ಕಳೆದ ವರ್ಷ ನಕ್ಸಲ್ ನಾಯಕ ವಿಕ್ರಂಗೌಡ ಹತ್ಯೆ ನಂತರ, ಉಳಿದ ನಕ್ಸಲ್ ಹೋರಾಟಗಾರರ ಜೀವದ ಬಗ್ಗೆ ರಾಜ್ಯದ ನಾಗರೀಕರು ಆತಂಕ ವ್ಯಕ್ತಪಡಿಸಿದ್ದರು. ಇದೀಗ ಉಳಿದ ಆರು ಜನ ಹೋರಾಟಗಾರರು ಇಂದು ಶರಣಾಗುತ್ತಿದ್ದು, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ಅವರ ನೇತೃತ್ವದಲ್ಲಿ ರಚನೆಯಾದ ‘ಶಾಂತಿಗಾಗಿ ನಾಗರಿಕ ವೇದಿಕೆ’ ಇದರ ನೇತೃತ್ವ ವಹಿಸಿದೆ.
ನಕ್ಸಲ್ ಶರಣಾಗತಿ ರಾಜ್ಯ ಸರ್ಕಾರ ಕರೆ ನೀಡಿದ ಬಳಿಕ ಸಕ್ರಿಯ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಪ್ರಕ್ರಿಯೆ ನಡೆಯುತ್ತಿದೆ. ನಕ್ಸಲ್ ನಾಯಕಿ ಮುಂಡಗಾರು ಲತಾ ಸೇರಿದಂತೆ 6 ಮಂದಿ ನಕ್ಸಲರು ಇಂದು ಚಿಕ್ಕಮಗಳೂರು ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಮುಂದೆ ಶರಣಾಗತಿಗೆ ಕ್ಷಣಗಣನೆ ಆರಂಭವಾಗಿದೆ.
ಮುಂಡಗಾರು ಲತಾ, ವನಜಾಕ್ಷಿ ಬಾಳೆಹೊಳೆ, ಸುಂದರಿ ಕುತ್ತೂರು, ಮಾರೆಪ್ಪ ಅರೋಲಿ, ಕೆ. ವಸಂತ, ಟಿ.ಎನ್. ಜೀಶ್ 2024ರ ನಕ್ಸಲ್ ಶರಣಾಗತಿ ಪ್ಯಾಕೇಜ್ನಡಿ ಸಮಾಜದ ಮುಖ್ಯವಾಹಿಗೆ ಬರುವುದು ಬಹುತೇಕ ಖಚಿತವಾಗಿದೆ. ಉಡುಪಿ ಜಿಲ್ಲೆ ಕಾರ್ಕಳ ಸಮೀಪದಲ್ಲಿ ನಕ್ಸಲ್ ಮುಖಂಡ ವಿಕ್ರಮ್ ಗೌಡ ಎನ್ಕೌಂಟರ್ ಬಳಿಕ ಭೂಗತರಾಗಿರುವ ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನವನ್ನು ನಕ್ಸಲ್ ಶರಣಾಗತಿ ಸಮಿತಿ, ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರು ನಡೆಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ನಕ್ಸಲ್ ನಾಯಕರು ಮುಖ್ಯವಾಹಿನಿಗೆ ಬರಬೇಕು ಎಂದು ಕರೆಕೊಟ್ಟಿದ್ದರು.
ತಾವು ಮುಖ್ಯವಾಹಿನಿಗೆ ಬರುವ ಕುರಿತು ಮುಂಡಗಾರು ಲತಾ ಅವರು ಸಮಿತಿ ಸದಸ್ಯರ ಮುಂದೆ ಮಾತನಾಡಿ, “ಕರ್ನಾಟಕ, ತಮಿಳುನಾಡು ಹಾಗೂ ಕೇರಳದ ಆರು ಜನ ಕಾಮ್ರೇಡ್ಗಳು ಮುಖ್ಯವಾಹಿನಿಗೆ ಬರಬೇಕು ಎಂದುಕೊಂಡಿದ್ದೇವೆ. ಸಕಾರಾತ್ಮಕವಾಗಿ ಯೋಚಿಸಿ ನಿರ್ಧಾರ ಮಾಡಿದ್ದೇವೆ” ಎಂದಿದ್ದಾರೆ.
