ಕೇಸರಿ ಶಾಲು- ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಕ್ಕಳ ಹಕ್ಕುಗಳು ಉಲ್ಲಂಘನೆಯಾಗುತ್ತಿರುವ ಸಂಬಂಧ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಎಂ.ಎಲ್.ಪರಶುರಾಮ್ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗವು, ಇತ್ತೀಚಿನ ವಿದ್ಯಮಾನಗಳನ್ನು ಗಮನಿಸುತ್ತಿದೆ. ಮಕ್ಕಳ ನಡುವೆ ನಡೆಯುತ್ತಿರುವ ಸಂಘರ್ಷಗಳನ್ನು ಆಯೋಗವು ಗಮನಿಸುತ್ತಿದ್ದು, ಮಕ್ಕಳ ವಿಚಾರದಲ್ಲಿ ಇದು ಸರಿಯಲ್ಲ ಎಂದು ಆಯೋಗವು ತಿಳಿ-ಹೇಳಲು ಇಚ್ಛಿಸುತ್ತದೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣವು ಇದ್ದಾಗಿಯೂ ಕೂಡ, ಕೆಲವರು ಮಕ್ಕಳ ಹಿತಾಸಕ್ತಿಯನ್ನೇ ಮರೆತಿರುವುದು ವಿಷಾದನೀಯ. ಮಕ್ಕಳ ಇಚ್ಚೆಗೆ ವಿರುದ್ಧವಾಗಿ ಅವರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದು, ಪ್ರಚೋದನಕಾರಿಯಾದ ಅಂತಹ ಮಾತುಗಳನ್ನು ಮಕ್ಕಳ ಮೆದುಳಿಗೆ ರವಾನಿಸಿ ಮಕ್ಕಳ ಬಾಯಿಂದ ಹೇಳಿಸುವುದು ಅಕ್ಷಮ್ಯ ಎಂದಿದ್ದಾರೆ.
ಈ ಮೇಲ್ಕಂಡ ವಿಚಾರಕ್ಕೆ ಪೂರಕವಾಗಿ ಬಾಲನ್ಯಾಯ ಕಾಯ್ದೆ ಸ್ಪಷ್ಟ ಉಲ್ಲಂಘನೆಯಾಗಿದೆ. ಬಾಲನ್ಯಾಯ ಕಾಯ್ದೆ 2015ರ ಅನ್ವಯ, ಮಕ್ಕಳ ಪಾಲನೆ ಮತ್ತು ಸಂರಕ್ಷಣೆಯನ್ನು ಶಾಲೆಗಳಲ್ಲಿ, ಸಂಸ್ಥೆಗಳಲ್ಲಿ ಮಾಡುವುದು ಆದ್ಯ ಕರ್ತವ್ಯವಾಗಿದೆ. ಬಾಲನ್ಯಾಯ ಕಾಯ್ದೆ ಕಾಲಂ 9ರಲ್ಲಿ ಹೇಳಿರುವಂತೆ ಮಗುವಿನ ಅತ್ಯುತ್ತಮ ಹಿತಾಶಕ್ತಿಯನ್ನು ಕಾಪಾಡುವುದರ ಜೊತೆಗೆ ಮಗುವಿನ ಮೂಲಭೂತ ಹಕ್ಕುಗಳು ಉಲ್ಲಂಘನೆ ಆಗಕೂಡದು. ಹಾಗೆಯೇ ಬಾಲನ್ಯಾಯ ಕಾಯ್ದೆ 2015 ಸೆಕ್ಷನ್ 14(x)ರ ಪ್ರಕಾರ ಮಗುವಿನ ಸಂರಕ್ಷಣೆಯನ್ನು ಅನೀತಿಯ ಲಾಭಕ್ಕಾಗಿ ಮಗುವನ್ನು ಹಿಂಸೆಗೆ ಒಳಪಡಿಸಬಾರದು ಎಂದು ಎಚ್ಚರಿಸಿದ್ದಾರೆ.
