Homeಮುಖಪುಟಸಿವಂಗಿಗಳೇನೋ ತಂದಿರಿ; ಹುಲ್ಲುಗಾವಲುಗಳ ರಕ್ಷಣೆ ಯಾವಾಗ?

ಸಿವಂಗಿಗಳೇನೋ ತಂದಿರಿ; ಹುಲ್ಲುಗಾವಲುಗಳ ರಕ್ಷಣೆ ಯಾವಾಗ?

- Advertisement -
- Advertisement -

ಈಗ ಮಾಧ್ಯಮಗಳಲ್ಲೆಲ್ಲಾ ಪ್ರಧಾನಿಗಳ ಜನ್ಮದಿನದಂದು ತಂದು ಬಿಡಲಾದ ಕನ್ನಡದ ಸಿವಂಗಿ ಎಂದು ಹೆಸರುಳ್ಳ ಚೀತಾಗಳದ್ದೇ ಸುದ್ದಿ. ಇದಕ್ಕೆ, ನಮ್ಮ ದೇಶದಿಂದ ಅಳಿದುಹೋದ ಪ್ರಬೇಧವೊಂದನ್ನು ಮತ್ತೆ ಅವತರಿಸುವಂತೆ ಮಾಡಲು ಮೋದಿಯವರೇ ಬರಬೇಕಾಯಿತು ಎಂದೆಲ್ಲ ಪ್ರಚಾರವನ್ನೂ ಕೊಡಲಾಯಿತು. ಆದರೆ ವಾಸ್ತವದ ವಿಷಯವೆಂದರೆ ಭಾರತದಲ್ಲಿದ್ದ ಸಿವಂಗಿಯ ಉಪ ಪ್ರಬೇಧವೇ ಬೇರೆ ಮತ್ತು ಆಫ್ರಿಕಾದಲ್ಲಿದ್ದ ಸಿವಂಗಿಯ ಉಪ ಪ್ರಬೇಧವೇ ಬೇರೆ. ಹೇಗೆ ಆಫ್ರಿಕಾದ ಸಿಂಹಗಳನ್ನು ಭಾರತದ ಗಿರ್ ಅರಣ್ಯದಲ್ಲಿರುವ ಸಿಂಹಗಳೆನ್ನಲಾಗದೋ, ಹೇಗೆ ಸೈಬೀರಿಯಾದ ಹುಲಿಗಳನ್ನು ಭಾರತದ ಹುಲಿಗಳೆನ್ನಲಾಗದೋ, ಹಾಗೆಯೇ ಆಫ್ರಿಕಾದ ಸಿವಂಗಿಗಳು ಆನುವಂಶಿಕವಾಗಿ ಭಾರತದ ಅಥವಾ ಏಷ್ಯಾದ ಸಿವಂಗಿಗಳಾಗಲಾರವು. ಐತಿಹಾಸಿಕವಾಗಿ ಏಷಿಯಾದ ಸಿವಂಗಿಗಳು ಮಧ್ಯಪ್ರಾಚ್ಯದಿಂದ ಹಿಡಿದು ಭಾರತದವರೆಗಿನ ಭೂ ಪ್ರದೇಶದಲ್ಲಿ ಕಂಡುಬರುತ್ತಿದ್ದವು. ಆದರೆ ಅತಿಯಾದ ಬೇಟೆ ಮತ್ತು ಆವಾಸದ ಕುಗ್ಗುವಿಕೆಯ ಕಾರಣಗಳಿಂದಾಗಿ ಕಳೆದ ಶತಮಾನದ ಮಧ್ಯಭಾಗದಲ್ಲಿ ತಮ್ಮ ವ್ಯಾಪ್ತಿಯ ಬಹುಪಾಲು ಪ್ರದೇಶಗಳಲ್ಲಿ ಈ ಸಿವಂಗಿಗಳು ಅವಸಾನ ಹೊಂದಿದವು. ಈಗಲೂ ಕೂಡ ಏಷಿಯಾದ ಸಿವಂಗಿಗಳು ಇರಾನಿನ ಕೆಲ ಸಂರಕ್ಷಿತ ಪ್ರದೇಶದಲ್ಲಿ ಉಳಿದುಕೊಂಡಿವೆ. ಆದರೆ ಅವುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಹತ್ತು ವರ್ಷಗಳ ಹಿಂದೆ ಸುಮಾರು 80ರಷ್ಟು ಮಾತ್ರ ಇದ್ದ ಸಿವಂಗಿಗಳು ಈಗಿನ ಗಣತಿಯ ಪ್ರಕಾರ 20ಕ್ಕೂ ಕಡಿಮೆ ಎಂದು ಅಂದಾಜಿಸಲಾಗಿದೆ.

ಸಿವಂಗಿಗಳು ಕಾಣಬರುವುದು ಉಷ್ಣ ಪ್ರದೇಶದ ಹುಲ್ಲುಗಾವಲು ಮತ್ತು ಅರೆ ಮರುಭೂಮಿಯಂತಹ ಪ್ರದೇಶಗಳಲ್ಲಿ. ಅವುಗಳ ಅಳಿವಿಗೆ ಸೂಕ್ತ ಆವಾಸದ ನಾಶವೇ ಮುಖ್ಯವಾದ ಕಾರಣ. ನಮ್ಮ ದೇಶದಲ್ಲಿ ಸಿವಂಗಿಗಳು ಇರಬಹುದಾದ ಆವಾಸವು ಹೆಚ್ಚಿನ ಪ್ರಮಾಣದಲ್ಲೇನೂ ಉಳಿದಿಲ್ಲ. ಅವೆಲ್ಲ ಖರಾಬು ಅಥವಾ ಬರಡು ಭೂಮಿಗಳೆಂದು ಪರಿಗಣಿಸಲ್ಪಟ್ಟು ಕೈಗಾರಿಕೆ ಮತ್ತಿತರ ಅರಣ್ಯೇತರ ಬಳಕೆಗೆ ವಿನಿಯೋಗಿಸಲ್ಪಟ್ಟಿವೆ. ನಮ್ಮ ದೇಶದಿಂದ ಸಿವಂಗಿಗಳೇನೋ ದಶಕಗಳ ಹಿಂದೆ ನಶಿಸಿ ಹೋದವು ಆದರೆ ಲಕ್ಷಾಂತರ ವರ್ಷಗಳಿಂದ ಇದೇ ಸಿವಂಗಿಗಳ ಜೊತೆಯಲ್ಲಿಯೇ ಆವಾಸವನ್ನು ಹಂಚಿಕೊಂಡಿದ್ದ ಇತರ ಜೀವ ಪ್ರಬೇಧಗಳ ಪರಿಸ್ಥಿತಿಯೇನು? ಸಿವಂಗಿಗಳಂತೆಯೇ ಹುಲ್ಲುಗಾವಲು ಮತ್ತು ಅರೆ ಮರುಭೂಮಿ ಪ್ರದೇಶದ ಮೇಲೆ ಅವಲಂಬಿತವಾದ ಅನೇಕ ಜೀವಿ ಪ್ರಬೇಧಗಳು ಅಳಿವಿನತ್ತ ಮುಖಮಾಡಿ ನಿಂತಿವೆ.