“ಮೊದಲ ಹಂತದಲ್ಲಿ ನಾವು ಒಂದು ಕಡೆ ಸೇರಿ ಚರ್ಚಿಸಿದ್ದೇವೆ. ಈಗ ಎರಡನೇ ಹಂತದಲ್ಲಿ ಮುಖ್ಯವಾಹಿನಿಗೆ ಬರಲು ಉತ್ಸುಕರಾಗಿದ್ದೇವೆ. ಎರಡು ಸಮತಿಯವರು ನಮ್ಮನ್ನು ಬಂದು ಭೇಟಿಯಾಗಿದ್ದಾರೆ. ಸರ್ಕಾರದ ನಿರ್ಧಾರಗಳ ಬಗ್ಗೆ ಮನವರಿಕೆ ಮಾಡಿದ್ದಾರೆ. ಸಮಿತಿಯವರ ಮಾತುಗಳ ನಮಗೆ ಖುಷಿ ತಂದಿವೆ. ನಾವೆಲ್ಲ ಕಾಮ್ರೇಡ್ಗಳು ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ” ಎಂದು ತಿಳಿಸಿದ್ದಾರೆ.

“ನಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಡುತ್ತೇವೆ. ಸರ್ಕಾರ ನಮ್ಮ ಭರವಸೆ ಈಡೇರಿಸುತ್ತದೆ ಎಂಬ ವಿಶ್ವಾಸ ನಮಗಿದೆ. ಸಮಿತಿಯ ಸದಸ್ಯರು ಸಾಕಷ್ಟು ಶ್ರಮ ಹಾಕಿ ನಮ್ಮನ್ನು ಮುಖ್ಯವಾಹಿನಿಗೆ ಕರೆತರಲು ಶ್ರಮಿಸಿದ್ದಾರೆ. ಅವರ ಮಾತಿಗೆ ಬೆಲೆ ಕೊಡುತ್ತೇವೆ. ಪ್ರಜಾತಾಂತ್ರಿಕವಾಗಿ ಮತ್ತು ಸಂವಿಧಾನಾತ್ಮಕವಾಗಿ ಹೋರಾಟ ಮುಂದುವರಿಯುತ್ತದೆ. ಜನರ ಪರವಾಗಿ ನಾವು ಕೊನೆ ತನಕ ನಿಲ್ಲುತ್ತೇವೆ. ಈ ವಿಚಾರದಲ್ಲಿ ನಾವು ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ. ನಮ್ಮ ಉಸಿರು ಇರೋವರೆಗೂ ನಮ್ಮ ಹೋರಾಟ ಇರಲಿದೆ” ಎಂದು ಮುಂಡಗಾರು ಲತಾ ಸ್ಪಷ್ಟಪಡಿಸಿದ್ದಾರೆ.
ಶರಣಾಗುವ ನಕ್ಸಲರು ಯಾರು?
