Homeಮುಖಪುಟಸಿವಂಗಿಗಳೇನೋ ತಂದಿರಿ; ಹುಲ್ಲುಗಾವಲುಗಳ ರಕ್ಷಣೆ ಯಾವಾಗ?

ಸಿವಂಗಿಗಳೇನೋ ತಂದಿರಿ; ಹುಲ್ಲುಗಾವಲುಗಳ ರಕ್ಷಣೆ ಯಾವಾಗ?

- Advertisement -
- Advertisement -

ಈಗ ಮಾಧ್ಯಮಗಳಲ್ಲೆಲ್ಲಾ ಪ್ರಧಾನಿಗಳ ಜನ್ಮದಿನದಂದು ತಂದು ಬಿಡಲಾದ ಕನ್ನಡದ ಸಿವಂಗಿ ಎಂದು ಹೆಸರುಳ್ಳ ಚೀತಾಗಳದ್ದೇ ಸುದ್ದಿ. ಇದಕ್ಕೆ, ನಮ್ಮ ದೇಶದಿಂದ ಅಳಿದುಹೋದ ಪ್ರಬೇಧವೊಂದನ್ನು ಮತ್ತೆ ಅವತರಿಸುವಂತೆ ಮಾಡಲು ಮೋದಿಯವರೇ ಬರಬೇಕಾಯಿತು ಎಂದೆಲ್ಲ ಪ್ರಚಾರವನ್ನೂ ಕೊಡಲಾಯಿತು. ಆದರೆ ವಾಸ್ತವದ ವಿಷಯವೆಂದರೆ ಭಾರತದಲ್ಲಿದ್ದ ಸಿವಂಗಿಯ ಉಪ ಪ್ರಬೇಧವೇ ಬೇರೆ ಮತ್ತು ಆಫ್ರಿಕಾದಲ್ಲಿದ್ದ ಸಿವಂಗಿಯ ಉಪ ಪ್ರಬೇಧವೇ ಬೇರೆ. ಹೇಗೆ ಆಫ್ರಿಕಾದ ಸಿಂಹಗಳನ್ನು ಭಾರತದ ಗಿರ್ ಅರಣ್ಯದಲ್ಲಿರುವ ಸಿಂಹಗಳೆನ್ನಲಾಗದೋ, ಹೇಗೆ ಸೈಬೀರಿಯಾದ ಹುಲಿಗಳನ್ನು ಭಾರತದ ಹುಲಿಗಳೆನ್ನಲಾಗದೋ, ಹಾಗೆಯೇ ಆಫ್ರಿಕಾದ ಸಿವಂಗಿಗಳು ಆನುವಂಶಿಕವಾಗಿ ಭಾರತದ ಅಥವಾ ಏಷ್ಯಾದ ಸಿವಂಗಿಗಳಾಗಲಾರವು. ಐತಿಹಾಸಿಕವಾಗಿ ಏಷಿಯಾದ ಸಿವಂಗಿಗಳು ಮಧ್ಯಪ್ರಾಚ್ಯದಿಂದ ಹಿಡಿದು ಭಾರತದವರೆಗಿನ ಭೂ ಪ್ರದೇಶದಲ್ಲಿ ಕಂಡುಬರುತ್ತಿದ್ದವು. ಆದರೆ ಅತಿಯಾದ ಬೇಟೆ ಮತ್ತು ಆವಾಸದ ಕುಗ್ಗುವಿಕೆಯ ಕಾರಣಗಳಿಂದಾಗಿ ಕಳೆದ ಶತಮಾನದ ಮಧ್ಯಭಾಗದಲ್ಲಿ ತಮ್ಮ ವ್ಯಾಪ್ತಿಯ ಬಹುಪಾಲು ಪ್ರದೇಶಗಳಲ್ಲಿ ಈ ಸಿವಂಗಿಗಳು ಅವಸಾನ ಹೊಂದಿದವು. ಈಗಲೂ ಕೂಡ ಏಷಿಯಾದ ಸಿವಂಗಿಗಳು ಇರಾನಿನ ಕೆಲ ಸಂರಕ್ಷಿತ ಪ್ರದೇಶದಲ್ಲಿ ಉಳಿದುಕೊಂಡಿವೆ. ಆದರೆ ಅವುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಹತ್ತು ವರ್ಷಗಳ ಹಿಂದೆ ಸುಮಾರು 80ರಷ್ಟು ಮಾತ್ರ ಇದ್ದ ಸಿವಂಗಿಗಳು ಈಗಿನ ಗಣತಿಯ ಪ್ರಕಾರ 20ಕ್ಕೂ ಕಡಿಮೆ ಎಂದು ಅಂದಾಜಿಸಲಾಗಿದೆ.