ರಾಜಸ್ಥಾನ, ಗುಜರಾತಿನ ಅರೆ ಮರುಭೂಮಿ ಪ್ರದೇಶಗಳು, ಪಾಕಿಸ್ತಾನದ ಸಿಂಧ್ ಪ್ರಾಂತ್ಯ ಮತ್ತು ಕರ್ನಾಟಕವನ್ನೂ ಒಳಗೊಂಡ ದಖ್ಖನ್ ಪ್ರಸ್ಥಭೂಮಿಯ ಒಣ ಹುಲ್ಲುಗಾವಲಿನಲ್ಲಿ ಕಂಡುಬರುವ, ಕನ್ನಡದಲ್ಲಿ ಎರ್ಲಡ್ಡು ಅಥವಾ ದೊರವಾಯನ ಹಕ್ಕಿ ಎಂದು ಕರೆಸಿಕೊಳ್ಳುವ ಗ್ರೇಟ್ ಇಂಡಿಯನ್ ಬಸ್ಟರ್ಡ್ ಹಕ್ಕಿಯು ಇಂಥದೇ ಹುಲ್ಲುಗಾವಲನ್ನು ಅವಲಂಬಿಸಿದ ಜೀವಿ. ಮೊದಲು ವ್ಯಾಪಕವಾಗಿ ಕಂಡುಬರುತ್ತಿದ್ದ ಈ ಹಕ್ಕಿಗಳು ಆವಾಸದ ನಾಶ ಮತ್ತು ಬೇಟೆಯ ಕಾರಣಗಳಿಂದ ಅಳಿವಿನಂಚಿಗೆ ಬಂದುನಿಂತಿವೆ. ಕೆಲವೇ ನೂರರಷ್ಟು ಮಾತ್ರ ಉಳಿದುಕೊಂಡಿರುವ ಈ ಹಕ್ಕಿಗಳು ಒಮ್ಮೆ ನಾಶವಾದರೆ ಮತ್ತೆಲ್ಲಿಂದಲೂ ಇವುಗಳನ್ನು ತರಲಾಗದು. ನಿಯಂತ್ರಣ ಇಲ್ಲದ ಅಭಿವೃದ್ಧಿ, ಅಗತ್ಯವಿಲ್ಲದೆಯೂ ನಿರ್ಮಾಣಗೊಳ್ಳುವ ರಸ್ತೆಗಳು ಮತ್ತು ಹೈಟೆನ್ಷನ್ ವಿದ್ಯುತ್ ತಂತಿಗಳು ಇವುಗಳಿಗೆ ಮಾರಕವಾಗಿವೆ.

