Homeಕರ್ನಾಟಕವೈವಾಹಿಕ ಅತ್ಯಾಚಾರ ಅಪರಾಧವಲ್ಲ ತೀರ್ಪು; ಛತ್ತೀಸಗಡ ಹೈಕೋರ್ಟ್ ನ್ಯಾಯಾಂಗ ಸಮಾನತೆಯನ್ನು ಅರ್ಥಮಾಡಿಕೊಂಡಿದ್ದು ಇಷ್ಟೆಯೇ?

ವೈವಾಹಿಕ ಅತ್ಯಾಚಾರ ಅಪರಾಧವಲ್ಲ ತೀರ್ಪು; ಛತ್ತೀಸಗಡ ಹೈಕೋರ್ಟ್ ನ್ಯಾಯಾಂಗ ಸಮಾನತೆಯನ್ನು ಅರ್ಥಮಾಡಿಕೊಂಡಿದ್ದು ಇಷ್ಟೆಯೇ?

- Advertisement -
- Advertisement -

ಒಂದು ದೇಶದ ಪ್ರಗತಿಗೆ ಅನೇಕ ಅಂಶಗಳು ಕಾರಣವಾಗಿರಬಹುದು. ಪೆಟ್ರೋಲ್ ಮಾರಿ ಒಂದು ದೇಶ ಶ್ರೀಮಂತವಾದರೆ ಇನ್ನೊಂದು ತಂತ್ರಜ್ಞಾನ ಅಭಿವೃದ್ಧಿಯಿಂದ ಹಣ ಗಳಿಸಬಹುದು. ಆದರೆ ಯಾವ ದೇಶ ಲಿಂಗತಾರತಮ್ಯಗಳನ್ನು ’ಕಡಿಮೆ ಮಾಡಿ’ ಸಮಾನ, ಸಾಮಾಜಿಕ, ಆರ್ಥಿಕ, ರಾಜಕೀಯ ಅವಕಾಶಗಳನ್ನು ಕಲ್ಪಿಸಿದೆಯೋ ಅದು ಶ್ರೀಮಂತಿಕೆಯ ಜೊತೆ ಪ್ರಗತಿಯನ್ನೂ ಹೊಂದಿದೆ. ಇಲ್ಲಿ ಪ್ರಜ್ಞಾಪೂರ್ವಕವಾಗಿ ’ಕಡಿಮೆ ಮಾಡಿ’ ಎಂಬ ಪದ ಬಳಸಿದೆ, ಏಕೆಂದರೆ ಎಷ್ಟೇ ಪ್ರಬಲ ಅಥವಾ ಪ್ರಗತಿ ಹೊಂದಿದ ದೇಶವಿದ್ದರೂ ಸ್ತ್ರೀಯರ ವಿಷಯದಲ್ಲಿ ಸಂಪೂರ್ಣ ಸಮಾನತೆ ಸಾಧಿಸಿಲ್ಲ ಎನ್ನುವುದು ವಾಸ್ತವ. ಇನ್ನು ಭಾರತದ ಮಟ್ಟಿಗೆ ಹೇಳುವುದಾದರೆ ಇಲ್ಲಿ ಎರಡು ಬಗೆಯ ಸಮಾನತೆ ಇದೆ. ಒಂದು ’ಸಂವಿಧಾನಾತ್ಮಕ’ ಸಮಾನತೆ – ಇದು ಸ್ತ್ರೀ ಪುರುಷರ ಮಧ್ಯೆ ಯಾವುದೇ ತಾರತಮ್ಯ ಮಾಡುವುದಿಲ್ಲ. ಇನ್ನೊಂದು ’ಸಂವೇದನಾತ್ಮಕ’ ಸಮಾನತೆ – ಇದು ಮಹಿಳೆಯರ ನೋವುಗಳಿಗೆ ಸ್ಪಂದಿಸುವಲ್ಲಿಯೂ ಸಹ ಆ ಮಹಿಳೆಯ ಜಾತಿ, ಸ್ಥಾನಮಾನ, ಬಣ್ಣ ಮುಂತಾದ ಹಿನ್ನೆಲೆಯಲ್ಲಿ ತಾರತಮ್ಯ ಹೊಂದಿರುವಂಥದ್ದು. ವಿಪರ್ಯಾಸವೆಂದರೆ ಎರಡನೆಯದು ಮೊದಲಿನದ್ದಕ್ಕಿಂತ ಹೆಚ್ಚು ಶಕ್ತಿಶಾಲಿ.

