Homeಅಂಕಣಗಳುಬೆಳದ ಮಕ್ಕಳ ಅಂತರಂಗದಲ್ಲಿ ಆಪ್ತ ಪಯಣ

ಬೆಳದ ಮಕ್ಕಳ ಅಂತರಂಗದಲ್ಲಿ ಆಪ್ತ ಪಯಣ

- Advertisement -
- Advertisement -

ಡಾ. ವಿನಯ್ ಒಕ್ಕುಂದ |

ಉತ್ಸಾಹದ ಚಿಲುಮೆಗಳಾಗಿ ಪುಟಿವ ಜೀವಂತಿಕೆಯಿಂದ ತನ್ನ ಸುತ್ತಲ ಲೋಕಕ್ಕೆ ಬೆಳಕು ಬೀರಬೇಕಾದ ಯೌವನದ ಮಕ್ಕಳು, ಹೀಗೆ ತಲೆತಗ್ಗಿಸಿ ಗಂಟಲ ಸೆರೆ ಬಿಗಿದು ತುಳುಕುವ ಕಂಬನಿಯನ್ನು ನುಂಗುತ್ತ ಅಸಹಾಯಕರಾಗಿ ಅದುರು ತುಟಿಯಲ್ಲಿ ಥರಗುಡುವುದೆಂದರೆ ನನ್ನಮಟ್ಟಿಗದು ಮನುಷ್ಯ ಲೋಕದ ಅತ್ಯಂತ ಅಸಹನೀಯತೆಯ ದೃಶ್ಯ. ಅದಕ್ಕೆ ಏನೋ, ಮನೆಯಲ್ಲಿ ನನ್ನ ಮಕ್ಕಳು ಬೆಳೆದಂತೆಲ್ಲ ಅವರ ನೋವುಗಳಿಗೆ ನಾನು ಮರುಗಿದ್ದೇ ಕಡಿಮೆ. ಜ್ವರದಿಂದ ಮೈ ಸುಡುತ್ತಿದ್ದರೂ, ‘ಅದೇನಾಗುತ್ತೆ ಬಿಡು, ಈ ವಯಸ್ನಲ್ಲಿ. ಒಂದು ಟ್ಯಾಬ್ಲೆಟ್ ತಗೊ. ಬಿಸಿ ಅನ್ನ ಉಂಡು ಮಲಗು’ ಎಂದು ಹಗುರವಾಗಿ ಮಾತಾಡಿ, ‘ಈ ಅಮ್ಮನಿಗೆ ಒಂಚೂರು ಪ್ರೀತಿಯಿಲ್ಲ’ ಎಂದು ಶರಾ ಬರೆಯಿಸಿಕೊಂಡೂ ಆಗಿದೆ. ಅಸಲಿಗೆ, ದೊಡ್ಡ ಮಕ್ಕಳ ದಯನೀಯತೆಯನ್ನು ಸಹನೆಯಿಂದ ನೋಡಬಲ್ಲ ಶಕ್ತಿಯೇ ನನಗಿಲ್ಲವೆನೋ. ಆದರೆ, ದಿನಂಪ್ರತಿ ನೂರಾರು ಬೆಳೆದ ಮಕ್ಕಳೊಂದಿಗಳಾದ ನಾನು, ಅವರ ನಗುಮುಖವನ್ನು ಕರ್ತೃತ್ವಶಕ್ತಿಯನ್ನು ಪ್ರೀತಿಸುವಂತೆಯೇ ಅವರ ಅಸಹಾಯಕತೆಯನ್ನು, ಯಾತನೆಯನ್ನು, ತಪ್ಪುಗಳನ್ನು ಉಢಾಳತನವನ್ನು ಮಮತೆಯಿಂದ ಶೋಧಿಸಿಕೊಳ್ಳುವ ಜರೂರತ್ತನ್ನು ಕಲಿಯುತ್ತಿದ್ದೇನೆ. ಹೊರಗಣ್ಣಿಗೆ ಒರಟೊರಟು ಕಲ್ಲುಗಳಂತೆ ಕಾಣುವ ಈ ಮಕ್ಕಳೊಳಗೆ ಜೀವ ತುಡಿತದ ಸೆಲೆಯೇ ಹರಿಯುತ್ತಿರುತ್ತದೆ. ಆ ಸೆಲೆಯ ಸೆಳೆತ ನಮ್ಮನ್ನೂ ಬದಲಿಸುತ್ತದೆ.