ಬಾಲನ್ಯಾಯ ಕಾಯ್ದೆ 2015 ಸೆಕ್ಷನ್ 15ರ ಅನ್ವಯ ಶಿಶು – ಸ್ನೇಹ ( child friendly ) ರೀತಿಯಲ್ಲಿ ಶಾಲೆಗಳು ಇರಬೇಕಾಗಿದೆ. ಅಭ್ಯಾಸ, ನಡತೆ, ನಡವಳಿಕೆ, ಮನಪ್ರವೃತ್ತಿ, ಹೊಂದಿಕೊಳ್ಳುವ ಪರಿಸರ ವ್ಯವಸ್ಥೆಯನ್ನು ಮಗುವಿಗೆ ನೀಡುವ ರೀತಿಯಲ್ಲಿ ವ್ಯವಸ್ಥೆಗಳು ಕಾರ್ಯನಿರ್ವಹಿಸಬೇಕಾಗಿದೆ. ಬಾಲನ್ಯಾಯ ಕಾಯ್ದೆ 2015 ಸೆಕ್ಷನ್ 76 (1) ಮಗುವಿಗೆ ಕಿರುಕುಳ ಅಥವಾ ಶೋಷಣೆ ಉಂಟು ಮಾಡಬಾರದೆಂದು ತಿಳಿಸುತ್ತದೆ. ಮಕ್ಕಳು ಶಾಲೆಗೆ ಹೋಗುವುದಕ್ಕೆ ಭಯದ ವಾತಾವರಣ ನಿರ್ಮಾಣವಾಗಿರುವುದು ಭಾರತದ ಸಂಸ್ಕೃತಿಗೆ ಶೋಭೆ ತರುವಂತದ್ದಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತೊಡುವ ಬಟ್ಟೆಗಳಿಗಿಂತ, ಉಣ್ಣುವ ತಟ್ಟೆಗಳು ಬರಿದಾಗಿ, ಹಸಿದ ಹೊಟ್ಟೆಯಿಂದ ಬರುವ ಮಕ್ಕಳ ಯೋಗ-ಕ್ಷೇಮವನ್ನು ನಾಗರಿಕ ಪ್ರಜ್ಞೆಯೊಡನೆ ಸರ್ವರು ತತಕ್ಷಣ ನೋಡಬೇಕಾಗಿದೆ. ಪಳಪಳ ಒಳೆಯುವ ಬೂಟುಗಳು, ಇಸ್ತ್ರಿ ತೀಡಿದ ಬಟ್ಟೆಗಳು, ವಾಹನದಲ್ಲಿ ಶಾಲೆಗೆ ಬಂದು ಹಿಂತಿರುಗುವ ವಿದ್ಯಾರ್ಥಿಗಳು, ಪ್ರತಿಯೊಂದು ಶಾಲೆಯಲ್ಲೂ ಭಿನ್ನ- ಭಿನ್ನ ವಸ್ತ್ರಸಂಹಿತೆ ಇರುವಾಗ, ಮಕ್ಕಳು ತಮಗಿಷ್ಟವಾದ್ದದನ್ನು ತೋಡುತ್ತಿರುವಾಗ ನ್ಯಾಯಾಲಯದಲ್ಲಿ ಪ್ರಕರಣ ಇದ್ದಾಗಿಯೂ ವಿನಾಕಾರಣ, ಇದುವರೆಗೂ ಇಲ್ಲದ ಭಿನ್ನ ಕಾರಣಗಳನ್ನು ಮಕ್ಕಳ ವಿಷಯದಲ್ಲಿ ನೋಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮೊಹಮ್ಮದ್ ಪೈಗಂಬರ್, ಕ್ರೈಸ್ತ, ಕೃಷ್ಣ, ರಾಮನ ವಿಚಾರಗಳು ಪಠ್ಯದಲ್ಲಿ ತತ್ವಗಳು ಆಗಿರುವಾಗ, ವಿವಿಧತೆಯಲ್ಲಿ ಏಕತೆಯಿಂದ ನಾವು ಸಮಬಾಳ್ವೆಯ ಸಮಾನತೆಯಿಂದ ಬಾಳಬೇಕಾಗಿದೆ. ಮಕ್ಕಳ ಮೇಲೆ ನಡೆಯುವ ಶೋಷಣೆಯ ವಿಚಾರಕ್ಕೆ ಸಂಬಂಧಿಸಿದಂತೆ , ಮಕ್ಕಳ ಹಕ್ಕುಗಳ ಉಲ್ಲಂಘನೆ ವಿಚಾರದಲ್ಲಾಗಲಿ, ಮಕ್ಕಳಿಗೆ ಸಂಬಂಧಿಸಿದ ವಿಚಾರಕ್ಕೆ ಪೂರಕವಾದ ವಿಷಯಗಳು ಇದ್ದರೆ ಮಕ್ಕಳ ಸಹಾಯವಾಣಿ-1098 ಕರೆಮಾಡಿ ತಿಳಿಸುವುದು, ಆಯಾ ಜಿಲ್ಲೆಯ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಗಳಿಗೆ ಮಾಹಿತಿ ತಿಳಿಸುವುದು, ಜಿಲ್ಲೆಯ ವಿಶೇಷ ಪೊಲೀಸ್ ಘಟಕಕ್ಕೆ ಮಾಹಿತಿ ರವಾನಿಸಬೇಕು ಎಂದು ಈ ಮೂಲಕ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯನಾಗಿ ತಿಳಿಸುತ್ತೇನೆ ಎಂದು ಅವರು ಪತ್ರಿಕಾ ಹೇಳಿಕೆ ಹೊರಡಿಸಿದ್ದಾರೆ.
ಈ ಪ್ರತಿಯನ್ನು ಆಯೋಗದ ಅಧ್ಯಕ್ಷರಿಗೆ ಹಾಗೂ ಕಾರ್ಯದರ್ಶಿಯವರಿಗೆ ಲಗತ್ತಿಸಿದ್ದಾರೆ.
ಇದನ್ನೂ ಓದಿರಿ: ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದರೆ ಆಯೋಗ ಸುಮ್ಮನೇ ಕೂರಲ್ಲ: ಮಾಧ್ಯಮಗಳಿಗೆ ಎಚ್ಚರಿಕೆ
ಎಲ್ಲಿದ್ರು ಇವರೆಲ್ಲ ಇಷ್ಟು ದಿನ ನಾಚಿಕೆ ಆಗ್ಬೇಕು ಇವರ ಜೀವನಕ್ಕೆ