸಂಘಟನೆ ಮಿಜೋರಾಂಗೆ ಹೇರಿದ ಆರ್ಥಿಕ ದಿಗ್ಬಂಧನ ಮುಂದುವರೆದಿದ್ದು, ಇದರಲ್ಲಿ ಹಸ್ತಕ್ಷೇಪ ಮಾಡುವಂತೆ ಮಿಜೋರಾಂ ಒಕ್ಕೂಟ ಸರ್ಕಾರವನ್ನು ಕೋರಿದೆ.
ಅಸ್ಸಾಂ ಸಿಎಂ ವಿರುದ್ದ ಕಿಡಿ ಕಾರಿದ ವಿದ್ಯಾರ್ಥಿ ನಾಯಕ
ಮಿಜೋ ಸ್ಟೂಡೆಂಟ್ಸ್ ಯೂನಿಯನ್ (ಎಂಎಸ್ಯು) ಅಧ್ಯಕ್ಷ ಜೆ. ಲಾಲ್ಮುವಾನ್ಜುವಲಾ, “ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಈಶಾನ್ಯ ರಾಜ್ಯಗಳ ಶಾಂತಿಗೆ ಭಂಗ ಮಾಡಿದ್ದಾರೆ. ಅವರು ರಾಜಕೀಯ ಜಗತ್ತಿಗೆ ಪ್ರವೇಶಿಸುವ ಮೊದಲು ಇಲ್ಲಿ ಶಾಂತಿ ಇತ್ತು” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅತಿ ಹೆಚ್ಚು ಮಕ್ಕಳನ್ನು ಹೊಂದಿರುವ ಪೋಷಕರಿಗೆ 1 ಲಕ್ಷ ಬಹುಮಾನ ಘೋಷಿಸಿದ ಮಿಜೋರಾಂ ಸಚಿವ!