Homeಮುಖಪುಟಸಿವಂಗಿಗಳೇನೋ ತಂದಿರಿ; ಹುಲ್ಲುಗಾವಲುಗಳ ರಕ್ಷಣೆ ಯಾವಾಗ?

ಸಿವಂಗಿಗಳೇನೋ ತಂದಿರಿ; ಹುಲ್ಲುಗಾವಲುಗಳ ರಕ್ಷಣೆ ಯಾವಾಗ?

- Advertisement -
- Advertisement -

ಈಗ ಮಾಧ್ಯಮಗಳಲ್ಲೆಲ್ಲಾ ಪ್ರಧಾನಿಗಳ ಜನ್ಮದಿನದಂದು ತಂದು ಬಿಡಲಾದ ಕನ್ನಡದ ಸಿವಂಗಿ ಎಂದು ಹೆಸರುಳ್ಳ ಚೀತಾಗಳದ್ದೇ ಸುದ್ದಿ. ಇದಕ್ಕೆ, ನಮ್ಮ ದೇಶದಿಂದ ಅಳಿದುಹೋದ ಪ್ರಬೇಧವೊಂದನ್ನು ಮತ್ತೆ ಅವತರಿಸುವಂತೆ ಮಾಡಲು ಮೋದಿಯವರೇ ಬರಬೇಕಾಯಿತು ಎಂದೆಲ್ಲ ಪ್ರಚಾರವನ್ನೂ ಕೊಡಲಾಯಿತು. ಆದರೆ ವಾಸ್ತವದ ವಿಷಯವೆಂದರೆ ಭಾರತದಲ್ಲಿದ್ದ ಸಿವಂಗಿಯ ಉಪ ಪ್ರಬೇಧವೇ ಬೇರೆ ಮತ್ತು ಆಫ್ರಿಕಾದಲ್ಲಿದ್ದ ಸಿವಂಗಿಯ ಉಪ ಪ್ರಬೇಧವೇ ಬೇರೆ. ಹೇಗೆ ಆಫ್ರಿಕಾದ ಸಿಂಹಗಳನ್ನು ಭಾರತದ ಗಿರ್ ಅರಣ್ಯದಲ್ಲಿರುವ ಸಿಂಹಗಳೆನ್ನಲಾಗದೋ, ಹೇಗೆ ಸೈಬೀರಿಯಾದ ಹುಲಿಗಳನ್ನು ಭಾರತದ ಹುಲಿಗಳೆನ್ನಲಾಗದೋ, ಹಾಗೆಯೇ ಆಫ್ರಿಕಾದ ಸಿವಂಗಿಗಳು ಆನುವಂಶಿಕವಾಗಿ ಭಾರತದ ಅಥವಾ ಏಷ್ಯಾದ ಸಿವಂಗಿಗಳಾಗಲಾರವು. ಐತಿಹಾಸಿಕವಾಗಿ ಏಷಿಯಾದ ಸಿವಂಗಿಗಳು ಮಧ್ಯಪ್ರಾಚ್ಯದಿಂದ ಹಿಡಿದು ಭಾರತದವರೆಗಿನ ಭೂ ಪ್ರದೇಶದಲ್ಲಿ ಕಂಡುಬರುತ್ತಿದ್ದವು. ಆದರೆ ಅತಿಯಾದ ಬೇಟೆ ಮತ್ತು ಆವಾಸದ ಕುಗ್ಗುವಿಕೆಯ ಕಾರಣಗಳಿಂದಾಗಿ ಕಳೆದ ಶತಮಾನದ ಮಧ್ಯಭಾಗದಲ್ಲಿ ತಮ್ಮ ವ್ಯಾಪ್ತಿಯ ಬಹುಪಾಲು ಪ್ರದೇಶಗಳಲ್ಲಿ ಈ ಸಿವಂಗಿಗಳು ಅವಸಾನ ಹೊಂದಿದವು. ಈಗಲೂ ಕೂಡ ಏಷಿಯಾದ ಸಿವಂಗಿಗಳು ಇರಾನಿನ ಕೆಲ ಸಂರಕ್ಷಿತ ಪ್ರದೇಶದಲ್ಲಿ ಉಳಿದುಕೊಂಡಿವೆ. ಆದರೆ ಅವುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಹತ್ತು ವರ್ಷಗಳ ಹಿಂದೆ ಸುಮಾರು 80ರಷ್ಟು ಮಾತ್ರ ಇದ್ದ ಸಿವಂಗಿಗಳು ಈಗಿನ ಗಣತಿಯ ಪ್ರಕಾರ 20ಕ್ಕೂ ಕಡಿಮೆ ಎಂದು ಅಂದಾಜಿಸಲಾಗಿದೆ.