ಸಿವಂಗಿಗಳು ಕಾಣಬರುವುದು ಉಷ್ಣ ಪ್ರದೇಶದ ಹುಲ್ಲುಗಾವಲು ಮತ್ತು ಅರೆ ಮರುಭೂಮಿಯಂತಹ ಪ್ರದೇಶಗಳಲ್ಲಿ. ಅವುಗಳ ಅಳಿವಿಗೆ ಸೂಕ್ತ ಆವಾಸದ ನಾಶವೇ ಮುಖ್ಯವಾದ ಕಾರಣ. ನಮ್ಮ ದೇಶದಲ್ಲಿ ಸಿವಂಗಿಗಳು ಇರಬಹುದಾದ ಆವಾಸವು ಹೆಚ್ಚಿನ ಪ್ರಮಾಣದಲ್ಲೇನೂ ಉಳಿದಿಲ್ಲ. ಅವೆಲ್ಲ ಖರಾಬು ಅಥವಾ ಬರಡು ಭೂಮಿಗಳೆಂದು ಪರಿಗಣಿಸಲ್ಪಟ್ಟು ಕೈಗಾರಿಕೆ ಮತ್ತಿತರ ಅರಣ್ಯೇತರ ಬಳಕೆಗೆ ವಿನಿಯೋಗಿಸಲ್ಪಟ್ಟಿವೆ. ನಮ್ಮ ದೇಶದಿಂದ ಸಿವಂಗಿಗಳೇನೋ ದಶಕಗಳ ಹಿಂದೆ ನಶಿಸಿ ಹೋದವು ಆದರೆ ಲಕ್ಷಾಂತರ ವರ್ಷಗಳಿಂದ ಇದೇ ಸಿವಂಗಿಗಳ ಜೊತೆಯಲ್ಲಿಯೇ ಆವಾಸವನ್ನು ಹಂಚಿಕೊಂಡಿದ್ದ ಇತರ ಜೀವ ಪ್ರಬೇಧಗಳ ಪರಿಸ್ಥಿತಿಯೇನು? ಸಿವಂಗಿಗಳಂತೆಯೇ ಹುಲ್ಲುಗಾವಲು ಮತ್ತು ಅರೆ ಮರುಭೂಮಿ ಪ್ರದೇಶದ ಮೇಲೆ ಅವಲಂಬಿತವಾದ ಅನೇಕ ಜೀವಿ ಪ್ರಬೇಧಗಳು ಅಳಿವಿನತ್ತ ಮುಖಮಾಡಿ ನಿಂತಿವೆ.

