2022-23ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಅರ್ಥ ಸಚಿವೆ ನಿರ್ಮಲಾ ಸೀತಾರಾಮ್ ಅವರು ಮಂಡಿಸಿದ್ದಾರೆ. ಬಜೆಟ್ನಲ್ಲಿರುವ ಲೋಪದೋಷಗಳನ್ನು ತಜ್ಞರು ಎತ್ತಿ ಹಿಡಿದಿದ್ದಾರೆ. ಶಿಕ್ಷಣ ಹಾಗೂ ಕೃಷಿ ಕ್ಷೇತ್ರವನ್ನು ಬಜೆಟ್ ನಿರ್ಲಕ್ಷಿಸಿದೆ. ಬಂಡವಾಳಶಾಹಿಗಳ ಪರ ನಿಂತಿದೆ ಎಂದು ತಜ್ಞರು ತಿಳಿಸಿದ್ದಾರೆ.
ಅಭಿವೃದ್ಧಿ ಶಿಕ್ಷಣತಜ್ಞ ಹಾಗೂ ಶಿಕ್ಷಣದ ತುರ್ತಿಗಾಗಿ ರಾಷ್ಟ್ರೀಯ ಸಮನ್ವಯದ ಸದಸ್ಯರಾದ ನಿರಂಜನಾರಾಧ್ಯ.ವಿ.ಪಿ., ಆರ್ಥಿಕ ತಜ್ಞರು, ನಿವೃತ್ತ ಪ್ರಾಧ್ಯಾಪಕರಾದ ಟಿ.ಆರ್.ಚಂದ್ರಶೇಖರ, ಸಿಪಿಎಂನ ರಾಜ್ಯ ನಾಯಕರಾದ ಜಿ.ಎನ್.ನಾಗರಾಜ್ ಅವರು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಇಲ್ಲಿವೆ.
ಶಿಕ್ಷಣದ ಹಕ್ಕು ಆಯವ್ಯಯದಲ್ಲಿ ಮುಂದುವರಿದ ನಿರ್ಲಕ್ಷ್ಯ: ಪಿ.ವಿ.ನಿರಂಜನಾರಾಧ್ಯ
ನಮಗೆ ತಿಳಿದಿರುವಂತೆ ಕೋವಿಡ್ 19 ಮಾರ್ಚ್ 2020ರಿಂದ ಇಲ್ಲಿಯವರೆಗೆ ಭಾರತದಲ್ಲಿ ಶಾಲಾ ಶಿಕ್ಷಣ ವ್ಯವಸ್ಥೆಯ ಮೇಲೆ ಅತ್ಯಂತ ದುರಂತ ಪರಿಣಾಮವನ್ನು ಬೀರಿದೆ. ಶಿಕ್ಷಣದ ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ, ಶಿಕ್ಷಣ ಕ್ಷೇತ್ರಕ್ಕೆ, ಅದರಲ್ಲೂ ವಿಶೇಷವಾಗಿ ಶಾಲಾ ಶಿಕ್ಷಣಕ್ಕೆ ಬಂದೊದಗಿರುವ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಅಗತ್ಯವಾದ ಸಂಪನ್ಮೂಲಗಳನ್ನು ಕ್ರೋಢೀಕರಿಸುವ ನಿಟ್ಟಿನಲ್ಲಿ ಆಯವ್ಯಯದ ಬಗ್ಗೆ ಇದ್ದ ದೊಡ್ಡ ನಿರೀಕ್ಷೆಗಳು ಹುಸಿಯಾಗಿವೆ.
ಶಿಕ್ಷಣ ಕ್ಷೇತ್ರಕ್ಕೆ ಸೂಕ್ತ ಆದ್ಯತೆ ಹಾಗೂ ಮಹತ್ವ ಸಿಕ್ಕಿಲ್ಲ. ಇದರಿಂದಾಗಿ, ಮಕ್ಕಳ ಕಲಿಕಾ ಕಾರ್ಯಕ್ರಮ, ಪೋಷಣೆ ಮತ್ತು ಯೋಗಕ್ಷೇಮ ಸೇರಿದಂತೆ ಸಾಂಕ್ರಾಮಿಕ ರೋಗದಿಂದ ಉಂಟಾಗಿರುವ ಹಲವು ಸಮಸ್ಯೆಗಳು ಸಮಸ್ಯೆಗಳಾಗಿಯೇ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ.