ಸಿವಂಗಿಗಳು ಕಾಣಬರುವುದು ಉಷ್ಣ ಪ್ರದೇಶದ ಹುಲ್ಲುಗಾವಲು ಮತ್ತು ಅರೆ ಮರುಭೂಮಿಯಂತಹ ಪ್ರದೇಶಗಳಲ್ಲಿ. ಅವುಗಳ ಅಳಿವಿಗೆ ಸೂಕ್ತ ಆವಾಸದ ನಾಶವೇ ಮುಖ್ಯವಾದ ಕಾರಣ. ನಮ್ಮ ದೇಶದಲ್ಲಿ ಸಿವಂಗಿಗಳು ಇರಬಹುದಾದ ಆವಾಸವು ಹೆಚ್ಚಿನ ಪ್ರಮಾಣದಲ್ಲೇನೂ ಉಳಿದಿಲ್ಲ. ಅವೆಲ್ಲ ಖರಾಬು ಅಥವಾ ಬರಡು ಭೂಮಿಗಳೆಂದು ಪರಿಗಣಿಸಲ್ಪಟ್ಟು ಕೈಗಾರಿಕೆ ಮತ್ತಿತರ ಅರಣ್ಯೇತರ ಬಳಕೆಗೆ ವಿನಿಯೋಗಿಸಲ್ಪಟ್ಟಿವೆ. ನಮ್ಮ ದೇಶದಿಂದ ಸಿವಂಗಿಗಳೇನೋ ದಶಕಗಳ ಹಿಂದೆ ನಶಿಸಿ ಹೋದವು ಆದರೆ ಲಕ್ಷಾಂತರ ವರ್ಷಗಳಿಂದ ಇದೇ ಸಿವಂಗಿಗಳ ಜೊತೆಯಲ್ಲಿಯೇ ಆವಾಸವನ್ನು ಹಂಚಿಕೊಂಡಿದ್ದ ಇತರ ಜೀವ ಪ್ರಬೇಧಗಳ ಪರಿಸ್ಥಿತಿಯೇನು? ಸಿವಂಗಿಗಳಂತೆಯೇ ಹುಲ್ಲುಗಾವಲು ಮತ್ತು ಅರೆ ಮರುಭೂಮಿ ಪ್ರದೇಶದ ಮೇಲೆ ಅವಲಂಬಿತವಾದ ಅನೇಕ ಜೀವಿ ಪ್ರಬೇಧಗಳು ಅಳಿವಿನತ್ತ ಮುಖಮಾಡಿ ನಿಂತಿವೆ.

