Homeಅಂಕಣಗಳುಬೆಳದ ಮಕ್ಕಳ ಅಂತರಂಗದಲ್ಲಿ ಆಪ್ತ ಪಯಣ

ಬೆಳದ ಮಕ್ಕಳ ಅಂತರಂಗದಲ್ಲಿ ಆಪ್ತ ಪಯಣ

- Advertisement -
- Advertisement -

ಡಾ. ವಿನಯ್ ಒಕ್ಕುಂದ |

ಉತ್ಸಾಹದ ಚಿಲುಮೆಗಳಾಗಿ ಪುಟಿವ ಜೀವಂತಿಕೆಯಿಂದ ತನ್ನ ಸುತ್ತಲ ಲೋಕಕ್ಕೆ ಬೆಳಕು ಬೀರಬೇಕಾದ ಯೌವನದ ಮಕ್ಕಳು, ಹೀಗೆ ತಲೆತಗ್ಗಿಸಿ ಗಂಟಲ ಸೆರೆ ಬಿಗಿದು ತುಳುಕುವ ಕಂಬನಿಯನ್ನು ನುಂಗುತ್ತ ಅಸಹಾಯಕರಾಗಿ ಅದುರು ತುಟಿಯಲ್ಲಿ ಥರಗುಡುವುದೆಂದರೆ ನನ್ನಮಟ್ಟಿಗದು ಮನುಷ್ಯ ಲೋಕದ ಅತ್ಯಂತ ಅಸಹನೀಯತೆಯ ದೃಶ್ಯ. ಅದಕ್ಕೆ ಏನೋ, ಮನೆಯಲ್ಲಿ ನನ್ನ ಮಕ್ಕಳು ಬೆಳೆದಂತೆಲ್ಲ ಅವರ ನೋವುಗಳಿಗೆ ನಾನು ಮರುಗಿದ್ದೇ ಕಡಿಮೆ. ಜ್ವರದಿಂದ ಮೈ ಸುಡುತ್ತಿದ್ದರೂ, ‘ಅದೇನಾಗುತ್ತೆ ಬಿಡು, ಈ ವಯಸ್ನಲ್ಲಿ. ಒಂದು ಟ್ಯಾಬ್ಲೆಟ್ ತಗೊ. ಬಿಸಿ ಅನ್ನ ಉಂಡು ಮಲಗು’ ಎಂದು ಹಗುರವಾಗಿ ಮಾತಾಡಿ, ‘ಈ ಅಮ್ಮನಿಗೆ ಒಂಚೂರು ಪ್ರೀತಿಯಿಲ್ಲ’ ಎಂದು ಶರಾ ಬರೆಯಿಸಿಕೊಂಡೂ ಆಗಿದೆ. ಅಸಲಿಗೆ, ದೊಡ್ಡ ಮಕ್ಕಳ ದಯನೀಯತೆಯನ್ನು ಸಹನೆಯಿಂದ ನೋಡಬಲ್ಲ ಶಕ್ತಿಯೇ ನನಗಿಲ್ಲವೆನೋ. ಆದರೆ, ದಿನಂಪ್ರತಿ ನೂರಾರು ಬೆಳೆದ ಮಕ್ಕಳೊಂದಿಗಳಾದ ನಾನು, ಅವರ ನಗುಮುಖವನ್ನು ಕರ್ತೃತ್ವಶಕ್ತಿಯನ್ನು ಪ್ರೀತಿಸುವಂತೆಯೇ ಅವರ ಅಸಹಾಯಕತೆಯನ್ನು, ಯಾತನೆಯನ್ನು, ತಪ್ಪುಗಳನ್ನು ಉಢಾಳತನವನ್ನು ಮಮತೆಯಿಂದ ಶೋಧಿಸಿಕೊಳ್ಳುವ ಜರೂರತ್ತನ್ನು ಕಲಿಯುತ್ತಿದ್ದೇನೆ. ಹೊರಗಣ್ಣಿಗೆ ಒರಟೊರಟು ಕಲ್ಲುಗಳಂತೆ ಕಾಣುವ ಈ ಮಕ್ಕಳೊಳಗೆ ಜೀವ ತುಡಿತದ ಸೆಲೆಯೇ ಹರಿಯುತ್ತಿರುತ್ತದೆ. ಆ ಸೆಲೆಯ ಸೆಳೆತ ನಮ್ಮನ್ನೂ ಬದಲಿಸುತ್ತದೆ.
