Homeಮುಖಪುಟಸಿವಂಗಿಗಳೇನೋ ತಂದಿರಿ; ಹುಲ್ಲುಗಾವಲುಗಳ ರಕ್ಷಣೆ ಯಾವಾಗ?

ಸಿವಂಗಿಗಳೇನೋ ತಂದಿರಿ; ಹುಲ್ಲುಗಾವಲುಗಳ ರಕ್ಷಣೆ ಯಾವಾಗ?

- Advertisement -
- Advertisement -

ಈಗ ಮಾಧ್ಯಮಗಳಲ್ಲೆಲ್ಲಾ ಪ್ರಧಾನಿಗಳ ಜನ್ಮದಿನದಂದು ತಂದು ಬಿಡಲಾದ ಕನ್ನಡದ ಸಿವಂಗಿ ಎಂದು ಹೆಸರುಳ್ಳ ಚೀತಾಗಳದ್ದೇ ಸುದ್ದಿ. ಇದಕ್ಕೆ, ನಮ್ಮ ದೇಶದಿಂದ ಅಳಿದುಹೋದ ಪ್ರಬೇಧವೊಂದನ್ನು ಮತ್ತೆ ಅವತರಿಸುವಂತೆ ಮಾಡಲು ಮೋದಿಯವರೇ ಬರಬೇಕಾಯಿತು ಎಂದೆಲ್ಲ ಪ್ರಚಾರವನ್ನೂ ಕೊಡಲಾಯಿತು. ಆದರೆ ವಾಸ್ತವದ ವಿಷಯವೆಂದರೆ ಭಾರತದಲ್ಲಿದ್ದ ಸಿವಂಗಿಯ ಉಪ ಪ್ರಬೇಧವೇ ಬೇರೆ ಮತ್ತು ಆಫ್ರಿಕಾದಲ್ಲಿದ್ದ ಸಿವಂಗಿಯ ಉಪ ಪ್ರಬೇಧವೇ ಬೇರೆ. ಹೇಗೆ ಆಫ್ರಿಕಾದ ಸಿಂಹಗಳನ್ನು ಭಾರತದ ಗಿರ್ ಅರಣ್ಯದಲ್ಲಿರುವ ಸಿಂಹಗಳೆನ್ನಲಾಗದೋ, ಹೇಗೆ ಸೈಬೀರಿಯಾದ ಹುಲಿಗಳನ್ನು ಭಾರತದ ಹುಲಿಗಳೆನ್ನಲಾಗದೋ, ಹಾಗೆಯೇ ಆಫ್ರಿಕಾದ ಸಿವಂಗಿಗಳು ಆನುವಂಶಿಕವಾಗಿ ಭಾರತದ ಅಥವಾ ಏಷ್ಯಾದ ಸಿವಂಗಿಗಳಾಗಲಾರವು. ಐತಿಹಾಸಿಕವಾಗಿ ಏಷಿಯಾದ ಸಿವಂಗಿಗಳು ಮಧ್ಯಪ್ರಾಚ್ಯದಿಂದ ಹಿಡಿದು ಭಾರತದವರೆಗಿನ ಭೂ ಪ್ರದೇಶದಲ್ಲಿ ಕಂಡುಬರುತ್ತಿದ್ದವು. ಆದರೆ ಅತಿಯಾದ ಬೇಟೆ ಮತ್ತು ಆವಾಸದ ಕುಗ್ಗುವಿಕೆಯ ಕಾರಣಗಳಿಂದಾಗಿ ಕಳೆದ ಶತಮಾನದ ಮಧ್ಯಭಾಗದಲ್ಲಿ ತಮ್ಮ ವ್ಯಾಪ್ತಿಯ ಬಹುಪಾಲು ಪ್ರದೇಶಗಳಲ್ಲಿ ಈ ಸಿವಂಗಿಗಳು ಅವಸಾನ ಹೊಂದಿದವು. ಈಗಲೂ ಕೂಡ ಏಷಿಯಾದ ಸಿವಂಗಿಗಳು ಇರಾನಿನ ಕೆಲ ಸಂರಕ್ಷಿತ ಪ್ರದೇಶದಲ್ಲಿ ಉಳಿದುಕೊಂಡಿವೆ. ಆದರೆ ಅವುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಹತ್ತು ವರ್ಷಗಳ ಹಿಂದೆ ಸುಮಾರು 80ರಷ್ಟು ಮಾತ್ರ ಇದ್ದ ಸಿವಂಗಿಗಳು ಈಗಿನ ಗಣತಿಯ ಪ್ರಕಾರ 20ಕ್ಕೂ ಕಡಿಮೆ ಎಂದು ಅಂದಾಜಿಸಲಾಗಿದೆ.