ರಾಜಸ್ಥಾನ, ಗುಜರಾತಿನ ಅರೆ ಮರುಭೂಮಿ ಪ್ರದೇಶಗಳು, ಪಾಕಿಸ್ತಾನದ ಸಿಂಧ್ ಪ್ರಾಂತ್ಯ ಮತ್ತು ಕರ್ನಾಟಕವನ್ನೂ ಒಳಗೊಂಡ ದಖ್ಖನ್ ಪ್ರಸ್ಥಭೂಮಿಯ ಒಣ ಹುಲ್ಲುಗಾವಲಿನಲ್ಲಿ ಕಂಡುಬರುವ, ಕನ್ನಡದಲ್ಲಿ ಎರ್ಲಡ್ಡು ಅಥವಾ ದೊರವಾಯನ ಹಕ್ಕಿ ಎಂದು ಕರೆಸಿಕೊಳ್ಳುವ ಗ್ರೇಟ್ ಇಂಡಿಯನ್ ಬಸ್ಟರ್ಡ್ ಹಕ್ಕಿಯು ಇಂಥದೇ ಹುಲ್ಲುಗಾವಲನ್ನು ಅವಲಂಬಿಸಿದ ಜೀವಿ. ಮೊದಲು ವ್ಯಾಪಕವಾಗಿ ಕಂಡುಬರುತ್ತಿದ್ದ ಈ ಹಕ್ಕಿಗಳು ಆವಾಸದ ನಾಶ ಮತ್ತು ಬೇಟೆಯ ಕಾರಣಗಳಿಂದ ಅಳಿವಿನಂಚಿಗೆ ಬಂದುನಿಂತಿವೆ. ಕೆಲವೇ ನೂರರಷ್ಟು ಮಾತ್ರ ಉಳಿದುಕೊಂಡಿರುವ ಈ ಹಕ್ಕಿಗಳು ಒಮ್ಮೆ ನಾಶವಾದರೆ ಮತ್ತೆಲ್ಲಿಂದಲೂ ಇವುಗಳನ್ನು ತರಲಾಗದು. ನಿಯಂತ್ರಣ ಇಲ್ಲದ ಅಭಿವೃದ್ಧಿ, ಅಗತ್ಯವಿಲ್ಲದೆಯೂ ನಿರ್ಮಾಣಗೊಳ್ಳುವ ರಸ್ತೆಗಳು ಮತ್ತು ಹೈಟೆನ್ಷನ್ ವಿದ್ಯುತ್ ತಂತಿಗಳು ಇವುಗಳಿಗೆ ಮಾರಕವಾಗಿವೆ.

ಸರಿಸುಮಾರು ಇದೇ ರೀತಿಯ ಆವಾಸದಲ್ಲಿ ಕಂಡುಬರುವ ಮತ್ತು ಮುಂಚೆ ವ್ಯಾಪಕವಾಗಿದ್ದ ಲೆಸ್ಸರ್ ಫ್ಲೋರಿಕನ್ ಅಥವಾ ಚೊಟ್ಟಿ ನವಿಲಕ್ಕಿ ಎಂದು ಕರೆಯಲ್ಪಡುವ ಹಕ್ಕಿಯು ಕೂಡ ಇಂದು ಇಲ್ಲವೆನ್ನುವಷ್ಟು ಕಡಿಮೆಯಾಗಿದೆ. ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಹತ್ತಿರದ ಹೆಸರಘಟ್ಟದ ಹುಲ್ಲುಗಾವಲಿನಲ್ಲಿ ಅಕಸ್ಮಾತ್ತಾಗಿ ಕಂಡ ಈ ಹಕ್ಕಿಯು ಸ್ಥಳೀಯ ಪಕ್ಷಿ ವೀಕ್ಷಕರಲ್ಲಿ ರೋಮಾಂಚನವನ್ನೇ ಸೃಷ್ಟಿಸಿತ್ತು. ಯಾಕೆಂದರೆ ದಶಕಗಳಿಂದೀಚೆಗೆ ಆ ಹಕ್ಕಿಯು ಸ್ಥಳೀಯವಾಗಿ ಕಾಣಿಸಿರಲೇ ಇಲ್ಲ. ಇದೇ ಹುಲ್ಲುಗಾವಲನ್ನು ಸಂರಕ್ಷಣಾ ಮೀಸಲು ಪ್ರದೇಶವಾಗಿ ಘೋಷಣೆ ಮಾಡುವಂತೆ ಸ್ಥಳೀಯ ವನ್ಯಜೀವಿ ಆಸಕ್ತರು ಒತ್ತಾಯಿಸುತ್ತಿದ್ದಾರೆ. ಇಲ್ಲವಾದರೆ ಬೆಂಗಳೂರಿಗೆ ಈ ಹಕ್ಕಿಗಳು ಬರುವ ಸಾಧ್ಯತೆಯು ಶಾಶ್ವತವಾಗಿ ಇಲ್ಲವಾಗುತ್ತದೆ. ಹಾಗೆಯೇ, ಒಣ ಪ್ರದೇಶದ ಹುಲ್ಲುಗಾವಲಿನಲ್ಲಿ ಮಾತ್ರ ಕಂಡುಬರುತ್ತಿದ್ದ ಜೇರ್ಡನ್ಸ್ ಕೋರ್ಸರ್ ಎಂಬ ಹಕ್ಕಿ ಕೂಡ ಬಹುಪಾಲು ನಾಶವಾಗಿದೆ. ಇದು ಈಗ ಆಂಧ್ರದ ಲಂಕಾಮಲ್ಲೇಶ್ವರ ವನ್ಯಜೀವಿಧಾಮದಲ್ಲಿ ಮಾತ್ರ ಇರಬಹುದೆಂದು ನಂಬಲಾಗಿದೆ. ಕೊನೆಯ ಬಾರಿಗೆ ಈ ಹಕ್ಕಿಯನ್ನು ನೋಡಿ ದಶಕಗಳೇ ಕಳೆದಿವೆ. ಹೀಗೆ ಸಿವಂಗಿಯ ಜೊತೆಗೆ ಇವೆಲ್ಲ ಪ್ರಬೇಧದ ಜೀವಿಗಳು ಒಂದೊಂದಾಗಿ ಅಳಿವಿನತ್ತ ನಡೆದಿವೆ.