ರಾಜಸ್ಥಾನ, ಗುಜರಾತಿನ ಅರೆ ಮರುಭೂಮಿ ಪ್ರದೇಶಗಳು, ಪಾಕಿಸ್ತಾನದ ಸಿಂಧ್ ಪ್ರಾಂತ್ಯ ಮತ್ತು ಕರ್ನಾಟಕವನ್ನೂ ಒಳಗೊಂಡ ದಖ್ಖನ್ ಪ್ರಸ್ಥಭೂಮಿಯ ಒಣ ಹುಲ್ಲುಗಾವಲಿನಲ್ಲಿ ಕಂಡುಬರುವ, ಕನ್ನಡದಲ್ಲಿ ಎರ್ಲಡ್ಡು ಅಥವಾ ದೊರವಾಯನ ಹಕ್ಕಿ ಎಂದು ಕರೆಸಿಕೊಳ್ಳುವ ಗ್ರೇಟ್ ಇಂಡಿಯನ್ ಬಸ್ಟರ್ಡ್ ಹಕ್ಕಿಯು ಇಂಥದೇ ಹುಲ್ಲುಗಾವಲನ್ನು ಅವಲಂಬಿಸಿದ ಜೀವಿ. ಮೊದಲು ವ್ಯಾಪಕವಾಗಿ ಕಂಡುಬರುತ್ತಿದ್ದ ಈ ಹಕ್ಕಿಗಳು ಆವಾಸದ ನಾಶ ಮತ್ತು ಬೇಟೆಯ ಕಾರಣಗಳಿಂದ ಅಳಿವಿನಂಚಿಗೆ ಬಂದುನಿಂತಿವೆ. ಕೆಲವೇ ನೂರರಷ್ಟು ಮಾತ್ರ ಉಳಿದುಕೊಂಡಿರುವ ಈ ಹಕ್ಕಿಗಳು ಒಮ್ಮೆ ನಾಶವಾದರೆ ಮತ್ತೆಲ್ಲಿಂದಲೂ ಇವುಗಳನ್ನು ತರಲಾಗದು. ನಿಯಂತ್ರಣ ಇಲ್ಲದ ಅಭಿವೃದ್ಧಿ, ಅಗತ್ಯವಿಲ್ಲದೆಯೂ ನಿರ್ಮಾಣಗೊಳ್ಳುವ ರಸ್ತೆಗಳು ಮತ್ತು ಹೈಟೆನ್ಷನ್ ವಿದ್ಯುತ್ ತಂತಿಗಳು ಇವುಗಳಿಗೆ ಮಾರಕವಾಗಿವೆ.

ಸರಿಸುಮಾರು ಇದೇ ರೀತಿಯ ಆವಾಸದಲ್ಲಿ ಕಂಡುಬರುವ ಮತ್ತು ಮುಂಚೆ ವ್ಯಾಪಕವಾಗಿದ್ದ ಲೆಸ್ಸರ್ ಫ್ಲೋರಿಕನ್ ಅಥವಾ ಚೊಟ್ಟಿ ನವಿಲಕ್ಕಿ ಎಂದು ಕರೆಯಲ್ಪಡುವ ಹಕ್ಕಿಯು ಕೂಡ ಇಂದು ಇಲ್ಲವೆನ್ನುವಷ್ಟು ಕಡಿಮೆಯಾಗಿದೆ. ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಹತ್ತಿರದ ಹೆಸರಘಟ್ಟದ ಹುಲ್ಲುಗಾವಲಿನಲ್ಲಿ ಅಕಸ್ಮಾತ್ತಾಗಿ ಕಂಡ ಈ ಹಕ್ಕಿಯು ಸ್ಥಳೀಯ ಪಕ್ಷಿ ವೀಕ್ಷಕರಲ್ಲಿ ರೋಮಾಂಚನವನ್ನೇ ಸೃಷ್ಟಿಸಿತ್ತು. ಯಾಕೆಂದರೆ ದಶಕಗಳಿಂದೀಚೆಗೆ ಆ ಹಕ್ಕಿಯು ಸ್ಥಳೀಯವಾಗಿ ಕಾಣಿಸಿರಲೇ ಇಲ್ಲ. ಇದೇ ಹುಲ್ಲುಗಾವಲನ್ನು ಸಂರಕ್ಷಣಾ ಮೀಸಲು ಪ್ರದೇಶವಾಗಿ ಘೋಷಣೆ ಮಾಡುವಂತೆ ಸ್ಥಳೀಯ ವನ್ಯಜೀವಿ ಆಸಕ್ತರು ಒತ್ತಾಯಿಸುತ್ತಿದ್ದಾರೆ. ಇಲ್ಲವಾದರೆ ಬೆಂಗಳೂರಿಗೆ ಈ ಹಕ್ಕಿಗಳು ಬರುವ ಸಾಧ್ಯತೆಯು ಶಾಶ್ವತವಾಗಿ ಇಲ್ಲವಾಗುತ್ತದೆ. ಹಾಗೆಯೇ, ಒಣ ಪ್ರದೇಶದ ಹುಲ್ಲುಗಾವಲಿನಲ್ಲಿ ಮಾತ್ರ ಕಂಡುಬರುತ್ತಿದ್ದ ಜೇರ್ಡನ್ಸ್ ಕೋರ್ಸರ್ ಎಂಬ ಹಕ್ಕಿ ಕೂಡ ಬಹುಪಾಲು ನಾಶವಾಗಿದೆ. ಇದು ಈಗ ಆಂಧ್ರದ ಲಂಕಾಮಲ್ಲೇಶ್ವರ ವನ್ಯಜೀವಿಧಾಮದಲ್ಲಿ ಮಾತ್ರ ಇರಬಹುದೆಂದು ನಂಬಲಾಗಿದೆ. ಕೊನೆಯ ಬಾರಿಗೆ ಈ ಹಕ್ಕಿಯನ್ನು ನೋಡಿ ದಶಕಗಳೇ ಕಳೆದಿವೆ. ಹೀಗೆ ಸಿವಂಗಿಯ ಜೊತೆಗೆ ಇವೆಲ್ಲ ಪ್ರಬೇಧದ ಜೀವಿಗಳು ಒಂದೊಂದಾಗಿ ಅಳಿವಿನತ್ತ ನಡೆದಿವೆ.

