Homeಕರ್ನಾಟಕಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದರೆ ಆಯೋಗ ಸುಮ್ಮನೇ ಕೂರಲ್ಲ: ಮಾಧ್ಯಮಗಳಿಗೆ ಎಚ್ಚರಿಕೆ

ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿದರೆ ಆಯೋಗ ಸುಮ್ಮನೇ ಕೂರಲ್ಲ: ಮಾಧ್ಯಮಗಳಿಗೆ ಎಚ್ಚರಿಕೆ

ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ ವರದಿಗಳನ್ನು ಮಾಡುತ್ತಿರುವ ಮಾಧ್ಯಮಗಳು ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿವೆ. ತಡವಾಗಿಯಾದರೂ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಎಚ್ಚೆತ್ತುಕೊಂಡಿದೆ.

- Advertisement -
- Advertisement -

ಹಿಜಾಬ್‌ ಹಾಗೂ ಕೇಸರಿ ಶಾಲು ವಿವಾದಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳು ಮಾಡುತ್ತಿರುವ ವರದಿಗಳಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದು ಸ್ಪಷ್ಟವಾಗುತ್ತಿದೆ. ದಿನದಿಂದ ದಿನಕ್ಕೆ ಪ್ರಕರಣ ದೊಡ್ಡದಾಗುತ್ತಿದ್ದರೂ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಕೆಎಸ್‌ಸಿಪಿಸಿಆರ್‌) ಕಣ್ಣು ಮುಚ್ಚಿ ಕುಳಿತಿದೆಯೇ? ಅಧ್ಯಕ್ಷರು, ಸದಸ್ಯರು ಏನು ಮಾಡುತ್ತಿದ್ದಾರೆ? ಎಂಬ ಪ್ರಶ್ನೆಗಳು ಸಹಜವಾಗಿ ಮೂಡಿವೆ.

ಈ ಸಂಬಂಧ ಮಕ್ಕಳ ಹಕ್ಕುಗಳ ಆಯೋಗವನ್ನು ‘ನಾನುಗೌರಿ.ಕಾಂ’ ಸಂಪರ್ಕಿಸಿತು. ರಾಜ್ಯದಲ್ಲಾಗುತ್ತಿರುವ ಮಕ್ಕಳ ಹಕ್ಕುಗಳ ಉಲ್ಲಂಘನೆಗಳ ಕುರಿತು ಆಯೋಗದ ಸದಸ್ಯರು ಸಂಬಂಧಪಟ್ಟ ವಾಟ್ಸ್‌ಆಪ್‌ ಗ್ರೂಪ್‌ನಲ್ಲಿ ಅಧ್ಯಕ್ಷರೊಂದಿಗೆ ಚರ್ಚಿಸಿರುವುದು ತಿಳಿದುಬಂದಿದೆ. ಆದರೂ ಕ್ರಮ ಜರುಗಿಸುವಲ್ಲಿ ಆಯೋಗದ ಅಧ್ಯಕ್ಷರು ವಿಳಂಬ ಮಾಡಿರುವುದು ಮೇಲುನೋಟಕ್ಕೆ ಕಂಡುಬರುತ್ತದೆ.

ಆಯೋಗದ ಅಧ್ಯಕ್ಷರಾದ ಡಾ.ಜಯಲಕ್ಷ್ಮಿ ಅವರು ಪ್ರತಿಕ್ರಿಯೆ ನೀಡಿ, “ಕಾನೂನು ಸಲಹೆಗಾರರ ಬಳಿ ಮಾತನಾಡುತ್ತಿದ್ದೇವೆ. ಹೈಕೋರ್ಟ್‌ನಲ್ಲಿ ಕೇಸ್‌ ಇರುವಾಗ ನಾವು ಅಧಿಕೃತವಾಗಿ ಯಾವುದೇ ಹೇಳಿಕೆಯನ್ನು ಕೊಡಲು ಬರುವುದಿಲ್ಲ. ಆಯೋಗಕ್ಕೂ ಕೆಲವು ಮಿತಿಗಳಿವೆ” ಎಂದು ಹೇಳಿದರು.