ದೈನಂದಿನ ಪಾಠ, ಟೆಸ್ಟು, ಅಟೆಂಡೆನ್ಸು ಎಂಬ ಯಾಂತ್ರಿಕತೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಏರ್ಪಡುವುದು ಎದುರು-ಬದುರಿನ ಸಂಬಂಧ. ಹೆಚ್ಚೆಂದರೆ ನಮ್ಮ ನಡುವಿನ ಅಂತರವನ್ನು ಪ್ರಯತ್ನಪೂರ್ವಕ ಕಡಿಮೆ ಮಾಡಿಕೊಳ್ಳಬಹುದು. ಆದರದನ್ನು ನಿವಾಳಿಸಿ ಹಾಕಲಿಕ್ಕಾಗದು. ಈ ದೈನಂದಿನ ಆಚೆಗಿನ ಸಂಬಂಧಗಳಲ್ಲಿ ನಡೆವ ಬೆರಕೆಯಲ್ಲಿ ನಮ್ಮೊಟ್ಟಿಗಿರುವ ಮಕ್ಕಳು ಒಂದೊಂದು ‘ವಿಶ್ವವಿದ್ಯಾಲಯ’ ಗಳಂತೆ ತೆರೆದುಕೊಳ್ಳುತ್ತಾರೆ. ಇಡೀ ಸಮಾಜದ ನಡೆಯ ನಾಡಿಮಿಡಿತವನ್ನೇ ಮುಟ್ಟಿಸುತ್ತಾರೆ.
ನಾನು ಕೆಲಸ ಮಾಡುತ್ತಿರುವ ಊರಿನಲ್ಲಿಯ ಇನ್ನೊಂದು ಕಾಲೇಜಿನ ಹುಡುಗಿಯೊಬ್ಬಳು ಅದೆಂಥದೋ ಸಣ್ಣ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಸುದ್ದಿಯ ಜೊತೆಗೆ, ಅವಳ ಮುದ್ದಾದ ಫೋಟೋ ವಾಟ್ಸಪ್‍ಗಳಲ್ಲಿ ಹರಿದಾಡಿದಾಗ, ಸ್ಟಾಫ್ ರೂಮ್‍ನಲ್ಲಿ ದಣಿದು ಕೂತ ಮಧ್ಯಾಹ್ನದ ಬಳಗದಲ್ಲಿ ಒಂಥರಾ ಇರುಸುಮುರುಸು ಕಾಡತೊಡಗಿತ್ತು. ಪುಣ್ಯಕ್ಕೆ, ಯಾರ ತುಟಿಯಂಚಿನಲ್ಲೂ ಹೆಣ್ಣುಹುಡುಗಿಯ ಆತ್ಮಹತ್ಯೆಗುಂಟ ಹಬ್ಬಿಕೊಳ್ಳುವ ಹೊಲಸು ಕಲ್ಪನೆಯ ನುಡಿಯೊಡೆಯಲಿಲ್ಲ. ಅಂಥದ್ದೊಂದು ಬೇಜವಾಬ್ದಾರಿ ನೋಟವೂ, ಗೊಣಗಾಟವೂ ಕಾಣಲಿಲ್ಲ. ನಮ್ಮೆಲ್ಲರ ಆಸಕ್ತಿಗಳು, ಬದುಕಿನ ತಾತ್ವಿಕತೆಗಳು ಬೇರೆ ಬೇರೆಯಾಗಿದ್ದಿರಬಹುದಾದರೂ, ವಿದ್ಯಾರ್ಥಿಗಳ ಕುರಿತ ಮಮತೆಯಲ್ಲಿ ಒಂದುತನವಿತ್ತು. ‘ಏನಾದರೂ ಮಾಡಬೇಕು’, ‘ಯಾಕೋ ಮಕ್ಕಳ ಇತ್ತೀಚಿನ ನಡೆ ತುಂಬ ದಿಕ್ಕೆಡುತ್ತಿದೆ’ ಅಟೋ ಡ್ರೈವರ್ ಹೇಳಿದ್ದ “ಬೇರೆ ಊರಿನ ಹುಡುಗರೊಟ್ಟಿಗೆ ಹುಡುಗೀರು ತಿರಗ್ತಿದಾರೆ. ಅವರು ಬಹುಶಃ ಕಾಲೇಜಿಗೆ ಹೋಗ್ತಿವಿ ಅಂತ ಮನೇಲಿ ಹೇಳಿ ಬಂದಿರ್ತಾರೆ. ನೋಡಿ ಇಲ್ಲಿ, ನಿಮ್ಮ ಕಾಲೇಜಿನ ಯುನಿಫಾರಂನ ಹುಡುಗೀರಲ್ವಾ?” ಎಂದು ತೋರಿದ ಫೋಟೋ ವಿಷಯ ಬಂತು. ಕಾಲೇಜಿಗೆ ತಿರುಗುವ ಸರ್ಕಲ್‍ನಲ್ಲಿರುವ ಹಾಳು ಕಟ್ಟಡದಲ್ಲಿ ಕೂತು ಹುಡುಗರು ಸಿಗರೇಟು ಎಳೀತಾರೆ- ಎಂಬುದು; ಗಾಂಜಾ ಮಾರುವವರು ಕಾಲೇಜು ಕ್ಯಾಂಪಸ್ಸಿನಾಚೆಯ ರೇಲ್ವೆ ಹಳಿಗಳ ಬಳಿ ತಿರುಗಾಡುತ್ತಾರಂತೆ. ನಮ್ಮ ಮಕ್ಕಳಿಗೆಲ್ಲ ಮಾರಲು ಶುರು ಮಾಡಿದರೆ ಮಾಡೋದೇನ್ರೀ? ಪೊಲೀಸರಿಗೆ ಸೂಚನೆ ಕೊಡೋದಾ ಹ್ಯಾಗೆ?; “ಮೇಡಂ ನೀವು ಲೇಡಿಸ್ ವಿಂಗ್‍ನ ಮೀಟಿಂಗ್ ಕರೆಯಿರಪ್ಪಾ. ಸ್ವಲ್ಪ ಹುಡಿಗಿಯರ್ನ ಬಿಗಿಯಿಡ್ರಿ. ಅಂದ್ರ ಏನಾರೂ ಆದೀತು’….. ಹೀಗೆ ಮನಸ್ಸಿಗೆ ಉರಿ ಹತ್ತಿದಂತೆ “ಮಕ್ಕಳು ಮಕ್ಕಳೇ ಅಲ್ವೇನ್ರಿ? ನಮ್ಮ ಮಕ್ಕಳಾದ್ರೇನು, ಇನ್ನೊಬ್ರ ಮಕ್ಕಳಾದ್ರೇನು” ಎಂಬ ತಾತ್ವಿಕ ತಿಳಿವು ಎಳೆಗಾಳಿಯಂತೆ ಸುಳಿಯುತ್ತಿತ್ತು. ಕಡೆಗೆ ನಿರ್ಣಯಕ್ಕೆ ತಲುಪಿದ್ದು – ಮೆಂಟರ್ ವಾರ್ಡ್ ಸಿಸ್ಟಂ ಕಟ್ಟುನಿಟ್ಟಾಗಿ ಜಾರಿಗೆ ತರೋದು. ಕಾಲೇಜಿನ 8 ಉಪನ್ಯಾಸಕರಿಗೆ 400 ವಿದ್ಯಾರ್ಥಿಗಳ ಪಾಲಕತ್ವದ ಹೊಣೆಯನ್ನು ಹಂಚಿಕೆ ಮಾಡಿ ವಹಿಸೋದು. ತುಂಬ ಸಿನ್ಸಿಯರಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೊಂದಿಗೂ ಆಪ್ತವಾಗಿ ಕೌನ್ಸಿಲಿಂಗ್ ನಡೆಸೋದು. ಹೀಗೆ… ತುಂಬ ಪ್ರಾಮಾಣಿಕವಾಗಿಯೇ ಪ್ರಯತ್ನ ನಡೆಯಿತು. ತಯಾರಿಯಾಯಿತು. ಕೇಂದ್ರ ಸರ್ಕಾರ ಯು.