ಇದೇ ವಾರ ಛತ್ತೀಸಗಡ ರಾಜ್ಯದ ಹೈಕೋರ್ಟ್ ತನ್ನ ಒಂದು ತೀರ್ಪಿನಲ್ಲಿ ವೈವಾಹಿಕ ಸಂಬಂಧದಲ್ಲಿ ಗಂಡನಾದವನು ಬಲವಂತದಿಂದ ಲೈಂಗಿಕ ಸಂಭೋಗ ಮಾಡಿದರೂ ಅದು ಅತ್ಯಾಚಾರವಲ್ಲ ಎಂದು ಹೇಳಿದೆ. ಆದರೆ ಇದೇ ತೀರ್ಪಿನಲ್ಲಿ ಮುಂದುವರೆದು “ಗಂಡಹೆಂಡತಿಯ ಜೊತೆ ಅನೈಸರ್ಗಿಕ ಸಂಭೋಗ ಮಾಡಿದ್ದು ಭಾರತೀಯ ದಂಡಸಂಹಿತೆಯ 377ನೇ ವಿಧಿ ಪ್ರಕಾರ ಅಪರಾಧ” ಎಂದಿದೆ. ಇಲ್ಲಿ ಒಂದು ಪ್ರಶ್ನೆ: ಒಂದೇ ಕೃತ್ಯದ ಒಂದು ಭಾಗ ಅಪರಾಧ, ಇನ್ನೊಂದು ಅಲ್ಲ, ಅದು ಹೇಗೆ? ಇಂಥ ಒಂದು ತೀರ್ಮಾನ ಕೊಡುವಾಗ ನ್ಯಾಯಾಧೀಶರು ಕೇವಲ ಕಾನೂನು ಪಾಲಿಸುವ ಯಂತ್ರಗಳಾಗಿರದೆ ಕಾನೂನನ್ನು ಪರಿಭಾಷಿಸುವ ಕಾಳಜಿ ಹೊಂದಿದ್ದರೆ ಇಂತಹ ಪ್ರತಿಗಾಮಿ ತೀರ್ಪು ಬರುತ್ತಿರಲಿಲ್ಲ. ಕಾಲಕಾಲಕ್ಕೆ ಬರುವ ವಿಶಾಲವಾದ ಪರಿಭಾಷೆಗಳಿಂದಲೇ ಅಲ್ಲವೆ ಸಾಮಾಜಿಕ ಮತ್ತು ವೈಚಾರಿಕ ಪ್ರಗತಿ ಆಗುವುದು!

ಭಾರತೀಯ ದಂಡಸಂಹಿತೆಯ 375ನೇ ವಿಧಿ ಪ್ರಕಾರ ಅತ್ಯಾಚಾರ ಎಂದರೆ ’ಯಾವುದೇ ಗಂಡಸು ಒಬ್ಬ ಹೆಂಗಸಿನ ಇಚ್ಛೆಗೆ ವಿರುದ್ಧವಾಗಿ, ಅವಳ ಒಪ್ಪಿಗೆ ಇಲ್ಲದೆ ಬಲವಂತದಿಂದ ಒಪ್ಪಿಗೆ ಪಡೆದು ನಡೆಸುವ ಲೈಂಗಿಕ ಸಂಭೋಗ’. ಇದರಲ್ಲಿ ಮುಂದುವರೆದು ’ಒಬ್ಬ ಗಂಡ ತನ್ನದೇ ಹೆಂಡತಿ ಇದ್ದರೂ ಹದಿನೈದು ವರ್ಷಕ್ಕಿಂತ ಚಿಕ್ಕವಳಿದ್ದರೆ ಅವಳ ಜೊತೆ ಲೈಂಗಿಕ ಸಂಪರ್ಕ ಹೊಂದುವುದು ಅಪರಾಧ’ ಎಂದಿದೆ. ಎಷ್ಟೋ ದಶಕಗಳಿಂದ ಈ ಕೊನೆಯ ಅಂಶ ವಿವಿಧ ಕಾರಣಗಳಿಂದ ಪ್ರಶ್ನೆಗೆ ಒಳಗಾಗುತ್ತಲೇ ಇದ್ದರೂ ಅದರಲ್ಲಿ ಯಾವುದೇ ಕ್ರಾಂತಿಕಾರಕ ಬದಲಾವಣೆಗಳು ಆಗಿಲ್ಲ.