ವಿವಾದಿತ ಕಾಲೇಜುಗಳಿಗೆ ಮಾತ್ರ ಅನ್ವಯವಾಗುವ ಹೈಕೋರ್ಟ್ ಆದೇಶವನ್ನು ಇಡೀ ರಾಜ್ಯದ ಎಲ್ಲ ಪ್ರೌಢಶಾಲೆ, ಕಾಲೇಜುಗಳಿಗೂ ಅನ್ವಯವಾಗುತ್ತದೆ ಎಂಬಂತೆ ಬಿಂಬಿಸಿತ್ತಾ ಮಾಧ್ಯಮಗಳು ತೋರಿಸುತ್ತಿವೆ. ಹಿಜಾಬ್ ಕೇಸರಿ ಶಾಲು ವಿವಾದವನ್ನು ಪಕ್ಕಕ್ಕಿಟ್ಟು ನೋಡಿದರೂ ಇಲ್ಲಿ ಮಾಧ್ಯಮಗಳು ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸುತ್ತಿರುವುದು ಸ್ಪಷ್ಟ ಎಂಬ ಅಂಶವನ್ನು ಅಧ್ಯಕ್ಷರ ಗಮನಕ್ಕೆ ತರಲಾಯಿತು.

ಇದನ್ನೂ ಓದಿರಿ: ಉಡುಪಿ: ಎಂಜಿಎಂ ವಿದ್ಯಾರ್ಥಿಗಳನ್ನು ಹಿಂಜಾವೇ, ಬಿಜೆಪಿ ಪ್ರಚೋದಿಸಿದ್ದು ಹೀಗೆ…

“ಮಾಧ್ಯಮಗಳಿಗೂ ಮಕ್ಕಳ ಹಕ್ಕುಗಳ ಕುರಿತು ಎಚ್ಚರಿಕೆ ಇರಬೇಕು. ಮಕ್ಕಳ ಹಕ್ಕುಗಳ ಜಿಲ್ಲಾ ಪ್ರತಿನಿಧಿಗಳಿಂದ ಅಧಿಕೃತ ಮಾಹಿತಿಗಳು ಬಂದಿಲ್ಲ. ಮಗುವನ್ನು ಓಡಿಸಿಕೊಂಡು ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಒಂದು ವಿಡಿಯೊ ಬಂದ ತಕ್ಷಣ ಯಾರ ಮೇಲೆ ಸುಮೊಟೊ ಕೇಸ್‌ ದಾಖಲಿಸಬೇಕು ಹೇಳಿ? ಹೆಸರು ಕೊಡಿ, ನಾಳೆಯೇ ಅವರನ್ನು ಇಲ್ಲಿಗೆ ಕರೆಸಿಕೊಳ್ಳುತ್ತೇವೆ” ಎಂದರು.

“ಅಂಗೈ ಹುಣ್ಣಿಗೆ ಕನ್ನಡಿ ಬೇಕೆ? ಎಲ್ಲರಿಗೂ ಕಾಣಿಸುತ್ತಿದೆ, ಮಕ್ಕಳ ಹಕ್ಕುಗಳ ಆಯೋಗಕ್ಕೆ ಕಾಣಿಸುವುದಿಲ್ಲವೆ?” ಎಂದು ಪ್ರಶ್ನಿಸಲಾಯಿತು.

“ಗಾದೆ ಮಾತನ್ನು ಎಲ್ಲರೂ ಹೇಳುತ್ತಾರೆ. ಹೆಣ್ಣು ಮಗುವನ್ನು ಓಡಿಸಿಕೊಂಡು ಹೋದನೆಂದ ತಕ್ಷಣ- ನಾವು ಯಾರ ಮೇಲೆ ಪ್ರಕರಣ ದಾಖಲಿಸಬೇಕು ಹೇಳಿ? ಅವರ ವಿವರಗಳನ್ನು ಕಲೆಹಾಕುತ್ತೇವೆ” ಎಂದರು.