ಜಿ.ಸಿ.ಯನ್ನು ಇಲ್ಲವಾಗಿಸಿ, ಅದರ ಜಾಗೆಯಲ್ಲಿ ‘ಉನ್ನತ ಶಿಕ್ಷಣ ಮತ್ತು ಸಂಶೋಧನೆಯ ರಾಷ್ಟ್ರೀಯ ಆಯೋಗ’ವನ್ನು ಸ್ಥಾಪಿಸಲು ಯೋಜಿಸಿದೆ. ಆದರೆ ಯು.ಜಿ.ಸಿ. ಕಾಲೇಜುಗಳಿಗೆ ನಿರ್ದೇಶಿಸಿದ ಸೂತ್ರಗಳಲ್ಲಿ ಮೆಂಟರ್ ವಾರ್ಡ್ ಎಂಬ ಸುಂದರ ಪರಿಕಲ್ಪನೆಯೊಂದಿದೆ.
ನಮ್ಮ ದೇಶದಲ್ಲಿ ಉನ್ನತ ಶಿಕ್ಷಣವು ವೃತ್ತಿಪರ ಕೋರ್ಸುಗಳು ಮತ್ತು ಸಾಂಪ್ರದಾಯಿಕ ಕೋರ್ಸುಗಳೆಂದು ಹೋಳಾಗಿ, ವೃತ್ತಿಪರ ಕೋರ್ಸುಗಳು ಶ್ರೀಮಂತರಿಗೂ ಸಾಂಪ್ರದಾಯಿಕ ಕೋರ್ಸುಗಳು ಬಡ-ಮಧ್ಯಮ ವರ್ಗದವರಿಗೂ ಎಂದು ಹಂಚಿಕೆಯಾಗಿ ಹೋಗಿದೆ. ಎಲ್ಲ ಮಿತಿಗಳಲ್ಲೂ ಸಮಾಜದ ಬಡ ದಲಿತ, ಹಿಂದುಳಿದ, ಆದಿವಾಸಿ ಸಮುದಾಯಗಳ ಮಕ್ಕಳು ಮತ್ತು ಹೆಣ್ಣುಮಕ್ಕಳು ಪದವಿ ವ್ಯಾಸಂಗಕ್ಕೆ ತೊಡಗುವುದು ಸಾಧ್ಯವಾಗಿದೆ. ಆದರೆ, ಬಂಡವಾಳಶಾಹಿ ಆದ್ಯತೆಗಳಿಗೆ ತಗ್ಗಿದ ಸರ್ಕಾರ ಜಗತ್ತಿನ ಬಂಡವಾಳವಾದಿಗಳಿಗೆ ವಿಶ್ವವಿದ್ಯಾಲಯಗಳನ್ನು ಅಡವಿಡಲು ತೊಡಗಿದೆ. ಬಂಡವಾಳವಾದಿಗಳಿಗೆ ಅಗತ್ಯವಾದ ವಾಣಿಜ್ಯ ಮೌಲ್ಯಗಳ ಬೆಲೆಯಲ್ಲಿಯೇ ಶಿಕ್ಷಣವನ್ನು ನಿಗದಿಗೊಳಿಸಿಕೊಡುವ ಪ್ರಯತ್ನಗಳು ನಡೆದಿವೆ. ಸಾಂಪ್ರದಾಯಿಕ ಕೋರ್ಸುಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ತೆರೆಯದೆ, ವಾಣಿಜ್ಯೀಕರಣದ ಸಮಾಜದಲ್ಲಿ ‘ಉನ್ನತ ಶಿಕ್ಷಣದ ಫಲಿತಗಳು ಕಳಪೆ’ ಎಂಬ ಭ್ರಮೆಯನ್ನು ನಂಬಿಸಲಾಗಿದೆ. ಉನ್ನತ ಶಿಕ್ಷಣದ ಸುಧಾರಣೆಯ ಯೋಜನೆಗಳನ್ನು ಮರಮರಳಿ ಬಂಡವಾಳಶಾಹಿಗಳ ಸುಪರ್ದಿಗೆ ಒಪ್ಪಿಸಲಾಗಿದೆ. 