ಸಿವಂಗಿಗಳು ಕಾಣಬರುವುದು ಉಷ್ಣ ಪ್ರದೇಶದ ಹುಲ್ಲುಗಾವಲು ಮತ್ತು ಅರೆ ಮರುಭೂಮಿಯಂತಹ ಪ್ರದೇಶಗಳಲ್ಲಿ. ಅವುಗಳ ಅಳಿವಿಗೆ ಸೂಕ್ತ ಆವಾಸದ ನಾಶವೇ ಮುಖ್ಯವಾದ ಕಾರಣ. ನಮ್ಮ ದೇಶದಲ್ಲಿ ಸಿವಂಗಿಗಳು ಇರಬಹುದಾದ ಆವಾಸವು ಹೆಚ್ಚಿನ ಪ್ರಮಾಣದಲ್ಲೇನೂ ಉಳಿದಿಲ್ಲ. ಅವೆಲ್ಲ ಖರಾಬು ಅಥವಾ ಬರಡು ಭೂಮಿಗಳೆಂದು ಪರಿಗಣಿಸಲ್ಪಟ್ಟು ಕೈಗಾರಿಕೆ ಮತ್ತಿತರ ಅರಣ್ಯೇತರ ಬಳಕೆಗೆ ವಿನಿಯೋಗಿಸಲ್ಪಟ್ಟಿವೆ. ನಮ್ಮ ದೇಶದಿಂದ ಸಿವಂಗಿಗಳೇನೋ ದಶಕಗಳ ಹಿಂದೆ ನಶಿಸಿ ಹೋದವು ಆದರೆ ಲಕ್ಷಾಂತರ ವರ್ಷಗಳಿಂದ ಇದೇ ಸಿವಂಗಿಗಳ ಜೊತೆಯಲ್ಲಿಯೇ ಆವಾಸವನ್ನು ಹಂಚಿಕೊಂಡಿದ್ದ ಇತರ ಜೀವ ಪ್ರಬೇಧಗಳ ಪರಿಸ್ಥಿತಿಯೇನು? ಸಿವಂಗಿಗಳಂತೆಯೇ ಹುಲ್ಲುಗಾವಲು ಮತ್ತು ಅರೆ ಮರುಭೂಮಿ ಪ್ರದೇಶದ ಮೇಲೆ ಅವಲಂಬಿತವಾದ ಅನೇಕ ಜೀವಿ ಪ್ರಬೇಧಗಳು ಅಳಿವಿನತ್ತ ಮುಖಮಾಡಿ ನಿಂತಿವೆ.