“ಈ ಮಕ್ಕಳಿಗೆ ಪರೀಕ್ಷೆ ಬೇಡವಂತೆ, ಹಿಜಾಬ್ ಬೇಕಂತೆ ಎಂದು ದೊಡ್ಡ ದೊಡ್ಡ ಮಾಧ್ಯಮಗಳ ಸಂಪಾದಕರೂ ಮಾತನಾಡುತ್ತಿದ್ದಾರೆ. ಮಕ್ಕಳ ವಿರುದ್ಧ ಹೀಗೆ ದ್ವೇಷ ಸೃಷ್ಟಿಸಲು ಇವರಿಗೆ ಯಾವ ಹಕ್ಕಿದೆ?” ಎಂದು ಪ್ರಶ್ನೆಸಲಾಯಿತು.

“ಅವರಿಗೆ ಯಾವುದೇ ಹಕ್ಕಿಲ್ಲ” ಎಂದು ಆಯೋಗದ ಅಧ್ಯಕ್ಷರು ಸ್ಪಷ್ಟಪಡಿಸಿದರು.

“ಇಷ್ಟೆಲ್ಲ ಆದರೂ ಮಕ್ಕಳ ಹಕ್ಕುಗಳ ಆಯೋಗ ಒಂದು ಹೇಳಿಕೆಯನ್ನೂ ನೀಡುವುದಿಲ್ಲ?” ಎಂದು ಕೇಳಿದರೆ, “ಏನು ಹೇಳಿಕೆ ನೀಡಬೇಕೆಂದು ನೀವೇ ಹೇಳಿ” ಎಂದರು.

“ನಾವು ಹೇಳುವುದಲ್ಲ. ನೀವು ಅದನ್ನು ಗಮನಿಸಬೇಕಲ್ಲ?” ಎಂದು ಪ್ರಶ್ನಿಸಿದಾಗ,  “ನಾವು ಸೂಕ್ಷ್ಮವಾಗಿ ಗಮನಿಸುತ್ತಲೇ ಇದ್ದೇವೆ. ತುಂಬಾ ಸೂಕ್ಷ್ಮವಾದ ವಿಚಾರವಿದು. ಮಕ್ಕಳನ್ನು ಟಾರ್ಗೆಟ್‌ ಮಾಡಲು ಯಾವುದೇ ಅಧಿಕಾರವಿಲ್ಲ. ನಿನ್ನೆ ಒಂದು ವಿಡಿಯೊ ವೈರಲ್ ಆಗಿದೆ. ಪರಿಶೀಲಿಸಲು ಹೇಳಿದ್ದೇವೆ” ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿರಿ: ಹಿಜಾಬ್ ಧರಿಸಿದ ಪುಟಾಣಿಯನ್ನು ಓಡಿಸಿಕೊಂಡು ಹೋಗುತ್ತಿರುವ ವಿಡಿಯೊ ವೈರಲ್‌

“ಇದೊಂದೇ ಪ್ರಕರಣವಲ್ಲ, ಮಕ್ಕಳ ಹಕ್ಕುಗಳನ್ನು ಹಲವು ಮಾಧ್ಯಮಗಳು ಉಲ್ಲಂಘಿಸಿವೆ” ಎಂದು ಅವರ ಗಮನಕ್ಕೆ ತರಲಾಯಿತು. “ಮಕ್ಕಳ ಹಕ್ಕುಗಳ ಆಯೋಗ ಈ ರೀತಿಯ ವರದಿಗಳ ವಿರುದ್ಧ ಕ್ರಮ ಜರುಗಿಸಲಿದೆ” ಎಂದು ಅಧ್ಯಕ್ಷರು ಎಚ್ಚರಿಸಿದ್ದಾರೆ.