2000 ದಲ್ಲಿಯ ಅಂಬಾನಿ-ಬಿರ್ಲಾ ಸಮಿತಿಯ ವರದಿ, 2006ರ ಸ್ಯಾಮ್ ಪಿತ್ರೋಡಾ ನೇತೃತ್ವದ ರಾಷ್ಟ್ರೀಯ ಜ್ಞಾನ ಆಯೋಗದ ವರದಿ, 2008ರ ಪ್ರೊ. ಯಶ್‍ಪಾಲ್‍ರ ಉನ್ನತ ಶಿಕ್ಷಣದ ಪುನರ್‍ನವೀಕರಣ ವರದಿ ಮೊದಲಾದವುಗಳನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು. ಶಿಕ್ಷಣದ ವಲಯಗಳಲ್ಲಿ ಖಾಸಗಿ ಬಂಡವಾಳ ಹೂಡಿಕೆಯನ್ನು ಉತ್ತೇಜಿಸುವ ಬೆಳವಣಿಗೆಗಳ ಮಧ್ಯದಲ್ಲಿಯೂ ಸರ್ಕಾರ, ಹೆಣ್ಣುಮಕ್ಕಳ ಬಡವರ, ದಲಿತರ, ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಕಡಿಮೆ ಫೀಸು, ಸ್ಕಾಲರ್‍ಶಿಪ್‍ಗಳ ಕೊಡುಗೆ ನೀಡುತ್ತ ಸಾಮಾಜಿಕ ನ್ಯಾಯವನ್ನು ಜೀವಂತವಾಗಿಡಲು ಯತ್ನಿಸುತ್ತಿದೆ. ಹಾಗಾಗಿ ಸರ್ಕಾರಿ ಕಾಲೇಜುಗಳ ಸಾಂಪ್ರದಾಯಿಕ ಕೋರ್ಸುಗಳ ವಿದ್ಯಾರ್ಥಿಗಳೆಂದರೆ, ಕೆಳಸಮುದಾಯದ ಪ್ರತಿನಿಧಿಗಳೇ ಆಗಿರುತ್ತಾರೆ. ಅವರು ಸಾಮಾಜಿಕವಾಗಿ ಸಂಘರ್ಷದ ಪದರುಗಳಲ್ಲಿ ನಲುಗುತ್ತಿರುತ್ತಾರೆ. ಇತ್ತೀಚೆಗೆ ನಮ್ಮ ದೇಶದಲ್ಲಿ ಪ್ರತಿ 1 ಗಂಟೆಗೆ 1 ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವರದಿಯಾಗಿದೆ. ಈ ವರದಿಯನ್ನು ಅಮತ್ರ್ಯಸೇನ್ ಅಧ್ಯಯನ ಕ್ರಮವಾದ ಒಳವಿಭಜನೆಗೆ ಅಳವಡಿಸಿದರೆ, ಬಹು ದೊಡ್ಡ ಪ್ರಮಾಣ ಈ ತಳವರ್ಗಕ್ಕೆ ಮತ್ತು ಹೆಣ್ಣುಮಕ್ಖಳಿಗೆ ಮೀಸಲಾಗಿರುತ್ತದೆಂಬುದು ನಿಸ್ಸಂಶಯ.