ರಾಜಸ್ಥಾನ, ಗುಜರಾತಿನ ಅರೆ ಮರುಭೂಮಿ ಪ್ರದೇಶಗಳು, ಪಾಕಿಸ್ತಾನದ ಸಿಂಧ್ ಪ್ರಾಂತ್ಯ ಮತ್ತು ಕರ್ನಾಟಕವನ್ನೂ ಒಳಗೊಂಡ ದಖ್ಖನ್ ಪ್ರಸ್ಥಭೂಮಿಯ ಒಣ ಹುಲ್ಲುಗಾವಲಿನಲ್ಲಿ ಕಂಡುಬರುವ, ಕನ್ನಡದಲ್ಲಿ ಎರ್ಲಡ್ಡು ಅಥವಾ ದೊರವಾಯನ ಹಕ್ಕಿ ಎಂದು ಕರೆಸಿಕೊಳ್ಳುವ ಗ್ರೇಟ್ ಇಂಡಿಯನ್ ಬಸ್ಟರ್ಡ್ ಹಕ್ಕಿಯು ಇಂಥದೇ ಹುಲ್ಲುಗಾವಲನ್ನು ಅವಲಂಬಿಸಿದ ಜೀವಿ. ಮೊದಲು ವ್ಯಾಪಕವಾಗಿ ಕಂಡುಬರುತ್ತಿದ್ದ ಈ ಹಕ್ಕಿಗಳು ಆವಾಸದ ನಾಶ ಮತ್ತು ಬೇಟೆಯ ಕಾರಣಗಳಿಂದ ಅಳಿವಿನಂಚಿಗೆ ಬಂದುನಿಂತಿವೆ. ಕೆಲವೇ ನೂರರಷ್ಟು ಮಾತ್ರ ಉಳಿದುಕೊಂಡಿರುವ ಈ ಹಕ್ಕಿಗಳು ಒಮ್ಮೆ ನಾಶವಾದರೆ ಮತ್ತೆಲ್ಲಿಂದಲೂ ಇವುಗಳನ್ನು ತರಲಾಗದು. ನಿಯಂತ್ರಣ ಇಲ್ಲದ ಅಭಿವೃದ್ಧಿ, ಅಗತ್ಯವಿಲ್ಲದೆಯೂ ನಿರ್ಮಾಣಗೊಳ್ಳುವ ರಸ್ತೆಗಳು ಮತ್ತು ಹೈಟೆನ್ಷನ್ ವಿದ್ಯುತ್ ತಂತಿಗಳು ಇವುಗಳಿಗೆ ಮಾರಕವಾಗಿವೆ.

ಸರಿಸುಮಾರು ಇದೇ ರೀತಿಯ ಆವಾಸದಲ್ಲಿ ಕಂಡುಬರುವ ಮತ್ತು ಮುಂಚೆ ವ್ಯಾಪಕವಾಗಿದ್ದ ಲೆಸ್ಸರ್ ಫ್ಲೋರಿಕನ್ ಅಥವಾ ಚೊಟ್ಟಿ ನವಿಲಕ್ಕಿ ಎಂದು ಕರೆಯಲ್ಪಡುವ ಹಕ್ಕಿಯು ಕೂಡ ಇಂದು ಇಲ್ಲವೆನ್ನುವಷ್ಟು ಕಡಿಮೆಯಾಗಿದೆ. ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಹತ್ತಿರದ ಹೆಸರಘಟ್ಟದ ಹುಲ್ಲುಗಾವಲಿನಲ್ಲಿ ಅಕಸ್ಮಾತ್ತಾಗಿ ಕಂಡ ಈ ಹಕ್ಕಿಯು ಸ್ಥಳೀಯ ಪಕ್ಷಿ ವೀಕ್ಷಕರಲ್ಲಿ ರೋಮಾಂಚನವನ್ನೇ ಸೃಷ್ಟಿಸಿತ್ತು. ಯಾಕೆಂದರೆ ದಶಕಗಳಿಂದೀಚೆಗೆ ಆ ಹಕ್ಕಿಯು ಸ್ಥಳೀಯವಾಗಿ ಕಾಣಿಸಿರಲೇ ಇಲ್ಲ. ಇದೇ ಹುಲ್ಲುಗಾವಲನ್ನು ಸಂರಕ್ಷಣಾ ಮೀಸಲು ಪ್ರದೇಶವಾಗಿ ಘೋಷಣೆ ಮಾಡುವಂತೆ ಸ್ಥಳೀಯ ವನ್ಯಜೀವಿ ಆಸಕ್ತರು ಒತ್ತಾಯಿಸುತ್ತಿದ್ದಾರೆ. ಇಲ್ಲವಾದರೆ ಬೆಂಗಳೂರಿಗೆ ಈ ಹಕ್ಕಿಗಳು ಬರುವ ಸಾಧ್ಯತೆಯು ಶಾಶ್ವತವಾಗಿ ಇಲ್ಲವಾಗುತ್ತದೆ. ಹಾಗೆಯೇ, ಒಣ ಪ್ರದೇಶದ ಹುಲ್ಲುಗಾವಲಿನಲ್ಲಿ ಮಾತ್ರ ಕಂಡುಬರುತ್ತಿದ್ದ ಜೇರ್ಡನ್ಸ್ ಕೋರ್ಸರ್ ಎಂಬ ಹಕ್ಕಿ ಕೂಡ ಬಹುಪಾಲು ನಾಶವಾಗಿದೆ. ಇದು ಈಗ ಆಂಧ್ರದ ಲಂಕಾಮಲ್ಲೇಶ್ವರ ವನ್ಯಜೀವಿಧಾಮದಲ್ಲಿ ಮಾತ್ರ ಇರಬಹುದೆಂದು ನಂಬಲಾಗಿದೆ. ಕೊನೆಯ ಬಾರಿಗೆ ಈ ಹಕ್ಕಿಯನ್ನು ನೋಡಿ ದಶಕಗಳೇ ಕಳೆದಿವೆ. ಹೀಗೆ ಸಿವಂಗಿಯ ಜೊತೆಗೆ ಇವೆಲ್ಲ ಪ್ರಬೇಧದ ಜೀವಿಗಳು ಒಂದೊಂದಾಗಿ ಅಳಿವಿನತ್ತ ನಡೆದಿವೆ.