ವರ್ಷದ ಬಹುಪಾಲು ಮೇಲ್ನೋಟಕ್ಕೆ ಒಣಗಿದಂತೆ ಕಾಣುವ ಹುಲ್ಲುಗಾವಲುಗಳ ಆವಾಸದ ವಿಶೇಷತೆಯೇ ಬೇರೆ, ಇವುಗಳು ಪೋಷಿಸುವ ಜೀವವೈವಿಧ್ಯ ನಿಜಕ್ಕೂ ಅಚ್ಚರಿ ಹುಟ್ಟಿಸುವಂತದ್ದು. ಇವುಗಳ ಕುರಿತು ನಮ್ಮ ಅರಿವು ಕೂಡ ಕಡಿಮೆಯೇ; ಏಕೆಂದರೆ ಈ ಆವಾಸವನ್ನು ನಾವೀಗಾಗಲೇ ಬರಡು ಭೂಮಿಯೆಂದೂ ಕೃಷಿಗೆ ಯೋಗ್ಯವಲ್ಲದ ಭೂಮಿಯೆಂದೂ ವರ್ಗೀಕರಿಸಿಯಾಗಿದೆ. ಈ ಪ್ರದೇಶಗಳಲ್ಲಿ ನಾವು ಮಾಡುವ ಎಲ್ಲ ಚಟುವಟಿಕೆಗಳೂ ಅಲ್ಲಿನ ಜೀವ ಪ್ರಬೇಧಕ್ಕೆ ಕಂಟಕವೇ ಆಗುತ್ತದೆ. ಉದಾಹರಣೆಗೆ, ಅತ್ಯಂತ ಜನಪ್ರಿಯವಾದ ಪರಿಸರ ಪ್ರೇಮಿ ಚಟುವಟಿಕೆಯೆಂದು ಕರೆಸಿಕೊಳ್ಳಲ್ಪಡುವ ಗಿಡ ನೆಡುವ ಚಟುವಟಿಕೆ ಹುಲ್ಲುಗಾವಲಿಗೆ ಮತ್ತು ಅಲ್ಲಿನ ಜೀವಿಗಳಿಗೆ ಮಾರಕ. ಹುಲ್ಲುಗಾವಲನ್ನು ನಾವು ಅರಣ್ಯವಾಗಿ ಪರಿವರ್ತಿಸಿದರೆ ಅಲ್ಲಿನ ಸ್ಥಳೀಯ ಜೀವಪ್ರಬೇಧಗಳು ಅಲ್ಲಿಂದ ಮಾಯವಾಗುತ್ತವೆ. ಅದೇ ರೀತಿ ಜಾಗತಿಕ ತಾಪಮಾನದಿಂದ ರಕ್ಷಿಸುವ ಮತ್ತು ಪರಿಸರ ಸ್ನೇಹಿ ಎಂದು ನಂಬಲ್ಪಡುವ ಸೌರ ವಿದ್ಯುತ್ ಕೂಡ ಹುಲ್ಲುಗಾವಲಿನ ಆವಾಸಕ್ಕೆ ಕಂಟಕವೇ ಆಗಿದೆ. ನಮ್ಮದೇ ನಾಡಿನ ಪಾವಗಡದಲ್ಲಿ ಸ್ಥಾಪಿಸಲಾದ ಏಷಿಯಾದ ಅತಿದೊಡ್ಡ ಸೌರ ವಿದ್ಯುತ್ ಘಟಕವು ಇಂತಹುದೇ ಹುಲ್ಲುಗಾವಲು ಮತ್ತು ಮಳೆಯಾಧಾರಿತ ಒಣ ಕೃಷಿ ಭೂಮಿಯಲ್ಲಿಯೇ ಇದೆ. ಶಾಶ್ವತವಾಗಿ ಹುಲ್ಲುಗಾವಲನ್ನು ಮುಚ್ಚಿಹಾಕುವ ಸೌರ ಫಲಕಗಳು, ಅವುಗಳ ಸುತ್ತ ಹುಲ್ಲು ಮತ್ತಿತರ ಸಸ್ಯಗಳು ಬೆಳೆಯದಂತೆ ಸಿಂಪಡಿಸುವ ಕಳೆನಾಶಕಗಳು ಮತ್ತು ಈ ಸೌರ ಫಲಕಗಳನ್ನು ಸ್ವಚ್ಛಗೊಳಿಸಲು ಬಳಸುವ ಕೋಟಿಗಟ್ಟಲೆ ಲೀಟರ್‌ನಷ್ಟು ನೀರು, ಇವೆಲ್ಲವೂ ಈ ಯೋಜನೆಗಳು ಎಷ್ಟು ಪರಿಸರ ಸ್ನೇಹಿ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತ್ತವೆ.