ಆಯೋಗ ಸುಮ್ಮನೆ ಕುಳಿತು ನೋಡುವುದಿಲ್ಲ: ಪರಶುರಾಮ್‌

ನಾನುಗೌರಿ.ಕಾಂ ಜೊತೆ ಮಾತನಾಡಿದ ಆಯೋಗದ ಸದಸ್ಯರಾದ ಪರಶುರಾಮ್‌, “ಹಿಜಾಬ್‌ ವಿಚಾರ ಆಗಿರಲಿ, ಸಮವಸ್ತ್ರದ ವಿಚಾರವಾಗಿರಲಿ, ಸರ್ಕಾರವೇ ತೀರ್ಮಾನ ತೆಗೆದುಕೊಳ್ಳದೆ ಇರುವ ಸಂದರ್ಭದಲ್ಲಿ, ನ್ಯಾಯಾಲಯದಲ್ಲಿ ಪ್ರಕರಣ ಇರುವಾಗ ಮಕ್ಕಳನ್ನು ಪೀಡಿಸಬಾರದು. ಹೀಗೆ ಮಾಡಿದರೆ ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆಯ ಉಲ್ಲಂಘನೆಯಾಗುತ್ತದೆ. ಈ ಬೆಳವಣಿಗೆಗಳನ್ನು ಮಕ್ಕಳ ಮೇಲಿನ ಕ್ರೌರ್ಯ ಎಂದೇ ಭಾವಿಸಲಾಗುವುದು” ಎಂದು ತಿಳಿಸಿದರು.

“ಉಡುವ ಬಟ್ಟೆಗಿಂತ ಉಣ್ಣುವ ತಟ್ಟೆಗಳು ಬರಿದಾಗಿವೆ. ಹಸಿವು ಹೊಟ್ಟೆಯಲ್ಲಿ ಬರುವ ಮಕ್ಕಳ ಯೋಗಕ್ಷೇಮವನ್ನು ತತ್‌ಕ್ಷಣ ನೋಡಬೇಕಾಗಿದೆ. ಪ್ರತಿಯೊಂದು ಶಾಲೆಯಲ್ಲೂ ಭಿನ್ನ ರೂಪದ ವಸ್ತ್ರ ಸಂಹಿತೆ ಇರುವಾಗ ತಮ್ಮ ಮಕ್ಕಳು ತಮಗೆ ಇಷ್ಟವಾದದ್ದನ್ನು ತೊಡುತ್ತಿರುವಾಗ ಇದುವರೆಗೆ ಇಲ್ಲದ ಭಿನ್ನ ಕಾರಣವನ್ನು ಮಕ್ಕಳ ವಿಷಯದಲ್ಲಿ ತರುವುದು ಸರಿಯಲ್ಲ” ಎಂದು ಅಭಿಪ್ರಾಯಪಡುತ್ತಾರೆ ಪರಶುರಾಮ್‌.

“ಪೈಗಂಬರ್‌, ಕ್ರಿಸ್ತ, ಕೃಷ್ಣ, ರಾಮದ ವಿಚಾರಗಳು ಪಠ್ಯದಲ್ಲಿ ತತ್ವಗಳಾಗಿರುವಾಗ, ಇನ್ನು ಮುಂದೆ ಇಂತಹದ್ದೇ ಓದಬೇಕು, ಇಂತಹ ಧರ್ಮದ ಕುರಿತೇ ಓದಬೇಕು ಎಂಬ ಭಾವನೆ ಮಕ್ಕಳಲ್ಲಿ ಮೂಡಿದರೆ ಹೇಗೆ? ಭಿನ್ನ ಸಂಸ್ಕೃತಿ, ಭಿನ್ನ ವಿಚಾರ, ವಿವಿಧತೆಯಲ್ಲಿ ಏಕತೆಯನ್ನು ಭಾರತ ಹೊಂದಿದೆ. ಈ ಕಾರಣವನ್ನು ತತ್‌ಕ್ಷಣ ಪರಿಶೀಲಿಸಬೇಕು. ಕೆಲವು ಮಾಧ್ಯಮಗಳು ಮಕ್ಕಳ ಮೇಲೆ ಸವಾರಿ ಮಾಡಿರುವುದು ಗಮನಕ್ಕೆ ಬಂದಿದೆ. ಹೀಗೆ ಮಾಡಿದರೆ ಆಯೋಗವು ಸುಮ್ಮನೆ ಕುಳಿತು ನೋಡುವುದಿಲ್ಲ. ಮಕ್ಕಳ ಹಕ್ಕುಗಳ ಕಾಯ್ದೆ ಅಡಿಯಲ್ಲಿ ಸೂಕ್ತ ವಿಲೇವಾರಿ ಕೈಗೊಳ್ಳಲು ಸರ್ಕಾರಕ್ಕೆ ಪತ್ರ ಬರೆಯಲಾಗುತ್ತಿದೆ” ಎಂದು ಮಾಹಿತಿ ನೀಡಿದರು.