ದೈನಂದಿನ ಪಾಠ, ಟೆಸ್ಟು, ಅಟೆಂಡೆನ್ಸು ಎಂಬ ಯಾಂತ್ರಿಕತೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಏರ್ಪಡುವುದು ಎದುರು-ಬದುರಿನ ಸಂಬಂಧ. ಹೆಚ್ಚೆಂದರೆ ನಮ್ಮ ನಡುವಿನ ಅಂತರವನ್ನು ಪ್ರಯತ್ನಪೂರ್ವಕ ಕಡಿಮೆ ಮಾಡಿಕೊಳ್ಳಬಹುದು. ಆದರದನ್ನು ನಿವಾಳಿಸಿ ಹಾಕಲಿಕ್ಕಾಗದು. ಈ ದೈನಂದಿನ ಆಚೆಗಿನ ಸಂಬಂಧಗಳಲ್ಲಿ ನಡೆವ ಬೆರಕೆಯಲ್ಲಿ ನಮ್ಮೊಟ್ಟಿಗಿರುವ ಮಕ್ಕಳು ಒಂದೊಂದು ‘ವಿಶ್ವವಿದ್ಯಾಲಯ’ ಗಳಂತೆ ತೆರೆದುಕೊಳ್ಳುತ್ತಾರೆ. ಇಡೀ ಸಮಾಜದ ನಡೆಯ ನಾಡಿಮಿಡಿತವನ್ನೇ ಮುಟ್ಟಿಸುತ್ತಾರೆ.
ನಾನು ಕೆಲಸ ಮಾಡುತ್ತಿರುವ ಊರಿನಲ್ಲಿಯ ಇನ್ನೊಂದು ಕಾಲೇಜಿನ ಹುಡುಗಿಯೊಬ್ಬಳು ಅದೆಂಥದೋ ಸಣ್ಣ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಸುದ್ದಿಯ ಜೊತೆಗೆ, ಅವಳ ಮುದ್ದಾದ ಫೋಟೋ ವಾಟ್ಸಪ್‍ಗಳಲ್ಲಿ ಹರಿದಾಡಿದಾಗ, ಸ್ಟಾಫ್ ರೂಮ್‍ನಲ್ಲಿ ದಣಿದು ಕೂತ ಮಧ್ಯಾಹ್ನದ ಬಳಗದಲ್ಲಿ ಒಂಥರಾ ಇರುಸುಮುರುಸು ಕಾಡತೊಡಗಿತ್ತು. ಪುಣ್ಯಕ್ಕೆ, ಯಾರ ತುಟಿಯಂಚಿನಲ್ಲೂ ಹೆಣ್ಣುಹುಡುಗಿಯ ಆತ್ಮಹತ್ಯೆಗುಂಟ ಹಬ್ಬಿಕೊಳ್ಳುವ ಹೊಲಸು ಕಲ್ಪನೆಯ ನುಡಿಯೊಡೆಯಲಿಲ್ಲ. ಅಂಥದ್ದೊಂದು ಬೇಜವಾಬ್ದಾರಿ ನೋಟವೂ, ಗೊಣಗಾಟವೂ ಕಾಣಲಿಲ್ಲ. ನಮ್ಮೆಲ್ಲರ ಆಸಕ್ತಿಗಳು, ಬದುಕಿನ ತಾತ್ವಿಕತೆಗಳು ಬೇರೆ ಬೇರೆಯಾಗಿದ್ದಿರಬಹುದಾದರೂ, ವಿದ್ಯಾರ್ಥಿಗಳ ಕುರಿತ ಮಮತೆಯಲ್ಲಿ ಒಂದುತನವಿತ್ತು. ‘ಏನಾದರೂ ಮಾಡಬೇಕು’, ‘ಯಾಕೋ ಮಕ್ಕಳ ಇತ್ತೀಚಿನ ನಡೆ ತುಂಬ ದಿಕ್ಕೆಡುತ್ತಿದೆ’ ಅಟೋ ಡ್ರೈವರ್ ಹೇಳಿದ್ದ “ಬೇರೆ ಊರಿನ ಹುಡುಗರೊಟ್ಟಿಗೆ ಹುಡುಗೀರು ತಿರಗ್ತಿದಾರೆ. ಅವರು ಬಹುಶಃ ಕಾಲೇಜಿಗೆ ಹೋಗ್ತಿವಿ ಅಂತ ಮನೇಲಿ ಹೇಳಿ ಬಂದಿರ್ತಾರೆ. ನೋಡಿ ಇಲ್ಲಿ, ನಿಮ್ಮ ಕಾಲೇಜಿನ ಯುನಿಫಾರಂನ ಹುಡುಗೀರಲ್ವಾ?” ಎಂದು ತೋರಿದ ಫೋಟೋ ವಿಷಯ ಬಂತು. ಕಾಲೇಜಿಗೆ ತಿರುಗುವ ಸರ್ಕಲ್‍ನಲ್ಲಿರುವ ಹಾಳು ಕಟ್ಟಡದಲ್ಲಿ ಕೂತು ಹುಡುಗರು ಸಿಗರೇಟು ಎಳೀತಾರೆ- ಎಂಬುದು; ಗಾಂಜಾ ಮಾರುವವರು ಕಾಲೇಜು ಕ್ಯಾಂಪಸ್ಸಿನಾಚೆಯ ರೇಲ್ವೆ ಹಳಿಗಳ ಬಳಿ ತಿರುಗಾಡುತ್ತಾರಂತೆ. ನಮ್ಮ ಮಕ್ಕಳಿಗೆಲ್ಲ ಮಾರಲು ಶುರು ಮಾಡಿದರೆ ಮಾಡೋದೇನ್ರೀ? ಪೊಲೀಸರಿಗೆ ಸೂಚನೆ ಕೊಡೋದಾ ಹ್ಯಾಗೆ?; “ಮೇಡಂ ನೀವು ಲೇಡಿಸ್ ವಿಂಗ್‍ನ ಮೀಟಿಂಗ್ ಕರೆಯಿರಪ್ಪಾ. ಸ್ವಲ್ಪ ಹುಡಿಗಿಯರ್ನ ಬಿಗಿಯಿಡ್ರಿ. ಅಂದ್ರ ಏನಾರೂ ಆದೀತು’….. ಹೀಗೆ ಮನಸ್ಸಿಗೆ ಉರಿ ಹತ್ತಿದಂತೆ “ಮಕ್ಕಳು ಮಕ್ಕಳೇ ಅಲ್ವೇನ್ರಿ? ನಮ್ಮ ಮಕ್ಕಳಾದ್ರೇನು, ಇನ್ನೊಬ್ರ ಮಕ್ಕಳಾದ್ರೇನು” ಎಂಬ ತಾತ್ವಿಕ ತಿಳಿವು ಎಳೆಗಾಳಿಯಂತೆ ಸುಳಿಯುತ್ತಿತ್ತು. ಕಡೆಗೆ ನಿರ್ಣಯಕ್ಕೆ ತಲುಪಿದ್ದು – ಮೆಂಟರ್ ವಾರ್ಡ್ ಸಿಸ್ಟಂ ಕಟ್ಟುನಿಟ್ಟಾಗಿ ಜಾರಿಗೆ ತರೋದು. ಕಾಲೇಜಿನ 8 ಉಪನ್ಯಾಸಕರಿಗೆ 400 ವಿದ್ಯಾರ್ಥಿಗಳ ಪಾಲಕತ್ವದ ಹೊಣೆಯನ್ನು ಹಂಚಿಕೆ ಮಾಡಿ ವಹಿಸೋದು. ತುಂಬ ಸಿನ್ಸಿಯರಾಗಿ ಪ್ರತಿಯೊಬ್ಬ ವಿದ್ಯಾರ್ಥಿಯೊಂದಿಗೂ ಆಪ್ತವಾಗಿ ಕೌನ್ಸಿಲಿಂಗ್ ನಡೆಸೋದು. ಹೀಗೆ… ತುಂಬ ಪ್ರಾಮಾಣಿಕವಾಗಿಯೇ ಪ್ರಯತ್ನ ನಡೆಯಿತು. ತಯಾರಿಯಾಯಿತು. ಕೇಂದ್ರ ಸರ್ಕಾರ ಯು.ಜಿ.ಸಿ.ಯನ್ನು ಇಲ್ಲವಾಗಿಸಿ, ಅದರ ಜಾಗೆಯಲ್ಲಿ ‘ಉನ್ನತ ಶಿಕ್ಷಣ ಮತ್ತು ಸಂಶೋಧನೆಯ ರಾಷ್ಟ್ರೀಯ ಆಯೋಗ’ವನ್ನು ಸ್ಥಾಪಿಸಲು ಯೋಜಿಸಿದೆ. ಆದರೆ ಯು.ಜಿ.ಸಿ. ಕಾಲೇಜುಗಳಿಗೆ ನಿರ್ದೇಶಿಸಿದ ಸೂತ್ರಗಳಲ್ಲಿ ಮೆಂಟರ್ ವಾರ್ಡ್ ಎಂಬ ಸುಂದರ ಪರಿಕಲ್ಪನೆಯೊಂದಿದೆ.
ನಮ್ಮ ದೇಶದಲ್ಲಿ ಉನ್ನತ ಶಿಕ್ಷಣವು ವೃತ್ತಿಪರ ಕೋರ್ಸುಗಳು ಮತ್ತು ಸಾಂಪ್ರದಾಯಿಕ ಕೋರ್ಸುಗಳೆಂದು ಹೋಳಾಗಿ, ವೃತ್ತಿಪರ ಕೋರ್ಸುಗಳು ಶ್ರೀಮಂತರಿಗೂ ಸಾಂಪ್ರದಾಯಿಕ ಕೋರ್ಸುಗಳು ಬಡ-ಮಧ್ಯಮ ವರ್ಗದವರಿಗೂ ಎಂದು ಹಂಚಿಕೆಯಾಗಿ ಹೋಗಿದೆ. ಎಲ್ಲ ಮಿತಿಗಳಲ್ಲೂ ಸಮಾಜದ ಬಡ ದಲಿತ, ಹಿಂದುಳಿದ, ಆದಿವಾಸಿ ಸಮುದಾಯಗಳ ಮಕ್ಕಳು