ವನ್ಯಜೀವಿ ಸಂರಕ್ಷಣೆಯೆಂಬುದು, ಹಿಂದಿನ ಅಂಕಿ ಅಂಶಗಳನ್ನು ನೋಡಿ ಅದರ ಆಧಾರದ ಮೇಲೆ ದಶಕಗಳಷ್ಟು ಮುಂದಿನ ಯೋಜನೆಯನ್ನಿಟ್ಟುಕೊಂಡು ಮಾಡುವ ಒಂದು ವೈಜ್ಞಾನಿಕ ಪ್ರಕ್ರಿಯಯಾಗಿದೆ. ಈ ಹಿಂದೆ ಮಾಡಿದ ತಪ್ಪುಗಳಿಂದ ನಾವು ಎಷ್ಟು ಜೀವ ಸಂಪತ್ತನ್ನು ಕಳೆದುಕೊಂಡಿದ್ದೇವೆ ಮತ್ತು ಅದು ಮರುಕಳಿಸದಂತೆ ನಾವು ಕೈಗೊಳ್ಳಬೇಕಾದ ಕ್ರಮಗಳೇನೆಂಬ ಸಂಗತಿಗಳು, ಯಾವುದೋ ಪ್ರದೇಶದ, ಬೇರೊಂದು ಉಪ ಪ್ರಬೇಧದ ಜೀವಿಯೊಂದನ್ನು ನಮ್ಮಲ್ಲಿಗೆ ತಂದು ಬಿಡುವುದಕ್ಕಿಂತ ಹೆಚ್ಚಿನ ಮಹತ್ವ ಪಡೆದುಕೊಳ್ಳಬೇಕು. ಇಲ್ಲದೆ ಹೋದರೆ ಲಕ್ಷಾಂತರ ವರ್ಷಗಳಿಂದ ಭೂಮಿಯ ಮೇಲಿದ್ದ ಒಂದೊಂದೇ ಜೀವಪ್ರಬೇಧಗಳನ್ನು ನಾವು ಶಾಶ್ವತವಾಗಿ ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತೇವೆ.

