Homeನ್ಯಾಯ ಪಥಅರೆಕ್ರಾಂತಿಕಾರಿ ಪೂಜಾರಿ ಈಗೇನು ಮಾಡ್ತವ್ರೆ?

ಅರೆಕ್ರಾಂತಿಕಾರಿ ಪೂಜಾರಿ ಈಗೇನು ಮಾಡ್ತವ್ರೆ?

- Advertisement -
- Advertisement -

ಶುದ್ಧೋಧನ |
ಕಾಂಗ್ರೆಸಿನ ಹಳೆ ತಲೆಯಾಳು ಬಿ.ಜನಾರ್ಧನ ಪೂಜಾರಿ ಎಂದರೇನೇ ಏನೋ ಒಂಥರಾ ವಿಭಿನ್ನ-ವಿಶೇಷ-ವಿಚಿತ್ರ! ಮಾತು ನೇರಾನೇರ; ನಡೆ ನಿಷ್ಠೂರ; ಕಠೋರ ಪಕ್ಷ ನಿಷ್ಠ; ಬಡವರ ಬಗ್ಗೆ ಬಗ್ಗದ ಬದ್ಧತೆ. ಇದು ಬ್ರ್ಯಾಂಡ್ ಪೂಜಾರಿ ಎಂಬ ಕಾಲವೊಂದಿತ್ತು. ಮಂಗಳೂರು ಪಾರ್ಲಿಮೆಂಟ್ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆದ್ದು, ಅಷ್ಟೇ ಬಾರಿ ಸೋತಿರುವ ಪುಜಾರಿ ದೇಶದಾದ್ಯಂತ ಸಾಲ ಮೇಳದ ಪೂಜಾರಿ ಎಂತಲೇ ಹೆಸರುವಾಸಿ. ಕಾಂಗ್ರೆಸ್‍ನ ಅಂದಿನ ಅಧಿನಾಯಕರಾದ ಇಂದಿರಾ, ರಾಜೀವ್, ನರಸಿಂಹರಾವ್‍ರಂಥವರಿಗೆ ನಿಯತ್ತಿನಿಂದ ಕೆಲಸ ಮಾಡಿ ರಿಸ್ಕ್ ಎದುರಿಸಿದ್ದರು. ಎರಡೆರಡು ಬಾರಿ ಕೆಪಿಸಿಸಿ ಅಧ್ಯಕ್ಷರಾಗಿದ್ದ ಪೂಜಾರಿ ಬೆಳಗಿನ ಜಾವ 2-3 ಗಂಟೆ ತನಕ ಪಾರ್ಟಿ ಆಫೀಸಿನಲ್ಲಿ ಕುಂತು ದುಡಿದು ಸುದ್ದಿಯಾಗಿದ್ದರು.
ಇಂಥ ಜನಪರ ಜನಾರ್ಧನ ಪೂಜಾರಿಗೀಗ ಬರೋಬ್ಬರಿ ಎಂಬತ್ತೊಂದರ ಹರಯ!! ಹಾಗಾಗಿಯೇ ಇರಬೇಕು; ನೀತಿ-ನಿಲುವಿನಲ್ಲೂ ಎಡಬಿಡಂಗಿತನ ಶುರುವಾಗಿದೆ. ಅವರ ಮಾತು-ಕತೆ ನೋಡಿದರೆ ಹಿಂದಿನ ಪೂಜಾರಿ ಅದೆಲ್ಲೋ ಕಳೆದು ಹೋಗಿದ್ದಾರೆಂದು ಅನ್ನಿಸದೇ ಇರದು. ಇವರು ರಾಜಕಾರಣಿಯೇ, ಸಮಾಜ ಸುಧಾರಕರೋ, ಗುಡಿ ಕಟ್ಟುವ ಧರ್ಮಾತ್ಮನೋ ಎಂಬ ಗೊಂದಲ. ಸ್ವಪಕ್ಷ ಕಾಂಗ್ರೆಸ್‍ನ್ನು ನಡುಬೀದಿಯಲ್ಲಿ ನಿಂತು ಹೀಯಾಳಿಸಿ ಡ್ಯಾಮೇಜು ಮಾಡುವ ಪೂಜಾರಿ ಆರೆಸೆಸ್‍ನ ಕಲ್ಲಡ್ಕ ಭಟ್ಟನ ಕಂಡಾಗೆಲ್ಲಾ ಅಲ್ಲೇ ಮುದ್ದಾಡುತ್ತಿದ್ದಾರೆ. ಪೂಜಾರಿಯ ಪೂರ್ವಾಶ್ರಮ ಸಂಘಪರಿವಾರ ಕಳೆದ ಮೂರ್ನಾಲ್ಕು ವರ್ಷದಿಂದ ಆತನ ಬಾಯಿಂದ ಹೊರಬರುತ್ತಿರುವ ಅಣಿ ಮುತ್ತು, ಮಾಡುವ ಭಾಷಣ, ಪ್ರದರ್ಶಿಸುವ ವಿಭೀಷಣ, ಕೊಡುವ ಹೇಳಿಕೆ, ವೇದಿಕೆಯಲ್ಲಿ ಹಳೆ ಶಿಷ್ಯ ರಮಾನಾಥ ರೈ ತನಗೆ ಅವಾಚ್ಯ ಶಬ್ದದಿಂದ ಬೈದನೆಂದು ಗೊಳೋ ಎಂದು ಅಳುವುದೆಲ್ಲ ಬಿಜೆಪಿ ಪರಿವಾರಕ್ಕೆ ಭರ್ತಿ ಅನುಕೂಲ ಮಾಡಿಕೊಡುತ್ತಿದೆ.
ಪೂಜಾರಿಯಂಥ ಸೋಕಾಲ್ಡ್ ಸೆಕ್ಯುಲರ್ ಹಿರಿಯ ಕಾಂಗ್ರೆಸಿಗನೇ ಸಿದ್ದು ಸಿಎಂ ಆಗಿದ್ದಾಗ ಟೀಕಿಸಿದ್ದು ಒಂದೆರಡು ಬಾರಿಯಲ್ಲ. ಬಿಜೆಪಿಯ ವೋಟ್‍ಬ್ಯಾಂಕ್ ಕಾರ್ಯಸೂಚಿಯಾದ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವುದಕ್ಕೆ ಪೂಜಾರಿ ಬೆಂಬಲವಾಗಿ ನಿಲ್ಲುತ್ತಿದ್ದಾರೆ. ವಿಚಾರವಾದಿ ಕೆ.ಎಸ್.ಭಗವಾನ್‍ರಂಥವರ ಮೇಲೆ ಮುರಕೊಂಡು ಬೀಳುವ ಪೂಜಾರಿ ಮರುಕ್ಷಣವೇ ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಹೆಂಗಸರು ಹೋಗಿ ಬರಲು ಕೇರಳ ಸಿಎಂ ಪಿಣರಾಯಿ ವಿಜಯನ್ ಕಟ್ಟುನಿಟ್ಟಿನ ವ್ಯವಸ್ಥೆ ಕಲ್ಪಿಸಿ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಅಸಂಬದ್ಧವಾಡುತ್ತಾರೆ. ಒಮ್ಮೆ ಮನುವಾದಿಯಂತೆ ಇನ್ನೊಮ್ಮೆ ಮನುಷ್ಯತ್ವವಾದಿಯಂತೆ ಪೋಸು ಕೊಡುತ್ತಿರೋದು ಕಂಡು ಪೂಜಾರಿಯವರಿಗೆ ವಯೋಸಹಜ ಅರಳುಮರಳು ಶುರುವಾಗಿದೆಯಾ ಅಂತ ಜನ ಮಾತಾಡಿಕೊಳ್ಳುತ್ತಿದ್ದಾರೆ. ತನ್ನ “ಸಾಲ ಮೇಳದ ಸಂಗ್ರಾಮ” ಆತ್ಮಕತೆಯಲ್ಲಿ ಇಂದಿರಾಗಾಂಧಿಗೆ “ಬಂ” ಹೊಡೆಯಲು ಹೋಗಿದ್ದನ್ನು ತಾನು ಕಂಡಿದ್ದೇನೆಂದು ಜನ ನಂಬಲು ಅಸಾಧ್ಯವಾದದ್ದನ್ನೆಲ್ಲ ಬರೆದುಕೊಂಡಿದ್ದಾರೆ. ಇದೆಲ್ಲವನ್ನು ನೋಡುತ್ತಿದ್ದರೆ ಮುತ್ಸದ್ಧಿ ನಾಯಕ ಎನಿಸಿದ್ದ ಪೂಜಾರಿಯವರ ಮಾತಿಗಷ್ಟೇ ಅಲ್ಲ, ಮನಸ್ಸು-ಮೆದುಳಿಗೂ ತೂಕ ತಪ್ಪಿಹೋಗಿದೆ ಎನಿಸುತ್ತದೆ.
