Homeಮುಖಪುಟಸಿನಿಮಾ ವಿಮರ್ಶೆ: ಆದಿವಾಸಿ ಭೂ ಹಕ್ಕಿನ ನಿಜ ಕಥನ ‘ಪಡ’

ಸಿನಿಮಾ ವಿಮರ್ಶೆ: ಆದಿವಾಸಿ ಭೂ ಹಕ್ಕಿನ ನಿಜ ಕಥನ ‘ಪಡ’

- Advertisement -
- Advertisement -

ಅಲಕ್ಷಿತ ಸಮುದಾಯಗಳ ಪ್ರತಿರೋಧ ಹಾಗೂ ಭೂಮಿ ಹಕ್ಕಿನ ಕಥನಗಳನ್ನು ಕಟ್ಟುವಲ್ಲಿ ತಮಿಳು ಚಿತ್ರರಂಗ ಈಗಾಗಲೇ ಚಾಪು ಮೂಡಿಸಿದೆ. ಪ.ರಂಜಿತ್‌, ವೆಟ್ರಿಮಾರನ್‌, ಮಾರಿಸೆಲ್ವರಾಜ್‌, ಟಿ.ಜಿ.ಜ್ಞಾನವೇಲ್‌ ಥರದ ನಿರ್ದೇಶಕರು ತಮಿಳು ಚಿತ್ರರಂಗಕ್ಕೆ ಹೊಸ ಉರುಪು ತಂದಿದ್ದಾರೆಂಬುದು ನಿರ್ವೀವಾದ.

ಸೃಜನಶೀಲತೆ ಹಾಗೂ ವಿಶಿಷ್ಟ ಕಥನಗಳ ಮೂಲಕ ಗಮನ ಸೆಳೆದಿರುವ ಮಲಯಾಳಂ ಚಿತ್ರರಂಗ ಅಲಕ್ಷಿತ ಸಮುದಾಯಗಳ ಕಥೆಗಳನ್ನು ಹೇಳುವಲ್ಲಿ ಅಷ್ಟಾಗಿ ಗಮನ ಹರಿಸಿಲ್ಲ ಎಂಬ ಟೀಕೆಗಳೂ ಸಹಜವಾಗಿವೆ. 2016ರಲ್ಲಿ ರಾಜೀವ್‌ ರವಿ ನಿರ್ದೇಶನದ ‘ಕಮ್ಮಟ್ಟಿಪಾಡಂ’ ಸಿನಿಮಾ, ಭೂಮಿ ಹಕ್ಕಿನ ಕುರಿತು ಒಂದಿಷ್ಟು ಮಾತನಾಡಿತ್ತು. ಆದರೆ ಶೋಷಿತ ಸಮುದಾಯಗಳ ಕಥನದ ದೃಷ್ಟಿಯಲ್ಲಿ ತಮಿಳು ಚಿತ್ರರಂಗ ಸಾಧಿಸಿರುವ ಮೇಲುಗೈ ಎದುರು ಮಲಯಾಳಂ ಚಿತ್ರರಂಗದ ಪ್ರಯೋಗಗಳು ವಿರಳಾತೀವಿರಳ ಎನ್ನಲಾಗುತ್ತದೆ. ಹೀಗಾಗಿಯೇ ‘ಪಡ’ದಂತಹ ಮಲಯಾಳಂ ಸಿನಿಮಾ ಹೊಸ ಚರ್ಚೆಗೆ ನಾಂದಿಹಾಡಿದೆ.

“ಆದಿವಾಸಿ ಕಥನಗಳನ್ನು ಮಲಯಾಳಂ ಚಿತ್ರರಂಗ ಮಾತನಾಡಿಯೇ ಇಲ್ಲ ಎಂದು ಹೇಳಲಾಗದು. ಆದರೆ ನಿರ್ದೇಶಕನ ದೃಷ್ಟಿಕೋನವೂ ಮುಖ್ಯವಾಗುತ್ತದೆ. ಆದಿವಾಸಿಗಳನ್ನು ಯಾವ ಆಯಾಮದಲ್ಲಿ ತೋರಿಸುತ್ತಿದ್ದಾರೆ ಎಂಬುದು ಚಿತ್ರ ನಿರ್ದೇಶಕನ ಹಿನ್ನೆಲೆಯಿಂದ ನಿರ್ಧರಿತವಾಗುತ್ತವೆ” ಎಂದೂ ಮಲಯಾಳಂ ಸಿನಿಮಾ ವಿಮರ್ಶಕರು ಹೇಳುತ್ತಾರೆ.

