Homeಕರ್ನಾಟಕವೈವಾಹಿಕ ಅತ್ಯಾಚಾರ ಅಪರಾಧವಲ್ಲ ತೀರ್ಪು; ಛತ್ತೀಸಗಡ ಹೈಕೋರ್ಟ್ ನ್ಯಾಯಾಂಗ ಸಮಾನತೆಯನ್ನು ಅರ್ಥಮಾಡಿಕೊಂಡಿದ್ದು ಇಷ್ಟೆಯೇ?

ವೈವಾಹಿಕ ಅತ್ಯಾಚಾರ ಅಪರಾಧವಲ್ಲ ತೀರ್ಪು; ಛತ್ತೀಸಗಡ ಹೈಕೋರ್ಟ್ ನ್ಯಾಯಾಂಗ ಸಮಾನತೆಯನ್ನು ಅರ್ಥಮಾಡಿಕೊಂಡಿದ್ದು ಇಷ್ಟೆಯೇ?

- Advertisement -
- Advertisement -

ಒಂದು ದೇಶದ ಪ್ರಗತಿಗೆ ಅನೇಕ ಅಂಶಗಳು ಕಾರಣವಾಗಿರಬಹುದು. ಪೆಟ್ರೋಲ್ ಮಾರಿ ಒಂದು ದೇಶ ಶ್ರೀಮಂತವಾದರೆ ಇನ್ನೊಂದು ತಂತ್ರಜ್ಞಾನ ಅಭಿವೃದ್ಧಿಯಿಂದ ಹಣ ಗಳಿಸಬಹುದು. ಆದರೆ ಯಾವ ದೇಶ ಲಿಂಗತಾರತಮ್ಯಗಳನ್ನು ’ಕಡಿಮೆ ಮಾಡಿ’ ಸಮಾನ, ಸಾಮಾಜಿಕ, ಆರ್ಥಿಕ, ರಾಜಕೀಯ ಅವಕಾಶಗಳನ್ನು ಕಲ್ಪಿಸಿದೆಯೋ ಅದು ಶ್ರೀಮಂತಿಕೆಯ ಜೊತೆ ಪ್ರಗತಿಯನ್ನೂ ಹೊಂದಿದೆ. ಇಲ್ಲಿ ಪ್ರಜ್ಞಾಪೂರ್ವಕವಾಗಿ ’ಕಡಿಮೆ ಮಾಡಿ’ ಎಂಬ ಪದ ಬಳಸಿದೆ, ಏಕೆಂದರೆ ಎಷ್ಟೇ ಪ್ರಬಲ ಅಥವಾ ಪ್ರಗತಿ ಹೊಂದಿದ ದೇಶವಿದ್ದರೂ ಸ್ತ್ರೀಯರ ವಿಷಯದಲ್ಲಿ ಸಂಪೂರ್ಣ ಸಮಾನತೆ ಸಾಧಿಸಿಲ್ಲ ಎನ್ನುವುದು ವಾಸ್ತವ. ಇನ್ನು ಭಾರತದ ಮಟ್ಟಿಗೆ ಹೇಳುವುದಾದರೆ ಇಲ್ಲಿ ಎರಡು ಬಗೆಯ ಸಮಾನತೆ ಇದೆ. ಒಂದು ’ಸಂವಿಧಾನಾತ್ಮಕ’ ಸಮಾನತೆ – ಇದು ಸ್ತ್ರೀ ಪುರುಷರ ಮಧ್ಯೆ ಯಾವುದೇ ತಾರತಮ್ಯ ಮಾಡುವುದಿಲ್ಲ. ಇನ್ನೊಂದು ’ಸಂವೇದನಾತ್ಮಕ’ ಸಮಾನತೆ – ಇದು ಮಹಿಳೆಯರ ನೋವುಗಳಿಗೆ ಸ್ಪಂದಿಸುವಲ್ಲಿಯೂ ಸಹ ಆ ಮಹಿಳೆಯ ಜಾತಿ, ಸ್ಥಾನಮಾನ, ಬಣ್ಣ ಮುಂತಾದ ಹಿನ್ನೆಲೆಯಲ್ಲಿ ತಾರತಮ್ಯ ಹೊಂದಿರುವಂಥದ್ದು. ವಿಪರ್ಯಾಸವೆಂದರೆ ಎರಡನೆಯದು ಮೊದಲಿನದ್ದಕ್ಕಿಂತ ಹೆಚ್ಚು ಶಕ್ತಿಶಾಲಿ.