ಸರಿಸುಮಾರು ಇದೇ ರೀತಿಯ ಆವಾಸದಲ್ಲಿ ಕಂಡುಬರುವ ಮತ್ತು ಮುಂಚೆ ವ್ಯಾಪಕವಾಗಿದ್ದ ಲೆಸ್ಸರ್ ಫ್ಲೋರಿಕನ್ ಅಥವಾ ಚೊಟ್ಟಿ ನವಿಲಕ್ಕಿ ಎಂದು ಕರೆಯಲ್ಪಡುವ ಹಕ್ಕಿಯು ಕೂಡ ಇಂದು ಇಲ್ಲವೆನ್ನುವಷ್ಟು ಕಡಿಮೆಯಾಗಿದೆ. ಕೆಲ ವರ್ಷಗಳ ಹಿಂದೆ ಬೆಂಗಳೂರಿನ ಹತ್ತಿರದ ಹೆಸರಘಟ್ಟದ ಹುಲ್ಲುಗಾವಲಿನಲ್ಲಿ ಅಕಸ್ಮಾತ್ತಾಗಿ ಕಂಡ ಈ ಹಕ್ಕಿಯು ಸ್ಥಳೀಯ ಪಕ್ಷಿ ವೀಕ್ಷಕರಲ್ಲಿ ರೋಮಾಂಚನವನ್ನೇ ಸೃಷ್ಟಿಸಿತ್ತು. ಯಾಕೆಂದರೆ ದಶಕಗಳಿಂದೀಚೆಗೆ ಆ ಹಕ್ಕಿಯು ಸ್ಥಳೀಯವಾಗಿ ಕಾಣಿಸಿರಲೇ ಇಲ್ಲ. ಇದೇ ಹುಲ್ಲುಗಾವಲನ್ನು ಸಂರಕ್ಷಣಾ ಮೀಸಲು ಪ್ರದೇಶವಾಗಿ ಘೋಷಣೆ ಮಾಡುವಂತೆ ಸ್ಥಳೀಯ ವನ್ಯಜೀವಿ ಆಸಕ್ತರು ಒತ್ತಾಯಿಸುತ್ತಿದ್ದಾರೆ. ಇಲ್ಲವಾದರೆ ಬೆಂಗಳೂರಿಗೆ ಈ ಹಕ್ಕಿಗಳು ಬರುವ ಸಾಧ್ಯತೆಯು ಶಾಶ್ವತವಾಗಿ ಇಲ್ಲವಾಗುತ್ತದೆ. ಹಾಗೆಯೇ, ಒಣ ಪ್ರದೇಶದ ಹುಲ್ಲುಗಾವಲಿನಲ್ಲಿ ಮಾತ್ರ ಕಂಡುಬರುತ್ತಿದ್ದ ಜೇರ್ಡನ್ಸ್ ಕೋರ್ಸರ್ ಎಂಬ ಹಕ್ಕಿ ಕೂಡ ಬಹುಪಾಲು ನಾಶವಾಗಿದೆ. ಇದು ಈಗ ಆಂಧ್ರದ ಲಂಕಾಮಲ್ಲೇಶ್ವರ ವನ್ಯಜೀವಿಧಾಮದಲ್ಲಿ ಮಾತ್ರ ಇರಬಹುದೆಂದು ನಂಬಲಾಗಿದೆ. ಕೊನೆಯ ಬಾರಿಗೆ ಈ ಹಕ್ಕಿಯನ್ನು ನೋಡಿ ದಶಕಗಳೇ ಕಳೆದಿವೆ. ಹೀಗೆ ಸಿವಂಗಿಯ ಜೊತೆಗೆ ಇವೆಲ್ಲ ಪ್ರಬೇಧದ ಜೀವಿಗಳು ಒಂದೊಂದಾಗಿ ಅಳಿವಿನತ್ತ ನಡೆದಿವೆ.

