ಯಾವುದೇ ಪ್ರಕರಣದ ಆರೋಪಿಗಳ ಆಸ್ತಿಗಳನ್ನು ಬುಲ್ಡೋಝರ್ ಬಳಸಿ ಕೆಡವುದು ಭಾರತದ ಸಂವಿಧಾನದ ಮೇಲೆ ಬುಲ್ಡೋಝರ್ ಚಲಾಯಿಸುವುದಕ್ಕೆ ಸಮಾನ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರು ಹೇಳಿದ್ದಾರೆ.
ಮಹಾರಾಷ್ಟ್ರದ ಪುಣೆಯ ಭಾರತೀಯ ವಿದ್ಯಾಪೀಠದ ಹೊಸ ಕಾನೂನು ಕಾಲೇಜಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿ, “ನ್ಯಾಯಾಲಯಗಳು ಪ್ರಕರಣದ ಬಗ್ಗೆ ಅಂತಿಮ ತೀರ್ಪು ನೀಡುವ ಮುನ್ನವೇ ಆರೋಪಿಗಳ ಮನೆಗಳು ಸೇರಿದಂತೆ ಇತರ ಆಸ್ತಿಗಳನ್ನು ಬುಲ್ಡೋಝರ್ ಬಳಸಿ ಕೆಡವುವ ಪರಿಪಾಠ ಕೆಲ ರಾಜ್ಯಗಳಲ್ಲಿ ಇದೆ. ಇದು ಸಂವಿಧಾನದ ಮೇಲೆ ಬುಲ್ಡೋಝರ್ ಚಲಾಯಿಸಿದಂತೆ. ಕಾನೂನಿನ ಆಳ್ವಿಕೆಯ ಪರಿಕಲ್ಪನೆಯ ನಿರಾಕರಣೆಯಾಗಿದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸದಿದ್ದರೆ, ನಮ್ಮ ನ್ಯಾಯ ವಿತರಣಾ ವ್ಯವಸ್ಥೆಯೇ ನಾಶವಾಗಲಿದೆ” ಎಂದಿದ್ದಾರೆ.
ಬುಲ್ಡೋಝರ್ ಕ್ರಮ ಕಾನೂನುಬಾಹಿರ ಎಂದು ಘೋಷಿಸಿದ ಮತ್ತು ಅಕ್ರಮ ಕಟ್ಟಡಗಳ ತೆರವಿಗೆ ಮಾರ್ಗಸೂಚಿಗಳನ್ನು ಪ್ರಕಟಿಸಿದ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದ ನ್ಯಾಯಮೂರ್ತಿ, “ಈ ವಿಷಯವು ಆರೋಪಿಯ ನ್ಯಾಯಯುತ ವಿಚಾರಣೆಯ ಹಕ್ಕನ್ನು ಮಾತ್ರವಲ್ಲದೆ, ಸಂವಿಧಾನದ ವಿಧಿ 21ರ ಅಡಿಯಲ್ಲಿ ಕಲ್ಪಿಸಲಾದ ಬದುಕುವ ಹಕ್ಕಿನ ಭಾಗವಾಗಿ ಗುರುತಿಸಲ್ಪಟ್ಟ ಆಶ್ರಯದ ಹಕ್ಕನ್ನೂ ಕಸಿದುಕೊಳ್ಳುತ್ತದೆ. ಆರೋಪಿಯ ಮನೆ ಕಡೆವಿದರೆ, ಆತನ ಮುಗ್ಧ ಕುಟುಂಬ ಸದಸ್ಯರು ಕೂಡ ತೊಂದರೆ ಅನುಭವಿಸಬೇಕಾಗುತ್ತದೆ” ಎಂದು ಹೇಳಿದ್ದಾರೆ.
“ಮನೆಯ ಮಾಲೀಕ ಆರೋಪಿ, ಅಪರಾಧಿ ಆಗಿರಬಹುದು. ಆದರೆ, ಆತನ ಜೊತೆಗೆ ತಾಯಿ, ತಂಗಿ, ಹೆಂಡತಿ, ಮಕ್ಕಳು ವಾಸಿಸುತ್ತಾರೆ. ಅವರು ಮಾಡಿದ ತಪ್ಪೇನು? ಮನೆ ಕೆಡವಿದರೆ ಅವರು ಎಲ್ಲಿಗೆ ಹೋಗಬೇಕು? ಅವರ ತಲೆಯ ಮೇಲಿನ ಸೂರು ಕಿತ್ತುಕೊಳ್ಳುವುದು ಎಷ್ಟು ಸರಿ? ಆರೋಪಿ, ಅಪರಾಧಿ ಆದ ತಕ್ಷಣ, ಅವರ ಮನೆ ಕೆಡವಬೇಕು ಎಂದರ್ಥವಲ್ಲ” ಎಂದಿದ್ದಾರೆ.