“ಸದುದ್ದೇಶಕ್ಕಾಗಿ, ಮಕ್ಕಳ ಹಕ್ಕುಗಳ ಪ್ರತಿಪಾದನೆಗಾಗಿ ಮಾಧ್ಯಮಗಳು ವರದಿ ಮಾಡುವುದು ಬೇರೆ. ಆದರೆ ಅಸಹಾಯಕ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮಕ್ಕಳ ಭಾವನೆಯನ್ನು ದುಪಯೋಗ ಮಾಡಿಕೊಳ್ಳಬಾರದು. ಮಕ್ಕಳ ಹಕ್ಕುಗಳ ಕಾಯ್ದೆಯನ್ನು ಜಾರಿಗೊಳಿಸುವುದು ಆಯೋಗದ ಕರ್ತವ್ಯವಾಗಿದೆ” ಎಂದರು.

ಜೆ.ಜೆ. ಕಾಯ್ದೆಯ ಉಲ್ಲಂಘನೆ: ಶಂಕರಪ್ಪ

ಆಯೋಗದ ಮತ್ತೊಬ್ಬ ಸದಸ್ಯರಾದ ಶಂಕರಪ್ಪ ಅವರು ಮಾತನಾಡಿ, “ಆಯೋಗದ ಸಂಬಂಧಪಟ್ಟ ಗ್ರೂಪ್‌ನಲ್ಲಿ ಈ ಕುರಿತು ಚರ್ಚಿಸಲಾಗಿದೆ. ಕಾನೂನು ಉಲ್ಲಂಘನೆಯನ್ನು ಯಾರೇ ಮಾಡಿದರೂ ಉಲ್ಲಂಘನೆಯೇ. ಮಕ್ಕಳನ್ನು ಚಿತ್ರಿಸಬಾರದು. ಬಾಲನ್ಯಾಯ ಕಾಯ್ದೆಯ ಪ್ರಕಾರವೂ ಇದು ಉಲ್ಲಂಘನೆಯೆಂಬುದೂ ತೋರುತ್ತದೆ” ಎಂದು ಹೇಳಿದರು.

“ಈ ವಿಚಾರವನ್ನು ಇಟ್ಟುಕೊಂಡು ವೈಭವೀಕರಣ ಮಾಡುವುದು ಅಕ್ಷ್ಯಮ್ಯ. ಹಿಜಾಬ್‌ ಕುರಿತು ಕೋರ್ಟ್ ನಿರ್ಧಾರ ಮಾಡುತ್ತದೆ. ಮಾಧ್ಯಮಗಳು ಹೀಗೆಲ್ಲ ವರದಿ ಮಾಡಬಾರದು. ಮಕ್ಕಳ ಕುರಿತು ಮಾಧ್ಯಮಗಳು ಒಳ್ಳೆಯ ವಿಚಾರಗಳನ್ನು ತೋರಿಸಬೇಕು. ಹೀಗೆ ನೇರವಾಗಿ ಚಿತ್ರೀಕರಣ ಮಾಡಿದರೆ ಆ ಮಕ್ಕಳನ್ನು ಟಾರ್ಗೆಟ್ ಮಾಡುತ್ತಾರೆ. ಜವಾಬ್ದಾರಿ ನಾಗರಿಕರು ಮಕ್ಕಳ ವಿಚಾರದಲ್ಲಿ ಬೇಜವಾಬ್ದಾರಿಯಿಂದ ನಡೆದುಕೊಳ್ಳಬಾರದು” ಎಂದು ಮನವಿ ಮಾಡಿದರು.