ತಮ್ಮ ಈ ಹುಚ್ಚಾಟಗಳಿಂದ ಪೂಜಾರಿ ಇತ್ತೀಚಿನ ವರ್ಷದಲ್ಲಿ ಚೆಡ್ಡಿ, ಭಜರಂಗಿಗಳ ಡಾರ್ಲಿಂಗ್ ಆಗಿಹೋಗಿದ್ದಾರೆ. ಮಂಗಳೂರಿನ ಕುದ್ರೋಳಿಯಲ್ಲಿ ಗೋಕರ್ಣನಾಥ ದೇವಾಲಯ ಕಟ್ಟಿರುವ ಪೂಜಾರಿ ಪ್ರತಿವರ್ಷ ನವರಾತ್ರಿಯಲ್ಲಿ ಭರ್ಜರಿ ದಸರಾ ಉತ್ಸವ ಮಾಡುವುದಕ್ಕಷ್ಟೇ ಸೀಮಿತವಾಗಿದ್ದಾರೆ. ಒಮ್ಮೆ ಗಂಡನ ಕಳಕೊಂಡ ಹೆಂಗಸರಿಗೆ ತನ್ನ ದೇಗುಲಕ್ಕೆ ಕರೆದು ಕುಂಕುಮ-ಹೂವು ಕೊಡಿಸಿದ್ದ, ಹೆಂಗಸರಿಂದ ದೇವಸ್ಥಾನದ ಪೂಜೆ ಮಾಡಿಸಿದ್ದ ಕ್ರಾಂತಿಕಾರಿ ಪೂಜಾರಿ ಆನಂತರ ಭ್ರಾಂತಿಗೀಡಾಗಿದ್ದು ವಿಚಿತ್ರವಾದರೂ ಸತ್ಯ. ಕರಾವಳಿಯಲ್ಲಿ ಈ ದೊಡ್ಡ ನಾಯಕ ನೆಲೆ-ಬೆಲೆ ಕಳಕೊಂಡು ಅದ್ಯಾವುದೋ ಕಾಲವಾಗಿ ಹೋಗಿದೆ. ಎಸ್ಸೆಸ್ಸೆಲ್ಸಿಯೂ ಪಾಸಾಗದ, ಗ್ರಾಮ ಪಂಚಾಯ್ತಿ ಮೆಂಬರಿಕೆಗೂ ಲಾಯಕ್ಕಿಲ್ಲದ ನಳೀನ್‍ಕುಮಾರ್ ಕುಟೀಲ್ ಎಂಬ ಬೆಂಕಿ ಬ್ರ್ಯಾಂಡಿನ ಚೆಡ್ಡಿ ಎದುರು ಪೂಜಾರಿ ಒಂದೂವರೆ ಲಕ್ಷ ಮತದಂತರದಿಂದ ಲಗಾಟಿ ಹೊಡೆಯುತ್ತಾರೆಂದರೆ ಆತ ಅದ್ಯಾವ ಪರಿ ಕಾಂಗೆಸ್‍ಗೆ ಹಾನಿ ಮಾಡಿರಬಹುದೆಂದು ಊಹಿಸಿ!
ಮಾಜಿ ಮಂತ್ರಿ ರಮಾನಾಥ ರೈ, ವಿನಯಕುಮಾರ್ ಸೊರಕೆ, ಹಾಲಿ ಮಂತ್ರಿ ಯು.ಟಿ.ಖಾದರ್, ಎಮ್ಮೆಲ್ಸಿ ಕಂ ಡಿಸಿಸಿ ಅಧ್ಯಕ್ಷ ಹರೀಶ್ ಪೂಜಾರಿ, ಕಳ್ಳಿಗೆ ತಾರಾನಾಥ ಶೆಟ್ಟಿ….. ವಗೈರೆಗಳು ಪೂಜಾರಿ ಗರಡಿಯಲ್ಲಿ ಪಳಗಿದ ಪರಾಕ್ರಮಿಗಳು. ಆದರೆ ಇವತ್ತು ಇವರ್ಯಾರೂ ಗುರುವಿನ ಹತ್ತಿರವೂ ಸುಳಿಯುತ್ತಿಲ್ಲ. ದೂರದಿಂದ ಕಂಡರೆ ತಲೆ ತಪ್ಪಿಸಿಕೊಂಡುಬಿಡುತ್ತಾರೆ.
ಕಾಂಗ್ರೆಸ್ ಹಣಿಯಲು ಬಿಜೆಪಿಗಳ ಪೂಜಾರಿಯನ್ನು ಅಸ್ತ್ರ ಮಾಡಿಕೊಂಡು ಬೇಕಷ್ಟು ಫಾಯ್ದೆ ಎತ್ತಿದರು; ಯಾವಾಗ ಸಾಲಮೇಳದ ಸಂಗ್ರಾಮ ಹೂರಣ ಹೊರಬಂತೋ ಆಗ ಕೈ ಕೊಟ್ಟು ಓಡಿದರು.
ಆ ಆತ್ಮಕತೆಯಲ್ಲಿ ಪೂಜಾರಿ ಆರೆಸೆಸ್‍ನ ಅಪಪ್ರಚಾರದ ಹಸೀ ಸುಳ್ಳುಗಳು ತನ್ನನ್ನು ಇಲೆಕ್ಷನ್‍ನಲ್ಲಿ ಸೋಲಿಸಿತೆಂದು ಬರೆದದ್ದು ಚಡ್ಡಿ ನವಾಬರ ಕಣ್ಣು ಕೆಂಪು ಮಾಡಿಸಿತ್ತು. ಆದರೆ ಇವತ್ತು ಕರಾವಳಿಯಲ್ಲಿ ಕಾಂಗ್ರೆಸ್ ಆವಸಾನ ಕಂಡಿದ್ದರೆ ಅದು ಕೋಮು ಪಿತೂರಿಯ ಹಿಕಮತ್ತಿಗಿಂತ ಹೆಚ್ಚಾಗಿ ಜನಾರ್ಧನ ಪೂಜಾರಿ, ವೀರಪ್ಪ ಮೋಯ್ಲಿ ಮತ್ತು ಆಸ್ಕರ್ ಫರ್ನಾಂಡಿಸ್ ಎಂಬ ಕಾಂಗ್ರೆಸ್ ನಾಯಕತ್ರಯರ ಒಣ ಪ್ರತಿಷ್ಠೆಯ ಕಿತ್ತಾಟದಿಂದ ಎಂಬುದು ಮಾತ್ರ ಸತ್ಯ.
ಈ ಸೆಟ್‍ದೋಸೆ ಧುರೀಣರಲ್ಲಿ ಹೆಚ್ಚು ಜನಪ್ರಿಯತೆಯಿದ್ದಿದ್ದು ಜನಾರ್ಧನ ಪೂಜಾರಿಗೆ ಆಗಿತ್ತು. ಆತ ಧ್ವನಿಯಿಲ್ಲದವರೊಂದಿಗೆ ಸಲೀಸಾಗಿ ಬೆರೆಯುತ್ತ ಒಣ ಮೀನು ತಿಂದು ಕೊಚ್ಚಿಲಕ್ಕಿ ಗಂಜಿ ಉಣ್ಣುವ ಸರಳ ಮನುಷ್ಯನಾಗಿದ್ದರು. ಈ ಪೂಜಾರಿಗೆ ರಾಜಕಾರಣಿ ದೀಕ್ಷೆ ಕೊಟ್ಟಿದ್ದು ಮಾಜಿ ಸಿಎಂ ವೀರಪ್ಪ ಮೊಯ್ಲಿ. ಅಂದು ಮಂಗಳೂರು ಸಂಸದನಾಗಿದ್ದ ಕೆ.ಕೆ.ಶೆಟ್ಟಿಗೂ ಮೊಯ್ಲಿಗೂ ಆಗಿಬರುತ್ತಿರಲಿಲ್ಲ. ಹೀಗಾಗಿ ಜಿಲ್ಲೆಯ ಬಹುಸಂಖ್ಯಾತ ಜಾತಿಯ(ಬಿಲ್ಲವ) ಪೂಜಾರಿಯನ್ನು ಎಂಪಿ ಕ್ಯಾಂಡಿಡೇಟು ಮಾಡಲು ಮೊಯ್ಲಿ ಯಶಸ್ವಿ ಮಸಲತ್ತು ಮಾಡಿದರು. ಆ ಬಳಿಕ ದಿಲ್ಲಿ ದರ್ಬಾರಿನಂತೆ ಪಗಡೆ ಉರುಳಿಸಿ ಚಂದ ನೋಡಿದರು. ನಿತ್ಯ ತ್ರಿಕೋನ ಜಗಳ-ಕದನ ನಡೆಯಿತು. ಮೊಯ್ಲಿ ಸಿಎಂ ಆದಾಗ ಉಪಾಯವಾಗಿ ಪೂಜಾರಿ ಬಾಲ ಕಟ್ ಮಾಡಿದರು. ಅತ್ತ ಪೂಜಾರಿ ಲೋಕಸಭೆ ಇಲೆಕ್ಷನ್‍ಗಳಲ್ಲಿ ಸೋಲಲು, ಇತ್ತ ಮೊಯ್ಲಿ ಒಮ್ಮೆ ಚಿಕ್ಕಮಗಳೂರಿನಿಂದ ಇನ್ನೊಮ್ಮೆ ಮಂಗಳೂರಿಂದ ಸೋಲಲು ಇವರಿಬ್ಬರ ಕಾಲೆಳೆದಾಟಗಳೇ ಕಾರಣ. ಈಗ ಅದೇ ಪೂಜಾರಿ ತಾನೇ ಮುಂಬರುವ ಎಂಪಿ ಇಲೆಕ್ಷನ್‍ನಲ್ಲಿ ಕಾಂಗ್ರೆಸ್ ಕ್ಯಾಂಡಿಟೇಟ್ ಅಂತಿದ್ದಾರೆ.
ಆದರೆ ಟಿಕೆಟ್ ತರುವ ಅಥವಾ ಅಖಾಡಕ್ಕೆ ಇಳಿಯುವ ಉತ್ಸಾಹ-ಚೈತನ್ಯ ಈಚೆಗಷ್ಟೇ ಆಸ್ಪತ್ರೆಯಲ್ಲಿ ದಾಖಲಾಗಿ ಹೊರಬಂದಿರುವ ವಯೋವೃದ್ಧ ಪೂಜಾರಿಗಿಲ್ಲ. ಪಾರ್ಟಿಯವರನ್ನೇ ಬಾಯಿಗೆ ಬಂದಂತೆ ಟೀಕಿಸಿದ್ದ ಪೂಜಾರಿಗೆ ಹೈಕಮಾಂಡ್ ಮತ್ತೆ ಛಾನ್ಸ್ ಕೊಡುವುದೂ ಕಷ್ಟವೇ. ಹಾಗಿದ್ದರೆ ಪೂಜಾರಿ ತಾನು ದಿಲ್ಲಿಯಲ್ಲಿ ಪ್ರಯತ್ನ ಮಾಡಿ ಟಿಕೆಟ್ ತರುತ್ತೇನೆಂದು ಹೇಳಿದ್ದಾದರೂ ಯಾಕೆ? ಉತ್ತರ ತುಂಬ ಸರಳ. ಕಾಂಗ್ರೆಸ್‍ನಿಂದ ಸ್ಪರ್ಧಿಸುವ ತಯಾರಿಯಲ್ಲಿ ತೊಡಗಿರುವ ಮೊಯ್ಲಿ ಬಣದ ರಮಾನಾಥ ರೈಗೆ ಟಿಕೆಟ್ ತಪ್ಪಿಸುವ ಹುನ್ನಾರವಷ್ಟೇ. ಪೂಜಾರಿ ಸ್ವಜಾತಿ ಬಂಧು ವಿನಯ್‍ಕುಮಾರ್ ಸೊರಕೆ ಪರವಿದ್ದಾರೆ. ಈ ಸೊರಕೆ ಒಂದು ಬಾರಿ ಉಡುಪಿಯಿಂದ ಎಂಪಿಯಾಗಿದ್ದರು. ಮರು ಬಾರಿ ಮಣ್ಣು ಮುಕ್ಕಿದರು. ಕ್ಷೇತ್ರ ಮರುವಿಂಗಡಣೆ ನಂತರ ಉಡುಪಿಗೆ ಚಿಕ್ಕಮಗಳೂರು ಸೇರಿಸಲಾಗಿದೆ. ಹೊಸ ಕ್ಷೇತ್ರದಲ್ಲಿ ಸೊರಕೆಗೆ ಕಿಮ್ಮತ್ತಿಲ್ಲ. ಹಾಗಾಗಿ ಆತ ತನ್ನ ತಾವರೂರು ಪುತ್ತೂರು ಒಳಗೊಂಡಿರುವ ಮಂಗಳೂರು ಕ್ಷೇತ್ರದ ಮೇಲೆ ಕಣ್ಣು ಹಾಕಿದ್ದಾರೆ. ಅಲ್ಲಿ ಬಿಲ್ಲವರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಂಟರು ಹೆಚ್ಚಿದ್ದಾರೆ. ಒಳಗೊಳಗೇ ರಾಜಿಯಾಗಿರುವ ರೈ-ಸೊರಕೆ ಕ್ಷೇತ್ರ ಅದಲು-ಬದಲು ಮಾಡಿಕೊಳ್ಳುವ ಪ್ಲಾನ್ ಹಾಕಿದ್ದಾರೆ. ಬಿಲ್ಲವರ ನಾಯಕಾಗ್ರೇಸ ಪೂಜಾರಿಯನ್ನು ಎದುರು ಹಾಕಿಕೊಂಡಿರುವ ರೈಗೆ ಆ ಜಾತಿಯ ಮತ ಬೀಳೋದು ಅನುಮಾನ. ಮಂತ್ರಿಯಾಗಿದ್ದಾಗ ಮುಳ್ಳಾಟ ಮಾಡುತ್ತಿದ್ದ ರೈ ಬಗ್ಗೆ ಸ್ಥಳೀಯ ಕಾಂಗ್ರೆಸಿಗರಿಗೂ ಬೇಸರವಿದೆ.