“ಭಾರತೀಯ ನ್ಯಾಯಾಂಗದಲ್ಲಿ ಕೋರ್ಸ್ ಕರೆಕ್ಷನ್ಗೆ ಸಾಕಷ್ಟು ಅವಕಾಶವಿದೆ ಎಂದ ನ್ಯಾಯಮೂರ್ತಿ ಭುಯಾನ್, ಸುಪ್ರೀಂ ಕೋರ್ಟ್ ಅಂತಿಮ ನ್ಯಾಯಾಲಯವಾಗಿರುವುದರಿಂದ ಅದು ‘ಸುಪ್ರೀಂ’ ಆಗಿದೆ. ಅದರ ಮೇಲೆ ನ್ಯಾಯಾಲಯ ಇದ್ದಿದ್ದರೆ, ಸುಪ್ರೀಂ ಕೋರ್ಟ್ನ ಅನೇಕ ತೀರ್ಪುಗಳನ್ನು ಮರುಪರಿಶೀಲಿಸಲಾಗುತ್ತಿತ್ತು” ಎಂದು ಹೇಳಿದ್ದಾರೆ.
“ನ್ಯಾಯಾಂಗ ನಿರ್ಧಾರಗಳಲ್ಲಿ ಸ್ಥಿರತೆ ಇರಬೇಕು. ಕಾನೂನನ್ನು ದಾವೆ ಹೂಡಿದವರಿಗೆ ಬೇಕಾದಂತೆ ಅನ್ವಯಿಸಲು ಆಗುವುದಿಲ್ಲ. ನಮ್ಮ ಹಕ್ಕು ಆಧಾರಿತ ನ್ಯಾಯಾಶಾಸ್ತ್ರ ಮಾನವ ಹಕ್ಕುಗಳನ್ನು ದೊರಕಿಸಿಕೊಡಬೇಕು. ಅಲ್ಲದೆ, ಹಕ್ಕುಗಳನ್ನು ಕಿತ್ತುಕೊಳ್ಳುವಂತಿರಬಾರದು” ಎಂದು ನ್ಯಾಯಮೂರ್ತಿ ಭುಯಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾನೂನು ವಿದ್ಯಾರ್ಥಿಗಳು ವಿಮರ್ಶಾತ್ಮಕ ಮನಸ್ಥಿತಿಯನ್ನು ಬೆಳೆಸಿಕೊಳ್ಳುವಂತೆ ನ್ಯಾಯಮೂರ್ತಿ ಭುಯಾನ್ ಕಿವಿಮಾತು ಹೇಳಿದ್ದು, ನ್ಯಾಯಾಂಗದ ನಿರ್ಧಾರಗಳನ್ನು ಪ್ರಶ್ನಿಸುವ ಮತ್ತು ವಿಶ್ಲೇಷಿಸುವುದರ ಮಹತ್ವವನ್ನು ಒತ್ತಿ ಹೇಳಿದ್ದಾರೆ.
“ಕಾನೂನು ವಿದ್ಯಾರ್ಥಿಗಳಾದ ನಾವು ವಿಮರ್ಶಾತ್ಮಕ ಮನಸ್ಥಿತಿ, ಪ್ರಶ್ನಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಸುಪ್ರೀಂ ಕೋರ್ಟ್ನ ತೀರ್ಪುಗಳು ಸೇರಿದಂತೆ ಬರುವ ಎಲ್ಲವನ್ನೂ ನಿರ್ಲಕ್ಷಿಸಬಾರದು. ನಾವು ತೀರ್ಪುಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಬೇಕು. ಸಹಜವಾಗಿ, ತೀರ್ಪಿನ ಟೀಕೆ ದೃಢವಾದ ಕಾನೂನು ಆಧಾರದ ಮೇಲೆ ಇರಬೇಕು. ಅಲ್ಲದೆ ಯಾವುದೇ ಉದ್ದೇಶದಿಂದ ಖಂಡಿಸಲು ಸಾಧ್ಯವಿಲ್ಲ. ಪ್ರಶ್ನಿಸುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಿ. ಅನೇಕ ತೀರ್ಪುಗಳನ್ನು ನಾವು ವಿಮರ್ಶಾತ್ಮಕವಾಗಿ ಪರೀಕ್ಷಿಸಬೇಕು” ಎಂದು ನ್ಯಾಯಮೂರ್ತಿ ಭುಯಾನ್ ತಿಳಿಸಿದ್ದಾರೆ.