 ಗಂಭೀರತೆಯನ್ನು ಊಹಿಸಲಾಗಿತ್ತು: ರಾಘವೇಂದ್ರ

“ಪ್ರಕರಣ ಕೋರ್ಟ್ ಮೆಟ್ಟಿಲೇರುವ ಮುನ್ನವೇ ಪ್ರಕರಣ ಗಂಭೀರತೆಯನ್ನು ಯೋಚಿಸಿ, ಸುಮೊಟೊ ಕೇಸ್‌ ದಾಖಲಿಸುವ ಪ್ರಸ್ತಾಪವನ್ನು ಮಾಡಲಾಗಿತ್ತು” ಎಂದು ಮಕ್ಕಳ ಹಕ್ಕುಗಳ ಆಯೋಗ ಶಿಕ್ಷಣ ಕ್ಷೇತ್ರದ ಉಸ್ತುವಾರಿ ರಾಘವೇಂದ್ರ ಅವರು ‘ನಾನುಗೌರಿ.ಕಾಂ’ಗೆ ತಿಳಿಸಿದರು.

“ಮಕ್ಕಳ ವಿಚಾರವಾಗಿ 20 ವರ್ಷಗಳಿಂದ ವರ್ಷಗಳಿಂದ ಕೆಲಸ ಮಾಡಿದ್ದೇನೆ. ಹಿಜಾಬ್‌ ಹಾಕಿಸುತ್ತಾರಾ, ತೆಗೆಸುತ್ತಾರಾ ಎಂಬುದು ಮುಖ್ಯವಲ್ಲ. ಮಕ್ಕಳ ಹಕ್ಕುಗಳ ಕಾಪಾಡುವುದು ನಮ್ಮ ಕರ್ತವ್ಯ” ಎಂದು ಹೇಳಿದರು.

“ಹೈಕೋರ್ಟ್ ಆದೇಶ ಸ್ಪಷ್ಟವಾಗಿದೆ. ಸಮಸ್ಯೆ ಇರುವ ಕಾಲೇಜಿಗೆ ಮಾತ್ರ ಮಧ್ಯಂತರ ಆದೇಶ ಅನ್ವಯವಾಗುತ್ತದೆ. ಮಾಧ್ಯಮಗಳು ಇಡೀ ರಾಜ್ಯಕ್ಕೆ ಅನ್ವಯವಾಗುತ್ತದೆ ಎಂದು ತೋರಿಸಿ, ಮಕ್ಕಳು ಪರೀಕ್ಷೆಯಿಂದ ಹೊರಗುಳಿಯುವಂತೆ ಮಾಡಿ, ಬಹಳ ನಿರ್ದಾಕ್ಷಿಣ್ಯವಾಗಿ ವರ್ತಿಸಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಬಹಳ ನೋವಿನ ಸಂಗತಿ” ಎಂದು ವಿಷಾದಿಸಿದರು.

ಬಾಲನ್ಯಾಯ ಕಾಯ್ದೆ ಹೇಳುವುದೇನು?

ರಾಜ್ಯದಲ್ಲಿ ಉಲ್ಲಂಘನೆಯಾಗುತ್ತಿರುವ ಮಕ್ಕಳ ಹಕ್ಕುಗಳ ಉಲ್ಲಂಘನೆಯನ್ನು ಆಯೋಗ ಸದಸ್ಯರಾದ ಪರಶುರಾಮ್‌ ವಿವರಿಸಿದ್ದಾರೆ.