ಮುಂಡುಗಾರು ಲತಾ (ಮುಂಡಗಾರು ಶೃಂಗೇರಿ)
ವನಜಾಕ್ಷಿ (ಬಾಳೆಹೊಳೆ ಕಳಸ)
ಸುಂದರಿ (ಕುಂತಲೂರು ದಕ್ಷಿಣ ಕನ್ನಡ)
ಮಾರಪ್ಪ ಅರೋಳಿ (ಕರ್ನಾಟಕ)
ವಸಂತ ಟಿ (ತಮಿಳುನಾಡು)
ಎನ್. ಜೀಶಾ (ಕೇರಳ)
ಶರಣಾಗುತ್ತಿರುವ ನಕ್ಸಲ್ ಕಾರ್ಯಕರ್ತರ ಸಂಕ್ಷಿಪ್ತ ಪರಿಚಯ
ಲತಾ ಮುಂಡಗಾರು: ಶೃಂಗೇರಿ ತಾಲೂಕಿನ ಲತಾ ಮಂಡಗಾರು ಬಡ ಆದಿವಾಸಿ ದಂಪತಿಯ ದೊಡ್ಡ ಕುಟುಂಬದ ಹೆಣ್ಣುಮಗಳು ಬಡತನ ಹಾಗೂ ಶಾಲೆಯ ಮಾಸ್ತರರ ಕಿರುಕುಳಗಳಿಂದಾಗಿ 6ನೆಯ ತರಗತಿಗೆ ಓದು ನಿಲ್ಲಿಸಿದರು. ಅಂತ್ಯದ ನೂರಾರು ಆದಿವಾಸಿ ಕುಟುಂಬಗಳಂತೆಯೇ ಈ ಕುಟುಂಬವು ಸಹ ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆಯಡಿ ಮನೆ ಕಳೆದುಕೊಳ್ಳುವ ಪರಿಸ್ಥಿತಿ ಬಂದಾಗ ಅದರ ವಿರುದ್ಧದ ಹೋರಾಟ ನಡೆಸುತ್ತಿದ್ದ ಚಳುವಳಿಯ ಭಾಗವಾದರು ಪ್ರಜಾಸತ್ತಾತ್ಮಕ ಹೋರಾಟಗಳಿಗೆ ಬೆಲೆ ನೀಡದ ಸರ್ಕಾರದ ಧೋರಣೆಗೆ ಬೇಸತ್ತು 2000ರಲ್ಲಿ 18ನೇ ವಯಸ್ಸಿನಲ್ಲಿ ಸಶಸ್ತ್ರ ಹೋರಾಟಕ್ಕೆ ಧುಮುಕಿ ಅಂದಿನಿಂದ ಕರ್ನಾಟಕ ಹಾಗೂ ಕೇರಳಗಳಲ್ಲಿ ಸಂಚರಿಸುವ ದಳದ ಭಾಗವಾಗಿದ್ದು ಇಂದು ಮತ್ತೆ ಜನಪದ ಚಳುವಳಿಗಳಲ್ಲಿ ಪ್ರಜಾತಂತ್ರವಾಗಿ ಹೋರಾಟಗಳನ್ನು ನಡೆಸಲು ಮುಖ್ಯವಾಹಿನಿಯ ಭಾಗವಾಗುತ್ತಿದ್ದಾರೆ. ಕೇವಲ 6ನೇ ತರಗತಿಯವರೆಗೆ ಓದಿರುವ ಲತಾರವರು ಯೋಜನೆಗಳ ಸ್ಪಷ್ಟತೆ ಹಾಗೂ ಬದ್ಧತೆ ಬೆರಗು ಹುಟ್ಟಿಸುವಂಥದ್ದು. ಈಗಿನ ನಕ್ಸಲ್ ತಂಡದ ನಾಯಕಿ ಎಂದು ಹೇಳಬಹುದು.