ವರ್ಷದ ಬಹುಪಾಲು ಮೇಲ್ನೋಟಕ್ಕೆ ಒಣಗಿದಂತೆ ಕಾಣುವ ಹುಲ್ಲುಗಾವಲುಗಳ ಆವಾಸದ ವಿಶೇಷತೆಯೇ ಬೇರೆ, ಇವುಗಳು ಪೋಷಿಸುವ ಜೀವವೈವಿಧ್ಯ ನಿಜಕ್ಕೂ ಅಚ್ಚರಿ ಹುಟ್ಟಿಸುವಂತದ್ದು. ಇವುಗಳ ಕುರಿತು ನಮ್ಮ ಅರಿವು ಕೂಡ ಕಡಿಮೆಯೇ; ಏಕೆಂದರೆ ಈ ಆವಾಸವನ್ನು ನಾವೀಗಾಗಲೇ ಬರಡು ಭೂಮಿಯೆಂದೂ ಕೃಷಿಗೆ ಯೋಗ್ಯವಲ್ಲದ ಭೂಮಿಯೆಂದೂ ವರ್ಗೀಕರಿಸಿಯಾಗಿದೆ. ಈ ಪ್ರದೇಶಗಳಲ್ಲಿ ನಾವು ಮಾಡುವ ಎಲ್ಲ ಚಟುವಟಿಕೆಗಳೂ ಅಲ್ಲಿನ ಜೀವ ಪ್ರಬೇಧಕ್ಕೆ ಕಂಟಕವೇ ಆಗುತ್ತದೆ. ಉದಾಹರಣೆಗೆ, ಅತ್ಯಂತ ಜನಪ್ರಿಯವಾದ ಪರಿಸರ ಪ್ರೇಮಿ ಚಟುವಟಿಕೆಯೆಂದು ಕರೆಸಿಕೊಳ್ಳಲ್ಪಡುವ ಗಿಡ ನೆಡುವ ಚಟುವಟಿಕೆ ಹುಲ್ಲುಗಾವಲಿಗೆ ಮತ್ತು ಅಲ್ಲಿನ ಜೀವಿಗಳಿಗೆ ಮಾರಕ. ಹುಲ್ಲುಗಾವಲನ್ನು ನಾವು ಅರಣ್ಯವಾಗಿ ಪರಿವರ್ತಿಸಿದರೆ ಅಲ್ಲಿನ ಸ್ಥಳೀಯ ಜೀವಪ್ರಬೇಧಗಳು ಅಲ್ಲಿಂದ ಮಾಯವಾಗುತ್ತವೆ. ಅದೇ ರೀತಿ ಜಾಗತಿಕ ತಾಪಮಾನದಿಂದ ರಕ್ಷಿಸುವ ಮತ್ತು ಪರಿಸರ ಸ್ನೇಹಿ ಎಂದು ನಂಬಲ್ಪಡುವ ಸೌರ ವಿದ್ಯುತ್ ಕೂಡ ಹುಲ್ಲುಗಾವಲಿನ ಆವಾಸಕ್ಕೆ ಕಂಟಕವೇ ಆಗಿದೆ. ನಮ್ಮದೇ ನಾಡಿನ ಪಾವಗಡದಲ್ಲಿ ಸ್ಥಾಪಿಸಲಾದ ಏಷಿಯಾದ ಅತಿದೊಡ್ಡ ಸೌರ ವಿದ್ಯುತ್ ಘಟಕವು ಇಂತಹುದೇ ಹುಲ್ಲುಗಾವಲು ಮತ್ತು ಮಳೆಯಾಧಾರಿತ ಒಣ ಕೃಷಿ ಭೂಮಿಯಲ್ಲಿಯೇ ಇದೆ. ಶಾಶ್ವತವಾಗಿ ಹುಲ್ಲುಗಾವಲನ್ನು ಮುಚ್ಚಿಹಾಕುವ ಸೌರ ಫಲಕಗಳು, ಅವುಗಳ ಸುತ್ತ ಹುಲ್ಲು ಮತ್ತಿತರ ಸಸ್ಯಗಳು ಬೆಳೆಯದಂತೆ ಸಿಂಪಡಿಸುವ ಕಳೆನಾಶಕಗಳು ಮತ್ತು ಈ ಸೌರ ಫಲಕಗಳನ್ನು ಸ್ವಚ್ಛಗೊಳಿಸಲು ಬಳಸುವ ಕೋಟಿಗಟ್ಟಲೆ ಲೀಟರ್‌ನಷ್ಟು ನೀರು, ಇವೆಲ್ಲವೂ ಈ ಯೋಜನೆಗಳು ಎಷ್ಟು ಪರಿಸರ ಸ್ನೇಹಿ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತ್ತವೆ.