‘ಬಾಂಬೂ ಬಾಯ್ಸ್‌’ (2002) ಎಂಬ ಸಿನಿಮಾದಲ್ಲಿ ಆದಿವಾಸಿಗಳನ್ನು ಹಾಸ್ಯಾಸ್ಪದವಾಗಿ ತೋರಿಸಲಾಗಿದೆ. ಟಾಯ್ಲೆಟ್‌ ಒಳಗೆ ಕೈ ತೊಳೆಯುವುದು, ಮನೆಯಲ್ಲಿರುವ ಪಕ್ಷಿಯನ್ನು ಕೊಂದು ತಿನ್ನುವುದು – ಹೀಗೆ ಚಿತ್ರಿಸಲಾಗಿತ್ತು. ಅಂದರೆ ನಿರ್ದೇಶಕನ ದೃಷ್ಟಿಕೋನ ಇಲ್ಲಿ ಕೆಲಸ ಮಾಡಿದೆ.

ಆದಿವಾಸಿ ಸಮುದಾಯದ ಚಿತ್ರ ನಿರ್ದೇಶಕಿ ಲೀಲಾ ಸಂತೋಷ್ ಅವರು ತಮ್ಮ ಮೊದಲ ಸಿನಿಮಾದಲ್ಲಿ ‘ಕರಿಂತಂದನ್‌’ ಎಂಬ ಟ್ರೈಬಲ್‌ ನಾಯಕನ ಕುರಿತು ಚಿತ್ರಿಸಿದ್ದರು. ಪಶ್ಚಿಮ ಘಟ್ಟಕ್ಕೆ ದಾರಿಯನ್ನು ತೋರಿಸಿದ ಮಹಾನ್ ವ್ಯಕ್ತಿ ಕರಿಂತಂದನ್‌ ಎಂಬುದನ್ನು ಲೀಲಾ ಕಟ್ಟಿಕೊಟ್ಟಿದ್ದರು. ಆದಿವಾಸಿ ಕಥನಗಳನ್ನು ಆದಿವಾಸಿಗಳ ದೃಷ್ಟಿಕೋನದಲ್ಲಿ ಹೇಳಬೇಕೆಂದು ಪ್ರತಿಪಾದಿಸುತ್ತಾರೆ ಲೀಲಾ ಸಂತೋಷ್. ಸಮುದಾಯವೊಂದರ ಕಥೆಯನ್ನು ಹೇಳುವಲ್ಲಿ ನಿರ್ದೇಶಕನ ಸ್ವಅನುಭವಗಳೂ ಪ್ರಭಾವ ಬೀರುತ್ತವೆ.

ಇತ್ತೀಚೆಗೆ ನ್ಯೂಸ್‌ ಮಿನಿಟ್‌ನೊಂದಿಗೆ ಮಾತನಾಡಿದ್ದ ‘ಪಡ’ ಸಿನಿಮಾದ ನಿರ್ದೇಶಕ ಕೆ.ಎಂ.ಕಮಲ್‌, “ಮಲಯಾಳಂ ಚಿತ್ರರಂಗವು ಯಾವಾಗಲೂ ಜಾತಿಯ ಬಗ್ಗೆ ಮಾತನಾಡುವುದರಿಂದ ದೂರವಿರುತ್ತದೆ. ವರ್ಗ ವ್ಯತ್ಯಾಸಗಳು ಸಾಮಾನ್ಯವಾಗಿ ಸಿನಿಮಾ, ರಂಗಭೂಮಿ ಮತ್ತು ಸಂಗೀತದಲ್ಲಿ ಪ್ರತಿಫಲಿಸುತ್ತದೆ. ಆದರೆ ಸಮಾಜದಲ್ಲಿನ ಅಧಿಕಾರ ರಚನೆಗಳನ್ನು ವ್ಯಾಖ್ಯಾನಿಸುವ ಜಾತಿಯ ವಿಷಯಕ್ಕೆ ಬಂದರೆ, ಮಲಯಾಳಂ ಚಿತ್ರರಂಗ ಈ ವಿಷಯದಿಂದ ವಿಮುಖವಾಗಿತ್ತು” ಎಂದಿದ್ದರು.

