ಕೊರೊನಾ ಸಾಂಕ್ರಾಮಿಕ ರೋಗ ಮತ್ತು ಹಲವು ಮಸೂದೆಗಳನ್ನು ಚರ್ಚಿಸಲು ರಾಜ್ಯ ವಿಧಾನಸಭೆಯ ಅಧಿವೇಶನ ಪ್ರಾರಂಭಿಸುವಂತೆ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ರಾಜ್ಯಪಾಲರಾದ ಕಾಳ್ರಾಜ್ ಮಿಶ್ರಾ ಅವರಿಗೆ ಮನವಿ ಮಾಡಿದ್ದಾರೆ.
ಆಶ್ಚರ್ಯಕರವಾಗಿ ಬಹುಮತ ಸಾಬೀತುಪಡಿಸುವ ವಿಚಾರವನ್ನು ಕೈಬಿಟ್ಟಿರುವ ಅವರು, ಜುಲೈ 31 ರಿಂದ ರಾಜ್ಯ ವಿಧಾನಸಭೆಯ ಅಧಿವೇಶನವನ್ನು ಪ್ರಾರಂಭಿಸುವಂತೆ ಹೊಸ ಪ್ರಸ್ತಾಪವನ್ನು ಸಲ್ಲಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರೊಡನೆ ಹಲವು ಕಾಂಗ್ರೆಸ್ ಶಾಸಕರು ಬಂಡಾಯವೆದ್ದ ನಂತರ ರಾಜಸ್ಥಾನ ಕಾಂಗ್ರೆಸ್ ಸರ್ಕಾರವು ರಾಜಕೀಯ ಬಿಕ್ಕಟ್ಟು ಎದುರಿಸುತ್ತಿದೆ.
ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಕೇಂದ್ರ ಸರ್ಕಾರದ ಒತ್ತಡದಿಂದಾಗಿ ರಾಜ್ಯಪಾಲರು ಅಧಿವೇಶನ ನಡೆಸಲು ವಿಳಂಬ ಮಾಡುತ್ತಿದ್ದಾರೆ ಎಂದು ಗೆಹ್ಲೋಟ್ ಪರ ಶಾಸಕರು ಆರೋಪಿಸಿದ್ದಾರೆ.
ಸದನವನ್ನು ಕರೆಯಲು ಸಾಂವಿಧಾನಿಕ ಮಾನದಂಡಗಳನ್ನು ಅನುಸರಿಸಬೇಕು ಎಂದು ಕಾಳ್ರಾಜ್ ಮಿಶ್ರಾ ಈ ಆರೋಪವನ್ನು ನಿರಾಕರಿಸಿದ್ದಾರೆ.
ಅಧಿವೇಶನ ನಡೆಸುವಂತೆ ಈ ಹಿಂದೆ ಕಾಂಗ್ರೆಸ್ ಸರ್ಕಾರ ಕಳುಹಿಸಿದ ಹಲವು ಪ್ರಸ್ತಾಪಗಳನ್ನು ರಾಜ್ಯಪಾಲರು ತಿರಸ್ಕರಿಸಿದ್ದರು. ಕೊರೊನಾ ಸಾಂಕ್ರಾಮಿಕದ ವೇಳೆ ಸದನ ನಡೆಸಲು ಸಾಧ್ಯವಿಲ್ಲ ಎಂಬ ಕಾರಣ ನೀಡಿದ್ದರು.
ಮುಖ್ಯಮಂತ್ರಿ ಗೆಹ್ಲೋಟ್ ಅವರನ್ನು ಬೆಂಬಲಿಸುವ ಶಾಸಕರು ವಿಶೇಷ ಸಭೆಗಾಗಿ ತಮ್ಮ ಬೇಡಿಕೆಯನ್ನು ಮುಂದಿಡಲು ರಾಜ ಭವನದಲ್ಲಿ ಶುಕ್ರವಾರ ಐದು ಗಂಟೆಗಳ ಕಾಲ ಪ್ರತಿಭಟನೆ ನಡೆಸಿದ್ದರು.
ಸ್ಪೀಕರ್ ಸಿಪಿ ಜೋಶಿ ಅವರನ್ನು ಹೊರತುಪಡಿಸಿ ಗೆಹ್ಲೋಟ್ಗೆ 101 ಸದಸ್ಯರ ಬೆಂಬಲವಿದೆ. ಪೈಲಟ್ಗೆ 18 ಕಾಂಗ್ರೆಸ್ ಶಾಸಕರು ಮತ್ತು ಮೂವರು ಸ್ವತಂತ್ರರ ಬೆಂಬಲವಿದೆ.
ಬಿಜೆಪಿ ಮತ್ತು ರಾಷ್ಟ್ರ ಲೋಕ್ ತಾಂತ್ರಿಕ್ ಮೈತ್ರಿ ಪಕ್ಷಕ್ಕೆ 75 ಸ್ಥಾನಗಳಿವೆ. ಈ ಮೈತ್ರಿಕೂಟಕ್ಕೆ ಸಚಿನ್ ಪೈಲಟ್ ಜೊತೆಗಿರುವ ಶಾಸಕರ ಸಂಖ್ಯೆಯನ್ನು ಸೇರಿಸಿದರೆ, ಅದು ಅವರ ಮೈತ್ರಿ ಪಕ್ಷದ ಶಾಸಕರ ಮೊತ್ತವು 97 ಆಗುತ್ತದೆ.
ಗೆಹ್ಲೋಟ್ ಕಡೆಯಿಂದ ಪೈಲಟ್ ಕಡೆಗೆ ಅಥವಾ ಬಿಜೆಪಿಗೆ ಮೂರು ಸದಸ್ಯರ ಹಾರುವಿಕೆಯು ವಿಶ್ವಾಸ ಮತ ಪರೀಕ್ಷೆಯ ಸಂದರ್ಭದಲ್ಲಿ ಸರ್ಕಾರ ಬೀಳಲು ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಅಧಿವೇಶನ ಕರೆಯಲು ವಿಳಂಬ: ಪ್ರಧಾನಿ ನಿವಾಸಕ್ಕೆ ಮುತ್ತಿಗೆ- ಗೆಹ್ಲೋಟ್ ಎಚ್ಚರಿಕೆ