ಗುರುಪ್ರಸಾದ್ ತಿಮ್ಮಾಪುರ

ಗುರುಪ್ರಸಾದ್ ತಿಮ್ಮಾಪುರ
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಗುರು ಪರಿಸರ, ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸರ ಕಾಳಜಿಗೆ ಸಂಬಂಧಿಸಿದಂತೆ ಹಲವು ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ಚೀತಾಗಳನ್ನೇನೋ ತಂದಾಯಿತು; ಮುಂದಿನ ಪರಿಣಾಮ ಬಲ್ಲಿರೇನು? ಪರಿಸರತಜ್ಞರು ಹೇಳಿದ್ದೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೇರಿಕಾದಲ್ಲಿ ಅದಾನಿ ಮತ್ತು ಆಪ್ತರ ಮೇಲಿನ ಕ್ರಿಮಿನಲ್ ಕೇಸ್ ರದ್ದು: ‘ರಾಜಿ ಮಾಡಿಕೊಂಡ ಪ್ರಧಾನಿ ಭಾರತದ ಹಿತಾಸಕ್ತಿ ಮಾರಾಟ ಮಾಡಿದ್ದಾರೆ’ ಎಂದ ರಾಹುಲ್ ಗಾಂಧಿ 

ನವದೆಹಲಿ: ಅದಾನಿ ಗ್ರೂಪ್ ಅಧ್ಯಕ್ಷ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅದಾನಿ ವಿರುದ್ಧದ ಪ್ರಮುಖ ಕ್ರಿಮಿನಲ್ ಆರೋಪಗಳನ್ನು ಅಮೆರಿಕದ ಫೆಡರಲ್ ನ್ಯಾಯಾಧೀಶರು ಶಾಶ್ವತವಾಗಿ ವಜಾಗೊಳಿಸಿದ ಬೆನ್ನಲ್ಲೇ, ವಿಪಕ್ಷ ನಾಯಕ ರಾಹುಲ್...

ಕರ್ನಾಟಕ SIR | ‘ಲಾಜಿಕಲ್ ಡಿಸ್ಕ್ರಿಪೆನ್ಸಿ’ ಬಗ್ಗೆ ತುಟಿ ಬಿಚ್ಚದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಆಗಸ್ಟ್ 7ರಂದು ಚುನಾವಣಾ ಆಯೋಗ ಹೊರಡಿಸಿದ ಪ್ರಕಟಣೆಯ ಪ್ರಕಾರ, ಗಣತಿ ನಮೂನೆ ಅಥವಾ ಎನ್ಯುಮರೇಶನ್ ಫಾರಂ ಸಲ್ಲಿಕೆ ದಿನಾಂಕ ಆಗಸ್ಟ್...

‘ಆಹಾರ ಸುರಕ್ಷತೆ – ಔಷಧ ಆಡಳಿತ ಇಲಾಖೆ’ಯಿಂದ ಹೋಟೆಲ್‌ಗಳಿಗೆ ಕಟ್ಟುನಿಟ್ಟಿನ ನಿಯಮ ಜಾರಿ; ಹೊಸ ಮಾರ್ಗಸೂಚಿ ಪ್ರಕಟ