ಮತ್ತೆ ‘ಪಡ’ ವಿಚಾರಕ್ಕೆ ಬರುವುದಾದರೆ ‘ಪ್ರಭುತ್ವ’ ಹಾಗೂ ‘ಆದಿವಾಸಿ’ ನಡುವಿನ ಸಂಘರ್ಷದ ನಿಜ ಘಟನೆ ಆಧಾರಿತ ಸಿನಿಮಾವಿದು. ದೃಷ್ಟಿಕೋನ- ಭೂಮಿ ಹೋರಾಟ. ದೀರ್ಘಕಾಲ ಅಧಿಕಾರದಲ್ಲಿರುವ ಮೇಲ್ಜಾತಿ ಪ್ರಣೀತ ಎಡ-ಬಲ ಪಕ್ಷಗಳೆರಡೂ ಆದಿವಾಸಿಗಳನ್ನು ನಿರ್ಲಕ್ಷಿಸಿದ್ದನ್ನು, ಒಕ್ಕಲೆಬ್ಬಿಸಿದ್ದನ್ನು, ನಿರ್ಗತಿಕರನ್ನಾಗಿ ಮಾಡಿ ಪುನವರ್ಸತಿಗೆ ದೂಡಿದ್ದನ್ನು ‘ಪಡ’ ಮಾತನಾಡುತ್ತದೆ.

ಮಾರ್ಚ್ 10ರಂದು ತೆರೆಕಂಡ ‘ಪಡ’ ಈಗ ಅಮೆಜಾನ್‌ ಪ್ರೈಮ್‌ ವಿಡಿಯೊದಲ್ಲೂ ಲಭ್ಯವಿದೆ. 1996ರಲ್ಲಿ ನಡೆದ ನಿಜ ಘಟನೆಯನ್ನು ಆಧರಿಸಿರುವ ಈ ಸಿನಿಮಾ, ಆದಿವಾಸಿ ಭೂಮಿ ಹಕ್ಕಿನ ಕುರಿತು ದಿಟ್ಟವಾಗಿ ಮಾತನಾಡುತ್ತದೆ. ಆದಿವಾಸಿ ಭೂ ಕಾಯಿದೆ 1975ರ ತಿದ್ದುಪಡಿಯನ್ನು ಹಿಂತೆಗೆದುಕೊಳ್ಳಬೇಕೆಂಬ ಹೋರಾಟ 1996ರಲ್ಲಿ ಇ.ಕೆ.ನಾಯನಾರ್ ನೇತೃತ್ವದ ಲೆಫ್ಟ್‌ ಡೆಮಾಕ್ರಟಿಕ್‌ ಫ್ರಂಟ್‌‌ (ಎಲ್‌ಡಿಎಫ್‌) ಸರ್ಕಾರದ ವಿರುದ್ಧ ನಡೆದಿತ್ತು.

ಅಕ್ಟೋಬರ್ 4, 1996ರಂದು, ಆಗಿನ ಪಾಲಕ್ಕಾಡ್ ಜಿಲ್ಲಾಧಿಕಾರಿಯಾಗಿದ್ದ ಡಬ್ಲ್ಯುಆರ್ ರೆಡ್ಡಿ ಅವರನ್ನು ನಾಲ್ವರು ಆದಿವಾಸಿ ಹಕ್ಕುಗಳ ಕಾರ್ಯಕರ್ತರು ಒತ್ತೆಯಾಳಾಗಿ ಇರಿಸಿಕೊಂಡರು. ಸಾಂವಿಧಾನಿಕ ಹೋರಾಟಕ್ಕೆ ಪ್ರಭುತ್ವ ಯಾವುದೇ ಬೆಲೆ ಕೊಡದಿದ್ದಾಗ, ನೈಜ ಸಮಸ್ಯೆಯತ್ತ ಸರ್ಕಾರದ ಗಮನ ಸೆಳೆಯಲು ಹಿಂಸೆಯ ಮಾರ್ಗವನ್ನು ಹೋರಾಟಗಾರರು ಹಿಡಿಯುತ್ತಾರೆ.

‘ಜನರ ಕೂಗು ಕೇಳದ ಸರ್ಕಾರ ನಿಜವಾದ ಭಯೋತ್ಪಾದನೆ ಮಾಡುತ್ತಿದೆ’ ಎನ್ನುವ ಇವರು ‘ಅಯ್ಯಂಕಾಲಿ ಪಡ’ದ ಸದಸ್ಯರೆಂದು ಹೇಳಿಕೊಳ್ಳುತ್ತಾರೆ. “ಆದಿವಾಸಿಗಳ ಭೂಮಿ ಕಾಯ್ದೆ ಬಂದ ನಂತರ ಎಡ- ಬಲ ಪಕ್ಷಗಳೆರಡೂ ಆಡಳಿತ ನಡೆಸಿವೆ. ಆದಿವಾಸಿಗಳನ್ನು ಶೋಷಿಸಿವೆ. ಮಿಲಿಯನ್‌ಗಟ್ಟಲೆ ಹಣವನ್ನು ಆದಿವಾಸಿಗಳಿಗೆ ಮೀಸಲಿಡುತ್ತಿದ್ದರೂ ಪರಿಸ್ಥಿತಿ ಮಾತ್ರ ಬದಲಾಗಲಿಲ್ಲ” ಎನ್ನುತ್ತಾರೆ.