ಇದೇ ವಾರ ಛತ್ತೀಸಗಡ ರಾಜ್ಯದ ಹೈಕೋರ್ಟ್ ತನ್ನ ಒಂದು ತೀರ್ಪಿನಲ್ಲಿ ವೈವಾಹಿಕ ಸಂಬಂಧದಲ್ಲಿ ಗಂಡನಾದವನು ಬಲವಂತದಿಂದ ಲೈಂಗಿಕ ಸಂಭೋಗ ಮಾಡಿದರೂ ಅದು ಅತ್ಯಾಚಾರವಲ್ಲ ಎಂದು ಹೇಳಿದೆ. ಆದರೆ ಇದೇ ತೀರ್ಪಿನಲ್ಲಿ ಮುಂದುವರೆದು “ಗಂಡಹೆಂಡತಿಯ ಜೊತೆ ಅನೈಸರ್ಗಿಕ ಸಂಭೋಗ ಮಾಡಿದ್ದು ಭಾರತೀಯ ದಂಡಸಂಹಿತೆಯ 377ನೇ ವಿಧಿ ಪ್ರಕಾರ ಅಪರಾಧ” ಎಂದಿದೆ. ಇಲ್ಲಿ ಒಂದು ಪ್ರಶ್ನೆ: ಒಂದೇ ಕೃತ್ಯದ ಒಂದು ಭಾಗ ಅಪರಾಧ, ಇನ್ನೊಂದು ಅಲ್ಲ, ಅದು ಹೇಗೆ? ಇಂಥ ಒಂದು ತೀರ್ಮಾನ ಕೊಡುವಾಗ ನ್ಯಾಯಾಧೀಶರು ಕೇವಲ ಕಾನೂನು ಪಾಲಿಸುವ ಯಂತ್ರಗಳಾಗಿರದೆ ಕಾನೂನನ್ನು ಪರಿಭಾಷಿಸುವ ಕಾಳಜಿ ಹೊಂದಿದ್ದರೆ ಇಂತಹ ಪ್ರತಿಗಾಮಿ ತೀರ್ಪು ಬರುತ್ತಿರಲಿಲ್ಲ. ಕಾಲಕಾಲಕ್ಕೆ ಬರುವ ವಿಶಾಲವಾದ ಪರಿಭಾಷೆಗಳಿಂದಲೇ ಅಲ್ಲವೆ ಸಾಮಾಜಿಕ ಮತ್ತು ವೈಚಾರಿಕ ಪ್ರಗತಿ ಆಗುವುದು!

ಭಾರತೀಯ ದಂಡಸಂಹಿತೆಯ 375ನೇ ವಿಧಿ ಪ್ರಕಾರ ಅತ್ಯಾಚಾರ ಎಂದರೆ ’ಯಾವುದೇ ಗಂಡಸು ಒಬ್ಬ ಹೆಂಗಸಿನ ಇಚ್ಛೆಗೆ ವಿರುದ್ಧವಾಗಿ, ಅವಳ ಒಪ್ಪಿಗೆ ಇಲ್ಲದೆ ಬಲವಂತದಿಂದ ಒಪ್ಪಿಗೆ ಪಡೆದು ನಡೆಸುವ ಲೈಂಗಿಕ ಸಂಭೋಗ’. ಇದರಲ್ಲಿ ಮುಂದುವರೆದು ’ಒಬ್ಬ ಗಂಡ ತನ್ನದೇ ಹೆಂಡತಿ ಇದ್ದರೂ ಹದಿನೈದು ವರ್ಷಕ್ಕಿಂತ ಚಿಕ್ಕವಳಿದ್ದರೆ ಅವಳ ಜೊತೆ ಲೈಂಗಿಕ ಸಂಪರ್ಕ ಹೊಂದುವುದು ಅಪರಾಧ’ ಎಂದಿದೆ. ಎಷ್ಟೋ ದಶಕಗಳಿಂದ ಈ ಕೊನೆಯ ಅಂಶ ವಿವಿಧ ಕಾರಣಗಳಿಂದ ಪ್ರಶ್ನೆಗೆ ಒಳಗಾಗುತ್ತಲೇ ಇದ್ದರೂ ಅದರಲ್ಲಿ ಯಾವುದೇ ಕ್ರಾಂತಿಕಾರಕ ಬದಲಾವಣೆಗಳು ಆಗಿಲ್ಲ.