ವರ್ಷದ ಬಹುಪಾಲು ಮೇಲ್ನೋಟಕ್ಕೆ ಒಣಗಿದಂತೆ ಕಾಣುವ ಹುಲ್ಲುಗಾವಲುಗಳ ಆವಾಸದ ವಿಶೇಷತೆಯೇ ಬೇರೆ, ಇವುಗಳು ಪೋಷಿಸುವ ಜೀವವೈವಿಧ್ಯ ನಿಜಕ್ಕೂ ಅಚ್ಚರಿ ಹುಟ್ಟಿಸುವಂತದ್ದು. ಇವುಗಳ ಕುರಿತು ನಮ್ಮ ಅರಿವು ಕೂಡ ಕಡಿಮೆಯೇ; ಏಕೆಂದರೆ ಈ ಆವಾಸವನ್ನು ನಾವೀಗಾಗಲೇ ಬರಡು ಭೂಮಿಯೆಂದೂ ಕೃಷಿಗೆ ಯೋಗ್ಯವಲ್ಲದ ಭೂಮಿಯೆಂದೂ ವರ್ಗೀಕರಿಸಿಯಾಗಿದೆ. ಈ ಪ್ರದೇಶಗಳಲ್ಲಿ ನಾವು ಮಾಡುವ ಎಲ್ಲ ಚಟುವಟಿಕೆಗಳೂ ಅಲ್ಲಿನ ಜೀವ ಪ್ರಬೇಧಕ್ಕೆ ಕಂಟಕವೇ ಆಗುತ್ತದೆ. ಉದಾಹರಣೆಗೆ, ಅತ್ಯಂತ ಜನಪ್ರಿಯವಾದ ಪರಿಸರ ಪ್ರೇಮಿ ಚಟುವಟಿಕೆಯೆಂದು ಕರೆಸಿಕೊಳ್ಳಲ್ಪಡುವ ಗಿಡ ನೆಡುವ ಚಟುವಟಿಕೆ ಹುಲ್ಲುಗಾವಲಿಗೆ ಮತ್ತು ಅಲ್ಲಿನ ಜೀವಿಗಳಿಗೆ ಮಾರಕ. ಹುಲ್ಲುಗಾವಲನ್ನು ನಾವು ಅರಣ್ಯವಾಗಿ ಪರಿವರ್ತಿಸಿದರೆ ಅಲ್ಲಿನ ಸ್ಥಳೀಯ ಜೀವಪ್ರಬೇಧಗಳು ಅಲ್ಲಿಂದ ಮಾಯವಾಗುತ್ತವೆ. ಅದೇ ರೀತಿ ಜಾಗತಿಕ ತಾಪಮಾನದಿಂದ ರಕ್ಷಿಸುವ ಮತ್ತು ಪರಿಸರ ಸ್ನೇಹಿ ಎಂದು ನಂಬಲ್ಪಡುವ ಸೌರ ವಿದ್ಯುತ್ ಕೂಡ ಹುಲ್ಲುಗಾವಲಿನ ಆವಾಸಕ್ಕೆ ಕಂಟಕವೇ ಆಗಿದೆ. ನಮ್ಮದೇ ನಾಡಿನ ಪಾವಗಡದಲ್ಲಿ ಸ್ಥಾಪಿಸಲಾದ ಏಷಿಯಾದ ಅತಿದೊಡ್ಡ ಸೌರ ವಿದ್ಯುತ್ ಘಟಕವು ಇಂತಹುದೇ ಹುಲ್ಲುಗಾವಲು ಮತ್ತು ಮಳೆಯಾಧಾರಿತ ಒಣ ಕೃಷಿ ಭೂಮಿಯಲ್ಲಿಯೇ ಇದೆ. ಶಾಶ್ವತವಾಗಿ ಹುಲ್ಲುಗಾವಲನ್ನು ಮುಚ್ಚಿಹಾಕುವ ಸೌರ ಫಲಕಗಳು, ಅವುಗಳ ಸುತ್ತ ಹುಲ್ಲು ಮತ್ತಿತರ ಸಸ್ಯಗಳು ಬೆಳೆಯದಂತೆ ಸಿಂಪಡಿಸುವ ಕಳೆನಾಶಕಗಳು ಮತ್ತು ಈ ಸೌರ ಫಲಕಗಳನ್ನು ಸ್ವಚ್ಛಗೊಳಿಸಲು ಬಳಸುವ ಕೋಟಿಗಟ್ಟಲೆ ಲೀಟರ್‌ನಷ್ಟು ನೀರು, ಇವೆಲ್ಲವೂ ಈ ಯೋಜನೆಗಳು ಎಷ್ಟು ಪರಿಸರ ಸ್ನೇಹಿ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತ್ತವೆ.