ರಾಜ್ಯದ ಹೋಟೆಲ್‌ಗಳು, ಡಾಬಾಗಳು ಹಾಗೂ ಆಹಾರ ಸೇವಾ ಸಂಸ್ಥೆಗಳು ಪಾಲಿಸಬೇಕಾದ 'ಆಹಾರ ಸುರಕ್ಷತಾ ಮತ್ತು ನೈರ್ಮಲ್ಯ ನಿಯಮಗಳ'ನ್ನು 'ಆಹಾರ ಸುರಕ್ಷತೆ ಇಲಾಖೆ ಮತ್ತು ಔಷಧ ಆಡಳಿತ ಇಲಾಖೆ' ಆಯುಕ್ತರು ಪ್ರಕಟಿಸಿದ್ದಾರೆ. ಕಳೆದ ಮೂರ್ನಾಲ್ಕು...

ಕರ್ನಾಟಕದಲ್ಲಿ ಗುಟ್ಕಾ, ಪಾನ್ ಮಸಾಲಾ ಉತ್ಪಾದನೆ ಮತ್ತು ಮಾರಾಟ 1 ವರ್ಷ ನಿಷೇಧ: ರಾಜ್ಯ ಸರ್ಕಾರದ ಮಹತ್ವದ ಆದೇಶ

ಬೆಂಗಳೂರು: ಸಾರ್ವಜನಿಕ ಆರೋಗ್ಯ ಮತ್ತು ಸಮಾಜದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ತಂಬಾಕು ಹಾಗೂ ನಿಕೋಟಿನ್ ಅಂಶ ಹೊಂದಿರುವ ಗುಟ್ಕಾ, ಪಾನ್ ಮಸಾಲಾ ಸೇರಿದಂತೆ ಇತರ ಅಪಾಯಕಾರಿ ಉತ್ಪನ್ನಗಳ ಮೇಲೆ ಸಂಪೂರ್ಣ...

ಲೋಕಸಭೆ ಬಲ 543 ರಲ್ಲೇ ಶಾಶ್ವತವಾಗಿ ಮುಂದುವರಿಸಲು ಕೇಂದ್ರಕ್ಕೆ ಆಗ್ರಹ: ತಮಿಳುನಾಡು ವಿಧಾನಸಭೆಯಲ್ಲಿ ಸಿಎಂ ಸಿ. ಜೋಸೆಫ್ ವಿಜಯ್ ನಿರ್ಣಯ ಮಂಡನೆ

ಚೆನ್ನೈ: ಕೇಂದ್ರ ಸರ್ಕಾರವು ಲೋಕಸಭೆಯ ಒಟ್ಟು ಸ್ಥಾನಗಳ ಬಲವನ್ನು ಪ್ರಸ್ತುತ ಇರುವ 543 ರಲ್ಲೇ ಶಾಶ್ವತವಾಗಿ ಕಾಯ್ದುಕೊಳ್ಳಬೇಕು ಮತ್ತು ರಾಜ್ಯಗಳ ನಡುವಿನ ಪ್ರಾತಿನಿಧ್ಯದ ಅನುಪಾತವನ್ನು ಬದಲಾಯಿಸಬಾರದು ಎಂದು ಒತ್ತಾಯಿಸಿ ತಮಿಳುನಾಡು ಮುಖ್ಯಮಂತ್ರಿ ಸಿ....

ಯುಪಿಯಲ್ಲಿ ಅಮಾನವೀಯ ಘಟನೆ: ಮೊಬೈಲ್ ಕದ್ದ ಆರೋಪ ಹೊರಿಸಿ ಒಬಿಸಿ ಯುವಕನ ತಲೆ ಬೋಳಿಸಿ ಮೆರವಣಿಗೆ; ಮೇಲ್ಜಾತಿಯ ತಂದೆ-ಮಗನ ಬಂಧನ

ಉನ್ನಾವೋ: ಉತ್ತರ ಪ್ರದೇಶದಲ್ಲಿ ಇದುವರೆಗೆ ದಲಿತ ಸಮುದಾಯಗಳ ಮೇಲೆ ವ್ಯಾಪಕವಾಗಿ ನಡೆಯುತ್ತಿದ್ದ ಜಾತಿ ಆಧಾರಿತ ದೌರ್ಜನ್ಯ ಮತ್ತು ಸಾರ್ವಜನಿಕ ಅವಮಾನದಂತಹ ಅಮಾನವೀಯ ಕೃತ್ಯಗಳು, ಈಗ ಇತರ ಹಿಂದುಳಿದ ವರ್ಗಗಳ (ಒಬಿಸಿ) ಜನರ ಮೇಲೆಯೂ...