“ಬಾಲನ್ಯಾಯ ಕಾಯ್ದೆ 2015 ರ ಅನ್ವಯ, ಮಕ್ಕಳ ಪಾಲನೆ ಮತ್ತು ಸಂರಕ್ಷಣೆಯನ್ನು ಶಾಲೆಗಳಲ್ಲಿ, ಸಂಸ್ಥೆಗಳಲ್ಲಿ ಮಾಡುವುದು ಆದ್ಯ ಕರ್ತವ್ಯವಾಗಿದೆ. ಬಾಲನ್ಯಾಯ ಕಾಯ್ದೆ ಕಾಲಂ 9ರಲ್ಲಿ ಹೇಳಿರುವಂತೆ, ಮಗುವಿನ ಅತ್ಯುತ್ತಮ ಹಿತಾಶಕ್ತಿಯನ್ನು ಕಾಪಾಡುವುದರ ಜೊತೆಗೆ ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕುಗಳು ಉಲ್ಲಂಘನೆ ಆಗಕೂಡದು, ಹಾಗೆಯೇ ಬಾಲನ್ಯಾಯ ಕಾಯ್ದೆ 2015 ಸೆಕ್ಷನ್ 14(x) ರ ಪ್ರಕಾರ ಮಗುವಿನ ಸಂರಕ್ಷಣೆಯನ್ನು ಅನೀತಿಯ ಲಾಭಕ್ಕಾಗಿ ಮಗುವನ್ನು ಹಿಂಸೆಗೆ ಒಳಪಡಿಸಬಾರದು. ಹಾಗೆಯೇ ಬಾಲನ್ಯಾಯ ಕಾಯ್ದೆ 2015 ಸೆಕ್ಷನ್15 ಅನ್ವಯ ಶಿಶು – ಸ್ನೇಹ ( child friendly ) ರೀತಿಯಲ್ಲಿ ಶಾಲೆಗಳು ಇರಬೇಕಾಗಿದೆ. ಅಭ್ಯಾಸ, ನಡತೆ , ನಡವಳಿಕೆ, ಮನಪ್ರವೃತ್ತಿ, ಹೊಂದಿಕೊಳ್ಳುವ ಪರಿಸರ ವ್ಯವಸ್ಥೆಯನ್ನು ಮಗುವಿಗೆ ನೀಡುವ ರೀತಿಯಲ್ಲಿ ವ್ಯವಸ್ಥೆಗಳು ಕಾರ್ಯನಿರ್ವಹಿಸಬೇಕಾಗಿದೆ. ಬಾಲನ್ಯಾಯ ಕಾಯ್ದೆ 2015 ಸೆಕ್ಷನ್ 76 (1) ಮಗುವಿಗೆ ಕಿರುಕುಳ ಅಥವಾ ಶೋಷಣೆ ಉಂಟು ಮಾಡಬಾರದೆಂದು ಕಾಯ್ದೆ ತಿಳಿಸುತ್ತದೆ. ಮಕ್ಕಳು ಶಾಲೆಗೆ ಹೋಗುವುದಕ್ಕೆ ಭಯದ ವಾತಾವರಣ ನಿರ್ಮಾಣವಾಗಿರುವುದು ಭಾರತದ ಸಂಸ್ಕೃತಿಗೆ ಶೋಭೆ ತರುವಂತದ್ದಲ್ಲ” ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿರಿ: ಹಿಜಾಬ್‌ಗಾಗಿ ಹೋರಾಡುತ್ತಿರುವ ಹೆಣ್ಣುಮಕ್ಕಳ ವೈಯಕ್ತಿಕ ವಿವರ ಹಂಚಿಕೊಂಡು ವಿಕೃತಿ ಮೆರೆದ ಬಿಜೆಪಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