ವನ್ಯಜೀವಿ ಸಂರಕ್ಷಣೆಯೆಂಬುದು, ಹಿಂದಿನ ಅಂಕಿ ಅಂಶಗಳನ್ನು ನೋಡಿ ಅದರ ಆಧಾರದ ಮೇಲೆ ದಶಕಗಳಷ್ಟು ಮುಂದಿನ ಯೋಜನೆಯನ್ನಿಟ್ಟುಕೊಂಡು ಮಾಡುವ ಒಂದು ವೈಜ್ಞಾನಿಕ ಪ್ರಕ್ರಿಯಯಾಗಿದೆ. ಈ ಹಿಂದೆ ಮಾಡಿದ ತಪ್ಪುಗಳಿಂದ ನಾವು ಎಷ್ಟು ಜೀವ ಸಂಪತ್ತನ್ನು ಕಳೆದುಕೊಂಡಿದ್ದೇವೆ ಮತ್ತು ಅದು ಮರುಕಳಿಸದಂತೆ ನಾವು ಕೈಗೊಳ್ಳಬೇಕಾದ ಕ್ರಮಗಳೇನೆಂಬ ಸಂಗತಿಗಳು, ಯಾವುದೋ ಪ್ರದೇಶದ, ಬೇರೊಂದು ಉಪ ಪ್ರಬೇಧದ ಜೀವಿಯೊಂದನ್ನು ನಮ್ಮಲ್ಲಿಗೆ ತಂದು ಬಿಡುವುದಕ್ಕಿಂತ ಹೆಚ್ಚಿನ ಮಹತ್ವ ಪಡೆದುಕೊಳ್ಳಬೇಕು. ಇಲ್ಲದೆ ಹೋದರೆ ಲಕ್ಷಾಂತರ ವರ್ಷಗಳಿಂದ ಭೂಮಿಯ ಮೇಲಿದ್ದ ಒಂದೊಂದೇ ಜೀವಪ್ರಬೇಧಗಳನ್ನು ನಾವು ಶಾಶ್ವತವಾಗಿ ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತೇವೆ.