18 ವರ್ಷಕ್ಕಿಂತ ಕಿರಿಯರನ್ನು ಮಕ್ಕಳು ಎಂದು ಕಾನೂನೇ ಪರಿಗಣಿಸುವಾಗ ಆ ಮಕ್ಕಳು ಕೊಡುವ ಸಮ್ಮತಿಯನ್ನು ಪರಿಗಣಿಸಬಹುದೇ?

ಹಾಗದರೆ 15 ರಿಂದ 18ರ ಒಳಗಿನ ಮದುವೆ ಆದ ಮಕ್ಕಳ ಮೇಲೆ ಅವಳ ಗಂಡ ಮಾಡುವ ಲೈಂಗಿಕ ಶೋಷಣೆಯನ್ನು ಯಾವ ರೀತಿ ಅರ್ಥೈಸಬೇಕು ಮುಂತಾದ ಅನೇಕ ಪ್ರಶ್ನೆಗಳಿಗೆ ಒಂದು ಸಣ್ಣ ಸಮಾಧಾನ ಸಿಕ್ಕಿದ್ದು ಇತ್ತೀಚೆಗೆ 2017ರಲ್ಲಿ ಜಸ್ಟೀಸ್ ಮದನ್ ಲೋಕೂರ್ ಮತ್ತು ಜಸ್ಟೀಸ್ ದೀಪಕ್ ಗುಪ್ತಾ ಅವರ ತೀರ್ಪು. ಅವರು 15 ವರ್ಷದ ಮಿತಿಯನ್ನು 18ಕ್ಕೆ ಏರಿಸಿದರು, ಆದರೆ ವೈವಾಹಿಕ ಅತ್ಯಾಚಾರ ಅಪರಾಧ ಹೌದೋ ಅಲ್ಲವೋ ಎಂಬ ಪ್ರಶ್ನೆಯನ್ನು ಮುಟ್ಟಲಿಲ್ಲ.

ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಮತ್ತು ಖಾಸಗಿತನವನ್ನು ವ್ಯಾಖ್ಯಾನಿಸಿ ಎಷ್ಟೋ ತೀರ್ಪುಗಳು ಬಂದರೂ ಹೆಂಡತಿಯ ವೈಯಕ್ತಿಕತೆ ಮತ್ತು ಖಾಸಗಿತನದ ಪ್ರಶ್ನೆಗಳು ಹಾಗೇ ಇವೆ. ಈ ಪುರುಷಾಧಿಪತ್ಯ ಮತ್ತು ಪ್ರಗತಿಗಾಮಿ ಧೋರಣೆಗಳು ನ್ಯಾಯಾಂಗದಲ್ಲೂ ಸಹ ಆಳವಾಗಿ ಬೇರೂರಿವೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಮಹಿಳಾ ಸಮಾನ ಅವಕಾಶಗಳ ಕೆಲ ತೀರ್ಪುಗಳು ’ಸೇನೆಯಲ್ಲಿ ಮಹಿಳೆಯ ಸೇರ್ಪಡೆ’, ’ಶಬರಿಮಲೈ ದೇವಸ್ಥಾನ ಪ್ರವೇಶ’ದ ರೂಪದಲ್ಲಿ ಬಂದರೂ ವೈವಾಹಿಕ ಸಂಬಂಧದ ಒಳಗೆ ಇಣುಕುವ ಧೈರ್ಯ ಇನ್ನೂ ನ್ಯಾಯಾಂಗಕ್ಕೆ ಬಂದಂತಿಲ್ಲ.

ದೆಹಲಿ ಹೈಕೋರ್ಟಿನಲ್ಲಿ ’ವೈವಾಹಿಕ ಅತ್ಯಾಚಾರವನ್ನು ಅಪರಾಧ’ ಎಂದು ಪರಿಗಣಿಸಲು ಕೋರಿ ಹಾಕಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರಸ್ತುತ ಕೇಂದ್ರ ಸರ್ಕಾರ ತನ್ನ ಅಭಿಪ್ರಾಯವನ್ನು ತಿಳಿಸಿ, “ಇಂತಹ ನಡೆ ವಿವಾಹ ಎಂಬ ವ್ಯವಸ್ಥೆ ಕುಸಿಯಲು ದಾರಿ ಮಾಡಿಕೊಡುತ್ತದೆ” ಎಂದು ಹೇಳಿದೆ.

ಅಂದರೆ ಈ ವ್ಯವಸ್ಥೆ ಜೀವವಿಲ್ಲದ ಅಸ್ತಿಪಂಜರವಾಗಿದ್ದರೂ ಚಿಂತೆಯಿಲ್ಲ, ಅದನ್ನು ಬಲವಂತದಿಂದ ಉಳಿಸಬೇಕು ಎಂಬುದು ಸರ್ಕಾರದ ನಿಲುವು ಮಹಿಳೆಯರ ಬಗ್ಗೆ ಇರುವ ಧೋರಣೆಯನ್ನು ತೋರಿಸುತ್ತದೆ. ವಿವಾಹ ಎಂಬ ವ್ಯವಸ್ಥೆ ಸದೃಢವಾಗಿ ನಿಲ್ಲಬೇಕಾದರೆ ಅದರ ನೆಲೆಯನ್ನು ಗಟ್ಟಿಗೊಳಿಸಿ, ಸಂಬಂಧಗಳನ್ನು ಸದೃಢಗೊಳಿಸುವ ಪ್ರಯತ್ನಗಳಾಗಬೇಕು. ಇದೇ ಸಂದರ್ಭದಲ್ಲಿ ಒಂದು ಆಶಾಕಿರಣದಂತೆ ಕೇರಳ ಹೈಕೋರ್ಟ್ ’ವೈವಾಹಿಕ ಅತ್ಯಾಚಾರವೂ ಅಪರಾಧವಾಗಿದೆ’ ಎಂದು ಹೇಳಿದೆ. ಈ ಎಲ್ಲ ತೀರ್ಪುಗಳೂ ಬೇರೆ ಬೇರೆ ಹಿನ್ನೆಲೆಯಲ್ಲಿ ಬಂದಿದ್ದರೂ ಕೂಡ ಈ ಒಂದು ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ಸ್ಪಷ್ಟತೆಯನ್ನು ಕೊಡುವ ತುರ್ತು ಅಗತ್ಯ ಇದೆ.