18 ವರ್ಷಕ್ಕಿಂತ ಕಿರಿಯರನ್ನು ಮಕ್ಕಳು ಎಂದು ಕಾನೂನೇ ಪರಿಗಣಿಸುವಾಗ ಆ ಮಕ್ಕಳು ಕೊಡುವ ಸಮ್ಮತಿಯನ್ನು ಪರಿಗಣಿಸಬಹುದೇ?

ಹಾಗದರೆ 15 ರಿಂದ 18ರ ಒಳಗಿನ ಮದುವೆ ಆದ ಮಕ್ಕಳ ಮೇಲೆ ಅವಳ ಗಂಡ ಮಾಡುವ ಲೈಂಗಿಕ ಶೋಷಣೆಯನ್ನು ಯಾವ ರೀತಿ ಅರ್ಥೈಸಬೇಕು ಮುಂತಾದ ಅನೇಕ ಪ್ರಶ್ನೆಗಳಿಗೆ ಒಂದು ಸಣ್ಣ ಸಮಾಧಾನ ಸಿಕ್ಕಿದ್ದು ಇತ್ತೀಚೆಗೆ 2017ರಲ್ಲಿ ಜಸ್ಟೀಸ್ ಮದನ್ ಲೋಕೂರ್ ಮತ್ತು ಜಸ್ಟೀಸ್ ದೀಪಕ್ ಗುಪ್ತಾ ಅವರ ತೀರ್ಪು. ಅವರು 15 ವರ್ಷದ ಮಿತಿಯನ್ನು 18ಕ್ಕೆ ಏರಿಸಿದರು, ಆದರೆ ವೈವಾಹಿಕ ಅತ್ಯಾಚಾರ ಅಪರಾಧ ಹೌದೋ ಅಲ್ಲವೋ ಎಂಬ ಪ್ರಶ್ನೆಯನ್ನು ಮುಟ್ಟಲಿಲ್ಲ.

ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯವನ್ನು ಮತ್ತು ಖಾಸಗಿತನವನ್ನು ವ್ಯಾಖ್ಯಾನಿಸಿ ಎಷ್ಟೋ ತೀರ್ಪುಗಳು ಬಂದರೂ ಹೆಂಡತಿಯ ವೈಯಕ್ತಿಕತೆ ಮತ್ತು ಖಾಸಗಿತನದ ಪ್ರಶ್ನೆಗಳು ಹಾಗೇ ಇವೆ. ಈ ಪುರುಷಾಧಿಪತ್ಯ ಮತ್ತು ಪ್ರಗತಿಗಾಮಿ ಧೋರಣೆಗಳು ನ್ಯಾಯಾಂಗದಲ್ಲೂ ಸಹ ಆಳವಾಗಿ ಬೇರೂರಿವೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಮಹಿಳಾ ಸಮಾನ ಅವಕಾಶಗಳ ಕೆಲ ತೀರ್ಪುಗಳು ’ಸೇನೆಯಲ್ಲಿ ಮಹಿಳೆಯ ಸೇರ್ಪಡೆ’, ’ಶಬರಿಮಲೈ ದೇವಸ್ಥಾನ ಪ್ರವೇಶ’ದ ರೂಪದಲ್ಲಿ ಬಂದರೂ ವೈವಾಹಿಕ ಸಂಬಂಧದ ಒಳಗೆ ಇಣುಕುವ ಧೈರ್ಯ ಇನ್ನೂ ನ್ಯಾಯಾಂಗಕ್ಕೆ ಬಂದಂತಿಲ್ಲ.