ಸುಂದರಿ ಕುತ್ಲೂರು: ಸುಂದರಿಯೂ ಸಹ ಲತಾ ರೀತಿಯಲ್ಲಿ ಆದಿವಾಸಿ ಮಹಿಳೆ. ಐದು ಜನರು ಮಕ್ಕಳಲ್ಲಿ ಆರನೆಯವರು ಬಡತನ ಹಾಗೂ ಶಾಲೆ ದೂರವಿದ್ದುದರಿಂದ ಮೂರನೆಯ ತರಗತಿಯ ನಂತರ ಶಾಲೆ ತೊರೆದರು. ಇವರ ಕುಟುಂಬವೂ ಸಹ ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆಯಿಂದಾಗಿ ತನ್ನ ಎಲ್ಲವನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತಿದ್ದರು. ಪ್ರಜಾಸತ್ತಾತ್ಮಕ ಚಳುವಳಿ ಫಲ ನೀಡದೆಂದು ಕಂಡಾಗ ಆಗಿನ ಹಲವರು ಯುವಜನರಂತೆ ಸುಂದರಿಯೂ ಸಹ ಆಯುಧವನ್ನು ಕೈಗೆತ್ತಿಕೊಂಡರು. ತನ್ನ 19ನೆಯ ವಯಸ್ಸಿನಲ್ಲಿ 2004ರಲ್ಲಿ ಮಾವೋವಾದಿ ಪಕ್ಷದ ಸದಸ್ಯರಾಗಿದ್ದು ಅಂದಿನಿಂದ ಕೇರಳ ಹಾಗೂ ಕರ್ನಾಟಕದಲ್ಲಿ ಸಂಚರಿಸುತ್ತಿರುವ ದಳದ ಭಾಗವಾಗಿದ್ದರು. ತನ್ನ ಹಾಗೂ ನೆರೆಹೊರೆಯ ಕುಟುಂಬಗಳ ಮೇಲೆ ಪೊಲೀಸರು ನಡೆಸುತ್ತಿದ್ದ ದಾಳಿಗಳು ದೌರ್ಜನ್ಯಗಳನ್ನು ಇಂದಿಗೂ ನೋವಿನಿಂದ ನೆನಪಿಸಿಕೊಳ್ಳುವ ಸುಂದರಿ ತನ್ನ ಹೋರಾಟದ ಕೆಚ್ಚನ್ನು ಉಳಿಸಿಕೊಂಡಿದ್ದು ಇನ್ನು ಮುಂದೆ ಪ್ರಜಾತಾಂತ್ರಿಕ ಚಳುವಳಿಗಳ ಭಾಗವಾಗಲು ಮುಖ್ಯ ವಾಹಿನಿಯನ್ನು ಸೇರಬಯಸಿದ್ದಾರೆ.
ವನಜಾಕ್ಷಿ: ವನಜಾಕ್ಷಿ ಎಸ್ ಎಸ್ ಎಲ್ ಸಿ ವರೆಗೂ ಓದಿರುವ ಇವರು ಈ ತಂಡದ ಅತಿ ಹಿರಿಯ ಸದಸ್ಯ 1985 ರಲ್ಲಿ ಓದು ನಿಲ್ಲಿಸಿದ ಈ ಆದಿವಾಸಿ ಮಹಿಳೆ ತನ್ನ ಗ್ರಾಮದಲ್ಲಿ ಸಾರ್ವಜನಿಕ ಜೀವನದ ಭಾಗವಾಗಿ 1992 ಮತ್ತು 1997ರಲ್ಲಿ ಗ್ರಾಮ ಪಂಚಾಯಿತಿ ಸದಸ್ಯಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಎಂಟು ಜನ ಮಕ್ಕಳ ದೊಡ್ಡ ಕುಟುಂಬದ ಹೆಣ್ಣು ಮಗಳಾಗಿ ಟೈಪ ರೈಟಿಂಗ್ ಕಲಿತು ಹೊಲಿಗೆಯನ್ನು ಜೀವ ಜೀವನಾಧಾರವಾಗಿಸಿಕೊಂಡರು. ರಾಜಕೀಯವಾಗಿ ಸಕ್ರಿಯವಾಗಿದ್ದರೂ ಸಹ ಇವರಿಗೆ ಮತ್ತು ಇವರ ಕುಟುಂಬಕ್ಕೆ ಬಲಾಢ್ಯರಿಂದ ತಮ್ಮ ತುಂಡುಭೂಮಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಪರಿಣಾಮವಾಗಿ ತಾಯಿ ಮಾನಸಿಕ ಅಸ್ವಸ್ಥತೆಗೆ ಗುರಿಯಾದರೆ ಒಬ್ಬ ತಮ್ಮ ಆತ್ಮಹತ್ಯೆಗೆ ಶರಣಾದ. ಅಲ್ಲದೆ ಸುತ್ತಮುತ್ತ ಇದ್ದ ಹಲವು ಕುಟುಂಬಗಳು ಸಹ ತಮ್ಮಂತೆ ಬಡತನ ಶೋಷಣೆಗಳಿಗೆ ಬಲಿಯಾಗುತ್ತಿದ್ದುದ್ದನ್ನು ಕಂಡ ವನಜಾಕ್ಷಿ ವ್ಯವಸ್ಥೆಯಲ್ಲಿ ನಂಬಿಕೆಯನ್ನು ಕಳೆದುಕೊಂಡರು ಸಶಸ್ತ್ರ ಹೋರಾಟವೇ ದಾರಿ ಎಂಬ ನಿರ್ಧಾರಕ್ಕೂ ಆ ಕಾಲದಲ್ಲಿ ನಡೆಯುತ್ತಿದ್ದ ಸಶಸ್ತ್ರ ಚಳುವಳಿಯ ಪ್ರಭಾವದಿಂದಾಗಿ ಬಂದರು 2000 ನೇ ಇಸವಿಯಿಂದ ಮಾವೋವಾದಿ ಪಕ್ಷದ ಭಾಗವಾಗಿ ಕರ್ನಾಟಕ ಹಾಗೂ ಕೇರಳದಲ್ಲಿ ಸಂಚರಿಸುವ ದಳದ ಸದಸ್ಯೆಯಾಗಿದ್ದರು. ತನ್ನ ಹೋರಾಟವನ್ನು ಪ್ರಜಾಸತ್ತಾತ್ಮಕ ರೀತಿಯಲ್ಲಿಯೂ ಮುಂದುವರಿಸಬಹುದಾದ ಅವಕಾಶಗಳನ್ನು ಅರ್ಥ ಮಾಡಿಕೊಂಡು ಈಗ ಮುಖ್ಯವಾಹಿನಿಯ ಭಾಗವಾಗಲು ಸಿದ್ಧರಾಗಿದ್ದಾರೆ.
ಜಯಣ್ಣ ಅರೋಲಿ: ಜಯಣ್ಣ ಆರೋಲಿ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಅರೋಲಿ ಗ್ರಾಮದ ಜಯಣ್ಣ ಎರಡನೆಯ ಬಿಎ ವರೆಗೂ ಓದಿರುವ ದಲಿತ ಯುವಕ ಕಾಲೇಜಿನಲ್ಲಿ ಇರುವಾಗಲೇ ಆ ಸಮಯದಲ್ಲಿ ಆ ಭಾಗದಲ್ಲಿ ನಡೆಯುತ್ತಿದ್ದ ಮಾವೋವಾದಿ ಚಳುವಳಿಯ ಕಡೆ ಆಕರ್ಷಿತರಾದರು ಆಸಕ್ತಿಯಿಂದ ಚಳುವಳಿಯನ್ನು ಗಮನಿಸುತ್ತಿದ್ದ ಅವರಿಗೆ ಭಾಸ್ಕರ್ ಅವರ ಎನ್ಕೌಂಟರ್ ಹತ್ಯೆ ಆಘಾತವನ್ನುಂಟು ಮಾಡಿತು 2000ನೆ ಇಸವಿಯಲ್ಲಿ ತನ್ನ 24ನೇ ವಯಸ್ಸಿನಲ್ಲಿ ದಳದ ಭಾಗವಾದರು ಅಂದಿನಿಂದ ಕೇರಳ ಕರ್ನಾಟಕಗಳಲ್ಲಿ ಇವರ ಹೋರಾಟದ ಚಟುವಟಿಕೆಗಳು ನಡೆದಿದೆ 2018 ಮತ್ತೆ ಸಶಸ್ತ್ರ ಚಳುವಳಿಗೆ ಮರಳಿದರು ಜನರ ಜೊತೆ ಸೇರಿ ಜನಪರ ಹೋರಾಟಗಳನ್ನು ನಡೆಸಲು ಮುಖ್ಯ ವಾಹಿನಿಯ ಭಾಗವಾಗಿ ಭಾಗವಾಗ ಬಯಸಿದ್ದಾರೆ ಸರ್ಕಾರ ಪ್ರಕಟಿಸಿರುವ ಪ್ಯಾಕೇಜ್ ಭಾಗವಾಗಿ ತಮಗೆ ಸಂದಾಯವಾಗಬಹುದಾದ ಹಣದ ಅರ್ಧ ಭಾಗವನ್ನು ತನ್ನ ಹಳ್ಳಿಯ ಶಾಲೆಯ ಅಭಿವೃದ್ಧಿಗಾಗಿ ನೀಡಬೇಕೆಂದು ತೀರ್ಮಾನಿಸಿದ್ದಾರೆ.