ವರ್ಷದ ಬಹುಪಾಲು ಮೇಲ್ನೋಟಕ್ಕೆ ಒಣಗಿದಂತೆ ಕಾಣುವ ಹುಲ್ಲುಗಾವಲುಗಳ ಆವಾಸದ ವಿಶೇಷತೆಯೇ ಬೇರೆ, ಇವುಗಳು ಪೋಷಿಸುವ ಜೀವವೈವಿಧ್ಯ ನಿಜಕ್ಕೂ ಅಚ್ಚರಿ ಹುಟ್ಟಿಸುವಂತದ್ದು. ಇವುಗಳ ಕುರಿತು ನಮ್ಮ ಅರಿವು ಕೂಡ ಕಡಿಮೆಯೇ; ಏಕೆಂದರೆ ಈ ಆವಾಸವನ್ನು ನಾವೀಗಾಗಲೇ ಬರಡು ಭೂಮಿಯೆಂದೂ ಕೃಷಿಗೆ ಯೋಗ್ಯವಲ್ಲದ ಭೂಮಿಯೆಂದೂ ವರ್ಗೀಕರಿಸಿಯಾಗಿದೆ. ಈ ಪ್ರದೇಶಗಳಲ್ಲಿ ನಾವು ಮಾಡುವ ಎಲ್ಲ ಚಟುವಟಿಕೆಗಳೂ ಅಲ್ಲಿನ ಜೀವ ಪ್ರಬೇಧಕ್ಕೆ ಕಂಟಕವೇ ಆಗುತ್ತದೆ. ಉದಾಹರಣೆಗೆ, ಅತ್ಯಂತ ಜನಪ್ರಿಯವಾದ ಪರಿಸರ ಪ್ರೇಮಿ ಚಟುವಟಿಕೆಯೆಂದು ಕರೆಸಿಕೊಳ್ಳಲ್ಪಡುವ ಗಿಡ ನೆಡುವ ಚಟುವಟಿಕೆ ಹುಲ್ಲುಗಾವಲಿಗೆ ಮತ್ತು ಅಲ್ಲಿನ ಜೀವಿಗಳಿಗೆ ಮಾರಕ. ಹುಲ್ಲುಗಾವಲನ್ನು ನಾವು ಅರಣ್ಯವಾಗಿ ಪರಿವರ್ತಿಸಿದರೆ ಅಲ್ಲಿನ ಸ್ಥಳೀಯ ಜೀವಪ್ರಬೇಧಗಳು ಅಲ್ಲಿಂದ ಮಾಯವಾಗುತ್ತವೆ. ಅದೇ ರೀತಿ ಜಾಗತಿಕ ತಾಪಮಾನದಿಂದ ರಕ್ಷಿಸುವ ಮತ್ತು ಪರಿಸರ ಸ್ನೇಹಿ ಎಂದು ನಂಬಲ್ಪಡುವ ಸೌರ ವಿದ್ಯುತ್ ಕೂಡ ಹುಲ್ಲುಗಾವಲಿನ ಆವಾಸಕ್ಕೆ ಕಂಟಕವೇ ಆಗಿದೆ. ನಮ್ಮದೇ ನಾಡಿನ ಪಾವಗಡದಲ್ಲಿ ಸ್ಥಾಪಿಸಲಾದ ಏಷಿಯಾದ ಅತಿದೊಡ್ಡ ಸೌರ ವಿದ್ಯುತ್ ಘಟಕವು ಇಂತಹುದೇ ಹುಲ್ಲುಗಾವಲು ಮತ್ತು ಮಳೆಯಾಧಾರಿತ ಒಣ ಕೃಷಿ ಭೂಮಿಯಲ್ಲಿಯೇ ಇದೆ. ಶಾಶ್ವತವಾಗಿ ಹುಲ್ಲುಗಾವಲನ್ನು ಮುಚ್ಚಿಹಾಕುವ ಸೌರ ಫಲಕಗಳು, ಅವುಗಳ ಸುತ್ತ ಹುಲ್ಲು ಮತ್ತಿತರ ಸಸ್ಯಗಳು ಬೆಳೆಯದಂತೆ ಸಿಂಪಡಿಸುವ ಕಳೆನಾಶಕಗಳು ಮತ್ತು ಈ ಸೌರ ಫಲಕಗಳನ್ನು ಸ್ವಚ್ಛಗೊಳಿಸಲು ಬಳಸುವ ಕೋಟಿಗಟ್ಟಲೆ ಲೀಟರ್‌ನಷ್ಟು ನೀರು, ಇವೆಲ್ಲವೂ ಈ ಯೋಜನೆಗಳು ಎಷ್ಟು ಪರಿಸರ ಸ್ನೇಹಿ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿತ್ತವೆ.

ವನ್ಯಜೀವಿ ಸಂರಕ್ಷಣೆಯೆಂಬುದು, ಹಿಂದಿನ ಅಂಕಿ ಅಂಶಗಳನ್ನು ನೋಡಿ ಅದರ ಆಧಾರದ ಮೇಲೆ ದಶಕಗಳಷ್ಟು ಮುಂದಿನ ಯೋಜನೆಯನ್ನಿಟ್ಟುಕೊಂಡು ಮಾಡುವ ಒಂದು ವೈಜ್ಞಾನಿಕ ಪ್ರಕ್ರಿಯಯಾಗಿದೆ. ಈ ಹಿಂದೆ ಮಾಡಿದ ತಪ್ಪುಗಳಿಂದ ನಾವು ಎಷ್ಟು ಜೀವ ಸಂಪತ್ತನ್ನು ಕಳೆದುಕೊಂಡಿದ್ದೇವೆ ಮತ್ತು ಅದು ಮರುಕಳಿಸದಂತೆ ನಾವು ಕೈಗೊಳ್ಳಬೇಕಾದ ಕ್ರಮಗಳೇನೆಂಬ ಸಂಗತಿಗಳು, ಯಾವುದೋ ಪ್ರದೇಶದ, ಬೇರೊಂದು ಉಪ ಪ್ರಬೇಧದ ಜೀವಿಯೊಂದನ್ನು ನಮ್ಮಲ್ಲಿಗೆ ತಂದು ಬಿಡುವುದಕ್ಕಿಂತ ಹೆಚ್ಚಿನ ಮಹತ್ವ ಪಡೆದುಕೊಳ್ಳಬೇಕು. ಇಲ್ಲದೆ ಹೋದರೆ ಲಕ್ಷಾಂತರ ವರ್ಷಗಳಿಂದ ಭೂಮಿಯ ಮೇಲಿದ್ದ ಒಂದೊಂದೇ ಜೀವಪ್ರಬೇಧಗಳನ್ನು ನಾವು ಶಾಶ್ವತವಾಗಿ ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತೇವೆ.