ಇಂತಹ ಹಲವು ಕಾರಣಗಳು, ವಿದ್ಯಾರ್ಥಿಗಳೊಂದಿಗಿನ ಆಪ್ತ ಸಂವಾದಕ್ಕೆ ನಮ್ಮನ್ನು ಸಜ್ಜುಗೊಳಿಸಿತ್ತು. ಯುನಿಫಾರಂನಲ್ಲಿ ನೀಟಾಗಿ ಬರುವ ಮಕ್ಕಳಲ್ಲಿ 40% ರಷ್ಟು ಪಾಲಕರು ಕೂಲಿ ಕಾರ್ಮಿಕರು, ಸ್ವಂತ ಸೂರಿಲ್ಲದವರು 50% ರಷ್ಟು ತಂದೆ ಇಲ್ಲದ, ಇದ್ದರೂ ಈ ಕುಟುಂಬದಿಂದ ದೂರಾದ ತಾಯಿಯೆಂಬ ಏಕಪಾಲಕಳ ಹೆಗಲು ನಂಬಿ ಬೆಳೆದವರು 25% ರಷ್ಟು, ಇಷ್ಟು ಆರ್ಥಿಕ-ಸಾಮಾಜಿಕ ಸಮಸ್ಯೆ ಹೊತ್ತು, ತಾನು ಕಲಿತು ಉದ್ಯೋಗ ಹಿಡಿದು ಈ ಕಷ್ಟದಿಂದ ಪಾರಾಗಬೇಕು ಎಂದು ತಿಳಿದೂ; ಟಿ.ವಿ., ಮೊಬೈಲ್, ವಾಟ್ಸಪ್, ಆಲಸ್ಯ ಎಂಬ ರೋಗಗಳಿಗೆ ಬಲಿಯಾಗಿ ದಿನ ತಳ್ಳುತ್ತಿರುವವರು 70% ಕ್ಕೂ ಹೆಚ್ಚು. ಒಬ್ಬೊಬ್ಬ ವಿದ್ಯಾರ್ಥಿಯನ್ನು ಹತ್ತಿರಕ್ಕೆ ಕೂಡಿಸಿಕೊಂಡು ತುಂಬ ಆಪ್ತವಾಗಿ ‘ಹೇಳು, ನೀನು ಇದುವರೆಗೂ ಮಾಡಿದ, ಮಾಡ್ತಿರುವ ತಪ್ಪೇನು?’ ಎಂದು ಕೇಳಿದಾಗ, ಆ ಎಳೆಯರು ತಮ್ಮಿಂದ ಹೊರಬಂದು ತಮ್ಮನ್ನು ಪರೀಕ್ಷಿಸಿಕೊಂಡು ಉತ್ತರಿಸುವ ಕ್ಷಣವಿದೆಯಲ್ಲ ಅದು ಜೀವಮಾನದಲ್ಲಿಯೇ ತುಂಬ ಪವಿತ್ರ ಘಳಿಗೆ ಅನ್ನಿಸಿಬಿಟ್ಟಿತ್ತು. ಅವರು ಹೇಳುತ್ತಿದ್ದರು. ನಾನು ದಾಖಲಿಸಿಕೊಳ್ಳುತ್ತಿದ್ದೆ. ‘ಹೇಳು, ಈ ತಪ್ಪು ತಿದ್ದಿಕೊಳ್ಳಲು ಎಷ್ಟು ಟೈಮ್ ತಗೊಳ್ಳುವಾ?’ ಕೆಲವರು ಒಂದು ವಾರ, ಹದಿನೈದು ದಿನ ಹೀಗೆ ಗಡುವು ಕೊಟ್ಟರು. ಒಂದು ಹನಿ ಮಮತೆಗೆ ಕರಗಿ ಬೇರೆಯೇ ಆಗಿಬಿಡುವ ಮಕ್ಕಳನ್ನು ನೋಡಿದಾಗೆಲ್ಲ ನನ್ನ ವೃತ್ತಿಯ ಘನತೆಗೆ ನಾನೇ ವಂದಿಸುವಂತಾಗುತ್ತಿತ್ತು. ಕೈಗೆ, ಕುತ್ತಿಗೆಗೆ ತರಹೇವಾರಿ ದಾರ, ತಾಯತಗಳ 6 ಫೂಟು