ವಸಂತ್ ಆರ್ಕಾಟ್: ತಮಿಳುನಾಡಿನ ವೆಲ್ಲೂರಿನ ವಸಂತ್ ಬಿ ಟೆಕ್ ಪದವೀಧರ ವೆಲ್ಲೂರು ಜಿಲ್ಲೆಯ ಆರ್ಕಾಟ್ ಅವರ ಊರು ಸಮಾಜಮುಖಿ ಚಿಂತನೆಗಳಿಂದ ಪ್ರಭಾವಿತರಾದ ಇವರು ಹೋರಾಟಗಳನ್ನು ಗಮನಿಸುತ್ತಿ ಬೆಳೆದವರು 2010ರಲ್ಲಿ ಪದವಿ ಮುಗಿಸಿದ ತಕ್ಷಣವೇ ಶಶಸ್ತ್ರ ಹೋರಾಟದ ಭಾಗವಾಗಿ ಅಂದಿನಿಂದಲೂ ಕೇರಳ ಕರ್ನಾಟಕಗಳಲ್ಲಿರುವ ದಳದ ಸದಸ್ಯರಾಗಿದ್ದರು. ಮಿತ ಭಾಷೆಯಾಗಿರುವ ವಸಂತ್ ತನ್ನ ಆದರ್ಶಗಳನ್ನು ಬಿಟ್ಟುಕೊಡದೆ ಹೋರಾಟದ ಮಾರ್ಗವನ್ನು ಬದಲಿಸಿ ಮುಖ್ಯವಾಹಿನಿಯನ್ನು ಸೇರಬಯಸಿದ್ದಾರೆ.

ಜಿಶ: ಜಿಶ ತಂಡದಲ್ಲಿನ ಎಲ್ಲರಿಗಿಂತಲೂ ತುಂಬಾ ಚಿಕ್ಕವರು. ಕೇರಳದ ಜೀಶ ವಯನಾಡ್ ಜಿಲ್ಲೆಯ ಮಕ್ಕಿಮಲದ ಆದಿವಾಸಿ ಮಹಿಳೆ ಎಂಟನೇ ತರಗತಿಯವರೆಗೂ ವಿದ್ಯಾಭ್ಯಾಸ 2018ರಲ್ಲಿ ಕೇರಳದಲ್ಲಿ ಸಶಸ್ತ್ರ ಹೋರಾಟದ ಭಾಗವಾಗಿದ್ದು 2023ರಲ್ಲಿ ತಂಡದ ಇತರೆ ಸದಸ್ಯರೊಂದಿಗೆ ಕೇರಳದಿಂದ ಕರ್ನಾಟಕಕ್ಕೆ ಬಂದವರು.

ಇದನ್ನೂ ಓದಿ; ಚಿಕ್ಕಮಗಳೂರು : ಮುಖ್ಯವಾಹಿನಿಗೆ ಇಂದು ಆರು ನಕ್ಸಲರು