ಇದೆಲ್ಲ ಲೆಕ್ಕಚಾರ ತೆಗೆದಿರುವ ರೈ ನಿಧಾನವಾಗಿ ಉಡುಪಿಯತ್ತ ವಲಸೆ ಆರಂಭಿಸಿದ್ದಾರೆ. ಸೊರಕೆಗೋ ಉಡುಪಿಗಿಂತ ಮಂಗಳೂರು ಸುರಕ್ಷಿತ ನಿಜ. ಆದರೆ ಸಂಘ ಪರಿವಾರದ ಕೋಮು ಕೆನ್ನೀರಿನಿಂದ ತಲೆ ತೊಳೆಸಿಕೊಂಡಿರುವ ಬಿಲ್ಲವರ ಸೆಳೆಯುವುದು ಸೊರಕೆಗೆ ಅಷ್ಟು ಸುಲಭವಿಲ್ಲ ಎಂದು ಕಾಂಗ್ರೆಸಿಗರೇ ವಿಶ್ಲೇಷಿಸುತ್ತಿದ್ದಾರೆ. ಎರಡು ದಶಕಗಳಿಂದ ಬಿಜೆಪಿ ವಶದಲ್ಲಿರುವ ಮಂಗಳೂರು ಕ್ಷೇತ್ರ ಗೆಲ್ಲಲೇಬೇಕೆಂಬ ಪ್ರಾಮಾಣಿಕ ಇಚ್ಛೆ ಕಾಂಗ್ರೆಸ್ ಕಿಂಗ್‍ಗಳಿಗೆ ಇದ್ದರೆ, ಹಿಂದೂಗಳಿಗೂ ಸಹ್ಯ ಮುಖವಾದ ಮಂತ್ರಿ ಯು.ಟಿ.ಖಾದರ್ ಅಥವಾ ಜೈನ್ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು.
ಜೈನ್ ಕ್ಯಾಂಡಿಡೇಟ್ ಧರ್ಮಸ್ಥಳದಲ್ಲಿ ಕುಳಿತು ಆಶೀರ್ವಾದ ಪಡೆದರೆ ಗೆಲುವು ಸುಲಭ. ಧರ್ಮಸ್ಥಳದ ಜೈನ್ ದೇವಧೂತನಿಗೆ ಆರೆಸೆಸ್ ಅಂದರೆ ಅಷ್ಟಕಷ್ಟೇ. ಸೌಜನ್ಯ ರೇಪ್ ಅಂಡ್ ಮರ್ಡರ್ ಕೇಸಲ್ಲಿ ಆರೋಪ ತನ್ನ ವಂಶಸ್ಥರ ಮೇಲೆ ಬಂದಾಗ ಚೆಡ್ಡಿಗಳು ನೆರವಿಗೆ ಬರದೇ ಷಡ್ಯಂತ್ರ ಮಾಡಿದ್ದರೆಂಬ ಆಕ್ರೋಶ ದೇವಧೂತನಿಗಿದೆ! ಈ ಧರ್ಮಕಾರಣ ಬಳಸಿಕೊಳ್ಳುವ ಜಾಣ್ಮೆ ಕಾಂಗ್ರೆಸ್ ದೊರೆಗಳಿಗಿದೆಯಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉಪಚುನಾವಣೆ : ಬಿಹಾರದ ಬಂಕಿಪುರದಲ್ಲಿ ಪ್ರಶಾಂತ್ ಕಿಶೋರ್‌ಗೆ ಐತಿಹಾಸಿಕ ಗೆಲುವು; ಇನ್ನೆರಡು ಕ್ಷೇತ್ರಗಳು ಕಾಂಗ್ರೆಸ್-ಬಿಜೆಪಿ ಪಾಲು