ಎತ್ತರದ ಹುಡುಗ, ಯುನಿಫಾರಂ ಮೇಲೆ ಚಳಿ ಕಮ್ಮಿಯಿದ್ದಾಗಲೂ ಸ್ವೆಟರು, ಮೊಣಕಾಲಿನವರೆಗೆ ಮಡಚಿದ ಪ್ಯಾಂಟು, ಮೊಣಕೈವರೆಗೆ ಮಡಚಿದ ಶರ್ಟು, ತಲೆಗೆ ತರಹೇವಾರಿ ಬಣ್ಣಗಳ ಉಸಾಬರಿಯ ಕಷ್ಟಕ್ಕೆ ಕಾರಣ ಅವರೊಳಗಿನ ಪುಕ್ಕಲುತನ, ತಾವು ಬುದ್ಧಿವಂತರಲ್ಲದ, ಯಾವ ವಿಶೇಷ ಸಾಧನೆಯೂ ಸಾಧ್ಯವಾಗದ ವಿದ್ಯಾರ್ಥಿಗಳಾದ್ದರಿಂದ ಎಲ್ಲಿ ತಮ್ಮನ್ನು ಎಲ್ಲರೂ ನಿರ್ಲಕ್ಷಿಸಿಬಿಡುತ್ತಾರೋ ಎಂಬ ದಿಗಿಲಿನ ಪರಿಣಾಮಗಳವು. ಎಸ್.ಎಸ್.ಎಲ್.ಸಿ. ಯಲ್ಲಿ 89% ಅಂಕ ತೆಗೆದ ವಿದ್ಯಾರ್ಥಿನಿ ಪಿ.ಯು.ಸಿ.ಗೆ 60% ಮಾಡಿದ್ದರ ಕಾರಣಗಳಲ್ಲೊಂದು, ‘ನಿನ್ನ ಕನ್ನಡಿ ಮುಂದೆ ನಿಲ್ಲುವ ಟೈಮ್‍ನ ಹೆಚ್ಚಳವಾಗಿರಬಹುದೇ’ ಎಂದಾಗ ಅವಳೂ ಪಕಪಕ ನಕ್ಕಳಾದರೂ ಹೌದೆಂದು ಸಮ್ಮತಿಸಿಯೂ ಬಿಟ್ಟಳು. ತಮ್ಮೊಳಗಿನ ಗಂಡು-ಹೆಣ್ಣು ಎಂಬ ಹಂಗಿಗೆ ಈಡಾಗಿ, ತಮ್ಮ ಬಾಲ್ಯದ ಕ್ರೀಡೆಯ, ಹಾಡಿನ, ಕಲಾಭಿವ್ಯಕ್ತಿಯ ಶ್ರಮಗಳನ್ನು ಕೈಬಿಟ್ಟಿದ್ದಾರೆ. ಯಾವ ಲೆಕ್ಕಕ್ಕೂ ಮಿಗುವ ಪ್ರತಿಭೆಯ ಕಾಣೆಯಿದು. ಕಡೆಗೂ, ಮನಸ್ಸು ಮಾಡಿದರೆ ನಮ್ಮ ಬಾಳಿನ ದಿಶೆಯನ್ನು ನಾವೇ ಬದಲಿಸಬಲ್ಲೆವು ಎಂಬ ತಿಳಿವು ತರುವ ಪ್ರಯತ್ನ ಮಾಡಿಯಾಯಿತು. ಈ ಪ್ರಯತ್ನ ಯಾರೋ ಬಡ ಕೂಲಿ ಅವ್ವ-ಅಪ್ಪಂದಿರ ಹಣೆಯ ಗೆರೆ ಅಳಿಸಿ, ಸಣ್ಣ ನಗು ಅರಳಿಸಲಿ ಎನಿಸಿತು. ಗಿಡಕ್ಕೆ ನೀರುಣಿಸುತ್ತ, ಮಾಲಿಯ ದೇಹ-ಮನಸ್ಸುಗಳು ಮುದಗೊಳ್ಳುವಂತೆ – ನಮ್ಮಗಳ ಮನಸ್ಸಿಗೂ ಎಂಥದೋ ಮುದ, ಶುದ್ಧ ಗಾಳಿಯ ಸ್ಪರ್ಶದ ಗೆಲುವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...