ಸಮಗ್ರ ಶಿಕ್ಷಣ ಅಭಿಯಾನಕ್ಕೆ ರೂ.6333 ಕೋಟಿಗಳ ಅತ್ಯಲ್ಪ ಹೆಚ್ಚಳದೊಂದಿಗೆ ರೂ. 37,383 ಕೋಟಿಗಳನ್ನು ನೀಡುವ ಮೂಲಕ (2021-22ರಲ್ಲಿ ರೂ.31,050 ಕೋಟಿಗಳು ಪ್ರಸ್ತುತ 2022-23ರ ಬಜೆಟ್ನಲ್ಲಿ 37,383 ಕೋಟಿಗಳು), ಮೂಲಭೂತ ಹಕ್ಕನ್ನು ಒದಗಿಸುವ ಆರ್ಟಿಇ ಕಾಯ್ದೆಯ ಅನುಷ್ಠಾನವನ್ನು ಬಜೆಟ್ ಮತ್ತಷ್ಟು ಹಳಿತಪ್ಪಿಸಿದೆ.
ಆಗಸ್ಟ್ 2021ರಲ್ಲಿ ಚುಕ್ಕಿಯಿಲ್ಲದ ಪ್ರಶ್ನೆಯೊಂದಕ್ಕೆ ಉತ್ತರಿಸಲು ಲೋಕಸಭೆಗೆ ಒದಗಿಸಿದ ಮಾಹಿತಿಯ ಅನ್ವಯ, ಶಿಕ್ಷಣ ಹಕ್ಕು ಕಾಯಿದೆಯನ್ನು ಅನುಷ್ಠಾನಗೊಳಿಸಿದ 12 ವರ್ಷಗಳ ನಂತರ ಆರ್ಟಿಇ ಅನುಸರಣೆಯ ರಾಷ್ಟ್ರೀಯ ಸರಾಸರಿ ಶೇಕಡ. 25.5 ಎಂದು ಬಹಿರಂಗಗೊಂಡಿದೆ. ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಅನುಸರಣೆ ಶೇಕಡ 1.3 ರಿಂದ 63.6ವರೆಗೆ ವ್ಯತ್ಯಾಸ ಹೊಂದಿದೆ.
ಸಾರ್ವತ್ರಿಕ ಗುಣಮಟ್ಟದ ಶಿಕ್ಷಣವನ್ನು ಸಾಧಿಸಲು ಕಲಿಕೆಗೆ ಅನುವು ಮಾಡಿಕೊಡುವ ವಾತಾವರಣವನ್ನು ಸೃಷ್ಟಿಸಲು ಆರ್ಟಿಇ ಕಾಯಿದೆ ನಿಗದಿ ಪಡಿಸಿರುವ ಕನಿಷ್ಟ ಮೂಲ ಸೌಕರ್ಯಗಳನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರವು ಆಸಕ್ತಿ ಹೊಂದಿಲ್ಲ ಎಂಬುದಕ್ಕೆ ಬಜೆಟ್ ಸ್ಪಷ್ಟ ಸೂಚನೆಯಾಗಿದೆ.
ಈ ಬಜೆಟ್ನಲ್ಲಿ ಘೋಷಿಸಿರುವ ಹಲವು ಕಾರ್ಯಕ್ರಮಗಳು, ಕಳೆದ ವರ್ಷ, 2021-22ರಲ್ಲಿ ಘೋಷಿಸಲಾದ ಕಾರ್ಯಕ್ರಮಗಳ ನಕಲಲ್ಲದೆ ಬೇರೇನೂ ಅಲ್ಲ. ಪಿಎಮ್ ಇ-ವಿದ್ಯಾ ಅಡಿಯಲ್ಲಿ ಒಂದು ವರ್ಗ -ಒಂದು ದೂರದರ್ಶನ ಚಾನೆಲ್ ಮತ್ತು ಹೊಸ ಸೈನಿಕ ಶಾಲೆಗಳನ್ನು ತೆರೆಯುವ ಕಾರ್ಯಕ್ರಮಗಳನ್ನು ಹಿಂದಿನ ಬಜೆಟ್ನಲ್ಲಿ ಈಗಾಗಲೇ ಘೋಷಿಸಲಾಗಿತ್ತು.
ಮತ್ತೊಂದು ಹಾಸ್ಯಾಸ್ಪದ ಸಂಗತಿಯೆಂದರೆ, ಡಿಜಿಟಲ್ ಶಿಕ್ಷಣವು ತರಗತಿಯ ಕಲಿಕೆಗೆ ಪರ್ಯಾಯವಲ್ಲ ಎಂದು ಪ್ರಪಂಚದಾದ್ಯಂತದ ಎಲ್ಲಾ ಸಂಶೋಧನೆಗಳು ಸ್ಪಷ್ಟವಾಗಿ ಸೂಚಿಸಿವೆ. ಭಾರತದಂತಹ ದೇಶಗಳಲ್ಲಿ ಈಗಿರುವ ದೊಡ್ಡ ಡಿಜಿಟಲ್ ಅಂತರದಿಂದಾಗಿ ಶಿಕ್ಷಣದಲ್ಲಿ ಅಸಮಾನತೆ ಮತ್ತು ತಾರತಮ್ಯಗಳು ಇನ್ನಷ್ಟು ಉಲ್ಬಣಗೊಳಿಸುತ್ತದೆ ಎಂಬುದು ಸಂಶೋಧನೆಗಳಿಂದ ತಿಳಿದಿರುವ ಸತ್ಯ.
ಈ ಸತ್ಯದ ನಡುವೆಯೂ ಆಯವ್ಯಯ ಡಿಜಿಟಲ್ ಕಲಿಕೆಗೆ ಅನಗತ್ಯ ಪ್ರಾಮುಖ್ಯತೆಯನ್ನು ನೀಡುತ್ತದೆ. ಡಿಜಿಟಲ್ ಶಿಕ್ಷಣದ ಉದ್ಯಮಿಗಳನ್ನು ಉತ್ತೇಜಿಸಲು ಕೇಂದ್ರವು ಡಿಜಿಟಲ್ ಶಿಕ್ಷಣವನ್ನು ಆಯವ್ಯಯದಲ್ಲಿ ಉತ್ತೇಜಿಸುತ್ತಿದೆ. ಇದರ ಭಾಗವಾಗಿ , ಬಜೆಟ್ನಲ್ಲಿ ವಿಜ್ಞಾನ ಮತ್ತು ಗಣಿತದಲ್ಲಿ 750 ವರ್ಚುವಲ್ ಲ್ಯಾಬ್ಗಳು, 75 ಕೌಶಲ್ಯ ಇ-ಲ್ಯಾಬ್ಗಳು, ಇ-ಕಂಟೆಂಟ್ ಅನ್ನು ಡಿಜಿಟಲ್ ಶಿಕ್ಷಕರ ಮೂಲಕ ಇಂಟರ್ನೆಟ್, ಮೊಬೈಲ್ ಫೋನ್ಗಳು, ಟಿವಿ ಮತ್ತು ರೇಡಿಯೊ ಮೂಲಕ ತಲುಪಿಸಲು ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸಲಾಗಿದೆ. ಶಿಕ್ಷಕರಿಂದ ಗುಣಮಟ್ಟದ ಇ-ವಿಷಯವನ್ನು ಅಭಿವೃದ್ಧಿಪಡಿಸಲು ಸ್ಪರ್ಧಾತ್ಮಕ ಕಾರ್ಯವಿಧಾನವನ್ನು ಸಶಕ್ತಗೊಳಿಸಲು ಮತ್ತು ಡಿಜಿಟಲ್ ಬೋಧನಾ ಸಾಧನಗಳೊಂದಿಗೆ ಸಜ್ಜುಗೊಳಿಸಲು ಮತ್ತು ಉತ್ತಮ ಕಲಿಕೆಯ ಫಲಿತಾಂಶಗಳನ್ನು ಸುಲಭಗೊಳಿಸಲು ಹೊಂದಿಸಲಾಗುವುದು ಎಂದು ಅದು ಹೇಳುತ್ತದೆ. ಡಿಜಿಟಲ್ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಸಹ ಅದು ಹೊಂದಿದೆ.