ದೆಹಲಿ ಹೈಕೋರ್ಟಿನಲ್ಲಿ ’ವೈವಾಹಿಕ ಅತ್ಯಾಚಾರವನ್ನು ಅಪರಾಧ’ ಎಂದು ಪರಿಗಣಿಸಲು ಕೋರಿ ಹಾಕಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರಸ್ತುತ ಕೇಂದ್ರ ಸರ್ಕಾರ ತನ್ನ ಅಭಿಪ್ರಾಯವನ್ನು ತಿಳಿಸಿ, “ಇಂತಹ ನಡೆ ವಿವಾಹ ಎಂಬ ವ್ಯವಸ್ಥೆ ಕುಸಿಯಲು ದಾರಿ ಮಾಡಿಕೊಡುತ್ತದೆ” ಎಂದು ಹೇಳಿದೆ.

ಅಂದರೆ ಈ ವ್ಯವಸ್ಥೆ ಜೀವವಿಲ್ಲದ ಅಸ್ತಿಪಂಜರವಾಗಿದ್ದರೂ ಚಿಂತೆಯಿಲ್ಲ, ಅದನ್ನು ಬಲವಂತದಿಂದ ಉಳಿಸಬೇಕು ಎಂಬುದು ಸರ್ಕಾರದ ನಿಲುವು ಮಹಿಳೆಯರ ಬಗ್ಗೆ ಇರುವ ಧೋರಣೆಯನ್ನು ತೋರಿಸುತ್ತದೆ. ವಿವಾಹ ಎಂಬ ವ್ಯವಸ್ಥೆ ಸದೃಢವಾಗಿ ನಿಲ್ಲಬೇಕಾದರೆ ಅದರ ನೆಲೆಯನ್ನು ಗಟ್ಟಿಗೊಳಿಸಿ, ಸಂಬಂಧಗಳನ್ನು ಸದೃಢಗೊಳಿಸುವ ಪ್ರಯತ್ನಗಳಾಗಬೇಕು. ಇದೇ ಸಂದರ್ಭದಲ್ಲಿ ಒಂದು ಆಶಾಕಿರಣದಂತೆ ಕೇರಳ ಹೈಕೋರ್ಟ್ ’ವೈವಾಹಿಕ ಅತ್ಯಾಚಾರವೂ ಅಪರಾಧವಾಗಿದೆ’ ಎಂದು ಹೇಳಿದೆ. ಈ ಎಲ್ಲ ತೀರ್ಪುಗಳೂ ಬೇರೆ ಬೇರೆ ಹಿನ್ನೆಲೆಯಲ್ಲಿ ಬಂದಿದ್ದರೂ ಕೂಡ ಈ ಒಂದು ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ಸ್ಪಷ್ಟತೆಯನ್ನು ಕೊಡುವ ತುರ್ತು ಅಗತ್ಯ ಇದೆ.

ಅನುಪಮಾ ಎಂಬ ಲೇಖಕಿ ತನ್ನ ‘Gendered Citizenship’ ಎಂಬ ಪುಸ್ತಕದಲ್ಲಿ ಈ ಜಗತ್ತು ಸಾರ್ವಜನಿಕ ಮತ್ತು ಖಾಸಗಿ ಎಂಬ ವಲಯದಲ್ಲಿ ವಿಭಜನೆ ಆಗಿದೆ ಎನ್ನುತ್ತಾರೆ. ಈ ಹಿನ್ನೆಲೆಯಲ್ಲಿ ನೋಡಿದರೆ ಸಮಾಜದಲ್ಲಿ ಅದರಲ್ಲೂ ಪುರುಷಪ್ರಧಾನ ಸಮಾಜದಲ್ಲಿ ಸಾರ್ವಜನಿಕ ವಲಯ ಗಂಡಸರಿಗೆ, ಕೌಟುಂಬಿಕ ಅಥವಾ ಖಾಸಗಿ ವಲಯ ಹೆಂಗಸರಿಗೆ ಎಂದು ಸಾರಾಸಗಟಾಗಿ ನಿರ್ಧರಿಸಿದ ಮೇಲೆ, ತನ್ನ ಖಾಸಗಿ ವಲಯದಿಂದ ಹೊರಬರಲು ಪ್ರಯತ್ನಿಸುವ ಪ್ರತಿಯೊಬ್ಬ ಮಹಿಳೆಯೂ ಒಂದಲ್ಲ ಒಂದು ರೀತಿಯ ದೌರ್ಜನ್ಯಕ್ಕೆ ಒಳಗಾಗುತ್ತಲೇ ಬಂದಿದ್ದಾಳೆ. ಮೈಸೂರಿನಲ್ಲಿ ಮೊನ್ನೆ ನಡೆದ ಕಾಲೇಜು ವಿದ್ಯಾರ್ಥಿನಿಯ ರೇಪ್ ಕೇಸಿನಲ್ಲಿ ಆ ವಿದ್ಯಾರ್ಥಿನಿಯನ್ನೆ ದೂಷಿಸಿದವರು ಎಷ್ಟೋ ಜನ. ಈ ಹಿಂದೆ ದೆಹಲಿಯಲ್ಲಿ ನಡೆದ ನಿರ್ಭಯಾ ಕೇಸಿನಲ್ಲಿ ಕೂಡ ಇಂತಹದೇ ಮಾತುಗಳು ಕೇಳಿಬಂದಿದ್ದವು.