SIR 3ನೇ ಹಂತ: 12 ರಾಜ್ಯಗಳು-ಕೇಂದ್ರಾಡಳಿತ ಪ್ರದೇಶಗಳ 1.58 ಕೋಟಿ ಮತದಾರರ ಹೆಸರು ಕರಡು ಪಟ್ಟಿಯಿಂದ ಡಿಲೀಟ್

ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಮೂರನೇ ಹಂತದಲ್ಲಿ ಅಸ್ತಿತ್ವದಲ್ಲಿರುವ ಮತದಾರರ ಪಟ್ಟಿಯಿಂದ ಸುಮಾರು 1.58 ಕೋಟಿ ಹೆಸರುಗಳನ್ನು ಅಳಿಸಲಾಗಿದೆ. ಪ್ರಸ್ತುತ ನಡೆಯುತ್ತಿರುವ 3ನೇ ಹಂತದ ವ್ಯಾಪ್ತಿಗೆ ಒಳಪಡುವ 16 ರಾಜ್ಯಗಳಲ್ಲಿ...

ಪ. ಬಂಗಾಳ ಎಸ್‌ಐಆರ್ | ಮೇಲ್ಮನವಿ ನ್ಯಾಯಮಂಡಳಿಗಳಿಗೆ ಕಾಲಮಿತಿ ನಿಗದಿಪಡಿಸಲು ಸಾಧ್ಯವಿಲ್ಲ ಎಂದ ಸುಪ್ರೀಂ ಕೋರ್ಟ್

ಪಶ್ಚಿಮ ಬಂಗಾಳದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಗೆ (ಎಸ್‌ಐಆರ್) ಸಂಬಂಧಿಸಿದ ಮೇಲ್ಮನವಿಗಳ ವಿಚಾರಣೆ ನಡೆಸುತ್ತಿರುವ ಮೇಲ್ಮನವಿ ನ್ಯಾಯಾಧಿಕರಣಗಳ ನಿರ್ಧಾರಗಳಿಗೆ ಯಾವುದೇ ನಿರ್ದಿಷ್ಟ ಸಮಯದ ಮಿತಿಯನ್ನು ನಿಗದಿಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್...

‘ಎಸ್‌ಐಆರ್‌’ನಿಂದ ಹೆಸರು ಡಿಲೀಟ್‌ ಆದವರಿಗೆ ‘ಹೊಸ ಮತದಾರರ ನೋಂದಣಿ’ ಯಾಕೆ?

ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ಕಾಣೆಯಾಗಿದ್ದರೆ ನಮೂನೆ ಸಂಖ್ಯೆ 6 ಅನ್ನು (Form No. 6) ಸಲ್ಲಿಸಿ ಎಂದು ಜುಲೈ 22 ರಂದು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮುಖ್ಯ ಚುನಾವಣಾ...

ನೀಟ್ ವಿರುದ್ಧ ನಿರ್ಣಯ ಅಂಗೀಕರಿಸಿದ ತಮಿಳುನಾಡು ವಿಧಾನಸಭೆ : ಸಭಾತ್ಯಾಗ ಮಾಡಿದ ಬಿಜೆಪಿಯ ಏಕೈಕ ಶಾಸಕ

ತಮಿಳುನಾಡು ವಿಧಾನಸಭೆಯು ಮಂಗಳವಾರ (ಆ.11) ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯನ್ನು (ನೀಟ್) ರದ್ದುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಪರೀಕ್ಷೆಗಳನ್ನು ನಡೆಸುವಲ್ಲಿ ಪದೇ ಪದೇ...