ನ್ಯಾಯಾಲಯದಲ್ಲಿ ಅಪರಾಧ ಸಾಬೀತಾಗುವ ಮುನ್ನವೇ ಆರೋಪಿಗಳ ಮನೆಗಳನ್ನು ಬುಲ್ಡೋಝರ್ ಬಳಸಿ ಕೆಡವುವ ಕ್ರಮವನ್ನು 2017ರಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಪ್ರಾರಂಭಿಸಿತು. ಯೋಗಿ ಸರ್ಕಾರ ಇದುವರೆಗೆ ಅನೇಕ ಆರೋಪಿಗಳ ಮನೆಗಳನ್ನು ಕೆಡವಿದೆ. ಇಂತಹ ಹಲವು ಪ್ರಕರಣಗಳಲ್ಲಿ ಹಲವು ಬಾರಿ ಸುಪ್ರೀಂ ಕೋರ್ಟ್ನಿಂದ ಛೀಮಾರಿ ಹಾಕಿಸಿಕೊಂಡಿದೆ.
ಕಳೆದ ವರ್ಷದ (2024) ರ ನವೆಂಬರ್ 13ರಂದು ಈ ಸಂಬಂಧ ತೀರ್ಪೊಂದನ್ನು ಪ್ರಕಟಿಸಿರುವ ಸುಪ್ರೀಂ ಕೋರ್ಟ್ “ಕಾರ್ಯಾಂಗ ನ್ಯಾಯಾಧೀಶರಾಗಲು ಸಾಧ್ಯವಿಲ್ಲ. ನ್ಯಾಯದ ಹೆಸರಿನಲ್ಲಿ ಆರೋಪಿಯನ್ನು ಅಪರಾಧಿ ಎಂದು ಘೋಷಿಸುವುದು ಮತ್ತು ಅವರ ಕಟ್ಟಡಗಳನ್ನು ಕೆಡುವುದು ಅಸಂವಿಧಾನಿಕ” ಎಂದು ಹೇಳಿದೆ. ಅಕ್ರಮ ಕಟ್ಟಡಗಳನ್ನು ಕೆಡವುದಕ್ಕೆ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಆದರೆ, ಉತ್ತರ ಪ್ರದೇಶ ಸರ್ಕಾರ ಆರೋಪಿಗಳ ಮನೆ ಕೆಡವುವ ಪದ್ದತಿಯನ್ನು ಮುಂದುವರೆಸಿದೆ. ನಾಗ್ಪುರ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಎಂದು ಬಂಧಿಸಲಾಗಿರುವ ಅಲ್ಪಸಂಖ್ಯಾತ ಪ್ರಜಾಸತ್ತಾತ್ಮಕ ಪಕ್ಷದ (MDP) ನಾಯಕ ಫಾಹೀಮ್ ಖಾನ್ ಅವರ ಮನೆಯನ್ನು ಸೋಮವಾರ (ಮಾ.24) ಅಧಿಕಾರಿಗಳು ಬುಲ್ಡೋಝರ್ ಮೂಲಕ ಧ್ವಂಸಗೊಳಿಸಿದ್ದಾರೆ.
ಮನೆ ಕೆಡವುದಕ್ಕೆ ‘ಅಕ್ರಮ ನಿರ್ಮಾಣ’ ಎಂಬ ಕಾರಣವನ್ನು ಸರ್ಕಾರ ನೀಡುತ್ತದೆ. ಯಾವುದಾದರು ಪ್ರಕರಣದ ಆರೋಪಿಗಳಾದ ತಕ್ಷಣ ಅವರ ಕಟ್ಟಡ ಅಕ್ರಮವಾಗುವುದು ಹೇಗೆ? ಅಕ್ರಮವಾಗಿದ್ದರೆ ಅಧಿಕಾರಿಗಳು ಮೊದಲೇ ಕಾನೂನು ಪ್ರಕಾರ ತೆರವುಗೊಳಿಸಬೇಕಿತ್ತಲ್ಲವೇ? ಎಂಬ ಪ್ರಶ್ನೆಗಳು ಸಾಮಾನ್ಯವಾಗಿ ಸಾರ್ವಜನಿಕ ವಲಯದಲ್ಲಿದೆ.
ನಾಗಪುರ ಹಿಂಸಾಚಾರ ಪ್ರಕರಣ: ಆರೋಪಿ ಫಾಹೀಮ್ ಖಾನ್ ಮನೆ ಧ್ವಂಸಗೊಳಿಸಿದ ಅಧಿಕಾರಿಗಳು