ಅನುಪಮಾ ಎಂಬ ಲೇಖಕಿ ತನ್ನ ‘Gendered Citizenship’ ಎಂಬ ಪುಸ್ತಕದಲ್ಲಿ ಈ ಜಗತ್ತು ಸಾರ್ವಜನಿಕ ಮತ್ತು ಖಾಸಗಿ ಎಂಬ ವಲಯದಲ್ಲಿ ವಿಭಜನೆ ಆಗಿದೆ ಎನ್ನುತ್ತಾರೆ. ಈ ಹಿನ್ನೆಲೆಯಲ್ಲಿ ನೋಡಿದರೆ ಸಮಾಜದಲ್ಲಿ ಅದರಲ್ಲೂ ಪುರುಷಪ್ರಧಾನ ಸಮಾಜದಲ್ಲಿ ಸಾರ್ವಜನಿಕ ವಲಯ ಗಂಡಸರಿಗೆ, ಕೌಟುಂಬಿಕ ಅಥವಾ ಖಾಸಗಿ ವಲಯ ಹೆಂಗಸರಿಗೆ ಎಂದು ಸಾರಾಸಗಟಾಗಿ ನಿರ್ಧರಿಸಿದ ಮೇಲೆ, ತನ್ನ ಖಾಸಗಿ ವಲಯದಿಂದ ಹೊರಬರಲು ಪ್ರಯತ್ನಿಸುವ ಪ್ರತಿಯೊಬ್ಬ ಮಹಿಳೆಯೂ ಒಂದಲ್ಲ ಒಂದು ರೀತಿಯ ದೌರ್ಜನ್ಯಕ್ಕೆ ಒಳಗಾಗುತ್ತಲೇ ಬಂದಿದ್ದಾಳೆ. ಮೈಸೂರಿನಲ್ಲಿ ಮೊನ್ನೆ ನಡೆದ ಕಾಲೇಜು ವಿದ್ಯಾರ್ಥಿನಿಯ ರೇಪ್ ಕೇಸಿನಲ್ಲಿ ಆ ವಿದ್ಯಾರ್ಥಿನಿಯನ್ನೆ ದೂಷಿಸಿದವರು ಎಷ್ಟೋ ಜನ. ಈ ಹಿಂದೆ ದೆಹಲಿಯಲ್ಲಿ ನಡೆದ ನಿರ್ಭಯಾ ಕೇಸಿನಲ್ಲಿ ಕೂಡ ಇಂತಹದೇ ಮಾತುಗಳು ಕೇಳಿಬಂದಿದ್ದವು.

ಬಿಜೆಪಿ ನಾಯಕರೊಬ್ಬರು ಸಂತ್ರಸ್ತೆ, ’ಅಣ್ಣಾ ನನ್ನನ್ನು ಬಿಟ್ಟುಬಿಡು’ ಎಂದು ಕೇಳಿಕೊಳ್ಳಬೇಕಾಗಿತ್ತು ಎಂದರೆ, ಇನ್ನೊಬ್ಬರು ’ಹನುಮಾನ್ ಚಾಲೀಸಾ’ ಹೇಳಬೇಕಾಗಿತ್ತು ಎಂದರು. ಈ ಮನೋರೋಗಕ್ಕೆ ಚಿಕಿತ್ಸೆ ಇದೆಯೇ? ಹೆಣ್ಣು ತಿರುಗಾಡುವ ಸಮಯ, ಉಟ್ಟುಕೊಳ್ಳುವ ಬಟ್ಟೆ, ಯಾರ ಜೊತೆ ತಿರುಗಾಡುತ್ತಾಳೆ, ಎಂತಹ ಸ್ಥಳಕ್ಕೆ ಹೋಗುತ್ತಾಳೆ, ಕೆಲವೊಮ್ಮೆಯಂತೂ ಏನು ತಿನ್ನುತ್ತಾಳೆ ಎಂಬುದು ಕೂಡ ಸಾರ್ವಜನಿಕ ಚರ್ಚೆಯ ವಸ್ತುವಾಗುತ್ತದೆ. ಹಿಂದಿ ಭಾಷೆಯ ’ಪಿಂಕ್ ಎಂಬ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್‌ರ ಒಂದು ಮಾತಿದೆ – “ಈ ದೇಶದಲ್ಲಿ ಸ್ಥಳ ಹೆಣ್ಣುಮಕ್ಕಳ ನಡತೆಯನ್ನು ನಿರ್ಧರಿಸುತ್ತದೆ; ದೇವಸ್ಥಾನ ಅಥವಾ ಲೈಬ್ರರಿಯಲ್ಲಿ ಪರಿಚಯವಾದರೆ ಒಳ್ಳೆ ಹುಡುಗಿ, ಪಬ್ ಅಥವಾ ಡಿಸ್ಕೊದಲ್ಲಿ ಸಿಕ್ಕರೆ ಪ್ರಶ್ನಾರ್ಹ ನಡತೆ ಹೊಂದಿದವಳು” ಎಂದು. ಮೈಸೂರು ಘಟನೆ ನಂತರ ರಾಜ್ಯದ ಗೃಹಮಂತ್ರಿ, ಸಂತ್ರಸ್ತೆ ಏಳು ಗಂಟೆ ನಂತರ ಅಂತಹ ಸ್ಥಳಕ್ಕೆ ಹೋಗಿದ್ದು ತಪ್ಪು ಎಂದಾಗ ಈ ಮೇಲಿನ ಮಾತು ನೆನಪಾಯ್ತು.