ಗುರುಪ್ರಸಾದ್ ತಿಮ್ಮಾಪುರ

ಗುರುಪ್ರಸಾದ್ ತಿಮ್ಮಾಪುರ
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಗುರು ಪರಿಸರ, ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸರ ಕಾಳಜಿಗೆ ಸಂಬಂಧಿಸಿದಂತೆ ಹಲವು ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ಚೀತಾಗಳನ್ನೇನೋ ತಂದಾಯಿತು; ಮುಂದಿನ ಪರಿಣಾಮ ಬಲ್ಲಿರೇನು? ಪರಿಸರತಜ್ಞರು ಹೇಳಿದ್ದೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಂಜಾಬ್‌| ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ ವೃದ್ಧ

ಪಂಜಾಬ್‌ನ ಬರ್ನಾಲಾ ಜಿಲ್ಲೆಯಲ್ಲಿ, ಎಲ್‌ಪಿಜಿ ಸಿಲಿಂಡರ್‌ಗಾಗಿ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ 66 ವರ್ಷದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ. ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಅನಿಲ ಕೊರತೆಯಿಂದ ಉಂಟಾಗುತ್ತಿರುವ...

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಪದಚ್ಯುತಿಗೆ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿದ ವಿಪಕ್ಷಗಳು

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವಂತೆ ಕೋರಿ ವಿರೋಧ ಪಕ್ಷದ ಸಂಸದರು ಸಂಸತ್ತಿನ ಉಭಯ ಸದನಗಳಲ್ಲಿ ನೋಟಿಸ್ ಸಲ್ಲಿಸಿರುವುದಾಗಿ ಶುಕ್ರವಾರ ವರದಿಯಾಗಿದೆ.  ಈ ನೋಟಿಸ್‌ಗೆ 130 ಲೋಕಸಭಾ ಸದಸ್ಯರು...

ಹಿಂದೂಯೇತರರಿಗೆ ದೇಗುಲ ಪ್ರವೇಶಕ್ಕೆ ನಿಷೇಧ ಹೇರಿದ ಬದರೀನಾಥ್-ಕೇದಾರನಾಥ ದೇವಾಲಯಗಳ ಸಮಿತಿ

ಮುಂಬರುವ ತೀರ್ಥಯಾತ್ರೆಯ ಋತುವಿನಿಂದ ಜಾರಿಗೆ ಬರುವಂತೆ ಬದರೀನಾಥ್ ಮತ್ತು ಕೇದಾರನಾಥ ದೇವಾಲಯಗಳು ಸೇರಿದಂತೆ ಅದರ ವ್ಯಾಪ್ತಿಯಲ್ಲಿರುವ 47 ಇತರ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವ ನಿರ್ಣಯವನ್ನು ಸರ್ವಾನುಮತದಿಂದ ದೇವಾಲಯ ಸಮಿತಿಯು ಅಂಗೀಕರಿಸಿದೆ. ಬಿಕೆಟಿಸಿ ಅಧ್ಯಕ್ಷ...

