ಒಬ್ಬರು ವ್ಯಕ್ತಿಯು ಒಮ್ಮೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು, ಅದನ್ನೇ ಸಕ್ರಿಯವಾಗಿ ಪ್ರತಿಪಾದಿಸಿ, ಆಚರಿಸಿದರೆ, ಅವರನ್ನು ಪರಿಶಿಷ್ಟ ಜಾತಿ (ಎಸ್ಸಿ) ಸಮುದಾಯದ ಸದಸ್ಯರು ಎಂಬುವುದಾಗಿ ಪರಿಗಣಿಸಲಾಗುವುದಿಲ್ಲ ಎಂದು ಆಂಧ್ರ ಪ್ರದೇಶ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್ ಮಂಗಳವಾರ (ಮಾರ್ಚ್ 24) ಎತ್ತಿಹಿಡಿದಿದೆ.
ಹಿಂದೂ ಧರ್ಮ, ಸಿಖ್ ಅಥವಾ ಬೌದ್ಧ ಧರ್ಮವನ್ನು ಹೊರತುಪಡಿಸಿ ಬೇರೆ ಧರ್ಮವನ್ನು ಪ್ರತಿಪಾದಿಸುವ ಯಾವುದೇ ವ್ಯಕ್ತಿಯನ್ನು ಪರಿಶಿಷ್ಟ ಜಾತಿಯ ಸದಸ್ಯ ಎಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಬೇರೆ ಯಾವುದೇ ಧರ್ಮಕ್ಕೆ ಮತಾಂತರಗೊಂಡರೆ ಪರಿಶಿಷ್ಟ ಜಾತಿ ಸ್ಥಾನಮಾನ ತಕ್ಷಣ ಮತ್ತು ಸಂಪೂರ್ಣವಾಗಿ ನಷ್ಟವಾಗುತ್ತದೆ ಎಂದು ತಿಳಿಸಿದೆ.
ಸಂವಿಧಾನದ (ಪರಿಶಿಷ್ಟ ಜಾತಿ) ಆದೇಶ, 1950 ಈ ವಿಷಯವನ್ನು ಸ್ಪಷ್ಟಪಡಿಸಿದೆ ಮತ್ತು ಈ ಆದೇಶದ ಅಡಿಯಲ್ಲಿರುವ ನಿರ್ಬಂಧವು ಸಂಪೂರ್ಣವಾಗಿದೆ ಎಂದು ನ್ಯಾಯಾಲಯವು ಹೇಳಿದೆ. 1950ರ ಆದೇಶದ 3ನೇ ಕಲಂನಲ್ಲಿ ಉಲ್ಲೇಖಿಸದ ಯಾವುದೇ ಧರ್ಮಕ್ಕೆ ಮತಾಂತರಗೊಂಡರೆ, ವ್ಯಕ್ತಿಯು ಹುಟ್ಟಿನಿಂದ ಆ ಜಾತಿಗೆ ಸೇರಿದವರಾಗಿದ್ದರೂ ಸಹ, ತಕ್ಷಣವೇ ತಮ್ಮ ಪರಿಶಿಷ್ಟ ಜಾತಿಯ ಸ್ಥಾನಮಾನವನ್ನು ಕಳೆದುಕೊಳ್ಳುತ್ತಾರೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
“3ನೇ ಕಲಂನ ಅನ್ವಯ ಯಾರು ಪರಿಶಿಷ್ಟ ಜಾತಿಯ ಸದಸ್ಯರೆಂದು ಪರಿಗಣಿಸಲ್ಪಡುವುದಿಲ್ಲವೋ, ಅಂತಹ ಯಾವುದೇ ವ್ಯಕ್ತಿಯು ಸಂವಿಧಾನದ ಅಡಿಯಲ್ಲಿ ಅಥವಾ ಸಂಸತ್ತು ಅಥವಾ ರಾಜ್ಯ ಶಾಸನಸಭೆಯ ಶಾಸನಗಳ ಅಡಿಯಲ್ಲಿ ಯಾವುದೇ ಶಾಸನಬದ್ಧ ಸೌಲಭ್ಯ, ರಕ್ಷಣೆ, ಮೀಸಲಾತಿ ಅಥವಾ ಹಕ್ಕುಗಳನ್ನು ಪಡೆಯಲು ಸಾಧ್ಯವಿಲ್ಲ ಅಥವಾ ಅವರಿಗೆ ಅದನ್ನು ವಿಸ್ತರಿಸಲು ಬರುವುದಿಲ್ಲ. ಈ ನಿರ್ಬಂಧವು ಸಂಪೂರ್ಣವಾಗಿದ್ದು, ಇದಕ್ಕೆ ಯಾವುದೇ ವಿನಾಯಿತಿಗಳಿಲ್ಲ. ಒಬ್ಬ ವ್ಯಕ್ತಿಯು 3ನೇ ಕಲಂನಲ್ಲಿ ನಿರ್ದಿಷ್ಟಪಡಿಸಿದ ಧರ್ಮವನ್ನು ಹೊರತುಪಡಿಸಿ ಅನ್ಯ ಧರ್ಮವನ್ನು ಅನುಸರಿಸುತ್ತಾ ಮತ್ತು ಆಚರಿಸುತ್ತಾ, ಅದೇ ಸಮಯದಲ್ಲಿ ಪರಿಶಿಷ್ಟ ಜಾತಿಯ ಸದಸ್ಯತ್ವವನ್ನು ಪಡೆಯಲು ಸಾಧ್ಯವಿಲ್ಲ” ಎಂದು ನ್ಯಾಯಾಲಯವು ತೀರ್ಪು ನೀಡಿದೆ.
ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ಪಾದ್ರಿಯಾಗಿ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯೊಬ್ಬರು, ತಮ್ಮ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ’ಯಡಿ ಪ್ರಕರಣ ದಾಖಲಿಸಿರುವುದು ಸುಪ್ರೀಂ ಕೋರ್ಟ್ ಆದೇಶದ ಮೂಲ ಪ್ರಕರಣವಾಗಿದೆ. ಸದರಿ ಪಾದ್ರಿಯು ಮತಾಂತರಗೊಂಡು ಸಕ್ರಿಯವಾಗಿ ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಿರುವುದರಿಂದ, ಅವರು ಎಸ್ಸಿ/ಎಸ್ಟಿ ಕಾಯ್ದೆಯಡಿ ರಕ್ಷಣೆ ಪಡೆಯಲು ಕಾನೂನುಬದ್ಧವಾಗಿ ಅರ್ಹರಲ್ಲ ಎಂದು ಆರೋಪಿಗಳು ವಾದಿಸಿದ್ದರು.
ಆಂಧ್ರ ಪ್ರದೇಶ ಹೈಕೋರ್ಟ್ ಏಪ್ರಿಲ್ 30, 2025ರಂದು ನೀಡಿದ ಆದೇಶದಲ್ಲಿ, ಕ್ರಿಶ್ಚಿಯನ್ ಧರ್ಮದಲ್ಲಿ ಜಾತಿ ಪದ್ಧತಿ ಅಸ್ತಿತ್ವದಲ್ಲಿಲ್ಲದ ಕಾರಣ, ಆ ಧರ್ಮಕ್ಕೆ ಮತಾಂತರಗೊಂಡವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ದೂರು ದಾಖಲಿಸಲು ಅರ್ಹರಲ್ಲ ಎಂದು ಹೇಳಿತ್ತು. ಹೈಕೋರ್ಟ್ ನ್ಯಾಯಮೂರ್ತಿ ಹರಿನಾಥ್ ಎನ್. ಅವರು, ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ಎಸ್ಸಿ/ಎಸ್ಟಿ ಕಾಯ್ದೆಯನ್ನು ಬಳಸಿಕೊಂಡಿದ್ದ ಪಾದ್ರಿಯ ಆರೋಪಗಳನ್ನು ರದ್ದುಗೊಳಿಸಿದ್ದರು. ಈ ಆದೇಶದ ವಿರುದ್ಧ ಪಾದ್ರಿಯು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ನ್ಯಾಯಮೂರ್ತಿ ಪ್ರಶಾಂತ್ ಕುಮಾರ್ ಮಿಶ್ರಾ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು, “ಪ್ರಸ್ತುತ ಪ್ರಕರಣದಲ್ಲಿ, ಅರ್ಜಿದಾರರು (ಪಾದ್ರಿ) ಕ್ರಿಶ್ಚಿಯನ್ ಧರ್ಮದಿಂದ ತಮ್ಮ ಮೂಲ ಧರ್ಮಕ್ಕೆ ಮರು-ಮತಾಂತರಗೊಂಡಿದ್ದಾರೆ ಅಥವಾ ಮಾದಿಗ ಸಮುದಾಯವು ಅವರನ್ನು ಮತ್ತೆ ಸ್ವೀಕರಿಸಿದೆ ಎಂಬ ವಾದ ಇಲ್ಲ. ಬದಲಾಗಿ, ಅವರು ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಾ ಬಂದಿದ್ದಾರೆ ಮತ್ತು ಕಳೆದ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಪಾದ್ರಿಯಾಗಿ ಕಾರ್ಯನಿರ್ವಹಿಸುತ್ತಾ, ಹಳ್ಳಿಗಳಲ್ಲಿನ ಮನೆಗಳಲ್ಲಿ ನಿಯಮಿತವಾಗಿ ಭಾನುವಾರದ ಪ್ರಾರ್ಥನೆಗಳನ್ನು ನಡೆಸುತ್ತಿದ್ದರು ಎಂಬುದಕ್ಕೆ ಸಾಕ್ಷ್ಯಗಳಿವೆ. ಘಟನೆ ನಡೆದ ಸಮಯದಲ್ಲಿಯೂ ಅವರು ಮನೆಯೊಂದರಲ್ಲಿ ಪ್ರಾರ್ಥನಾ ಸಭೆಯನ್ನು ನಡೆಸುತ್ತಿದ್ದರು ಎಂಬುದನ್ನು ಒಪ್ಪಿಕೊಳ್ಳಲಾಗಿದೆ. ಈ ಎಲ್ಲಾ ಪೂರಕ ಸಂಗತಿಗಳನ್ನು ಗಮನಿಸಿದರೆ, ಘಟನೆ ನಡೆದ ದಿನದಂದು ಅವರು ಕ್ರಿಶ್ಚಿಯನ್ ಆಗಿಯೇ ಮುಂದುವರಿದಿದ್ದರು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ” ಎಂದು ಹೇಳಿದೆ.
ಪಾದ್ರಿಯ ಪ್ರಕರಣದಲ್ಲಿ ಆರೋಪಿಗಳ ವಿರುದ್ದ ಎಸ್ಸಿ/ಎಸ್ಟಿ ಕಾಯ್ದೆಯ ಸೆಕ್ಷನ್ 3(1)(r), 3(1)(s), 3(2)(va) ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 341, 506, 323 ರೊಂದಿಗೆ ಓದಿಕೊಂಡ ಸೆಕ್ಷನ್ 34 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳ ಆರೋಪ ಹೊರಿಸಲಾಗಿತ್ತು.
ಆಂಧ್ರ ಪ್ರದೇಶದ ಬಾಪಟ್ಲ ಜಿಲ್ಲೆಯ ಪೀಟಲವಾನಿಪಾಲೆಂ ಗ್ರಾಮದಲ್ಲಿ ಭಾನುವಾರದ ಪ್ರಾರ್ಥನೆಗಳನ್ನು ನಡೆಸುತ್ತಿದ್ದ ವೇಳೆ ತನ್ನ ಮೇಲೆ ಹಲ್ಲೆ ನಡೆಸಲಾಗಿದೆ. ತನಗೂ ತನ್ನ ಕುಟುಂಬಕ್ಕೂ ಪದೇ ಪದೇ ಜೀವ ಬೆದರಿಕೆ ಹಾಕಲಾಗುತ್ತಿದೆ. ಅಲ್ಲದೆ, ತನ್ನನ್ನು ಜಾತಿಯ ಹೆಸರಿನಲ್ಲಿ ನಿಂದಿಸಲಾಗಿದೆ ಎಂದು ಆರೋಪಿಸಿ ಪಾದ್ರಿ ದೂರು ದಾಖಲಿಸಿದ್ದರು.
ಪೊಲೀಸರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಇದರ ವಿರುದ್ದ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣ ರದ್ದತಿಗೆ ಕೋರಿದ್ದರು.
ದೂರುದಾರರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡು ಪಾದ್ರಿಯಾಗಿ ಕೆಲಸ ಮಾಡುತ್ತಿದ್ದರಿಂದ ಅವರು ಪರಿಶಿಷ್ಟ ಜಾತಿ ಸಮುದಾಯದ ಸದಸ್ಯ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ, ನಮ್ಮ ಮೇಲೆ ಎಸ್ಸಿ ಮತ್ತು ಎಸ್ಟಿ ಕಾಯ್ದೆಯಡಿ ಎಫ್ಐಆರ್ ದಾಖಲಿಸುವುದು ಕಾನೂನುಬಾಹಿರವಾಗಿದೆ. 1950ರ ಸಂವಿಧಾನ (ಪರಿಶಿಷ್ಟ ಜಾತಿಗಳು) ಆದೇಶವು ಹಿಂದೂ ಧರ್ಮಕ್ಕಿಂತ ಭಿನ್ನವಾದ ಧರ್ಮವನ್ನು ಪ್ರತಿಪಾದಿಸುವ ಯಾವುದೇ ವ್ಯಕ್ತಿಯನ್ನು ಪರಿಶಿಷ್ಟ ಜಾತಿಯ ಸದಸ್ಯ ಎಂದು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ ಎಂದು ಅರ್ಜಿದಾರರು ವಾದಿಸಿದ್ದರು.
ಪಾದ್ರಿ ಪರ ವಕೀಲರು ತನಿಖೆ ಪೂರ್ಣಗೊಂಡಿದೆ ಮತ್ತು ಪೊಲೀಸರು ಸುಮಾರು 10 ಸಾಕ್ಷಿಗಳ ಹೇಳಿಕೆಗಳೊಂದಿಗೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದಾರೆ ಎಂದು ವಾದಿಸಿದ್ದರು. ಎಸ್ಸಿ/ಎಸ್ಟಿ ಕಾಯ್ದೆಯ ಅನ್ವಯಕ್ಕೆ ಸಂಬಂಧಿಸಿದಂತೆ, ಪೀಟಲವಾನಿಪಾಲೆಂ ಮಂಡಲದ ತಹಶೀಲ್ದಾರ್ ದೂರುದಾರ ಹಿಂದೂ-ಮಾದಿಗ ಜಾತಿಗೆ ಸೇರಿದ ಪರಿಶಿಷ್ಟ ಜಾತಿಯ ಸದಸ್ಯರೆಂದು ದೃಢಪಡಿಸಿರುವುದರಿಂದ, ಅವರಿಗೆ ಈ ಕಾಯ್ದೆಯಡಿ ರಕ್ಷಣೆ ನಿರಾಕರಿಸಲಾಗದು ಎಂದು ಹೇಳಿದ್ದರು. ದೂರುದಾರ ಪೀಟಲವಾನಿಪಾಲೆಂ ಮಂಡಲದ ತಹಶೀಲ್ದಾರ್ ನೀಡಿದ ಜಾತಿ ಪ್ರಮಾಣಪತ್ರವನ್ನು ಹೊಂದಿದ್ದಾರೆ ಎಂಬ ಅಂಶವನ್ನೂ ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ವಾದ-ಪ್ರತಿವಾದ ಆಲಿಸಿದ್ದ ಹೈಕೋರ್ಟ್, “ದೂರುದಾರ ಪರಿಶಿಷ್ಟ ಜಾತಿಯ ಪ್ರಮಾಣಪತ್ರವನ್ನು ಹೊಂದಿದ್ದಾರೆ ಎಂಬ ವಿಷಯವನ್ನು ಆಂಧ್ರ ಪ್ರದೇಶ (ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಹಿಂದುಳಿದ ವರ್ಗಗಳು) ಸಮುದಾಯ ಪ್ರಮಾಣಪತ್ರಗಳ ವಿತರಣೆ ನಿಯಂತ್ರಣ ಕಾಯ್ದೆ, 1993ರ ಸೆಕ್ಷನ್ 5 ರ ಅಡಿಯಲ್ಲಿ ಸಂಬಂಧಿತ ಅಧಿಕಾರಿಯೇ ನಿರ್ಧರಿಸಬೇಕಾಗುತ್ತದೆ. ಆದರೆ, ಕೇವಲ ಜಾತಿ ಪ್ರಮಾಣಪತ್ರವು ರದ್ದಾಗಿಲ್ಲ ಎಂಬ ಕಾರಣಕ್ಕೆ, ಮತಾಂತರದ ನಂತರವೂ ದೂರುದಾರ ಎಸ್ಸಿ/ಎಸ್ಟಿ ಕಾಯ್ದೆಯಡಿ ರಕ್ಷಣೆ ಪಡೆಯಲು ಅರ್ಹರಾಗುವುದಿಲ್ಲ” ಎಂದು ಸ್ಪಷ್ಟಪಡಿಸಿತ್ತು.