ಗುರುಪ್ರಸಾದ್ ತಿಮ್ಮಾಪುರ

ಗುರುಪ್ರಸಾದ್ ತಿಮ್ಮಾಪುರ
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಗುರು ಪರಿಸರ, ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸರ ಕಾಳಜಿಗೆ ಸಂಬಂಧಿಸಿದಂತೆ ಹಲವು ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ಚೀತಾಗಳನ್ನೇನೋ ತಂದಾಯಿತು; ಮುಂದಿನ ಪರಿಣಾಮ ಬಲ್ಲಿರೇನು? ಪರಿಸರತಜ್ಞರು ಹೇಳಿದ್ದೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೂ. 170 ಕೋಟಿ ದಂಡ ಪಾವತಿಸಲು ಮುಂದಾದ ಅದಾನಿ : ಏನಿದು ಪ್ರಕರಣ?

ಅಮೆರಿಕದ ನ್ಯಾಯಾಲಯದಲ್ಲಿ ದಾಖಲಾಗಿದ್ದ ವಂಚನೆ ಮತ್ತು ಲಂಚದ ಪ್ರಕರಣಕ್ಕೆ ಸಂಬಂಧಿಸಿದಂತೆ, ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಟ್ಟು 18 ಮಿಲಿಯನ್ ಡಾಲರ್ (ಸುಮಾರು 170 ಕೋಟಿ ರೂಪಾಯಿ) ದಂಡ ಪಾವತಿಸಲು ಒಪ್ಪಿಕೊಳ್ಳುವ ಮೂಲಕ...

ಭೋಜಶಾಲಾ-ಕಮಲ್ ಮೌಲಾ ಪ್ರಕರಣದಲ್ಲಿ ಹಿಂದೂಗಳ ಪರ ತೀರ್ಪು…ಮಸೀದಿಯಲ್ಲ ದೇವಸ್ಥಾನವೆಂದ ಕೋರ್ಟ್ : ಏನಿದು ವಿವಾದ?

ಸುಮಾರು 100 ವರ್ಷಗಳ ಹಳೆಯ ವಿವಾದವಾದ ಭೋಜಶಾಲಾ-ಕಮಲ್ ಮೌಲಾ ಮಸೀದಿ ಪ್ರಕರಣದಲ್ಲಿ ಶುಕ್ರವಾರ (ಮೇ 15) ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದ್ದು, ಭೋಜಶಾಲಾದಲ್ಲಿರುವ ಐತಿಹಾಸಿಕ ಸ್ಥಳವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು...

“ಮಹಿಳಾ ಮೀಸಲಾತಿ ಮುಖವಾಡದಲ್ಲಿ ಡಿಲಿಮಿಟೇಷನ್ ಕುತಂತ್ರ ವಿಫಲ” ಬಿಜೆಪಿಗೆ ದಕ್ಷಿಣ ಭಾರತದ ಎಚ್ಚರಿಕೆ

ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2026ರ ಏಪ್ರಿಲ್ 16ರಂದು ಸಂಸತ್ತಿನ ವಿಶೇಷ ಅಧಿವೇಶನ ಕರೆದು, ಮಹಿಳಾ ಮೀಸಲಾತಿ ಅನುಷ್ಠಾನವನ್ನು ತ್ವರಿತಗೊಳಿಸುವ ನೆಪವನ್ನು ಮುಂದುಮಾಡಿ ಮೂರು ಮಸೂದೆಗಳನ್ನು ಮಂಡಿಸಿತು. ಇವುಗಳಲ್ಲಿ ಪ್ರಮುಖವಾದ ಸಂವಿಧಾನ (131ನೇ...