ಬಿಹಾರದ ಬಂಕಿಪುರ, ಗುಜರಾತ್‌ನ ಮಂಜಲ್‌ಪುರ ಮತ್ತು ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರಗಳಿಗೆ ಜುಲೈ 30ರಂದು ನಡೆದ ಉಪಚುನಾವಣೆಯ ಫಲಿತಾಂಶ ಸೋಮವಾರ (ಆ.3) ಹೊರಬಿದ್ದಿದ್ದಿದೆ. ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದ್ದ, ಕಳೆದ 31 ವರ್ಷಗಳಿಂದ ಬಿಜೆಪಿಯೇ...

‘ಪಂಕ್ಚರ್-ತಲಾ ಬನಾನೆ ವಾಲೆಗಳೇ ಹೆಚ್ಚು’: ನೀಟ್ ಅಕ್ರಮಗಳ ವಿರುದ್ಧ ಪ್ರತಿಭಟಿಸಿದವರ ವಿರುದ್ಧ ನಾಲಿಗೆ ಹರಿಬಿಟ್ಟ ಬಿಜೆಪಿ ನಾಯಕ ರಮೇಶ್ ಬಿಧು

ದೆಹಲಿಯ ಜಂತರ್ ಮಂತರ್‌ನಲ್ಲಿ ‘ನೀಟ್’ (NEET) ಪರೀಕ್ಷೆಯ ಅಕ್ರಮಗಳ ವಿರುದ್ಧ ಧ್ವನಿಯೆತ್ತಿದ ಯುವಜನತೆ ಮತ್ತು ವಿದ್ಯಾರ್ಥಿಗಳ ಹೋರಾಟವನ್ನು ದಮನ ಮಾಡಲು ಯತ್ನಿಸುತ್ತಿರುವ ಬಿಜೆಪಿ, ಈಗ ಅವರ ವಿರುದ್ಧವೇ ಅತ್ಯಂತ ಕೀಳುಮಟ್ಟದ ಇಸ್ಲಾಮೋಫೋಬಿಕ್ ಮತ್ತು...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಖುಲಾಸೆ : ಇಡೀ ವ್ಯವಸ್ಥೆಯೇ ಬ್ರಿಜ್ ಭೂಷಣ್‌ರನ್ನು ರಕ್ಷಿಸಿತು ಎಂದ ವಿನೇಶ್ ಫೋಗಟ್; ಮೇಲ್ಮನವಿ ಸಲ್ಲಿಸಲು ಮಹಿಳಾ ಕುಸ್ತಿಪಟುಗಳ ನಿರ್ಧಾರ

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿದ್ದ ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ದೆಹಲಿಯ ರೋಸ್...

ಕರ್ನಾಟಕದಲ್ಲಿ SIR ಬಿಹಾರ-ಬಂಗಾಳಕ್ಕಿಂತ ಭೀಕರ: ಆಗಸ್ಟ್ 4 ರಂದು ಜನಪರ ಸಂಘಟನೆಗಳಿಂದ ಮಹತ್ವದ ಮಾಧ್ಯಮಗೋಷ್ಠಿ

ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌ಐಆರ್ (SIR) ಪ್ರಕ್ರಿಯೆಯು ಬಿಹಾರ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಿಗಿಂತಲೂ ಅತ್ಯಂತ ಭೀಕರ ರೂಪ ಪಡೆದುಕೊಳ್ಳುತ್ತಿದೆ ಎಂದು 'SIR ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟ'...