ಈ ಎಲ್ಲ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿದರೆ, ಸಂವಿಧಾನದ ಸಾಮಾಜಿಕ ನ್ಯಾಯದ ಆಶಯಕ್ಕೆ ವಿರುದ್ಧವಾಗಿ ಸಮಾಜದ ಪ್ರತಿಶತ 80ರಷ್ಟು ಅವಕಾಶವಂಚಿತ ಹಾಗು ಬಡ ಜನರ ಮಕ್ಕಳನ್ನು ಶಿಕ್ಷಣದಿಂದ ಹೊರಗಿಟ್ಟು ಪ್ರತಿಶತ 20ರಷ್ಟು ಶ್ರೀಮಂತ ವರ್ಗದ ಮಕ್ಕಳಿಗೆ ಅನುಕೂಲವಾಗುವಂತಹ ಒಂದು ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವತ್ತ ಭಾರತ ಸಾಗುತ್ತಿದೆ ಎಂಬುದಕ್ಕೆ ಈ ಬಜೆಟ್ ಸಾಕ್ಷಿಯಾಗಿದೆ.
****
ವಾಗ್ಜಾಲ ಭ್ರಾಂತಿಯ ಒಕ್ಕೂಟ ಬಜೆಟ್ 2022-23: ಟಿ.ಆರ್.ಚಂದ್ರಶೇಖರ
ಇದೊಂದು ವಾಗ್ಜಾಲ ಭ್ರಾಂತಿಗಳಿಂದ ಕೂಡಿದ ಮತ್ತು ಮಾತಿನಲ್ಲಿಯೇ ಮನೆ ಕಟ್ಟಿರುವ ಬಜೆಟ್ಟಾಗಿದೆ. ಇಂದು ನಮ್ಮ ಆರ್ಥಿಕತೆಗೆ ಬೇಕಾಗಿದ್ದುದು ಉದ್ಯೋಗ-ಸಾಂದ್ರ ಅಭಿವೃದ್ಧಿ ಯೋಜನೆಯೇ ವಿನಾ ಗತಿಶಕ್ತಿಯಂತಹ ಆಡಳಿತಾತ್ಮಕ ಆಶ್ವಾಸನೆಗಳಲ್ಲ ಅಥವಾ ಜಿಡಿಪಿ ವ್ಯಸನವಲ್ಲ. ಕಾರ್ಪೊರೆಟ್-ಖಾಸಗಿ ವಲಯವನ್ನು ಓಲೈಸುವ-ಪೋಷಿಸುವ ಮತ್ತು ಕಾಂಟಾಕ್ಟ್ಗಿರಿ-ಕಾಮಗಾರಿಗಳಿಂದ ಕೂಡಿದ ಎಲ್ಲ ಯೋಜನೆಗಳು ಗತಿಶಕ್ತಿಯಲ್ಲಿವೆ (ರಸ್ತೆ, ರೈಲ್ವೇ, ವಿಮಾನ ನಿಲ್ದಾಣಗಳು, ಬಂದರುಗಳು, ಸಮೂಹ ಸಾಗಾಣಿಕೆ, ಜಲಸಾರಿಗೆ ಮತ್ತು ಸರಕು-ಸೇವೆಗಳ ಸಾಗಾಣಿಕೆ ಮೂಲಸೌಕರ್ಯ). ಈ ಬಜೆಟ್ಟಿನಿಂದ ಆರ್ಥಿಕ ಪುನಶ್ಚೇತನ ಸಾಧ್ಯವಿಲ್ಲ. ಏಕೆಂದರೆ 2022-23ರ ಸಾರ್ವಜನಿಕ ವೆಚ್ಚವು (ರೂ. 39.44 ಲಕ್ಷಕೋಟಿ) 2022-23ನೆಯ ಸಾಲಿನ ಅಂದಾಜು ಜಿಡಿಪಿಯ ಶೇ.15.29ರಷ್ಟ್ಟಿದ್ದರೆ 2021-22ರಲ್ಲಿ ಇದು ಶೇ.16.24ರಷ್ಟಿತ್ತು.