5 COMMENTS

  1. ಕನ್ನಡ ಮಾಧ್ಯಮಗಳು ಹಿಜಾಬ್ ವಿಚಾರದಲ್ಲಿ ಒಂದು ಪಕ್ಷದ ಪರವಾಗಿ ವಾದ ಮಾಡುತ್ತಿವೆ. ಮೂಲ ಹುಡುಕಿದರೆ ಇದು ಇಷ್ಟೊಂದು ಬೆಳೆಯುವ ಸಮಸ್ಯೆ ಅಲ್ಲವೆ ಅಲ್ಲಾ… ಮಾಧ್ಯಮಗಳು ಹಗಲು ರಾತ್ರೀ ಹೇಳಿದ್ದನ್ನೇ ಹೇಳಿ ಜನರಿಗೆ ಪ್ರಚೋದನೆ ನೀಡಲು ಕಾರಣವಾಗಿವೆ. ಆದ್ದರಿಂದ ಈ ಮೂಲಕವಾದರೂ ಈ ಕನ್ನಡ ಮಾಧ್ಯಮಗಳಿಗೆ ಮೂಗುದಾರ ಹಾಕಬೇಕಾಗಿದೆ. ಒಂದು ಹೆಡ್ಡಿಂಗ್ ಹಾಕಿ ಅದರ ಮುಂದಿ ಒಂದು ಪ್ರಶ್ನಾರ್ಥಕ ಚಿಹ್ನೆ ಇಟ್ಟರೆ ಅವರು ಬಚಾವ್…ಇನ್ನು ಮಕ್ಕಳ ಹಕ್ಕು ಆಯೋಗವಂತೂ ಗಾಢ ನಿದ್ರೆಯಲ್ಲಿದೆ ಬಿಡಿ..

  2. ಸರಕಾರದ ಹಂಗಿನಲ್ಲಿರುವ ಸಂಸ್ಥೆಗಳು ರಾಜ್ಯಪಾಲ,
    ರಾಷ್ಟ್ರಪತಿ,ಸ್ಪೀಕರ್ ತರ ಕಾರ್ಯ
    ನಿರ್ವಹಿಸುತ್ತವೆ. ಇವೆಲ್ಲಾ ಆಳುವವರ ಪರ ಇರುವವರಿಗೆ ಉದ್ಯೋಗ ಸೃಷ್ಟಿ ಕೇಂದ್ರಗಳು

  3. ಯಾರ್ರೀ ಅದು ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷರು ,ಬೇರೆಯವರು ಹೇಳಿದರೆ ಮಾತ್ರಾನಾ ? ಕ್ರಮ ಕೈಗೊಳ್ಳದೆ ನ್ಯಾಯಾಲಯದಲ್ಲಿ ಇದೆ ಪ್ರಕರಣ ಅಂತ ನೆಪ ಹೇಳೋದು ,ನಿಮ್ಮ ಕರ್ತವ್ಯ ನೀವೂ ಮಾಡಿ ಇಲ್ಲ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ನಾಲಾಯಕ್ ಅಧ್ಯಕ್ಷರು ಸದಸ್ಯರು.

  4. ಹಕ್ಕುಗಳ ಬಗ್ಗೆ ಮಾತ್ರ ಮಾತನಾಡಿದರೆ ತಪ್ಪಾಗುತ್ತದೆ. ಜವಾಬ್ದಾರಿ ಮತ್ತು ಹೊಣೆಗಾರಿಕೆಗಳೂ ಸಹ ಅಷ್ಟೇ ಮುಖ್ಯ. ಇರುವ ಒಂದೇ ದೇವರಿಗೆ ಬೇರೆಬೇರೆ ಹೆಸರಿಟ್ಟು, ಒಂದೊಂದು ಹೆಸರಿನಲ್ಲಿ ಹಿಜಾಬ್, ಕೇಸರಿ ಶಾಲು,ಪೇಟ, ಉಡುದಾರ, ಜನಿವಾರ, ಅಥವಾ ಇನ್ನಾವುದೇ ದಾರಗಳು ಇವುಗಳನ್ನು ಧರಿಸುವುದು ಮೌಢ್ಯತೆಯ ಬೇರೆಬೇರೆ ಮುಖಗಳು. ಇವುಗಳ ಹೆಸರು ಹೇಳಿಕೊಂಡು ವಾದ ಮಾಡುವುದು, ಕಿತ್ತಾಡುವುದು, ಹೊಡೆದಾಡುವುದು ಮೂರ್ಖತನವಾದೀತು.

LEAVE A REPLY

Please enter your comment!
Please enter your name here

- Advertisment -

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...