ವನ್ಯಜೀವಿ ಸಂರಕ್ಷಣೆಯೆಂಬುದು, ಹಿಂದಿನ ಅಂಕಿ ಅಂಶಗಳನ್ನು ನೋಡಿ ಅದರ ಆಧಾರದ ಮೇಲೆ ದಶಕಗಳಷ್ಟು ಮುಂದಿನ ಯೋಜನೆಯನ್ನಿಟ್ಟುಕೊಂಡು ಮಾಡುವ ಒಂದು ವೈಜ್ಞಾನಿಕ ಪ್ರಕ್ರಿಯಯಾಗಿದೆ. ಈ ಹಿಂದೆ ಮಾಡಿದ ತಪ್ಪುಗಳಿಂದ ನಾವು ಎಷ್ಟು ಜೀವ ಸಂಪತ್ತನ್ನು ಕಳೆದುಕೊಂಡಿದ್ದೇವೆ ಮತ್ತು ಅದು ಮರುಕಳಿಸದಂತೆ ನಾವು ಕೈಗೊಳ್ಳಬೇಕಾದ ಕ್ರಮಗಳೇನೆಂಬ ಸಂಗತಿಗಳು, ಯಾವುದೋ ಪ್ರದೇಶದ, ಬೇರೊಂದು ಉಪ ಪ್ರಬೇಧದ ಜೀವಿಯೊಂದನ್ನು ನಮ್ಮಲ್ಲಿಗೆ ತಂದು ಬಿಡುವುದಕ್ಕಿಂತ ಹೆಚ್ಚಿನ ಮಹತ್ವ ಪಡೆದುಕೊಳ್ಳಬೇಕು. ಇಲ್ಲದೆ ಹೋದರೆ ಲಕ್ಷಾಂತರ ವರ್ಷಗಳಿಂದ ಭೂಮಿಯ ಮೇಲಿದ್ದ ಒಂದೊಂದೇ ಜೀವಪ್ರಬೇಧಗಳನ್ನು ನಾವು ಶಾಶ್ವತವಾಗಿ ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತೇವೆ.