ಬಿಜೆಪಿ ನಾಯಕರೊಬ್ಬರು ಸಂತ್ರಸ್ತೆ, ’ಅಣ್ಣಾ ನನ್ನನ್ನು ಬಿಟ್ಟುಬಿಡು’ ಎಂದು ಕೇಳಿಕೊಳ್ಳಬೇಕಾಗಿತ್ತು ಎಂದರೆ, ಇನ್ನೊಬ್ಬರು ’ಹನುಮಾನ್ ಚಾಲೀಸಾ’ ಹೇಳಬೇಕಾಗಿತ್ತು ಎಂದರು. ಈ ಮನೋರೋಗಕ್ಕೆ ಚಿಕಿತ್ಸೆ ಇದೆಯೇ? ಹೆಣ್ಣು ತಿರುಗಾಡುವ ಸಮಯ, ಉಟ್ಟುಕೊಳ್ಳುವ ಬಟ್ಟೆ, ಯಾರ ಜೊತೆ ತಿರುಗಾಡುತ್ತಾಳೆ, ಎಂತಹ ಸ್ಥಳಕ್ಕೆ ಹೋಗುತ್ತಾಳೆ, ಕೆಲವೊಮ್ಮೆಯಂತೂ ಏನು ತಿನ್ನುತ್ತಾಳೆ ಎಂಬುದು ಕೂಡ ಸಾರ್ವಜನಿಕ ಚರ್ಚೆಯ ವಸ್ತುವಾಗುತ್ತದೆ. ಹಿಂದಿ ಭಾಷೆಯ ’ಪಿಂಕ್ ಎಂಬ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್‌ರ ಒಂದು ಮಾತಿದೆ – “ಈ ದೇಶದಲ್ಲಿ ಸ್ಥಳ ಹೆಣ್ಣುಮಕ್ಕಳ ನಡತೆಯನ್ನು ನಿರ್ಧರಿಸುತ್ತದೆ; ದೇವಸ್ಥಾನ ಅಥವಾ ಲೈಬ್ರರಿಯಲ್ಲಿ ಪರಿಚಯವಾದರೆ ಒಳ್ಳೆ ಹುಡುಗಿ, ಪಬ್ ಅಥವಾ ಡಿಸ್ಕೊದಲ್ಲಿ ಸಿಕ್ಕರೆ ಪ್ರಶ್ನಾರ್ಹ ನಡತೆ ಹೊಂದಿದವಳು” ಎಂದು. ಮೈಸೂರು ಘಟನೆ ನಂತರ ರಾಜ್ಯದ ಗೃಹಮಂತ್ರಿ, ಸಂತ್ರಸ್ತೆ ಏಳು ಗಂಟೆ ನಂತರ ಅಂತಹ ಸ್ಥಳಕ್ಕೆ ಹೋಗಿದ್ದು ತಪ್ಪು ಎಂದಾಗ ಈ ಮೇಲಿನ ಮಾತು ನೆನಪಾಯ್ತು.