ಇದೇ ದಂಡಸಂಹಿತೆಯ 497 ವಿಧಿಯಾದ “ವ್ಯಭಿಚಾರ ಒಂದು ದಂಡನಾರ್ಹ ಅಪರಾಧ” ಎಂಬುದನ್ನು ಸುಪ್ರೀಂ ಕೋರ್ಟ್ ತೆಗೆದು ಹಾಕಿದಾಗ ಆ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ತಿಳಿವಳಿಕೆ ಕೊಡುವ ಪ್ರಯತ್ನಗಳಾಗಲಿಲ್ಲ. ಹೇಗೆ ಈ ಕಾನೂನು ಹೆಣ್ಣನ್ನು ಕೊಟ್ಟಿಗೆಯಲ್ಲಿ ಕಟ್ಟಿದ ಹಸುವಿನಂತೆ ಪರಿಗಣಿಸುತ್ತದೆ ಎಂಬುದು ಇಂದಿಗೂ ಗೊಂದಲವಾಗಿ ಉಳಿದಿದೆ.

ಇಂದೂ ವೈವಾಹಿಕ ಅತ್ಯಾಚಾರವನ್ನು ಅಪರಾಧ ಎಂದು ಪರಿಗಣಿಸದ 36 ರಾಷ್ಟ್ರಗಳಲ್ಲಿ ಭಾರತವೂ ಒಂದು. ಇದಕ್ಕೆ ಒಂದು ಮುಖ್ಯಕಾರಣ “ಮದುವೆ ಎಂಬುದು ಲೈಂಗಿಕ ಸಂಪರ್ಕಕ್ಕೆ ಅಪರೋಕ್ಷ ಸಮ್ಮತಿ” ಎಂಬ ಕಲ್ಪನೆ. ಜೊತೆಗೆ ಮದುವೆ ಎಂಬ ವ್ಯವಸ್ಥೆ, ಸಾಮಾಜಿಕ ಚಲನೆಯಲ್ಲಿ ಮನುಷ್ಯ ಕಂಡುಕೊಂಡ ಒಂದು ವ್ಯವಸ್ಥೆ ಎಂದು ತಿಳಿಯದೆ ಧಾರ್ಮಿಕ ಸಂಸ್ಕಾರಗಳ ಭಾಗವಾಗಿಸಿದ್ದು ಕೂಡ ಕಾರಣ. ಸುಳ್ಳು ಕೇಸುಗಳು ದಾಖಲಾಗಬಹುದು, ಹೆಂಗಸರು ಇದರ ದುರುಪಯೋಗ ಮಾಡಿಕೊಳ್ಳಬಹುದು ಎಂಬುದು ಕಾನೂನು ತರದೇ ಇರಲು ಸಮರ್ಥನೆ
ಅಲ್ಲ. ಬದಲಾವಣೆ ಕಾಲದ ನಿಯಮ, ಅದು ಆರೋಗ್ಯಪೂರ್ಣವಾಗಿದ್ದರೆ ಸಮಾಜ ಸ್ವಸ್ಥವಾಗಿರುತ್ತದೆ.

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕಾನೂನು ವಿಷಯಗಳ ಮೇಲೆ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.


ಇದನ್ನೂ ಓದಿ: 200 ಹಲ್ಲಾ ಹೋ: ಪ್ರತೀಕಾರ ಹತ್ಯೆಯ ಸುತ್ತ ಮಹತ್ವದ ಜಾತಿ ದೌರ್ಜನ್ಯದ ಪ್ರಶ್ನೆಗಳು

ಇದನ್ನೂ ಓದಿ: ಮಹಿಳಾ ಮುಖ್ಯ ನ್ಯಾಯಮೂರ್ತಿ: ತನ್ನ ಪೂರ್ವಾಗ್ರಹಗಳಿಂದ ಬಿಡುಗಡೆ ಹೊಂದುವುದೇ ಸುಪ್ರೀಂಕೋರ್ಟ್?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...