ಮತ್ತು ಹೆಣ್ಣುಮಕ್ಕಳು ಪದವಿ ವ್ಯಾಸಂಗಕ್ಕೆ ತೊಡಗುವುದು ಸಾಧ್ಯವಾಗಿದೆ. ಆದರೆ, ಬಂಡವಾಳಶಾಹಿ ಆದ್ಯತೆಗಳಿಗೆ ತಗ್ಗಿದ ಸರ್ಕಾರ ಜಗತ್ತಿನ ಬಂಡವಾಳವಾದಿಗಳಿಗೆ ವಿಶ್ವವಿದ್ಯಾಲಯಗಳನ್ನು ಅಡವಿಡಲು ತೊಡಗಿದೆ. ಬಂಡವಾಳವಾದಿಗಳಿಗೆ ಅಗತ್ಯವಾದ ವಾಣಿಜ್ಯ ಮೌಲ್ಯಗಳ ಬೆಲೆಯಲ್ಲಿಯೇ ಶಿಕ್ಷಣವನ್ನು ನಿಗದಿಗೊಳಿಸಿಕೊಡುವ ಪ್ರಯತ್ನಗಳು ನಡೆದಿವೆ. ಸಾಂಪ್ರದಾಯಿಕ ಕೋರ್ಸುಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳು ತೆರೆಯದೆ, ವಾಣಿಜ್ಯೀಕರಣದ ಸಮಾಜದಲ್ಲಿ ‘ಉನ್ನತ ಶಿಕ್ಷಣದ ಫಲಿತಗಳು ಕಳಪೆ’ ಎಂಬ ಭ್ರಮೆಯನ್ನು ನಂಬಿಸಲಾಗಿದೆ. ಉನ್ನತ ಶಿಕ್ಷಣದ ಸುಧಾರಣೆಯ ಯೋಜನೆಗಳನ್ನು ಮರಮರಳಿ ಬಂಡವಾಳಶಾಹಿಗಳ ಸುಪರ್ದಿಗೆ ಒಪ್ಪಿಸಲಾಗಿದೆ. 2000 ದಲ್ಲಿಯ ಅಂಬಾನಿ-ಬಿರ್ಲಾ ಸಮಿತಿಯ ವರದಿ, 2006ರ ಸ್ಯಾಮ್ ಪಿತ್ರೋಡಾ ನೇತೃತ್ವದ ರಾಷ್ಟ್ರೀಯ ಜ್ಞಾನ ಆಯೋಗದ ವರದಿ, 2008ರ ಪ್ರೊ. ಯಶ್‍ಪಾಲ್‍ರ ಉನ್ನತ ಶಿಕ್ಷಣದ ಪುನರ್‍ನವೀಕರಣ ವರದಿ ಮೊದಲಾದವುಗಳನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು. ಶಿಕ್ಷಣದ ವಲಯಗಳಲ್ಲಿ ಖಾಸಗಿ ಬಂಡವಾಳ ಹೂಡಿಕೆಯನ್ನು ಉತ್ತೇಜಿಸುವ ಬೆಳವಣಿಗೆಗಳ ಮಧ್ಯದಲ್ಲಿಯೂ ಸರ್ಕಾರ, ಹೆಣ್ಣುಮಕ್ಕಳ ಬಡವರ, ದಲಿತರ, ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಕಡಿಮೆ ಫೀಸು, ಸ್ಕಾಲರ್‍ಶಿಪ್‍ಗಳ ಕೊಡುಗೆ ನೀಡುತ್ತ ಸಾಮಾಜಿಕ ನ್ಯಾಯವನ್ನು ಜೀವಂತವಾಗಿಡಲು ಯತ್ನಿಸುತ್ತಿದೆ. ಹಾಗಾಗಿ ಸರ್ಕಾರಿ ಕಾಲೇಜುಗಳ ಸಾಂಪ್ರದಾಯಿಕ ಕೋರ್ಸುಗಳ ವಿದ್ಯಾರ್ಥಿಗಳೆಂದರೆ, ಕೆಳಸಮುದಾಯದ ಪ್ರತಿನಿಧಿಗಳೇ ಆಗಿರುತ್ತಾರೆ. ಅವರು ಸಾಮಾಜಿಕವಾಗಿ ಸಂಘರ್ಷದ ಪದರುಗಳಲ್ಲಿ ನಲುಗುತ್ತಿರುತ್ತಾರೆ. ಇತ್ತೀಚೆಗೆ ನಮ್ಮ ದೇಶದಲ್ಲಿ ಪ್ರತಿ 1 ಗಂಟೆಗೆ 1 ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವರದಿಯಾಗಿದೆ. ಈ ವರದಿಯನ್ನು ಅಮತ್ರ್ಯಸೇನ್ ಅಧ್ಯಯನ ಕ್ರಮವಾದ ಒಳವಿಭಜನೆಗೆ ಅಳವಡಿಸಿದರೆ, ಬಹು ದೊಡ್ಡ ಪ್ರಮಾಣ ಈ ತಳವರ್ಗಕ್ಕೆ ಮತ್ತು ಹೆಣ್ಣುಮಕ್ಖಳಿಗೆ ಮೀಸಲಾಗಿರುತ್ತದೆಂಬುದು ನಿಸ್ಸಂಶಯ.
ಇಂತಹ ಹಲವು ಕಾರಣಗಳು, ವಿದ್ಯಾರ್ಥಿಗಳೊಂದಿಗಿನ ಆಪ್ತ ಸಂವಾದಕ್ಕೆ ನಮ್ಮನ್ನು ಸಜ್ಜುಗೊಳಿಸಿತ್ತು. ಯುನಿಫಾರಂನಲ್ಲಿ ನೀಟಾಗಿ ಬರುವ ಮಕ್ಕಳಲ್ಲಿ 40% ರಷ್ಟು ಪಾಲಕರು ಕೂಲಿ ಕಾರ್ಮಿಕರು, ಸ್ವಂತ ಸೂರಿಲ್ಲದವರು 50% ರಷ್ಟು ತಂದೆ ಇಲ್ಲದ, ಇದ್ದರೂ ಈ ಕುಟುಂಬದಿಂದ ದೂರಾದ ತಾಯಿಯೆಂಬ ಏಕಪಾಲಕಳ ಹೆಗಲು ನಂಬಿ ಬೆಳೆದವರು 25% ರಷ್ಟು, ಇಷ್ಟು ಆರ್ಥಿಕ-ಸಾಮಾಜಿಕ ಸಮಸ್ಯೆ ಹೊತ್ತು, ತಾನು ಕಲಿತು ಉದ್ಯೋಗ ಹಿಡಿದು ಈ ಕಷ್ಟದಿಂದ ಪಾರಾಗಬೇಕು ಎಂದು ತಿಳಿದೂ; ಟಿ.ವಿ., ಮೊಬೈಲ್, ವಾಟ್ಸಪ್, ಆಲಸ್ಯ ಎಂಬ ರೋಗಗಳಿಗೆ ಬಲಿಯಾಗಿ ದಿನ ತಳ್ಳುತ್ತಿರುವವರು 70% ಕ್ಕೂ ಹೆಚ್ಚು. ಒಬ್ಬೊಬ್ಬ ವಿದ್ಯಾರ್ಥಿಯನ್ನು ಹತ್ತಿರಕ್ಕೆ ಕೂಡಿಸಿಕೊಂಡು ತುಂಬ ಆಪ್ತವಾಗಿ ‘ಹೇಳು, ನೀನು ಇದುವರೆಗೂ ಮಾಡಿದ, ಮಾಡ್ತಿರುವ ತಪ್ಪೇನು?’ ಎಂದು ಕೇಳಿದಾಗ, ಆ ಎಳೆಯರು ತಮ್ಮಿಂದ ಹೊರಬಂದು ತಮ್ಮನ್ನು ಪರೀಕ್ಷಿಸಿಕೊಂಡು ಉತ್ತರಿಸುವ ಕ್ಷಣವಿದೆಯಲ್ಲ ಅದು ಜೀವಮಾನದಲ್ಲಿಯೇ ತುಂಬ ಪವಿತ್ರ ಘಳಿಗೆ ಅನ್ನಿಸಿಬಿಟ್ಟಿತ್ತು. ಅವರು ಹೇಳುತ್ತಿದ್ದರು. ನಾನು ದಾಖಲಿಸಿಕೊಳ್ಳುತ್ತಿದ್ದೆ. ‘ಹೇಳು, ಈ ತಪ್ಪು ತಿದ್ದಿಕೊಳ್ಳಲು ಎಷ್ಟು ಟೈಮ್ ತಗೊಳ್ಳುವಾ?’ ಕೆಲವರು ಒಂದು ವಾರ, ಹದಿನೈದು ದಿನ ಹೀಗೆ ಗಡುವು ಕೊಟ್ಟರು. ಒಂದು ಹನಿ ಮಮತೆಗೆ ಕರಗಿ ಬೇರೆಯೇ ಆಗಿಬಿಡುವ ಮಕ್ಕಳನ್ನು ನೋಡಿದಾಗೆಲ್ಲ ನನ್ನ ವೃತ್ತಿಯ ಘನತೆಗೆ ನಾನೇ ವಂದಿಸುವಂತಾಗುತ್ತಿತ್ತು. ಕೈಗೆ, ಕುತ್ತಿಗೆಗೆ ತರಹೇವಾರಿ ದಾರ, ತಾಯತಗಳ 6 ಫೂಟು ಎತ್ತರದ ಹುಡುಗ, ಯುನಿಫಾರಂ ಮೇಲೆ ಚಳಿ ಕಮ್ಮಿಯಿದ್ದಾಗಲೂ ಸ್ವೆಟರು, ಮೊಣಕಾಲಿನವರೆಗೆ ಮಡಚಿದ ಪ್ಯಾಂಟು, ಮೊಣಕೈವರೆಗೆ ಮಡಚಿದ ಶರ್ಟು, ತಲೆಗೆ ತರಹೇವಾರಿ ಬಣ್ಣಗಳ ಉಸಾಬರಿಯ ಕಷ್ಟಕ್ಕೆ ಕಾರಣ ಅವರೊಳಗಿನ ಪುಕ್ಕಲುತನ, ತಾವು ಬುದ್ಧಿವಂತರಲ್ಲದ, ಯಾವ ವಿಶೇಷ ಸಾಧನೆಯೂ ಸಾಧ್ಯವಾಗದ ವಿದ್ಯಾರ್ಥಿಗಳಾದ್ದರಿಂದ ಎಲ್ಲಿ ತಮ್ಮನ್ನು ಎಲ್ಲರೂ ನಿರ್ಲಕ್ಷಿಸಿಬಿಡುತ್ತಾರೋ ಎಂಬ ದಿಗಿಲಿನ ಪರಿಣಾಮಗಳವು. ಎಸ್.ಎಸ್.ಎಲ್.ಸಿ. ಯಲ್ಲಿ 89% ಅಂಕ ತೆಗೆದ ವಿದ್ಯಾರ್ಥಿನಿ ಪಿ.ಯು.ಸಿ.ಗೆ 60% ಮಾಡಿದ್ದರ ಕಾರಣಗಳಲ್ಲೊಂದು, ‘ನಿನ್ನ ಕನ್ನಡಿ ಮುಂದೆ ನಿಲ್ಲುವ ಟೈಮ್‍ನ ಹೆಚ್ಚಳವಾಗಿರಬಹುದೇ’ ಎಂದಾಗ ಅವಳೂ ಪಕಪಕ ನಕ್ಕಳಾದರೂ ಹೌದೆಂದು ಸಮ್ಮತಿಸಿಯೂ ಬಿಟ್ಟಳು. ತಮ್ಮೊಳಗಿನ ಗಂಡು-ಹೆಣ್ಣು ಎಂಬ ಹಂಗಿಗೆ ಈಡಾಗಿ, ತಮ್ಮ ಬಾಲ್ಯದ ಕ್ರೀಡೆಯ, ಹಾಡಿನ, ಕಲಾಭಿವ್ಯಕ್ತಿಯ ಶ್ರಮಗಳನ್ನು ಕೈಬಿಟ್ಟಿದ್ದಾರೆ. ಯಾವ ಲೆಕ್ಕಕ್ಕೂ ಮಿಗುವ ಪ್ರತಿಭೆಯ ಕಾಣೆಯಿದು. ಕಡೆಗೂ, ಮನಸ್ಸು ಮಾಡಿದರೆ ನಮ್ಮ ಬಾಳಿನ ದಿಶೆಯನ್ನು ನಾವೇ ಬದಲಿಸಬಲ್ಲೆವು ಎಂಬ ತಿಳಿವು ತರುವ ಪ್ರಯತ್ನ ಮಾಡಿಯಾಯಿತು. ಈ ಪ್ರಯತ್ನ ಯಾರೋ ಬಡ ಕೂಲಿ ಅವ್ವ-ಅಪ್ಪಂದಿರ ಹಣೆಯ ಗೆರೆ ಅಳಿಸಿ, ಸಣ್ಣ ನಗು ಅರಳಿಸಲಿ ಎನಿಸಿತು. ಗಿಡಕ್ಕೆ ನೀರುಣಿಸುತ್ತ, ಮಾಲಿಯ ದೇಹ-ಮನಸ್ಸುಗಳು ಮುದಗೊಳ್ಳುವಂತೆ – ನಮ್ಮಗಳ ಮನಸ್ಸಿಗೂ ಎಂಥದೋ ಮುದ, ಶುದ್ಧ ಗಾಳಿಯ ಸ್ಪರ್ಶದ ಗೆಲುವು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಡದಿ ಟೌನ್‌ಶಿಪ್ ಸರ್ವೆಗೆ ರೈತರ ತೀವ್ರ ವಿರೋಧ: ಅಧಿಕಾರಿಗಳಿಗೆ ಪೊರಕೆ ಏಟು, ಕಾರುಗಳು ಜಖಂ