ಇದೇ ದಂಡಸಂಹಿತೆಯ 497 ವಿಧಿಯಾದ “ವ್ಯಭಿಚಾರ ಒಂದು ದಂಡನಾರ್ಹ ಅಪರಾಧ” ಎಂಬುದನ್ನು ಸುಪ್ರೀಂ ಕೋರ್ಟ್ ತೆಗೆದು ಹಾಕಿದಾಗ ಆ ಬಗ್ಗೆ ಸಾರ್ವಜನಿಕರಿಗೆ ಸರಿಯಾದ ತಿಳಿವಳಿಕೆ ಕೊಡುವ ಪ್ರಯತ್ನಗಳಾಗಲಿಲ್ಲ. ಹೇಗೆ ಈ ಕಾನೂನು ಹೆಣ್ಣನ್ನು ಕೊಟ್ಟಿಗೆಯಲ್ಲಿ ಕಟ್ಟಿದ ಹಸುವಿನಂತೆ ಪರಿಗಣಿಸುತ್ತದೆ ಎಂಬುದು ಇಂದಿಗೂ ಗೊಂದಲವಾಗಿ ಉಳಿದಿದೆ.

ಇಂದೂ ವೈವಾಹಿಕ ಅತ್ಯಾಚಾರವನ್ನು ಅಪರಾಧ ಎಂದು ಪರಿಗಣಿಸದ 36 ರಾಷ್ಟ್ರಗಳಲ್ಲಿ ಭಾರತವೂ ಒಂದು. ಇದಕ್ಕೆ ಒಂದು ಮುಖ್ಯಕಾರಣ “ಮದುವೆ ಎಂಬುದು ಲೈಂಗಿಕ ಸಂಪರ್ಕಕ್ಕೆ ಅಪರೋಕ್ಷ ಸಮ್ಮತಿ” ಎಂಬ ಕಲ್ಪನೆ. ಜೊತೆಗೆ ಮದುವೆ ಎಂಬ ವ್ಯವಸ್ಥೆ, ಸಾಮಾಜಿಕ ಚಲನೆಯಲ್ಲಿ ಮನುಷ್ಯ ಕಂಡುಕೊಂಡ ಒಂದು ವ್ಯವಸ್ಥೆ ಎಂದು ತಿಳಿಯದೆ ಧಾರ್ಮಿಕ ಸಂಸ್ಕಾರಗಳ ಭಾಗವಾಗಿಸಿದ್ದು ಕೂಡ ಕಾರಣ. ಸುಳ್ಳು ಕೇಸುಗಳು ದಾಖಲಾಗಬಹುದು, ಹೆಂಗಸರು ಇದರ ದುರುಪಯೋಗ ಮಾಡಿಕೊಳ್ಳಬಹುದು ಎಂಬುದು ಕಾನೂನು ತರದೇ ಇರಲು ಸಮರ್ಥನೆ
ಅಲ್ಲ. ಬದಲಾವಣೆ ಕಾಲದ ನಿಯಮ, ಅದು ಆರೋಗ್ಯಪೂರ್ಣವಾಗಿದ್ದರೆ ಸಮಾಜ ಸ್ವಸ್ಥವಾಗಿರುತ್ತದೆ.

ರಾಜಲಕ್ಷ್ಮಿ ಅಂಕಲಗಿ

ರಾಜಲಕ್ಷ್ಮಿ ಅಂಕಲಗಿ
ಹೈಕೋರ್ಟ್ ವಕೀಲರು, ಹಲವು ಜನಪರ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೆ. ಕಾನೂನು ವಿಷಯಗಳ ಮೇಲೆ ಹಲವು ಲೇಖನಗಳನ್ನು ಪ್ರಕಟಿಸಿದ್ದಾರೆ.


ಇದನ್ನೂ ಓದಿ: 200 ಹಲ್ಲಾ ಹೋ: ಪ್ರತೀಕಾರ ಹತ್ಯೆಯ ಸುತ್ತ ಮಹತ್ವದ ಜಾತಿ ದೌರ್ಜನ್ಯದ ಪ್ರಶ್ನೆಗಳು

ಇದನ್ನೂ ಓದಿ: ಮಹಿಳಾ ಮುಖ್ಯ ನ್ಯಾಯಮೂರ್ತಿ: ತನ್ನ ಪೂರ್ವಾಗ್ರಹಗಳಿಂದ ಬಿಡುಗಡೆ ಹೊಂದುವುದೇ ಸುಪ್ರೀಂಕೋರ್ಟ್?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...