ಗುರುಪ್ರಸಾದ್ ತಿಮ್ಮಾಪುರ

ಗುರುಪ್ರಸಾದ್ ತಿಮ್ಮಾಪುರ
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಗುರು ಪರಿಸರ, ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸರ ಕಾಳಜಿಗೆ ಸಂಬಂಧಿಸಿದಂತೆ ಹಲವು ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ಚೀತಾಗಳನ್ನೇನೋ ತಂದಾಯಿತು; ಮುಂದಿನ ಪರಿಣಾಮ ಬಲ್ಲಿರೇನು? ಪರಿಸರತಜ್ಞರು ಹೇಳಿದ್ದೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ನೋಟಿಸ್ ನೀಡಿದರೆ ಸಾಲದು, ಹೊರಗಿಟ್ಟ ಮತದಾರರ ಲೆಕ್ಕ ಕೊಡಿ ಚುನಾವಣಾ ಆಯೋಗಕ್ಕೆ ಜಾಗೃತ ಕರ್ನಾಟಕ ಒತ್ತಾಯ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಲಕ್ಷಾಂತರ ಮತದಾರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗಳನ್ನು ನಡೆಸಿದ ನಂತರ, ಅಂತಿಮವಾಗಿ ಎಷ್ಟು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ...

ಗಣೇಶ ಮೆರವಣಿಗೆ ಡಿಜೆ ವಿಚಾರಕ್ಕೆ ಗಲಾಟೆ : ದಲಿತರ ಮೇಲೆ ಹಲ್ಲೆ, ಜಾತಿ ನಿಂದನೆ; 31 ಜನರ ಮೇಲೆ ಎಫ್‌ಐಆರ್

ಗಣೇಶ ಮೆರವಣಿಗೆಯ ಡಿಜೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ದಲಿತರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ 31 ಜನರ ವಿರುದ್ಧ ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ....

ಚಿಕ್ಕಬಳ್ಳಾಪುರ: ಮೂಲ ಗಣಿತ, ಕನ್ನಡ ಬಾರದ 7ನೇ ತರಗತಿ ವಿದ್ಯಾರ್ಥಿಗಳು: 180 ಶಿಕ್ಷಕರಿಗೆ ನೋಟಿಸ್‌ ಜಾರಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 7ನೇ ತರಗತಿಯ ಕೆಲವು ವಿದ್ಯಾರ್ಥಿಗಳಿಗೆ ಮೂಲ ಗಣಿತದ ಲೆಕ್ಕಗಳನ್ನು ಮಾಡಲು ಮತ್ತು ಕನ್ನಡ ಅಕ್ಷರಗಳನ್ನು ಬರೆಯಲು ಬರುವುದಿಲ್ಲ ಎಂಬುದು ತಿಳಿದುಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು 180 ಸರ್ಕಾರಿ ಶಾಲೆಗಳ ಶಿಕ್ಷಕರಿಗೆ...

ಕರಾವಳಿಯನ್ನು ‘ಕೋಮುವಾದದ ಪ್ರಯೋಗಶಾಲೆ’ ಮಾಡಿದ್ದ ಬಿಜೆಪಿಗೆ ನಮ್ಮ ಅಭಿವೃದ್ಧಿ ಕಂಡು ಅಸ್ತಿತ್ವದ ಭಯ: ಪ್ರಿಯಾಂಕ್ ಖರ್ಗೆ

ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆ ಹಾಗೂ ಕರಾವಳಿಯ ಮೂರು ಜಿಲ್ಲೆಗಳಿಗೆ ₹32,611 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಿರುವುದನ್ನು ಬಿಜೆಪಿ ಟೀಕಿಸಿರುವ ಬೆನ್ನಲ್ಲೇ, ಗೃಹ ಸಚಿವ ಪ್ರಿಯಾಂಕ್ ಖರ್ಗೆ...