ಸಾರ್ವಜನಿಕ ವೆಚ್ಚವು 2020-21ರಿಂದ 2021-22ರಲ್ಲಿ ಶೇ.7.44ರಷ್ಟು ಏರಿಕೆಯಾಗಿದ್ದರೆ 2021-22 ಮತ್ತು 2022-23ರಲ್ಲಿನ ಏರಿಕೆ ಕೇವಲ ಶೇ. 4.61. ಸರಿಸುಮಾರು 12 ಕೋಟಿ ಜನರ ಬದುಕಾಗಿರುವ ಎಮ್ಎಸ್ಎಮ್ ಈ ವಲಯಕ್ಕಾಗಲಿ ಅಥವಾ ನಗರ ಪ್ರದೇಶದಲ್ಲಿನ ಕೋಟ್ಯಾಂತರ ವಲಸೆ ಕಾರ್ಮಿಕರ ಉದ್ಯೋಗ ಭದ್ರತೆಗಾಗಲಿ ಬಜೆಟ್ಟಿನಲ್ಲಿ ಯಾವ ಯೋಜನೆಯೂ ಇಲ್ಲ. ಪ.ಜಾ., ಪ.ಪಂ., ಒಬಿಸಿ ಮತ್ತು ಅಲ್ಪಸಂಖ್ಯಾತರ ಹಿತಕಾಯುವ ಬಗ್ಗೆ ಬಜೆಟ್ ಮೌನವಾಗಿದೆ. ಸಣ್ಣ ಪ್ರಮಾಣದಲ್ಲಿ 2021-22ರಲ್ಲಿ ಆರಂಭವಾದ ಅಸಮಾನತೆಯಿಂದ ಕೂಡಿದ ಇಂಗ್ಲಿಷ್ ಅಕ್ಷರ ಕೆ ಆಕಾರದ ಪುನಶ್ಚೇತನವನ್ನು ಎದುರಿಸುವ ಬಗ್ಗೆ ಬಜೆಟ್ಟಿನಲ್ಲಿ ಚಕಾರವಿಲ್ಲ. ಅತ್ಯಂತ ನಿರಾಶಾದಾಯಕ ಬಜೆಟ್ ಇದಾಗಿದೆ.
****
ರೈತರ ವಿರುದ್ಧ ಸೇಡು: ಜಿ.ಎನ್.ನಾಗರಾಜ್
ರೈತರ ಒಂದು ವರ್ಷಕ್ಕೂ ಹೆಚ್ಚು ಕಾಲದ ಸಂಘರ್ಷ ಮೋದಿ ಸರ್ಕಾರ ಮಂಡಿಯೂರಿ ರೈತ ನಾಶಕ ಕಾನೂನುಗಳನ್ನು ಹಿಂತೆಗೆದುಕೊಳ್ಳುವಂತೆ ಮಾಡಿದ್ದಕ್ಕೆ ಬಿಜೆಪಿ ಸರ್ಕಾರದ ೨೦೨೨ರ ಬಜೆಟ್ ಸೇಡು ತೀರಿಸಿಕೊಂಡಂತಿದೆ.
ಒಟ್ಟಾರೆಯಾಗಿ ಕೃಷಿಗೆ ಒಂದು ಲಕ್ಷ ಕೋಟಿಗೂ ಹೆಚ್ಚು ಖೋತಾ ಮಾಡಲಾಗಿದೆ. ಹಿಂದಿನ ಬಜೆಟ್ನ ಪರಿಷ್ಕೃತ ಅಂದಾಜಿನಂತೆ 4,74,750.47 ಕೋಟಿ ರೂ ವೆಚ್ಚ ಮಾಡಲಾಗಿದ್ದರೆ ಈ ವರ್ಷದ ಬಜೆಟ್ನಲ್ಲಿ 3,70,303 ಕೋಟಿ ರೂ ಮಾತ್ರ ನೀಡಲಾಗಿದೆ.