‘ಮಹಿಳೆಯರನ್ನು ಯಾರೂ ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ..’; ಕಡ್ಡಾಯ ಮುಟ್ಟಿನ ರಜೆ ಕುರಿತ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ 

ಮಹಿಳೆಯರಿಗೆ ಕಡ್ಡಾಯ ಮುಟ್ಟಿನ ರಜೆ 'ಅವರ ಉದ್ಯೋಗದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು'. ಏಕೆಂದರೆ, ನಾವು ಅಂತಹ ಕಾನೂನನ್ನು ಜಾರಿಗೆ ತಂದರೆ ಉದ್ಯೋಗದಾತರು ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದಿಲ್ಲ' ಎಂದು ಸುಪ್ರೀಂ ಕೋರ್ಟ್‌ ಮುಖ್ಯ...

ಪ್ಯಾಲೆಸ್ತೀನಿಯನ್ ಬಂಧಿತನ ಮೇಲೆ ಲೈಂಗಿಕ ದೌರ್ಜನ್ಯ; ಇಸ್ರೇಲ್ ಸೈನಿಕರ ವಿರುದ್ಧದ ಆರೋಪ ಕೈಬಿಟ್ಟ ಸೇನೆ

ಕ್ಯಾಮೆರಾದಲ್ಲಿ ಭಾಗಶಃ ಸೆರೆಹಿಡಿಯಲಾದ ಹಲ್ಲೆಯಲ್ಲಿ, ಬಂಧಿತ ಪ್ಯಾಲೆಸ್ತೀನಿಯನ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಐದು ಸೈನಿಕರ ವಿರುದ್ಧದ ಆರೋಪಗಳನ್ನು ಕೈಬಿಡುತ್ತಿರುವುದಾಗಿ ಇಸ್ರೇಲ್ ಸೇನೆ (ಮಾರ್ಚ್ 12) ತಿಳಿಸಿದೆ. ಈ ಘೋಷಣೆಯನ್ನು ಪ್ರಧಾನಿ...

‘ಇರಾನ್ ಸರ್ವೋಚ್ಚ ನಾಯಕ ಜೀವಂತವಾಗಿರಬಹುದು, ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ’: ಡೊನಾಲ್ಡ್ ಟ್ರಂಪ್

ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಮೊಜ್ತಬಾ ಖಮೇನಿ(56) "ಬಹುಶಃ ಜೀವಂತವಾಗಿದ್ದಾರೆ ಆದರೆ ಗಂಭೀರವಾಗಿ ಗಾಯಗೊಂಡಿದ್ದಾರೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಶುಕ್ರವಾರ ಪ್ರಸಾರವಾದ ಫಾಕ್ಸ್ ನ್ಯೂಸ್ ರೇಡಿಯೋದ ಬ್ರಿಯಾನ್ ಕಿಲ್ಮೀಡ್ ಅವರ...

ಬಾಗಲಕೋಟೆ| ಜನರ ಮೇಲೆ ಕಲ್ಲು ಎಸೆದ ಆರೋಪ; ಸಾವಳಗಿಯಲ್ಲಿ ದಲಿತ ಯುವಕನನ್ನು ಕೊಂದ ಗುಂಪು

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ದಲಿತ ದೌರ್ಜನ್ಯದ ಆಘಾತಕಾರಿ ಘಟನೆಯೊಂದು ನಡೆದಿದೆ. ಶಾಲಾ ಕಾರ್ಯಕ್ರಮವೊಂದರಲ್ಲಿ ಜನರ ಮಲೆ ಸಣ್ಣ ಕಲ್ಲು ಎಸೆದ ಎಂಬ ಆರೋಪದ ಮೇಲೆ ದಲಿತ ಯುವಕನನ್ನು ಕ್ರೂರವಾಗಿ...

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...