KPSC ಅಕ್ರಮ: ಮೀಟರ್ ಬಡ್ಡಿ ದಂಧೆಯಿಂದ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದವರೆಗೆ – ಅಧ್ಯಕ್ಷ ಸಾಹುಕಾರ್ ಬಿಜೆಪಿ ಅವಧಿಯಲ್ಲಿ ನೇಮಕ, ಕಾಂಗ್ರೆಸ್ ಆಡಳಿತದಲ್ಲಿ ರಕ್ಷಣೆ

ಶಿವಶಂಕರಪ್ಪ ಸಾಹುಕಾರ್ ಅವರ ಈ ಇಡೀ ಕಥನವು ಕರ್ನಾಟಕದ ಕಾರ್ಯಾಂಗ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಸರ್ಕಾರವು ನಿಯಮಗಳನ್ನು ಗಾಳಿಗೆ ತೂರಿ, ಒಬ್ಬ ಕನಿಷ್ಠ...

ಟಿಎಂಸಿ ಪಕ್ಷದ ಹೆಸರು, ಚಿಹ್ನೆ ಫ್ರೀಝ್ : ಚು. ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ತೃಣಮೂಲಕ ಕಾಂಗ್ರೆಸ್ (ಟಿಎಂಸಿ) ಪಕ್ಷದ ಚಿಹ್ನೆ ಮತ್ತು ಹೆಸರನ್ನು ಭಾರತೀಯ ಚುನಾವಣಾ ಆಯೋಗ ಫ್ರೀಝ್ ಮಾಡಿರುವುದನ್ನು ಪ್ರಶ್ನಿಸಿ, ಪಕ್ಷದ ಸಂಸ್ಥಾಪಕಿ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌...

ನಂದಿಗ್ರಾಮದ ಬೆನ್ನಲ್ಲೇ ರೆಜಿನಗರ ಅಭ್ಯರ್ಥಿಯಿಂದಲೂ ನಾಮಪತ್ರ ವಾಪಸ್ : ಬಂಗಾಳ ಉಪ ಚುನಾವಣೆ ಕಣದಲ್ಲಿ ಮಮತಾ ಬ್ಯಾನರ್ಜಿ ಬಣಕ್ಕೆ ಮತ್ತೊಂದು ಹಿನ್ನಡೆ

ಪಶ್ಚಿಮ ಬಂಗಾಳದ ಉಪಚುನಾವಣಾ ಕಣದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ನಂದಿಗ್ರಾಮದ ಬಳಿಕ ರೆಜಿನಗರ ವಿಧಾನಸಭಾ ಕ್ಷೇತ್ರದಲ್ಲೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ತನ್ನ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ...

ಅಮಾನವೀಯ ಕೃತ್ಯ : ಮಹಿಳೆಗೆ ಥಳಿಸಿ, ಕೂದಲು ಹಿಡಿದು ಎಳೆದೊಯ್ದ ಪೊಲೀಸ್ ಸಿಬ್ಬಂದಿ

ತೆಲಂಗಾಣದ ಹಫೀಝ್‌ಪೇಟ್ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಮಹಿಳೆಗೆ ಥಳಿಸಿ, ಆಕೆಯ ತಲೆಕೂದಲು ಹಿಡಿದು ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶುಕ್ರವಾರ (ಸೆ.18) ರಾತ್ರಿ ರೈಲ್ವೆ...

ರಾಮಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರಾಮಮಂದಿರದಲ್ಲಿ ದೇಣಿಗೆ ಹಣ ಕಳವು ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ಎಲ್ಲಾ ಎಂಟು ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ ಎಂದು ಅವರ ವಕೀಲರು (ಸೆ.18) ತಿಳಿಸಿದ್ದಾರೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ...

ಬಂಗಾಳದಲ್ಲಿ ಬಿಜೆಪಿ ದ್ವೇಷ ರಾಜಕಾರಣ: ಮಾಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನ

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಶುಕ್ರವಾರ (ಸೆ.18) ಬಂಧಿಸಲಾಗಿದೆ ಎಂದು ಪೂರ್ವ ಮೇದಿನಿಪುರ ಜಿಲ್ಲಾ ಪೊಲೀಸ್...