ರಾಮನಗರ: ಬಿಡದಿ ಉಪನಗರ (ಟೌನ್‌ಶಿಪ್) ಯೋಜನೆಯನ್ನು ವಿರೋಧಿಸಿ ಸ್ಥಳೀಯ ರೈತರು ನಡೆಸುತ್ತಿರುವ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಸೋಮವಾರ (ಜುಲೈ 13) ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲೂಕಿನ ಮಂಡಲಹಳ್ಳಿ...

ಮನೆಕೆಲಸದಾಕೆ ಮೇಲಿನ ದೌರ್ಜನ್ಯ ಆರೋಪ ಪ್ರಕರಣ : ಜೆಡಿಎಸ್ ಶಾಸಕ ಹೆಚ್​​​.ಡಿ. ರೇವಣ್ಣಗೆ ಸುಪ್ರೀಂ ಕೋರ್ಟ್​ ನೋಟಿಸ್​

ಮಹಿಳೆಯ ಘನತೆಗೆ ಧಕ್ಕೆ ಹಾಗೂ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಗೆ ಸಂಬಂಧಿಸಿದಂತೆ, ಸುಪ್ರೀಂ ಕೋರ್ಟ್‌ ಸೋಮವಾರ (ಜು.13) ಜೆಡಿಎಸ್‌...

ದಲಿತ ಯುವಕರಿಗೆ ವಿದ್ಯುತ್ ಶಾಕ್‌ ಶಿಕ್ಷೆ: ಕಳ್ಳತನ ಆರೋಪದ ಮೇಲೆ ಇಬ್ಬರಿಗೆ ಚಿತ್ರಹಿಂಸೆ

ದಲಿತ ಯುವಕರ ಮೇಲೆ ಮಧ್ಯಪ್ರದೇಶದಲ್ಲಿ ನಡೆದಿರುವ ಅಮಾನವೀಯ ಕೃತ್ಯವೊಂದರ ವಿಡಿಯೋ ಇದೀಗ ನಾಗರಿಕ ಸಮಾಜವನ್ನೇ ಆಘಾತಕ್ಕೀಡು ಮಾಡಿದೆ. ನೀರಿನ ಪಂಪ್ ಮೋಟಾರ್ ಕದ್ದಿದ್ದಾರೆ ಎಂಬ ಶಂಕೆಯ ಮೇಲೆ ಇಬ್ಬರು ದಲಿತ ಯುವಕರನ್ನು ಕಂಬಕ್ಕೆ...

ರಾಮಮಂದಿರ ಹಗರಣ: ಕೇಂದ್ರ ಸರ್ಕಾರ, ಟ್ರಸ್ಟ್, ಉತ್ತರ ಪ್ರದೇಶ ಸರ್ಕಾರಕ್ಕೆ ‘ಸುಪ್ರೀಂ’ ನೋಟಿಸ್ 

ನವದೆಹಲಿ: ವಿಶ್ವಪ್ರಸಿದ್ಧ ಅಯೋಧ್ಯೆಯ ಶ್ರೀ ರಾಮಮಂದಿರಕ್ಕೆ ಸಾರ್ವಜನಿಕ ಭಕ್ತಾದಿಗಳಿಂದ ಹರಿದುಬಂದಿರುವ ಕೋಟ್ಯಂತರ ರೂಪಾಯಿ ದೇಣಿಗೆ ನಿಧಿಯ ಕಳ್ಳತನ, ದುರುಪಯೋಗ ಮತ್ತು ಆಡಳಿತಾತ್ಮಕ ಅಕ್ರಮಗಳ ಆರೋಪ ಇದೀಗ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಈ...

ಜಮ್ಮು-ಕಾಶ್ಮೀರ: ಪ್ರತ್ಯೇಕತಾವಾದಿಗಳು, ಉಗ್ರಗಾಮಿಗಳನ್ನು ವೈಭವೀಕರಿಸಿದ ಆರೋಪ: ಮೂವರು ಪ್ರಕಾಶಕರ ಬಂಧನ

ಜಮ್ಮು/ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಹಾಗೂ ಭಯೋತ್ಪಾದಕ ನಾಯಕರನ್ನು ವೈಭವೀಕರಿಸುವ ಪುಸ್ತಕಗಳನ್ನು ಪ್ರಕಟಿಸಿ, ವಿತರಿಸಿದ ಗಂಭೀರ ಆರೋಪದ ಮೇಲೆ ಪ್ರತಿ-ಗುಪ್ತಚರ ವಿಭಾಗದ (ಸಿಐಜೆಕೆ) ಪೊಲೀಸರು ಭಾನುವಾರ ಇಬ್ಬರು ಪ್ರಮುಖ ಪ್ರಕಾಶನ ಸಂಸ್ಥೆಗಳಿಗೆ...