“ನೈರ್ಮಲ್ಯ ಕಾರ್ಮಿಕರು ಕೆಲಸ ಬಿಡಲು ಸಾಧ್ಯವಿಲ್ಲ”: ದೇಶಾದ್ಯಂತ ಪ್ರತಿಭಟನೆಗೆ DASAM ಬೆಂಬಲ, ಉದ್ಯೋಗ ಖಾಯಂಗೊಳಿಸಲು ತೀವ್ರ ಒತ್ತಾಯ

ನವದೆಹಲಿ: ಉದ್ಯೋಗ ಕ್ರಮಬದ್ಧಗೊಳಿಸುವಿಕೆ (ಖಾಯಂಗೊಳಿಸುವುದು), ನ್ಯಾಯಯುತ ವೇತನ, ಸಾಮಾಜಿಕ ಭದ್ರತೆ, ಸುರಕ್ಷಿತ ಕೆಲಸದ ವಾತಾವರಣ ಮತ್ತು ಕೆಲಸದ ಸ್ಥಳದಲ್ಲಿ ಮಾನವ ಘನತೆಯನ್ನು ಎತ್ತಿಹಿಡಿಯುವಂತೆ ಒತ್ತಾಯಿಸಿ ದೇಶದ ನಾನಾ ಭಾಗಗಳಲ್ಲಿ ನೈರ್ಮಲ್ಯ ಕಾರ್ಮಿಕರು ನಡೆಸುತ್ತಿರುವ...

ದ್ವೇಷ ಭಾಷಣ ಪ್ರಕರಣ: ಬಿಜೆಪಿ ನಾಯಕರಾದ ಅನುರಾಗ್‌ ಠಾಕೂರ್‌, ಪರ್ವೇಶ್‌ ವರ್ಮಾಗೆ ಕ್ಲೀನ್ ಚೀಟ್: ಪುನರ್ ಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ

ನವದೆಹಲಿ: 2020ರ ದೆಹಲಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಪ್ರತಿಭಟನೆಗಳ ಸಂದರ್ಭದಲ್ಲಿ ಉದ್ರೇಕಕಾರಿ ಹಾಗೂ ದ್ವೇಷಪೂರಿತ ಭಾಷಣ ಮಾಡಿದ ಆರೋಪ ಹೊತ್ತಿದ್ದ ಬಿಜೆಪಿ ನಾಯಕರಾದ ಅನುರಾಗ್ ಠಾಕೂರ್ ಮತ್ತು ಪರ್ವೇಶ್‌...

ಕರ್ನಾಟಕ ಸಚಿವ ಸಂಪುಟ ವಿಸ್ತರಣೆ: ನೂತನ ಸಚಿವರ ಪಟ್ಟಿಗೆ ವರಿಷ್ಠರ ಅನುಮೋದನೆ: ಇಂದು ಸಂಜೆ 4:05 ಕ್ಕೆ ಪ್ರಮಾಣ ವಚನ

ಬಹುನಿರೀಕ್ಷಿತ ಕರ್ನಾಟಕ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಮುಹೂರ್ತ ನಿಗದಿಯಾಗಿದ್ದು, ಕಾಂಗ್ರೆಸ್ ಹೈಕಮಾಂಡ್ ನೂತನ ಸಚಿವರ ಪಟ್ಟಿಗೆ ಅಧಿಕೃತ ಅನುಮೋದನೆ ನೀಡಿದೆ. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕಾರಣದಲ್ಲಿ ತೀವ್ರ...

ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಪ್ರಕರಣ : WFI ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್‌ ಸಿಂಗ್‌ ಖುಲಾಸೆ

ದೆಹಲಿ ನ್ಯಾಯಾಲಯವು ಸೋಮವಾರ (ಆ.3) ಭಾರತೀಯ ಕುಸ್ತಿ ಫೆಡರೇಶನ್ (WFI) ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ನಾಯಕ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಪ್ರಕರಣದಿಂದ...

ಪ್ರಶ್ನೆ ಪತ್ರಿಕೆ ಸೋರಿಕೆ : ಫಾಸ್ಟ್‌ ಟ್ರ್ಯಾಕ್ ಕೋರ್ಟ್ ನ್ಯಾಯಾಧೀಶೆ ಒಂದೇ ವಾರದಲ್ಲಿ ವರ್ಗಾವಣೆ

ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳ ವಿಚಾರಣೆಗಾಗಿ ಸ್ಥಾಪಿಸಲಾದ ತ್ವರಿತಗತಿ (ಫಾಸ್ಟ್‌ ಟ್ರ್ಯಾಕ್) ನ್ಯಾಯಾಲಯದ ನೇತೃತ್ವ ವಹಿಸಲು ನೇಮಕಗೊಂಡ ಕೇವಲ ಒಂದು ವಾರದ ನಂತರ, ದೆಹಲಿ ಹೈಕೋರ್ಟ್ ಶನಿವಾರ (ಆಗಸ್ಟ್ 1) ವಿಶೇಷ ನ್ಯಾಯಾಧೀಶರಾದ...

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...