ರೈತರ ಮುಖ್ಯ ಒತ್ತಾಯವಾದ ಬೆಂಬಲ ಬೆಲೆಗೆ ಆಧಾರವಾದ ಗೋಧಿ, ಭತ್ತ ಸಂಗ್ರಹಕ್ಕೆ 2.34 ಕೋಟಿ ರೂ ಮೀಸಲಿಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ಕೊಚ್ಚಿಕೊಳ್ಳುವ ಮೂಲಕ ಜನರಲ್ಲಿ ಭ್ರಮೆ ಹುಟ್ಟಿಸಲು ಹಾಗೂ ತಪ್ಪು ದಾರಿಗೆಳೆಯಲು ಪ್ರಯತ್ನ ಮಾಡಿದ್ದಾರೆ. ಆದರೆ ನಿಜ ಸಂಗತಿ ಎಂದರೆ ಈ ಮೊತ್ತ ಹಿಂದಿನ ಬಜೆಟ್ನಲ್ಲಿ 2.48 ಕೋಟಿಯಷ್ಟಿತ್ತು. ಈ ಯೋಜನೆಯ ಫಲಾನುಭವಿಗಳ ಸಂಖ್ಯೆಯಲ್ಲೂ 34 ಲಕ್ಷ ರೈತರನ್ನು ಕಡಿತ ಮಾಡಲಾಗಿದೆ. ಹೀಗೆ ಬಜೆಟ್ ಕಡಿತ ಮಾಡಿದ್ದನ್ನೇ ಬಹು ದೊಡ್ಡ ಸಾಧನೆ ಎಂದು ಕೊಚ್ಚಿಕೊಳ್ಳುವ ಹೀನ ತಂತ್ರಕ್ಕೆ ಬಿಜೆಪಿ ಕೈ ಹಾಕಿದೆ. ಆಹಾರ ನಿಗಮಕ್ಕೆ ಆಹಾರ ಧಾನ್ಯಗಳನ್ನು ಕೊಳ್ಳುವುದಕ್ಕೆ ನೀಡುವ ಹಣದಲ್ಲಿ ಕೂಡಾ ಶೇ.28ರಷ್ಟು ಕಡಿತ ಮಾಡಲಾಗಿದ್ದರೆ ರಸಗೊಬ್ಬರ ಸಬ್ಸಿಡಿಗೆ ಶೇ.25ರಷ್ಟು ಕಡಿತ ಮಾಡಲಾಗಿದೆ. ಫಸಲ್ ಬಿಮಾ ಯೋಜನೆ, ಪಿಎಂ ಕಿಸಾನ್ ಎಂಬ 6,000 ರೂ ನೀಡುವ ಯೋಜನೆಯಲ್ಲಿಯೂ ಕಡಿತ ಮಾಡಲಾಗಿದೆ. ಇನ್ನೂ ವಿವಿಧ ಯೋಜನೆಗಳಿಗೂ, ಗ್ರಾಮೀಣ ಅಭಿವೃದ್ಧಿ ಯೋಜನೆಗಳಿಗೂ ಹಣ ಕಡಿತ ಮಾಡಲಾಗಿದೆ.
ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕೋವಿಡ್ ಸಮಯದಲ್ಲಿ ಕೃಷಿ ಕೂಲಿಕಾರರ ಹಾಗೂ ಬಡ ರೈತರ ಜೀವನಕ್ಕೆ ಒಂದಿಷ್ಟು ಸಹಾಯ ಮಾಡಿತ್ತು. ಅದಕ್ಕೆ ಕೂಡಾ ಹಿಂದಿನ ವರ್ಷಕ್ಕಿಂತ ಹಣ ಕಡಿತ ಮಾಡಲಾಗಿದೆ. ಉದ್ಯೋಗ ಖಾತರಿ ಯೋಜನೆಯ ಕಾನೂನಿನಂತೆ ಕೃಷಿ ಕೂಲಿಕಾರರಿಗೆ ಒಂದು ವರ್ಷಕ್ಕೆ ನೂರು ದಿನ ಕೆಲಸ ನೀಡಲು 2.64 ಲಕ್ಷ ಕೋಟಿ ರೂ ಹಣ ಬೇಕು. ಆದರೆ ಈಗ ನೀಡಲಾಗಿರುವುದು ಕೇವಲ 73,000 ಕೋಟಿ ರೂ. ಇದರಲ್ಲಿ ಕೂಲಿಕಾರರು ಮಾಡಿದ ಹಿಂದಿನ ವರ್ಷದ ಬಾಕಿ ತೀರಿಸಲು 20,000 ಕೋಟಿ ಹಣ ಬೇಕು. ಕೊನೆಗೆ ಈ ವರ್ಷದ ಕೆಲಸಕ್ಕೆ ಉಳಿಯುವುದೇ ಕೇವಲ 53,000 ಕೋಟಿ.
ಹೀಗಿದೆ ರೈತಪರ, ಕೂಲಿಕಾರರ ಬಜೆಟ್ನ ಪರಿ!
ಇದನ್ನೂ ಓದಿರಿ: ಇಂದಿನ ಬಜೆಟ್ನಲ್ಲಿ ಪ್ರಸ್ತಾಪವಾದ ಡಿಜಿಟಲ್ ರುಪಿ: ಹಾಗೆಂದರೇನು?