ಒತ್ತೆಯಾಳಾಗಿರುವ ಅಧಿಕಾರಿಗೆ ಹೇಳುತ್ತಾರೆ: “ಆದಿವಾಸಿಗಳು ನಿಜವಾದ ಒತ್ತೆಯಾಳುಗಳು. ಅವರನ್ನು ನಿರಾಶ್ರಿತರನ್ನಾಗಿ ಮಾಡಲಾಗಿದೆ. ಅವರ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಜಾಪ್ರಭುತ್ವ ಕೆಲವರಿಗೆ ಮಾತ್ರ ಮೀಸಲಾಗಿದೆ. ಇದನ್ನು ನಾವು ಹೇಳಲು ಬಯಸುತ್ತಿದ್ದೇವೆ”.

ಹೀಗೆ ಕ್ರಾಂತಿಯ ಮಾರ್ಗ ಹಿಡಿದವರ ಒತ್ತಾಯಗಳನ್ನು ಸರ್ಕಾರ ಒಪ್ಪಿತೆ? ಆದಿವಾಸಿಗಳ ಸ್ಥಿತಿ ಬದಲಾಯಿತೆ? – ಎಂಬ ಗಂಭೀರ ವಿಚಾರಗಳನ್ನು ಈ ಸಿನಿಮಾ ಚರ್ಚಿಸುತ್ತದೆ. ಆದಿವಾಸಿಗಳ ನಿತ್ಯದ ನೋವು ಹಾಗೂ ಪ್ರಭುತ್ವ ನೀಡುವ ಭೀಕರ ಪ್ರಕ್ರಿಯೆಗಳಿಗೆ ಅಂತ್ಯವಿಲ್ಲವೇ ಎಂಬ ಪ್ರಶ್ನೆಗಳನ್ನು ಪ್ರೇಕ್ಷಕರ ಮುಂದಿಡುತ್ತದೆ. “ಓ ಭೂಮಿಯೇ, ಈ ಕಾಡಿನ ಅಳಲು ಕೇಳಿದೆಯಾ? ನೀನು ನೋಡಿದೆಯಾ ಅವರು ನಗುತ್ತಿದ್ದಾರೆ” ಎಂಬ ಹಾಡಿನ ಸಾಲುಗಳು ಪ್ರಭುತ್ವವನ್ನು ಹಾಗೂ ಪಾಲಿಸಿಗಳನ್ನು ಉದ್ದೇಶಿಸುತ್ತವೆ.

ಪ್ರಕಾಶ್‌ ರಾಜ್‌, ಕುಂಚಾಕೊ ಬೋಬನ್, ವಿನಾಯಕನ್, ದಿಲೀಶ್ ಪೋತನ್ ಮತ್ತು ಜೋಜು ಜಾರ್ಜ್ ಥರದ ಪ್ರತಿಭಾವಂತ ನಟರು ಮುಖ್ಯಭೂಮಿಯಲ್ಲಿದ್ದಾರೆ. ವಿಷ್ಣು ವಿಜಯ್‌ ಅವರ ಹಿನ್ನಲೆ ಸಂಗೀತ ಇಡೀ ಸಿನಿಮಾದ ತೂಕವನ್ನು ಹೆಚ್ಚಿಸಿವೆ. ಈವರೆಗೆ ಬಂದಿರುವ ಒತ್ತೆಯಾಳು ಕಥೆಯಾಧಾರಿಸಿದ ಸಿನಿಮಾಗಳಿಗಿಂತ ‘ಪಡ’, ಆದಿವಾಸಿ ಕಥನದ ಹಿನ್ನೆಲೆಯಲ್ಲಿ ಭಿನ್ನವಾಗಿ ನಿಲ್ಲುತ್ತದೆ.


ಇದನ್ನೂ ಓದಿರಿ: ದಮನಿತರ ಭೂಮಿ ಹಕ್ಕಿನ ಕಥೆ ‘ಪಡ’: ತಮಿಳು ಚಿತ್ರರಂಗದ ಹಾದಿಯಲ್ಲಿ ‘ಮಲಯಾಳಂ’ ಸಿನಿಮಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...