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...

ಗುಜರಾತ್| ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಹಲ್ಲೆ

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮಡಿ ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ದಲಿತ ವರನ ಮೇಲೆ ಮೇಲ್ಜಾತಿಯ ಪುರುಷರ ಗುಂಪೊಂದು ಜಾತಿ ನಿಂದನೆ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೇ 10 ರಂದು...

ಆತಂಕಕಾರಿಯಾದ ಆನೆ ದಾಳಿ

ಆನೆ ದಾಳಿ ಹಿಂದೆಂದಿಗಿಂತಲೂ ದುಪ್ಪಟ್ಟಾಗಿದೆ. ಅರಣ್ಯಮಂತ್ರಿ ಈಶ್ವರ್ ಖಂಡ್ರೆಯವರ ಪ್ರಕಾರ ಆನೆಗಳ ಸಂಖ್ಯೆ ದುಪ್ಪಟ್ಟಾಗಿದೆ. ಕಾಡಿನ ಪ್ರಮಾಣ ಅಷ್ಟೆ ಇದೆ. ಅಂದರೆ ಕಾಡಿನ ಪ್ರಮಾಣ ಹೆಚ್ಚು ಮಾಡಬೇಕೆಂದರೆ ಮನುಷ್ಯರ ಆವಾಸ ಇಲ್ಲದೆ ಆನೆಗಳಿಗಾಗಿ...

ವೈದ್ಯಕೀಯ ಸೀಟುಗಳ ಹಂಚಿಕೆ ಕೇಂದ್ರೀಕರಣಕ್ಕೆ ದಕ್ಷಿಣದ ವಿರೋಧ; ನೀಟ್ ಪರೀಕ್ಷೆಯನ್ನೇ ರದ್ದುಗೊಳಿಸಲು ಇದು ಸಕಾಲ

ರಾಜ್ಯಪಟ್ಟಿಯಲ್ಲಿದ್ದ ಶಿಕ್ಷಣದ ಹಕ್ಕನ್ನು ನೀಟ್‌ ಹೆಸರಿನಲ್ಲಿ ಕೇಂದ್ರದ ಜಂಟಿ ಪಟ್ಟಿಗೆ ಸೇರಿಸುವ ಒಕ್ಕೂಟ ಸರ್ಕಾರದ ನಿರ್ಧಾರದಿಂದ ದಕ್ಷಿಣದ ರಾಜ್ಯಗಳು ಭಾರಿ ನಷ್ಟ ಅನುಭವಿಸುತ್ತಿವೆ. ಜೊತೆಗೆ, ನೀಟ್ ಪಾಸ್‌ ಮಾಡುವ ಒತ್ತಡ ತಾಳಲಾರದೆ ದೇಶದಾದ್ಯಂತ...

‘ಮತ’ ವ್ಯರ್ಥ ಮಾಡದ ಮತದಾರ: 2026ರಲ್ಲಿ ಕುಸಿಯಿತು ‘ನೋಟಾ’ ಅಬ್ಬರ

2026ರ ವಿಧಾನಸಭಾ ಚುನಾವಣೆಯಲ್ಲಿ ಅಸ್ಸಾಂ, ಕೇರಳ, ಪುದುಚೇರಿ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಾದ್ಯಂತ ಸುಮಾರು 10.9 ಲಕ್ಷ ಮತಗಳು 'ನೋಟಾ' (ಯಾರಿಗೂ ಮತವಿಲ್ಲ) ಪಾಲಾಗಿವೆ. ಆದರೆ, 2016 ಮತ್ತು 2021ರ ಚುನಾವಣೆಗಳಿಗೆ ಹೋಲಿಸಿದರೆ...