ಕರ್ನಾಟಕ ಎಸ್‍ಐಆರ್: ಮತದಾರರ ಸೌಲಭ್ಯ ಕೇಂದ್ರಗಳ ಕೊರತೆ, ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಅಡ್ಡಿ: ವರದಿ

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಆರಂಭವಾಗಿ ಸುಮಾರು ಎರಡು ವಾರಗಳು ಕಳೆಯುತ್ತಾ ಬಂದಿದ್ದರೂ, ಚುನಾವಣಾ ಆಯೋಗವು ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯಾದ್ಯಂತ ಅಗತ್ಯವಿರುವಷ್ಟು ಮತದಾರರ ಸೌಲಭ್ಯ ಕೇಂದ್ರಗಳನ್ನು...

27 ಮಂದಿಯನ್ನು ‘ವಿದೇಶಿಯರು’ ಎಂದಿದ್ದ ಅಸ್ಸಾಂ ನ್ಯಾಯಮಂಡಳಿಗಳ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಒಬ್ಬ ವ್ಯಕ್ತಿಯ ಪೌರತ್ವ ಮತ್ತು ವಿದೇಶಿಯರ ಸ್ಥಾನಮಾನವನ್ನು ನಿರ್ಧರಿಸುವಾಗ ಕೇವಲ ಯಾಂತ್ರಿಕವಾಗಿ ತೀರ್ಪು ನೀಡಲಾಗದು, ಬದಲಿಗೆ ಅತ್ಯಂತ ನ್ಯಾಯಯುತ, ಕಾನೂನುಬದ್ಧ ಹಾಗೂ ಸಮಂಜಸವಾದ ಪ್ರಕ್ರಿಯೆಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದು ಸುಪ್ರೀಂ ಕೋರ್ಟ್ ಸೋಮವಾರ...

ಶಿಕ್ಷಕ ‘ಖಾನ್ ಸರ್‌’ಗೆ ಪಟ್ನಾ ಕೋರ್ಟ್‌ನಲ್ಲಿ ಜಯ: ಕೋಚಿಂಗ್ ಸೆಂಟರ್ ದಾಳಿ ಪ್ರಕರಣದಲ್ಲಿ ಮುಂಗಡ ಜಾಮೀನು ಮಂಜೂರು

ಬಿಹಾರದ ಖ್ಯಾತ ಶಿಕ್ಷಕ ಫೈಸಲ್ ಖಾನ್ (ಜನಪ್ರಿಯವಾಗಿ ಖಾನ್ ಸರ್ ಎಂದು ಕರೆಯಲ್ಪಡುವ) ಅವರಿಗೆ ಪಟ್ನಾ ನ್ಯಾಯಾಲಯವು ಸೋಮವಾರ ಮುಂಗಡ ಜಾಮೀನು ಮಂಜೂರು ಮಾಡಿದೆ. ಈ ತಿಂಗಳ ಆರಂಭದಲ್ಲಿ ಅವರ ಕೋಚಿಂಗ್ ಇನ್ಸ್ಟಿಟ್ಯೂಟ್...

ಗುಜರಾತ್‌| ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಚಾಲಕನನ್ನು ಬೆದರಿಸಿದ ನಕಲಿ ಗೋರಕ್ಷಕರು

ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ಸ್ವಘೋಷಿತ ಗೋರಕ್ಷಕರ ಗುಂಪೊಂದು ದನಗಳನ್ನು ಸಾಗಿಸುತ್ತಿದ್ದ ಟ್ರಕ್ ಅನ್ನು ಸುಮಾರು 100 ಕಿಲೋಮೀಟರ್‌ಗಳವರೆಗೆ ಬೆನ್ನಟ್ಟಿ, ವಾಹನವನ್ನು ತಡೆದು ಗುಂಪು ಮುಸ್ಲಿಂ ಚಾಲಕನನ್ನು ನಿಂದಿಸಿ ಬೆದರಿಸಿದ್ದಾರೆ. 'ಕ್ಲಾರಿಯನ್ ಇಂಡಿಯಾ' ವರದಿ ಪ್ರಕಾರ,...

ವಿಜಯ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಜಯ: ತಮಿಳುನಾಡು ಗೋಹತ್ಯೆ ನಿಷೇಧದ ಹೈಕೋರ್ಟ್ ಆದೇಶಕ್ಕೆ ತಡೆ

ತಮಿಳುನಾಡಿನಲ್ಲಿ ಹಸು ಮತ್ತು ಕರುಗಳ ಹತ್ಯೆಯನ್ನು ರಾಜ್ಯಾದ್ಯಂತ ಸಂಪೂರ್ಣವಾಗಿ ನಿಷೇಧಿಸಿ ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ತಡೆ ನೀಡಿದೆ. ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK)...